ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಚ್ಚರವಾಗಿರ್ರಿ”

“ಎಚ್ಚರವಾಗಿರ್ರಿ”

“ಎಚ್ಚರವಾಗಿರ್ರಿ”

“ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”—ಮತ್ತಾಯ 24:42.

1. ಸಮರ್ಪಿತ ಸೇವೆಯಲ್ಲಿ ಅನೇಕ ವರ್ಷಗಳನ್ನು ಕಳೆದಿರುವುದರ ಕುರಿತಾಗಿ ಯೆಹೋವನ ನಂಬಿಗಸ್ತ ಸೇವಕರಿಗೆ ಹೇಗನಿಸುತ್ತದೆ? ಒಂದು ಉದಾಹರಣೆಯನ್ನು ಉಲ್ಲೇಖಿಸಿರಿ.

ದೀರ್ಘ ಸಮಯದಿಂದ ಸೇವೆಸಲ್ಲಿಸುತ್ತಿರುವ ಯೆಹೋವನ ಸೇವಕರಲ್ಲಿ ಅನೇಕರು, ತಾವು ಯುವ ಪುರುಷರು ಮತ್ತು ಸ್ತ್ರೀಯರಾಗಿದ್ದಾಗಲೇ ಸತ್ಯವನ್ನು ಕಲಿತುಕೊಂಡರು. ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು, ಅದನ್ನು ಖರೀದಿಸಲಿಕ್ಕಾಗಿ ತನ್ನ ಸರ್ವಸ್ವವನ್ನೇ ಮಾರಿದ ವ್ಯಾಪಾರಿಯಂತೆ, ಆ ಉತ್ಸುಕ ಬೈಬಲ್‌ ವಿದ್ಯಾರ್ಥಿಗಳು ತಮ್ಮನ್ನೇ ನಿರಾಕರಿಸಿಕೊಂಡು, ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. (ಮತ್ತಾಯ 13:45, 46; ಮಾರ್ಕ 8:34) ಭೂಮಿಗಾಗಿದ್ದ ಯೆಹೋವನ ಉದ್ದೇಶಗಳು ನೆರವೇರುವುದನ್ನು ನೋಡಲು ಅವರು ನಿರೀಕ್ಷಿಸಿದ್ದ ಸಮಯಕ್ಕಿಂತಲೂ ಹೆಚ್ಚು ಕಾಲ ಕಾಯಬೇಕಾಗಿದುದ್ದರ ಬಗ್ಗೆ ಅವರಿಗೆ ಹೇಗನಿಸುತ್ತದೆ? ಅವರು ಅದಕ್ಕಾಗಿ ವಿಷಾದಿಸುವುದಿಲ್ಲ! ಸುಮಾರು 60 ವರ್ಷಗಳ ಸಮರ್ಪಿತ ಸೇವೆಯ ನಂತರ ಸಹೋದರ ಏ. ಏಚ್‌. ಮ್ಯಾಕ್‌ಮಿಲನರು ಹೇಳಿದ ಈ ಮಾತುಗಳೊಂದಿಗೆ ಅವರು ಸಮ್ಮತಿಸುತ್ತಾರೆ: “ನನ್ನ ನಂಬಿಕೆಯಲ್ಲಿ ದೃಢವಾಗಿರಲು ನಾನು ಹಿಂದೆಂದಿಗಿಂತಲೂ ಹೆಚ್ಚು ನಿಶ್ಚಿತನಾಗಿದ್ದೇನೆ. ಈ ನಂಬಿಕೆಯು ನನ್ನ ಜೀವನವನ್ನು ಸಾರ್ಥಕಗೊಳಿಸಿದೆ. ಯಾವುದೇ ಭಯವಿಲ್ಲದೆ ಭವಿಷ್ಯತ್ತನ್ನು ಎದುರಿಸುವಂತೆ ಅದು ಈಗಲೂ ನನಗೆ ಸಹಾಯಮಾಡುತ್ತಿದೆ.”

2. (ಎ) ಯೇಸು ತನ್ನ ಹಿಂಬಾಲಕರಿಗೆ ಯಾವ ಸಮಯೋಚಿತ ಸಲಹೆಯನ್ನು ಕೊಟ್ಟನು? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

2 ನಿಮ್ಮ ಕುರಿತಾಗಿ ಏನು? ನಿಮ್ಮ ವಯಸ್ಸು ಏನೇ ಆಗಿರಲಿ, ಯೇಸುವಿನ ಮಾತುಗಳನ್ನು ಪರಿಗಣಿಸಿರಿ: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” (ಮತ್ತಾಯ 24:42) ಈ ಸರಳವಾದ ಮಾತುಗಳಲ್ಲಿ ಅಗಾಧವಾದ ಸತ್ಯವು ಅಡಕವಾಗಿದೆ. ಈ ದುಷ್ಟ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲು ಕರ್ತನು ಯಾವ ದಿನ ಬರುವನೆಂಬುದು ನಮಗೆ ತಿಳಿದಿಲ್ಲ ಮತ್ತು ನಾವು ಅದನ್ನು ತಿಳಿದುಕೊಳ್ಳುವ ಆವಶ್ಯಕತೆಯೂ ಇಲ್ಲ. ಆದರೆ ನಾವು ಈಗ ಹೇಗೆ ಜೀವಿಸುತ್ತಿದ್ದೇವೊ ಅದು, ಕರ್ತನು ಬರುವಾಗ ನಾವು ವಿಷಾದಪಡದಂತಹ ರೀತಿಯ ಜೀವನವಾಗಿರಬೇಕು. ಈ ಸಂಬಂಧದಲ್ಲಿ, ಎಚ್ಚರದಿಂದಿರಲು ನಮಗೆ ಸಹಾಯಮಾಡುವ ಯಾವ ಉದಾಹರಣೆಗಳು ಬೈಬಲಿನಲ್ಲಿವೆ? ಯೇಸು ಈ ಅಗತ್ಯವನ್ನು ಹೇಗೆ ದೃಷ್ಟಾಂತಿಸಿದನು? ಮತ್ತು ನಾವು ಈ ಭಕ್ತಿಹೀನ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ರುಜುಪಡಿಸುವ ಯಾವ ಸಾಕ್ಷ್ಯವು ಇಂದು ನಮಗಿದೆ?

ಒಂದು ಎಚ್ಚರಿಕೆಯ ಮಾದರಿ

3. ಇಂದಿನ ಅನೇಕ ಜನರು ನೋಹನ ದಿನದಲ್ಲಿದ್ದ ಜನರನ್ನು ಹೇಗೆ ಹೋಲುತ್ತಾರೆ?

3 ಇಂದಿನ ಜನರು ಅನೇಕ ರೀತಿಗಳಲ್ಲಿ, ನೋಹನ ದಿನದಲ್ಲಿ ಜೀವಿಸುತ್ತಿದ್ದ ಸ್ತ್ರೀಪುರುಷರಂತೆಯೇ ಇದ್ದಾರೆ. ಆ ಸಮಯದಲ್ಲಿ ಭೂಮಿಯು ಹಿಂಸಾಚಾರದಿಂದ ತುಂಬಿತ್ತು. ಮನುಷ್ಯನ ಹೃದಯದ ಪ್ರತಿಯೊಂದು ಪ್ರವೃತ್ತಿಯು ‘ಯಾವಾಗಲೂ ಬರೀ ಕೆಟ್ಟದ್ದಾಗಿತ್ತು.’ (ಆದಿಕಾಂಡ 6:5) ಹೆಚ್ಚಿನವರು ತಮ್ಮ ದಿನನಿತ್ಯದ ಕಾರ್ಯಕಲಾಪಗಳಲ್ಲೇ ತಲ್ಲೀನರಾಗಿದ್ದರು. ಆದರೆ ಜಲಪ್ರಳಯವನ್ನು ತರುವ ಮೊದಲು, ಜನರು ಪಶ್ಚಾತ್ತಾಪಪಡುವಂತೆ ಯೆಹೋವನು ಅವಕಾಶವನ್ನು ನೀಡಿದನು. ಆತನು ನೋಹನಿಗೆ ಸಾರುವಂತೆ ಆದೇಶವನ್ನಿತ್ತನು. ಮತ್ತು ನೋಹನು ವಿಧೇಯತೆಯಿಂದ ಪ್ರಾಯಶಃ 40, 50 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ “ಸುನೀತಿಯನ್ನು ಸಾರುವವ”ನೋಪಾದಿ ಸೇವೆಸಲ್ಲಿಸಿದನು. (2 ಪೇತ್ರ 2:5) ಆದರೆ ಆ ಜನರು ನೋಹನ ಎಚ್ಚರಿಕೆಯ ಸಂದೇಶವನ್ನು ಅಲಕ್ಷಿಸಿದರು. ಅವರು ಎಚ್ಚರದಿಂದಿರಲಿಲ್ಲ. ಆದುದರಿಂದ, ಕೊನೆಯಲ್ಲಿ ಕೇವಲ ನೋಹ ಮತ್ತು ಅವನ ಕುಟುಂಬವು ಮಾತ್ರ ದೇವರ ನ್ಯಾಯತೀರ್ಪಿನಿಂದ ಪಾರಾಯಿತು.—ಮತ್ತಾಯ 24:37-39.

4. ನೋಹನ ಶುಶ್ರೂಷೆಯು ಯಶಸ್ವಿಕರವಾಗಿತ್ತೆಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ, ಮತ್ತು ನಿಮ್ಮ ಸಾರುವಿಕೆಯ ಕುರಿತಾಗಿಯೂ ಹೇಗೆ ಅದನ್ನೇ ಹೇಳಬಹುದು?

4 ನೋಹನ ಶುಶ್ರೂಷೆಯು ಯಶಸ್ವಿಕರವಾಗಿತ್ತೊ? ಅವನ ಸಂದೇಶಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದ ಜನರ ಚಿಕ್ಕ ಗುಂಪಿನಿಂದ ಇದನ್ನು ನಿರ್ಧರಿಸಬೇಡಿರಿ. ವಾಸ್ತವದಲ್ಲಿ, ನೋಹನ ಸಾರುವಿಕೆಗೆ ತೋರಿಸಲ್ಪಟ್ಟ ಪ್ರತಿಕ್ರಿಯೆಯು ಅಷ್ಟೇನೂ ಒಳ್ಳೇದಾಗಿರದಿದ್ದರೂ, ಅದರ ಉದ್ದೇಶವು ಪೂರೈಸಲ್ಪಟ್ಟಿತ್ತು. ಹೇಗೆ? ಆ ಜನರಿಗೆ, ತಾವು ಯೆಹೋವನನ್ನು ಸೇವಿಸುವೆವೊ ಇಲ್ಲವೊ ಎಂಬ ಆಯ್ಕೆಯನ್ನು ಮಾಡುವ ಅವಕಾಶವು ಕೊಡಲ್ಪಟ್ಟಿತ್ತು. ನೀವು ಸಾರುತ್ತಿರುವ ಟೆರಿಟೊರಿಯ ಕುರಿತಾಗಿ ಏನು? ತೀರ ಕಡಿಮೆ ಜನರು ಕಿವಿಗೊಡುತ್ತಿರುವುದಾದರೂ ನೀವು ಯಶಸ್ಸನ್ನು ಗಳಿಸುತ್ತಿದ್ದೀರಿ. ಹೇಗೆ? ಸಾರುವ ಮೂಲಕ ನೀವು ದೇವರ ಎಚ್ಚರಿಕೆಯನ್ನು ನೀಡುತ್ತಿದ್ದೀರಿ, ಮತ್ತು ಹೀಗೆ ಯೇಸು ತನ್ನ ಹಿಂಬಾಲಕರಿಗೆ ಕೊಟ್ಟಿರುವ ನೇಮಕವನ್ನು ಪೂರೈಸುತ್ತಿದ್ದೀರಿ.—ಮತ್ತಾಯ 24:14; 28:19, 20.

ದೇವರ ಪ್ರವಾದಿಗಳನ್ನು ಅಲಕ್ಷಿಸುವುದು

5. (ಎ) ಹಬಕ್ಕೂಕನ ದಿನಗಳಲ್ಲಿ ಯಾವ ರೀತಿಯ ಪರಿಸ್ಥಿತಿಗಳು ಯೆಹೂದದಲ್ಲಿದ್ದವು, ಮತ್ತು ಅವನ ಪ್ರವಾದನ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು? (ಬಿ) ಯೆಹೂದದ ಜನರು ಯೆಹೋವನ ಪ್ರವಾದಿಗಳ ಕಡೆಗೆ ಹೇಗೆ ದ್ವೇಷವನ್ನು ಪ್ರದರ್ಶಿಸಿದರು?

5 ಜಲಪ್ರಳಯವಾಗಿ ಅನೇಕ ಶತಮಾನಗಳು ಗತಿಸಿದ ನಂತರ, ಯೆಹೂದ ರಾಜ್ಯದಲ್ಲಿನ ಪರಿಸ್ಥಿತಿಯು ತೀರ ಹದಗೆಟ್ಟಿತು. ಮೂರ್ತಿಪೂಜೆ, ಅನ್ಯಾಯ, ದಬ್ಬಾಳಿಕೆ, ಮತ್ತು ಕೊಲೆಗಳು ಸಹ ಸರ್ವಸಾಮಾನ್ಯವಾಗಿದ್ದವು. ಜನರು ಪಶ್ಚಾತ್ತಾಪಪಡದಿದ್ದರೆ, ಕಸ್ದೀಯರು ಅಥವಾ ಬಬಿಲೋನ್ಯರಿಂದ ಅವರ ಮೇಲೆ ವಿಪತ್ತು ಎರಗುವುದೆಂದು ಎಚ್ಚರಿಸಲು ಯೆಹೋವನು ಪ್ರವಾದಿಯಾದ ಹಬಕ್ಕೂಕನನ್ನು ಕಳುಹಿಸಿದನು. (ಹಬಕ್ಕೂಕ 1:5-7) ಆದರೆ ಜನರು ಕಿವಿಗೊಡಲಿಲ್ಲ. ಅವರು ಹೀಗೆ ತರ್ಕಿಸಿದ್ದಿರಬಹುದು, ‘ನೂರು ವರ್ಷಗಳ ಮುಂಚೆಯೂ ಪ್ರವಾದಿಯಾದ ಯೆಶಾಯನು ತದ್ರೀತಿಯ ಎಚ್ಚರಿಕೆಯನ್ನು ನೀಡಿದ್ದನು, ಆದರೆ ಇದುವರೆಗೆ ಏನೂ ನಡೆದಿಲ್ಲ!’ (ಯೆಶಾಯ 39:6, 7) ಯೆಹೂದದ ಅಧಿಕಾರಿಗಳಲ್ಲಿ ಹೆಚ್ಚಿನವರು, ನೀಡಲ್ಪಟ್ಟ ಎಚ್ಚರಿಕೆಗಳ ಕುರಿತು ಉದಾಸೀನರಾಗಿದ್ದರು ಮಾತ್ರವಲ್ಲ, ಆ ಎಚ್ಚರಿಕೆಗಳನ್ನು ಕೊಟ್ಟ ಸಂದೇಶವಾಹಕರನ್ನೂ ದ್ವೇಷಿಸಿದರು. ಒಂದು ಸಂದರ್ಭದಲ್ಲಿ ಅವರು ಪ್ರವಾದಿಯಾದ ಯೆರೆಮೀಯನನ್ನು ಕೊಲ್ಲಲು ಪ್ರಯತ್ನಿಸಿದರು. ಅಹೀಕಾಮನು ಹಸ್ತಕ್ಷೇಪಮಾಡದೆ ಇರುತ್ತಿದ್ದಲ್ಲಿ, ಅವರು ಆ ಕಾರ್ಯದಲ್ಲಿ ಸಫಲರಾಗುತ್ತಿದ್ದರು. ಆದರೆ, ಮತ್ತೊಂದು ಪ್ರವಾದನ ಸಂದೇಶದಿಂದ ಕೋಪೋದ್ರಿಕ್ತನಾದ ರಾಜ ಯೆಹೋಯಾಕೀಮನು ಪ್ರವಾದಿಯಾದ ಊರೀಯನನ್ನು ಹತಿಸಿದನು.—ಯೆರೆಮೀಯ 26:21-24.

6. ಯೆಹೋವನು ಹಬಕ್ಕೂಕನನ್ನು ಹೇಗೆ ಬಲಪಡಿಸಿದನು?

6 ಹಬಕ್ಕೂಕನ ಸಂದೇಶವು, ಯೆಹೂದದ 70 ವರ್ಷಗಳ ನಿರ್ಜನತೆಯ ಕುರಿತಾಗಿ ಮುಂತಿಳಿಸುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟ ಯೆರೆಮೀಯನ ಸಂದೇಶದಷ್ಟೇ ಶಕ್ತಿಯುತವೂ ಅಪ್ರಿಯವೂ ಆಗಿತ್ತು. (ಯೆರೆಮೀಯ 25:8-11) ಹಬಕ್ಕೂಕನು ಹೀಗೆ ಪ್ರಾರ್ಥಿಸಿದಾಗ, ಅವನು ಎಷ್ಟು ಸಂಕಟಕ್ಕೊಳಗಾಗಿದ್ದನೆಂಬುದನ್ನು ನಾವು ಅರ್ಥಮಾಡಿಕೊಳ್ಳಸಾಧ್ಯವಿದೆ: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ.” (ಹಬಕ್ಕೂಕ 1:2) ನಂಬಿಕೆಯನ್ನು ಬಲಪಡಿಸುವಂತಹ ಈ ಮಾತುಗಳೊಂದಿಗೆ ಯೆಹೋವನು ಹಬಕ್ಕೂಕನಿಗೆ ಕೃಪಾಪೂರ್ಣನಾಗಿ ಉತ್ತರವನ್ನು ನೀಡಿದನು: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ಹಾಗಾದರೆ ಯೆಹೋವನು ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಲು ಒಂದು “ಕ್ಲುಪ್ತಕಾಲ”ವನ್ನು ನೇಮಿಸಿದ್ದನು. ಇದು ತಡವಾಗುತ್ತಿರುವಂತೆ ತೋರಿದರೂ, ಹಬಕ್ಕೂಕನು ನಿರುತ್ಸಾಹಗೊಳ್ಳಬಾರದಿತ್ತು, ಇಲ್ಲವೇ ತನ್ನ ಕೆಲಸವನ್ನು ನಿಧಾನಗೊಳಿಸಬಾರದಿತ್ತು. ಪ್ರತಿದಿನ ತುರ್ತುಪ್ರಜ್ಞೆಯಿಂದ ಜೀವಿಸುತ್ತಾ, ಅವನು ಅದಕ್ಕೆ “ಕಾದಿರ”ಬೇಕಾಗಿತ್ತು. ಯೆಹೋವನ ದಿನವು ತಡವಾಗಿ ಬರಲಾರದು!

7. ಸಾಮಾನ್ಯ ಶಕ ಮೊದಲನೆಯ ಶತಮಾನದಲ್ಲಿ ಯೆರೂಸಲೇಮನ್ನು ಪುನಃ ನಾಶನಕ್ಕಾಗಿ ಏಕೆ ಗುರುತಿಸಲಾಯಿತು?

7 ಯೆಹೋವನು ಹಬಕ್ಕೂಕನೊಂದಿಗೆ ಮಾತಾಡಿ ಸುಮಾರು 20 ವರ್ಷಗಳು ಗತಿಸಿದ ಬಳಿಕ ಯೆಹೂದದ ರಾಜಧಾನಿಯಾದ ಯೆರೂಸಲೇಮ್‌ ನಾಶಗೊಳಿಸಲ್ಪಟ್ಟಿತು. ತದನಂತರ ಅದು ಪುನಃ ಕಟ್ಟಲ್ಪಟ್ಟಿತು, ಮತ್ತು ಹಬಕ್ಕೂಕನನ್ನು ತುಂಬ ದುಃಖಕ್ಕೀಡುಮಾಡಿದ್ದ ಅನೇಕ ತಪ್ಪುಗಳು ಸರಿಪಡಿಸಲ್ಪಟ್ಟವು. ಆದರೆ ಸಾಮಾನ್ಯ ಶಕದ ಮೊದಲನೆಯ ಶತಮಾನದಲ್ಲಿ, ಆ ನಗರದ ನಿವಾಸಿಗಳ ಅಪನಂಬಿಗಸ್ತಿಕೆಯಿಂದಾಗಿ ಅದು ಮತ್ತೊಮ್ಮೆ ನಾಶನಕ್ಕಾಗಿ ಗುರುತಿಸಲ್ಪಟ್ಟಿತು. ಕರುಣೆಯಿಂದ ಯೆಹೋವನು, ಸಹೃದಯಿಗಳು ಬದುಕಿ ಉಳಿಯುವಂತೆ ಏರ್ಪಾಡುಗಳನ್ನು ಮಾಡಿದನು. ಈ ಬಾರಿ ಆತನು ತನ್ನ ಸಂದೇಶವನ್ನು ತಿಳಿಯಪಡಿಸಲು ಮಹಾ ಪ್ರವಾದಿಯಾದ ಯೇಸು ಕ್ರಿಸ್ತನನ್ನೇ ಉಪಯೋಗಿಸಿದನು. ಸಾ.ಶ. 33ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ದಂಡುಗಳು ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ.”—ಲೂಕ 21:20, 21.

8. (ಎ) ಯೇಸುವಿನ ಮರಣದ ನಂತರ, ಕಾಲಕ್ರಮೇಣ ಕೆಲವು ಕ್ರೈಸ್ತರಿಗೆ ಏನಾಗಿದ್ದಿರಬಹುದು? (ಬಿ) ಯೆರೂಸಲೇಮಿನ ಕುರಿತಾದ ಯೇಸುವಿನ ಪ್ರವಾದನ ಮಾತುಗಳು ಹೇಗೆ ನೆರವೇರಿದವು?

8 ವರ್ಷಗಳು ಗತಿಸಿದಂತೆ, ಯೇಸುವಿನ ಪ್ರವಾದನೆಯು ಯಾವಾಗ ನೆರವೇರುವುದೆಂದು ಯೆರೂಸಲೇಮಿನಲ್ಲಿದ್ದ ಕೆಲವು ಕ್ರೈಸ್ತರು ಸೋಜಿಗಪಟ್ಟಿದ್ದಿರಬಹುದು. ಅವರಲ್ಲಿ ಕೆಲವರು ನಿಸ್ಸಂದೇಹವಾಗಿಯೂ ತ್ಯಾಗಗಳನ್ನು ಮಾಡಿದ್ದರು. ಅವುಗಳಲ್ಲಿ ಕೆಲವೊಂದನ್ನು ಪರಿಗಣಿಸಿರಿ. ಎಚ್ಚರವಾಗಿರಬೇಕೆಂಬ ಅವರ ದೃಢಸಂಕಲ್ಪದ ಕಾರಣ ಅವರು ವ್ಯಾಪಾರದಲ್ಲಿ ತುಂಬ ಲಾಭಗಳಿಸುವ ಅವಕಾಶಗಳನ್ನು ತ್ಯಜಿಸಿಬಿಟ್ಟಿದ್ದಿರಬಹುದು. ಕಾಲಕ್ರಮೇಣ ಅವರು ದಣಿದುಹೋದರೊ? ತಾವು ಸಮಯವನ್ನು ಹಾಳುಮಾಡುತ್ತಿದ್ದೇವೆಂಬ ತೀರ್ಮಾನಕ್ಕೆ ಬರುತ್ತಾ, ಯೇಸುವಿನ ಪ್ರವಾದನೆಯು ತಮ್ಮ ಸಂತತಿಗಲ್ಲ ಬದಲಾಗಿ ಯಾವುದೊ ಮುಂದಿನ ಸಂತತಿಗೆ ಅನ್ವಯಿಸುತ್ತದೆಂದು ಅವರು ನೆನಸಿದರೊ? ಸಾ.ಶ. 66ರಲ್ಲಿ ರೋಮನರು ಯೆರೂಸಲೇಮನ್ನು ಸುತ್ತುವರಿದಾಗ ಯೇಸುವಿನ ಪ್ರವಾದನೆಯು ನೆರವೇರಲಾರಂಭಿಸಿತು. ಯಾರು ಎಚ್ಚರದಿಂದಿದ್ದರೊ ಅವರು ಸೂಚನೆಯನ್ನು ಗ್ರಹಿಸಿ, ನಗರವನ್ನು ಬಿಟ್ಟು ಓಡಿಹೋದರು. ಹೀಗೆ ಯೆರೂಸಲೇಮಿನ ಹಾಳುಗೆಡಹುವಿಕೆಯಿಂದ ಅವರು ಪಾರಾದರು.

ಎಚ್ಚರದಿಂದಿರುವುದರ ಅಗತ್ಯವನ್ನು ದೃಷ್ಟಾಂತಿಸುವುದು

9, 10. (ಎ) ತಮ್ಮ ಯಜಮಾನನು ಮದುವೆಯಿಂದ ಹಿಂದಿರುಗಿ ಬರುವ ವರೆಗೂ ಕಾದುಕೊಂಡಿದ್ದ ಆಳುಗಳ ಕುರಿತಾದ ಯೇಸುವಿನ ದೃಷ್ಟಾಂತವನ್ನು ನೀವು ಹೇಗೆ ಸಾರಾಂಶಿಸುವಿರಿ? (ಬಿ) ತಮ್ಮ ಯಜಮಾನನಿಗಾಗಿ ಕಾಯುವುದು ಆ ಆಳುಗಳಿಗೆ ಏಕೆ ಕಷ್ಟಕರವಾಗಿದ್ದಿರಬಹುದು? (ಸಿ) ತಾಳ್ಮೆಯಿಂದಿರುವುದು ಆಳುಗಳಿಗೆ ಏಕೆ ಪ್ರಯೋಜನಕರವಾಗಿತ್ತು?

9 ಎಚ್ಚರದಿಂದಿರುವ ಅಗತ್ಯವನ್ನು ಎತ್ತಿಹೇಳುತ್ತಾ ಯೇಸು ತನ್ನ ಶಿಷ್ಯರನ್ನು, ತನ್ನ ಮದುವೆಯನ್ನು ಮುಗಿಸಿಕೊಂಡು ಹಿಂದಿರುಗಲಿದ್ದ ಯಜಮಾನನಿಗಾಗಿ ಕಾಯುತ್ತಿರುವ ಆಳುಗಳಿಗೆ ಹೋಲಿಸಿದನು. ಒಂದು ನಿರ್ದಿಷ್ಟ ರಾತ್ರಿಯಂದು ಅವನು ಹಿಂದಿರುಗುವನೆಂದು ಅವರಿಗೆ ಗೊತ್ತಿತ್ತು. ಆದರೆ ಯಾವಾಗ? ರಾತ್ರಿಯ ಪ್ರಥಮ ಜಾವದಲ್ಲೊ? ಎರಡನೆಯ ಜಾವದಲ್ಲೊ? ಮೂರನೆಯ ಜಾವದಲ್ಲೊ? ಎಂಬುದು ಅವರಿಗೆ ತಿಳಿದಿರಲಿಲ್ಲ. ಯೇಸು ಹೇಳಿದ್ದು: “ಎರಡನೆಯ ಜಾವದಲ್ಲಿಯಾಗಲಿ ಮೂರನೆಯ ಜಾವದಲ್ಲಿಯಾಗಲಿ ಬಂದಾತನಿಗೆ [ಯಜಮಾನನಿಗೆ] ಹಾಗೆ ಕಾಣಿಸಿಕೊಂಡವರು [ಎಚ್ಚರದಿಂದಿರುವವರು] ಧನ್ಯರು.” (ಲೂಕ 12:35-38) ಆ ಆಳುಗಳ ಕಾತುರವನ್ನು ಸ್ವಲ್ಪ ಊಹಿಸಿಕೊಳ್ಳಿ. ಯಾವುದೇ ಶಬ್ದವಾದಾಗ, ಯಾವುದೇ ನೆರಳು ಅತ್ತಿತ್ತ ಸರಿದಾಡಿದಾಗ, ‘ಇದು ನಮ್ಮ ಯಜಮಾನನಾಗಿರಬಹುದೊ?’ ಎಂಬ ಅವರ ನಿರೀಕ್ಷಣೆಯು ಖಂಡಿತವಾಗಿಯೂ ಹೆಚ್ಚಾಗುತ್ತಿದ್ದಿರಬಹುದು.

10 ರಾತ್ರಿಯ ಒಂಬತ್ತು ಗಂಟೆಯಿಂದ ಮಧ್ಯರಾತ್ರಿಯ ವರೆಗಿನ ಎರಡನೆಯ ಜಾವದಲ್ಲಿ ಯಜಮಾನನು ಬಂದರೆ ಆಗೇನು? ನಸುಕಿನಿಂದ ಕಷ್ಟಪಟ್ಟು ದುಡಿದಿದ್ದವರನ್ನು ಸೇರಿಸಿ ಎಲ್ಲ ಆಳುಗಳು ಅವನನ್ನು ವಂದಿಸುವ ಸ್ಥಿತಿಯಲ್ಲಿರುವರೊ ಇಲ್ಲವೇ ಅವರಲ್ಲಿ ಕೆಲವರು ನಿದ್ರಿಸಿರುವರೊ? ಯಜಮಾನನು ಇನ್ನೂ ತಡವಾಗಿ, ಅಂದರೆ ಮಧ್ಯರಾತ್ರಿಯಿಂದ ಬೆಳಗ್ಗೆ ಮೂರು ಗಂಟೆಯ ವರೆಗಿನ ಮೂರನೆಯ ಜಾವದಲ್ಲಿ ಬಂದರೆ ಆಗೇನು? ತಮ್ಮ ಯಜಮಾನನು ತಡವಾಗಿ ಬರುತ್ತಿದ್ದಾನೆಂದು ತೋರುತ್ತಿದ್ದದ್ದರಿಂದ ಆಳುಗಳಲ್ಲಿ ಕೆಲವರು ಹತಾಶರೂ ಅತೃಪ್ತರೂ ಆಗಲಿದ್ದರೊ? * ಯಜಮಾನನು ಬಂದಾಗ ಎಚ್ಚರವಾಗಿದ್ದವರನ್ನು ಮಾತ್ರ ಧನ್ಯರೆಂದು ಸಂಬೋಧಿಸಲಾಗುತ್ತಿತ್ತು. ಅವರಿಗೆ ಜ್ಞಾನೋಕ್ತಿ 13:12​ರ ಮಾತುಗಳು ಖಂಡಿತವಾಗಿಯೂ ಅನ್ವಯವಾಗುವವು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.”

11. ಎಚ್ಚರದಿಂದಿರಲು ನಮಗೆ ಪ್ರಾರ್ಥನೆಯು ಹೇಗೆ ಸಹಾಯಮಾಡಬಲ್ಲದು?

11 ಆದರೆ ತಡವಾಗುತ್ತಿರುವಂತೆ ತೋರುವ ಅವಧಿಯಲ್ಲಿ ಎಚ್ಚರದಿಂದಿರುವಂತೆ ಯೇಸುವಿನ ಹಿಂಬಾಲಕರಿಗೆ ಯಾವುದು ಸಹಾಯ ಮಾಡಸಾಧ್ಯವಿತ್ತು? ತನ್ನ ಬಂಧನದ ಸ್ವಲ್ಪ ಸಮಯಕ್ಕೆ ಮುಂಚೆ ಯೇಸು ಗೆತ್ಸೇಮನೆ ತೋಟದಲ್ಲಿದ್ದಾಗ, ತನ್ನ ಅಪೊಸ್ತಲರಲ್ಲಿ ಮೂವರಿಗೆ ಹೇಳಿದ್ದು: “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು [“ಎಡೆಬಿಡದೆ,” NW] ಪ್ರಾರ್ಥಿಸಿರಿ.” (ಮತ್ತಾಯ 26:41) ಆ ಸಂದರ್ಭದಲ್ಲಿ ಉಪಸ್ಥಿತನಿದ್ದ ಪೇತ್ರನು, ವರ್ಷಗಳಾನಂತರ ಅದೇ ರೀತಿಯ ಸಲಹೆಯನ್ನು ಜೊತೆ ಕ್ರೈಸ್ತರಿಗೆ ನೀಡಿದನು. ಅವನು ಬರೆದುದು: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ.” (1 ಪೇತ್ರ 4:7) ಶ್ರದ್ಧಾಪೂರ್ವಕವಾದ ಪ್ರಾರ್ಥನೆಯು ನಮ್ಮ ಕ್ರೈಸ್ತ ದಿನಚರಿಯ ಒಂದು ಭಾಗವಾಗಿರಬೇಕೆಂಬುದು ಸ್ಪಷ್ಟ. ಎಚ್ಚರವಾಗಿರುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ನಾವು ಯೆಹೋವನಲ್ಲಿ ನಿರಂತರವಾಗಿ ಬೇಡಿಕೊಳ್ಳುತ್ತಾ ಇರಬೇಕೆಂಬುದು ನಿಶ್ಚಯ.—ರೋಮಾಪುರ 12:12; 1 ಥೆಸಲೊನೀಕ 5:17.

12. ಊಹಾಪೋಹಗಳನ್ನು ಮಾಡುವ ಮತ್ತು ಎಚ್ಚರದಿಂದಿರುವುದರ ನಡುವಿನ ವ್ಯತ್ಯಾಸವೇನು?

12 “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ” ಎಂದು ಸಹ ಪೇತ್ರನು ಹೇಳಿದ್ದನ್ನು ಗಮನಿಸಿರಿ. ಆದರೆ, ಅದು ಎಷ್ಟು ಹತ್ತಿರವಾಗಿದೆ? ನಿಖರವಾದ ದಿನ ಮತ್ತು ಗಳಿಗೆಯನ್ನು ಮನುಷ್ಯರು ಸೂಚಿಸಲು ಸಾಧ್ಯವೇ ಇಲ್ಲ. (ಮತ್ತಾಯ 24:36) ಆದರೆ, ಬೈಬಲು ಉತ್ತೇಜಿಸದಂತಹ ಊಹಾಪೋಹಗಳಲ್ಲಿ ತಲ್ಲೀನರಾಗಿರುವುದು ಮತ್ತು ಬೈಬಲು ಉತ್ತೇಜಿಸುವ ಅಂತ್ಯದ ನಿರೀಕ್ಷಣೆಯಲ್ಲಿರುವುದರ ನಡುವೆ ತುಂಬ ವ್ಯತ್ಯಾಸವಿದೆ. (2 ತಿಮೊಥೆಯ 4:3, 4; ತೀತ 3:9​ನ್ನು ಹೋಲಿಸಿ.) ನಾವು ಅಂತ್ಯದ ನಿರೀಕ್ಷಣೆಯಲ್ಲಿರುವ ಒಂದು ವಿಧವು ಯಾವುದು? ಅಂತ್ಯವು ಹತ್ತಿರವಾಗಿದೆಯೆಂಬುದರ ಸಾಕ್ಷ್ಯಕ್ಕೆ ಹೆಚ್ಚಿನ ಗಮನವನ್ನು ಕೊಡುವುದೇ ಆಗಿದೆ. ಆದುದರಿಂದ, ಈ ಭಕ್ತಿಹೀನ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ರುಜುಪಡಿಸುವಂತಹ ಸಾಕ್ಷ್ಯಗಳಲ್ಲಿ ಆರು ಸಾಕ್ಷ್ಯಗಳನ್ನು ನಾವು ಪುನರ್ವಿಮರ್ಶಿಸೋಣ.

ಮನಗಾಣಿಸುವಂತಹ ಆರು ಸಾಕ್ಷ್ಯಗಳು

13. ಎರಡನೆಯ ತಿಮೊಥೆಯ 3ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಪ್ರವಾದನೆಯು, ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ನಿಮಗೆ ಹೇಗೆ ಮನಗಾಣಿಸುತ್ತದೆ?

13ಮೊದಲನೆಯದಾಗಿ, “ಕಡೇ ದಿವಸಗಳ” ಕುರಿತಾದ ಅಪೊಸ್ತಲ ಪೌಲನ ಪ್ರವಾದನೆಯ ನೆರವೇರಿಕೆಯನ್ನು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಪೌಲನು ಬರೆದುದು: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು. ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1-5, 13) ಈ ಪ್ರವಾದನೆಯು ನಮ್ಮ ದಿನಗಳಲ್ಲಿ ನೆರವೇರುತ್ತಿರುವುದನ್ನು ನಾವು ನೋಡುವುದಿಲ್ಲವೇ? ವಾಸ್ತವಾಂಶಗಳನ್ನು ಅಲಕ್ಷಿಸುವವರು ಮಾತ್ರವೇ ಈ ಸಂಗತಿಯನ್ನು ನಿರಾಕರಿಸಬಲ್ಲರು! *

14. ಪಿಶಾಚನ ಕುರಿತಾದ ಪ್ರಕಟನೆ 12:9ರಲ್ಲಿರುವ ಮಾತುಗಳು ಇಂದು ಹೇಗೆ ನೆರವೇರುತ್ತಿವೆ, ಮತ್ತು ಬೇಗನೆ ಅವನಿಗೆ ಏನಾಗುವುದು?

14ಎರಡನೆಯದಾಗಿ, ಪ್ರಕಟನೆ 12:9ರ ನೆರವೇರಿಕೆಯಲ್ಲಿ ಪರಲೋಕದಿಂದ ಸೈತಾನನ ಮತ್ತು ಅವನ ದೆವ್ವಗಳು ದೊಬ್ಬಲ್ಪಟ್ಟಿರುವುದರ ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.” ಇದು ಭೂಮಿಗೆ ಮಹಾ ದುರ್ಗತಿಯನ್ನು ತಂದಿದೆ. ವಿಶೇಷವಾಗಿ 1914ರಿಂದ ಮಾನವಕುಲವು ತುಂಬ ದುರ್ಗತಿಯನ್ನು ಅನುಭವಿಸಿದೆ. ಆದರೆ ಪಿಶಾಚನು ಈ ಭೂಮಿಗೆ ದೊಬ್ಬಲ್ಪಡುವಾಗ, ಅವನಿಗೆ ‘ತನಗಿರುವ ಕಾಲವು ಸ್ವಲ್ಪವೆಂದು ತಿಳಿದಿರುತ್ತದೆ’ ಎಂದು ಪ್ರಕಟನೆಯಲ್ಲಿನ ಆ ಪ್ರವಾದನೆಯು ಕೂಡಿಸುತ್ತದೆ. (ಪ್ರಕಟನೆ 12:12) ಈ ಅವಧಿಯಲ್ಲಿ ಸೈತಾನನು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರೊಂದಿಗೆ ಯುದ್ಧ ನಡೆಸುತ್ತಾನೆ. (ಪ್ರಕಟನೆ 12:17) ನಮ್ಮ ಸಮಯದಲ್ಲಿ ಅವನ ಆಕ್ರಮಣದ ಪರಿಣಾಮಗಳನ್ನು ನಾವು ನಿಶ್ಚಯವಾಗಿಯೂ ನೋಡಿದ್ದೇವೆ. * ಆದರೆ ಅತಿ ಬೇಗನೆ, ಸೈತಾನನು “ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ” ಅವನನ್ನು ಅಧೋಲೋಕದಲ್ಲಿ ಬಂಧಿಸಲಾಗುವುದು.—ಪ್ರಕಟನೆ 20:1-3.

15. ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆಂಬುದರ ಸಾಕ್ಷ್ಯವನ್ನು ಪ್ರಕಟನೆ 17:9-11 ಹೇಗೆ ಕೊಡುತ್ತದೆ?

15ಮೂರನೆಯದಾಗಿ, ಪ್ರಕಟನೆ 17:9-11ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ ಎಂಟನೆಯ ಮತ್ತು ಕೊನೆಯ ‘ಅರಸನ’ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಏಳು ಲೋಕ ಶಕ್ತಿಗಳನ್ನು ಪ್ರತಿನಿಧಿಸುವ ಏಳು ಅರಸರ—ಐಗುಪ್ತ, ಅಶ್ಶೂರ, ಬಾಬೆಲ್‌, ಮೇದ್ಯಯ ಪಾರಸೀಯ, ಗ್ರೀಸ್‌, ರೋಮ್‌ ಮತ್ತು ಆಂಗ್ಲೊ ಅಮೆರಿಕನ್‌ ಉಭಯ ಲೋಕ ಶಕ್ತಿಯ—ಕುರಿತು ಅಪೊಸ್ತಲ ಯೋಹಾನನು ತಿಳಿಸುತ್ತಾನೆ. ‘ಏಳನೆಯ ಅರಸನಿಂದ ಬರುವ ಎಂಟನೆಯ ಅರಸನನ್ನು’ ಕೂಡ ಯೋಹಾನನು ನೋಡುತ್ತಾನೆ. ಈ ಎಂಟನೆಯ ಅರಸನು, ಯೋಹಾನನು ದರ್ಶನದಲ್ಲಿ ನೋಡುವ ಕೊನೆಯ ಅರಸನಾಗಿದ್ದು, ವಿಶ್ವ ಸಂಸ್ಥೆಯನ್ನು ಪ್ರತಿನಿಧಿಸುತ್ತಾನೆ. ಈ ಎಂಟನೆಯ ಅರಸನು “ನಾಶಕ್ಕೆ ಹೋಗುವನು” ಎಂದು ಯೋಹಾನನು ಹೇಳುತ್ತಾನೆ. ಅದರ ನಂತರ ಯಾವುದೇ ಭೂರಾಜರ ಉಲ್ಲೇಖ ಅಲ್ಲಿಲ್ಲ. *

16. ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ನೆರವೇರಿಕೆಯಲ್ಲಿ, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ವಾಸ್ತವಾಂಶಗಳು ಹೇಗೆ ಸೂಚಿಸುತ್ತವೆ?

16ನಾಲ್ಕನೆಯದಾಗಿ, ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ಕಾಲುಗಳಿಂದ ಸಂಕೇತಿಸಲ್ಪಟ್ಟಿರುವ ಅವಧಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಮನುಷ್ಯನ ರೂಪದಲ್ಲಿರುವ ಅತಿದೊಡ್ಡ ಪ್ರತಿಮೆಯ ಕುರಿತ ಈ ರಹಸ್ಯಮಯ ಕನಸಿನ ಅರ್ಥವನ್ನು ಪ್ರವಾದಿಯಾದ ದಾನಿಯೇಲನು ತಿಳಿಸಿದನು. (ದಾನಿಯೇಲ 2:36-43) ಆ ಪ್ರತಿಮೆಯ ನಾಲ್ಕು ಲೋಹದ ಭಾಗಗಳು ವಿಭಿನ್ನ ಲೋಕ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಅವು ತಲೆಯಿಂದ (ಬಾಬೆಲ್‌ ಸಾಮ್ರಾಜ್ಯ) ಆರಂಭಿಸಿ, ಕಾಲು ಮತ್ತು ಕಾಲ್ಬೆರಳುಗಳ (ಇಂದು ಆಳುತ್ತಿರುವ ಸರಕಾರಗಳು) ವರೆಗೆ ವಿಸ್ತರಿಸುತ್ತವೆ. ಪ್ರತಿಮೆಯಲ್ಲಿ ಪ್ರತಿನಿಧಿಸಲ್ಪಟ್ಟ ಎಲ್ಲ ಲೋಕ ಶಕ್ತಿಗಳು ಬಂದುಹೋಗಿವೆ. ಆ ಪ್ರತಿಮೆಯ ಕಾಲುಗಳನ್ನು ಸೂಚಿಸುವ ಸಮಯಾವಧಿಯಲ್ಲಿ ನಾವಿಂದು ಜೀವಿಸುತ್ತಾ ಇದ್ದೇವೆ. ಮುಂದೆ ಬರಲಿರುವ ಬೇರೆ ಲೋಕ ಶಕ್ತಿಗಳ ಉಲ್ಲೇಖವೇ ಅಲ್ಲಿಲ್ಲ. *

17. ನಮ್ಮ ರಾಜ್ಯ ಸಾರುವಿಕೆಯ ಕೆಲಸವು ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆಂಬುದಕ್ಕೆ ಹೆಚ್ಚಿನ ಸಾಕ್ಷ್ಯವನ್ನು ಹೇಗೆ ಕೊಡುತ್ತದೆ?

17ಐದನೆಯದಾಗಿ, ಈ ವ್ಯವಸ್ಥೆಯು ಅಂತ್ಯವಾಗುವ ಸ್ವಲ್ಪ ಮುಂಚೆ ನಡೆಯಲಿರುವುದೆಂದು ಯೇಸು ಹೇಳಿದ ಭೌಗೋಲಿಕ ಸಾರುವ ಕೆಲಸವು ಪೂರೈಸಲ್ಪಡುತ್ತಿರುವುದನ್ನು ನಾವು ನೋಡುತ್ತೇವೆ. ಯೇಸು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಇಂದು ಆ ಪ್ರವಾದನೆಯು ಅಭೂತಪೂರ್ವವಾದ ಪ್ರಮಾಣದಲ್ಲಿ ನೆರವೇರುತ್ತಿದೆ. ಸಾಕ್ಷಿನೀಡಲ್ಪಟ್ಟಿರದ ಕೆಲವೊಂದು ಕ್ಷೇತ್ರಗಳು ಈಗಲೂ ಇರುವುದಾದರೂ, ಯೆಹೋವನ ತಕ್ಕ ಸಮಯದಲ್ಲಿ ಆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ಸಿಗಬಹುದು. (1 ಕೊರಿಂಥ 16:9) ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ವೈಯಕ್ತಿಕವಾಗಿ ಸಾಕ್ಷಿಯು ಸಿಗುವ ವರೆಗೆ ಯೆಹೋವನು ಮಹಾ ಸಂಕಟವನ್ನು ತಡೆದುಹಿಡಿಯುವನೆಂದು ಬೈಬಲು ಹೇಳುವುದಿಲ್ಲ. ಬದಲಿಗೆ, ಯೆಹೋವನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಸುವಾರ್ತೆಯು ಸಾರಲ್ಪಡಬೇಕು. ಆಗ ಅಂತ್ಯವು ಬರುವುದು.—ಮತ್ತಾಯ 10:23ನ್ನು ಹೋಲಿಸಿರಿ.

18. ಮಹಾ ಸಂಕಟವು ಆರಂಭವಾಗುವಾಗ ಅಭಿಷಿಕ್ತರಲ್ಲಿ ಕೆಲವರು ಎಲ್ಲಿರುವರು, ಮತ್ತು ಇದನ್ನು ಹೇಗೆ ನಿರ್ಧರಿಸಬಹುದು?

18ಆರನೆಯದಾಗಿ, ಮಹಾ ಸಂಕಟವು ಆರಂಭವಾಗುವಾಗ ಕ್ರಿಸ್ತನ ನಿಜವಾದ ಅಭಿಷಿಕ್ತ ಶಿಷ್ಯರಲ್ಲಿ ಕೆಲವರು ಈ ಭೂಮಿಯಲ್ಲೇ ಇರಬಹುದಾದರೂ, ಅವರ ಸಂಖ್ಯೆಯು ಕಡಿಮೆಯಾಗುತ್ತಾ ಇದೆ. ಉಳಿಕೆಯವರಲ್ಲಿ ಹೆಚ್ಚಿನವರು ತುಂಬ ವೃದ್ಧರಾಗಿದ್ದಾರೆ, ಮತ್ತು ವರ್ಷಗಳು ಗತಿಸಿದಂತೆ ನಿಜವಾಗಿ ಅಭಿಷಿಕ್ತರಾಗಿರುವವರ ಸಂಖ್ಯೆಯು ಕಡಿಮೆಯಾಗುತ್ತಾ ಬಂದಿದೆ. ಆದರೂ, ಮಹಾ ಸಂಕಟಕ್ಕೆ ಸೂಚಿಸುತ್ತಾ ಯೇಸು ತಿಳಿಸಿದ್ದು: “ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.” (ಮತ್ತಾಯ 24:21, 22) ಆದುದರಿಂದ, ಮಹಾ ಸಂಕಟವು ಆರಂಭವಾಗುವಾಗ, ಕ್ರಿಸ್ತನು ‘ಆದುಕೊಂಡವರಲ್ಲಿ’ ಕೆಲವರು ಇನ್ನೂ ಭೂಮಿಯಲ್ಲಿರುವರು ಎಂಬುದು ಸ್ಪಷ್ಟ. *

ಮುಂದೇನು ಕಾದಿದೆ?

19, 20. ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ಈಗ ಎಚ್ಚರದಿಂದಿರುವುದು ಹೆಚ್ಚು ತುರ್ತಿನದ್ದಾಗಿದೆ ಏಕೆ?

19 ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ? ರೋಮಾಂಚಕ ಸಮಯಗಳು ಇನ್ನೂ ಮುಂದೆ ಬರಲಿವೆ. “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವದೆಂದು” ಪೌಲನು ಎಚ್ಚರಿಸಿದ್ದನು. ಲೌಕಿಕ ವಿಷಯಗಳಲ್ಲಿ ಜ್ಞಾನಿಗಳಾಗಿ ತೋರುವ ಜನರಿಗೆ ಸೂಚಿಸುತ್ತಾ ಅವನು ಹೇಳುವುದು: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು.” ಆದುದರಿಂದ ಪೌಲನು ತನ್ನ ವಾಚಕರನ್ನು ಉತ್ತೇಜಿಸುವುದು: “ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:2, 3, 6) ಶಾಂತಿ ಮತ್ತು ಭದ್ರತೆಗಾಗಿ ಮಾನವ ಸಂಸ್ಥೆಗಳ ಕಡೆಗೆ ನೋಡುವವರು ನಿಜವಾಗಿಯೂ ವಾಸ್ತವಿಕತೆಯನ್ನು ಅಲಕ್ಷಿಸುತ್ತಿದ್ದಾರೆ. ಅಂಥವರು ಗಾಢನಿದ್ರೆಯಲ್ಲಿದ್ದಾರೆ!

20 ಈ ವಿಷಯಗಳ ವ್ಯವಸ್ಥೆಯ ನಾಶನವು ಗಮನಾರ್ಹವಾದ ರೀತಿಯಲ್ಲಿ ಹಠಾತ್ತನೆ ಬರುವುದು. ಆದುದರಿಂದ, ಯೆಹೋವನ ದಿನಕ್ಕಾಗಿ ಕಾದುಕೊಂಡಿರಿ. ದೇವರು ತಾನೇ ಹಬಕ್ಕೂಕನಿಗೆ ಹೇಳಿದ್ದು, ಅದು “ತಾಮಸವಾಗದು”! ಹೌದು, ಹಿಂದೆಂದಿಗಿಂತಲೂ ಹೆಚ್ಚು ಎಚ್ಚರದಿಂದಿರುವ ಸಮಯವು ಇದಾಗಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 10 ಯಜಮಾನನು ಆಳುಗಳಿಗೆ ತಾನು ಹಿಂದಿರುಗಿ ಬರುವ ಸಮಯದ ಕುರಿತಾಗಿ ಮೊದಲೇ ತಿಳಿಸಿರಲಿಲ್ಲ. ಆದುದರಿಂದ, ತನ್ನ ಬಂದುಹೋಗುವಿಕೆಗಳ ಕುರಿತಾಗಿ ಆಳುಗಳಿಗೆ ತಿಳಿಸುವ ಅಗತ್ಯವಿರಲಿಲ್ಲ, ಅಥವಾ ತನ್ನ ತಡವಾದ ಬರೋಣಕ್ಕಾಗಿ ಅವರಿಗೆ ಯಾವುದೇ ವಿವರಣೆಯನ್ನು ಕೊಡುವ ಅಗತ್ಯವಿರಲಿಲ್ಲ.

^ ಪ್ಯಾರ. 13 ಈ ಪ್ರವಾದನೆಯ ವಿವರವಾದ ಚರ್ಚೆಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿರಿ.

^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 180-6ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 16 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 4ನೆಯ ಅಧ್ಯಾಯವನ್ನು ನೋಡಿರಿ.

^ ಪ್ಯಾರ. 18 ಕುರಿ ಮತ್ತು ಆಡುಗಳ ಸಾಮ್ಯದಲ್ಲಿ, ಮನುಷ್ಯಕುಮಾರನು ಮಹಾ ಸಂಕಟದ ಸಮಯದಲ್ಲಿ ಮಹಿಮಾಭರಿತನಾಗಿ ಬಂದು, ನ್ಯಾಯತೀರ್ಪು ಮಾಡುವುದಕ್ಕೆ ಕುಳಿತುಕೊಳ್ಳುತ್ತಾನೆ. ಜನರು ತನ್ನ ಅಭಿಷಿಕ್ತ ಸಹೋದರರಿಗೆ ನೀಡಿದ ಬೆಂಬಲದ ಆಧಾರದ ಮೇಲೆಯೇ ಅವನು ಅವರ ನ್ಯಾಯತೀರ್ಪು ಮಾಡುತ್ತಾನೆ. ಆದುದರಿಂದ, ಕ್ರಿಸ್ತನ ಎಲ್ಲ ಅಭಿಷಿಕ್ತ ಸಹೋದರರು ನ್ಯಾಯತೀರ್ಪು ಆರಂಭಿಸುವ ಬಹಳಷ್ಟು ಸಮಯದ ಮುಂಚೆಯೇ ಭೂಕ್ಷೇತ್ರವನ್ನು ಬಿಟ್ಟುಹೋಗಿರುವುದಾದರೆ, ನ್ಯಾಯತೀರ್ಪಿಗಾಗಿರುವ ಈ ಆಧಾರವು ಅರ್ಥಹೀನವಾಗಿರುವುದು.—ಮತ್ತಾಯ 25:31-46.

ನಿಮಗೆ ಜ್ಞಾಪಕವಿದೆಯೆ?

• ಯಾವ ಶಾಸ್ತ್ರೀಯ ಉದಾಹರಣೆಗಳು ನಮಗೆ ಎಚ್ಚರದಿಂದಿರಲು ಸಹಾಯಮಾಡಬಲ್ಲವು?

• ಎಚ್ಚರದಿಂದಿರುವ ಅಗತ್ಯವನ್ನು ಯೇಸು ಹೇಗೆ ದೃಷ್ಟಾಂತಿಸಿ ಹೇಳಿದನು?

• ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ರುಜುಪಡಿಸುವ ಸಾಕ್ಷ್ಯಗಳಲ್ಲಿ ಆರು ಯಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಏ. ಏಚ್‌. ಮ್ಯಾಕ್‌ಮಿಲನರು, ಸುಮಾರು ಆರು ದಶಕಗಳ ವರೆಗೆ ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸಿದರು

[ಪುಟ 10ರಲ್ಲಿರುವ ಚಿತ್ರ]

ಯೇಸು ತನ್ನ ಶಿಷ್ಯರನ್ನು, ಎಚ್ಚರದಿಂದಿರುವ ಆಳುಗಳಿಗೆ ಹೋಲಿಸಿದನು