ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ

ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ

‘ನೀನು ದೇವರ ಸಂಗಡವೂ ಮನುಷ್ಯರ ಸಂಗಡವೂ ಹೋರಾಡಿ ಗೆದ್ದಿದ್ದಿ.’ —ಆದಿ. 32:28.

ಗೀತೆಗಳು: 60, 38

1, 2. ಯಾವ ವೈರಿಗಳ ವಿರುದ್ಧ ಯೆಹೋವನ ಸೇವಕರು ಹೋರಾಡಬೇಕು?

ಮೊದಲ ನಂಬಿಗಸ್ತ ವ್ಯಕ್ತಿಯಾದ ಹೇಬೆಲನ ಸಮಯದಿಂದ ಇವತ್ತಿನ ತನಕವೂ ನಂಬಿಗಸ್ತ ಜನರು ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆಯಲು ಹೋರಾಡಿದ್ದಾರೆ. ಉದಾಹರಣೆಗೆ, ಇಬ್ರಿಯ ಕ್ರೈಸ್ತರು ‘ಕಷ್ಟಾನುಭವಗಳ ಕೆಳಗೆ ದೊಡ್ಡ ಹೋರಾಟವನ್ನು ಸಹಿಸಿಕೊಂಡರು.’ (ಇಬ್ರಿ. 10:32-34) ಕ್ರೈಸ್ತರ ಹೋರಾಟವನ್ನು ಪೌಲನು ಓಟದಪಂದ್ಯ, ಕುಸ್ತಿ, ಮುಷ್ಟಿಕಾಳಗದಂಥ ಗ್ರೀಕ್‌ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಗೆಲ್ಲಲು ಪಡುವ ಪರಿಶ್ರಮಕ್ಕೆ ಹೋಲಿಸಿದನು. (ಇಬ್ರಿ. 12:1, 4) ಇಂದು ನಾವು ಜೀವಕ್ಕಾಗಿರುವ ಓಟವನ್ನು ಓಡುತ್ತಿದ್ದೇವೆ. ಈ ಓಟದಿಂದ ನಮ್ಮನ್ನು ಅಪಕರ್ಷಿಸಿ, ಸಂತೋಷ ಕಳಕೊಳ್ಳುವಂತೆ ಮಾಡಿ, ಭವಿಷ್ಯತ್ತಿನಲ್ಲಿ ಬಹುಮಾನ ಪಡೆಯದಂತೆ ಮಾಡಲು ಪ್ರಯತ್ನಿಸುವ ವೈರಿಗಳೂ ಇದ್ದಾರೆ.

2 ನಾವು ಅತೀ ದೊಡ್ಡ ಹೋರಾಟ ಮಾಡಬೇಕಾಗಿರುವುದು ಸೈತಾನ ಮತ್ತು ಅವನ ಲೋಕದ ವಿರುದ್ಧ. (ಎಫೆ. 6:12) ಈ ಲೋಕದ ಬೋಧನೆ ಮತ್ತು ಸಿದ್ಧಾಂತಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ಹೋರಾಡಬೇಕು. ಅನೈತಿಕತೆ, ಧೂಮಪಾನ, ಕುಡಿಕತನ, ಅಮಲೌಷಧ ಹಾಗೂ ಇತರ ದುಶ್ಚಟಗಳ ಸೆಳೆತಕ್ಕೆ ನಾವು ಸಿಕ್ಕಿಬೀಳದಂತೆಯೂ ಹೋರಾಡಬೇಕು. ಸ್ವಂತ ಬಲಹೀನತೆ, ನಿರುತ್ಸಾಹ ಭಾವನೆಯೊಂದಿಗೆ ಸಹ ಹೋರಾಡುತ್ತಾ ಇರಬೇಕು.—2 ಕೊರಿಂ. 10:3-6; ಕೊಲೊ. 3:5-9.

3. ನಮ್ಮ ವೈರಿಗಳೊಂದಿಗೆ ಹೋರಾಡಲು ಯೆಹೋವನು ಯಾವುದರ ಮೂಲಕ ತರಬೇತಿ ಕೊಡುತ್ತಿದ್ದಾನೆ?

3 ಈ ಎಲ್ಲ ಪ್ರಬಲ ಶತ್ರುಗಳೊಂದಿಗೆ ಹೋರಾಡಿ ಗೆಲ್ಲಲು ನಮ್ಮಿಂದ ನಿಜಕ್ಕೂ ಸಾಧ್ಯನಾ? ಸಾಧ್ಯವಿದೆ, ಆದರೆ ಅದಕ್ಕಾಗಿ ನಾವು ತುಂಬ ಪ್ರಯತ್ನ ಹಾಕಬೇಕು. ಪೌಲನು ತನ್ನನ್ನು ಬಾಕ್ಸರ್‌ಗೆ ಹೋಲಿಸುತ್ತಾ, “ನಾನು ಗಾಳಿಯನ್ನು ಗುದ್ದುವವನಂತೆ ಗುದ್ದುತ್ತಿಲ್ಲ” ಎಂದು ಹೇಳಿದನು. (1 ಕೊರಿಂ. 9:26) ಒಬ್ಬ ಬಾಕ್ಸರ್‌ ಎದುರಾಳಿಯನ್ನು ಗುದ್ದುತ್ತಾ ಹೋರಾಡುವಂತೆ ನಾವು ನಮ್ಮ ಶತ್ರುಗಳೊಂದಿಗೆ ಹೋರಾಡಬೇಕು. ಅದಕ್ಕೆ ಬೇಕಾದ ತರಬೇತಿ ಮತ್ತು ಸಹಾಯವನ್ನು ಯೆಹೋವನು ನಮಗೆ ಕೊಡುತ್ತಾನೆ. ಹೇಗೆ? ಬೈಬಲಿನ ಮೂಲಕ. ಅಲ್ಲದೆ ಬೈಬಲ್‌ ಆಧರಿತ ಪ್ರಕಾಶನ, ಕ್ರೈಸ್ತ ಕೂಟ, ಸಮ್ಮೇಳನ ಮತ್ತು ಅಧಿವೇಶನಗಳ ಮೂಲಕ. ಇವೆಲ್ಲವುಗಳಿಂದ ನೀವು ಏನನ್ನು ಕಲಿಯುತ್ತೀರೋ ಅದನ್ನು ಕಾರ್ಯರೂಪಕ್ಕೆ ಹಾಕುತ್ತಿದ್ದೀರಾ? ಹಾಕುತ್ತಿಲ್ಲವಾದರೆ ನೀವು ನಿಮ್ಮ ವೈರಿಯೊಂದಿಗೆ ಪೂರ್ಣವಾಗಿ ಹೋರಾಡುತ್ತಿಲ್ಲ, ‘ಗಾಳಿಯನ್ನು ಗುದ್ದುತ್ತಿದ್ದೀರಿ’ ಎಂದರ್ಥ.

4. ಕೆಟ್ಟದ್ದು ನಮ್ಮನ್ನು ಜಯಿಸದಂತೆ ನಾವೇನು ಮಾಡಬೇಕು?

4 ನಾವು ಎಲ್ಲಾ ಸಮಯದಲ್ಲೂ ಎಚ್ಚರದಿಂದಿರಬೇಕು. ಯಾಕೆಂದರೆ ನಾವು ನೆನಸದಿದ್ದಾಗಲೇ ಅಥವಾ ಬಲಹೀನರಾಗಿದ್ದಾಗಲೇ ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಬೈಬಲ್‌ ನಮಗೆ ಎಚ್ಚರಿಕೆ ಮತ್ತು ಪ್ರೋತ್ಸಾಹ ಕೊಡುತ್ತಾ ಹೇಳುವುದು: “ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.” (ರೋಮ. 12:21) ನಾವು ಕೆಟ್ಟದ್ದರ ವಿರುದ್ಧ ಹೋರಾಡುತ್ತಾ ಇದ್ದರೆ ಖಂಡಿತ ಗೆಲ್ಲುತ್ತೇವೆ! ನಾವು ಎಚ್ಚರ ತಪ್ಪಿದರೆ, ಹೋರಾಡುವುದನ್ನು ನಿಲ್ಲಿಸಿಬಿಟ್ಟರೆ ಸೈತಾನ, ಅವನ ಲೋಕ ಮತ್ತು ನಮ್ಮ ಬಲಹೀನತೆಗಳು ನಮ್ಮನ್ನು ಸೋಲಿಸಿಬಿಡುತ್ತವೆ. ಆದ್ದರಿಂದ ಬಿಟ್ಟುಕೊಡಬೇಡಿ, ನಿರುತ್ಸಾಹಗೊಳ್ಳಬೇಡಿ, ನಿಮ್ಮ ಕೈಗಳು ಸೋತುಹೋಗದಿರಲಿ.—1 ಪೇತ್ರ 5:9.

5. (ಎ) ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆಯಬೇಕಾದರೆ ನಾವು ಏನನ್ನು ನೆನಪಿಡಬೇಕು? (ಬಿ) ಯಾರ ಉದಾಹರಣೆಗಳನ್ನು ನೋಡಲಿದ್ದೇವೆ?

5 ನಾವು ಗೆಲ್ಲಬೇಕಾದರೆ ಯಾಕೆ ಹೋರಾಡುತ್ತಿದ್ದೇವೆ ಎಂದು ನೆನಪಿಡಬೇಕು. ನಾವು ಹೋರಾಡುವುದು ದೇವರ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆಯಲಿಕ್ಕಾಗಿಯೇ. ಇಬ್ರಿಯ 11:6 ಹೇಳುವುದು: “ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.” ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವುದೆಂದರೆ ಆತನ ಮೆಚ್ಚಿಕೆ ಪಡೆಯಲಿಕ್ಕಾಗಿ ಶ್ರಮಪಡುವುದು ಎಂದಾಗಿದೆ. (ಅ. ಕಾ. 15:17) ಹೀಗೆ ಶ್ರಮಪಟ್ಟ ಅನೇಕ ಸ್ತ್ರೀಪುರುಷರ ಉದಾಹರಣೆಗಳು ಬೈಬಲಿನಲ್ಲಿವೆ. ಅವರಲ್ಲಿ ಕೆಲವರು ಯಾಕೋಬ, ರಾಹೇಲ, ಯೋಸೇಫ ಮತ್ತು ಪೌಲ. ಇವರು ಭಾವನಾತ್ಮಕ ಮತ್ತು ಶಾರೀರಿಕ ಕಷ್ಟಗಳನ್ನು ಅನುಭವಿಸಿದರು. ಆದರೆ ಅವುಗಳನ್ನು ಮೆಟ್ಟಿನಿಂತು ಯಶಸ್ವಿಯಾದರು. ನಾವೂ ಶ್ರಮಪಟ್ಟರೆ ಯೆಹೋವನ ಆಶೀರ್ವಾದ ಪಡೆಯಲು ಸಾಧ್ಯವೆಂದು ಇವರಿಂದ ಕಲಿಯುತ್ತೇವೆ. ಹೇಗೆಂದು ಈಗ ನೋಡೋಣ.

ಪಟ್ಟುಹಿಡಿದರೆ ಆಶೀರ್ವಾದ ಖಂಡಿತ!

6. (ಎ) ಪಟ್ಟುಹಿಡಿಯಲು ಯಾಕೋಬನಿಗೆ ಯಾವುದು ಸಹಾಯಮಾಡಿತು? (ಬಿ) ಅವನಿಗೆ ಯಾವ ಪ್ರತಿಫಲ ಸಿಕ್ಕಿತು? (ಲೇಖನದ ಆರಂಭದ ಚಿತ್ರ ನೋಡಿ.)

6 ನಂಬಿಗಸ್ತ ವ್ಯಕ್ತಿಯಾದ ಯಾಕೋಬನು ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆಯಲು ತುಂಬ ಹೋರಾಡಿದನು. ಕಷ್ಟಗಳನ್ನು ಸಹಿಸಿಕೊಂಡನು. ಏಕೆಂದರೆ ಅವನು ಯೆಹೋವನನ್ನು ಪ್ರೀತಿಸಿದನು. ದೇವರೊಂದಿಗಿನ ಸಂಬಂಧವು ಅವನಿಗೆ ತುಂಬ ಅಮೂಲ್ಯವಾಗಿತ್ತು. ತನ್ನ ಸಂತತಿಯನ್ನು ಆಶೀರ್ವದಿಸುತ್ತೇನೆಂದು ಯೆಹೋವನು ಕೊಟ್ಟ ಮಾತಿನಲ್ಲಿ ಪೂರ್ಣ ನಂಬಿಕೆ ಅವನಿಗಿತ್ತು. (ಆದಿ. 28:3, 4) ಯಾಕೋಬ ಸುಮಾರು 100 ವಯಸ್ಸಿನಲ್ಲಿದ್ದಾಗ ದೇವರಿಂದ ಒಂದು ಆಶೀರ್ವಾದ ಪಡೆಯಲಿಕ್ಕೋಸ್ಕರ ಒಬ್ಬ ದೇವದೂತನೊಂದಿಗೂ ಹೋರಾಡಿದ. (ಆದಿಕಾಂಡ 32:24-28 ಓದಿ.) ಅವನು ಆ ಶಕ್ತಿಶಾಲಿ ದೇವದೂತನೊಂದಿಗೆ ಸ್ವಂತ ಬಲದಿಂದ ಹೋರಾಡಿದನಾ? ಖಂಡಿತ ಇಲ್ಲ. ಆದರೆ ಆಶೀರ್ವಾದ ಪಡೆಯಲೇಬೇಕೆಂಬ ಛಲ ಅವನಲ್ಲಿತ್ತು. ಅದಕ್ಕಾಗಿ ತಾನು ಎಷ್ಟೇ ಶ್ರಮಪಡಲು ಸಿದ್ಧನೆಂದು ತೋರಿಸಿಕೊಟ್ಟ. ಯಾಕೋಬನು ಪಟ್ಟುಬಿಡದೆ ಇದ್ದದ್ದಕ್ಕಾಗಿ ಯೆಹೋವನು ಅವನನ್ನು ಆಶೀರ್ವದಿಸಿ ಇಸ್ರಾಯೇಲ್‌ ಎಂಬ ಹೆಸರನ್ನು ಕೊಟ್ಟನು. ಆ ಹೆಸರಿನ ಅರ್ಥ “ದೇವರೊಂದಿಗೆ ಹೋರಾಡಿದ ಅಥವಾ ಪಟ್ಟುಹಿಡಿದ ಮನುಷ್ಯ” ಎಂದಾಗಿದೆ. ಹೀಗೆ ಮಾಡಿದ್ದಕ್ಕಾಗಿ ಯಾಕೋಬನಿಗೆ ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದವು ಪ್ರತಿಫಲವಾಗಿ ಸಿಕ್ಕಿತು. ಅದನ್ನೇ ಪಡೆಯಲಿಕ್ಕಾಗಿ ನಾವಿಂದು ಹೋರಾಡುತ್ತಿದ್ದೇವೆ.

7. (ಎ) ರಾಹೇಲಳು ಯಾವ ದುಃಖದ ಸನ್ನಿವೇಶದಲ್ಲಿದ್ದಳು? (ಬಿ) ಆಗ ಏನು ಮಾಡಿದಳು ಮತ್ತು ಯಾವ ಆಶೀರ್ವಾದ ಪಡೆದಳು?

7 ಯಾಕೋಬನ ನೆಚ್ಚಿನ ಹೆಂಡತಿಯಾದ ರಾಹೇಲಳ ಬಗ್ಗೆ ಯೋಚಿಸಿ. ಯೆಹೋವನು ಯಾಕೋಬನಿಗೆ ಕೊಟ್ಟ ಮಾತನ್ನು ಹೇಗೆ ನೆರವೇರಿಸುತ್ತಾನೆಂದು ನೋಡುವ ತವಕ ಅವಳಿಗಿತ್ತು. ಆದರೆ ಒಂದು ಸಮಸ್ಯೆ. ಅವಳಿಗೆ ಮಕ್ಕಳಿರಲಿಲ್ಲ. ಆ ಕಾಲದಲ್ಲಿ ಮಕ್ಕಳಿಲ್ಲದ ಹೆಣ್ಮಕ್ಕಳು ಕಣ್ಣೀರಲ್ಲೇ ಕೈತೊಳೆಯಬೇಕಿತ್ತು. ರಾಹೇಲಳು ತನ್ನಿಂದೇನೂ ಮಾಡಲಾಗದ, ತುಂಬ ದುಃಖ ನಿರಾಶೆಯ ಪರಿಸ್ಥಿತಿಯಲ್ಲಿ ಇದ್ದಳು. ಆಗ ಏನು ಮಾಡಿದಳು? ಅವಳು ನಿರೀಕ್ಷೆ ಕಳಕೊಳ್ಳಲಿಲ್ಲ. ಯೆಹೋವನಿಗೆ ಹೆಚ್ಚೆಚ್ಚು ಪ್ರಾರ್ಥನೆ ಮಾಡುತ್ತಾ ಆತನ ಆಶೀರ್ವಾದ ಪಡೆಯಲು ಹೋರಾಡಿದಳು. ಆತನು ಆಕೆಯ ಮನದಾಳದ ಪ್ರಾರ್ಥನೆಗೆ ಉತ್ತರ ಕೊಟ್ಟನು. ಕೊನೆಗೆ ಅವಳಿಗೆ ಮಕ್ಕಳಾಯಿತು. ಆದ್ದರಿಂದಲೇ “[ನಾನು] ಬಲವಾಗಿ ಹೋರಾಡಿ ಗೆದ್ದಿದ್ದೇನೆ” ಎಂದು ಹೇಳಿದಳು.—ಆದಿ. 30:8, 20-24.

8. (ಎ) ಯೋಸೇಫನಿಗೆ ಯಾವೆಲ್ಲ ಕಷ್ಟ ಬಂತು? (ಬಿ) ಅವನು ನಮಗೆ ಹೇಗೆ ಒಳ್ಳೇ ಮಾದರಿಯಾಗಿದ್ದಾನೆ?

8 ಯಾಕೋಬ ಮತ್ತು ರಾಹೇಲಳ ನಂಬಿಗಸ್ತ ಮಾದರಿಯು ಅವರ ಮಗನಾದ ಯೋಸೇಫನ ಮೇಲೆ ಖಂಡಿತ ಒಳ್ಳೇ ಪ್ರಭಾವಬೀರಿರಬೇಕು. ಇದು ಅವನು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದಾಗ ಸಹಾಯಮಾಡಿರಬೇಕು. ಯೋಸೇಫನು 17 ವಯಸ್ಸಿನಲ್ಲಿದ್ದಾಗ ಅವನ ಜೀವನ ಪೂರಾ ಬದಲಾಯಿತು. ಅವನ ಅಣ್ಣಂದಿರು ಹೊಟ್ಟೆಕಿಚ್ಚಿನಿಂದ ಅವನನ್ನು ಗುಲಾಮಗಿರಿಗೆ ಮಾರಿದರು. ನಂತರ ಅವನೇನೂ ತಪ್ಪು ಮಾಡದಿದ್ದರೂ ಅನೇಕ ವರ್ಷ ಐಗುಪ್ತದಲ್ಲಿ ಸೆರೆಯಲ್ಲಿದ್ದನು. (ಆದಿ. 37:23-28; 39:7-9, 20, 21) ಆದರೂ ಯೋಸೇಫನು ನಿರಾಶೆಗೊಳ್ಳಲಿಲ್ಲ ಅಥವಾ ಮನಸ್ಸಲ್ಲೇ ಕುದಿಯುತ್ತಾ ಸೇಡು ತೀರಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಯೆಹೋವನೊಂದಿಗಿನ ಸಂಬಂಧವೇ ಅವನಿಗೆ ಮುಖ್ಯವಾಗಿತ್ತು. ಅವನು ಪೂರ್ಣ ಹೃದಯದಿಂದ ಅದರ ಮೇಲೆಯೇ ಗಮನನೆಟ್ಟನು. (ಯಾಜ. 19:18; ರೋಮ. 12:17-21) ಯೋಸೇಫನು ನಿಜಕ್ಕೂ ನಮಗೆ ಒಳ್ಳೇ ಮಾದರಿ. ನಮ್ಮ ಬಾಲ್ಯ ಚೆನ್ನಾಗಿರದಿದ್ದರೂ ಅಥವಾ ಸದ್ಯಕ್ಕೆ ನಾವಿರುವ ಪರಿಸ್ಥಿತಿ ಸುಧಾರಣೆ ಆಗೋದೇ ಇಲ್ಲ ಎಂದು ಅನಿಸಿದರೂ ನಾವು ಯೋಸೇಫನಂತೆ ಪಟ್ಟುಹಿಡಿದು ಹೋರಾಡುತ್ತಾ ಇರಬೇಕು. ಆಗ ಯೆಹೋವನು ಖಂಡಿತ ನಮ್ಮನ್ನು ಆಶೀರ್ವದಿಸುವನು.—ಆದಿಕಾಂಡ 39:21-23 ಓದಿ.

9. ಯಾಕೋಬ, ರಾಹೇಲ ಮತ್ತು ಯೋಸೇಫರನ್ನು ನಾವು ಹೇಗೆ ಅನುಕರಿಸಬಹುದು?

9 ಇಂದು ನಾವು ಕೂಡ ಅನೇಕ ಕಷ್ಟಗಳನ್ನು ತಾಳಿಕೊಳ್ಳಬೇಕಾಗಬಹುದು. ಉದಾಹರಣೆಗೆ ನೀವು ಅನ್ಯಾಯ, ಭೇದಭಾವದಿಂದಾಗಿ ಕಷ್ಟ ಅನುಭವಿಸುತ್ತಿರಬಹುದು, ಅಪಹಾಸ್ಯಕ್ಕೆ ಗುರಿಯಾಗಿರಬಹುದು ಅಥವಾ ಬೇರೆಯವರು ಹೊಟ್ಟೆಕಿಚ್ಚಿನಿಂದ ನಿಮಗೆ ಕಷ್ಟಕೊಡುತ್ತಿರಬಹುದು. ಆದರೆ ನಿರಾಶೆಗೊಳ್ಳಬೇಡಿ. ಕಷ್ಟದಲ್ಲಿದ್ದಾಗಲೂ ಯೆಹೋವನನ್ನು ಸಂತೋಷದಿಂದ ಆರಾಧಿಸಲು ಯಾಕೋಬ, ರಾಹೇಲ, ಯೋಸೇಫರಿಗೆ ಯಾವುದು ಸಹಾಯಮಾಡಿತೆಂದು ನೆನಪಿಸಿಕೊಳ್ಳಿ. ಯೆಹೋವನೊಂದಿಗಿನ ಸಂಬಂಧ ಅವರೆಲ್ಲರಿಗೆ ತುಂಬ ಅಮೂಲ್ಯವಾಗಿತ್ತು. ಆತನ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆಯಲು ಅವರು ಹೋರಾಡುತ್ತಾ ಇದ್ದರು, ತಮ್ಮ ಪ್ರಾರ್ಥನೆಗಳಿಗೆ ಅನುಸಾರವಾಗಿ ನಡೆದರು. ಹಾಗಾಗಿ ಯೆಹೋವನು ಅವರನ್ನು ಬಲಗೊಳಿಸಿದನು ಮತ್ತು ಆಶೀರ್ವದಿಸಿದನು. ನಾವೀಗ ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದರಿಂದ ಯೆಹೋವನು ಭವಿಷ್ಯತ್ತಿನಲ್ಲಿ ಕೊಡಲಿರುವ ಆಶೀರ್ವಾದಗಳ ಮೇಲೆ ಮನಸ್ಸಿಡುವುದು ತುಂಬ ಮುಖ್ಯ. ಯೆಹೋವನ ಮೆಚ್ಚಿಕೆ ಪಡೆಯಲಿಕ್ಕಾಗಿ ಹೋರಾಡಲು ಅಂದರೆ ಶ್ರಮಿಸಲು ನಿಮಗೆ ಮನಸ್ಸಿದೆಯಾ?

ಆಶೀರ್ವಾದ ಪಡೆಯಲು ಹೋರಾಡುವ ಸಿದ್ಧಮನಸ್ಸಿರಲಿ

10, 11. (ಎ) ದೇವರ ಆಶೀರ್ವಾದ ಪಡೆಯಲು ನಾವೇಕೆ ಹೋರಾಡಬೇಕು? (ಬಿ) ಸರಿಯಾದ ನಿರ್ಣಯಗಳನ್ನು ಮಾಡಲು ಯಾವುದು ಸಹಾಯಮಾಡುತ್ತದೆ?

10 ಯಾವೆಲ್ಲ ಸನ್ನಿವೇಶಗಳಲ್ಲಿ ನಾವು ದೇವರ ಆಶೀರ್ವಾದಕ್ಕಾಗಿ ಹೋರಾಡಬೇಕು? ಅಪರಿಪೂರ್ಣರಾಗಿರುವ ಕಾರಣ ತಪ್ಪು ಇಚ್ಛೆಗಳ ವಿರುದ್ಧ ಹೋರಾಡಬೇಕಾಗುತ್ತದೆ. ಕೆಲವರು ಸೇವೆಯಲ್ಲಿ ಉತ್ಸಾಹ ಕಳೆದುಕೊಳ್ಳದಿರಲು ಹೋರಾಡಬೇಕಾಗುತ್ತದೆ. ಇನ್ನಿತರರು ಆರೋಗ್ಯ ಸಮಸ್ಯೆ, ಒಂಟಿತನದ ಭಾವನೆಯೊಂದಿಗೆ ಹೋರಾಡಬೇಕಿರುತ್ತದೆ. ಇನ್ನೂ ಕೆಲವರಿಗೆ ತಮ್ಮನ್ನು ನೋಯಿಸಿದವರನ್ನು ಕ್ಷಮಿಸಲು ಕಷ್ಟವಾಗುತ್ತದೆ. ನಾವು ಎಷ್ಟೇ ವರ್ಷದಿಂದ ಯೆಹೋವನ ಸೇವಕರಾಗಿರಲಿ ಆತನ ಸೇವೆ ಮಾಡುವುದನ್ನು ಕಷ್ಟವಾಗಿಸುವ ವಿಷಯಗಳ ವಿರುದ್ಧ ನಾವೆಲ್ಲರೂ ಹೋರಾಡಬೇಕಿರುತ್ತದೆ. ನಾವು ನಂಬಿಗಸ್ತರಾಗಿದ್ದರೆ ಆತನು ಖಂಡಿತ ಪ್ರತಿಫಲ ಕೊಡುತ್ತಾನೆ.

ದೇವರ ಆಶೀರ್ವಾದ ಪಡೆಯಲು ನೀವು ಹೋರಾಡುತ್ತಾ ಇದ್ದೀರಾ? (ಪ್ಯಾರ 10, 11 ನೋಡಿ)

11 ಕ್ರೈಸ್ತರಾಗಿರುವುದು, ಸರಿಯಾದ ಆಯ್ಕೆಗಳನ್ನು ಮಾಡುವುದು ನಿಜಕ್ಕೂ ತುಂಬ ಕಷ್ಟ. ತಪ್ಪು ಇಚ್ಛೆಗಳ ವಿರುದ್ಧ ಹೋರಾಡುತ್ತಿದ್ದರೆ ಅದು ಇನ್ನೂ ಕಷ್ಟ. (ಯೆರೆ. 17:9) ನಿಮಗೆ ಹಾಗೆ ಕಷ್ಟವಾಗುತ್ತಿದ್ದರೆ ಯೆಹೋವನಿಗೆ ಪ್ರಾರ್ಥಿಸಿ. ಪವಿತ್ರಾತ್ಮವನ್ನು ಕೊಡುವಂತೆ ಕೇಳಿಕೊಳ್ಳಿ. ಪ್ರಾರ್ಥನೆ ಮತ್ತು ಪವಿತ್ರಾತ್ಮದಿಂದ ನಿಮಗೆ ಬಲ ಸಿಕ್ಕಿದಾಗ ಸರಿಯಾದದ್ದನ್ನೇ ಮಾಡಲು ನಿಮ್ಮಿಂದ ಆಗುತ್ತದೆ. ಆಗ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ನಿಮ್ಮ ಪ್ರಾರ್ಥನೆಗೆ ಅನುಸಾರ ನಡೆದುಕೊಳ್ಳುವ ದೃಢಮನಸ್ಸು ನಿಮಗಿರಲಿ. ಪ್ರತಿ ದಿನ ಬೈಬಲನ್ನು ಓದಲು ಪ್ರಯತ್ನಿಸಿ. ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆಗೆ ಸಮಯ ಕೊಡಿ.ಕೀರ್ತನೆ 119:33 ಓದಿ.

12, 13. ತಪ್ಪು ಇಚ್ಛೆಗಳನ್ನು ನಿಯಂತ್ರಿಸಲು ಇಬ್ಬರು ಕ್ರೈಸ್ತರಿಗೆ ಹೇಗೆ ಸಹಾಯ ಸಿಕ್ಕಿತು?

12 ತಪ್ಪು ಇಚ್ಛೆಗಳನ್ನು ಜಯಿಸಲು ಬೈಬಲ್‌, ಪವಿತ್ರಾತ್ಮ ಮತ್ತು ಕ್ರೈಸ್ತ ಪ್ರಕಾಶನಗಳು ಅನೇಕ ಸಹೋದರ ಸಹೋದರಿಯರಿಗೆ ಸಹಾಯ ಮಾಡಿವೆ. 2003, ಡಿಸೆಂಬರ್‌ 8⁠ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದ “ತಪ್ಪು ಇಚ್ಛೆಗಳನ್ನು ನೀವು ಹೇಗೆ ತಡೆಯಬಹುದು?” ಎಂಬ ಲೇಖನವನ್ನು ಒಬ್ಬ ಹದಿವಯಸ್ಸಿನ ಸಹೋದರ ಓದಿದನು. ಅವನ ಪ್ರತಿಕ್ರಿಯೆ ಏನಾಗಿತ್ತು? “ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಲು ನಾನು ತುಂಬ ಹೋರಾಡುತ್ತಿದ್ದೇನೆ. ‘ಅನೇಕರು ತಪ್ಪು ಇಚ್ಛೆಗಳನ್ನು ಜಯಿಸಲು ಕಠಿಣ ಹೋರಾಟ ಮಾಡುತ್ತಿದ್ದಾರೆ’ ಎಂದು ಈ ಲೇಖನದಲ್ಲಿ ಓದಿದಾಗ ನಾನೊಬ್ಬನೇ ಅಲ್ಲ ನನ್ನ ಸಹೋದರರು ಕೂಡ ನನ್ನಂತೆ ಹೋರಾಡುತ್ತಿದ್ದಾರೆ ಎಂದು ತಿಳಿಯಿತು.” 2003, ಅಕ್ಟೋಬರ್‌ 8⁠ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದ “ಎಲ್ಲ ರೀತಿಯ ಜೀವನ ಶೈಲಿಯನ್ನು ದೇವರು ಮೆಚ್ಚುತ್ತಾನಾ?” ಎಂಬ ಲೇಖನದಿಂದ ಸಹ ಆ ಸಹೋದರ ಪ್ರಯೋಜನಪಡೆದ. ಕೆಲವರಿಗೆ ತಪ್ಪು ಇಚ್ಛೆಗಳ ವಿರುದ್ಧ ಹೋರಾಟವು “ಶರೀರದಲ್ಲಿರುವ ಮುಳ್ಳಿನಂತಿರುತ್ತದೆ” ಅಂದರೆ ಸತತ ಹೋರಾಟ ಮಾಡಬೇಕಿರುತ್ತದೆ ಎಂದು ಆ ಲೇಖನದಿಂದ ತಿಳಿದುಕೊಂಡ. (2 ಕೊರಿಂ. 12:7) ಇಂಥ ಸಮಸ್ಯೆಯಿರುವವರು ತಮ್ಮ ನಡತೆಯನ್ನು ಶುದ್ಧವಾಗಿಡಲು ಈಗ ಹೋರಾಡುತ್ತಾ ಇದ್ದರೂ, ಇದು ಸ್ವಲ್ಪ ದಿನ ಮಾತ್ರ, ಮುಂದೆ ಇದೆಲ್ಲ ಇರುವುದಿಲ್ಲ ಎಂಬ ಭರವಸೆ ಅವರಿಗಿದೆ. “ಅವರಂತೆ ನನಗೂ ನಂಬಿಗಸ್ತನಾಗಿ ಉಳಿಯಲು ಆಗುತ್ತದೆ ಎಂಬ ನಂಬಿಕೆ ನನಗಿದೆ. ಒಂದೊಂದು ದಿನ ಕಳೆಯುತ್ತಿದ್ದಂತೆ ಆ ನಂಬಿಕೆ ದೃಢವಾಗುತ್ತಿದೆ. ಈ ದುಷ್ಟ ಲೋಕದಲ್ಲಿ ಒಂದೊಂದು ದಿನವನ್ನು ಪಾರಾಗಲು ಯೆಹೋವನು ತನ್ನ ಸಂಘಟನೆಯ ಮೂಲಕ ನಮಗೆ ಸಹಾಯ ಕೊಡುತ್ತಿರುವುದಕ್ಕಾಗಿ ಆತನಿಗೆ ನಿಜಕ್ಕೂ ತುಂಬ ಕೃತಜ್ಞನು” ಎನ್ನುತ್ತಾನೆ ಆ ಸಹೋದರ.

13 ಅಮೆರಿಕದ ಸಹೋದರಿಯೊಬ್ಬರ ಅನುಭವವನ್ನು ಕೂಡ ಗಮನಿಸಿ. ಅವಳು ಬರೆದದ್ದು: “ನೀವು ಯಾವಾಗಲೂ ನಮಗೆ ಏನು ಬೇಕೋ ಅದನ್ನೇ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದೀರಿ. ಇದಕ್ಕಾಗಿ ತುಂಬ ಧನ್ಯವಾದ. ಈ ಲೇಖನಗಳನ್ನೆಲ್ಲ ನನಗೋಸ್ಕರವೇ ಬರೆಯಲಾಗಿದೆ ಎಂದು ಎಷ್ಟೋ ಸಲ ನನಗನಿಸಿದೆ. ಯೆಹೋವನು ದ್ವೇಷಿಸುವ ಯಾವುದೋ ಒಂದು ವಿಷಯದ ಮೇಲಿರುವ ತೀವ್ರ ಆಸೆಯ ವಿರುದ್ಧ ಅನೇಕ ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ. ಹೋರಾಡಿ ಹೋರಾಡಿ ಸಾಕಾದಾಗ ಕೆಲವೊಮ್ಮೆ ‘ಇನ್ನು ನನ್ನಿಂದಾಗಲ್ಲ’ ಅಂತ ಅನಿಸುತ್ತೆ. ಯೆಹೋವನು ಕರುಣಾಭರಿತನು, ಕ್ಷಮಿಸುವವನು ಆಗಿದ್ದಾನೆಂದು ಗೊತ್ತು. ಆದರೆ ನನ್ನಲ್ಲಿ ಈ ಕೆಟ್ಟ ಆಸೆ ಇರುವುದರಿಂದ ಮತ್ತು ಹೃದಯದಾಳದಲ್ಲಿ ಅದನ್ನು ದ್ವೇಷಿಸದೇ ಇರುವುದರಿಂದ ಆತನು ನನಗೆ ಸಹಾಯ ಮಾಡೋದಿಲ್ಲ ಎಂದನಿಸುತ್ತೆ. ಈ ಹೋರಾಟವು ನನ್ನ ಜೀವನದ ಪ್ರತಿಯೊಂದು ವಿಷಯವನ್ನು ಬಾಧಿಸಿದೆ . . . ಆದರೆ, 2013, ಮಾರ್ಚ್‌ 15⁠ರ ಕಾವಲಿನಬುರುಜುವಿನಲ್ಲಿ ಬಂದ ‘ಯೆಹೋವನನ್ನು “ತಿಳಿದುಕೊಳ್ಳುವ ಹೃದಯ” ನಿಮ್ಮಲ್ಲಿದೆಯೇ?’ ಎಂಬ ಲೇಖನವನ್ನು ಓದಿದ ಮೇಲೆ ನನಗೆ ಸಹಾಯಮಾಡಲು ಯೆಹೋವನಿಗೆ ಮನಸ್ಸಿದೆ ಎಂದು ಖಚಿತವಾಯಿತು.”

14. (ಎ) ಪೌಲನಿಗೆ ತನ್ನ ಹೋರಾಟದ ಬಗ್ಗೆ ಹೇಗನಿಸಿತು? (ಬಿ) ನಮ್ಮ ಬಲಹೀನತೆಗಳೊಂದಿಗೆ ಹೋರಾಡಿ ಗೆಲ್ಲಬೇಕಾದರೆ ನಾವೇನು ಮಾಡಬೇಕು?

14 ರೋಮನ್ನರಿಗೆ 7:21-25 ಓದಿ. ತಪ್ಪು ಇಚ್ಛೆ ಮತ್ತು ಬಲಹೀನತೆಗಳೊಂದಿಗೆ ಹೋರಾಡುವುದು ಎಷ್ಟು ಕಷ್ಟ ಅನ್ನುವುದನ್ನು ಪೌಲ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದನು. ಆದರೆ ಪ್ರಾರ್ಥಿಸುತ್ತಾ ಯೆಹೋವನ ಮೇಲೆ ಆತುಕೊಂಡರೆ ಮತ್ತು ಯೇಸುವಿನ ಯಜ್ಞದಲ್ಲಿ ನಂಬಿಕೆಯಿಟ್ಟರೆ ಆ ಹೋರಾಟದಲ್ಲಿ ಗೆಲ್ಲಲು ಸಾಧ್ಯವೆಂಬ ಪೂರ್ಣ ಭರವಸೆ ಅವನಿಗಿತ್ತು. ನಮಗೆ ಸಹ ನಮ್ಮ ಬಲಹೀನತೆಗಳೊಂದಿಗೆ ಹೋರಾಡಿ ಗೆಲ್ಲಲು ಸಾಧ್ಯನಾ? ಖಂಡಿತ ಸಾಧ್ಯ. ಅದಕ್ಕಾಗಿ ಏನು ಮಾಡಬೇಕು? ಪೌಲನನ್ನು ಅನುಕರಿಸುತ್ತಾ ನಮ್ಮ ಸ್ವಂತ ಬಲದ ಮೇಲೆ ಆತುಕೊಳ್ಳದೆ ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳಬೇಕು, ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಡಬೇಕು.

15. ಪರೀಕ್ಷೆಗಳನ್ನು ತಾಳಿಕೊಳ್ಳಲು ಮತ್ತು ನಂಬಿಗಸ್ತರಾಗಿ ಉಳಿಯಲು ಯೆಹೋವನು ಹೇಗೆ ಸಹಾಯಮಾಡುತ್ತಾನೆ?

15 ಒಂದು ಸಮಸ್ಯೆಯ ಬಗ್ಗೆ ನಮಗೆ ಹೇಗನಿಸುತ್ತದೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ತೋರಿಸುವಂತೆ ಕೆಲವೊಮ್ಮೆ ಯೆಹೋವನು ಅನುಮತಿಸಬಹುದು. ಉದಾಹರಣೆಗೆ, ನಮಗೆ ಅಥವಾ ನಮ್ಮ ಕುಟುಂಬದಲ್ಲಿ ಯಾರಿಗಾದರೂ ಗಂಭೀರ ಕಾಯಿಲೆ ಬಂದಾಗ ಅಥವಾ ಏನಾದರೂ ಅನ್ಯಾಯವಾದಾಗ ಹೇಗೆ ಪ್ರತಿಕ್ರಿಯಿಸುತ್ತೇವೆ? ಯೆಹೋವನಲ್ಲಿ ಪೂರ್ಣ ಭರವಸೆಯಿದ್ದರೆ ನಂಬಿಗಸ್ತರಾಗಿ ಉಳಿಯಲು, ಸಂತೋಷವನ್ನು ಕಳಕೊಳ್ಳದಿರಲು ಮತ್ತು ಆತನೊಂದಿಗೆ ಆಪ್ತರಾಗಿ ಉಳಿಯಲು ಬೇಕಾದ ಬಲವನ್ನು ಕೊಡುವಂತೆ ನಾವು ಪಟ್ಟುಹಿಡಿದು ಬೇಡುತ್ತೇವೆ. (ಫಿಲಿ. 4:13) ನಾವು ಪ್ರಾರ್ಥಿಸಿದರೆ ತಾಳಿಕೊಳ್ಳುತ್ತಾ ಇರಲು ಬಲ ಹಾಗೂ ಧೈರ್ಯವನ್ನು ಯೆಹೋವನು ಖಂಡಿತ ಕೊಡುತ್ತಾನೆಂದು ಹಿಂದಿನ ಮತ್ತು ಇಂದಿನ ಅನೇಕ ಕ್ರೈಸ್ತರ ಉದಾಹರಣೆಗಳು ತೋರಿಸುತ್ತವೆ.

ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ

16, 17. ನೀವು ಏನು ಮಾಡಲು ದೃಢನಿಶ್ಚಯದಿಂದ ಇದ್ದೀರಿ?

16 ನೀವು ನಿರಾಶೆಗೊಳ್ಳುವುದನ್ನು, ಹೋರಾಟ ಬಿಟ್ಟುಬಿಡುವುದನ್ನು, ನಿಮ್ಮ ಕೈಗಳು ಸೋತುಹೋಗುವುದನ್ನು ನೋಡಲು ಪಿಶಾಚನು ಆತುರದಿಂದ ಕಾಯುತ್ತಿದ್ದಾನೆ. ಹಾಗಾಗಿ ‘ಒಳ್ಳೇದನ್ನು ಭದ್ರವಾಗಿ ಹಿಡಿದುಕೊಳ್ಳಲು’ ದೃಢನಿಶ್ಚಯ ಮಾಡಿರಿ. (1 ಥೆಸ. 5:21) ಸೈತಾನ, ಅವನ ದುಷ್ಟ ಲೋಕ ಹಾಗೂ ಯಾವುದೇ ತಪ್ಪು ಇಚ್ಛೆಗಳೊಂದಿಗೆ ಹೋರಾಡಿ ಗೆಲ್ಲಲು ನಿಮ್ಮಿಂದ ಖಂಡಿತ ಆಗುತ್ತದೆ! ಯೆಹೋವನು ನಿಮಗೆ ಬೇಕಾದ ಬಲ, ಸಹಾಯ ಕೊಡುತ್ತಾನೆಂಬ ಪೂರ್ಣ ಭರವಸೆಯಿದ್ದರೆ ಜಯ ಖಂಡಿತ.—2 ಕೊರಿಂ. 4:7-9; ಗಲಾ. 6:9.

17 ಆದ್ದರಿಂದ ಹೋರಾಡುತ್ತಾ ಇರಿ, ಶ್ರಮಪಡುತ್ತಾ ಇರಿ, ಪಟ್ಟುಹಿಡಿಯಿರಿ, ಬಿಟ್ಟುಕೊಡಬೇಡಿ. ಯೆಹೋವನು “ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು” ಆಶೀರ್ವಾದಗಳನ್ನು ಸುರಿಸುವನೆಂಬ ಪೂರ್ಣ ಭರವಸೆ ನಿಮಗಿರಲಿ.—ಮಲಾ. 3:10.