ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯಾರ ತರ ಯೋಚನೆ ಮಾಡುತ್ತೀರಾ?

ನೀವು ಯಾರ ತರ ಯೋಚನೆ ಮಾಡುತ್ತೀರಾ?

‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪುಗೊಳ್ಳುವುದನ್ನು ಬಿಟ್ಟುಬಿಡಿ.’ —ರೋಮ. 12:2.

ಗೀತೆಗಳು: 69, 57

1, 2. (ಎ) “ನಿನಗೆ ದಯೆತೋರಿಸಿಕೋ” ಎಂದು ಪೇತ್ರನು ಹೇಳಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಯೇಸು ಯಾಕೆ ಹಾಗೆ ಪ್ರತಿಕ್ರಿಯಿಸಿದನು?

ಯೇಸು ಇಸ್ರಾಯೇಲಿನಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸುವನು ಎಂದು ಆತನ ಶಿಷ್ಯರು ಅಂದುಕೊಂಡಿದ್ದರು. ಆದರೆ ಯೇಸು ತಾನು ಕಷ್ಟಪಟ್ಟು ಸಾಯಲಿದ್ದೇನೆ ಎಂದು ಹೇಳಿದಾಗ ಶಿಷ್ಯರಿಗೆ ನಿಂತ ನೆಲ ಕುಸಿದಂತೆ ಆಯಿತು. ಪೇತ್ರನು ಯೇಸುವಿಗೆ, “ಕರ್ತನೇ, ನಿನಗೆ ದಯೆತೋರಿಸಿಕೋ; ನಿನಗೆ ಈ ಗತಿ ಎಂದಿಗೂ ಆಗದು” ಎಂದನು. ಅದಕ್ಕೆ ಯೇಸು, “ಸೈತಾನನೇ, ನನ್ನಿಂದ ತೊಲಗಿಹೋಗು. ನೀನು ನನಗೆ ಎಡವುಗಲ್ಲಾಗಿದ್ದೀ, ಏಕೆಂದರೆ ನೀನು ಆಲೋಚಿಸುವುದು ಮನುಷ್ಯರ ಆಲೋಚನೆಗಳೇ ಹೊರತು ದೇವರದಲ್ಲ” ಎಂದು ಗದರಿಸಿದನು.—ಮತ್ತಾ. 16:21-23; ಅ. ಕಾ. 1:6.

2 ಅದನ್ನು ಹೇಳುವ ಮೂಲಕ ಯೆಹೋವನ ಯೋಚನೆಗೂ ಸೈತಾನನ ನಿಯಂತ್ರಣದಲ್ಲಿರುವ ಲೋಕದ ಯೋಚನೆಗೂ ವ್ಯತ್ಯಾಸ ಇದೆ ಎಂದು ಯೇಸು ತೋರಿಸಿದನು. (1 ಯೋಹಾ. 5:19) ಲೋಕದಲ್ಲಿರುವ ಹೆಚ್ಚಿನ ಜನರಂತೆ ಯೇಸು ಕೂಡ ತನ್ನ ಬಗ್ಗೆ ಯೋಚಿಸುವಂತೆ ಪೇತ್ರನು ಹೇಳಿದನು. ಆದರೆ ಯೇಸು ತುಂಬ ಬೇಗ ಕಷ್ಟ ಮತ್ತು ಮರಣವನ್ನು ಎದುರಿಸಲಿದ್ದನು. ಆತನು ಇದಕ್ಕಾಗಿ ತಯಾರಾಗಬೇಕೆಂದು ಯೆಹೋವನು ಬಯಸಿದನು. ಇದು ಯೇಸುವಿಗೆ ಗೊತ್ತಿತ್ತು. ತಾನು ಯೆಹೋವನ ತರ ಯೋಚನೆ ಮಾಡುತ್ತೇನೆ ಹೊರತು ಲೋಕದ ತರ ಅಲ್ಲ ಎಂದು ಯೇಸು ಸ್ಪಷ್ಟವಾಗಿ ತೋರಿಸಿಕೊಟ್ಟನು.

3. ಯೆಹೋವನ ತರ ಯೋಚನೆ ಮಾಡುವುದು ಯಾಕೆ ಕಷ್ಟ?

3 ನಮ್ಮ ಬಗ್ಗೆ ಏನು? ನಾವು ಯೆಹೋವನ ತರ ಯೋಚಿಸುತ್ತೇವಾ, ಲೋಕದವರ ತರ ಯೋಚಿಸುತ್ತೇವಾ? ಕ್ರೈಸ್ತರಾಗಿ ನಾವು ಯೆಹೋವನಿಗೆ ಇಷ್ಟವಾದ ವಿಷಯಗಳನ್ನು ಮಾಡಲು ತುಂಬ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಯೋಚನೆ ಹೇಗಿದೆ? ಯೆಹೋವನ ತರ ಯೋಚನೆ ಮಾಡಲು ಅಂದರೆ ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಪ್ರಯತ್ನ ಮಾಡುತ್ತೇವಾ? ಇದನ್ನು ಮಾಡುವುದು ಸುಲಭ ಅಲ್ಲ. ಆದರೆ ಲೋಕದವರ ತರ ಯೋಚನೆ ಮಾಡುವುದು ತುಂಬ ಸುಲಭ. ಯಾಕೆಂದರೆ ಈ ಲೋಕದ ಯೋಚನಾ ರೀತಿಯನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. (ಎಫೆ. 2:2) ಈ ಲೋಕದಲ್ಲಿರುವ ಜನರು ಹೆಚ್ಚಾಗಿ ತಮ್ಮ ಬಗ್ಗೆಯೇ ಯೋಚನೆ ಮಾಡುತ್ತಾರೆ. ಇದನ್ನು ನೋಡಿ ನಾವೂ ಅವರ ತರ ಆಗಿಬಿಡುವ ಸಾಧ್ಯತೆ ಇದೆ. ಹೌದು, ಯೆಹೋವನ ತರ ಯೋಚನೆ ಮಾಡುವುದು ಕಷ್ಟ. ಆದರೆ ಲೋಕದವರ ತರ ಯೋಚನೆ ಮಾಡುವುದು ತುಂಬ ಸುಲಭ.

4. (ಎ) ಲೋಕ ನಮ್ಮ ಯೋಚನೆಗಳ ಮೇಲೆ ಪ್ರಭಾವ ಬೀರಿದರೆ ಏನಾಗುತ್ತದೆ? (ಬಿ) ನಾವು ಈ ಲೇಖನದಲ್ಲಿ ಯಾವುದರ ಬಗ್ಗೆ ಚರ್ಚೆ ಮಾಡಲಿದ್ದೇವೆ?

4 ಲೋಕ ನಮ್ಮ ಮೇಲೆ ಪ್ರಭಾವ ಬೀರುವಂತೆ ಬಿಟ್ಟರೆ ನಾವು ಸ್ವಾರ್ಥಿಗಳಾಗಿಬಿಡುತ್ತೇವೆ. ಯಾವುದು ಸರಿ, ಯಾವುದು ತಪ್ಪು ಎಂದು ನಾವೇ ತೀರ್ಮಾನಿಸಲು ಹೋಗುತ್ತೇವೆ. (ಮಾರ್ಕ 7:21, 22) ಆದ್ದರಿಂದ ‘ದೇವರ ಆಲೋಚನೆಗಳನ್ನು’ ಕಲಿಯಬೇಕು, ‘ಮನುಷ್ಯರ ಆಲೋಚನೆಗಳನ್ನು’ ಬಿಟ್ಟುಬಿಡಬೇಕು. ಇದನ್ನು ಮಾಡಲು ಈ ಲೇಖನ ಸಹಾಯ ಮಾಡುತ್ತದೆ. ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದು ಯಾಕೆ ಒಳ್ಳೇದು? ಯೆಹೋವನಂತೆ ಯೋಚಿಸುವುದು ನಮ್ಮನ್ನು ಕಟ್ಟಿಹಾಕಲ್ಲ, ಪ್ರಯೋಜನ ಕೊಡುತ್ತದೆ ಹೇಗೆ? ಈ ಲೋಕದ ಯೋಚನಾ ರೀತಿ ನಮ್ಮನ್ನು ರೂಪಿಸುವಂತೆ ಅಥವಾ ಪ್ರಭಾವಿಸುವಂತೆ ಬಿಡದಿರುವುದು ಹೇಗೆ? ಎಂಬ ಪ್ರಶ್ನೆಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಮುಂದಿನ ಲೇಖನದಲ್ಲಿ ನಾವು ಕೆಲವು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡುವುದು ಹೇಗೆ ಎಂದು ಕಲಿಯಲಿದ್ದೇವೆ.

ಯೆಹೋವನ ತರ ಯೋಚನೆ ಮಾಡಿದರೆ ಪ್ರಯೋಜನ ಸಿಗುತ್ತದೆ

5. ಕೆಲವರಿಗೆ ಯಾಕೆ ಯಾರೂ ಏನೂ ಹೇಳುವುದು ಇಷ್ಟ ಇಲ್ಲ?

5 ಕೆಲವರಿಗೆ ಯಾರೂ ಏನೂ ಹೇಳುವುದು ಇಷ್ಟ ಇಲ್ಲ. “ನನ್ನ ಜೀವನ, ನನ್ನಿಷ್ಟ” ಅನ್ನುತ್ತಾರೆ. ಹೀಗೆ ಹೇಳುವವರು ಸ್ವಂತವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ, ತಮಗೆ ಏನಿಷ್ಟಾನೋ ಅದನ್ನೇ ಮಾಡಲು ಬಯಸುತ್ತಾರೆ. ಬೇರೆಯವರು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಅಥವಾ ಎಲ್ಲರ ತರ ಇರಲು ಒತ್ತಾಯಿಸಿದರೆ ಇಷ್ಟ ಆಗಲ್ಲ. *

6. (ಎ) ಯೆಹೋವನು ನಮಗೆ ಯಾವ ಸ್ವಾತಂತ್ರ್ಯ ಕೊಟ್ಟಿದ್ದಾನೆ? (ಬಿ) ಇದು ಸಂಪೂರ್ಣ ಸ್ವಾತಂತ್ರ್ಯನಾ?

6 ನಾವು ಯೆಹೋವನ ತರ ಯೋಚನೆ ಮಾಡಬೇಕೆಂದು ಗೊತ್ತಾಯಿತು. ಆದರೆ ಅದರ ಅರ್ಥ ನಾವು ಇನ್ನು ಸ್ವಂತವಾಗಿ ಯೋಚನೆ ಮಾಡಬಾರದು ಅಂತ ಅಲ್ಲ. “ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ” ಎಂದು 2 ಕೊರಿಂಥ 3:17 ಹೇಳುತ್ತದೆ. ಯೆಹೋವನು ನಮ್ಮನ್ನು ನಾವು ಯಾವ ರೀತಿ ಇರಲು ಬಯಸುತ್ತೇವೋ ಆ ರೀತಿ ಇರಲು ಬಿಡುತ್ತಾನೆ. ನಮಗೆ ಏನು ಇಷ್ಟಾನೋ ಅದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಯೆಹೋವನು ನಮ್ಮನ್ನು ಅದೇ ರೀತಿ ಸೃಷ್ಟಿ ಮಾಡಿದ್ದಾನೆ. ಇದರರ್ಥ ನಮಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಅಂತ ಏನಲ್ಲ. (1 ಪೇತ್ರ 2:16 ಓದಿ.) ಒಂದು ವಿಷಯ ಸರಿಯಾ ತಪ್ಪಾ ಎಂದು ತಿಳಿದುಕೊಳ್ಳಬೇಕಾದರೆ ನಾವು ಯೆಹೋವನ ವಾಕ್ಯವನ್ನು ಉಪಯೋಗಿಸಬೇಕೆಂದು ಆತನು ಬಯಸುತ್ತಾನೆ. ಇದು ತುಂಬ ಕಟ್ಟುನಿಟ್ಟು ಅನಿಸುತ್ತದಾ ಅಥವಾ ಇದರಿಂದ ಪ್ರಯೋಜನ ಆಗುತ್ತದೆ ಅಂತ ಅನಿಸುತ್ತದಾ?

7, 8. ವಿಷಯಗಳನ್ನು ನಾವು ಯೆಹೋವನ ದೃಷ್ಟಿಕೋನದಿಂದ ನೋಡುವುದು ತುಂಬ ಕಟ್ಟುನಿಟ್ಟು ಅಂತ ಅನಿಸುತ್ತದಾ? ಒಂದು ಉದಾಹರಣೆ ಕೊಡಿ.

7 ಒಂದು ಉದಾಹರಣೆ ನೋಡಿ. ಹೆತ್ತವರು ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಕಲಿಸಲು ಪ್ರಯತ್ನಿಸುತ್ತಾರೆ. ಪ್ರಾಮಾಣಿಕರಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು, ಬೇರೆಯವರ ಬಗ್ಗೆ ಕಾಳಜಿ ವಹಿಸಬೇಕು ಎಂದೆಲ್ಲಾ ಕಲಿಸುತ್ತಾರೆ. ಇದನ್ನು ಕಟ್ಟುನಿಟ್ಟು ಅಂತ ಹೇಳಲು ಸಾಧ್ಯವಿಲ್ಲ. ಮಕ್ಕಳು ಮುಂದೆ ಜೀವನದಲ್ಲಿ ಚೆನ್ನಾಗಿರಲಿ ಎಂದು ಹೆತ್ತವರು ಇದನ್ನೆಲ್ಲಾ ಕಲಿಸುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾಗಿ ಬೇರೆ ಕಡೆ ಹೋದ ಮೇಲೆ ತಮಗೆ ಇಷ್ಟವಾದ ರೀತಿ ಜೀವನ ಮಾಡಬಹುದು. ಆದರೆ ತಮ್ಮ ಹೆತ್ತವರು ಹೇಳಿಕೊಟ್ಟ ಪ್ರಕಾರ ಜೀವಿಸಿದರೆ ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಸಮಸ್ಯೆ, ಸಂಕಟ, ನೋವಿನಿಂದ ದೂರ ಇರುತ್ತಾರೆ.

8 ಒಬ್ಬ ಒಳ್ಳೇ ತಂದೆಯಂತೆ ಯೆಹೋವನು ಸಹ ಆತನ ಮಕ್ಕಳಾದ ನಾವು ಜೀವನದಲ್ಲಿ ಸಂತೋಷ ಸಂತೃಪ್ತಿಯಿಂದ ಇರಬೇಕೆಂದು ಬಯಸುತ್ತಾನೆ. (ಯೆಶಾ. 48:17, 18) ಆದ್ದರಿಂದ ಆತನು ನಮಗೆ ನೈತಿಕತೆ ಬಗ್ಗೆ ಮತ್ತು ನಾವು ಒಬ್ಬರೊಂದಿಗೊಬ್ಬರು ಹೇಗೆ ನಡಕೊಳ್ಳಬೇಕು ಎನ್ನುವುದರ ಬಗ್ಗೆ ಕಲಿಸುತ್ತಾನೆ. ನಾವು ವಿಷಯಗಳನ್ನು ಆತನ ದೃಷ್ಟಿಕೋನದಿಂದ ನೋಡಿ, ಆತನು ತೋರಿಸುವ ದಾರಿಯಲ್ಲಿ ನಡೆಯಬೇಕೆಂದು ಆಸೆಪಡುತ್ತಾನೆ. ಇದು ತುಂಬ ಕಟ್ಟುನಿಟ್ಟು ಅಲ್ಲ. ವಿಷಯಗಳನ್ನು ಸರಿಯಾಗಿ ತೂಗಿನೋಡಲು ಮತ್ತು ಸರಿಯಾದ ತೀರ್ಮಾನಗಳನ್ನು ಮಾಡಲು ಇದು ಸಹಾಯ ಮಾಡುತ್ತದೆ. (ಕೀರ್ತ. 92:5; ಜ್ಞಾನೋ. 2:1-5; ಯೆಶಾ. 55:9) ನಾವು ಸ್ವಂತವಾಗಿ ಸರಿಯಾದ ಆಯ್ಕೆಗಳನ್ನು ಮಾಡಿ ಸಂತೋಷವಾಗಿ ಇರಬಹುದು. (ಕೀರ್ತ. 1:2, 3) ಯೆಹೋವನ ತರ ಯೋಚನೆ ಮಾಡಿದಾಗ ನಮಗೆ ಅನೇಕ ಪ್ರಯೋಜನಗಳು ಸಿಗುತ್ತವೆ!

ಯೆಹೋವನ ಯೋಚನೆ ಉತ್ತಮ

9, 10. ಲೋಕದ ಯೋಚನೆಗಿಂತ ಯೆಹೋವನ ಯೋಚನೆಯೇ ಅತ್ಯುತ್ತಮ ಎಂದು ಯಾವುದರಿಂದ ಗೊತ್ತಾಗುತ್ತದೆ?

9 ನಾವು ಯೆಹೋವನ ತರ ಯೋಚನೆ ಮಾಡಲಿಕ್ಕೆ ಇನ್ನೊಂದು ಕಾರಣ ಏನೆಂದರೆ, ಆತನ ಯೋಚನೆ ಈ ಲೋಕದ ಯೋಚನೆಗಿಂತ ತುಂಬ ಉನ್ನತ. ಈ ಲೋಕ ನೈತಿಕತೆ, ಕುಟುಂಬ ಜೀವನ, ಉದ್ಯೋಗ ಮತ್ತು ಬೇರೆ ವಿಷಯಗಳ ಬಗ್ಗೆ ಸಲಹೆಗಳನ್ನು ಕೊಡುತ್ತದೆ. ಆದರೆ ಲೋಕದಿಂದ ಸಿಗುವ ಹೆಚ್ಚಿನ ಸಲಹೆ ಯೆಹೋವನ ಸಲಹೆಗೆ ವಿರುದ್ಧವಾಗಿದೆ. ಉದಾಹರಣೆಗೆ, ಎಲ್ಲರೂ ತಮಗೆ ಏನಿಷ್ಟಾನೋ ಅದನ್ನೇ ಮಾಡಲು ಮತ್ತು ಯಾರ ಜೊತೆ ಬೇಕಾದರೂ ಲೈಂಗಿಕ ಸಂಬಂಧ ಇಟ್ಟುಕೊಳ್ಳಲು ಈ ಲೋಕ ಪ್ರೋತ್ಸಾಹಿಸುತ್ತದೆ. ಮದುವೆಯಾದವರು ಸಣ್ಣಪುಟ್ಟ ವಿಷಯಗಳಿಗೂ ಬೇರೆಯಾದರೆ ಅಥವಾ ವಿಚ್ಛೇದನ ಪಡೆದರೆ ಸಂತೋಷವಾಗಿ ಇರುತ್ತಾರೆ ಎಂದು ಸಲಹೆ ಕೊಡುತ್ತದೆ. ಇದು ಬೈಬಲ್‌ ಕೊಡುವ ಸಲಹೆಗೆ ವಿರುದ್ಧವಾಗಿದೆ. ಆದರೆ ಬೈಬಲ್‌ ಕೊಡುವ ಸಲಹೆಗಿಂತ ಈ ಲೋಕ ಕೊಡುವ ಸಲಹೆ ನಮ್ಮೀ ಕಾಲಕ್ಕೆ ಸೂಕ್ತವಾಗಿದೆಯಾ?

10 “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ” ಎಂದು ಯೇಸು ಹೇಳಿದನು. (ಮತ್ತಾ. 11:19) ತಂತ್ರಜ್ಞಾನದಲ್ಲಿ ಈ ಲೋಕ ಮುನ್ನಡೆ ಸಾಧಿಸಿರುವುದಾದರೂ ನಮ್ಮ ಸಂತೋಷಕ್ಕೆ ತಡೆಗೋಡೆಯಂತಿರುವ ಯುದ್ಧ, ಜಾತಿಭೇದ, ಅಪರಾಧ ಇಂಥ ವಿಷಯಗಳನ್ನು ತೆಗೆದುಹಾಕಲು ಸಾಧ್ಯವಾಗಿಲ್ಲ. ಯಾರ ಜೊತೆ ಬೇಕಾದರೂ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಹುದು ಅನ್ನುವ ವಿಷಯದ ಬಗ್ಗೆ ಸಹ ಯೋಚಿಸಿ. ಇದರಿಂದ ಕುಟುಂಬ ಒಡೆದುಹೋಗುತ್ತದೆ, ಆರೋಗ್ಯ ಹಾಳಾಗುತ್ತದೆ ಮತ್ತು ಬೇರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಈ ವಿಷಯದಲ್ಲಿ ಯೆಹೋವನು ಕೊಡುವ ಸಲಹೆಯನ್ನು ಸ್ವೀಕರಿಸಿರುವ ಕ್ರೈಸ್ತರ ಜೀವನ ಹೇಗಿದೆ? ಕುಟುಂಬದಲ್ಲಿ ಸಂತೋಷ, ಒಳ್ಳೇ ಆರೋಗ್ಯ ಮತ್ತು ಭೂವ್ಯಾಪಕವಾಗಿರುವ ಸಹೋದರ-ಸಹೋದರಿಯರ ಜೊತೆ ಒಳ್ಳೇ ಸಂಬಂಧ ಇದೆ. (ಯೆಶಾ. 2:4; ಅ. ಕಾ. 10:34, 35; 1 ಕೊರಿಂ. 6:9-11) ಲೋಕದ ಯೋಚನೆಗಿಂತ ಯೆಹೋವನ ಯೋಚನೆಯೇ ಅತ್ಯುತ್ತಮ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

11. (ಎ) ಮೋಶೆಯ ಯೋಚನಾ ರೀತಿಯನ್ನು ರೂಪಿಸಿದವರು ಯಾರು? (ಬಿ) ಇದರಿಂದ ಯಾವ ಆಶೀರ್ವಾದ ಸಿಕ್ಕಿತು?

11 ಯೆಹೋವನ ಯೋಚನೆ ಎಲ್ಲಕ್ಕಿಂತ ಉತ್ತಮ ಎಂದು ಪ್ರಾಚೀನ ಕಾಲದ ಯೆಹೋವನ ನಂಬಿಗಸ್ತ ಸೇವಕರಿಗೆ ಗೊತ್ತಿತ್ತು. ಉದಾಹರಣೆಗೆ, ಮೋಶೆ “ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ” ಶಿಕ್ಷಣ ಪಡೆದಿದ್ದರೂ ನಿಜ ವಿವೇಕ ಯೆಹೋವನಿಂದ ಬರುತ್ತದೆ ಎಂದು ಆತನಿಗೆ ಗೊತ್ತಿತ್ತು. (ಅ. ಕಾ. 7:22; ಕೀರ್ತ. 90:12) ಆದ್ದರಿಂದ ಆತನು ಯೆಹೋವನಿಗೆ, “ನಿನ್ನ ಮಾರ್ಗವನ್ನು ನನಗೆ ತೋರಿಸು” ಎಂದನು. (ವಿಮೋ. 33:13) ಯೆಹೋವನ ಯೋಚನೆ ತನ್ನನ್ನು ರೂಪಿಸಲು ಮೋಶೆ ಬಿಟ್ಟುಕೊಟ್ಟನು. ಇದರಿಂದ ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಮೋಶೆಯನ್ನು ಮಹತ್ತರವಾದ ರೀತಿಯಲ್ಲಿ ಉಪಯೋಗಿಸಿದನು. ಅಷ್ಟೇ ಅಲ್ಲ, ಅಸಾಧಾರಣ ನಂಬಿಕೆ ತೋರಿಸಿದವರಲ್ಲಿ ಮೋಶೆಯೂ ಒಬ್ಬನು ಎಂದು ಹೇಳಿ ಆತನನ್ನು ಗೌರವಿಸಿದ್ದಾನೆ.—ಇಬ್ರಿ. 11:24-27.

12. ಪೌಲನು ಯಾವುದರ ಮೇಲೆ ಆಧರಿಸಿ ತೀರ್ಮಾನಗಳನ್ನು ಮಾಡುತ್ತಿದ್ದನು?

12 ಅಪೊಸ್ತಲ ಪೌಲನು ತುಂಬ ಬುದ್ಧಿವಂತನು. ತುಂಬ ಓದಿದ್ದನು ಮತ್ತು ಕಡಿಮೆಪಕ್ಷ ಎರಡು ಭಾಷೆಗಳನ್ನಾದರೂ ಮಾತಾಡುತ್ತಿದ್ದನು. (ಅ. ಕಾ. 5:34; 21:37, 39; 22:2, 3) ಆದರೆ ಲೋಕದ ಜ್ಞಾನದ ಮೇಲೆ ಹೊಂದಿಕೊಳ್ಳದೆ ದೇವರ ವಾಕ್ಯದ ಮೇಲೆ ಆಧರಿಸಿ ತೀರ್ಮಾನಗಳನ್ನು ಮಾಡಿದನು. (ಅ. ಕಾರ್ಯಗಳು 17:2; 1 ಕೊರಿಂಥ 2:6, 7, 13 ಓದಿ.) ಇದರಿಂದ ಆತನು ಮಾಡಿದ ಸೇವೆಗೆ ಒಳ್ಳೇ ಫಲಿತಾಂಶಗಳು ಸಿಕ್ಕಿತು ಮತ್ತು ಅನಂತಕಾಲಕ್ಕೂ ಪ್ರಯೋಜನ ತರುವಂಥ ಒಂದು ಬಹುಮಾನ ಆತನಿಗೆ ಸಿಗಲಿತ್ತು.—2 ತಿಮೊ. 4:8.

13. ನಮ್ಮ ಯೋಚನೆಯನ್ನು ಯೆಹೋವನಿಗೆ ಇಷ್ಟವಾಗುವ ತರ ಬದಲಾಯಿಸುವ ಜವಾಬ್ದಾರಿ ಯಾರದು?

13 ದೇವರ ಯೋಚನೆಗೂ ಈ ಲೋಕದ ಯೋಚನೆಗೂ ಏಣಿ ಇಟ್ಟರೂ ಎಟುಕದಷ್ಟು ಅಂತರ ಇದೆ ಎಂದು ಸ್ಪಷ್ಟವಾಗಿ ಗೊತ್ತಾಯಿತು. ನಾವು ಯೆಹೋವನ ಮಟ್ಟಗಳಂತೆ ನಡೆದರೆ ನಿಜ ಸಂತೋಷ ಯಶಸ್ಸು ಸಿಗುತ್ತದೆ. ಆದರೆ ‘ನೀವು ನನ್ನ ತರ ಯೋಚನೆ ಮಾಡಬೇಕು’ ಎಂದು ಯೆಹೋವನು ನಮ್ಮನ್ನು ಒತ್ತಾಯಿಸಲ್ಲ. “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಮತ್ತು ಹಿರಿಯರು ನಮ್ಮ ಯೋಚನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ. (ಮತ್ತಾ. 24:45; 2 ಕೊರಿಂ. 1:24) ನಮ್ಮ ಯೋಚನೆಯನ್ನು ಬದಲಾಯಿಸುವ ಜವಾಬ್ದಾರಿ ನಮ್ಮದು. ಇದನ್ನು ಮಾಡಿದರೆ ನಾವು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಆರಂಭಿಸುತ್ತೇವೆ. ಇದನ್ನು ಹೇಗೆ ಮಾಡಬಹುದು?

ಈ ಲೋಕದ ಕೈಗೊಂಬೆ ಆಗಬೇಡಿ

14, 15. (ಎ) ಯೆಹೋವನ ತರ ಯೋಚನೆ ಮಾಡಲು ನಾವು ಯಾವುದರ ಬಗ್ಗೆ ಧ್ಯಾನಿಸಬೇಕು? (ಬಿ) ಈ ಲೋಕದ ವಿಚಾರಗಳು ಯಾಕೆ ನಮ್ಮ ತಲೆಯಲ್ಲಿ ತುಂಬಲು ಬಿಡಬಾರದು? ಒಂದು ಉದಾಹರಣೆ ಕೊಡಿ.

14 “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ” ಎಂದು ರೋಮನ್ನರಿಗೆ 12:2 ಹೇಳುತ್ತದೆ. ಸತ್ಯಕ್ಕೆ ಬರುವ ಮುಂಚೆ ಯಾವುದೇ ವಿಷಯ ನಮ್ಮ ಯೋಚನೆಯನ್ನು ರೂಪಿಸಿದ್ದರೂ ಅದನ್ನು ನಾವು ದೇವರಿಗೆ ಇಷ್ಟವಾಗುವ ತರ ಬದಲಾಯಿಸಲು ಸಾಧ್ಯ ಎಂದು ಈ ವಚನ ಹೇಳುತ್ತಿದೆ. ಅನುವಂಶೀಯವಾಗಿ ಬಂದಿರುವ ವಿಷಯಗಳು ಮತ್ತು ಜೀವನದಲ್ಲಿ ನಮಗಾಗಿರುವ ಅನುಭವಗಳು ನಮ್ಮ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರಿರುವುದಾದರೂ ನಮ್ಮ ಮನಸ್ಸು ಬದಲಾಗುತ್ತಾ ಇರುತ್ತದೆ. ನಾವು ಯಾವುದರ ಬಗ್ಗೆ ಯೋಚನೆ ಮಾಡುತ್ತೇವೋ ಅದರ ಮೇಲೆ ಹೊಂದಿಕೊಂಡು ಹೆಚ್ಚಾಗಿ ನಮ್ಮ ಮನಸ್ಸು ಬದಲಾಗುತ್ತದೆ. ನಾವು ಯೆಹೋವನ ಯೋಚನೆಗಳ ಬಗ್ಗೆ ಧ್ಯಾನಿಸಿದರೆ ಆತನ ದೃಷ್ಟಿಕೋನವೇ ಸರಿ ಎಂದು ನಮಗೆ ಮನವರಿಕೆ ಆಗುತ್ತದೆ. ಆಗ ನಾವು ಆತನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಆಸೆಪಡುತ್ತೇವೆ.

15 ಆದರೆ ನಾವು ಯೆಹೋವನ ತರ ಯೋಚನೆ ಮಾಡಬೇಕಾದರೆ ‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟುಬಿಡಬೇಕು.’ ಅಂದರೆ ದೇವರ ಯೋಚನೆಗೆ ವಿರುದ್ಧವಾಗಿರುವ ಯಾವುದನ್ನೂ ನೋಡಬಾರದು, ಓದಬಾರದು, ಕೇಳಿಸಿಕೊಳ್ಳಬಾರದು. ಇದು ಎಷ್ಟು ಪ್ರಾಮುಖ್ಯ ಎಂದು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡಿ, ಆಹಾರದ ಬಗ್ಗೆ. ಆರೋಗ್ಯವಾಗಿರಲು ಬಯಸುವ ಒಬ್ಬ ವ್ಯಕ್ತಿ ಒಳ್ಳೇ ಆಹಾರವನ್ನು ಮಾತ್ರ ತಿನ್ನಬೇಕೆಂದು ತೀರ್ಮಾನಿಸಬಹುದು. ಆದರೆ ಅವನು ಆರೋಗ್ಯವಾದ ಆಹಾರದ ಜೊತೆ ಕೆಟ್ಟುಹೋದ ಆಹಾರವನ್ನೂ ತಿನ್ನುತ್ತಿದ್ದರೆ ಅವನು ಮಾಡುತ್ತಿರುವ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಅದೇ ರೀತಿ, ಯೆಹೋವನ ಯೋಚನೆಗಳನ್ನು ಕಲಿಯಲು ಪ್ರಯತ್ನಿಸುತ್ತಿರುವ ನಾವು ಲೋಕದ ವಿಚಾರಗಳನ್ನೂ ತಲೆಯಲ್ಲಿ ತುಂಬಿಸಿಕೊಂಡರೆ ನಮ್ಮ ಪ್ರಯತ್ನ ವ್ಯರ್ಥವಾಗುತ್ತದೆ.

16. ನಾವು ಯಾವುದನ್ನು ದೂರ ಇಡಲು ಪ್ರಯತ್ನಿಸಬೇಕು?

16 ಲೋಕದ ವಿಚಾರಗಳು ನಮ್ಮ ಹತ್ತಿರಕ್ಕೂ ಬರದಂತೆ ನೋಡಿಕೊಳ್ಳಲು ಸಾಧ್ಯನಾ? ಇಲ್ಲ. ಯಾಕೆಂದರೆ ನಾವು ಈ ಲೋಕವನ್ನು ಬಿಟ್ಟು ಹೋಗಲಿಕ್ಕಾಗಲ್ಲ. ಈ ಲೋಕದ ವಿಚಾರಗಳು ನಮ್ಮ ಕಿವಿಗೆ ಖಂಡಿತ ಬೀಳುತ್ತವೆ. (1 ಕೊರಿಂ. 5:9, 10) ನಾವು ಸೇವೆಗೆ ಹೋಗಿರುವಾಗಲೂ ಜನರು ಹೇಳುವ ತಪ್ಪಾದ ವಿಚಾರಗಳ ಬಗ್ಗೆ ಮತ್ತು ಸುಳ್ಳು ಬೋಧನೆಗಳ ಬಗ್ಗೆ ಕೇಳಿಸಿಕೊಳ್ಳುತ್ತೇವೆ. ಆದ್ದರಿಂದ ನಾವು ತಪ್ಪಾದ ವಿಚಾರಗಳನ್ನು ಸಂಪೂರ್ಣವಾಗಿ ದೂರ ಇಡಲು ಸಾಧ್ಯವಿಲ್ಲ. ಆದರೂ ನಾವು ಅದರ ಬಗ್ಗೆಯೇ ಯೋಚಿಸುತ್ತಾ ಇರುವ ಅಥವಾ ಅವುಗಳನ್ನು ಸ್ವೀಕರಿಸುವ ಆವಶ್ಯಕತೆ ಇಲ್ಲ. ಸೈತಾನನು ನಮ್ಮ ತಲೆಯಲ್ಲಿ ತುಂಬಲು ಬಯಸುವ ವಿಷಯಗಳನ್ನು ನಾವು ಯೇಸುವಿನಂತೆ ತಕ್ಷಣ ತಿರಸ್ಕರಿಸಬೇಕು. ಈ ಲೋಕದ ವಿಚಾರಗಳು ಅನಾವಶ್ಯಕವಾಗಿ ನಮ್ಮ ತಲೆಯಲ್ಲಿ ತುಂಬಲು ಬಿಡದಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ.—ಜ್ಞಾನೋಕ್ತಿ 4:23 ಓದಿ.

17. ಈ ಲೋಕದ ವಿಚಾರಗಳು ಅನಾವಶ್ಯಕವಾಗಿ ನಮ್ಮ ತಲೆಯಲ್ಲಿ ತುಂಬದಿರಲು ನಾವೇನು ಮಾಡಬೇಕು?

17 ಉದಾಹರಣೆಗೆ, ನಾವು ನಮ್ಮ ಸ್ನೇಹಿತರನ್ನು ಆರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕು. ಯೆಹೋವ ದೇವರ ಆರಾಧಕರಲ್ಲದ ಜನರನ್ನು ನಾವು ಆಪ್ತ ಸ್ನೇಹಿತರಾಗಿ ಮಾಡಿಕೊಂಡರೆ ಅವರ ತರನೇ ಯೋಚನೆ ಮಾಡಲು ಆರಂಭಿಸುತ್ತೇವೆ. (ಜ್ಞಾನೋ. 13:20; 1 ಕೊರಿಂ. 15:12, 32, 33) ನಾವು ಮನರಂಜನೆಯನ್ನು ಸಹ ಜಾಗ್ರತೆಯಿಂದ ಆರಿಸಿಕೊಳ್ಳಬೇಕು. ಮಂಗನಿಂದ ಮಾನವ ಎಂಬ ಸಿದ್ಧಾಂತವನ್ನು ತೋರಿಸುವ, ಹೊಡೆದಾಟ ಬಡಿದಾಟ ಇರುವ ಅಥವಾ ಅಶ್ಲೀಲವಾದ ಚಿತ್ರಗಳನ್ನು ತೋರಿಸುವ ಮನರಂಜನೆಯನ್ನು ನಾವು ದೂರ ಇಡಬೇಕು. ಆಗ “ದೇವರ ಜ್ಞಾನಕ್ಕೆ ವಿರುದ್ಧವಾಗಿ” ಇರುವ ಯೋಚನೆಗಳಿಂದ ನಮ್ಮ ಮನಸ್ಸು ಹಾಳಾಗಲ್ಲ.—2 ಕೊರಿಂ. 10:5.

ತಪ್ಪಾದ ಮನರಂಜನೆಯನ್ನು ಬಿಟ್ಟುಬಿಡಲು ನಾವು ನಮ್ಮ ಮಕ್ಕಳಿಗೆ ಸಹಾಯ ಮಾಡುತ್ತೇವಾ? (ಪ್ಯಾರ 18, 19 ನೋಡಿ)

18, 19. (ಎ) ಲೋಕದ ವಿಚಾರಗಳನ್ನು ನಮಗೇ ಗೊತ್ತಿಲ್ಲದೆ ನಮ್ಮ ತಲೆಯಲ್ಲಿ ತುಂಬುವ ಪ್ರಯತ್ನ ಹೇಗೆ ನಡೆಯಬಹುದು? (ಬಿ) ನಾವು ಯಾವ ಪ್ರಶ್ನೆಗಳ ಬಗ್ಗೆ ಯೋಚಿಸಬೇಕು ಮತ್ತು ಯಾಕೆ?

18 ಕೆಲವೊಮ್ಮೆ ಲೋಕದ ವಿಚಾರಗಳನ್ನು ನಮಗೇ ಗೊತ್ತಿಲ್ಲದೆ ನಮ್ಮ ತಲೆಯಲ್ಲಿ ತುಂಬುವ ಪ್ರಯತ್ನ ನಡೆಯುತ್ತದೆ. ಇದನ್ನು ನಾವು ಗುರುತಿಸಿ ತಳ್ಳಿಹಾಕಬೇಕು. ಉದಾಹರಣೆಗೆ, ಕೆಲವು ವಾರ್ತಾ ವರದಿಗಳು ಕೆಲವೊಂದು ರಾಜಕೀಯ ಅಭಿಪ್ರಾಯಗಳನ್ನು ಬೆಂಬಲಿಸುವ ರೀತಿಯಲ್ಲಿ ಇರುತ್ತವೆ. ಬೇರೆ ಕೆಲವು ವಾರ್ತಾ ವರದಿಗಳು ಈ ಲೋಕ ಮೆಚ್ಚುವಂಥ ಗುರಿಗಳ ಮತ್ತು ಸಾಧನೆಗಳ ಬಗ್ಗೆ ಹಾಡಿ ಹೊಗಳುತ್ತವೆ. ಕೆಲವು ಚಲನಚಿತ್ರಗಳು ಮತ್ತು ಪುಸ್ತಕಗಳು “ನಾನೇ ಮುಖ್ಯ” ಮತ್ತು “ನನ್ನ ಕುಟುಂಬನೇ ಮುಖ್ಯ” ಅನ್ನುವ ಭಾವನೆಯನ್ನು ಎತ್ತಿ ಹಿಡಿಯುತ್ತವೆ. ಇದರಲ್ಲಿ ಯಾವ ತಪ್ಪೂ ಇಲ್ಲ ಅನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಜನರಿಗೆ ಇದು ತುಂಬ ಇಷ್ಟವಾಗುತ್ತದೆ. ಆದರೆ ಅಂಥ ಎಲ್ಲಾ ಯೋಚನೆಗಳು ದೇವರ ವಾಕ್ಯವಾದ ಬೈಬಲಿಗೆ ವಿರುದ್ಧವಾಗಿವೆ. ನಾವು ಮತ್ತು ನಮ್ಮ ಕುಟುಂಬ ಚೆನ್ನಾಗಿರಬೇಕಾದರೆ ನಾವು ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನನ್ನು ಪ್ರೀತಿಸಬೇಕೆಂದು ಬೈಬಲ್‌ ಹೇಳುತ್ತದೆ. (ಮತ್ತಾ. 22:36-39) ಮಕ್ಕಳಿಗಾಗಿ ಬರುವ ಕಥೆಗಳಲ್ಲೂ ಅಪಾಯ ಇರಬಹುದು. ಹೆಚ್ಚಾಗಿ ಇಂಥ ಕಥೆಗಳು ಚೆನ್ನಾಗಿದ್ದರೂ ಕೆಲವು ಕಥೆಗಳು ಅನೈತಿಕ ವಿಷಯಗಳು ತಪ್ಪಲ್ಲ ಅನ್ನುವ ವಿಚಾರವನ್ನು ಮಕ್ಕಳಿಗೆ ಗೊತ್ತಿಲ್ಲದ ಹಾಗೆ ತಲೆಯಲ್ಲಿ ತುಂಬುತ್ತಿರಬಹುದು.

19 ಒಳ್ಳೇ ಮನರಂಜನೆಯನ್ನು ಆನಂದಿಸುವುದು ತಪ್ಪಲ್ಲ. ಆದರೆ ನಾವು ಈ ಪ್ರಶ್ನೆಗಳ ಬಗ್ಗೆ ಯೋಚಿಸಬೇಕು: ‘ಲೋಕದ ವಿಚಾರಗಳನ್ನು ನನಗೇ ಗೊತ್ತಿಲ್ಲದೆ ನನ್ನ ತಲೆಯಲ್ಲಿ ತುಂಬುವ ಪ್ರಯತ್ನ ನಡೆದಾಗ ಎಚ್ಚೆತ್ತುಕೊಳ್ಳುತ್ತೇನಾ? ತಪ್ಪಾದ ಕೆಲವು ಟಿವಿ ಕಾರ್ಯಕ್ರಮಗಳಿಂದ ಮತ್ತು ಓದುವ ಮಾಹಿತಿಯಿಂದ ನಾನು ಮತ್ತು ನನ್ನ ಮಕ್ಕಳು ದೂರ ಇದ್ದೇವಾ? ಈ ಲೋಕದ ವಿಚಾರಗಳನ್ನು ನೋಡಿದರೂ ಕೇಳಿಸಿಕೊಂಡರೂ ಅದರಿಂದ ಪ್ರಭಾವಿತರಾಗದಿರಲು ಯೆಹೋವನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ನಾನು ನನ್ನ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇನಾ?’ ಯಾವುದು ದೇವರ ಯೋಚನೆ, ಯಾವುದು ಲೋಕದ ಯೋಚನೆ ಎಂದು ನಾವು ಅರ್ಥಮಾಡಿಕೊಂಡರೆ ‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪುಗೊಳ್ಳುವುದನ್ನು’ ನಾವು ತಪ್ಪಿಸಬಹುದು.

ನಿಮ್ಮನ್ನು ಯಾರು ರೂಪಿಸುತ್ತಿದ್ದಾರೆ?

20. ನಮ್ಮನ್ನು ಯಾರು ರೂಪಿಸುತ್ತಿದ್ದಾರೆ ಎಂದು ಹೇಗೆ ಗೊತ್ತಾಗುತ್ತದೆ?

20 ನಮಗೆ ಮಾಹಿತಿ ಎರಡು ಮೂಲಗಳಿಂದ ಮಾತ್ರ ಬರುತ್ತದೆ. ಒಂದು ಯೆಹೋವನಿಂದ, ಇನ್ನೊಂದು ಸೈತಾನ ಮತ್ತು ಅವನ ಲೋಕದಿಂದ. ಇವರಲ್ಲಿ ಯಾರು ನಿಮ್ಮನ್ನು ರೂಪಿಸುತ್ತಿದ್ದಾರೆ? ನೀವು ಯಾವುದರಿಂದ ಮಾಹಿತಿಯನ್ನು ಪಡೆಯುತ್ತೀರೋ ಅದೇ ನಿಮ್ಮನ್ನು ರೂಪಿಸುತ್ತದೆ. ನಾವು ಲೋಕದ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಂಡರೆ ಲೋಕ ನಮ್ಮ ಯೋಚನಾ ರೀತಿಯನ್ನು ರೂಪಿಸುತ್ತದೆ. ಆಮೇಲೆ ನಾವು ಸ್ವಾರ್ಥಿಗಳಂತೆ ಯೋಚಿಸುತ್ತೇವೆ ಮತ್ತು ನಡಕೊಳ್ಳುತ್ತೇವೆ. ಆದ್ದರಿಂದ ನಾವು ಏನನ್ನು ನೋಡುತ್ತೇವೆ, ಓದುತ್ತೇವೆ, ಕೇಳಿಸಿಕೊಳ್ಳುತ್ತೇವೆ, ಯೋಚಿಸುತ್ತೇವೆ ಅನ್ನುವುದಕ್ಕೆ ಗಮನ ಕೊಡಬೇಕು.

21. ಮುಂದಿನ ಲೇಖನದಲ್ಲಿ ನಾವು ಯಾವುದರ ಬಗ್ಗೆ ಚರ್ಚೆ ಮಾಡಲಿದ್ದೇವೆ?

21 ಈ ಲೇಖನದಲ್ಲಿ ನಾವು ಏನು ಕಲಿಯಕ್ಕಾಯಿತು? ಯೆಹೋವ ದೇವರ ತರ ಯೋಚನೆ ಮಾಡಬೇಕಾದರೆ ಈ ಲೋಕದವರ ತರ ಯೋಚನೆ ಮಾಡುವುದನ್ನು ನಿಲ್ಲಿಸಬೇಕು. ನಾವು ಯೆಹೋವ ದೇವರ ಯೋಚನೆಗಳ ಬಗ್ಗೆನೂ ಧ್ಯಾನಿಸಬೇಕು. ಆಗ ನಾವು ಆತನ ಹಾಗೆಯೇ ಹೆಚ್ಚು ಯೋಚಿಸಲು ಆರಂಭಿಸುತ್ತೇವೆ. ಇದನ್ನು ಹೇಗೆ ಮಾಡುವುದೆಂದು ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

^ ಪ್ಯಾರ. 5 ಸತ್ಯ ಏನೆಂದರೆ, ‘ನಾನೇ ರಾಜ, ನಾನೇ ಮಂತ್ರಿ’ ಎಂದು ಹೇಳಿಕೊಳ್ಳುವ ವ್ಯಕ್ತಿ ಸಹ ಬೇರೆಯವರ ಪ್ರಭಾವಕ್ಕೆ ಒಳಗಾಗಿರುತ್ತಾನೆ. ಉದಾಹರಣೆಗೆ, ಭೂಮಿ ಮೇಲೆ ಜೀವ ಹೇಗೆ ಬಂತು ಅನ್ನುವ ವಿಷಯದಿಂದ ಹಿಡಿದು ಯಾವ ಬಟ್ಟೆ ಹಾಕಬೇಕು ಅನ್ನುವಂಥ ಚಿಕ್ಕಪುಟ್ಟ ವಿಷಯದ ವರೆಗೂ ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತಾರೆ. ಹಾಗಿದ್ದರೂ ಯಾರು ನಮ್ಮ ಮೇಲೆ ಪ್ರಭಾವ ಬೀರಬೇಕು ಅನ್ನುವುದು ನಮ್ಮ ಕೈಯಲ್ಲಿದೆ.