ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ

ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ

ಹೊಸದಾಗಿ ಕ್ರೈಸ್ತನಾದ ಒಬ್ಬ ಶಿಷ್ಯನ ಬಗ್ಗೆ ಮಾತಾಡುತ್ತಾ ಯೇಸು, “ಈ ಮನುಷ್ಯನು ಅನ್ಯಜನಾಂಗಗಳಿಗೂ ಅರಸರಿಗೂ . . . ನನ್ನ ಹೆಸರನ್ನು ತಿಳಿಯಪಡಿಸಲಿಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ” ಎಂದನು. (ಅ. ಕಾ. 9:15) ನಂತರ ಆ ಶಿಷ್ಯನು ಅಪೊಸ್ತಲ ಪೌಲನಾಗಿ ಪ್ರಸಿದ್ಧನಾದನು. ಕ್ರೈಸ್ತನಾಗುವ ಮುಂಚೆ ಅವನು ಒಬ್ಬ ಯೆಹೂದ್ಯನಾಗಿದ್ದನು.

ಒಂದುವೇಳೆ ನಿಮಗೆ ರೋಮನ್‌ ಚಕ್ರವರ್ತಿ ನೀರೊ ತರ ಉನ್ನತ ಸ್ಥಾನದಲ್ಲಿರುವ ಒಬ್ಬ ಅಧಿಕಾರಿಗೆ ಸಾಕ್ಷಿಕೊಡುವ ಸನ್ನಿವೇಶ ಬಂದರೆ ಏನು ಮಾಡುತ್ತೀರಾ? ಈ ವಿಷಯದಲ್ಲಿ ಕ್ರೈಸ್ತರೆಲ್ಲರೂ ಪೌಲನನ್ನು ಅನುಕರಿಸಬೇಕೆಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (1 ಕೊರಿಂ. 11:1) ಪೌಲನಿಗೆ ತನ್ನ ಸಮಯದ ಕಾನೂನಿನ ಪರಿಚಯ ಇತ್ತು. ಅದೇ ರೀತಿ ನಮಗೂ ನಮ್ಮ ದೇಶದ ಕಾನೂನಿನ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕು.

ಮೋಶೆ ಬರೆದ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲ್ಯರು ಪಾಲಿಸಬೇಕಾದ ನಿಮಯಗಳು ಲಿಖಿತವಾಗಿದ್ದವು. ದೇವಭಕ್ತಿಯುಳ್ಳ ಯೆಹೂದ್ಯರು ಎಲ್ಲೇ ಇದ್ದರೂ ಧರ್ಮಶಾಸ್ತ್ರವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಆದರೆ ಕ್ರಿ.ಶ. 33⁠ರ ಪಂಚಾಶತ್ತಮದ ನಂತರ ಸತ್ಯ ದೇವರ ಆರಾಧಕರು ಧರ್ಮಶಾಸ್ತ್ರವನ್ನು ಪಾಲಿಸಬೇಕಾಗಿರಲಿಲ್ಲ. (ಅ. ಕಾ. 15:28, 29; ಗಲಾ. 4:9-11) ಆದರೂ ಪೌಲ ಮತ್ತು ಬೇರೆ ಕ್ರೈಸ್ತರು ಧರ್ಮಶಾಸ್ತ್ರದ ಬಗ್ಗೆ ಅಗೌರವದಿಂದ ಮಾತಾಡಲಿಲ್ಲ. ಇದರಿಂದ ಅವರು ಯೆಹೂದ್ಯರಿದ್ದ ಅನೇಕ ಕಡೆಗಳಲ್ಲಿ ತೊಂದರೆಯಿಲ್ಲದೆ ಸಾಕ್ಷಿಕೊಡಲು ಸಾಧ್ಯವಾಯಿತು. (1 ಕೊರಿಂ. 9:20) ಪೌಲನು ಯೆಹೂದ್ಯರ ಸಭಾಮಂದಿರಗಳಿಗೆ ಹೋಗಿ ಅಬ್ರಹಾಮನ ದೇವರನ್ನು ಆರಾಧಿಸುತ್ತಿದ್ದ ಜನರನ್ನು ಭೇಟಿಮಾಡಿ ಹೀಬ್ರು ಶಾಸ್ತ್ರಗ್ರಂಥದ ಮೇಲಾಧರಿಸಿ ಸಾಕ್ಷಿಕೊಡುತ್ತಿದ್ದನು.—ಅ. ಕಾ. 9:19, 20; 13:5, 14-16; 14:1; 17:1, 2.

ಅಪೊಸ್ತಲರು ಮೊದಲು ಯೆರೂಸಲೇಮಿನಿಂದ ಸಾರುವ ಕೆಲಸವನ್ನು ನಿರ್ದೇಶಿಸಿದರು. ಯೆರೂಸಲೇಮ್‌ ದೇವಾಲಯದಲ್ಲೂ ಕ್ರಮವಾಗಿ ಸಾರುತ್ತಿದ್ದರು. (ಅ. ಕಾ. 1:4; 2:46; 5:20) ಆಗಾಗ ಪೌಲನು ಸಹ ಯೆರೂಸಲೇಮಿಗೆ ಹೋಗುತ್ತಿದ್ದನು. ಕೊನೆಗೆ ಅವನ ದಸ್ತಗಿರಿ ಆದದ್ದೂ ಅಲ್ಲಿಯೇ. ಅವನ ಮೊಕದ್ದಮೆಯ ವಿಚಾರಣೆ ಕೊನೆಗೆ ರೋಮಿನ ಮೆಟ್ಟಿಲೇರಿತು.

ಪೌಲ ಮತ್ತು ರೋಮಿನ ಕಾನೂನು

ಪೌಲನು ಸಾರುತ್ತಿದ್ದ ವಿಷಯಗಳ ಬಗ್ಗೆ ರೋಮಿನ ಅಧಿಕಾರಿಗಳಿಗೆ ಹೇಗನಿಸಿರಬೇಕು? ಅದಕ್ಕೆ ನಾವು ರೋಮಿನವರು ಬೇರೆ ಧರ್ಮಗಳನ್ನು ಹೇಗೆ ನೋಡುತ್ತಿದ್ದರು ಎಂದು ತಿಳಿದುಕೊಳ್ಳಬೇಕು. ಅವರ ದೊಡ್ಡ ಸಾಮ್ರಾಜ್ಯದಲ್ಲಿದ್ದ ಬೇರೆ ಬೇರೆ ಹಿನ್ನೆಲೆ ಸಂಸ್ಕೃತಿಯ ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಬಿಟ್ಟುಬಿಡಬೇಕೆಂದು ಅವರು ಒತ್ತಾಯಿಸಲಿಲ್ಲ. ಆದರೆ ಸರ್ಕಾರಕ್ಕೆ ವಿರುದ್ಧವಾದ ಅಥವಾ ನೀತಿನ್ಯಾಯಕ್ಕೆ ವಿರುದ್ಧವಾದ ವಿಷಯ ನಡೆಯುತ್ತಿದ್ದರೆ ಅವರು ಸುಮ್ಮನೆ ಬಿಡುತ್ತಿರಲಿಲ್ಲ.

ರೋಮಿನವರು ಯೆಹೂದ್ಯರಿಗೆ ತಮ್ಮ ಸಾಮ್ರಾಜ್ಯದಲ್ಲಿ ಹೆಚ್ಚು ಸ್ವಾತಂತ್ರ್ಯ ಕೊಟ್ಟಿದ್ದರು. ಆದಿ ಕ್ರೈಸ್ತತ್ವದ ಹಿನ್ನೆಲೆಗಳು (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವುದು: “ರೋಮ್‌ ಸಾಮ್ರಾಜ್ಯದಲ್ಲಿ ಯೆಹೂದ್ಯರಿಗೆ ಹೆಚ್ಚು ಗೌರವ ಕೊಡಲಾಗುತ್ತಿತ್ತು . . . ಯೆಹೂದ್ಯರು ತಮ್ಮ ಧರ್ಮವನ್ನೇ ಆಚರಿಸಬಹುದಿತ್ತು. ರೋಮಿನ ದೇವ-ದೇವತೆಗಳನ್ನು ಆರಾಧಿಸಬೇಕಾಗಿರಲಿಲ್ಲ. ಯೆಹೂದ್ಯರು ತಮ್ಮ ಮಧ್ಯೆ ಏನು ನಡೀಬೇಕು, ಹೇಗೆ ನಡೀಬೇಕು ಎಂದು ಧರ್ಮಶಾಸ್ತ್ರದ ಆಧಾರದ ಮೇಲೆ ನಿರ್ಧರಿಸಿ ಪಾಲಿಸಬಹುದಿತ್ತು.” ಮಿಲಿಟರಿಗೆ ಸೇರುವ ಅವಶ್ಯಕತೆಯೂ ಇರಲಿಲ್ಲ. * ಈ ಸ್ವಾತಂತ್ರ್ಯದ ಆಧಾರದ ಮೇಲೆ ಪೌಲನು ಕ್ರೈಸ್ತ ಧರ್ಮದ ಬಗ್ಗೆ ರೋಮಿನ ಅಧಿಕಾರಿಗಳ ಮುಂದೆ ಮಾತಾಡಲು ಸಾಧ್ಯವಾಯಿತು.

ಅಪೊಸ್ತಲ ಪೌಲನ ಎದುರಾಳಿಗಳು ಸಾಮಾನ್ಯ ಜನರನ್ನು ಮತ್ತು ಅಧಿಕಾರದಲ್ಲಿದ್ದ ವ್ಯಕ್ತಿಗಳನ್ನು ಅವನಿಗೆ ವಿರುದ್ಧವಾಗಿ ಎತ್ತಿಕಟ್ಟಲು ತುಂಬ ಪ್ರಯತ್ನಿಸಿದರು. (ಅ. ಕಾ. 13:50; 14:2, 19; 18:12, 13) ಇಂಥ ಒಂದು ಸಂದರ್ಭ ಇಲ್ಲಿದೆ. ಪೌಲನು ‘ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ಭ್ರಷ್ಟತೆಯನ್ನು ಬೋಧಿಸುತ್ತಿದ್ದಾನೆ’ ಎಂಬ ಗಾಳಿಸುದ್ದಿ ಯೆಹೂದ್ಯರ ಮಧ್ಯೆ ಹಬ್ಬುತ್ತಿದೆ ಎಂದು ಯೆರೂಸಲೇಮಿನಲ್ಲಿದ್ದ ಕ್ರೈಸ್ತ ಸಭೆಯ ಹಿರಿಯರಿಗೆ ಗೊತ್ತಾಗುತ್ತದೆ. ಇಂಥ ಸುದ್ದಿಗಳು ಹೊಸದಾಗಿ ಕ್ರೈಸ್ತ ಸಭೆಗೆ ಸೇರಿದ ಯೆಹೂದ್ಯರ ಮನಸ್ಸಲ್ಲಿ ಪೌಲನು ದೇವರ ಏರ್ಪಾಡುಗಳನ್ನು ಗೌರವಿಸುವುದಿಲ್ಲ ಎಂಬ ಭಾವನೆಯನ್ನು ಮೂಡಿಸಬಹುದು. ಹಿರೀಸಭೆ ಸಹ ಕ್ರೈಸ್ತ ಸಭೆಯನ್ನು ಯೆಹೂದಿ ಧರ್ಮಕ್ಕೆ ವಿರುದ್ಧವಾದ ಧರ್ಮಭ್ರಷ್ಟತೆ ಎಂದು ತೀರ್ಮಾನಿಸುವ ಅಪಾಯ ಇತ್ತು. ಹೀಗಾದರೆ ಕ್ರೈಸ್ತರೊಂದಿಗೆ ಸಹವಾಸ ಮಾಡುತ್ತಿದ್ದ ಯೆಹೂದ್ಯರಿಗೆ ಶಿಕ್ಷೆಯಾಗುವ ಸಾಧ್ಯತೆ ಇತ್ತು. ಅವರನ್ನು ಬಹಿಷ್ಕಾರ ಮಾಡಿ ದೇವಾಲಯದಲ್ಲಿ ಅಥವಾ ಸಭಾಮಂದಿರಗಳಲ್ಲಿ ಸಾರದಂತೆ ಮಾಡಬಹುದಿತ್ತು. ಈ ಎಲ್ಲಾ ಸುದ್ದಿ ಸುಳ್ಳೆಂದು ರುಜುಪಡಿಸಲು ಪೌಲನು ದೇವಾಲಯಕ್ಕೆ ಹೋಗಿ ಒಂದು ವಿಧಿಬದ್ಧವಾದ ಆಚಾರವನ್ನು ಮಾಡಿ ಬರುವಂತೆ ಸಭೆಯ ಹಿರಿಯರು ಹೇಳಿದರು. ಈ ಆಚಾರವನ್ನು ಕ್ರೈಸ್ತರು ಮಾಡುವ ಅವಶ್ಯಕತೆ ಇಲ್ಲದಿದ್ದರೂ ಇದನ್ನು ಮಾಡುವುದರಲ್ಲಿ ತಪ್ಪೇನಿರಲಿಲ್ಲ.—ಅ. ಕಾ. 21:18-27.

ಹಿರಿಯರು ಹೇಳಿದಂತೆಯೇ ಪೌಲನು ಮಾಡಿದನು. ಇದು ‘ಸುವಾರ್ತೆಯನ್ನು ಸಮರ್ಥಿಸಿ ಕಾನೂನುಬದ್ಧವಾಗಿ ಸ್ಥಾಪಿಸಲು’ ದಾರಿಮಾಡಿಕೊಟ್ಟಿತು. (ಫಿಲಿ. 1:7) ಪೌಲನನ್ನು ದೇವಾಲಯದಲ್ಲಿ ನೋಡಿ ಯೆಹೂದ್ಯರು ಗುಂಪುಗಲಭೆ ಎಬ್ಬಿಸಿದರು, ಅವನನ್ನು ಮುಗಿಸಿಬಿಡಬೇಕೆಂದಿದ್ದರು. ಆಗ ರೋಮಿನ ಮಿಲಿಟರಿ ಅಧಿಕಾರಿ ಪೌಲನನ್ನು ವಶಕ್ಕೆ ತೆಗೆದುಕೊಂಡನು. ಅವನಿಗೆ ಚಡಿ ಏಟು ಕೊಡಲು ಏರ್ಪಾಡು ಮಾಡಿದಾಗ ತಾನೊಬ್ಬ ರೋಮನ್‌ ಪ್ರಜೆ ಎಂದು ಪೌಲನು ಹೇಳಿದನು. ಇದರಿಂದ ಅವನನ್ನು ಕೈಸರೈಯಕ್ಕೆ ಕೊಂಡೊಯ್ದರು. ಏಕೆಂದರೆ ರೋಮಿನವರು ಕೈಸರೈಯದಿಂದ ಯೂದಾಯದ ಮೇಲೆ ಆಡಳಿತ ನಡೆಸುತ್ತಿದ್ದರು. ಇಲ್ಲಿ ಅಪೊಸ್ತಲ ಪೌಲನಿಗೆ ದೊಡ್ಡದೊಡ್ಡ ಅಧಿಕಾರಿಗಳ ಮುಂದೆ ಸಾಕ್ಷಿಕೊಡುವ ಅಪೂರ್ವ ಅವಕಾಶ ಸಿಕ್ಕಿತು. ಅಧಿಕಾರ ಸ್ಥಾನದಲ್ಲಿದ್ದ ವ್ಯಕ್ತಿಗಳು ಕ್ರೈಸ್ತ ಧರ್ಮದ ಬಗ್ಗೆ ಹೆಚ್ಚನ್ನು ತಿಳಿಯಲು ಇದು ಅವಕಾಶ ಮಾಡಿಕೊಟ್ಟಿತು.

ಯೂದಾಯದ ಮೇಲೆ ನೇಮಿಸಲಾಗಿದ್ದ ರೋಮನ್‌ ರಾಜ್ಯಪಾಲ ಫೇಲಿಕ್ಸನ ಮುಂದೆ ಪೌಲನ ವಿಚಾರಣೆ ನಡೆಯಿತೆಂದು ಅಪೊಸ್ತಲರ ಕಾರ್ಯಗಳು 24⁠ನೇ ಅಧ್ಯಾಯ ತಿಳಿಸುತ್ತದೆ. ಕ್ರೈಸ್ತರ ನಂಬಿಕೆಗಳ ಬಗ್ಗೆ ಫೇಲಿಕ್ಸನಿಗೆ ಅಲ್ಪಸ್ವಲ್ಪ ಗೊತ್ತಿತ್ತು. ಮೂರು ವಿಧಗಳಲ್ಲಿ ಪೌಲನು ರೋಮಿನ ಕಾನೂನನ್ನು ಮುರಿದಿದ್ದಾನೆ ಎಂದು ಯೆಹೂದ್ಯರು ಅಪವಾದ ಹಾಕಿದರು. 1. ರೋಮ್‌ ಸಾಮ್ರಾಜ್ಯದಾದ್ಯಂತ ಪೌಲನು ರಾಜದ್ರೋಹವನ್ನು ಪ್ರೇರೇಪಿಸುತ್ತಿದ್ದಾನೆ. 2. ಒಂದು ಅಪಾಯಕಾರಿ ಪಂಥದ ನಾಯಕ ಇವನು. 3. ರೋಮಿನವರು ಬಿಗಿಭದ್ರತೆ ಒದಗಿಸಿದ್ದ ದೇವಾಲಯವನ್ನು ಹೊಲೆಮಾಡಲು ಪ್ರಯತ್ನಿಸುತ್ತಿದ್ದಾನೆ. (ಅ. ಕಾ. 24:5, 6) ಈ ಅಪರಾಧಗಳಿಗೆ ಮರಣ ಶಿಕ್ಷೆಯಾಗುವ ಸಾಧ್ಯತೆ ಇತ್ತು.

ಈ ಅಪವಾದಗಳನ್ನು ಪೌಲನು ಹೇಗೆ ನಿರ್ವಹಿಸಿದನು ಅಂತ ನೋಡುವುದರಿಂದ ಇಂದಿನ ಕ್ರೈಸ್ತರಿಗೆ ಪ್ರಯೋಜನ ಇದೆ. ಅವನು ಪ್ರಶಾಂತವಾಗಿದ್ದು ಗೌರವದಿಂದ ಮಾತಾಡಿದನು. ತಾನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮತ್ತು ಪ್ರವಾದಿಗಳು ಬರೆದಿದ್ದ ವಿಷಯಗಳಿಗೆ ವಿರುದ್ಧವಾಗಿ ನಡೆದಿಲ್ಲ ಎಂದು ಹೇಳಿದನು. ‘ತನ್ನ ಪೂರ್ವಜರ ದೇವರನ್ನು’ ಆರಾಧಿಸುವ ಹಕ್ಕು ತನಗಿದೆ ಎಂದು ತಿಳಿಸಿದನು. ರೋಮಿನ ಸರಕಾರ ಈ ಹಕ್ಕನ್ನು ಎಲ್ಲಾ ಯೆಹೂದ್ಯರಿಗೆ ಕೊಟ್ಟಿತ್ತು. (ಅ. ಕಾ. 24:14) ಸ್ವಲ್ಪ ಸಮಯದ ನಂತರ ಪೌಲನು ಮುಂದಿನ ರಾಜ್ಯಪಾಲನಾದ ಪೋರ್ಕಿಯ ಫೆಸ್ತ ಹಾಗೂ ಹೆರೋದ ಅಗ್ರಿಪ್ಪ ರಾಜನ ಮುಂದೆ ತನ್ನ ನಂಬಿಕೆಯನ್ನು ಸಮರ್ಥಿಸಲು ಸಾಧ್ಯವಾಯಿತು.

ತನಗೆ ನ್ಯಾಯ ಸಿಗಲಿಕ್ಕೋಸ್ಕರ ಕೊನೆಗೆ ಪೌಲನು “ನಾನು ಕೈಸರನಿಗೆ ಮನವಿಮಾಡಿಕೊಳ್ಳುತ್ತೇನೆ!” ಎಂದನು. ಆಗ ಕೈಸರನು ತುಂಬ ಶಕ್ತಿಶಾಲಿ ಅಧಿಕಾರಿಯಾಗಿದ್ದನು.—ಅ. ಕಾ. 25:11.

ಕೈಸರನ ಆಸ್ಥಾನದಲ್ಲಿ ನಡೆದ ಪೌಲನ ವಿಚಾರಣೆ

“ನೀನು ಕೈಸರನ ಮುಂದೆ ನಿಲ್ಲಬೇಕು” ಎಂದು ಒಬ್ಬ ದೇವದೂತನು ಪೌಲನಿಗೆ ಹೇಳಿದನು. (ಅ. ಕಾ. 27:24) ರೋಮಿನ ಚಕ್ರವರ್ತಿ ನೀರೊ ತಾನು ಎಲ್ಲಾ ಮೊಕದ್ದಮೆಗಳನ್ನು ವಿಚಾರಿಸುವುದಿಲ್ಲ ಎಂದು ತನ್ನ ಆಳ್ವಿಕೆಯ ಆರಂಭದಲ್ಲೇ ಹೇಳಿದ್ದನು. ಅವನ ಆಳ್ವಿಕೆಯ ಮೊದಲ 8 ವರ್ಷಗಳ ವರೆಗೆ ಅವನು ಸಾಮಾನ್ಯವಾಗಿ ಮೊಕದ್ದಮೆಗಳ ವಿಚಾರಣೆಯನ್ನು ಬೇರೆಯವರಿಗೆ ಒಪ್ಪಿಸುತ್ತಿದ್ದನು. ಸಂತ ಪೌಲನ ಜೀವನ ಮತ್ತು ಪತ್ರಗಳು (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವಂತೆ, ನೀರೊ ಒಂದು ಮೊಕದ್ದಮೆಯ ವಿಚಾರಣೆ ಮಾಡಲು ಒಪ್ಪಿಕೊಂಡರೆ ಅದನ್ನು ತನ್ನ ಅರಮನೆಯಲ್ಲೇ ಮಾಡುತ್ತಿದ್ದನು. ಅಲ್ಲಿ ಅವನಿಗೆ ಸಹಾಯಮಾಡಲು ತುಂಬ ಅನುಭವವಿದ್ದ ಮತ್ತು ಪ್ರಭಾವಶಾಲಿಗಳಾದ ಸಲಹೆಗಾರರಿದ್ದರು.

ಪೌಲನ ವಿಚಾರಣೆಯನ್ನು ನೀರೊ ಮಾಡಿದನಾ ಅಥವಾ ಈ ಕೆಲಸವನ್ನು ಬೇರೆಯವರಿಗೆ ಒಪ್ಪಿಸಿದನಾ ಎಂದು ಬೈಬಲ್‌ ಹೇಳುವುದಿಲ್ಲ. ಅದೇನೇ ಇರಲಿ, ತಾನು ಯೆಹೂದ್ಯರ ದೇವರನ್ನು ಆರಾಧಿಸುತ್ತೇನೆ ಮತ್ತು ಸರಕಾರಕ್ಕೆ ಗೌರವ ಕೊಡಬೇಕೆಂದು ಎಲ್ಲರನ್ನೂ ಪ್ರೋತ್ಸಾಹಿಸಿದೆ ಎಂದು ಪೌಲ ವಿವರಿಸಿರಬೇಕು. (ರೋಮ. 13:1-7; ತೀತ 3:1, 2) ಸುವಾರ್ತೆಯ ವಿಷಯದಲ್ಲಿ ಪೌಲನು ನೀಡಿದ ಸಮರ್ಥನೆ ಪರಿಣಾಮಕಾರಿಯಾಗಿ ಇದ್ದಿರಬೇಕು. ಏಕೆಂದರೆ ಕೈಸರನ ಆಸ್ಥಾನ ಅವನನ್ನು ಬಿಡುಗಡೆ ಮಾಡುವ ತೀರ್ಪು ಹೊರಡಿಸಿತು.—ಫಿಲಿ. 2:24; ಫಿಲೆ. 22.

ಸುವಾರ್ತೆಯನ್ನು ಸಮರ್ಥಿಸುವ ನಮ್ಮ ನೇಮಕ

ಯೇಸು ತನ್ನ ಶಿಷ್ಯರಿಗೆ, “ನನ್ನ ನಿಮಿತ್ತವಾಗಿ ನೀವು ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ಎಳೆದೊಯ್ಯಲ್ಪಡುವಿರಿ; ಇದು ಅವರಿಗೂ ಅನ್ಯಜನಾಂಗಗಳಿಗೂ ಸಾಕ್ಷಿಗಾಗಿರುವುದು” ಅಂದನು. (ಮತ್ತಾ. 10:18) ಈ ವಿಧದಲ್ಲಿ ಯೇಸುವನ್ನು ಪ್ರತಿನಿಧಿಸುವುದು ನಿಜಕ್ಕೂ ಒಂದು ಸುಯೋಗ. ಸುವಾರ್ತೆಯನ್ನು ಸಮರ್ಥಿಸಲು ನಾವು ಮಾಡುವ ಪ್ರಯತ್ನಗಳಿಂದ ಮೊಕದ್ದಮೆಗಳನ್ನು ಗೆಲ್ಲಬಹುದು. ಆದರೆ ಅಪರಿಪೂರ್ಣ ಮಾನವರು ಕೊಡುವ ತೀರ್ಪುಗಳಿಂದ ಸುವಾರ್ತೆಯನ್ನು ಸಂಪೂರ್ಣ ಅರ್ಥದಲ್ಲಿ ‘ಕಾನೂನುಬದ್ಧವಾಗಿ ಸ್ಥಾಪಿಸಲು’ ಸಾಧ್ಯವಾಗುವುದಿಲ್ಲ. ದೇವರ ರಾಜ್ಯ ಮಾತ್ರ ನಮಗೆ ಅನ್ಯಾಯ ಅಕ್ರಮದಿಂದ ಸಂಪೂರ್ಣ ಮುಕ್ತಿ ಕೊಡುತ್ತದೆ.—ಪ್ರಸಂ. 8:9; ಯೆರೆ. 10:23.

ಇಂದು ಸಹ ಕ್ರೈಸ್ತರು ತಮ್ಮ ನಂಬಿಕೆಯನ್ನು ಸಮರ್ಥಿಸಲು ಹಾಕುವ ಪ್ರಯತ್ನದಿಂದ ಯೆಹೋವನ ನಾಮಕ್ಕೆ ಮಹಿಮೆ ಸಿಗುತ್ತದೆ. ಪೌಲನಂತೆ ನಾವು ಪ್ರಶಾಂತವಾಗಿದ್ದು ಸತ್ಯವನ್ನೇ ಆಡುತ್ತಾ ಜನರ ಮನವೊಪ್ಪಿಸಲು ಪ್ರಯತ್ನಿಸಬೇಕು. ಆದರೆ ‘ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಹೇಗೆ ಮಾತಾಡಬೇಕೆಂದು ಪೂರ್ವಾಭ್ಯಾಸ ಮಾಡುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ವಿರೋಧಿಗಳೆಲ್ಲರು ಸೇರಿದರೂ ನಿಮ್ಮನ್ನು ಎದುರಿಸಲು ಶಕ್ತರಾಗದಂಥ ಬಾಯನ್ನೂ ವಿವೇಕವನ್ನೂ ನಾನು ನಿಮಗೆ ಕೊಡುವೆನು’ ಎಂದು ಯೇಸು ಹೇಳಿದ್ದಾನೆ.—ಲೂಕ 21:14, 15; 2 ತಿಮೊ. 3:12; 1 ಪೇತ್ರ 3:15.

ಸಾಮಾನ್ಯವಾಗಿ ರಾಜರ, ರಾಜ್ಯಪಾಲರ ಮತ್ತು ಬೇರೆ ಅಧಿಕಾರಿಗಳ ಬಳಿ ಹೋಗಿ ಸುವಾರ್ತೆ ಸಾರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ಇಂಥ ವ್ಯಕ್ತಿಗಳ ಮುಂದೆ ಸಮರ್ಥಿಸುವಾಗ ಇವರಿಗೂ ಸಾಕ್ಷಿ ಸಿಕ್ಕಿದಂತಾಗುತ್ತದೆ. ಹೊರಡಿಸಲಾದ ಕೆಲವು ಸಕಾರಾತ್ಮಕ ತೀರ್ಪುಗಳು ಕೆಲವು ಕಾನೂನು-ಕಾಯಿದೆಗಳನ್ನು ತಿದ್ದುಪಡಿ ಮಾಡಲು ಸಹಾಯಮಾಡಿವೆ. ಇದರಿಂದ ವಾಕ್‌ಸ್ವಾತಂತ್ರ್ಯ ಮತ್ತು ಆರಾಧನಾ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಮ್ಮ ವಿರುದ್ಧ ಹೂಡಲಾಗುವ ಮೊಕದ್ದಮೆಗಳ ತೀರ್ಪು ನಮ್ಮ ಪರವಾಗಿರಲಿ ಇಲ್ಲದಿರಲಿ, ಇಂಥ ಪರೀಕ್ಷೆಗಳ ಸಮಯದಲ್ಲಿ ದೇವರ ಸೇವಕರು ತೋರಿಸುವ ಧೈರ್ಯವನ್ನು ನೋಡಿ ಯೆಹೋವನಿಗೆ ಸಂತೋಷವಾಗುತ್ತದೆ.

ನಮ್ಮ ನಂಬಿಕೆಯನ್ನು ಸಮರ್ಥಿಸುವಾಗ ಯೆಹೋವನ ಹೆಸರಿಗೆ ಕೀರ್ತಿ ತರುತ್ತೇವೆ

^ ಪ್ಯಾರ. 8 ಲೇಖಕ ಜೇಮ್ಸ್‌ ಪಾರ್ಕ್ಸ್‌ ಹೇಳಿದ್ದು: “ಯೆಹೂದ್ಯರು . . . ತಮ್ಮ ಸ್ವಂತ ಆಚರಣೆಗಳನ್ನು ಮಾಡಿಕೊಳ್ಳಬಹುದಿತ್ತು. ಇದರಲ್ಲಿ ಯಾವುದೇ ವಿಶೇಷತೆ ಇರಲಿಲ್ಲ. ರೋಮಿನವರು ತಮ್ಮ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಲ್ಲಿದ್ದ ಜನರಿಗೆ ಈ ಅಧಿಕಾರವನ್ನು ಕೊಡುವುದು ವಾಡಿಕೆಯಾಗಿತ್ತು. ಆಗ ಜನರು ತಮ್ಮತಮ್ಮ ಸ್ಥಳಗಳಲ್ಲಿ ತಮ್ಮದೇ ಆದ ರೀತಿ-ರಿವಾಜನ್ನು ಪಾಲಿಸಬಹುದಿತ್ತು.”