ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸು ಯಾವಾಗ ಮಹಾ ಯಾಜಕನಾದ್ನು ಮತ್ತು ಹೊಸ ಒಪ್ಪಂದ ಯಾವಾಗ ಜಾರಿಗೆ ಬಂತು?

ಕ್ರಿಸ್ತ ಶಕ 29 ರಲ್ಲಿ ಯೇಸುಗೆ ದೀಕ್ಷಾಸ್ನಾನ ಆದಾಗ ಆತನು ಮಹಾಯಾಜಕನಾದ್ನು. ಅದಕ್ಕೆ ಏನು ಆಧಾರ ಇದೆ? ಯೇಸು ದೀಕ್ಷಾಸ್ನಾನ ತಗೊಂಡಾಗ ದೇವರ ‘ಚಿತ್ತವನ್ನು’ (ಇಷ್ಟವನ್ನು) ಸೂಚಿಸ್ತಿದ್ದ ಸಾಂಕೇತಿಕ ಯಜ್ಞವೇದಿಯ ಮೇಲೆ ತನ್ನ ಜೀವ ಸಮರ್ಪಿಸೋಕೆ ಸಿದ್ಧನಿದ್ದೇನೆ ಅಂತ ತೋರಿಸಿಕೊಟ್ಟ. (ಗಲಾ. 1:4; ಇಬ್ರಿ. 10:5-10) ಯೇಸುವಿನ ದೀಕ್ಷಾಸ್ನಾನ ಆದ ನಂತ್ರ ಸಾಂಕೇತಿಕ ಯಜ್ಞವೇದಿ ಅಸ್ತಿತ್ವಕ್ಕೆ ಬಂತು ಅಂದಮೇಲೆ ಆ ಸಮ್ಯದಲ್ಲೇ ಮಹಾ ಆಧ್ಯಾತ್ಮಿಕ ಆಲಯ ಕೂಡ ಅಸ್ತಿತ್ವಕ್ಕೆ ಬಂತು ಅಂತ ಅರ್ಥ. ಯೇಸುವಿನ ವಿಮೋಚನಾ ಮೌಲ್ಯದ ಆಧಾರದ ಮೇಲೆ ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧಿಸುವ ಏರ್ಪಾಡೇ ಮಹಾ ಆಧ್ಯಾತ್ಮಿಕ ಆಲಯ ಆಗಿದೆ. ಈ ಆಧ್ಯಾತ್ಮಿಕ ಆಲಯದಲ್ಲಿ ಯಜ್ಞವೇದಿ ಒಂದು ಪ್ರಾಮುಖ್ಯ ವೈಶಿಷ್ಟ್ಯವಾಗಿದೆ.—ಮತ್ತಾ. 3:16, 17; ಇಬ್ರಿ. 5:4-6.

ಈ ಮಹಾ ಆಧ್ಯಾತ್ಮಿಕ ಆಲಯಕ್ಕೆ ಒಬ್ಬ ಮಹಾ ಯಾಜಕ ಇರಬೇಕಿತ್ತು. ಅದನ್ನು ಪೂರೈಸಲು ಯೆಹೋವನು ಯೇಸು ಕ್ರಿಸ್ತನನ್ನು “ಪವಿತ್ರಾತ್ಮದಿಂದಲೂ ಶಕ್ತಿಯಿಂದಲೂ” ಮಹಾ ಯಾಜಕನಾಗಿ ಅಭಿಷೇಕಿಸಿದ್ನು. (ಅ. ಕಾ. 10:37, 38; ಮಾರ್ಕ 1:9-11) ಆದ್ರೆ ಯೇಸು ಮರಣ ಹೊಂದಿ ಪುನರುತ್ಥಾನ ಆಗೋ ಮುಂಚೆನೇ ಆತನನ್ನು ಮಹಾ ಯಾಜಕನಾಗಿ ಅಭಿಷೇಕಿಸಲಾಗಿತ್ತು ಅಂತ ಅಷ್ಟು ಖಚಿತವಾಗಿ ಹೇಗೆ ಹೇಳ್ಬಹುದು? ಈ ಪ್ರಶ್ನೆಗೆ ಉತ್ತರವನ್ನ ಆರೋನ ಮತ್ತು ಅವನ ನಂತ್ರ ಬಂದ ಮಹಾ ಯಾಜಕರ ಉದಾಹರಣೆಯಿಂದ ತಿಳ್ಕೋಬಹುದು.

ಯೆಹೋವನು ಮೋಶೆಗೆ ಕೊಟ್ಟ ನಿಯಮದ ಪ್ರಕಾರ, ದೇವದರ್ಶನ ಗುಡಾರದಲ್ಲಿದ್ದ ಮತ್ತು ನಂತರ ದೇವಾಲಯದಲ್ಲಿದ್ದ ಅತಿ ಪವಿತ್ರ ಸ್ಥಳಕ್ಕೆ ಮಹಾ ಯಾಜಕ ಮಾತ್ರ ಹೋಗ್ಬೇಕಿತ್ತು. ಈ ಅತಿ ಪವಿತ್ರ ಸ್ಥಳದ ಮತ್ತು ಪವಿತ್ರ ಸ್ಥಳದ ಮಧ್ಯೆ ಒಂದು ತೆರೆ ಇತ್ತು. ದೋಷಪರಿಹಾರಕ ದಿನದಲ್ಲಿ ಮಾತ್ರ ಮಹಾ ಯಾಜಕನು ಆ ತೆರೆಯನ್ನು ದಾಟಿ ಅತಿ ಪವಿತ್ರ ಸ್ಥಳಕ್ಕೆ ಪ್ರವೇಶಿಸಬಹುದಿತ್ತು. (ಇಬ್ರಿ. 9:1-3, 6, 7) ಆರೋನ ಮತ್ತು ಅವನ ನಂತ್ರ ಇದ್ದ ಮಹಾ ಯಾಜಕರು “ತೆರೆಯ ಮೂಲಕ” ಅತಿ ಪವಿತ್ರ ಸ್ಥಳಕ್ಕೆ ಹೋಗೋ ಮುಂಚೆನೇ ಅವ್ರನ್ನು ಮಹಾ ಯಾಜಕರಾಗಿ ಅಭಿಷೇಕಿಸಲಾಗಿತ್ತು. ಹಾಗಂದ ಮೇಲೆ, ಯೇಸುವನ್ನ ಸಹ ಆತನ ಮರಣದ ಮುಂಚೆನೇ ಯೆಹೋವನ ಮಹಾ ಆಧ್ಯಾತ್ಮಿಕ ಆಲಯದ ಮಹಾ ಯಾಜಕನಾಗಿ ನೇಮಿಸಲಾಗಿರುತ್ತೆ. ಇದಾದ ನಂತ್ರ ಯೇಸು “ತನ್ನ ಶರೀರವೆಂಬ ತೆರೆಯ ಮೂಲಕ” ಸ್ವರ್ಗಕ್ಕೆ ಹೋದನು. (ಇಬ್ರಿ. 10:20) ಈ ಕಾರಣದಿಂದಲೇ ಅಪೊಸ್ತಲ ಪೌಲನು ಯೇಸುವನ್ನು ಸೂಚಿಸುತ್ತಾ ‘ಆತನು ಮಹಾ ಯಾಜಕನಾಗಿ ಬಂದನು’ ಮತ್ತು ನಂತರ “ಸ್ವರ್ಗವನ್ನೇ ಪ್ರವೇಶಿಸಿದನು” ಅಂತ ತಿಳಿಸಿದ್ದಾನೆ.—ಇಬ್ರಿ. 9:11, 24.

ಹೊಸ ಒಪ್ಪಂದ ಯಾವಾಗ ಜಾರಿಯಾಯ್ತು? ಯೇಸು ಸ್ವರ್ಗಕ್ಕೆ ಹೋಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ನಮಗೋಸ್ಕರ ಯೆಹೋವನಿಗೆ ಅರ್ಪಿಸಿದಾಗ ಹೊಸ ಒಪ್ಪಂದ ಜಾರಿಯಾಗಲು ಮೂರು ಮುಖ್ಯ ವಿಷ್ಯಗಳು ನಡೆದವು.

ಮೊದಲ್ನೇದಾಗಿ ಯೇಸು ಯೆಹೋವನ ಸನ್ನಿಧಿಗೆ ಪ್ರವೇಶಿಸಿದನು. ಎರಡನೇದಾಗಿ ಯೇಸು ತನ್ನ ಯಜ್ಞದ ಮೌಲ್ಯವನ್ನು ಯೆಹೋವನಿಗೆ ಅರ್ಪಿಸಿದನು. ಮತ್ತು ಮೂರನೇದಾಗಿ ಯೇಸು ಸುರಿಸಿದ ರಕ್ತದ ಮೌಲ್ಯವನ್ನು ಯೆಹೋವನು ಸ್ವೀಕರಿಸಿದನು. ಈ ಮೂರು ವಿಷ್ಯಗಳು ನಡೆದ ನಂತರನೇ ಹೊಸ ಒಪ್ಪಂದ ಜಾರಿಯಾಯ್ತು.

ಯೆಹೋವ ದೇವ್ರು ಯೇಸುವಿನ ಯಜ್ಞದ ಮೌಲ್ಯವನ್ನು ಯಾವಾಗ ಸ್ವೀಕರಿಸಿದ್ನು ಅಂತ ಬೈಬಲ್‌ ನಿಖರವಾಗಿ ಹೇಳಲ್ಲ. ಹಾಗಾಗಿ ಹೊಸ ಒಪ್ಪಂದ ಯಾವಾಗ ಜಾರಿಯಾಯ್ತು ಅಂತ ಸ್ಪಷ್ಟವಾಗಿ ಹೇಳೋಕೆ ಆಗಲ್ಲ. ಆದ್ರೆ ಪಂಚಾಶತ್ತಮ ಹಬ್ಬದ ಹತ್ತು ದಿನದ ಮುಂಚೆ ಯೇಸು ಸ್ವರ್ಗಕ್ಕೆ ಏರಿ ಹೋದ್ನು ಅಂತ ನಮ್ಗೆ ಗೊತ್ತು. (ಅ. ಕಾ. 1:3) ಆ ಹತ್ತು ದಿನದ ಯಾವ್ದೋ ಒಂದು ಸಮಯದಲ್ಲಿ ಯೇಸು ತನ್ನ ಯಜ್ಞದ ಮೌಲ್ಯವನ್ನು ಯೆಹೋವನಿಗೆ ಅರ್ಪಿಸಿರುತ್ತಾನೆ ಮತ್ತು ಯೆಹೋವ ಅದನ್ನು ಸ್ವೀಕರಿಸಿರ್ತಾನೆ. (ಇಬ್ರಿ. 9:12) ಆಗ ಹೊಸ ಒಪ್ಪಂದ ಜಾರಿ ಆಯ್ತು ಅನ್ನೋದಕ್ಕೆ ನಮಗಿರೋ ಕಣ್ಣಿಗೆ ಕಟ್ಟುವಂಥ ಆಧಾರ ಕ್ರಿಸ್ತ ಶಕ 33ರ ಪಂಚಾಶತ್ತಮ ದಿನದಲ್ಲಿ ನಡೆದ ಘಟನೆಯೇ ಆಗಿದೆ. (ಅ. ಕಾ. 2:1-4, 32, 33) ಹಾಗಾದ್ರೆ ಆ ಸಮಯದಷ್ಟರೊಳಗೆ ಹೊಸ ಒಪ್ಪಂದ ಜಾರಿಯಾಗಿರುತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.

ಚುಟುಕಾಗಿ ಹೇಳೋದಾದ್ರೆ ಯೇಸು ಸುರಿಸಿದ ರಕ್ತದ ಮೌಲ್ಯವನ್ನು ಯೆಹೋವನು ಸ್ವೀಕರಿಸಿದ ಮೇಲೆ ಹೊಸ ಒಪ್ಪಂದ ಜಾರಿಯಾಯ್ತು ಮತ್ತು ಅಭಿಷಿಕ್ತರನ್ನು ಈ ಒಪ್ಪಂದಕ್ಕೆ ಸೇರಿಸಲಾಯ್ತು. ಈ ಒಪ್ಪಂದಕ್ಕೆ ಮಹಾ ಯಾಜಕನಾದ ಯೇಸು ಮಧ್ಯಸ್ಥನಾಗಿದ್ದಾನೆ.—ಇಬ್ರಿ. 7:25; 8:1-3, 6; 9:13-15.