ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”

“ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”

“ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ; ಆಗ ನೀವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿರದೆ ಎಲ್ಲ ವಿಧಗಳಲ್ಲಿ ಸಂಪೂರ್ಣರೂ ಸ್ವಸ್ಥರೂ ಆಗಿರುವಿರಿ.”—ಯಾಕೋ. 1:4.

ಗೀತೆಗಳು: 135, 139

1, 2. (ಎ) ಗಿದ್ಯೋನ ಮತ್ತು ಅವನ 300 ಸೈನಿಕರ ತಾಳ್ಮೆಯಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಲೂಕ 21:19 ಕ್ಕನುಸಾರ ತಾಳ್ಮೆಯು ಯಾಕೆ ತುಂಬ ಪ್ರಾಮುಖ್ಯ?

ಈ ದೃಶ್ಯವನ್ನು ಚಿತ್ರಿಸಿಕೊಳ್ಳಿ. ಇಸ್ರಾಯೇಲ್ಯ ಸೈನಿಕರು ನ್ಯಾಯಸ್ಥಾಪಕ ಗಿದ್ಯೋನನ ಮುಂದಾಳತ್ವದಲ್ಲಿ ಶತ್ರುಗಳಾದ ಮಿದ್ಯಾನ್ಯರು ಮತ್ತು ಅವರ ಮಿತ್ರರಾಷ್ಟ್ರಗಳೊಂದಿಗೆ ಯುದ್ಧ ಮಾಡುತ್ತಿದ್ದಾರೆ. ರಾತ್ರಿಯಿಡೀ ಸುಮಾರು 32 ಕಿ.ಮೀ. ದೂರದ ವರೆಗೆ ವೈರಿಗಳನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಕಷ್ಟದ ಯುದ್ಧ ಅದು. ಬಳಲಿಸುವಂಥದ್ದು. ಮುಂದೇನಾಯಿತೆಂದು ಬೈಬಲ್‌ ಹೇಳುತ್ತದೆ: “ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದವರಾಗಿದ್ದರೂ ಹಿಂದಟ್ಟುತ್ತಾ ಯೊರ್ದನನ್ನು ದಾಟಿ ಬಂದರು.” ಆದರೂ ಯುದ್ಧದಲ್ಲಿ ಇನ್ನೂ ಜಯ ಸಿಕ್ಕಿರಲಿಲ್ಲ. ಇನ್ನೂ 15,000 ಸೈನಿಕರೊಂದಿಗೆ ಹೋರಾಡಲಿಕ್ಕಿತ್ತು. ಇಸ್ರಾಯೇಲ್ಯರ ಮೇಲೆ ಎಷ್ಟೋ ವರ್ಷಗಳಿಂದ ದಬ್ಬಾಳಿಕೆ ನಡೆಸುತ್ತಿದ್ದ ಈ ಶತ್ರುಗಳನ್ನು ಸೋಲಿಸಲೇಬೇಕಿತ್ತು. ಹಾಗಾಗಿ ಗಿದ್ಯೋನ ಮತ್ತು ಅವನ ಸೈನಿಕರು ತಮ್ಮ ಶತ್ರುಗಳನ್ನು ಬಿಡದೆ ಬೆನ್ನಟ್ಟುತ್ತಾ ಕೊನೆಗೆ ಅವರನ್ನು ಸೋಲಿಸಿಯೇ ಬಿಟ್ಟರು.—ನ್ಯಾಯ. 7:22; 8:4, 10, 28.

2 ನಾವು ಸಹ ಅತಿ ಕಷ್ಟದ, ಬಳಲಿಸುವ ಯುದ್ಧ ಮಾಡುತ್ತಿದ್ದೇವೆ. ನಮ್ಮ ಶತ್ರುಗಳು ಯಾರೆಂದರೆ ಸೈತಾನ, ಅವನ ಲೋಕ, ನಮ್ಮ ಸ್ವಂತ ಬಲಹೀನತೆಗಳು. ಈ ಶತ್ರುಗಳ ವಿರುದ್ಧ ನಮ್ಮಲ್ಲಿ ಕೆಲವರು ಅನೇಕ ವರ್ಷಗಳಿಂದ ಹೋರಾಡುತ್ತಿದ್ದಾರೆ. ಯೆಹೋವನ ಸಹಾಯದಿಂದ ನಾವು ಅನೇಕ ಹೋರಾಟಗಳನ್ನು ಜಯಿಸಿದ್ದೇವೆ ಸಹ. ಆದರೆ ನಮಗಿನ್ನೂ ಅಂತಿಮ ವಿಜಯ ಸಿಕ್ಕಿಲ್ಲ. ಕೆಲವೊಮ್ಮೆ ನಮಗೆ ಹೋರಾಡಿ ಹೋರಾಡಿ ಸಾಕಾಗಿರಬಹುದು ಅಥವಾ ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕಾಗಿ ಕಾದು ಕಾದು ಸುಸ್ತಾಗಿರಬಹುದು. ಕಡೇ ದಿವಸಗಳಲ್ಲಿ ನಮಗೆ ತೀಕ್ಷ್ಣ ಪರೀಕ್ಷೆಗಳು ಮತ್ತು ಕ್ರೂರ ಹಿಂಸೆ ಬರುವುದೆಂದು ಯೇಸು ಎಚ್ಚರಿಸಿದ್ದನು. ಆದರೆ ನಾವು ತಾಳ್ಮೆಯಿಂದ ಇದ್ದರೆ ಜಯ ಪಡೆಯುವೆವು ಎಂದು ಸಹ ಅವನು ಹೇಳಿದ್ದನು. (ಲೂಕ 21:19 ಓದಿ.) ತಾಳ್ಮೆ ಎಂದರೇನು? ತಾಳಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ? ತಾಳಿಕೊಂಡಿರುವವರಿಂದ ನಾವೇನು ಕಲಿಯಬಹುದು? ‘ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸುವಂತೆ’ ನಾವು ಬಿಡುವುದು ಹೇಗೆ?—ಯಾಕೋ. 1:4.

ತಾಳ್ಮೆ ಎಂದರೇನು?

3. ತಾಳ್ಮೆ ಎಂದರೇನು?

3 ಬೈಬಲಿಗೆ ಅನುಸಾರ ತಾಳ್ಮೆ ಅಂದರೆ ಕಷ್ಟವನ್ನು ಬರೀ ಸಹಿಸಿಕೊಳ್ಳುವುದು ಮಾತ್ರ ಅಲ್ಲ. ಆ ಕಷ್ಟವನ್ನು ನಾವು ಹೇಗೆ ತಕ್ಕೊಳ್ಳುತ್ತೇವೆ, ಅದರ ಬಗ್ಗೆ ನಮಗೆ ಯಾವ ಅನಿಸಿಕೆಯಿದೆ ಎಂಬುದೂ ಸೇರಿದೆ. ತಾಳಿಕೊಳ್ಳುವಾಗ ನಾವು ಧೈರ್ಯ, ನಂಬಿಗಸ್ತಿಕೆ, ಸಹನೆ ಈ ಗುಣಗಳನ್ನು ತೋರಿಸಲು ಕಲಿಯುತ್ತೇವೆ. ಒಂದು ಪುಸ್ತಕ ಹೇಳುವಂತೆ ತಾಳ್ಮೆಯೆಂದರೆ ಕಷ್ಟಗಳು ಬಂದಾಗಲೂ ದೃಢವಾದ ನಿರೀಕ್ಷೆಯನ್ನು ಹೊಂದಿರುವುದು, ಸೋತುಹೋಗದಿರುವುದು ಆಗಿದೆ. ತಾಳ್ಮೆಯು ತೀಕ್ಣ ಸಂಕಟಗಳ ಎದುರಲ್ಲೂ ನಾವು ದೃಢರಾಗಿ, ನಿಶ್ಚಲರಾಗಿ ಉಳಿಯುವಂತೆ ಮಾಡುತ್ತದೆ. ಕಷ್ಟದ ಪರೀಕ್ಷೆಗಳನ್ನು ಸೋಲಿಸಿ ಜಯಗಳಿಸುವಂತೆ ಮತ್ತು ನಮ್ಮ ನೋವುಕಷ್ಟಗಳ ಮೇಲಲ್ಲ ನಮ್ಮ ಗುರಿಯ ಮೇಲೆ ನೇರ ದೃಷ್ಟಿಯಿಡುವಂತೆ ಮಾಡುತ್ತದೆ.

4. ತಾಳ್ಮೆಗೆ ಪ್ರೀತಿಯು ಪ್ರೇರಣೆಯಾಗಿದೆ ಏಕೆ?

4 ತಾಳ್ಮೆ ತೋರಿಸಲು ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ. (1 ಕೊರಿಂಥ 13:4, 7 ಓದಿ.) ಯೆಹೋವನ ಮೇಲೆ ನಮಗಿರುವ ಪ್ರೀತಿಯು ಆತನು ಅನುಮತಿಸುವ ಯಾವುದೇ ಕಷ್ಟವನ್ನು ತಾಳಿಕೊಳ್ಳಲು ನಮ್ಮನ್ನು ಪ್ರೇರಿಸುತ್ತದೆ. (ಲೂಕ 22:41, 42) ಸಹೋದರರ ಮೇಲಣ ಪ್ರೀತಿಯು ಅವರ ಬಲಹೀನತೆಗಳನ್ನು ಸಹಿಸಿಕೊಳ್ಳಲು ನಮಗೆ ನೆರವಾಗುತ್ತದೆ. (1 ಪೇತ್ರ 4:8) ಬಾಳಸಂಗಾತಿಯ ಮೇಲಿರುವ ಪ್ರೀತಿಯು ಸುಖೀ ದಂಪತಿಗಳಿಗೂ ಬರುವ “ಸಂಕಟ”ವನ್ನು ತಾಳಿಕೊಳ್ಳಲು ಸಹಾಯಕರ. ಮಾತ್ರವಲ್ಲ ಪ್ರೀತಿಯು ವಿವಾಹ ಬಂಧವನ್ನು ಬಲಗೊಳಿಸುತ್ತದೆ.—1 ಕೊರಿಂ. 7:28.

ತಾಳಿಕೊಳ್ಳಲು ಯಾವುದು ನಮಗೆ ಸಹಾಯಮಾಡುತ್ತದೆ?

5. ನಮಗೆ ತಾಳಿಕೊಳ್ಳಲಿಕ್ಕಾಗಿ ಸಹಾಯ ಕೊಡಲು ಯೆಹೋವನೇ ಅತ್ಯುತ್ತಮ ವ್ಯಕ್ತಿ ಏಕೆ?

5 ಬಲಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಿ. ಯೆಹೋವನು “ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುವ ದೇವರು.” (ರೋಮ. 15:5) ಆತನೊಬ್ಬನೇ ನಮ್ಮ ಸನ್ನಿವೇಶ, ಅನಿಸಿಕೆ, ಹಿನ್ನೆಲೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲನು. ಹಾಗಾಗಿ ನಮಗೆ ತಾಳಿಕೊಳ್ಳಲು ಏನು ಬೇಕೆಂದು ತಿಳಿದುಕೊಂಡು ಸಹಾಯ ನೀಡಲು ಆತನೇ ಅತ್ಯುತ್ತಮ ವ್ಯಕ್ತಿ. ಆತನು “ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ” ಎನ್ನುತ್ತದೆ ಬೈಬಲ್‌. (ಕೀರ್ತ. 145:19) ಹಾಗಾದರೆ ತಾಳಿಕೊಳ್ಳಲು ಬಲ ಕೊಡುವಂತೆ ನಾವು ಪ್ರಾರ್ಥಿಸುವಾಗ ದೇವರು ಹೇಗೆ ಉತ್ತರಿಸುತ್ತಾನೆ?

6. ಯೆಹೋವನು ಮಾತುಕೊಟ್ಟಂತೆ ಕಷ್ಟಪರೀಕ್ಷೆಯಿಂದ ‘ತಪ್ಪಿಸಿಕೊಳ್ಳುವ ಮಾರ್ಗವನ್ನು’ ನಮಗೆ ಹೇಗೆ ಸಿದ್ಧಪಡಿಸುತ್ತಾನೆ?

6 ತಾಳಿಕೊಳ್ಳಲು ಸಹಾಯಕ್ಕಾಗಿ ನಾವು ಯೆಹೋವನನ್ನು ಬೇಡುವಾಗ ‘ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಪಡಿಸುವೆನು’ ಎಂದು ಆತನು ಮಾತುಕೊಟ್ಟಿದ್ದಾನೆ. (1 ಕೊರಿಂಥ 10:13 ಓದಿ.) ಇದನ್ನು ಆತನು ಹೇಗೆ ಮಾಡುತ್ತಾನೆ? ಕೆಲವೊಮ್ಮೆ ನಮ್ಮ ಕಷ್ಟಪರೀಕ್ಷೆಯನ್ನು ಆತನು ತೆಗೆದುಬಿಡಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾವು ‘ಆನಂದ ಮತ್ತು ಸಹನೆಯಿಂದ ಸಂಪೂರ್ಣವಾಗಿ ತಾಳಿಕೊಳ್ಳಲು’ ಬೇಕಾದ ಬಲ ಕೊಡುತ್ತಾನೆ. (ಕೊಲೊ. 1:11) ನಮ್ಮ ಶಾರೀರಿಕ, ಮಾನಸಿಕ, ಭಾವನಾತ್ಮಕ ಇತಿಮಿತಿಗಳು ಆತನಿಗೆ ಚೆನ್ನಾಗಿ ಗೊತ್ತಿದೆ. ಆದಕಾರಣ ನಮ್ಮಿಂದ ನಂಬಿಗಸ್ತರಾಗಿ ಉಳಿಯಲು ಆಗದಷ್ಟರ ಮಟ್ಟಿಗೆ ಯಾವುದೇ ಕಷ್ಟವು ಮುಂದುವರಿಯುವಂತೆ ಯೆಹೋವನು ಎಂದಿಗೂ ಬಿಡುವುದಿಲ್ಲ.

7. ನಮಗೇಕೆ ಆಧ್ಯಾತ್ಮಿಕ ಆಹಾರ ಬೇಕು? ಉದಾಹರಣೆ ಕೊಡಿ.

7 ಆಧ್ಯಾತ್ಮಿಕ ಆಹಾರದಿಂದ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ. ನಮಗೆ ಆಧ್ಯಾತ್ಮಿಕ ಆಹಾರ ಏಕೆ ಅಗತ್ಯ? ಒಂದು ಉದಾಹರಣೆ ಗಮನಿಸಿ. ಒಬ್ಬ ವ್ಯಕ್ತಿಯು ಎವರೆಸ್ಟ್‌ ಪರ್ವತ ಹತ್ತಲು ಬೇಕಾದ ಶಕ್ತಿಗಾಗಿ ದಿನಕ್ಕೆ ಸುಮಾರು 6,000 ಕ್ಯಾಲರಿಗಳನ್ನು ಸೇವಿಸಬೇಕು. ಅಂದರೆ ಸಾಮಾನ್ಯವಾಗಿ ಮೂರು ನಾಲ್ಕು ದಿನ ತಿನ್ನುವಷ್ಟು ಆಹಾರ ಅವನಿಗೆ ಒಂದು ದಿನಕ್ಕೆ ಬೇಕು. ಇಲ್ಲದಿದ್ದರೆ ಎದುರಾಗುವ ಕಷ್ಟಗಳನ್ನು ತಾಳಿಕೊಂಡು ಗುರಿ ಮುಟ್ಟಲು ಆಗುವುದಿಲ್ಲ. ಅದೇ ರೀತಿ ನಾವು ತಾಳಿಕೊಳ್ಳಲು ಮತ್ತು ನಮ್ಮ ಗುರಿ ಮುಟ್ಟಲು ಆಧ್ಯಾತ್ಮಿಕ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಹಾಗಾಗಿ ನಾವು ದೃಢನಿಶ್ಚಯ ಮಾಡಿ ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಿಗೆ ಸಮಯ ಕೊಡಬೇಕು. ಇದರಿಂದ ನಮ್ಮ ನಂಬಿಕೆ ಹೆಚ್ಚು ಬಲಗೊಳ್ಳುವುದು.—ಯೋಹಾ. 6:27.

8, 9. (ಎ) ನಾವು ಕಷ್ಟಗಳನ್ನು ಎದುರಿಸುವಾಗ ಯೋಬ 2:4, 5 ಕ್ಕನುಸಾರ ಯಾವುದರ ಪರೀಕ್ಷೆಯೂ ಆಗುತ್ತದೆ? (ಬಿ) ಕಷ್ಟದಲ್ಲಿರುವಾಗ ನೀವು ಯಾವ ದೃಶ್ಯವನ್ನು ಚಿತ್ರಿಸಿಕೊಳ್ಳಬೇಕು?

8 ದೇವರಿಗೆ ನಿಷ್ಠೆ ತೋರಿಸಬೇಕೆಂದು ನೆನಪಿಡಿ. ನಮಗೆ ಕಷ್ಟಗಳು ಬರುವಾಗ ನೋವುದುಃಖವನ್ನು ಅನುಭವಿಸುತ್ತೇವೆ ನಿಜ. ಆದರೆ ಅದು ದೇವರಿಗೆ ನಾವು ತೋರಿಸುವ ನಿಷ್ಠೆಯ ಪರೀಕ್ಷೆಯೂ ಆಗಿದೆ ಎಂದು ಮರೆಯಬಾರದು. ಅಂಥ ಕಷ್ಟಗಳ ಸಮಯದಲ್ಲಿ ನಾವು ಪ್ರತಿಕ್ರಿಯಿಸುವ ರೀತಿಯು ನಿಜವಾಗಿಯೂ ಯೆಹೋವನನ್ನು ವಿಶ್ವದ ಒಡೆಯನಾಗಿ ಸ್ವೀಕರಿಸಿದ್ದೇವಾ ಇಲ್ಲವಾ ಎಂದು ತೋರಿಸುತ್ತದೆ. ಅದು ಹೇಗೆ? ದೇವರ ವೈರಿಯಾದ ಸೈತಾನನು ಆತನ ಆಳ್ವಿಕೆಯನ್ನು ವಿರೋಧಿಸುತ್ತಾನೆ. ಅಲ್ಲದೆ ಮನುಷ್ಯರು ಸ್ವಾರ್ಥಕ್ಕಾಗಿ ದೇವರನ್ನು ಆರಾಧಿಸುತ್ತಾರೆಂದು ನಿಂದಿಸಿದ್ದಾನೆ. “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಸೈತಾನ ಹೇಳಿದನು. ನಂತರ ಯೋಬನ ಬಗ್ಗೆ ಅವನು ಯೆಹೋವನಿಗೆ ಹೇಳಿದ್ದು: “ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 2:4, 5) ಇದಾದ ಮೇಲೆ ಸೈತಾನ ಏನಾದರೂ ಬದಲಾದನಾ? ಇಲ್ಲವೇ ಇಲ್ಲ! ನೂರಾರು ವರ್ಷಗಳ ನಂತರ ಸೈತಾನನನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಲಾಯಿತು. ಆಗಲೂ ಅವನು ದೇವರ ನಂಬಿಗಸ್ತ ಸೇವಕರ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಸದಾ ಹೊರಿಸುತ್ತಿದ್ದ. (ಪ್ರಕ. 12:10) ಇವತ್ತಿಗೂ ಹಾಗೆಯೇ ಮಾಡುತ್ತಿದ್ದಾನೆ. ನಾವು ದೇವರನ್ನು ಆರಾಧಿಸುವುದು ಬರೀ ಸ್ವಾರ್ಥಕ್ಕಾಗಿ ಎಂದು ಹೇಳುತ್ತಾನೆ. ದೇವರ ಆಳ್ವಿಕೆಯನ್ನು ನಾವು ತಿರಸ್ಕರಿಸಿ ಆತನನ್ನು ಆರಾಧಿಸುವುದನ್ನು ಬಿಟ್ಟುಬಿಡುವುದನ್ನೇ ಕಾತರದಿಂದ ಕಾಯುತ್ತಾ ಇದ್ದಾನೆ.

9 ಕಷ್ಟದಲ್ಲಿರುವಾಗ ಹೀಗೆ ಮಾಡಿ. ನಿಮ್ಮ ಕಣ್ಣಿಗೆ ಕಾಣದ ಈ ದೃಶ್ಯವನ್ನು ಚಿತ್ರಿಸಿಕೊಳ್ಳಿ. ಸೈತಾನ ಮತ್ತು ದೆವ್ವಗಳು ಒಂದು ಪಕ್ಕದಲ್ಲಿದ್ದಾರೆ. ನೀವೇನು ಮಾಡುತ್ತೀರೆಂದು ಸೂಕ್ಷ್ಮವಾಗಿ ನೋಡುತ್ತಾ ‘ಸೋತೇ ಹೋಗ್ತಿ, ಸೋತೇ ಹೋಗ್ತಿ’ ಎಂದು ಹೀಯಾಳಿಸುತ್ತಿದ್ದಾರೆ. ಆದರೆ ಇನ್ನೊಂದು ಪಕ್ಕದಲ್ಲಿ ಯೆಹೋವನು, ನಮ್ಮ ರಾಜ ಯೇಸು ಕ್ರಿಸ್ತನು, ಪುನರುತ್ಥಾನವಾಗಿರುವ ಅಭಿಷಿಕ್ತರು, ಸಾವಿರಾರು ದೇವದೂತರು ಸಹ ನಿಮ್ಮನ್ನು ನೋಡುತ್ತಿದ್ದಾರೆ. ನೀವು ಪಡುತ್ತಿರುವ ಕಷ್ಟವನ್ನು ಗಮನಿಸುತ್ತಿದ್ದಾರೆ. ಅಲ್ಲದೆ ಅವರು ‘ಗೆದ್ದೇ ಗೆಲ್ಲುತ್ತಿ, ಗೆದ್ದೇ ಗೆಲ್ಲುತ್ತಿ’ ಎಂದು ನಿಮ್ಮನ್ನು ಹುರಿದುಂಬಿಸುತ್ತಿದ್ದಾರೆ. ನೀವು ದಿನದಿನವೂ ಕಷ್ಟವನ್ನು ತಾಳಿಕೊಳ್ಳುತ್ತಿರುವುದನ್ನು, ಯೆಹೋವನಿಗೆ ನಿಷ್ಠೆ ತೋರಿಸುತ್ತಿರುವುದನ್ನು ನೋಡಿ ಸಂತೋಷಪಡುತ್ತಾರೆ. ಆಗ ಯೆಹೋವನು ನಿಮಗೆ, “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು” ಎಂದು ಹೇಳುತ್ತಾ ಇರುವುದು ಕೇಳಿಸುತ್ತದೆ.—ಜ್ಞಾನೋ. 27:11.

10. ಯೇಸುವಿನಂತೆ ನೀವು ತಾಳ್ಮೆಗೆ ಸಿಗುವ ಬಹುಮಾನಗಳ ಮೇಲೆ ಹೇಗೆ ಗಮನನೆಡಬಹುದು?

10 ಬಹುಮಾನಗಳ ಮೇಲೆ ಗಮನ ನೆಡಿ. ನೀವು ಪ್ರಯಾಣ ಮಾಡುತ್ತಿದ್ದೀರೆಂದು ನೆನಸಿ. ದಾರಿಯಲ್ಲಿ ಒಂದು ದೊಡ್ಡ ಸುರಂಗ ಎದುರಾಗುತ್ತದೆ. ಎಲ್ಲಿ ನೋಡಿದರೂ ಗೌವೆನ್ನುವ ಕತ್ತಲು. ಆದರೆ ಸುರಂಗದ ಕೊನೇ ತನಕ ಮುಂದೆ ಹೋಗುತ್ತಾ ಇದ್ದರೆ ಮತ್ತೆ ಬೆಳಕು ನೋಡುತ್ತೀರೆಂದು ನಿಮಗೆ ಗೊತ್ತು. ಜೀವನ ಸಹ ಆ ಪ್ರಯಾಣದಂತಿದೆ. ಅತಿ ಕಷ್ಟದ ಸಮಯಗಳು ಬರಬಹುದು. ಏನು ಮಾಡಬೇಕೆಂದು ನಿಮಗೆ ತೋಚಲಿಕ್ಕಿಲ್ಲ. ಯೇಸುವಿಗೂ ಹಾಗೆ ಅನಿಸಿರಬಹುದು. ಮರಣದ ಕಂಬಕ್ಕೆ ಹಾಕಿ ಅವನನ್ನು ಅವಮಾನಿಸಲಾಯಿತು. ತುಂಬ ನೋವಿನಲ್ಲಿದ್ದನು. ಇದು ಅವನ ಇಡೀ ಜೀವನದಲ್ಲೇ ಅತಿ ಕಷ್ಟದ ಸಮಯವಾಗಿದ್ದಿರಬೇಕು! ಅದನ್ನೆಲ್ಲ ಹೇಗೆ ತಾಳಿಕೊಂಡ? ‘ತನ್ನ ಮುಂದಿದ್ದ ಆನಂದದ’ ಮೇಲೆ ದೃಷ್ಟಿ ನೆಡುವ ಮೂಲಕ ಎನ್ನುತ್ತದೆ ಬೈಬಲ್‌. (ಇಬ್ರಿ. 12:2, 3) ತನ್ನ ತಾಳ್ಮೆಗೆ ಸಿಗುವ ಪ್ರತಿಫಲದ ಮೇಲೆ ಯೇಸು ಗಮನ ನೆಟ್ಟನು. ಮುಖ್ಯವಾಗಿ ದೇವರ ಹೆಸರನ್ನು ಪವಿತ್ರೀಕರಿಸುವುದರಲ್ಲಿ ಮತ್ತು ದೇವರಿಗಿರುವ ಆಳುವ ಹಕ್ಕನ್ನು ಬೆಂಬಲಿಸುವುದರಲ್ಲಿ ತನಗಿರುವ ಪಾಲಿನ ಬಗ್ಗೆ ಯೋಚಿಸಿದನು. ಈ ಕಷ್ಟಗಳು ಸ್ವಲ್ಪ ಸಮಯಕ್ಕಷ್ಟೇ, ಆದರೆ ತನಗೆ ಸ್ವರ್ಗದಲ್ಲಿ ಸಿಗುವ ಬಹುಮಾನ ಶಾಶ್ವತವಾಗಿರುತ್ತದೆ ಎಂದು ಯೇಸು ನೆನಪಿನಲ್ಲಿಟ್ಟನು. ಇಂದು ನೀವು ಎದುರಿಸುತ್ತಿರುವ ಕಷ್ಟಗಳಿಂದ ದಿಕ್ಕು ತೋಚದಂತಾಗಬಹುದು, ತುಂಬ ನೋವಾಗಬಹುದು. ಆದರೆ ನೆನಪಿಡಿ, ಆ ಕಷ್ಟಗಳು ಸ್ವಲ್ಪ ಸಮಯಕ್ಕಷ್ಟೇ.

‘ತಾಳಿಕೊಂಡವರು’

11. ‘ತಾಳಿಕೊಂಡವರ’ ಅನುಭವಗಳನ್ನು ನಾವೇಕೆ ಪರಿಗಣಿಸಬೇಕು?

11 ಕಷ್ಟಗಳನ್ನು ತಾಳಿಕೊಳ್ಳುವುದರಲ್ಲಿ ನಾವು ಒಂಟಿಯಾಗಿಲ್ಲ. ಸೈತಾನನು ತರುವ ಅನೇಕ ಸಂಕಷ್ಟಗಳನ್ನು ತಾಳಿಕೊಳ್ಳುವಂತೆ ಕ್ರೈಸ್ತರನ್ನು ಪ್ರೋತ್ಸಾಹಿಸಲು ಅಪೊಸ್ತಲ ಪೇತ್ರ ಹೀಗೆ ಬರೆದನು: “ನೀವು ನಂಬಿಕೆಯಲ್ಲಿ ಸ್ಥಿರರಾಗಿದ್ದು, ಲೋಕದಲ್ಲಿರುವ ನಿಮ್ಮ ಸಹೋದರರ ಇಡೀ ಬಳಗವು ಇಂಥ ಕಷ್ಟಗಳನ್ನೇ ಅನುಭವಿಸುತ್ತಿದೆ ಎಂಬುದನ್ನು ತಿಳಿದವರಾಗಿ [ಸೈತಾನನನ್ನು] ಎದುರಿಸಿರಿ.” (1 ಪೇತ್ರ 5:9) ‘ತಾಳಿಕೊಂಡವರ’ ಅನುಭವಗಳು ನಂಬಿಗಸ್ತರಾಗಿ ಉಳಿಯುವುದು ಹೇಗೆಂದು ನಮಗೆ ಕಲಿಸುತ್ತವೆ. ಅಲ್ಲದೆ ಜಯಿಸಲು ನಮ್ಮಿಂದ ಆಗುತ್ತದೆಂಬ ಭರವಸೆ ತುಂಬುತ್ತವೆ, ನಮ್ಮ ನಿಷ್ಠೆಗೆ ಬಹುಮಾನ ಸಿಗುತ್ತದೆಂದು ನೆನಪು ಹುಟ್ಟಿಸುತ್ತವೆ. (ಯಾಕೋ. 5:11) ಕೆಲವು ಉದಾಹರಣೆಗಳನ್ನು ಗಮನಿಸಿ. [1]

12. ಏದೆನ್‌ ತೋಟ ಕಾಯುತ್ತಿದ್ದ ಕೆರೂಬಿಯರಿಂದ ನಾವೇನು ಕಲಿಯುತ್ತೇವೆ?

12 ಕೆರೂಬಿಯರು ದೇವದೂತರಲ್ಲಿ ಉನ್ನತ ದರ್ಜೆಯವರು. ಆದಾಮಹವ್ವರು ಪಾಪ ಮಾಡಿದ ಬಳಿಕ ಯೆಹೋವನು ಕೆಲವು ಕೆರೂಬಿಯರಿಗೆ ಭೂಮಿಯಲ್ಲಿ ಒಂದು ಹೊಸ ನೇಮಕ ಕೊಟ್ಟನು. ಇದು ಸ್ವರ್ಗದಲ್ಲಿ ಅವರಿಗಿದ್ದ ನೇಮಕಕ್ಕಿಂತ ಬೇರೆಯಾಗಿತ್ತು. ಒಂದು ಕಷ್ಟದ ನೇಮಕ ನಮಗೆ ಸಿಕ್ಕಿದಾಗ ಅದರಲ್ಲೇ ಮುಂದುವರಿದು ತಾಳಿಕೊಳ್ಳಬೇಕೆಂದು ಅವರ ಮಾದರಿ ಕಲಿಸುತ್ತದೆ. ಬೈಬಲ್‌ ಹೀಗನ್ನುತ್ತದೆ: “ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ [ಯೆಹೋವನು] ಏದೆನ್‌ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.” [2] (ಆದಿ. 3:24) ಆ ಕೆರೂಬಿಯರು, ‘ನಾವು ಸ್ವರ್ಗದಲ್ಲಿರೋರು, ಇಂಥ ಕೆಲಸ ನಾವು ಮಾಡೋದಾ, ಅದೂ ಭೂಮಿಯಲ್ಲಾ’ ಅಂತ ಗುಣುಗುಟ್ಟಿದರೆಂದು ಬೈಬಲಿನಲ್ಲಿ ಎಲ್ಲೂ ತಿಳಿಸಿಲ್ಲ. ‘ಸಾಕಾಯ್ತಪ್ಪ ಈ ಕೆಲಸ’ ಎಂದು ಅವರು ಬೇಸತ್ತು ಹೋಗಲಿಲ್ಲ. ಬಹುಶಃ ಜಲಪ್ರಳಯದ ವರೆಗೆ ಅಂದರೆ 1,600ಕ್ಕಿಂತ ಹೆಚ್ಚು ವರ್ಷ ಅಲ್ಲಿದ್ದು ಆ ಕೆಲಸ ಮಾಡಿ ಮುಗಿಸಿದರು!

13. ಯೋಬನಿಗೆ ತನ್ನ ಕಷ್ಟಗಳನ್ನು ತಾಳಿಕೊಳ್ಳಲು ಹೇಗೆ ಸಾಧ್ಯವಾಯಿತು?

13 ನಂಬಿಗಸ್ತ ಯೋಬ. ಕೆಲವೊಮ್ಮೆ ನಿಮ್ಮ ಸ್ನೇಹಿತ ಅಥವಾ ಕುಟುಂಬದಲ್ಲೊಬ್ಬರು ಹೇಳಿದ ಯಾವುದೊ ಮಾತಿನಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದು. ಅಥವಾ ನಿಮಗೀಗ ಒಂದು ಗಂಭೀರ ಕಾಯಿಲೆ ಇರಬಹುದು. ಇಲ್ಲವೆ ನಿಮಗೆ ಆಪ್ತರಾದವರು ತೀರಿಹೋಗಿರಬಹುದು. ಯಾವುದೇ ಕಷ್ಟ ನಿಮಗಿದ್ದರೂ ಯೋಬನ ಮಾದರಿಯಿಂದ ಸಾಂತ್ವನ ಪಡೆಯಿರಿ. (ಯೋಬ 1:18, 19; 2:7, 9; 19:1-3) ಇದ್ದಕ್ಕಿದ್ದಂತೆ ತನ್ನ ಜೀವನ ಯಾಕೆ ತಲೆಕೆಳಗಾಯಿತು, ಯಾಕೆ ಇಷ್ಟೊಂದು ಕಷ್ಟ ಬಂತೆಂದು ಯೋಬನಿಗೆ ಅರ್ಥವಾಗಲಿಲ್ಲ. ಆದರೂ ತಾಳಿಕೊಂಡನು. ಅವನಿಗೆ ಯಾವುದು ಸಹಾಯಮಾಡಿತು? ಯೆಹೋವನ ಮೇಲೆ ಅವನಿಗೆ ಪ್ರೀತಿ, ಭಯಭಕ್ತಿ ಇತ್ತು. (ಯೋಬ 1:1) ಸುಖದಲ್ಲೂ ಕಷ್ಟದಲ್ಲೂ ಯೆಹೋವನನ್ನು ಮೆಚ್ಚಿಸಲು ಬಯಸಿದನು. ಅಲ್ಲದೆ ಯೆಹೋವನು ಸಹ ಅವನಿಗೆ ಸಹಾಯಮಾಡಿದನು. ತನ್ನ ಕೆಲವು ಅದ್ಭುತ ಸೃಷ್ಟಿಗಳ ಬಗ್ಗೆ ತಿಳಿಸುವ ಮೂಲಕ ತನ್ನ ಮಹಾ ಶಕ್ತಿಯನ್ನು ಗ್ರಹಿಸಲು ಯೋಬನಿಗೆ ಸಹಾಯಮಾಡಿದನು. ಇದು, ಯೆಹೋವನು ಸರಿಯಾದ ಸಮಯದಲ್ಲಿ ಕಷ್ಟಗಳನ್ನು ಖಂಡಿತ ಕೊನೆಗಾಣಿಸುವನೆಂಬ ಹೆಚ್ಚಿನ ಭರವಸೆಯನ್ನು ಯೋಬನಿಗೆ ಕೊಟ್ಟಿತು. (ಯೋಬ 42:1, 2) ಅದು ನಿಜವಾಯಿತು. “ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು.” ಯೋಬನು ಬಹುಕಾಲ ಸಂತೃಪ್ತಿಯಿಂದ ಬದುಕಿದನು.—ಯೋಬ 42:10, 17.

14. ಎರಡನೇ ಕೊರಿಂಥ 1:6 ಕ್ಕನುಸಾರ ಪೌಲನ ತಾಳ್ಮೆ ಇತರರಿಗೆ ಹೇಗೆ ಸಹಾಯಮಾಡಿತು?

14 ಅಪೊಸ್ತಲ ಪೌಲ. ನೀವು ತೀವ್ರ ವಿರೋಧ ಅಥವಾ ಹಿಂಸೆಯನ್ನೂ ಅನುಭವಿಸುತ್ತಿದ್ದೀರಾ? ನೀವೊಬ್ಬ ಸಭಾ ಹಿರಿಯರಾಗಿ ಅಥವಾ ಸಂಚರಣ ಮೇಲ್ವಿಚಾರಕರಾಗಿದ್ದು ಅನೇಕ ಜವಾಬ್ದಾರಿಗಳಿಂದ ತುಂಬ ಬಳಲಿ ಹೋಗಿದ್ದೀರಾ? ಹಾಗಿದ್ದರೆ ಪೌಲನ ಮಾದರಿ ನಿಮಗೆ ಸಹಾಯಮಾಡುತ್ತದೆ. ಪೌಲನು ಕ್ರೂರ ಹಿಂಸೆಯನ್ನು ಅನುಭವಿಸಿದನು. ಸಭೆಯ ಸಹೋದರರ ಕುರಿತ ಚಿಂತೆಯ ಒತ್ತಡವೂ ಅವನಿಗಿತ್ತು. (2 ಕೊರಿಂ. 11:23-29) ಆದರೆ ಪೌಲ ಯಾವತ್ತೂ ಸೋತುಹೋಗಲಿಲ್ಲ. ಅವನ ಈ ಮಾದರಿಯು ಅನೇಕರಿಗೆ ತಾಳಿಕೊಳ್ಳಲು ಬಲಕೊಟ್ಟಿತು. (2 ಕೊರಿಂಥ 1:6 ಓದಿ.) ಅದೇ ರೀತಿ ನಿಮ್ಮ ತಾಳ್ಮೆಯು ಇತರರಿಗೆ ತಾಳಿಕೊಳ್ಳಲು ಬಲಕೊಡುತ್ತದೆ.

ನಿಮ್ಮಲ್ಲಿ ತಾಳ್ಮೆಯು ತನ್ನ ಕೆಲಸವನ್ನು ‘ಸಂಪೂರ್ಣಗೊಳಿಸುವುದೊ?’

15, 16. (ಎ) ತಾಳ್ಮೆಯು ಯಾವ “ಕೆಲಸವನ್ನು” ಸಂಪೂರ್ಣಗೊಳಿಸಬೇಕು? (ಬಿ) ‘ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲು’ ಬಿಡುವುದು ಹೇಗೆಂಬುದಕ್ಕೆ ಉದಾಹರಣೆಗಳನ್ನು ಕೊಡಿ.

15 ದೇವರ ಪ್ರೇರಣೆಯಿಂದ ಶಿಷ್ಯ ಯಾಕೋಬನು ಹೀಗೆ ಬರೆದನು: “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ; ಆಗ ನೀವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿರದೆ ಎಲ್ಲ ವಿಧಗಳಲ್ಲಿ ಸಂಪೂರ್ಣರೂ ಸ್ವಸ್ಥರೂ ಆಗಿರುವಿರಿ.” (ಯಾಕೋ. 1:4) ತಾಳ್ಮೆಯು ತನ್ನ “ಕೆಲಸವನ್ನು” ನಮ್ಮಲ್ಲಿ ಹೇಗೆ ಸಂಪೂರ್ಣಗೊಳಿಸುತ್ತದೆ? ನಾವು ಕಷ್ಟವನ್ನು ಅನುಭವಿಸುತ್ತಿರುವಾಗ ಇನ್ನಷ್ಟು ತಾಳ್ಮೆ, ಕೃತಜ್ಞತಾಭಾವ, ಪ್ರೀತಿಯನ್ನು ಬೆಳೆಸಿಕೊಳ್ಳಲಿಕ್ಕಿದೆ ಎಂದು ನಮ್ಮ ಗಮನಕ್ಕೆ ಬರಬಹುದು. ಕಷ್ಟವನ್ನು ತಾಳಿಕೊಳ್ಳುತ್ತಾ ಇದ್ದರೆ ಆ ಗುಣಗಳನ್ನು ಇನ್ನೂ ಹೆಚ್ಚು ತೋರಿಸಲು ಕಲಿಯುತ್ತೇವೆ. ಹೀಗೆ ನಮ್ಮ ಕ್ರೈಸ್ತ ವ್ಯಕ್ತಿತ್ವವು ಉತ್ತಮಗೊಳ್ಳುತ್ತದೆ.

ಕಷ್ಟಗಳನ್ನು ತಾಳಿಕೊಳ್ಳುತ್ತಾ ಇದ್ದರೆ ನಮ್ಮ ಕ್ರೈಸ್ತ ವ್ಯಕ್ತಿತ್ವವು ಉತ್ತಮಗೊಳ್ಳುತ್ತದೆ (ಪ್ಯಾರ 15, 16 ನೋಡಿ)

16 ತಾಳ್ಮೆಯು ನಮ್ಮನ್ನು ಉತ್ತಮ ಕ್ರೈಸ್ತರನ್ನಾಗಿ ಮಾಡುತ್ತದೆ. ಹಾಗಾಗಿ ಕಷ್ಟಪರೀಕ್ಷೆಯನ್ನು ಕೊನೆಗೊಳಿಸುವುದಕ್ಕೋಸ್ಕರ ಯೆಹೋವನ ನಿಯಮವನ್ನು ಮುರಿಯಬೇಡಿರಿ. ಉದಾಹರಣೆಗೆ ನಿಮ್ಮಲ್ಲಿ ಅನೈತಿಕ ಯೋಚನೆಗಳು ಬರುತ್ತಿರುವುದಾದರೆ ಆ ಕೆಟ್ಟ ಆಸೆಗಳಿಗೆ ಬಲಿಯಾಗಬೇಡಿ. ಆ ಆಲೋಚನೆಗಳನ್ನು ತೆಗೆದುಹಾಕಲು ಯೆಹೋವನ ಸಹಾಯ ಕೇಳಿ. ನಿಮ್ಮ ಮನೆಮಂದಿಯಲ್ಲಿ ಯಾರಾದರು ನಿಮ್ಮನ್ನು ವಿರೋಧಿಸುತ್ತಿದ್ದಾರಾ? ಹಾಗಾದರೆ ಸೋತುಹೋಗಬೇಡಿ. ಯೆಹೋವನನ್ನು ಆರಾಧಿಸುವುದನ್ನು ಮುಂದುವರಿಸಲು ದೃಢನಿಶ್ಚಯ ಮಾಡಿ. ಆಗ ಯೆಹೋವನಲ್ಲಿ ನಿಮಗಿರುವ ಭರವಸೆ ಇನ್ನೂ ಹೆಚ್ಚುವುದು. ನೆನಪಿಡಿ, ಆತನ ಮೆಚ್ಚಿಗೆ ಪಡೆಯಬೇಕಾದರೆ ನಾವು ತಾಳಿಕೊಳ್ಳಲೇಬೇಕು.—ರೋಮ. 5:3-5; ಯಾಕೋ. 1:12.

17, 18. (ಎ) ಕೊನೆ ವರೆಗೆ ತಾಳಿಕೊಳ್ಳುವುದರ ಮಹತ್ವವನ್ನು ಉದಾಹರಣೆ ಮೂಲಕ ತಿಳಿಸಿ. (ಬಿ) ನಾವು ಅಂತ್ಯಕ್ಕೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಮ್ಮಲ್ಲಿ ಯಾವ ಭರವಸೆ ಇರಬೇಕು?

17 ನಾವು ತಾಳಿಕೊಳ್ಳಬೇಕಾಗಿರುವುದು ಸ್ವಲ್ಪ ಸಮಯಕ್ಕಲ್ಲ. ಕೊನೆಯ ವರೆಗೂ ತಾಳಿಕೊಳ್ಳಬೇಕು. ಉದಾಹರಣೆಗೆ, ಒಂದು ಹಡಗು ಮುಳುಗುತ್ತಾ ಇದೆಯೆಂದು ನೆನಸಿ. ಅದರಲ್ಲಿರುವ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಬೇಕಾದರೆ ದಡದ ವರೆಗೂ ಈಜಲೇಬೇಕು. ಒಬ್ಬನು ಈಜಲು ಆರಂಭಿಸಿ ಸ್ವಲ್ಪ ಸಮಯದಲ್ಲೇ ಈಜುವುದನ್ನು ನಿಲ್ಲಿಸಿದರೆ ಮುಳುಗಿಬಿಡುತ್ತಾನೆ. ಅದೇ ರೀತಿ ದಡ ಸೇರುವುದಕ್ಕೆ ಸ್ವಲ್ಪ ಮುಂಚೆ ಈಜುವುದನ್ನು ನಿಲ್ಲಿಸಿದರೆ ಕೂಡ ಅವನು ಮುಳುಗಿ ಸಾಯುತ್ತಾನೆ. ನಮ್ಮ ವಿಷಯದಲ್ಲೂ ಇದು ನಿಜ. ಹೊಸ ಲೋಕಕ್ಕೆ ನಾವು ಪ್ರವೇಶಿಸಬೇಕಾದರೆ ಅಲ್ಲಿಯ ವರೆಗೆ ತಾಳಿಕೊಳ್ಳಲೇಬೇಕು. “ನಾವು ಬಿಟ್ಟುಬಿಡುವುದಿಲ್ಲ” ಎಂದು ಅಪೊಸ್ತಲ ಪೌಲ ಹೇಳಿದನು. ಆ ಮನೋಭಾವ ನಮ್ಮಲ್ಲೂ ಇರಲಿ.—2 ಕೊರಿಂ. 4:1, 16.

18 ಕೊನೆ ವರೆಗೆ ತಾಳಿಕೊಳ್ಳಲು ಯೆಹೋವನು ಸಹಾಯ ಮಾಡುತ್ತಾನೆಂದು ಪೌಲನಂತೆ ನಮಗೂ ಪೂರ್ಣ ಭರವಸೆಯಿದೆ. ಪೌಲ ಬರೆದದ್ದು: “ನಮ್ಮನ್ನು ಪ್ರೀತಿಸಿದಾತನ ಮೂಲಕ ಇವೆಲ್ಲವುಗಳಿಂದ ನಾವು ಸಂಪೂರ್ಣವಾಗಿ ಜಯಶಾಲಿಗಳಾಗುತ್ತೇವೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ಸರಕಾರಗಳಾಗಲಿ ಇಂದಿನ ಸಂಗತಿಗಳಾಗಲಿ ಮುಂದೆ ಬರಲಿರುವ ಸಂಗತಿಗಳಾಗಲಿ ಶಕ್ತಿಗಳಾಗಲಿ ಎತ್ತರವಾಗಲಿ ಆಳವಾಗಲಿ ಬೇರೆ ಯಾವುದೇ ಸೃಷ್ಟಿಯಾಗಲಿ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದೆಂಬ ಖಾತ್ರಿ ನನಗಿದೆ.” (ರೋಮ. 8:37-39) ಒಮ್ಮೊಮ್ಮೆ ನಾವು ಬಳಲಿ ಹೋಗಬಹುದು ನಿಜ. ಆಗ ನಾವು ಗಿದ್ಯೋನ ಮತ್ತು ಅವನ ಸೈನಿಕರಂತೆ ಇರೋಣ. ಅವರು ತುಂಬ ದಣಿದಿದ್ದರೂ ಬಿಟ್ಟುಕೊಡಲಿಲ್ಲ, “ಹಿಂದಟ್ಟುತ್ತಾ” ಹೋದರು.—ನ್ಯಾಯ. 8:4.

^ [1] (ಪ್ಯಾರ 11) ನಮ್ಮ ಸಮಯದ ದೇವಜನರ ತಾಳ್ಮೆಯ ಕುರಿತು ಓದಿ ಯೋಚಿಸುವುದು ಸಹ ನಿಮಗೆ ಪ್ರೋತ್ಸಾಹಕರ. ಉದಾಹರಣೆಗೆ 1992, 1999, 2008⁠ರ ಯಿಯರ್‌ಬುಕ್‌ಗಳಲ್ಲಿ ಇಥಿಯೋಪಿಯ, ಮಲಾವಿ, ರಷ್ಯದಲ್ಲಿನ ನಮ್ಮ ಸಹೋದರರ ಉತ್ತಮ ಅನುಭವಗಳಿವೆ. 2015, ಜೂನ್‌ 15⁠ರ ಕಾವಲಿನಬುರುಜು ಪುಟ 30-31 ಸಹ ನೋಡಿ.

^ [2] (ಪ್ಯಾರ 12) ಎಷ್ಟು ಮಂದಿ ಕೆರೂಬಿಯರನ್ನು ಈ ಕೆಲಸಕ್ಕೆ ನೇಮಿಸಲಾಗಿತ್ತೆಂದು ಬೈಬಲ್‌ ಹೇಳುವುದಿಲ್ಲ.