ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 18

‘ಕೊನೆವರೆಗೂ ಓಡಿ’

‘ಕೊನೆವರೆಗೂ ಓಡಿ’

“ನನ್ನ ಓಟವನ್ನು ಕೊನೆಗಾಣಿಸಿದ್ದೇನೆ.”—2 ತಿಮೊ. 4:7.

ಗೀತೆ 154 ತಾಳಿಕೊಳ್ಳುತ್ತಾ ಇರೋಣ

ಕಿರುನೋಟ *

1. ನಾವೆಲ್ರೂ ಏನು ಮಾಡ್ಬೇಕು?

ಕಾಯಿಲೆ ಇದ್ದಾಗ ಅಥವಾ ದಣಿದಿದ್ದಾಗ ನೀವು ಓಡೋಕೆ ಇಷ್ಟಪಡ್ತೀರಾ? ಇಲ್ಲ ಅಲ್ವಾ? ಆದ್ರೆ ಅಪೊಸ್ತಲ ಪೌಲನು, ಎಲ್ಲಾ ಸತ್ಯ ಕ್ರೈಸ್ತರೂ ಒಂದು ರೀತಿಯ ಓಟದಲ್ಲಿ ಓಡ್ತಿದ್ದಾರೆ ಅಂತ ಹೇಳಿದ್ನು. (ಇಬ್ರಿ. 12:1, 2) ಯೆಹೋವನು ಕೊಡುವಂಥ ಬಹುಮಾನವನ್ನು ಪಡ್ಕೋಬೇಕಂದ್ರೆ ನಾವು ಯುವಕರಾಗಿರಲಿ ವೃದ್ಧರಾಗಿರಲಿ, ನಮಗೆ ಶಕ್ತಿ ಇರಲಿ ಇಲ್ಲದಿರಲಿ ಕೊನೇವರೆಗೆ ತಾಳಿಕೊಂಡು ಓಡ್ಬೇಕು.—ಮತ್ತಾ. 24:13.

2. ಎರಡನೇ ತಿಮೊಥೆಯ 4:7, 8 ರಲ್ಲಿ ಹೇಳೋ ಪ್ರಕಾರ ಪೌಲನು ಯಾಕೆ ಯಾವುದೇ ಹಿಂಜರಿಕೆ ಇಲ್ದೇ ಸಲಹೆ ಕೊಡಬಹುದಿತ್ತು?

2 ಪೌಲನು ತನ್ನ ಓಟವನ್ನು ‘ಕೊನೆಗಾಣಿಸಿದ್ರಿಂದ’ ಅಂದ್ರೆ ಓಡಿ ಮುಗಿಸಿದ್ರಿಂದ ಬೇರೆಯವ್ರೂ ಕೊನೆವರೆಗೆ ಓಡ್ಬೇಕಂತ ಯಾವುದೇ ಹಿಂಜರಿಕೆ ಇಲ್ದೇ ಸಲಹೆ ಕೊಡಬಹುದಿತ್ತು. (2 ತಿಮೊಥೆಯ 4:7, 8 ಓದಿ.) ಆದ್ರೆ, ಪೌಲನು ಇಲ್ಲಿ ಯಾವ ಓಟದ ಬಗ್ಗೆ ಮಾತಾಡಿದ್ನು?

ಪೌಲನು ತಿಳಿಸಿದ ಓಟ

3. ಪೌಲನು ತಿಳಿಸಿದ ಓಟ ಯಾವುದು?

3 ಪೌಲನು ಪ್ರಾಮುಖ್ಯ ಪಾಠಗಳನ್ನು ಕಲಿಸಲಿಕ್ಕಾಗಿ ಕೆಲವೊಮ್ಮೆ ಪುರಾತನ ಗ್ರೀಸ್‌ನ ಕ್ರೀಡೆಗಳಲ್ಲಿದ್ದ ಕೆಲವು ವಿಷಯಗಳನ್ನು ಹೇಳಿದ್ನು. (1 ಕೊರಿಂ. 9:25-27; 2 ತಿಮೊ. 2:5) ಆತನು ಅನೇಕ ಸಲ ಕ್ರೈಸ್ತ ಜೀವನವನ್ನು ಓಟದ ಪಂದ್ಯಕ್ಕೆ ಹೋಲಿಸಿದನು. (1 ಕೊರಿಂ. 9:24; ಗಲಾ. 2:2; ಫಿಲಿ. 2:16) ಒಬ್ಬ ವ್ಯಕ್ತಿ ಈ ‘ಓಟವನ್ನು’ ಆರಂಭಿಸೋದು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಂಡಾಗ. (1 ಪೇತ್ರ 3:21) ಅವನು ಓಟವನ್ನು ಕೊನೆಗೊಳಿಸೋದು ಯೆಹೋವನಿಂದ ಶಾಶ್ವತ ಜೀವನ ಬಹುಮಾನವಾಗಿ ಪಡೆಯುವಾಗ.—ಮತ್ತಾ. 25:31-34, 46; 2 ತಿಮೊ. 4:8.

4. ಈ ಲೇಖನದಲ್ಲಿ ನಾವೇನನ್ನು ನೋಡಲಿದ್ದೇವೆ?

4 ಓಟದ ಪಂದ್ಯಕ್ಕೂ ಕ್ರೈಸ್ತ ಜೀವನಕ್ಕೂ ಯಾವ ಹೋಲಿಕೆಗಳಿವೆ? ಇವುಗಳಿಗೆ ಅನೇಕ ಹೋಲಿಕೆಗಳಿವೆ. ಅವುಗಳಲ್ಲಿ ಮೂರನ್ನು ಈಗ ನೋಡೋಣ. ಮೊದಲನೇದಾಗಿ ನಾವು ಸರಿಯಾದ ಪಥದಲ್ಲೇ ಓಡಬೇಕು. ಎರಡನೇದಾಗಿ ನಮ್ಮ ಪೂರ್ತಿ ಗಮನ ಅಂತಿಮ ರೇಖೆಯ ಮೇಲಿರಬೇಕು. ಮೂರನೇದಾಗಿ, ಯಾವ್ದೇ ಸಮಸ್ಯೆ ಬಂದರೂ ಓಡ್ತಾ ಇರಬೇಕು.

ಸರಿಯಾದ ಪಥದಲ್ಲೇ ಓಡಿ

ನಾವೆಲ್ರೂ ಕ್ರೈಸ್ತ ಪಥದಲ್ಲೇ ಓಡ್ಬೇಕು (ಪ್ಯಾರ 5-7 ನೋಡಿ) *

5. ನಾವು ಯಾವ ಪಥದಲ್ಲಿ ಓಡ್ಬೇಕು ಮತ್ತು ಯಾಕೆ?

5 ಒಂದು ಓಟದ ಸ್ಪರ್ಧೆಯಲ್ಲಿ ಓಟಗಾರರು ಬಹುಮಾನ ಪಡ್ಕೋಬೇಕಂದ್ರೆ ಸ್ಪರ್ಧೆ ಏರ್ಪಡಿಸಿದವ್ರು ಹೇಳಿದ ಪಥದಲ್ಲೇ ಓಡ್ಬೇಕು. ಅದೇ ರೀತಿಯಲ್ಲಿ ನಾವು ಶಾಶ್ವತ ಜೀವನ ಬಹುಮಾನವಾಗಿ ಪಡ್ಕೋಬೇಕಂದ್ರೆ ಕ್ರೈಸ್ತ ಪಥದಲ್ಲೇ ಓಡ್ಬೇಕು ಅಥವಾ ಬೈಬಲಲ್ಲಿರುವ ತತ್ವಗಳ ಪ್ರಕಾರ ನಡ್ಕೋಬೇಕು. (ಅ. ಕಾ. 20:24; 1 ಪೇತ್ರ 2:21) ಆದ್ರೆ ನಾವು ಈ ಕ್ರೈಸ್ತ ಪಥದಲ್ಲಿ ಓಡೋದು ಸೈತಾನನಿಗೆ ಮತ್ತವನ ಹಿಂಬಾಲಕರಿಗೆ ಇಷ್ಟ ಇಲ್ಲ. ಬದಲಿಗೆ ನಾವೂ ‘ಅವರೊಂದಿಗೆ ಓಡ್ಬೇಕು’ ಅಂತ ಅವ್ರು ಬಯಸ್ತಾರೆ. (1 ಪೇತ್ರ 4:4) ನಮ್ಮ ಕ್ರೈಸ್ತ ಜೀವನವನ್ನು ನೋಡಿ ಅವ್ರು ಅಪಹಾಸ್ಯ ಮಾಡ್ತಾರೆ ಮತ್ತು ತಾವು ಓಡೋ ಪಥನೇ ಸರಿಯಾಗಿದೆ, ಅದ್ರಲ್ಲಿ ಓಡಿದ್ರೆನೇ ನಿಜ ಸ್ವಾತಂತ್ರ್ಯ ಸಿಗುತ್ತೆ ಅಂತ ಅವ್ರು ಹೇಳ್ತಾರೆ. ಆದ್ರೆ ಅದು ನಿಜ ಅಲ್ಲ.—2 ಪೇತ್ರ 2:19.

6. ಬ್ರೈಯನ್‌ನ ಉದಾಹರಣೆಯಿಂದ ನೀವೇನು ಕಲಿಯುತ್ತೀರಿ?

6 ಸೈತಾನನ ಲೋಕದಿಂದ ಪ್ರಭಾವಿತರಾದವ್ರ ಜೊತೆ ಓಡೋವ್ರಿಗೆ ತಾವು ಆರಿಸಿಕೊಂಡ ದಾರಿ ಸ್ವಾತಂತ್ರ್ಯಕ್ಕಲ್ಲ, ದಾಸತ್ವಕ್ಕೆ ನಡೆಸುತ್ತೆ ಅಂತ ಬೇಗನೇ ಗೊತ್ತಾಗುತ್ತೆ. (ರೋಮ. 6:16) ಬ್ರೈಯನ್‌ ಎಂಬ ಸಹೋದರನ ಉದಾಹರಣೆ ನೋಡಿ. ಅವನ ಹೆತ್ತವ್ರು ಅವ್ನಿಗೆ ಕ್ರೈಸ್ತ ಜೀವನವನ್ನು ನಡೆಸುವಂತೆ ಉತ್ತೇಜಿಸಿದ್ರು. ಆದ್ರೆ ಹದಿವಯಸ್ಸಿನಲ್ಲಿದ್ದಾಗ ಬ್ರೈಯನ್‌ಗೆ ಈ ಪಥ ಅಥವಾ ಜೀವನದಿಂದ ಸಂತೋಷ ಸಿಗಲ್ಲ ಅಂತ ಅನಿಸ್ತು. ಅದಕ್ಕೆ ಸೈತಾನನ ಲೋಕದವ್ರ ಜೊತೆಯಲ್ಲಿ ಓಡೋಕೆ ನಿರ್ಧರಿಸಿದನು. ಅವನು ಹೀಗೆ ಹೇಳ್ತಾನೆ: “ನನಗೆ ಯಾವುದ್ರಿಂದ ಸ್ವಾತಂತ್ರ್ಯ ಸಿಗುತ್ತೆ ಅಂತ ನಾನು ಅಂದುಕೊಂಡಿದ್ನೋ ಅದು ನನ್ನನ್ನ ದಾಸತ್ವಕ್ಕೆ ನಡೆಸುತ್ತೆ ಅಂತ ನನಗಾಗ ಗೊತ್ತಿರ್ಲಿಲ್ಲ. ಸ್ವಲ್ಪ ಸಮ್ಯದಲ್ಲೇ ನಾನು ಡ್ರಗ್ಸ್‌ ತಗೊಳ್ಳೋಕೆ, ಕುಡಿಯೋಕೆ ಮತ್ತು ಅನೈತಿಕ ಜೀವನ ನಡೆಸೋಕೆ ಶುರು ಮಾಡ್ದೆ. ನಂತ್ರ ಕೆಲವು ವರ್ಷಗಳಲ್ಲಿ ಇನ್ನೂ ಹೆಚ್ಚು ನಶೆ ಬರಿಸುವಂಥ ಡ್ರಗ್ಸ್‌ಗಳನ್ನ ತಗೊಂಡೆ, ಅದಿಲ್ಲದೆ ನನ್ನಿಂದ ಇರೋಕಾಗಲ್ಲ ಅನ್ನೋವಷ್ಟರ ಮಟ್ಟಿಗೆ ಹೋಗ್ಬಿಟ್ಟೆ. ನಾನು ಈ ರೀತಿ ಜೀವ್ನ ನಡೆಸಕ್ಕೋಸ್ಕರ ಡ್ರಗ್ಸ್‌ ಮಾರೋಕೆ ಶುರು ಮಾಡ್ದೆ.” ಆದ್ರೆ ಕೊನೆಗೂ ಯೆಹೋವನಲ್ಲಿ ಭರವಸೆ ಇಟ್ಟು ಆತನಿಗೆ ಇಷ್ಟ ಆಗೋ ರೀತಿ ಜೀವನ ಮಾಡೋಕೆ ಬ್ರೈಯನ್‌ ನಿರ್ಧರಿಸಿದ್ನು. ತನ್ನ ಜೀವನ ಪಥವನ್ನ ಅಥವಾ ರೀತಿಯನ್ನ ಬದಲಾಯಿಸಿಕೊಂಡು 2001 ರಲ್ಲಿ ದೀಕ್ಷಾಸ್ನಾನ ಪಡ್ಕೊಂಡನು. ಅವನು ಕ್ರೈಸ್ತ ಪಥದಲ್ಲಿ ಓಡ್ತಿರೋದ್ರಿಂದ ಈಗ ಸಂತೋಷವಾಗಿದ್ದಾನೆ. *

7. ಮತ್ತಾಯ 7:13, 14 ರ ಪ್ರಕಾರ ನಮ್ಮ ಮುಂದೆ ಯಾವೆರಡು ದಾರಿಗಳಿವೆ?

7 ನಾವು ಸರಿಯಾದ ಪಥ ಅಥವಾ ದಾರಿಯನ್ನು ಆರಿಸಿಕೊಳ್ಳೋದು ಎಷ್ಟು ಮುಖ್ಯ ಅಲ್ವಾ? ನಾವು ‘ಜೀವಕ್ಕೆ ನಡೆಸುವ’ ಇಕ್ಕಟ್ಟಾದ ದಾರಿಯಲ್ಲಿ ಓಡೋದನ್ನ ನಿಲ್ಸಿ ಈ ಲೋಕದ ಹೆಚ್ಚಿನವ್ರು ಹೋಗುವಂಥ ಅಗಲವಾದ ದಾರಿಯಲ್ಲಿ ಓಡ್ಬೇಕಂತ ಸೈತಾನನು ಬಯಸ್ತಾನೆ. ಎಲ್ರಿಗೂ ಗೊತ್ತಿರುವಂಥ ಈ ದಾರಿಯಲ್ಲಿ ಓಡೋದು ಸುಲಭ ಇರಬಹುದು. ಆದ್ರೆ ಅದು ‘ನಾಶನಕ್ಕೆ ನಡೆಸುತ್ತೆ.’ (ಮತ್ತಾಯ 7:13, 14 ಓದಿ.) ನಾವು ಬೇರೆ ಕಡೆಗೆ ತಿರುಗದೆ ಸರಿಯಾದ ದಾರಿಯಲ್ಲೇ ಓಡ್ಬೇಕಂದ್ರೆ ಯೆಹೋವನಲ್ಲಿ ಭರವಸೆ ಇಟ್ಟು ಆತನು ಹೇಳೋದನ್ನ ಕೇಳ್ಬೇಕು.

ನಿಮ್ಮ ಗಮನ ಗುರಿ ಮೇಲೇ ಇರಲಿ

ನಮ್ಮ ಗಮನ ಬಹುಮಾನದ ಮೇಲೆನೇ ಇರ್ಬೇಕು ಮತ್ತು ನಾವು ಇತರರನ್ನು ಎಡವಿಸಬಾರದು (ಪ್ಯಾರ 8-12 ನೋಡಿ) *

8. ಒಬ್ಬ ಓಟಗಾರನು ಎಡವಿ ಬೀಳೋದಾದ್ರೆ ಏನು ಮಾಡ್ತಾನೆ?

8 ಓಟದ ಪಂದ್ಯದಲ್ಲಿ ಓಡುವ ಸ್ಪರ್ಧಿಗಳು ಮುಗ್ಗರಿಸದೇ ಇರಲಿಕ್ಕಾಗಿ ತಮ್ಮ ಮುಂದಿರೋ ದಾರಿಯನ್ನೇ ನೋಡ್ತಾ ಓಡ್ತಾರೆ. ಹಾಗಿದ್ರೂ ಅವ್ರು ಬೇರೆ ಸ್ಪರ್ಧಿಗಳಿಂದಾಗಿ ಎಡವಬಹುದು, ದಾರಿಯಲ್ಲಿರುವ ಗುಂಡಿಗಳಲ್ಲಿ ಕಾಲು ಹಾಕಬಹುದು. ಇದರಿಂದಾಗಿ ಅವ್ರು ಬಿದ್ದರೂ ಮತ್ತೆ ಎದ್ದು ಓಡುತ್ತಾರೆ. ಅವ್ರ ಗಮನ ಅಂತಿಮ ರೇಖೆಯನ್ನು ದಾಟಿ ಬಹುಮಾನ ಪಡಕೊಳ್ಳೋದ್ರ ಮೇಲೆನೇ ಇರುತ್ತೆ ಹೊರತು ಯಾಕೆ ಮುಗ್ಗರಿಸಿದ್ವಿ ಅನ್ನೋದ್ರ ಮೇಲಲ್ಲ.

9. ನಾವು ಎಡವಿ ಬಿಳೋದಾದ್ರೆ ಏನು ಮಾಡ್ಬೇಕು?

9 ನಮ್ಮ ಕ್ರೈಸ್ತ ಓಟದಲ್ಲಿ ಓಡುವಾಗ ಅನೇಕ ಸಾರಿ ಎಡವಿ ಬೀಳಬಹುದು. ಹೇಗಂದ್ರೆ ನಾವು ತಪ್ಪಾಗಿ ಮಾತಾಡ್ಬಹುದು ಅಥವಾ ಸರಿಯಾಗಿ ನಡಕೊಳ್ಳದೇ ಇರಬಹುದು. ಅಥವಾ ನಮ್ಮ ಜೊತೆ ಓಡುವವ್ರು ಮಾಡಿದ ತಪ್ಪಿನಿಂದ ನಮಗೆ ನೋವಾಗ್ಬಹುದು. ಈ ತರ ಆಗುತ್ತೆ ಅಂತ ನಮಗೆ ಗೊತ್ತಿದೆ, ಯಾಕೆಂದ್ರೆ ನಾವೆಲ್ರೂ ಅಪರಿಪೂರ್ಣರಾಗಿದ್ದೇವೆ ಮತ್ತು ಎಲ್ರೂ ‘ಜೀವಕ್ಕೆ ನಡೆಸುವ’ ಇಕ್ಕಟ್ಟಾದ ದಾರಿಯಲ್ಲಿ ಓಡ್ತಾ ಇದ್ದೇವೆ. ಹಾಗಾಗಿ, ಒಬ್ಬರಿಗೊಬ್ರು ಗುದ್ದಿಕೊಂಡು ಓಡಬಹುದು. ಕೆಲವೊಮ್ಮೆ ನಾವು ಒಬ್ರಿಗೊಬ್ರು ‘ದೂರುಹೊರಿಸೋಕೆ ಕಾರಣ ಇರುತ್ತೆ’ ಅಂತ ಪೌಲ ಸಹ ಒಪ್ಕೊಂಡನು. (ಕೊಲೊ. 3:13) ಆದ್ರೆ ನಾವು ಯಾಕೆ ಎಡವಿ ಬಿದ್ವಿ ಅಂತ ಯೋಚಿಸ್ತಾ ಇರೋ ಬದ್ಲಿಗೆ ನಮಗೆ ಸಿಗಲಿಕ್ಕಿರೋ ಬಹುಮಾನದ ಮೇಲೆ ಗಮನ ಇಡ್ಬೇಕು. ಒಂದುವೇಳೆ ನಾವು ಎಡವಿ ಬೀಳೋದಾದ್ರೂ ಕೂಡ್ಲೇ ಎದ್ದು ಮತ್ತೆ ಓಡೋದನ್ನ ಮುಂದುವರಿಸ್ಬೇಕು. ನಾವು ಕೋಪ ಮಾಡ್ಕೊಂಡು ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸೋದಾದ್ರೆ ಅಂತಿಮ ರೇಖೆಯನ್ನ ದಾಟೋಕೂ ಆಗಲ್ಲ, ಬಹುಮಾನನೂ ಸಿಗಲ್ಲ. ಅಷ್ಟೇ ಅಲ್ಲ, ನಾವು ಹೀಗೆ ಬಿದ್ದಾಗ ಪುನಃ ಎದ್ದೇಳದೇ ಇದ್ರೆ ಜೀವಕ್ಕೆ ನಡೆಸೋ ಇಕ್ಕಟ್ಟಾದ ದಾರಿಯಲ್ಲಿ ಓಡ್ತಿರೋ ಬೇರೆಯವ್ರಿಗೂ ಅಡ್ಡಿಯಾಗ್ತೇವೆ.

10. ನಾವು ಬೇರೆಯವ್ರಿಗೆ ‘ಎಡವುವ ಕಲ್ಲು’ ಆಗ್ದೇ ಇರಬೇಕಂದ್ರೆ ಏನು ಮಾಡ್ಬೇಕು?

10 ನಮ್ಮ ಜೊತೆ ಓಡೋವ್ರಿಗೆ ನಾವು ‘ಎಡವುವ ಕಲ್ಲು’ ಆಗ್ದೇ ಇರೋ ಇನ್ನೊಂದು ವಿಧ, ಸಾಧ್ಯವಾದಾಗೆಲ್ಲಾ ನಮ್ಮಿಷ್ಟಕ್ಕಿಂತ ಅವ್ರ ಇಷ್ಟಗಳಿಗೆ ಪ್ರಾಮುಖ್ಯತೆ ಕೊಡೋದೇ ಆಗಿದೆ. (ರೋಮ. 14:13, 19-21; 1 ಕೊರಿಂ. 8:9, 13) ಹೀಗೆ, ನಾವು ಪಂದ್ಯದಲ್ಲಿ ಓಡುವಂಥ ಓಟಗಾರರ ತರ ಇಲ್ಲ ಅಂತ ತೋರಿಸ್ಕೊಡ್ತೇವೆ. ಅವ್ರು ತಮ್ಮ ಜೊತೆ ಓಡುವವ್ರು ಸ್ಪರ್ಧಿಗಳು ಅಂತ ಯೋಚಿಸ್ತಾರೆ ಮತ್ತು ತಮಗೆ ಮಾತ್ರ ಬಹುಮಾನ ಬರಬೇಕು ಅಂತ ಅಂದುಕೊಂಡು ಓಡ್ತಾರೆ. ಸ್ಪರ್ಧೆಯಲ್ಲಿ ಗೆಲ್ಲಬೇಕಂದ್ರೆ ಏನು ಮಾಡ್ಬೇಕು ಅಂತ ಮಾತ್ರ ಯೋಚಿಸ್ತಾರೆ. ಹಾಗಾಗಿ, ಬೇರೆಯವ್ರನ್ನ ತಳ್ಳಿ ಅವ್ರು ಮುಂದಕ್ಕೆ ಹೋಗ್ಬಹುದು. ಆದ್ರೆ ನಾವು ನಮ್ಮ ಜೊತೆ ಓಡೋವ್ರನ್ನ ಸ್ಪರ್ಧಿಗಳ ತರ ನೋಡಲ್ಲ. (ಗಲಾ. 5:26; 6:4) ನಮ್ಮ ಗುರಿ ಸಾಧ್ಯವಾದಷ್ಟು ಹೆಚ್ಚು ಜನ ನಮ್ಮ ಜೊತೆ ಅಂತಿಮ ಗೆರೆಯನ್ನು ದಾಟಿ ಅನಂತ ಜೀವನ ಎಂಬ ಬಹುಮಾನ ಪಡ್ಕೋಬೇಕು ಅನ್ನೋದೇ ಆಗಿದೆ. ಹಾಗಾಗಿ, “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ” ಅಂತ ಪೌಲನು ಕೊಟ್ಟ ಸಲಹೆಯನ್ನು ನಾವು ಅನ್ವಯಿಸಲು ಪ್ರಯತ್ನಿಸುತ್ತೇವೆ.—ಫಿಲಿ. 2:4.

11. ಪಂದ್ಯದಲ್ಲಿ ಓಡುವ ಸ್ಪರ್ಧಿಯ ಗಮನವೆಲ್ಲಾ ಯಾವುದ್ರ ಮೇಲೆ ಇರುತ್ತೆ ಮತ್ತು ಯಾಕೆ?

11 ಪಂದ್ಯದಲ್ಲಿ ಓಡುವ ಸ್ಪರ್ಧಿಯು ತನ್ನ ಮುಂದಿರೋ ದಾರಿಯನ್ನು ನೋಡೋದಾದ್ರೂ ಅವನ ಗಮನವೆಲ್ಲಾ ಅಂತಿಮ ರೇಖೆ ಮೇಲೆನೇ ಇರುತ್ತೆ. ಅವನಿಗೆ ಅಂತಿಮ ರೇಖೆ ಕಾಣಿಸ್ದೇ ಇದ್ರೂ ಅದನ್ನ ದಾಟಿ ಬಹುಮಾನವನ್ನ ಪಡೆದುಕೊಳ್ತಾ ಇರೋದನ್ನ ಚಿತ್ರಿಸಿಕೊಳ್ತಾ ಇರಬಹುದು. ಹೀಗೆ ಯಾವಾಗ್ಲೂ ಬಹುಮಾನ ಪಡೆದುಕೊಳ್ಳೋದ್ರ ಬಗ್ಗೆನೇ ಯೋಚಿಸ್ತಾ ಇರೋದ್ರಿಂದ ಅವ್ನಿಗೆ ಓಡ್ತಾ ಇರೋದಕ್ಕೆ ಪ್ರೇರೇಪಣೆ ಸಿಗುತ್ತೆ.

12. ಯೆಹೋವನು ನಮಗೆ ಯಾವ ಆಶ್ವಾಸನೆ ಕೊಟ್ಟಿದ್ದಾನೆ?

12 ನಾವು ಕ್ರೈಸ್ತ ಓಟವನ್ನು ಓಡಿ ಮುಗಿಸೋದಾದ್ರೆ ಬಹುಮಾನ ಕೊಡ್ತೀನಿ ಅಂತ ಯೆಹೋವನು ಆಶ್ವಾಸನೆ ಕೊಟ್ಟಿದ್ದಾನೆ. ಆ ಬಹುಮಾನ ಏನಂದ್ರೆ ಸ್ವರ್ಗದಲ್ಲಿ ಅಥವಾ ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋದೇ ಆಗಿದೆ. ಬೈಬಲಿನಲ್ಲಿ ಈ ಬಹುಮಾನದ ಬಗ್ಗೆ ವಿವರಣೆಗಳನ್ನು ಕೊಟ್ಟಿರೋದ್ರಿಂದ ಆ ಜೀವನ ಹೇಗಿರುತ್ತೆ ಅಂತ ಈಗಲೇ ನಾವು ಚಿತ್ರಿಸಿಕೊಳ್ಳೋಕೆ ಆಗುತ್ತೆ. ಯೆಹೋವನು ಮಾತುಕೊಟ್ಟಿರೋ ಆ ಜೀವನದ ಬಗ್ಗೆ ನಾವು ಯೋಚಿಸ್ತಾ ಇರೋದಾದ್ರೆ ಏನೇ ಆದ್ರೂ ನಮ್ಮ ಕ್ರೈಸ್ತ ಓಟವನ್ನು ಮುಂದುವರಿಸ್ತೇವೆ.

ಸಮಸ್ಯೆಗಳಿದ್ರೂ ಓಡ್ತಾ ಇರಿ

ನಮಗೆ ಯಾವ್ದೇ ಸಮಸ್ಯೆಗಳಿದ್ರೂ ಜೀವದ ಓಟದಲ್ಲಿ ಓಡೋದನ್ನ ಮುಂದುವರಿಸ್ಬೇಕು (ಪ್ಯಾರ 13-20 ನೋಡಿ) *

13. ಪಂದ್ಯದಲ್ಲಿ ಓಡುವ ಓಟಗಾರರಿಗೆ ಇಲ್ಲದೇ ಇರೋ ಯಾವ ಸಹಾಯ ನಮಗಿದೆ?

13 ಗ್ರೀಕ್‌ ಪಂದ್ಯಗಳಲ್ಲಿ ಓಡುತ್ತಿದ್ದ ಓಟಗಾರರಿಗೆ ದಣಿವು, ನೋವು ಆಗ್ತಿತ್ತು. ಹಾಗಿದ್ರೂ ಓಡೋಕೆ ಅವ್ರು ತಮಗೆ ಸಿಕ್ಕಿದ್ದ ತರಬೇತಿ ಮತ್ತು ಸ್ವಂತ ಶಕ್ತಿ ಮೇಲೆ ಆತುಕೊಳ್ಳಬೇಕಿತ್ತು. ಅವ್ರ ತರ ನಮ್ಗೂ ಕ್ರೈಸ್ತ ಓಟದಲ್ಲಿ ಓಡೋಕೆ ತರಬೇತಿ ಸಿಗುತ್ತೆ. ಆದ್ರೆ ಅವ್ರಿಗೆ ಇಲ್ಲದೇ ಇರೋ ಸಹಾಯನೂ ನಮಗಿದೆ. ನಾವು ಯೆಹೋವನಿಂದ ಶಕ್ತಿ ಪಡಕೊಳ್ಳಬಹುದು. ನಮ್ಗೆ ಓಡೋಕೆ ಆತನು ಎಷ್ಟು ಬೇಕಾದ್ರೂ ಶಕ್ತಿ ಕೊಡ್ತಾನೆ. ನಾವು ಯೆಹೋವನ ಮೇಲೆ ಆತುಕೊಳ್ಳೋದಾದ್ರೆ ನಮ್ಗೆ ತರಬೇತಿ ಕೊಡೋದಷ್ಟೇ ಅಲ್ಲ ಬಲನೂ ಕೊಡ್ತೀನಿ ಅಂತ ಸ್ವತಃ ಆತನೇ ಮಾತು ಕೊಟ್ಟಿದ್ದಾನೆ!—1 ಪೇತ್ರ 5:10.

14. ನಮ್ಗೆ ಬರೋ ಸಮಸ್ಯೆಗಳನ್ನು ಜಯಿಸೋಕೆ 2 ಕೊರಿಂಥ 12:9, 10 ಹೇಗೆ ಸಹಾಯ ಮಾಡುತ್ತೆ?

14 ಪೌಲನಿಗೂ ಅನೇಕ ಸಮಸ್ಯೆಗಳು ಬಂದವು. ಜನ್ರು ಆತನಿಗೆ ಅವಮಾನ ಮಾಡಿದ್ರು, ಹಿಂಸೆ ಕೊಟ್ರು. ಅಷ್ಟೇ ಅಲ್ಲ ಕೆಲವೊಮ್ಮೆ ಸ್ವತಃ ಆತನಿಗೇ ತಾನು ಬಲಹೀನನಾಗಿದ್ದೇನೆ ಅಂತ ಅನಿಸುತ್ತಿತ್ತು. ತನ್ನ ‘ಶರೀರದಲ್ಲಿದ್ದ ಮುಳ್ಳನ್ನು’ ಸಹ ಸಹಿಸಿಕೊಳ್ಳಬೇಕಿತ್ತು. (2 ಕೊರಿಂ. 12:7) ಈ ಎಲ್ಲಾ ಸಮಸ್ಯೆಗಳಿಂದಾಗಿ ಯೆಹೋವನ ಸೇವೆ ಮಾಡೋದನ್ನು ನಿಲ್ಲಿಸಬೇಕಾಗುತ್ತೆ ಅಂತ ಆತನು ಯೋಚಿಸಲಿಲ್ಲ. ಬದಲಿಗೆ ಇದು ಯೆಹೋವನ ಮೇಲೆ ಆತುಕೊಳ್ಳೋಕೆ ತನಗೆ ಸಿಕ್ಕಿರೋ ಅವಕಾಶ ಅಂತ ನೆನಸಿದನು. (2 ಕೊರಿಂಥ 12:9, 10 ಓದಿ.) ಪೌಲನಿಗೆ ಇಂಥ ಮನೋಭಾವ ಇದ್ದಿದ್ರಿಂದ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಯೆಹೋವನು ಸಹಾಯ ಮಾಡಿದನು.

15. ನಾವು ಪೌಲನನ್ನು ಅನುಕರಿಸಿದರೆ ಏನಂತ ಯೋಚಿಸುತ್ತೇವೆ?

15 ನಮ್ಮ ನಂಬಿಕೆಯಿಂದಾಗಿ ಜನ್ರು ನಮ್ಮನ್ನು ಅವಮಾನ ಮಾಡ್ಬಹುದು, ಹಿಂಸಿಸಬಹುದು. ಅಷ್ಟೇ ಅಲ್ಲ, ನಮ್ಗೆ ಆರೋಗ್ಯ ಸಮಸ್ಯೆ ಇರಬಹುದು ಅಥವಾ ನಿಶ್ಶಕ್ತಿ ಆಗ್ಬಹುದು. ಆದ್ರೆ ನಾವು ಪೌಲನನ್ನು ಅನುಕರಿಸಿದರೆ ಈ ಎಲ್ಲಾ ಸಮಸ್ಯೆಗಳು ಯೆಹೋವನ ಬೆಂಬಲವನ್ನು ಪಡೆಯೋ ಅವಕಾಶಗಳು ಅಂತ ನೆನಸುತ್ತೇವೆ.

16. ನಿಮ್ಗೆ ಗಂಭೀರ ಕಾಯಿಲೆ ಇದ್ರೂ ಏನು ಮಾಡ್ಬಹುದು?

16 ಹಾಸಿಗೆ ಹಿಡಿಯುವಷ್ಟು ಅಥವಾ ವೀಲ್‌ಚೇರಲ್ಲೇ ಓಡಾಡುವಷ್ಟು ಕಾಯಿಲೆ ನಿಮಗೆ ಇದೆಯಾ? ನಿಮಗೆ ತುಂಬ ಮಂಡಿ ನೋವಿದ್ಯಾ ಅಥವಾ ಕಣ್ಣು ಸ್ಪಷ್ಟವಾಗಿ ಕಾಣಿಸಲ್ವಾ? ಹಾಗಿದ್ರೂ ನೀವು ಕ್ರೈಸ್ತ ಓಟದಲ್ಲಿ ಯುವಕರ ಜೊತೆ, ಆರೋಗ್ಯವಂತರ ಜೊತೆ ಓಡೋಕಾಗುತ್ತಾ? ಖಂಡಿತ ಆಗುತ್ತೆ. ಅನೇಕ ವೃದ್ಧರು, ಗಂಭೀರ ಕಾಯಿಲೆ ಇರುವವರು ಜೀವದ ಮಾರ್ಗದಲ್ಲಿ ಓಡ್ತಾ ಇದ್ದಾರೆ. ಅವ್ರು ತಮ್ಮ ಸ್ವಂತ ಶಕ್ತಿಯಿಂದ ಓಡ್ತಾ ಇಲ್ಲ, ಬದ್ಲಿಗೆ ಯೆಹೋವನಿಂದ ಶಕ್ತಿ ಪಡಕೊಂಡು ಓಡುತ್ತಿದ್ದಾರೆ. ಇದು ಅವ್ರಿಗೆ ಕೂಟಗಳಿಂದ ಸಿಗ್ತಿದೆ. ಅವ್ರು ಕೂಟಗಳಿಗೆ ಹೋಗೋಕೆ ಆಗದಿದ್ರೂ ಫೋನಿನ ಮೂಲಕ ಅದನ್ನು ಕೇಳಿಸಿಕೊಳ್ತಾರೆ ಅಥವಾ jw ಸ್ಟ್ರೀಮಿಂಗ್‌ನಲ್ಲಿ ವಿಡಿಯೋವನ್ನು ಡೌನ್‌ಲೋಡ್‌ ಮಾಡಿ ನೋಡ್ತಾರೆ. ತಮ್ಮ ವೈದ್ಯರಿಗೆ, ನರ್ಸ್‌ಗಳಿಗೆ, ಸಂಬಂಧಿಕರಿಗೆ ಸಾಕ್ಷಿ ಕೊಡೋ ಮೂಲಕ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸ್ತಾರೆ.

17. ಯಾರಿಗೆ ಆರೋಗ್ಯ ಸಮಸ್ಯೆ ಇದೆಯೋ ಅವ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?

17 ಯೆಹೋವನಿಗೋಸ್ಕರ ನೀವು ಏನೆಲ್ಲಾ ಮಾಡಬೇಕಂತ ಬಯಸ್ತೀರೋ ಅದನ್ನು ಮಾಡೋಕೆ ಆಗದಿದ್ರೆ ನಿರುತ್ತೇಜಿತರಾಗಬೇಡಿ ಅಥವಾ ‘ಈ ಲೋಕದ ಅಂತ್ಯದವರೆಗೆ ತಾಳಿಕೊಂಡು ಓಡೋಕೆ ನನ್ನಿಂದಾಗಲ್ಲ’ ಅಂತ ನೆನಸಬೇಡಿ. ಯೆಹೋವನು ನಿಮ್ಮ ನಂಬಿಕೆಯನ್ನು ಮತ್ತು ಇಲ್ಲಿಯವರೆಗೆ ಆತನಿಗೋಸ್ಕರ ನೀವು ಮಾಡಿರೋ ವಿಷ್ಯಗಳನ್ನು ನೋಡಿ ನಿಮ್ಮನ್ನು ಪ್ರೀತಿಸ್ತಾನೆ. ಹಿಂದೆಂದಿಗಿಂತಲೂ ಈಗ ನಿಮ್ಗೆ ಆತನ ಸಹಾಯ ಹೆಚ್ಚು ಬೇಕಿದೆ ಮತ್ತು ಆತನು ಅದನ್ನು ಕೊಡ್ತಾನೆ. ನಿಮ್ಮ ಕೈಬಿಡಲ್ಲ. (ಕೀರ್ತ. 9:10) ಅಷ್ಟೇ ಅಲ್ಲ, ಆತನು ಈಗ ನಿಮ್ಗೆ ಇನ್ನೂ ಹೆಚ್ಚು ಆಪ್ತನಾಗ್ತಾನೆ. ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಒಬ್ಬ ಸಹೋದರಿ ಏನು ಹೇಳ್ತಾರೆ ಅಂತ ಗಮನಿಸಿ: “ನನಗಿದ್ದ ಸಮಸ್ಯೆ ದಿನೇದಿನೇ ಹೆಚ್ಚಾಗ್ತಾ ಹೋದ ಹಾಗೆ ಬೇರೆಯವ್ರಿಗೆ ಸತ್ಯ ತಿಳ್ಸೋ ಅವಕಾಶ ಸಿಗೋದೂ ಅಪರೂಪ ಆಗಿ ಹೋಯ್ತು. ಆದ್ರೆ ನಾನು ಮಾಡೋ ಒಂದು ಚಿಕ್ಕ ಪ್ರಯತ್ನದಿಂದಲೂ ಯೆಹೋವನಿಗೆ ಸಂತೋಷ ಆಗುತ್ತೆ ಅಂತ ನನ್ಗೆ ಗೊತ್ತಿದೆ ಮತ್ತು ಇದ್ರಿಂದ ನನ್ಗೆ ಖುಷಿ ಸಿಗುತ್ತೆ.” ನಿಮ್ಗೆ ನಿರುತ್ತೇಜನ ಆದಾಗ ಯೆಹೋವನು ನಿಮ್ಮ ಜೊತೆ ಇದ್ದಾನೆ ಅನ್ನೋದನ್ನು ನೆನಪಲ್ಲಿಡಿ. ಅಪೊಸ್ತಲ ಪೌಲನ ಮಾದರಿಯನ್ನು ಮತ್ತು ಆತನು ಹೇಳಿದ ಈ ಮಾತುಗಳನ್ನು ನೆನಪಿಸಿಕೊಳ್ಳಿ: “ನಾನು . . . ಬಲಹೀನತೆಗಳಲ್ಲಿಯೂ ಸಂತೋಷಪಡುತ್ತೇನೆ. ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ.”—2 ಕೊರಿಂ. 12:10.

18. ಕೆಲವ್ರು ಯಾವ ರೀತಿಯ ಕಷ್ಟವನ್ನು ಎದುರಿಸ್ತಿದ್ದಾರೆ?

18 ಜೀವದ ಓಟದಲ್ಲಿ ಓಡುವ ಇನ್ನೂ ಕೆಲವ್ರಿಗೆ ಬೇರೆ ರೀತಿಯ ಸಮಸ್ಯೆ ಇದೆ. ಅವ್ರಿಗೆ ಇರೋ ಕಷ್ಟ ಬೇರೆಯವ್ರಿಗೆ ಕಾಣಿಸದೇ ಇರಬಹುದು ಅಥವಾ ಅರ್ಥ ಆಗ್ದೇ ಇರಬಹುದು. ಉದಾಹರಣೆಗೆ, ಅವ್ರಿಗೆ ಖಿನ್ನತೆ ಅಥವಾ ಮಾನಸಿಕ ಒತ್ತಡ, ಚಿಂತೆ ಇರಬಹುದು. ಯೆಹೋವನ ಸೇವಕರಲ್ಲಿ ಬೇರೆಲ್ರಿಗಿಂತ ಇವರಿಗೇ ಯಾಕೆ ಹೆಚ್ಚು ಕಷ್ಟ ಆಗ್ಬಹುದು? ಯಾಕಂದ್ರೆ ಒಬ್ಬ ವ್ಯಕ್ತಿಯ ಕೈ ಮುರಿದಿದ್ರೆ ಅಥವಾ ಅವ್ರು ವೀಲ್‌ಚೇರಲ್ಲೇ ಓಡಾಡ್ತಿದ್ರೆ ಅದೆಲ್ರಿಗೂ ಕಾಣಿಸುತ್ತೆ ಮತ್ತು ಅವ್ರಿಗೆ ಸಹಾಯ ಮಾಡೋಕೆ ಮುಂದೆ ಬರ್ತಾರೆ. ಆದ್ರೆ ಭಾವನಾತ್ಮಕ ಅಥವಾ ಮಾನಸಿಕ ಸಮಸ್ಯೆ ಇರುವವರನ್ನು ನೋಡ್ವಾಗ ಏನೂ ಸಮಸ್ಯೆ ಇಲ್ಲವೇನೋ ಅನ್ನೋ ತರ ಕಾಣಿಸ್ತಾರೆ. ನೆನಪಿಡಿ, ಒಬ್ಬ ವ್ಯಕ್ತಿ ಕಾಲು ಮುರುಕೊಂಡಿದ್ರೆ ಎಷ್ಟು ಕಷ್ಟ ಪಡ್ತಾನೋ ಅಷ್ಟೇ ಕಷ್ಟ ಇವ್ರಿಗೂ ಇರುತ್ತೆ. ಆದ್ರೆ ಇದು ಯಾರಿಗೆ ಕಾಣಿಸದೇ ಇರೋದ್ರಿಂದ, ಜನ್ರಿಂದ ಅವ್ರಿಗೆ ಬೇಕಾದ ಪ್ರೀತಿ-ಕಾಳಜಿ ಸಿಗಲ್ಲ.

19. ಮೆಫೀಬೋಶೆತನ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ?

19 ನಿಮ್ಗೆ ಯಾವುದಾದ್ರೂ ಸಮಸ್ಯೆ ಇದ್ದು ನಿಮ್ಮನ್ನು ಬೇರೆಯವ್ರು ತಪ್ಪಾಗಿ ಅರ್ಥ ಮಾಡಿಕೊಂಡರೆ ಮೆಫೀಬೋಶೆತನ ಉದಾಹರಣೆಯಿಂದ ನಿಮ್ಗೆ ಉತ್ತೇಜನ ಸಿಗುತ್ತೆ. (2 ಸಮು. 4:4) ಅವ್ನಿಗೆ ಬೇರೆಯವ್ರ ಸಹಾಯ ಇಲ್ಲದೇ ಎಲ್ಲಿಗೂ ಹೋಗೋಕೆ ಆಗ್ತಿರಲಿಲ್ಲ. ಆದ್ರೂ ರಾಜ ದಾವೀದ ಅವನನ್ನು ತಪ್ಪಾಗಿ ಅರ್ಥಮಾಡಿಕೊಂಡು ಅವ್ನಿಗೆ ಅನ್ಯಾಯ ಮಾಡಿದನು. ಆದ್ರೆ ಮೆಫೀಬೋಶೆತ ಯಾವುದೇ ತಪ್ಪನ್ನು ಮಾಡಿರಲಿಲ್ಲ. ಹಾಗಂತ ದಾವೀದನ ಮೇಲೆ ಕೋಪನೂ ಮಾಡ್ಕೊಳ್ಳಲಿಲ್ಲ. ತನ್ನ ಜೀವನದಲ್ಲಿರೋ ಒಳ್ಳೇ ವಿಷ್ಯಗಳ ಬಗ್ಗೆ ಯೋಚಿಸಿದನು. ದಾವೀದ ಹಿಂದೆ ತನಗೆ ಸಹಾಯ ಮಾಡಿದ್ದಕ್ಕೆ ಅವನು ಕೃತಜ್ಞನಾಗಿದ್ದನು. (2 ಸಮು. 9:6-10) ಹಾಗಾಗಿ, ದಾವೀದ ಅನ್ಯಾಯ ಮಾಡಿದಾಗ ಮೆಫೀಬೋಶೆತ ಅವನು ಯಾಕೆ ಹೀಗೆ ಮಾಡಿರಬಹುದು ಅಂತ ಅರ್ಥ ಮಾಡ್ಕೊಂಡ. ದಾವೀದ ಮಾಡಿದ ತಪ್ಪನ್ನು ಅವನು ಮನಸ್ಸಲ್ಲಿ ಇಟ್ಕೊಳ್ಳಲಿಲ್ಲ, ಯೆಹೋವನನ್ನು ದೂರಲೂ ಇಲ್ಲ. ಯೆಹೋವನ ನೇಮಿತ ಅರಸನಾದ ದಾವೀದನಿಗೆ ತಾನು ಹೇಗೆ ಬೆಂಬಲ ಕೊಡ್ಬಹುದು ಅನ್ನೋದರ ಕಡೆಗೆ ಗಮನ ಕೊಟ್ಟ. (2 ಸಮು. 16:1-4; 19:24-30) ನಮ್ಮ ಪ್ರಯೋಜನಕ್ಕಾಗಿ ಯೆಹೋವನು ಮೆಫೀಬೋಶೆತನ ಈ ಅದ್ಭುತ ಉದಾಹರಣೆಯನ್ನು ಬೈಬಲಿನಲ್ಲಿ ದಾಖಲಿಸಿಟ್ಟಿದ್ದಾನೆ.—ರೋಮ. 15:4.

20. (ಎ) ಮಾನಸಿಕ ಒತ್ತಡ ಅಥವಾ ಚಿಂತೆ ಇರೋವ್ರಿಗೆ ಹೇಗನಿಸುತ್ತೆ? (ಬಿ) ಆದ್ರೆ ಯಾವ ವಿಷ್ಯದಲ್ಲಿ ಅವ್ರು ಭರವಸೆ ಇಡಬಹುದು?

20 ತೀವ್ರವಾದ ಮಾನಸಿಕ ಒತ್ತಡ ಮತ್ತು ಚಿಂತೆಯಂಥ ಸಮಸ್ಯೆಯಿಂದಾಗಿ ಅನೇಕ ಸಹೋದರ ಸಹೋದರಿಯರಿಗೆ ಜನ್ರ ಜೊತೆ ಬೆರೆಯೋಕೆ ಗಾಬರಿ ಆಗುತ್ತೆ ಮತ್ತು ಎಲ್ರೂ ತಮ್ಮನ್ನೇ ನೋಡ್ತಿದ್ದಾರೇನೋ ಅಂತ ಅನಿಸುತ್ತೆ. ಅವ್ರಿಗೆ ತುಂಬ ಜನ ಸೇರಿರೋ ಕಡೆ ಹೋಗೋಕೆ ಕಷ್ಟವಾದ್ರೂ ಸಭಾ ಕೂಟಗಳಿಗೆ, ಸಮ್ಮೇಳನಗಳಿಗೆ, ಅಧಿವೇಶನಗಳಿಗೆ ಹಾಜರಾಗ್ತಾರೆ. ಅಪರಿಚಿತರ ಹತ್ರ ಮಾತಾಡೋಕೆ ಕಷ್ಟ ಆಗೋದಾದ್ರೂ ಸೇವೆಗೆ ಹೋಗಿ ಜನ್ರ ಹತ್ರ ಮಾತಾಡ್ತಾರೆ. ನಿಮ್ಗೆ ಈ ರೀತಿ ಆಗ್ತಿರೋದಾದ್ರೆ ನೀವೊಬ್ಬರೇ ಈ ತರ ಕಷ್ಟಪಡ್ತಿಲ್ಲ, ಅನೇಕ ಜನ್ರಿಗೆ ಈ ಸಮಸ್ಯೆ ಇದೆ ಅನ್ನೋದನ್ನು ನೆನಪಲ್ಲಿಡಿ. ನೀವು ಪೂರ್ಣ ಪ್ರಾಣದಿಂದ ಹಾಕೋ ಪ್ರಯತ್ನಗಳನ್ನು ಯೆಹೋವನು ಮೆಚ್ಚುತ್ತಾನೆ ಅನ್ನೋದನ್ನು ಮರೆಯಬೇಡಿ. ನೀವು ಪ್ರಯತ್ನವನ್ನ ಬಿಡದೇ ಇರೋದು ತಾನೇ ಯೆಹೋವನು ನಿಮ್ಮನ್ನು ಆಶೀರ್ವದಿಸುತ್ತಿದ್ದಾನೆ ಮತ್ತು ನಿಮ್ಗೆ ಬೇಕಾದಂಥ ಬಲ ಕೊಡ್ತಿದ್ದಾನೆ ಅನ್ನೋದಕ್ಕೆ ಆಧಾರವಾಗಿದೆ. * (ಫಿಲಿ. 4:6, 7; 1 ಪೇತ್ರ 5:7) ಅನಾರೋಗ್ಯ ಅಥವಾ ಮಾನಸಿಕ ಸಮಸ್ಯೆ ಇದ್ರೂ ಯೆಹೋವನ ಸೇವೆ ಮಾಡ್ತಿರೋದಾದ್ರೆ ಆತನು ನಿಮ್ಮನ್ನು ಇಷ್ಟಪಡ್ತಾನೆ ಅನ್ನೋ ಭರವಸೆ ನಿಮಗಿರಲಿ.

21. ಯೆಹೋವನ ಸಹಾಯದಿಂದ ನಾವೆಲ್ರೂ ಏನನ್ನು ಸಾಧಿಸ್ಬಹುದು?

21 ಪಂದ್ಯದಲ್ಲಿ ಓಡೋದಕ್ಕೂ ಪೌಲನು ಹೇಳಿದ ಕ್ರೈಸ್ತ ಓಟಕ್ಕೂ ಅನೇಕ ವ್ಯತ್ಯಾಸಗಳೂ ಇವೆ. ಬೈಬಲ್‌ ಸಮ್ಯದಲ್ಲಿ ಪಂದ್ಯದಲ್ಲಿ ಓಡುವವ್ರಲ್ಲಿ ಒಬ್ರಿಗೆ ಮಾತ್ರ ಬಹುಮಾನ ಸಿಗ್ತಿತ್ತು. ಆದ್ರೆ ಕ್ರೈಸ್ತ ಓಟದಲ್ಲಿ ಕೊನೆವರೆಗೆ ನಂಬಿಗಸ್ತಿಕೆಯಿಂದ ತಾಳಿಕೊಂಡು ಓಡುವ ಎಲ್ರಿಗೂ ಶಾಶ್ವತ ಜೀವನ ಎಂಬ ಬಹುಮಾನ ಸಿಗುತ್ತೆ. (ಯೋಹಾ. 3:16) ಪಂದ್ಯದ ಓಟದಲ್ಲಿ ಓಡುವವ್ರಿಗೆ ಒಳ್ಳೇ ಆರೋಗ್ಯ ಇರಬೇಕು. ಇಲ್ಲಾಂದ್ರೆ ಅವ್ರು ಗೆಲ್ಲೋ ಸಾಧ್ಯತೆ ಕಡಿಮೆ. ಆದ್ರೆ ಕ್ರೈಸ್ತ ಓಟದಲ್ಲಿ ಆರೋಗ್ಯ ಸಮಸ್ಯೆ ಇರೋವ್ರು ಸಹ ಓಡುತ್ತಿದ್ದಾರೆ. (2 ಕೊರಿಂ. 4:16) ಯೆಹೋವನ ಸಹಾಯದಿಂದ ನಾವೆಲ್ರೂ ಈ ಓಟವನ್ನು ಖಂಡಿತ ಮುಗಿಸ್ತೇವೆ!

ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

^ ಪ್ಯಾರ. 5 ಯೆಹೋವನ ಸೇವಕರಲ್ಲಿ ಅನೇಕರಿಗೆ ತುಂಬ ವಯಸ್ಸಾಗಿದೆ, ಇನ್ನು ಕೆಲವ್ರು ಕಾಯಿಲೆಗಳಿಂದ ಬಳಲ್ತಿದ್ದಾರೆ ಮತ್ತು ನಾವೆಲ್ರೂ ಒಂದಲ್ಲ ಒಂದು ಸಮಯದಲ್ಲಿ ದಣಿದು ಹೋಗ್ತೇವೆ. ಹಾಗಾಗಿ, ಓಟದ ಸ್ಪರ್ಧೆಯಲ್ಲಿ ಓಡೋದಂದ್ರೆ ಕಷ್ಟ ಅಂತ ನಮಗನಿಸ್ಬಹುದು. ಆದ್ರೆ ಪೌಲನು ಹೇಳಿದ ಜೀವದ ಓಟದಲ್ಲಿ ತಾಳಿಕೊಂಡು ಓಡಿ ಬಹುಮಾನವನ್ನ ಪಡೆಯೋದು ಹೇಗೆ ಅಂತ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 6 ಜನವರಿ 1, 2013 ರ ಕಾವಲಿನಬುರುಜುವಿನಲ್ಲಿ ಬಂದ “ಬದುಕನ್ನೇ ಬದಲಾಯಿಸಿತು ಬೈಬಲ್‌” ಎಂಬ ಲೇಖನ ನೋಡಿ.

^ ಪ್ಯಾರ. 20 ಮಾನಸಿಕ ಒತ್ತಡ ಅಥವಾ ಚಿಂತೆಯಂಥ ಸಮಸ್ಯೆಯನ್ನು ಹೇಗೆ ಜಯಿಸಬಹುದು ಅನ್ನೋದಕ್ಕಿರುವ ಹೆಚ್ಚಿನ ಸಲಹೆಗಳಿಗಾಗಿ ಮತ್ತು ಇಂಥ ಸಮಸ್ಯೆಗಳಿಂದ ಬಳಲುತ್ತಿರುವವರು ಅದ್ರಿಂದ ಹೇಗೆ ಹೊರಬಂದ್ರು ಅಂತ ತಿಳಿಸೋ ಅನುಭವಗಳಿಗಾಗಿ jw.orgನಲ್ಲಿ ಸಿಗುವ 2019 ರ ಮೇ ತಿಂಗಳ ಕಾರ್ಯಕ್ರಮ ನೋಡಿ. ಇದಕ್ಕಾಗಿ ಲೈಬ್ರರಿ > jw ಪ್ರಸಾರ ನೋಡಿ.

^ ಪ್ಯಾರ. 63 ಚಿತ್ರ ವಿವರಣೆ: ಸೇವೆಯಲ್ಲೇ ಹೆಚ್ಚು ಸಮ್ಯ ಕಳೆಯುತ್ತಿರೋದ್ರಿಂದ ಒಬ್ಬ ವೃದ್ಧ ಸಹೋದರನಿಗೆ ಸರಿಯಾದ ಪಥದಲ್ಲೇ ಓಡ್ಲಿಕ್ಕೆ ಸಾಧ್ಯ ಆಗ್ತಿದೆ.

^ ಪ್ಯಾರ. 65 ಚಿತ್ರ ವಿವರಣೆ: ಇನ್ನೂ ಸ್ವಲ್ಪ ಮದ್ಯ ಕುಡಿಯಿರಿ ಅಂತ ಬೇರೆಯವ್ರಿಗೆ ಒತ್ತಾಯಿಸೋ ಮೂಲಕ ಅಥವಾ ನಾವೇ ಅತಿಯಾಗಿ ಕುಡಿಯೋ ಮೂಲಕ ಇತರರನ್ನು ಎಡವಿಸಬಹುದು.

^ ಪ್ಯಾರ. 67 ಚಿತ್ರ ವಿವರಣೆ: ಒಬ್ಬ ಸಹೋದರ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ರೂ ಡಾಕ್ಟರ್‌ಗೆ ಸಾಕ್ಷಿಕೊಡೋ ಮೂಲಕ ಕ್ರೈಸ್ತ ಓಟದಲ್ಲಿ ಓಡ್ತಿದ್ದಾರೆ.