ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾವನ್ನು ಸೋಲಿಸಲು ಸಾಧ್ಯ

ಸಾವನ್ನು ಸೋಲಿಸಲು ಸಾಧ್ಯ

ಮೊದಲ ಮಾನವರಾದ ಆದಾಮ-ಹವ್ವ ತಪ್ಪು ಮಾಡಿದಾಗ, ಎಲ್ಲಾ ಮಾನವರಿಗೆ ಪಾಪ ಮತ್ತು ಮರಣ ಬಂತು. ಆದರೆ ಇದರಿಂದಾಗಿ ಮಾನವರಿಗಾಗಿ ದೇವರಿಗೆ ಇದ್ದ ಉದ್ದೇಶ ಬದಲಾಗಲಿಲ್ಲ. ಇದನ್ನು ಹೇಗೆ ಹೇಳಬಹುದು? ದೇವರು ಸ್ವತಃ ತನ್ನ ವಾಕ್ಯವಾದ ಬೈಬಲ್‌ನಲ್ಲಿ ಮಾನವರಿಗಾಗಿ ಆತನಿಗಿರುವ ಉದ್ದೇಶ ಬದಲಾಗಿಲ್ಲ ಎಂದು ಅನೇಕ ಬಾರಿ ತಿಳಿಸಿದ್ದಾನೆ. ಇದಕ್ಕೆ ಕೆಲವು ಉದಾಹರಣೆಗಳು ಕೆಳಗಿವೆ.

  • “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

  • “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.

  • “ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು.”—1 ಕೊರಿಂಥ 15:26.

  • “ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:4.

ದೇವರು ಸಾವನ್ನು ಹೇಗೆ ತೆಗೆದುಹಾಕುತ್ತಾನೆ? ಈಗಾಗಲೆ ನೋಡಿದ ಹಾಗೆ, “ನೀತಿವಂತರು . . . ಶಾಶ್ವತವಾಗಿ ವಾಸಿಸುವರು” ಅಂತ ಬೈಬಲ್‌ ಹೇಳುತ್ತೆ. ಆದರೆ ಅದೇ ಸಮಯದಲ್ಲಿ “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು (ನೀತಿವಂತನು) ಲೋಕದಲ್ಲಿ ಇಲ್ಲವೇ ಇಲ್ಲ” ಅಂತ ಕೂಡ ಬೈಬಲ್‌ ಹೇಳುತ್ತೆ. (ಪ್ರಸಂಗಿ 7:20) ಹಾಗಾದರೆ ಇದರ ಅರ್ಥ ದೇವರು, ಜನರು ತನ್ನ ನೀತಿಯ ಮಟ್ಟಗಳನ್ನು ಪಾಲಿಸದಿದ್ದರೂ, ಅವರಿಗೆ ಶಾಶ್ವತವಾಗಿ ಜೀವಿಸುವ ಅವಕಾಶ ಕೊಡುತ್ತಾನೆ ಅಂತಾನಾ? ಇಲ್ಲ, ಹಾಗೆ ಯೋಚಿಸೋಕೇ ಆಗಲ್ಲ! ಯಾಕೆಂದರೆ ದೇವರಿಗೆ “ಸುಳ್ಳಾಡಲು ಸಾಧ್ಯವಿಲ್ಲ” ಎಂದು ಬೈಬಲ್‌ ಹೇಳುತ್ತೆ. (ತೀತ 1:2) ಇದರ ಅರ್ಥ, ನೀತಿವಂತರು ಮಾತ್ರ ಶಾಶ್ವತವಾಗಿ ಬದುಕುತ್ತಾರೆ. ಹಾಗಾದರೆ, ಮಾನವರಿಗಾಗಿರುವ ತನ್ನ ಪ್ರೀತಿಯ ಉದ್ದೇಶವನ್ನು ನೆರವೇರಿಸಲು ದೇವರು ಏನು ಮಾಡುತ್ತಾನೆ?

ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು.”—ಯೆಶಾಯ 25:8

ಸಾವನ್ನು ಸೋಲಿಸಲು ವಿಮೋಚನಾ ಮೌಲ್ಯದ ಏರ್ಪಾಡು

ಯೆಹೋವ ದೇವರು ಮಾನವರನ್ನು ಸಾವಿನಿಂದ ಬಿಡಿಸಲು ಒಂದು ಪ್ರೀತಿಯ ಏರ್ಪಾಡನ್ನು ಮಾಡಿದ್ದಾನೆ. ಯಾವ ಏರ್ಪಾಡು? ಅದು ವಿಮೋಚನಾ ಮೌಲ್ಯದ ಏರ್ಪಾಡು. ವಿಮೋಚನಾ ಮೌಲ್ಯ ಅಂದ್ರೆ ಒಂದು ನಷ್ಟವನ್ನು ಭರ್ತಿ ಮಾಡಲು ಅದಕ್ಕೆ ಸಮಾನವಾದ ಬೆಲೆ ಕೊಡುವುದೇ ಆಗಿದೆ. ಆದರೆ, ಎಲ್ಲಾ ಮಾನವರು ಪಾಪಿಗಳು. ಎಲ್ಲರೂ ಮರಣಶಿಕ್ಷೆ ಅನುಭವಿಸುತ್ತಾ ಇರೋದ್ರಿಂದ, ಮಾನವರಲ್ಲಿ “ಯಾವನಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು” ಅಂತ ಬೈಬಲ್‌ ಹೇಳುತ್ತೆ.—ಕೀರ್ತನೆ 49:7, 8.

ಒಬ್ಬ ಅಪರಿಪೂರ್ಣ ಮಾನವನಿಗೆ, ತನ್ನನ್ನು ಸಾವಿನಿಂದ ಬಿಡಿಸಿಕೊಳ್ಳಲು ಅಥವಾ ಬೇರೆಯವರ ಪಾಪಗಳಿಗೆ ವಿಮೋಚನಾ ಮೌಲ್ಯ ಕೊಡಲು ಆಗಲ್ಲ. (ರೋಮನ್ನರಿಗೆ 6:7) ಹಾಗಾಗಿ, ಒಬ್ಬ ಪರಿಪೂರ್ಣ, ಪಾಪವಿಲ್ಲದ ವ್ಯಕ್ತಿಯ ಜೀವ ಬೇಕಿತ್ತು. ಅಂಥ ವ್ಯಕ್ತಿ ಮಾತ್ರ, ತನ್ನ ಪಾಪಗಳಿಗೆ ಅಲ್ಲ, ನಮ್ಮೆಲ್ಲರ ಪಾಪಗಳಿಗೆ ವಿಮೋಚನಾ ಮೌಲ್ಯ ಕೊಡಬಹುದಿತ್ತು.—ಇಬ್ರಿಯ 10:1-4.

ಅಂತಹ ಒಬ್ಬ ವ್ಯಕ್ತಿಯನ್ನೇ ದೇವರು, ವಿಮೋಚನಾ ಮೌಲ್ಯವಾಗಿ ಕೊಡಲು ಆರಿಸಿಕೊಂಡನು. ತನ್ನ ಮಗನಾದ ಯೇಸುವನ್ನು ಸ್ವರ್ಗದಿಂದ ಭೂಮಿಗೆ ಕಳಿಸಿ ಒಬ್ಬ ಪರಿಪೂರ್ಣ, ಪಾಪವಿಲ್ಲದ ಮಾನವನಾಗಿ ಹುಟ್ಟುವಂತೆ ಮಾಡಿದನು. (1 ಪೇತ್ರ 2:22) ಇದರ ಬಗ್ಗೆ, ಯೇಸು ಸಹ ತಾನು ‘ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದೆನು’ ಎಂದು ಹೇಳಿದ. (ಮಾರ್ಕ 10:45) ಹೌದು, ಯೇಸು ನಮ್ಮೆಲ್ಲರ ಪಾಪಗಳಿಗಾಗಿ ವಿಮೋಚನಾ ಮೌಲ್ಯ ಕೊಟ್ಟು, ನಮ್ಮನ್ನು ಸಾವಿನಿಂದ ಬಿಡಿಸಲು ಸತ್ತನು.—ಯೋಹಾನ 3:16.

ಸಾವಿನ ಸೋಲು ಯಾವಾಗ ಆಗುತ್ತೆ?

ನಾವು, ಈಗಿರುವ ಕೆಟ್ಟ ಲೋಕದ ‘ಕಡೇ ದಿವಸಗಳಲ್ಲಿ’ ಬದುಕುತ್ತಿದ್ದೇವೆ. ಇದನ್ನು ಹೇಗೆ ಹೇಳಬಹುದು? ‘ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವುದು’ ಎಂದು ಬೈಬಲ್‌ ಹೇಳುತ್ತೆ. ಈ ಕಠಿನಕಾಲಗಳು ಯಾವಾಗ ಕೊನೆಗೊಳ್ಳುತ್ತೆ? ದೇವರ ‘ನ್ಯಾಯತೀರ್ಪಿನ ದಿನ ಬಂದಾಗ ಮತ್ತು ದೇವಭಕ್ತಿಯಿಲ್ಲದ ಜನರ ನಾಶನದ ಸಮಯ ಬಂದಾಗ’ ಕೊನೆಗೊಳ್ಳುತ್ತೆ. (2 ಪೇತ್ರ 3:3, 7) ಆದರೆ, ದೇವರನ್ನು ಪ್ರೀತಿಸುವ ಜನರು ಮಾತ್ರ ಆ ನಾಶನದಿಂದ ಪಾರಾಗಿ ‘ನಿತ್ಯಜೀವ’ ಪಡೆಯುತ್ತಾರೆ.—ಮತ್ತಾಯ 25:46.

ಯೇಸು “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡಲು ಬಂದನು.”—ಮಾರ್ಕ 10:45

ಸತ್ತು ಹೋದ ಜನರಿಗೂ ನಿತ್ಯಜೀವ ಪಡೆಯುವ ಅವಕಾಶ ಇದೆ. ಸತ್ತವರನ್ನು ಮತ್ತೆ ಎಬ್ಬಿಸಲು ಸಾಧ್ಯ ಅಂತ ಯೇಸು ತೋರಿಸಿದನು. ನಾಯಿನ್‌ ಎಂಬ ಊರಿನಲ್ಲಿದ್ದ ವಿಧವೆಯ ಒಬ್ಬನೇ ಮಗ ಸತ್ತಾಗ, ಯೇಸು “ಕನಿಕರಪಟ್ಟು” ಅವನನ್ನು ಮತ್ತೆ ಎಬ್ಬಿಸಿದ. (ಲೂಕ 7:11-15) “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು . . . ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ” ಅಂತ ಅಪೊಸ್ತಲ ಪೌಲ ಹೇಳಿದ. ಇದರಿಂದ, ದೇವರು ಮಾನವರನ್ನು ತುಂಬಾ ಪ್ರೀತಿಸುತ್ತಾನೆ ಅಂತ ನಮಗೆ ಗೊತ್ತಾಗುತ್ತೆ.—ಅಪೊಸ್ತಲರ ಕಾರ್ಯಗಳು 24:15.

“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಬೈಬಲ್‌ ತಿಳಿಸುತ್ತೆ. (ಕೀರ್ತನೆ 37:29) ಹಾಗಾಗಿ ಭವಿಷ್ಯದಲ್ಲಿ ಎಲ್ಲಾ ಒಳ್ಳೆಯ ಜನರಿಗೆ ಶಾಶ್ವತವಾಗಿ ಜೀವಿಸುವ ಅವಕಾಶ ಇದೆ. ಆಗ, “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ಕೊಂಡಿ ಎಲ್ಲಿ?” ಎಂದು ಅಪೊಸ್ತಲ ಪೌಲ ಹೇಳಿದ ಮಾತುಗಳನ್ನು ಅವರು ಕಣ್ಣಾರೆ ನೋಡುತ್ತಾರೆ. (1 ಕೊರಿಂಥ 15:55) ಕೊನೆಗೂ ಮಾನವನ ದೊಡ್ಡ ವೈರಿಯ ಮೇಲೆ ಜಯ ಸಿಗುತ್ತೆ! ಎಷ್ಟು ಸಂತೋಷದ ವಿಷ್ಯ ಅಲ್ವಾ!