ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ನಂಬಿ, ಸದಾಕಾಲ ಬಾಳಿ!

ಯೆಹೋವನನ್ನು ನಂಬಿ, ಸದಾಕಾಲ ಬಾಳಿ!

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.”—ಜ್ಞಾನೋ. 3:5.

ಗೀತೆಗಳು: 152, 49

1. ನಮ್ಮೆಲ್ಲರಿಗೂ ಯಾಕೆ ಸಾಂತ್ವನ ಬೇಕು?

ನಮ್ಮೆಲ್ಲರಿಗೂ ಸಾಂತ್ವನ ಬೇಕು. ಯಾಕೆಂದರೆ ನಮ್ಮ ಜೀವನ ಚಿಂತೆ, ಒತ್ತಡಗಳಲ್ಲಿ ಮುಳುಗಿಹೋಗಿರಬಹುದು. ಕಾಯಿಲೆಯಿಂದ, ವಯಸ್ಸಾಗುತ್ತಿರುವುದರಿಂದ, ಆಪ್ತರು ತೀರಿಹೋಗಿರುವುದರಿಂದ ನಾವು ಕಣ್ಣೀರಲ್ಲಿ ಕೈತೊಳೆಯುತ್ತಿರಬಹುದು. ನಮ್ಮ ಜೊತೆ ಜನರು ಕೆಟ್ಟದಾಗಿ ನಡಕೊಳ್ಳುತ್ತಿರಬಹುದು. ಅಷ್ಟೇ ಅಲ್ಲ ನಮ್ಮ ಸುತ್ತಮುತ್ತ ಇರುವ ಜನರು ತುಂಬ ಕ್ರೂರಿಗಳಾಗುತ್ತಿದ್ದಾರೆ. ಇಂಥ “ಕಷ್ಟಕರವಾದ ಕಠಿನಕಾಲ” ನೋಡುವಾಗ ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ, ಇನ್ನೇನು ಹೊಸಲೋಕ ಬಂದುಬಿಡುತ್ತೆ ಅಂತ ಸಮಾಧಾನ ಮಾಡಿಕೊಳ್ಳುತ್ತೇವೆ. (2 ತಿಮೊ. 3:1) ಆದರೆ ಯೆಹೋವನು ಕೊಟ್ಟಿರುವ ಮಾತು ನಿಜ ಆಗುವುದನ್ನು ನೋಡುವುದಕ್ಕೆ ನಾವು ತುಂಬ ಸಮಯದಿಂದ ಕಾಯುತ್ತಾ ಇದ್ದಿರಬಹುದು. ಹೆಚ್ಚೆಚ್ಚು ಕಷ್ಟಗಳನ್ನೂ ಎದುರಿಸುತ್ತಿರಬಹುದು. ಆದ್ದರಿಂದ ನಮಗೆ ಹೆಚ್ಚು ಸಾಂತ್ವನ ಬೇಕು. ಅದನ್ನು ಎಲ್ಲಿಂದ ಪಡೆಯಬಹುದು?

2, 3. (ಎ) ಹಬಕ್ಕೂಕನ ಬಗ್ಗೆ ನಮಗೆ ಏನು ಗೊತ್ತು? (ಬಿ) ಹಬಕ್ಕೂಕ ಪುಸ್ತಕದ ಬಗ್ಗೆ ನಾವು ಯಾಕೆ ಚರ್ಚಿಸಬೇಕು?

2 ಆ ಪ್ರಶ್ನೆಗೆ ಉತ್ತರವನ್ನು ತಿಳುಕೊಳ್ಳಲು ಹಬಕ್ಕೂಕ ಪುಸ್ತಕವನ್ನು ನೋಡೋಣ. ಬೈಬಲಿನಲ್ಲಿ ಹಬಕ್ಕೂಕನ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ ಅವನ ಪುಸ್ತಕದಿಂದ ತುಂಬ ಪ್ರೋತ್ಸಾಹ ಸಿಗುತ್ತದೆ. ಹಬಕ್ಕೂಕ ಎನ್ನುವ ಹೆಸರಿಗೆ ಬಹುಶಃ “ಪ್ರೀತಿಯ ಅಪ್ಪುಗೆ” ಎಂಬ ಅರ್ಥ ಇದೆ. ಆ ಹೆಸರು ಯೆಹೋವನು ತನ್ನ ಆರಾಧಕರನ್ನು ಸಂತೈಸಲು ಪ್ರೀತಿಯಿಂದ ಅಪ್ಪಿಕೊಳ್ಳುವುದಕ್ಕೆ ಸೂಚಿಸಬಹುದು. ಅಥವಾ ಆತನ ಆರಾಧಕರು ಆತನನ್ನು ಬಿಗಿಯಾಗಿ ಹಿಡಿದುಕೊಂಡಿರುವುದಕ್ಕೂ ಸೂಚಿಸಬಹುದು. ಹಬಕ್ಕೂಕನು ದೇವರ ಹತ್ತಿರ ಮಾತಾಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳಿದನು. ಅವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಬರೆಯುವಂತೆ ಯೆಹೋವನು ಹಬಕ್ಕೂಕನಿಗೆ ಹೇಳಿದನು. ಯಾಕೆಂದರೆ ಅದರಿಂದ ನಮಗೂ ಪ್ರಯೋಜನ ಸಿಗುತ್ತದೆ ಎಂದು ಯೆಹೋವನಿಗೆ ಗೊತ್ತಿತ್ತು.—ಹಬ. 2:2.

3 ಹಬಕ್ಕೂಕ ಪುಸ್ತಕದಲ್ಲಿ ಯೆಹೋವ ಮತ್ತು ಹಬಕ್ಕೂಕನ ನಡುವೆ ನಡೆದ ಸಂಭಾಷಣೆ ಮಾತ್ರ ಇದೆ. ಇದನ್ನು ಬಿಟ್ಟು ಹಬಕ್ಕೂಕನ ಬಗ್ಗೆ ಬೈಬಲಿನಲ್ಲಿ ಬೇರೆ ಯಾವ ಮಾಹಿತಿಯೂ ಇಲ್ಲ. ಆದರೂ ಯೆಹೋವನು ಆ ಪುಸ್ತಕವನ್ನು ‘ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳಲ್ಲಿ’ ಸೇರಿಸಿದ್ದಾನೆ. ಯಾಕೆಂದರೆ ಅದು ‘ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಿರೀಕ್ಷೆಯುಳ್ಳವರಾಗುವಂತೆ’ ಮಾಡುತ್ತದೆ. (ರೋಮ. 15:4) ಹಬಕ್ಕೂಕ ಪುಸ್ತಕ ನಮಗೆ ಹೇಗೆ ಸಹಾಯ ಮಾಡುತ್ತದೆ? ಯೆಹೋವನಲ್ಲಿ ಭರವಸೆ ಇಡುವುದು ಅಂದರೇನು ಎಂದು ತಿಳುಕೊಳ್ಳಲು ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಮಗೆ ಯಾವುದೇ ಕಷ್ಟ, ಸಮಸ್ಯೆಗಳಿದ್ದರೂ ಮನಶ್ಶಾಂತಿ ಕಳಕೊಳ್ಳದಿರಲು ಸಾಧ್ಯ ಎಂಬ ಆಶ್ವಾಸನೆ ಕೊಡುತ್ತದೆ.

ಯೆಹೋವನಿಗೆ ಪ್ರಾರ್ಥಿಸಿ

4. ಹಬಕ್ಕೂಕನು ಯಾಕೆ ಕಂಗಾಲಾಗಿದ್ದನು?

4 ಹಬಕ್ಕೂಕ 1:2, 3 ಓದಿ. ಹಬಕ್ಕೂಕನು ತುಂಬ ಕಷ್ಟಕರ ಸಮಯದಲ್ಲಿ ಜೀವಿಸಿದನು. ಅವನ ಸುತ್ತಮುತ್ತ ಇದ್ದ ಜನರು ತುಂಬ ಕೆಟ್ಟವರು, ಕ್ರೂರಿಗಳು ಆಗಿದ್ದರು. ಇದರಿಂದ ಅವನಿಗೆ ತುಂಬ ದುಃಖ ಆಯಿತು. ಇಸ್ರಾಯೇಲ್ಯರು ತಮ್ಮ ಸ್ವಂತ ಜನರಿಗೆ ಅನ್ಯಾಯ ಮಾಡುತ್ತಾ, ಒಬ್ಬರಿಗೊಬ್ಬರು ಹೊಡೆದಾಡುತ್ತಾ ಇದ್ದದ್ದೇ ಅವನ ಕಣ್ಣಿಗೆ ಬೀಳುತ್ತಿತ್ತು. ‘ಈ ಕೆಟ್ಟತನಕ್ಕೆ ಒಂದು ಅಂತ್ಯ ಅನ್ನೋದೇ ಇಲ್ಲವಾ? ಯೆಹೋವನು ಯಾಕೆ ಏನೂ ಮಾಡ್ತಿಲ್ಲ?’ ಅಂತೆಲ್ಲ ಹಬಕ್ಕೂಕನು ಯೋಚಿಸಿರಬಹುದು. ಅವನಿಗೆ ದಿಕ್ಕೇ ತೋಚದಂತೆ ಆಯಿತು. ಏನಾದರೂ ಮಾಡು ಅಂತ ಯೆಹೋವನಲ್ಲಿ ಬೇಡಿಕೊಂಡನು. ಯೆಹೋವನು ತನ್ನ ಜನರ ಕೈಬಿಟ್ಟಿದ್ದಾನೆ ಅಥವಾ ಪರಿಸ್ಥಿತಿಯನ್ನು ಸರಿಮಾಡಲ್ಲ ಅಂತ ಅವನಿಗೆ ಅನಿಸಿರಬಹುದು. ನಿಮಗೂ ಯಾವತ್ತಾದರೂ ಅವನ ತರ ಅನಿಸಿದೆಯಾ?

5. ಹಬಕ್ಕೂಕ ಪುಸ್ತಕದಿಂದ ನಾವು ಏನು ಕಲಿಯಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

5 ಹಬಕ್ಕೂಕನು ಯೆಹೋವನ ಮೇಲೆ ಮತ್ತು ಆತನು ಕೊಟ್ಟ ಮಾತಿನ ಮೇಲೆ ಭರವಸೆ ಕಳಕೊಂಡು ಆ ಪ್ರಶ್ನೆಗಳನ್ನು ಕೇಳಿದನಾ? ಖಂಡಿತ ಇಲ್ಲ! ಹಬಕ್ಕೂಕನು ತನಗಿದ್ದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಸಹಾಯ ಬೇಕೆಂದು ಯೆಹೋವನ ಹತ್ತಿರ ಕೇಳಿಕೊಂಡನು. ಈ ವಿಷಯವೇ ಅವನು ಯೆಹೋವನಲ್ಲಿ ಭರವಸೆ ಕಳಕೊಂಡಿರಲಿಲ್ಲ ಎಂದು ತೋರಿಸಿಕೊಡುತ್ತದೆ. ಹಬಕ್ಕೂಕನಿಗೆ ತುಂಬ ಚಿಂತೆ, ಗಲಿಬಿಲಿ ಇತ್ತು. ಯೆಹೋವನು ಯಾಕೆ ಏನೂ ಸರಿಮಾಡ್ತಿಲ್ಲ, ಇಷ್ಟೊಂದು ಕಷ್ಟಗಳಿದ್ದರೂ ಯಾಕೆ ಸುಮ್ಮನಿದ್ದಾನೆ ಅನ್ನುವ ವಿಷಯ ಅವನಿಗೆ ಅರ್ಥವಾಗಲಿಲ್ಲ. ಅವನ ಚಿಂತೆಗಳನ್ನೆಲ್ಲ ಬರೆಯುವಂತೆ ಯೆಹೋವನು ಹೇಳಿದನು. ಇದರಿಂದ ನಾವು ಒಂದು ಪ್ರಾಮುಖ್ಯ ವಿಷಯವನ್ನು ಕಲಿಯುತ್ತೇವೆ. ಅದೇನೆಂದರೆ ನಮ್ಮ ಚಿಂತೆಗಳನ್ನು, ಸಂಶಯಗಳನ್ನು ನಾವು ಯೆಹೋವನ ಹತ್ತಿರ ಮುಕ್ತವಾಗಿ ಹೇಳಿಕೊಳ್ಳಬೇಕು. ನಾವು ಆತನಿಗೆ ಪ್ರಾರ್ಥನೆ ಮಾಡಬೇಕೆಂದು ಮತ್ತು ನಮ್ಮ ಭಾವನೆಗಳನ್ನು ಹೇಳಿಕೊಳ್ಳಬೇಕೆಂದು ಸ್ವತಃ ಆತನೇ ಹೇಳಿದ್ದಾನೆ. (ಕೀರ್ತ. 50:15; 62:8) “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು” ಎಂದು ಜ್ಞಾನೋಕ್ತಿ 3:5 ನಮ್ಮನ್ನು ಪ್ರೋತ್ಸಾಹಿಸುತ್ತದೆ. ಈ ಮಾತುಗಳನ್ನು ಹಬಕ್ಕೂಕನು ತನ್ನ ಜೀವನದಲ್ಲಿ ಅನ್ವಯಿಸಿಕೊಂಡನು.

6. ಪ್ರಾರ್ಥನೆ ಮಾಡುವುದು ಯಾಕೆ ಪ್ರಾಮುಖ್ಯ?

6 ಹಬಕ್ಕೂಕನು ತನ್ನ ತಂದೆಯೂ ಸ್ನೇಹಿತನೂ ಆಗಿದ್ದ ಯೆಹೋವನನ್ನು ನಂಬಿದನು. ಆತನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಅವನೇ ಮೊದಲ ಹೆಜ್ಜೆ ತಗೊಂಡನು. ಹಬಕ್ಕೂಕನು ತನ್ನ ಪರಿಸ್ಥಿತಿಯ ಬಗ್ಗೆ ಮೂರು ಹೊತ್ತು ಚಿಂತೆ ಮಾಡುತ್ತಾ ಕೂರಲಿಲ್ಲ ಅಥವಾ ತಾನೇ ಎಲ್ಲ ಸರಿಮಾಡುವುದಕ್ಕೆ ಹೋಗಲಿಲ್ಲ. ಬದಲಿಗೆ ತನ್ನ ಅನಿಸಿಕೆಗಳನ್ನು, ಚಿಂತೆಗಳನ್ನು ಯೆಹೋವನಿಗೆ ಹೇಳಿಕೊಂಡನು. ಇದು ನಮಗೆ ಒಳ್ಳೇ ಮಾದರಿಯಾಗಿದೆ. ಯೆಹೋವನು ಪ್ರಾರ್ಥನೆಗಳನ್ನು ಕೇಳುವವನಾಗಿದ್ದಾನೆ. ಆತನಿಗೆ ನಾವು ಪ್ರಾರ್ಥಿಸುವ ಮೂಲಕ ಮತ್ತು ನಮ್ಮ ಚಿಂತೆಗಳನ್ನೆಲ್ಲ ಹೇಳಿಕೊಳ್ಳುವ ಮೂಲಕ ಆತನಲ್ಲಿ ಭರವಸೆಯನ್ನು ಇಟ್ಟಿದ್ದೇವೆಂದು ತೋರಿಸುತ್ತೇವೆ. (ಕೀರ್ತ. 65:2) ನಾವು ಇದನ್ನು ಮಾಡಿದಾಗ ನಮ್ಮ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ಉತ್ತರ ಕೊಡುತ್ತಾನೆ ಎಂದು ತಿಳುಕೊಳ್ಳಬಹುದು. ಆತನು ನಮ್ಮನ್ನು ಸಂತೈಸಿ ಮಾರ್ಗದರ್ಶಿಸುವಾಗ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡಿರುವಂತೆ ಅನಿಸುತ್ತದೆ. (ಕೀರ್ತ. 73:23, 24) ನಾವು ಯಾವುದೇ ಕಷ್ಟವನ್ನು ಅನುಭವಿಸುತ್ತಿದ್ದರೂ ನಮ್ಮ ಪರಿಸ್ಥಿತಿಯ ಬಗ್ಗೆ ಆತನಿಗೆ ಹೇಗನಿಸುತ್ತದೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾನೆ. ನಾವು ಯೆಹೋವನಲ್ಲಿ ಭರವಸೆ ಇಟ್ಟಿದ್ದೇವೆ ಎಂದು ತೋರಿಸಿಕೊಡುವ ಒಂದು ಅತ್ಯುತ್ತಮ ವಿಧ ಆತನಿಗೆ ಪ್ರಾರ್ಥನೆ ಮಾಡುವುದೇ ಆಗಿದೆ.

ಯೆಹೋವನ ಮಾತನ್ನು ಕೇಳಿಸಿಕೊಳ್ಳಿ

7. ಹಬಕ್ಕೂಕನು ತನ್ನ ಚಿಂತೆಯನ್ನೆಲ್ಲ ಹೇಳಿಕೊಂಡಾಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

7 ಹಬಕ್ಕೂಕ 1:5-7 ಓದಿ. ಹಬಕ್ಕೂಕನು ತನ್ನ ಚಿಂತೆಯನ್ನೆಲ್ಲ ಹೇಳಿಕೊಂಡ ಮೇಲೆ ಅದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ಯೋಚಿಸಿರಬಹುದು. ಒಬ್ಬ ಪ್ರೀತಿಯ ತಂದೆಯಂತೆ ಯೆಹೋವನು ಹಬಕ್ಕೂಕನನ್ನು ಅರ್ಥಮಾಡಿಕೊಂಡನು. ಅವನಿಗೆ ಕಷ್ಟ ಇದೆ, ಸಹಾಯಕ್ಕಾಗಿ ಬೇಡುತ್ತಿದ್ದಾನೆ ಎಂದು ಯೆಹೋವನಿಗೆ ಗೊತ್ತಿತ್ತು. ಆದ್ದರಿಂದ ಆತನು ಹಬಕ್ಕೂಕನನ್ನು ಗದರಿಸಲಿಲ್ಲ ಬದಲಿಗೆ ಅಪನಂಬಿಗಸ್ತರಾದ ಯೆಹೂದಿಗಳಿಗೆ ತಾನು ಏನು ಮಾಡಲಿದ್ದೇನೆ ಎಂದು ಹೇಳಿದನು. ಬಹುಶಃ ತಾನು ಅವರಿಗೆ ಆದಷ್ಟು ಬೇಗ ಶಿಕ್ಷೆ ಕೊಡುತ್ತೇನೆಂದು ಯೆಹೋವನು ಮೊದಮೊದಲು ಹೇಳಿದ್ದು ಹಬಕ್ಕೂಕನಿಗೇ ಇರಬಹುದು.

8. ಯೆಹೋವನು ಕೊಟ್ಟ ಉತ್ತರವನ್ನು ಹಬಕ್ಕೂಕನು ಯಾಕೆ ನಿರೀಕ್ಷಿಸಲಿಲ್ಲ?

8 ಎಲ್ಲ ಸರಿಮಾಡುವುದಕ್ಕೆ ತಾನು ಸಿದ್ಧನಿದ್ದೇನೆ ಎಂದು ಯೆಹೋವನು ಹಬಕ್ಕೂಕನಿಗೆ ವಿವರಿಸಿದನು. ದುಷ್ಟರೂ ದುರುಳರೂ ಆದ ಯೆಹೂದ್ಯರಿಗೆ ಆತನು ಶಿಕ್ಷೆ ಕೊಡಲಿದ್ದನು. “ನಿಮ್ಮ ಕಾಲದಲ್ಲಿ” ಇದು ನಡೆಯಲಿದೆ ಎಂದು ಹೇಳುವ ಮೂಲಕ ಈ ನ್ಯಾಯತೀರ್ಪು ಹಬಕ್ಕೂಕನು ಅಥವಾ ಅವನ ಸುತ್ತಮುತ್ತ ಇರುವ ಯೆಹೂದ್ಯರು ಬದುಕಿರುವ ಸಮಯದಲ್ಲೇ ಸಂಭವಿಸಲಿದೆ ಎಂದು ಯೆಹೋವನು ತೋರಿಸಿಕೊಟ್ಟನು. ಆದರೆ ಹಬಕ್ಕೂಕನು ಯೆಹೋವನಿಂದ ಈ ಉತ್ತರವನ್ನು ಖಂಡಿತ ನಿರೀಕ್ಷಿಸಲಿಲ್ಲ. ಕಸ್ದೀಯರು ಅಥವಾ ಬಾಬೆಲಿನವರು ಮಹಾ ಕ್ರೂರಿಗಳಾಗಿದ್ದರು. ಅವರು ಯೆಹೂದ್ಯರಿಗಿಂತ ದುಷ್ಟ ಜನರಾಗಿದ್ದರು. ಯೆಹೂದ್ಯರಿಗೆ ಕಡಿಮೆಪಕ್ಷ ಯೆಹೋವನ ಮಟ್ಟಗಳ ಬಗ್ಗೆ ಗೊತ್ತಿತ್ತು. ತನ್ನ ಜನರಿಗೆ ಶಿಕ್ಷೆ ಕೊಡುವುದಕ್ಕೆ ಯೆಹೋವನು ಬೇರೆ ದೇವರುಗಳನ್ನು ಆರಾಧಿಸುತ್ತಿದ್ದ ಈ ಕ್ರೂರ ಜನಾಂಗವನ್ನು ಯಾಕೆ ಉಪಯೋಗಿಸಿದನು? ಯೆಹೂದ್ಯರಿಗೆ ಇದರಿಂದ ತುಂಬ ಕಷ್ಟ ಆಗಲಿತ್ತು. * ನೀವು ಹಬಕ್ಕೂಕನ ಸ್ಥಾನದಲ್ಲಿ ಇದ್ದಿದ್ದರೆ ನಿಮಗೆ ಹೇಗನಿಸುತ್ತಿತ್ತು?

9. ಹಬಕ್ಕೂಕನು ಇನ್ನು ಯಾವ ಪ್ರಶ್ನೆಗಳನ್ನು ಕೇಳಿದನು?

9 ಹಬಕ್ಕೂಕ 1:12-14, 17 ಓದಿ. ತನ್ನ ಸುತ್ತಮುತ್ತ ಇದ್ದ ದುಷ್ಟ ಜನರಿಗೆ ಶಿಕ್ಷೆ ಕೊಡಲು ಯೆಹೋವನು ಬಾಬೆಲಿನವರನ್ನು ಉಪಯೋಗಿಸಲಿದ್ದಾನೆ ಎಂದು ಹಬಕ್ಕೂಕನು ಅರ್ಥಮಾಡಿಕೊಂಡ ಮೇಲೂ ಅವನಿಗೆ ಗಲಿಬಿಲಿ ಇತ್ತು. ಆದರೆ ಅವನು ದೀನನಾಗಿದ್ದನು ಮತ್ತು ಯೆಹೋವನಲ್ಲಿ ಯಾವತ್ತಿಗೂ ಭರವಸೆಯನ್ನು ಕಳಕೊಳ್ಳದೇ ಇರಲು ದೃಢತೀರ್ಮಾನ ಮಾಡಿದ್ದನು. ಯೆಹೋವನು ಯಾವಾಗಲೂ ತನಗೆ ‘ಶರಣನು’ ಅಥವಾ ‘ಆಶ್ರಯಗಿರಿ’ ಆಗಿದ್ದಾನೆ ಎಂದು ಹೇಳಿದನು. (ಧರ್ಮೋ. 32:4; ಯೆಶಾ. 26:4) ದೇವರು ಪ್ರೀತಿಸ್ವರೂಪನು, ದಯಾಪರನು ಆಗಿದ್ದಾನೆ ಎಂದು ಹಬಕ್ಕೂಕನಿಗೆ ಭರವಸೆ ಇದ್ದದರಿಂದ ಯೆಹೋವನಿಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಲು ಹಿಂಜರಿಯಲಿಲ್ಲ. ‘ಯೂದಾಯದಲ್ಲಿ ಪರಿಸ್ಥಿತಿ ಇಷ್ಟೊಂದು ಹದಗೆಡುವುದಕ್ಕೆ ಯಾಕೆ ಬಿಟ್ಟೆ? ತಕ್ಷಣ ಯಾಕೆ ಸರಿಮಾಡಲಿಲ್ಲ? ಸರ್ವಶಕ್ತನಾದ ನೀನು ಎಲ್ಲ ಕಡೆ ನಡೆಯುತ್ತಿರುವ ದುಷ್ಟತನವನ್ನು ನೋಡಿಯೂ ಯಾಕೆ ಸುಮ್ಮನಿದ್ದೀಯಾ? “ಕೇಡನ್ನು ನೋಡಲಾರದ ಅತಿಪವಿತ್ರದೃಷ್ಟಿಯುಳ್ಳವನು” ನೀನಲ್ಲವೇ?’ ಎಂಬ ಪ್ರಶ್ನೆಗಳನ್ನು ಕೇಳಿದನು.

10. ಕೆಲವೊಮ್ಮೆ ನಾವು ಹಬಕ್ಕೂಕನ ತರ ಯಾಕೆ ಯೋಚಿಸಬಹುದು?

10 ನಾವೂ ಕೆಲವೊಮ್ಮೆ ಹಬಕ್ಕೂಕನ ತರ ಯೋಚಿಸಬಹುದು. ನಾವು ಯೆಹೋವನ ಮಾತನ್ನು ಕೇಳಿಸಿಕೊಳ್ಳುತ್ತೇವೆ. ಆತನಲ್ಲಿ ಭರವಸೆ ಇಡುತ್ತೇವೆ ಮತ್ತು ಆತನ ವಾಕ್ಯವನ್ನು ಓದಿ, ಧ್ಯಾನಿಸಿ ನಮ್ಮ ನಿರೀಕ್ಷೆಯನ್ನು ಬಲಪಡಿಸಿಕೊಳ್ಳುತ್ತೇವೆ. ಆತನ ಸಂಘಟನೆ ಯೆಹೋವನು ಮಾಡಿರುವ ವಾಗ್ದಾನಗಳ ಬಗ್ಗೆ ವಿವರಿಸುವಾಗ ಹೆಚ್ಚಿನ ಮಾಹಿತಿ ಪಡಕೊಳ್ಳುತ್ತೇವೆ. ಆದರೂ ‘ನಮ್ಮ ಕಷ್ಟಗಳಿಗೆಲ್ಲ ಕೊನೆ ಯಾವಾಗ?’ ಎಂಬ ಪ್ರಶ್ನೆ ಬರಬಹುದು. ಹಬಕ್ಕೂಕನು ನಂತರ ಮಾಡಿದ ವಿಷಯದಿಂದ ನಾವೇನು ಕಲಿಯಬಹುದೆಂದು ನೋಡೋಣ.

ಯೆಹೋವನು ಸರಿಮಾಡುವ ವರೆಗೂ ಕಾಯಿರಿ

11. ಹಬಕ್ಕೂಕನು ಯಾವ ದೃಢತೀರ್ಮಾನ ಮಾಡಿದನು?

11 ಹಬಕ್ಕೂಕ 2:1 ಓದಿ. ಯೆಹೋವನೊಟ್ಟಿಗೆ ಮಾಡಿದ ಸಂಭಾಷಣೆಯಿಂದ ಹಬಕ್ಕೂಕನಿಗೆ ಮನಶ್ಶಾಂತಿ ಸಿಕ್ಕಿತು. ಯೆಹೋವನು ಎಲ್ಲವನ್ನೂ ಸರಿಮಾಡುವ ವರೆಗೂ ಕಾಯಬೇಕು ಎಂಬ ದೃಢತೀರ್ಮಾನ ಮಾಡಿದನು. ಆದರೆ ಈ ದೃಢಸಂಕಲ್ಪ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಯಾಕೆಂದರೆ ‘ನಾನು ವಿಪತ್ಕಾಲಕ್ಕಾಗಿ ತಾಳ್ಮೆಯಿಂದ ಕಾಯಬೇಕು’ ಎಂದು ಮತ್ತೊಮ್ಮೆ ಹೇಳಿದನು. (ಹಬ. 3:16) ಬೇರೆ ನಂಬಿಗಸ್ತ ಸೇವಕರು ಸಹ ಯೆಹೋವನಿಗಾಗಿ ತಾಳ್ಮೆಯಿಂದ ಕಾದರು. ನಾವು ಸಹ ತಾಳ್ಮೆಯಿಂದ ಕಾಯಬೇಕೆಂದು ಅವರ ಉದಾಹರಣೆಯಿಂದ ಕಲಿಯುತ್ತೇವೆ.—ಮೀಕ 7:7; ಯಾಕೋ. 5:7, 8

12. ಹಬಕ್ಕೂಕನಿಂದ ನಾವೇನು ಕಲಿಯಬಹುದು?

12 ಹಬಕ್ಕೂಕನು ಮಾಡಿದ ದೃಢತೀರ್ಮಾನದಿಂದ ನಾವೇನು ಕಲಿಯಬಹುದು? ಮೊದಲನೇದಾಗಿ, ನಮಗೇನೇ ಸಮಸ್ಯೆ ಇದ್ದರೂ ಯೆಹೋವನಿಗೆ ಪ್ರಾರ್ಥನೆ ಮಾಡುವುದನ್ನು ಯಾವತ್ತೂ ನಿಲ್ಲಿಸಬಾರದು. ಎರಡನೇದಾಗಿ, ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ನಮಗೆ ಏನು ಹೇಳುತ್ತಾನೋ ಅದನ್ನು ನಾವು ಕೇಳಿಸಿಕೊಳ್ಳಬೇಕು. ಮೂರನೇದಾಗಿ, ಯೆಹೋವನು ಎಲ್ಲಾ ಸರಿಮಾಡುವ ವರೆಗೂ ನಾವು ತಾಳ್ಮೆಯಿಂದ ಕಾಯಬೇಕು ಮತ್ತು ಆತನಿಗೆ ಸರಿ ಅನಿಸುವ ಸಮಯದಲ್ಲಿ ನಮ್ಮ ಕಷ್ಟಗಳನ್ನೆಲ್ಲ ತೆಗೆದುಹಾಕುತ್ತಾನೆ ಎಂದು ನಂಬಬೇಕು. ಈ ನಿರೀಕ್ಷೆ ನಾವು ತಾಳ್ಮೆಯಿಂದ, ಸಂತೋಷದಿಂದ ಇರಲು ಸಹಾಯ ಮಾಡುತ್ತದೆ. ಯಾವುದೇ ಸಮಸ್ಯೆ ಇದ್ದರೂ ನಾವು ಹಬಕ್ಕೂಕನಂತಿದ್ದರೆ ಮನಶ್ಶಾಂತಿ ಇರುತ್ತದೆ ಮತ್ತು ಅದನ್ನು ತಾಳಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಸ್ವರ್ಗೀಯ ತಂದೆ ಎಲ್ಲ ಸರಿಮಾಡುತ್ತಾನೆ ಎಂಬ ಭರವಸೆ ನಮಗಿದೆ.—ರೋಮ. 12:12.

13. ಯೆಹೋವನು ಹಬಕ್ಕೂಕನನ್ನು ಹೇಗೆ ಸಂತೈಸಿದನು?

13 ಹಬಕ್ಕೂಕ 2:3 ಓದಿ. ಪರಿಸ್ಥಿತಿಯನ್ನು ಯೆಹೋವ ದೇವರು ಸರಿಮಾಡುವ ವರೆಗೂ ಕಾಯಬೇಕು ಎಂದು ಹಬಕ್ಕೂಕನು ಮಾಡಿದ ನಿರ್ಣಯ ಯೆಹೋವನಿಗೆ ಖಂಡಿತ ಸಂತೋಷ ತಂದಿರುತ್ತದೆ. ಹಬಕ್ಕೂಕನ ಕಷ್ಟಗಳೆಲ್ಲ ಸರ್ವಶಕ್ತನಾದ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಆ ಪ್ರವಾದಿಯನ್ನು ಸಂತೈಸಿದನು ಮತ್ತು ಅವನ ಮನಸ್ಸಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆಂದು ಪ್ರೀತಿಯಿಂದ ಆಶ್ವಾಸನೆ ಕೊಟ್ಟನು. ಹಬಕ್ಕೂಕನ ಚಿಂತೆಗಳೆಲ್ಲಾ ಬೇಗ ಮಾಯ ಆಗಲಿದ್ದವು. ಯೆಹೋವನು ಹಬಕ್ಕೂಕನಿಗೆ ಹೀಗೆ ಹೇಳಿದಂತಿತ್ತು: “ತಾಳ್ಮೆಯಿಂದಿರು, ನನ್ನನ್ನು ನಂಬು. ಸ್ವಲ್ಪ ತಡವಾಗುವಂತೆ ತೋರಿದರೂ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಟ್ಟೇ ಕೊಡುತ್ತೇನೆ.” ತಾನು ಮಾಡಿರುವ ವಾಗ್ದಾನವನ್ನು ಯಾವಾಗ ನೆರವೇರಿಸಬೇಕೆಂದು ಈಗಾಗಲೇ ನಿರ್ಧಾರ ಮಾಡಿದ್ದೇನೆ ಎಂದು ಯೆಹೋವನು ಹಬಕ್ಕೂಕನಿಗೆ ತಿಳಿಸಿದನು. ಹೀಗೆ ಹಬಕ್ಕೂಕನು ತಾಳ್ಮೆಯಿಂದ ಕಾಯುವಂತೆ ಉತ್ತೇಜಿಸಿದನು. ಕೊನೆಯಲ್ಲಿ ಆ ಪ್ರವಾದಿಗೆ ನಿರಾಶೆ ಆಗಲಿಲ್ಲ.

ಯೆಹೋವನಿಗೆ ನಮ್ಮಿಂದಾದಷ್ಟು ಸೇವೆಯನ್ನು ಮಾಡಬೇಕು ಎಂದು ನಾವು ಯಾಕೆ ದೃಢತೀರ್ಮಾನ ಮಾಡಿದ್ದೇವೆ? (ಪ್ಯಾರ 14 ನೋಡಿ)

14. ನಾವು ಕಷ್ಟಗಳನ್ನು ಅನುಭವಿಸುವಾಗ ನಮ್ಮ ದೃಢತೀರ್ಮಾನ ಏನಾಗಿರಬೇಕು?

14 ನಾವು ಸಹ ಯೆಹೋವನು ಎಲ್ಲಾ ಸರಿಮಾಡುವ ವರೆಗೂ ಕಾಯಬೇಕು. ಆತನು ಏನು ಹೇಳುತ್ತಾನೋ ಅದನ್ನು ಗಮನಕೊಟ್ಟು ಕೇಳಿಸಿಕೊಳ್ಳಬೇಕು. ಆಗ ನಾವು ಆತನಲ್ಲಿ ಭರವಸೆ ಇಡುತ್ತೇವೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ಸಮಾಧಾನದಿಂದ ಇರುತ್ತೇವೆ. ದೇವರು ನಮಗೆ ತಿಳಿಸಿರದ “ಸಮಯಗಳ ಅಥವಾ ಕಾಲಗಳ” ಬಗ್ಗೆ ಯೋಚಿಸುವುದು ಬೇಡ ಎಂದು ಯೇಸು ನಮಗೆ ಉತ್ತೇಜಿಸಿದ್ದಾನೆ. (ಅ. ಕಾ. 1:7) ಪರಿಸ್ಥಿತಿಯನ್ನು ಯಾವಾಗ ಸರಿಮಾಡಬೇಕು ಎಂದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ ಎಂದು ನಾವು ನಂಬಬೇಕು. ಆದ್ದರಿಂದ ನಾವು ಕೈಚೆಲ್ಲಿ ಕೂರಬಾರದು ಬದಲಿಗೆ ದೀನರಾಗಿರಬೇಕು ಮತ್ತು ದೇವರಲ್ಲಿ ನಂಬಿಕೆ ಇಡಬೇಕು. ಹೀಗೆ ಕಾಯುವಾಗ ನಮಗಿರುವ ಸಮಯವನ್ನು ಜಾಣ್ಮೆಯಿಂದ ಬಳಸಬೇಕು ಮತ್ತು ಯೆಹೋವನಿಗೆ ನಮ್ಮಿಂದಾದಷ್ಟು ಹೆಚ್ಚು ಸೇವೆ ಮಾಡಬೇಕು.—ಮಾರ್ಕ 13:35-37; ಗಲಾ. 6:9.

ಯೆಹೋವನಲ್ಲಿ ಭರವಸೆ ಇಡಿ, ಸದಾಕಾಲ ಜೀವಿಸಿ!

15, 16. (ಎ) ಹಬಕ್ಕೂಕ ಪುಸ್ತಕದಲ್ಲಿ ನಾವು ಯಾವ ವಾಗ್ದಾನಗಳನ್ನು ನೋಡುತ್ತೇವೆ? (ಬಿ) ಈ ವಾಗ್ದಾನಗಳು ನಮಗೇನನ್ನು ಕಲಿಸುತ್ತವೆ?

15 “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು” ಮತ್ತು “ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವದು” ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಹಬ. 2:4, 14) ಯಾರು ತಾಳ್ಮೆಯಿಂದ ಇರುತ್ತಾರೋ, ತನ್ನಲ್ಲಿ ಭರವಸೆ ಇಡುತ್ತಾರೋ ಅಂಥವರಿಗೆ ಶಾಶ್ವತವಾಗಿ ಬದುಕುವ ಅವಕಾಶ ಕೊಡುತ್ತೇನೆಂದು ಯೆಹೋವನು ಮಾತು ಕೊಟ್ಟಿದ್ದಾನೆ.

16 ಹಬಕ್ಕೂಕ 2:4​ರಲ್ಲಿರುವ ಮಾತು ಎಷ್ಟು ಪ್ರಾಮುಖ್ಯವಾಗಿದೆ ಅಂದರೆ ಅದನ್ನು ಅಪೊಸ್ತಲ ಪೌಲನು ತನ್ನ ಪತ್ರಗಳಲ್ಲಿ ಮೂರು ಸಲ ಉಲ್ಲೇಖಿಸಿದ್ದಾನೆ! (ರೋಮ. 1:17; ಗಲಾ. 3:11; ಇಬ್ರಿ. 10:38) ನಾವು ಯೆಹೋವನಲ್ಲಿ ನಂಬಿಕೆ ಇಟ್ಟರೆ ನಮಗೆ ಏನೇ ಕಷ್ಟಗಳಿದ್ದರೂ ಆತನು ಮಾಡಿರುವ ವಾಗ್ದಾನ ನಿಜವಾಗುವುದನ್ನು ನೋಡೇ ನೋಡುತ್ತೇವೆ. ಮುಂದೆ ನಡೆಯುವ ವಿಷಯಗಳ ಕಡೆಗೆ ನಮ್ಮ ಗಮನ ಇರಬೇಕೆಂದು ಯೆಹೋವನು ಬಯಸುತ್ತಾನೆ.

17. ನಾವು ಯೆಹೋವನಲ್ಲಿ ಭರವಸೆ ಇಟ್ಟರೆ ನಮಗೆ ಯಾವ ಆಶ್ವಾಸನೆ ಸಿಗುತ್ತದೆ?

17 ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ನಮ್ಮೆಲ್ಲರಿಗೆ ಹಬಕ್ಕೂಕ ಪುಸ್ತಕದಲ್ಲಿ ಒಂದು ಪ್ರಾಮುಖ್ಯ ಪಾಠವಿದೆ. ತನ್ನಲ್ಲಿ ಭರವಸೆ ಇಡುವ ಪ್ರತಿಯೊಬ್ಬ ನೀತಿವಂತನಿಗೂ ಶಾಶ್ವತವಾದ ಬದುಕನ್ನು ಕೊಡುತ್ತೇನೆಂದು ಯೆಹೋವನು ಮಾತು ಕೊಟ್ಟಿದ್ದಾನೆ. ಆದ್ದರಿಂದ ನಮಗೆ ಯಾವುದೇ ಚಿಂತೆ, ಸಮಸ್ಯೆ ಇದ್ದರೂ ದೇವರಲ್ಲಿ ನಾವಿಟ್ಟಿರುವ ಭರವಸೆಯನ್ನು ಬಲಪಡಿಸುತ್ತಾ ಇರೋಣ. ಯೆಹೋವನು ನಮಗೆ ಖಂಡಿತ ಸಹಾಯ ಮಾಡುತ್ತಾನೆ ಮತ್ತು ಕಾಪಾಡುತ್ತಾನೆ ಎಂಬ ಆಶ್ವಾಸನೆ ಹಬಕ್ಕೂಕನಿಗೆ ಆತನು ಹೇಳಿದ ಮಾತುಗಳಿಂದ ಸಿಗುತ್ತದೆ. ತನ್ನಲ್ಲಿ ಭರವಸೆ ಇಡುವಂತೆ ಮತ್ತು ತನ್ನ ರಾಜ್ಯ ಭೂಮಿಯನ್ನು ಆಳುವ ಸಮಯಕ್ಕಾಗಿ ಕಾಯುವಂತೆ ಆತನು ನಮ್ಮನ್ನು ಕೇಳಿಕೊಳ್ಳುತ್ತಿದ್ದಾನೆ. ಆಗ ಎಲ್ಲೆಲ್ಲೂ ಆತನನ್ನು ಆರಾಧಿಸುವ ಜನರೇ ಇರುತ್ತಾರೆ. ಸಂತೋಷ-ಶಾಂತಿ ತುಂಬಿತುಳುಕುತ್ತದೆ.—ಮತ್ತಾ. 5:5; ಇಬ್ರಿ. 10:36-39.

ಯೆಹೋವನಲ್ಲಿ ಭರವಸೆ ಇಡಿ, ಸಂತೋಷವಾಗಿರಿ

18. ಯೆಹೋವನ ಮಾತುಗಳು ಹಬಕ್ಕೂಕನ ಮೇಲೆ ಹೇಗೆ ಪ್ರಭಾವ ಬೀರಿದವು?

18 ಹಬಕ್ಕೂಕ 3:16-19 ಓದಿ. ಯೆಹೋವನು ಏನು ಹೇಳಿದನೋ ಅದು ಹಬಕ್ಕೂಕನ ಮೇಲೆ ತುಂಬ ಪ್ರಭಾವ ಬೀರಿತು. ಹಿಂದೆ ಯೆಹೋವನು ತನ್ನ ಜನರಿಗಾಗಿ ಮಾಡಿದ ಅದ್ಭುತ ಕಾರ್ಯಗಳ ಬಗ್ಗೆ ಅವನು ಧ್ಯಾನಿಸಿದನು. ಆಗ ಯೆಹೋವನಲ್ಲಿ ಅವನಿಟ್ಟಿದ್ದ ಭರವಸೆ ಇನ್ನೂ ದೃಢವಾಯಿತು. ಯೆಹೋವನು ಆದಷ್ಟು ಬೇಗ ಪರಿಸ್ಥಿತಿಯನ್ನು ಸರಿಮಾಡುತ್ತಾನೆ ಅನ್ನುವುದು ಅವನಿಗೆ ಖಚಿತವಾಯಿತು. ಸ್ವಲ್ಪ ಸಮಯ ಕಷ್ಟಪಡಬೇಕು ಅಂತ ಗೊತ್ತಿದ್ದರೂ ಈ ವಿಷಯದಿಂದ ಆ ಪ್ರವಾದಿಗೆ ಸಾಂತ್ವನ ಸಿಕ್ಕಿತು. ಹಬಕ್ಕೂಕನಿಗೆ ಇನ್ನು ಯಾವ ಸಂಶಯವೂ ಇರಲಿಲ್ಲ. ಬದಲಿಗೆ ಯೆಹೋವನು ತನ್ನನ್ನು ಕಾಪಾಡುತ್ತಾನೆ ಎಂಬ ಪೂರ್ಣ ನಂಬಿಕೆ ಇತ್ತು. ಅವನು 18​ನೇ ವಚನದಲ್ಲಿ ಹೇಳಿದ ಮಾತುಗಳಿಂದ ಅವನಿಗೆಷ್ಟು ಭರವಸೆ ಇತ್ತೆಂದು ಗೊತ್ತಾಗುತ್ತದೆ. ಭರವಸೆಯ ಬಗ್ಗೆ ಬೈಬಲಲ್ಲಿರುವ ಅಭಿವ್ಯಕ್ತಿಗಳಲ್ಲಿ ಇದೂ ಒಂದು ಅಂತ ಹೇಳಬಹುದು. ಕೆಲವು ವಿದ್ವಾಂಸರು ಅದರ ಅರ್ಥವನ್ನು ಹೀಗೆ ಹೇಳುತ್ತಾರೆ: “ನಾನು ಕರ್ತನಲ್ಲಿ ಸಂತೋಷದಿಂದ ಕುಣಿದಾಡುವೆನು, ದೇವರಲ್ಲಿ ಆನಂದದಿಂದ ನಲಿದಾಡುವೆನು.” ನಮ್ಮೆಲ್ಲರಿಗೆ ಎಂಥ ಬಲವಾದ ಪಾಠ ಇದರಲ್ಲಿದೆ! ಯೆಹೋವನು ತಾನು ಭವಿಷ್ಯದಲ್ಲಿ ಅದ್ಭುತಕರವಾದ ವಿಷಯಗಳನ್ನು ಮಾಡುತ್ತೇನೆಂದಷ್ಟೇ ಹೇಳಲಿಲ್ಲ ಬದಲಿಗೆ ಆ ಎಲ್ಲ ವಿಷಯಗಳನ್ನು ತುಂಬ ಬೇಗ ನೆರವೇರಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದಾನೆ.

19. ಹಬಕ್ಕೂಕನಿಗೆ ಸಿಕ್ಕಿದಂತೆ ನಮಗೂ ಯೆಹೋವನಿಂದ ಹೇಗೆ ಸಾಂತ್ವನ ಸಿಗುತ್ತದೆ?

19 ನಾವು ಯೆಹೋವನಲ್ಲಿ ಭರವಸೆ ಇಡಬೇಕು. ಇದು ನಾವು ಹಬಕ್ಕೂಕ ಪುಸ್ತಕದಿಂದ ಕಲಿಯುವ ಪ್ರಾಮುಖ್ಯ ಪಾಠ. (ಹಬ. 2:4) ಯೆಹೋವನಲ್ಲಿ ಭರವಸೆ ಬೆಳೆಸಿಕೊಂಡು ಉಳಿಸಿಕೊಳ್ಳಬೇಕಾದರೆ ಆತನೊಟ್ಟಿಗೆ ನಮಗಿರುವ ಸಂಬಂಧವನ್ನು ಬಲಪಡಿಸುತ್ತಾ ಇರಬೇಕು. ಅದಕ್ಕಾಗಿ ಈ ಮೂರು ವಿಷಯಗಳನ್ನು ಮಾಡೋಣ. (1) ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇರೋಣ, ನಮ್ಮೆಲ್ಲ ಚಿಂತೆಗಳನ್ನು, ಅನಿಸಿಕೆಗಳನ್ನು ಆತನಿಗೆ ಹೇಳಿಕೊಳ್ಳೋಣ. (2) ತನ್ನ ವಾಕ್ಯದ ಮೂಲಕ ಯೆಹೋವನು ಹೇಳುವ ಮಾತುಗಳನ್ನು ಕೇಳೋಣ ಮತ್ತು ಸಂಘಟನೆಯ ಮೂಲಕ ಆತನು ಕೊಡುವ ಮಾರ್ಗದರ್ಶನವನ್ನು ಪಾಲಿಸೋಣ. (3) ಯೆಹೋವನು ಮಾಡಿರುವ ವಾಗ್ದಾನಗಳು ನೆರವೇರುವುದಕ್ಕಾಗಿ ನಾವು ಕಾಯುತ್ತಿರುವ ಈ ಸಮಯದಲ್ಲಿ ನಂಬಿಗಸ್ತರಾಗಿರೋಣ ಮತ್ತು ತಾಳ್ಮೆಯಿಂದಿರೋಣ. ಇವನ್ನೇ ಹಬಕ್ಕೂಕನೂ ಮಾಡಿದನು. ಯೆಹೋವನೊಟ್ಟಿಗೆ ಮಾತಾಡಲು ಆರಂಭಿಸಿದಾಗ ಅವನು ತುಂಬ ದುಃಖದಲ್ಲಿದ್ದರೂ ಸಂಭಾಷಣೆ ಮುಗಿಯುವಾಗ ಅವನಿಗೆ ಪ್ರೋತ್ಸಾಹ, ಸಂತೋಷ ಸಿಕ್ಕಿತು! ನಾವು ಸಹ ಹಬಕ್ಕೂಕನಂತಿದ್ದರೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂತೈಸುತ್ತಾನೆ. ಈ ದುಷ್ಟ ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ಸಾಂತ್ವನ ನಮಗೆ ಇನ್ನೆಲ್ಲಿ ಸಿಗುತ್ತೆ ಹೇಳಿ?

^ ಪ್ಯಾರ. 8 ಹಬಕ್ಕೂಕ 1:5​ರಲ್ಲಿ “ನಿಮ್ಮ” ಎಂದು ಯೆಹೋವನು ಬಹುವಚನದಲ್ಲಿ ಹೇಳಿದ್ದು ಯೂದಾಯದಲ್ಲಿರುವ ಎಲ್ಲ ಜನರಿಗೂ ನಾಶನದ ಬಿಸಿ ತಟ್ಟುತ್ತದೆ ಅನ್ನುವುದನ್ನು ತೋರಿಸುತ್ತದೆ.