ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ದೇವರ ಸಂಘಟನೆಯಿಂದ ನಿರ್ದೇಶನಗಳು ಬಂದಾಗ ಸಂಚರಣ ಮೇಲ್ವಿಚಾರಕರು, ಸಭಾ ಹಿರಿಯರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಬೇರೆ ಸಹೋದರರು ಏನು ಮಾಡಬೇಕು?

ಅದನ್ನು ಅವರು ಕೂಡಲೇ ಪಾಲಿಸಬೇಕು. ಅವರು ತಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ಯೆಹೋವನಿಗೆ ನಿಷ್ಠೆ ತೋರಿಸುವಂತೆ ನಾನು ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸುತ್ತೇನಾ? ದೇವರ ಸಂಘಟನೆ ನೀಡುವ ನಿರ್ದೇಶನಗಳನ್ನು ಕೂಡಲೇ ಪಾಲಿಸುತ್ತೇನಾ?’—w16.11, ಪು. 11.

ಸತ್ಯ ಕ್ರೈಸ್ತರು ಬಾಬೆಲಿನ ಬಂದಿವಾಸಕ್ಕೆ ಹೋದದ್ದು ಯಾವಾಗ?

ಅಪೊಸ್ತಲರು ತೀರಿಹೋದ ಮೇಲೆ ಸತ್ಯ ಕ್ರೈಸ್ತರು ಬಾಬೆಲಿನ ಬಂದಿವಾಸಕ್ಕೆ ಹೋದರು. ಆ ಸಮಯದಲ್ಲಿ ಕ್ರೈಸ್ತ ಪಾದ್ರಿವರ್ಗ ರೂಪುಗೊಂಡಿತು. ಚರ್ಚ್‌ ಮತ್ತು ರೋಮ್‌ ಸರ್ಕಾರ ಧರ್ಮಭ್ರಷ್ಟ ಕ್ರೈಸ್ತತ್ವವನ್ನು ಹಬ್ಬಿಸಿದವು ಮತ್ತು ಗೋದಿಯಂತೆ ಇದ್ದ ಕ್ರೈಸ್ತರ ಸದ್ದಡಗಿಸಲು ಪ್ರಯತ್ನಿಸಿದವು. 1914ರ ಮುಂಚಿನ ದಶಕಗಳಲ್ಲೇ ಅಭಿಷಿಕ್ತರು ಬಾಬೆಲಿನ ಬಂದಿವಾಸದಿಂದ ಹೊರಗೆ ಬರಲು ಆರಂಭಿಸಿದ್ದರು.—w16.11, ಪು. 23-25.

“ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು” ಮತ್ತು “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು” ಇವೆರಡರ ಮಧ್ಯೆ ವ್ಯತ್ಯಾಸವೇನು? (ರೋಮ. 8:6)

ಮೊದಲನೇ ರೀತಿಯ ವ್ಯಕ್ತಿ, ತನ್ನ ಪಾಪಭರಿತ ಆಸೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಮುಳುಗಿರುತ್ತಾನೆ, ತನಗೆ ಇಷ್ಟಬಂದಂತೆ ನಡೆಯುತ್ತಾನೆ, ಮೂರು ಹೊತ್ತು ತನ್ನ ಆಸೆ ಆಕಾಂಕ್ಷೆಗಳ ಬಗ್ಗೆನೇ ಯೋಚಿಸುತ್ತಾ ಇರುತ್ತಾನೆ, ಅದರ ಬಗ್ಗೆನೇ ಮಾತಾಡುತ್ತಾ ಇರುತ್ತಾನೆ. ಎರಡನೇ ರೀತಿಯ ವ್ಯಕ್ತಿಗೆ ದೇವರ ವಿಷಯಗಳು ಮತ್ತು ಯೋಚನೆಗಳು ಜೀವನದಲ್ಲಿ ಮುಖ್ಯವಾಗಿರುತ್ತವೆ. ಪವಿತ್ರಾತ್ಮ ಅವನನ್ನು ಮಾರ್ಗದರ್ಶಿಸುತ್ತದೆ. ಮೊದಲ ಮಾರ್ಗಕ್ರಮ ಮರಣಕ್ಕೆ ನಡೆಸುತ್ತದೆ. ಎರಡನೇದು ಜೀವ ಹಾಗೂ ಶಾಂತಿಗೆ ನಡೆಸುತ್ತದೆ.—w16.12, ಪು. 15-17.

ಚಿಂತೆ ಕಡಿಮೆಮಾಡಲು ಕೆಲವು ಪ್ರಾಯೋಗಿಕ ಹೆಜ್ಜೆಗಳೇನು?

ಪ್ರಾಮುಖ್ಯವಾದ ವಿಷಯಗಳಿಗೆ ಮೊದಲ ಸ್ಥಾನ ಕೊಡಿ, ನಿಮ್ಮಿಂದ ಎಷ್ಟಾಗುತ್ತೊ ಅಷ್ಟನ್ನು ಮಾಡಿ, ನಿಮಗೋಸ್ಕರ ಅಂತ ಸ್ವಲ್ಪ ಸಮಯ ಮಾಡಿಕೊಳ್ಳಿ, ಸೃಷ್ಟಿಯನ್ನು ನೋಡಿ ಆನಂದಿಸಿ, ನಗು ನಗುತ್ತಾ ಇರಿ, ವ್ಯಾಯಾಮ ಮಾಡಿ, ಸಾಕಷ್ಟು ನಿದ್ದೆ ಮಾಡಿ.—w16.12, ಪು. 22-23.

“ಹನೋಕನು ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು.” (ಇಬ್ರಿ. 11:5) ಹೇಗೆ?

ಹನೋಕನಿಗೆ ಅವನು ಸಾಯುತ್ತಿದ್ದಾನೆ ಎಂದು ತಿಳಿಯದ ಹಾಗೆ ಸಾವನ್ನಪ್ಪುವಂತೆ ದೇವರು ಮಾಡಿರಬೇಕೆಂದು ತೋರುತ್ತದೆ.—wp17.1, ಪು. 12-13.

ವಿನಯಶೀಲತೆ ಯಾಕೆ ಈಗಲೂ ಪ್ರಾಮುಖ್ಯ?

ವಿನಯಶೀಲತೆ ಇರುವ ವ್ಯಕ್ತಿಗೆ ತನ್ನ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ತನ್ನಿಂದ ಏನು ಮಾಡಕ್ಕಾಗಲ್ಲ ಅಥವಾ ಏನು ಮಾಡಬಾರದು ಎಂದು ಅವನಿಗೆ ಗೊತ್ತಿರುತ್ತದೆ. ಬೇರೆಯವರಿಗೆ ಗೌರವ, ಪ್ರೀತಿ ತೋರಿಸಲು ಸಾಧ್ಯವಾಗುತ್ತದೆ. ಬೇರೆಯವರಿಗಿಂತ ತಾನು ಶ್ರೇಷ್ಠ ಎಂಬ ಭಾವನೆ ಬರದಂತೆ ನೋಡಿಕೊಳ್ಳಲಿಕ್ಕಾಗುತ್ತದೆ.—w17.01, ಪು. 18.

ದೇವರು ಇಂದು ಆಡಳಿತ ಮಂಡಲಿಯನ್ನು ನಡೆಸುತ್ತಿರುವಂತೆ ಒಂದನೇ ಶತಮಾನದಲ್ಲೂ ಮಾಡಿದನು ಎನ್ನಲು ಯಾವ ಆಧಾರ ಇದೆ?

ಒಂದನೇ ಶತಮಾನದ ಆಡಳಿತ ಮಂಡಲಿಯ ಸದಸ್ಯರು ಪವಿತ್ರಾತ್ಮದ ಸಹಾಯದಿಂದ ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಂಡರು. ದೇವದೂತರ ಸಹಾಯದೊಂದಿಗೆ ಸಾರುವ ಕೆಲಸವನ್ನು ನಿರ್ದೇಶಿಸಿದರು. ಸಭೆಗಳಿಗೆ ದೇವರ ವಾಕ್ಯದ ಆಧಾರದ ಮೇಲೆ ನಿರ್ದೇಶನಗಳನ್ನು ಕೊಟ್ಟರು. ಇದೆಲ್ಲವೂ ನಮ್ಮ ದಿನದ ಆಡಳಿತ ಮಂಡಲಿಯ ವಿಷಯದಲ್ಲೂ ಸತ್ಯ.—w17.02, ಪು. 26-28.

ಕ್ರೈಸ್ತನೊಬ್ಬನು ಈಗಾಗಲೇ ಮಾಡಿರುವ ನಿರ್ಣಯವನ್ನು ಬದಲಾಯಿಸಬಹುದಾ?

ನಾವು ಕೊಟ್ಟ ಮಾತನ್ನು ಪಾಲಿಸಬೇಕು. ಆದರೆ ಕೆಲವೊಮ್ಮೆ ನಾವು ಮಾಡಿದ ಒಂದು ನಿರ್ಣಯದ ಬಗ್ಗೆ ಮತ್ತೆ ಯೋಚಿಸಿ, ಬದಲಾಯಿಸಬೇಕಾಗಿ ಬರುತ್ತದೆ. ನಿನೆವೆಯ ಜನರು ಪಶ್ಚಾತ್ತಾಪಪಟ್ಟ ನಂತರ ದೇವರು ತನ್ನ ನಿರ್ಧಾರ ಬದಲಾಯಿಸಿದನು. ಒಮ್ಮೊಮ್ಮೆ ಪರಿಸ್ಥಿತಿ ಬದಲಾಗಿರುವುದರಿಂದಲೊ ಸಿಕ್ಕಿರುವ ಹೊಸ ಮಾಹಿತಿಯಿಂದಾಗಿಯೊ ನಾವೂ ಹಾಗೆ ಮಾಡಬೇಕಾಗಬಹುದು.—w17.03, ಪು. 16-17.

ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದು ಯಾಕೆ ಅಪಾಯಕಾರಿ?

ಅದು ಉರಿಯುವ ಬೆಂಕಿಗೆ ಸೀಮೆಎಣ್ಣೆ ಸುರಿದಂತೆ ಆಗುತ್ತದೆ. ನಾವಂದುಕೊಂಡಂತೆ ಅನ್ಯಾಯವಾಗಿರಲಿ ಇಲ್ಲದಿರಲಿ, ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದರಿಂದ ಏನೂ ಒಳ್ಳೇದಾಗುವುದಿಲ್ಲ.—w17.04, ಪು. 21.