ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಷ್ಟರಿಗೆ ಇನ್ನೆಷ್ಟು ಸಮಯ ಉಳಿದಿದೆ?

ದುಷ್ಟರಿಗೆ ಇನ್ನೆಷ್ಟು ಸಮಯ ಉಳಿದಿದೆ?

ದುಷ್ಟರಿಗೆ ಇನ್ನೆಷ್ಟು ಸಮಯ ಉಳಿದಿದೆ?

“[ಯೆಹೋವನೇ] ದುಷ್ಟನು ತನಗಿಂತ ಯೋಗ್ಯನನ್ನು ನುಂಗಿಬಿಡುವಾಗ ಏಕೆ ಸುಮ್ಮನಿದ್ದೀ?”—ಹಬಕ್ಕೂಕ 1:13.

1. ಭೂಮಿಯು ಯಾವಾಗ ಯೆಹೋವನ ಮಹಿಮೆಯ ಜ್ಞಾನದಿಂದ ಪೂರ್ಣವಾಗಿ ತುಂಬಿಕೊಂಡಿರುವುದು?

ದೇವರು ದುಷ್ಟರನ್ನು ಎಂದಾದರೂ ನಾಶಮಾಡುವನೊ? ಒಂದುವೇಳೆ ನಾಶಮಾಡುವಲ್ಲಿ, ಅದಕ್ಕಾಗಿ ನಾವು ಇನ್ನೆಷ್ಟು ಸಮಯ ಕಾಯಬೇಕು? ಲೋಕದಾದ್ಯಂತ ಜನರು ಇಂತಹ ಪ್ರಶ್ನೆಗಳನ್ನೇ ಕೇಳುತ್ತಾರೆ. ಇದಕ್ಕೆ ಉತ್ತರಗಳನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ನಾವು ಇದಕ್ಕೆ ದೇವರ ನೇಮಿತ ಸಮಯದ ಕುರಿತು ದೈವಿಕ ಪ್ರೇರಣೆಯಿಂದ ಬರೆಯಲ್ಪಟ್ಟಿರುವ ಪ್ರವಾದನ ವಾಕ್ಯಗಳಲ್ಲಿ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ. ದುಷ್ಟ ಜನರೆಲ್ಲರ ಮೇಲೆ ಯೆಹೋವನು ಬೇಗನೆ ನ್ಯಾಯತೀರ್ಪನ್ನು ಬರಮಾಡುವನೆಂಬ ಆಶ್ವಾಸನೆಯನ್ನು ಅವು ಕೊಡುತ್ತವೆ. ತದನಂತರವೇ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.” ದೇವರ ಪವಿತ್ರ ವಾಕ್ಯದಲ್ಲಿರುವ ಹಬಕ್ಕೂಕ 2:14ರಲ್ಲಿ ಕಂಡುಕೊಳ್ಳಲ್ಪಡುವ ಪ್ರವಾದನ ವಾಗ್ದಾನವು ಇದೇ ಆಗಿದೆ.

2. ಯಾವ ಮೂರು ದೈವಿಕ ನ್ಯಾಯತೀರ್ಪುಗಳು ಹಬಕ್ಕೂಕನ ಪುಸ್ತಕದಲ್ಲಿವೆ?

2 ಸಾ.ಶ.ಪೂ. 628ರ ಸುಮಾರಿಗೆ ಬರೆಯಲ್ಪಟ್ಟ ಹಬಕ್ಕೂಕನ ಪುಸ್ತಕವು, ಯೆಹೋವ ದೇವರಿಂದ ವಿಧಿಸಲ್ಪಟ್ಟ ನ್ಯಾಯತೀರ್ಪುಗಳ ಸರಣಿಯಲ್ಲಿ ಮೂರನ್ನು ಒಳಗೊಂಡಿದೆ. ಈ ನ್ಯಾಯತೀರ್ಪುಗಳಲ್ಲಿ ಎರಡು ಈಗಾಗಲೇ ನೆರವೇರಿವೆ. ಮೊದಲನೆಯದ್ದು, ಪುರಾತನ ಕಾಲದ ಹಟಮಾರಿ ಜನಾಂಗವಾದ ಯೆಹೂದದ ಮೇಲೆ ಯೆಹೋವನು ಬರಮಾಡಿದ ನ್ಯಾಯತೀರ್ಪಾಗಿತ್ತು. ಎರಡನೆಯ ನ್ಯಾಯತೀರ್ಪಿನ ಕುರಿತಾಗಿ ಏನು? ಅದು ದಬ್ಬಾಳಿಕೆ ನಡೆಸುತ್ತಿದ್ದ ಬಾಬೆಲಿನ ಮೇಲೆ ವಿಧಿಸಲ್ಪಟ್ಟ ದೇವರ ನ್ಯಾಯತೀರ್ಪಾಗಿತ್ತು. ಹಾಗಾದರೆ, ಈ ದೈವಿಕ ನ್ಯಾಯತೀರ್ಪುಗಳಲ್ಲಿ ಮೂರನೆಯದ್ದು ಸಹ ನೆರವೇರುವುದು ಎಂಬ ಭರವಸೆ ನಮಗಿರಲು ಇದು ಸಕಾರಣವನ್ನು ನೀಡುತ್ತದೆ. ವಾಸ್ತವದಲ್ಲಿ, ಅದರ ನೆರವೇರಿಕೆಯು ಅತಿ ಬೇಗನೆ ಸಂಭವಿಸುವುದೆಂಬ ನಿರೀಕ್ಷೆ ನಮಗಿರಸಾಧ್ಯವಿದೆ. ಈ ಕಡೇ ದಿವಸಗಳಲ್ಲಿ, ಯಥಾರ್ಥವಂತರಿಗೋಸ್ಕರ ದೇವರು ಎಲ್ಲ ದುಷ್ಟ ಜನರ ಮೇಲೆ ನಾಶನವನ್ನು ಬರಮಾಡುವನು. ವೇಗವಾಗಿ ಬರುತ್ತಿರುವ ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧದಲ್ಲಿ,’ ಈ ದುಷ್ಟರಲ್ಲಿ ಉಳಿದವರು ಕೊನೆಯುಸಿರೆಳೆಯುವರು.—ಪ್ರಕಟನೆ 16:14, 16.

3. ನಮ್ಮ ಕಾಲದಲ್ಲಿ ದುಷ್ಟರ ಮೇಲೆ ಯಾವ ವಿಪತ್ತು ಬಂದೆರಗಲಿದೆ?

3 ದೇವರ ಮಹಾ ದಿನದಲ್ಲಾಗುವ ಯುದ್ಧವು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗುತ್ತಿದೆ. ಯೆಹೂದ ಮತ್ತು ಬಾಬೆಲಿನ ಮೇಲೆ ಯೆಹೋವನ ನ್ಯಾಯತೀರ್ಪುಗಳ ನೆರವೇರಿಕೆಯು ಎಷ್ಟು ನಿಶ್ಚಿತವಾಗಿತ್ತೋ, ನಮ್ಮ ಸಮಯದ ದುಷ್ಟರ ಮೇಲೆ ಆತನು ಬರಮಾಡಲಿರುವ ದೈವಿಕ ನ್ಯಾಯತೀರ್ಪು ಸಹ ಅಷ್ಟೇ ನಿಶ್ಚಿತವಾಗಿದೆ. ಆದರೆ ಈಗ, ನಾವು ಹಬಕ್ಕೂಕನ ದಿನದ ಯೆಹೂದದಲ್ಲಿ ಇದ್ದೇವೆಂದು ಏಕೆ ಊಹಿಸಿಕೊಳ್ಳಬಾರದು? ಆ ದೇಶದಲ್ಲಿ ಏನು ನಡೆಯುತ್ತಿದೆ?

ಕ್ಷೋಭೆಗೊಳಗಾಗಿರುವ ಒಂದು ದೇಶ

4. ಹಬಕ್ಕೂಕನು ಯಾವ ಆಘಾತಕರ ಸುದ್ದಿಯನ್ನು ಕೇಳಿಸಿಕೊಳ್ಳುತ್ತಾನೆ?

4 ಯೆಹೋವನ ಪ್ರವಾದಿಯಾದ ಹಬಕ್ಕೂಕನು ತನ್ನ ಮನೆಯ ಸಮತಟ್ಟಾದ ಚಾವಣಿಯ ಮೇಲೆ ಕುಳಿತುಕೊಂಡು, ಸಾಯಂಕಾಲದ ತಂಗಾಳಿಯನ್ನು ಸವಿಯುತ್ತಿರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಅವನ ಪಕ್ಕದಲ್ಲಿ ಒಂದು ಸಂಗೀತ ವಾದ್ಯವಿದೆ. (ಹಬಕ್ಕೂಕ 1:1; 3:19) ಆದರೆ ಆಗ ಅವನು ಒಂದು ಆಘಾತಕರ ಸುದ್ದಿಯನ್ನು ಕೇಳಿಸಿಕೊಳ್ಳುತ್ತಾನೆ. ಯೆಹೂದದ ಅರಸನಾದ ಯೆಹೋಯಾಕೀಮನು ಪ್ರವಾದಿಯಾದ ಊರೀಯನನ್ನು ಕೊಂದು, ಅವನ ಶವವನ್ನು ಸಾಧಾರಣ ಜನರ ಗೋರಿಗಳ ನಡುವೆ ಹಾಕಿಸಿದ್ದನು. (ಯೆರೆಮೀಯ 26:23) ಭಯಭರಿತನಾಗಿ ಐಗುಪ್ತಕ್ಕೆ ಓಡಿಹೋಗುವ ಮೂಲಕ ಊರೀಯನು ಯೆಹೋವನಲ್ಲಿ ತನ್ನ ಭರವಸೆಯನ್ನು ಕಾಪಾಡಿಕೊಳ್ಳಲಿಲ್ಲ ಎಂಬುದೇನೋ ನಿಜ. ಆದರೂ, ಯೆಹೋಯಾಕೀಮನು ಯೆಹೋವನ ಮಹಿಮೆಯನ್ನು ಎತ್ತಿಹಿಡಿಯುವ ಬಯಕೆಯಿಂದ ಪ್ರಚೋದಿತನಾಗಿ ಈ ಹಿಂಸಾಕೃತ್ಯವನ್ನು ನಡೆಸಲಿಲ್ಲವೆಂಬುದು ಹಬಕ್ಕೂಕನಿಗೆ ಗೊತ್ತಿತ್ತು. ಅರಸನು ದೇವರ ಧರ್ಮಶಾಸ್ತ್ರಕ್ಕೆ ತೋರಿಸಿದ ಅಗೌರವದಿಂದ ಮತ್ತು ಪ್ರವಾದಿಯಾದ ಯೆರೆಮೀಯನಿಗೆ ಹಾಗೂ ಯೆಹೋವನ ಸೇವೆಮಾಡುತ್ತಿದ್ದ ಇನ್ನಿತರರಿಗೆ ತೋರಿಸಿದ ದ್ವೇಷಭಾವದಿಂದ ಇದು ಸುಸ್ಪಷ್ಟವಾಗುತ್ತದೆ.

5. ಯೆಹೂದದಲ್ಲಿ ಆತ್ಮಿಕ ಸ್ಥಿತಿಗತಿಯು ಹೇಗಿತ್ತು, ಮತ್ತು ಹಬಕ್ಕೂಕನು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದನು?

5 ಹತ್ತಿರದಲ್ಲಿದ್ದ ಮನೆಗಳ ಚಾವಣಿಗಳಿಂದ ಧೂಪದ ಹೊಗೆಯು ಮೇಲೇಳುತ್ತಿರುವುದನ್ನು ಹಬಕ್ಕೂಕನು ನೋಡುತ್ತಾನೆ. ಈ ಜನರು ಯೆಹೋವನ ಆರಾಧಕರೋಪಾದಿ ಈ ಧೂಪವನ್ನು ಉರಿಸುತ್ತಿಲ್ಲ. ಯೆಹೂದದ ದುಷ್ಟ ಅರಸನಾದ ಯೆಹೋಯಾಕೀಮನಿಂದ ಪ್ರಾಯೋಜಿಸಲ್ಪಟ್ಟ ಸುಳ್ಳು ಧಾರ್ಮಿಕ ಕೃತ್ಯಗಳಲ್ಲಿ ಅವರು ಒಳಗೂಡಿದ್ದಾರೆ. ಎಂತಹ ನಾಚಿಕೆಗೇಡಿತನ! ಹಬಕ್ಕೂಕನು ಕಂಬನಿಗರೆಯುತ್ತಾ, ಹೀಗೆ ಮೊರೆಯಿಡುತ್ತಾನೆ: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ. ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ. ಹೀಗಿರಲು ಧರ್ಮೋಪದೇಶವು ಜಡವಾಗಿದೆ, ನ್ಯಾಯವು ಎಂದಿಗೂ ಸಾಗದು; ದುಷ್ಟನು ಶಿಷ್ಟನನ್ನು ಸುತ್ತಿಕೊಂಡಿದ್ದಾನೆ, ಆದದರಿಂದ ಸಾಗುವ ನ್ಯಾಯವು ವಕ್ರವೇ.”—ಹಬಕ್ಕೂಕ 1:2-4.

6. ಯೆಹೂದದಲ್ಲಿ ಧರ್ಮೋಪದೇಶಕ್ಕೆ ಮತ್ತು ನ್ಯಾಯಕ್ಕೆ ಏನು ಸಂಭವಿಸಿದೆ?

6 ಹೌದು, ಹಿಂಸಾಚಾರ ಮತ್ತು ಸುಲಿಗೆಗಳು ಎಲ್ಲೆಲ್ಲಿಯೂ ಇವೆ. ಹಬಕ್ಕೂಕನು ನೋಡುವಲ್ಲೆಲ್ಲ, ಕೇಡು, ಜಗಳ, ವ್ಯಾಜ್ಯಗಳೇ ಎದ್ದುಕಾಣುತ್ತವೆ. ‘ಧರ್ಮೋಪದೇಶವು ಜಡವಾಗಿದೆ’ ಅಂದರೆ ಅದು ಶಕ್ತಿಹೀನವಾಗಿದೆ. ಮತ್ತು ನ್ಯಾಯಕ್ಕೆ ಏನಾಗಿದೆ? ಅದು “ಎಂದಿಗೂ” ಜಯವನ್ನು ಸಾಧಿಸುವುದಿಲ್ಲ! ಅದು ಎಂದಿಗೂ ಗೆಲ್ಲುವುದಿಲ್ಲ. ಬದಲಾಗಿ ‘ದುಷ್ಟರು ಶಿಷ್ಟರನ್ನು ಸುತ್ತಿಕೊಂಡು’ ನಿರ್ದೋಷಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಏರ್ಪಡಿಸಲ್ಪಟ್ಟಿರುವ ಕಾನೂನುಬದ್ಧ ಕ್ರಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನಿಜವಾಗಿಯೂ ‘ನ್ಯಾಯವು ವಕ್ರವಾಗಿಯೇ ಸಾಗುತ್ತಿದೆ.’ ನ್ಯಾಯವು ದುರುಪಯೋಗಿಸಲ್ಪಡುತ್ತಿದೆ. ಎಷ್ಟು ವಿಷಾದನೀಯ ಪರಿಸ್ಥಿತಿ!

7. ಹಬಕ್ಕೂಕನು ಏನು ಮಾಡಲು ನಿರ್ಧರಿಸಿದ್ದಾನೆ?

7 ಹಬಕ್ಕೂಕನು ಒಂದಿಷ್ಟು ತಡೆದು, ಈ ಸನ್ನಿವೇಶದ ಕುರಿತು ಪುನರಾಲೋಚಿಸುತ್ತಾನೆ. ಅವನು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುತ್ತಾನೋ? ಖಂಡಿತವಾಗಿಯೂ ಇಲ್ಲ! ದೇವರ ನಂಬಿಗಸ್ತ ಸೇವಕರೆಲ್ಲರೂ ಅನುಭವಿಸಿದ ಹಿಂಸೆಯ ಕುರಿತು ಯೋಚಿಸಿದ ಬಳಿಕ, ಯೆಹೋವನ ಪ್ರವಾದಿಯೋಪಾದಿ ತಾನು ದೃಢನಿಶ್ಚಿತನೂ ಸ್ಥಿರಚಿತ್ತನೂ ಆಗಿ ಉಳಿಯುವ ನಿರ್ಧಾರವನ್ನು ಈ ನಿಷ್ಠಾವಂತನು ಮಾಡುತ್ತಾನೆ. ಹಬಕ್ಕೂಕನು ದೇವರ ಸಂದೇಶವನ್ನು ಪ್ರಕಟಿಸುತ್ತಾ ಮುಂದುವರಿಯಲಿದ್ದನು—ಇದು ಒಂದುವೇಳೆ ಅವನ ಮೇಲೆ ಮರಣವನ್ನು ಬರಮಾಡುವುದಾದರೂ ಅವನು ಈ ಕೆಲಸವನ್ನು ಬಿಡಲು ಸಿದ್ಧನಿರಲಿಲ್ಲ.

ಯೆಹೋವನು ನಂಬಲಸಾಧ್ಯವಾದ “ಕಾರ್ಯ”ವನ್ನು ಮಾಡುತ್ತಾನೆ

8, 9. ಯೆಹೋವನು ನಂಬಲಸಾಧ್ಯವಾದ ಯಾವ ಕಾರ್ಯವನ್ನು ಮಾಡುತ್ತಲಿದ್ದಾನೆ?

8 ದರ್ಶನದಲ್ಲಿ ಹಬಕ್ಕೂಕನು ದೇವರನ್ನು ಅಗೌರವಿಸುವಂತಹ ಸುಳ್ಳು ಧರ್ಮದ ಅನುಯಾಯಿಗಳನ್ನು ನೋಡುತ್ತಾನೆ. ಯೆಹೋವನು ಅವರಿಗೆ ಹೇಳುವ ವಿಷಯಕ್ಕೆ ಕಿವಿಗೊಡಿರಿ: “ಜನಾಂಗಗಳ ಮಧ್ಯೆ ನಡೆಯುವದನ್ನು ನೋಡಿರಿ, ದೃಷ್ಟಿಯಿಡಿರಿ, ಬೆರಗಾಗಿರಿ.” ದೇವರು ಈ ದುಷ್ಟರನ್ನು ಈ ರೀತಿ ಏಕೆ ಸಂಬೋಧಿಸುತ್ತಿದ್ದಾನೆ ಎಂದು ಹಬಕ್ಕೂಕನು ಕುತೂಹಲಪಟ್ಟಿದ್ದಿರಬಹುದು. ತದನಂತರ ಯೆಹೋವನು ಅವರಿಗೆ ಹೀಗೆ ಹೇಳುವುದನ್ನು ಅವನು ಕೇಳಿಸಿಕೊಳ್ಳುತ್ತಾನೆ: “ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು, ಅದು ನಿಮಗೆ ತಿಳಿಸಲ್ಪಟ್ಟರೂ ನೀವು ಅದನ್ನು ನಂಬುವದಿಲ್ಲ.” (ಹಬಕ್ಕೂಕ 1:5) ವಾಸ್ತವದಲ್ಲಿ, ಅವರು ನಂಬಲಸಾಧ್ಯವಾದಂತಹ ಈ ಕಾರ್ಯವನ್ನು ಯೆಹೋವನೇ ಮಾಡುತ್ತಿದ್ದಾನೆ. ಆ ಕಾರ್ಯವು ಏನಾಗಿದೆ?

9ಹಬಕ್ಕೂಕ 1:6-11ರಲ್ಲಿ ದಾಖಲಿಸಲ್ಪಟ್ಟಿರುವ ದೇವರ ಮುಂದಿನ ಮಾತುಗಳಿಗೆ ಹಬಕ್ಕೂಕನು ತೀವ್ರಾಸಕ್ತಿಯಿಂದ ಕಿವಿಗೊಡುತ್ತಾನೆ. ಇದು ಯೆಹೋವನ ಸಂದೇಶವಾಗಿದೆ ಮತ್ತು ಯಾವ ಸುಳ್ಳು ದೇವರಾಗಲಿ, ನಿರ್ಜೀವ ಮೂರ್ತಿಯಾಗಲಿ ಅದರ ನೆರವೇರಿಕೆಯನ್ನು ತಡೆಯಸಾಧ್ಯವಿಲ್ಲ: “ಇಗೋ, ತೀಕ್ಷ್ಣವೂ ತೀವ್ರವೂ ಆದ ಕಸ್ದೀಯ ಜನಾಂಗವನ್ನು ಎಬ್ಬಿಸುತ್ತಿದ್ದೇನೆ; ಆ ಜನರು ತಮ್ಮದಲ್ಲದ ಸಂಸ್ಥಾನಗಳನ್ನು ವಶಮಾಡಿಕೊಳ್ಳುವ ಹಾಗೆ ಲೋಕದಲ್ಲೆಲ್ಲಾ ಸಂಚರಿಸುವರು. ಅವರು ಕ್ರೂರರು, ಭಯಂಕರರು; ಅವರ ಅಧಿಕಾರವೂ [“ನ್ಯಾಯವೂ,” NW] ಗೌರವವೂ ಅವರಿಂದಲೇ ಹೊರಡುವವು. ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿವೆ, ಸಂಜೆಯ ತೋಳಗಳಿಗಿಂತ ಚುರುಕಾಗಿವೆ; ಅವರ ಸವಾರರು ಕುದುರೆಗಳನ್ನು ಕುಣಿದಾಡಿಸುವರು [“ಯುದ್ಧಾಶ್ವಗಳು ನೆಲವನ್ನು ಗೊರಸಿನಿಂದ ಕೆರೆದಿವೆ,” NW]; ದೂರದಿಂದ ಹತ್ತಿಕೊಂಡು ಬರುವರು; ಕೊಳ್ಳೆಗೆ ಆತುರಪಡುವ ಹದ್ದಿನಂತೆ ಹಾರಾಡುವರು. ಎಲ್ಲರೂ ಬಾಧಿಸಲು ಮುಖವನ್ನು ಮುಂದಕ್ಕೆ ಚಾಚಿಕೊಂಡು ನುಗ್ಗುವರು; ಜನರನ್ನು ಉಸುಬಿನಂತೆ ಲೆಕ್ಕವಿಲ್ಲದಷ್ಟು ಸೆರೆ ಹಿಡಿದು ಗುಂಪುಕೂಡಿಸುವರು. ಅರಸರನ್ನು ಧಿಕ್ಕರಿಸುವರು; ಸರದಾರರು ಅವರ ಹಾಸ್ಯಕ್ಕೆ ಗುರಿಯಾಗುವರು. ಒಂದೊಂದು ಕೋಟೆಯನ್ನೂ ತಾತ್ಸಾರಮಾಡಿ ದೂಳದಿಬ್ಬಹಾಕಿ ಆಕ್ರಮಿಸುವರು. ಕೂಡಲೆ ಬಿರುಗಾಳಿಯಂತೆ ಬೀಸುತ್ತಾ ಹಾದುಹೋಗುವರು; ಸ್ವಬಲವೇ ದೇವರು [“ಇದರ ದೇವನಿಂದಲೇ ಇದಕ್ಕೆ ಬಲ ಸಿಕ್ಕಿದೆ,” NW] ಎನ್ನುವ ಅಪರಾಧಕ್ಕೆ ಒಳಗಾಗುವರು.”

10. ಯೆಹೋವನಿಂದ ಯಾರು ಎಬ್ಬಿಸಲ್ಪಡುವರು?

10 ಸರ್ವೋನ್ನತನಿಂದ ಎಂತಹ ಒಂದು ಪ್ರವಾದನ ಎಚ್ಚರಿಕೆ! ಯೆಹೋವನು ಕಸ್ದೀಯರನ್ನು, ಅಂದರೆ ಕ್ರೂರ ಬಾಬೆಲ್‌ ಜನಾಂಗವನ್ನು ಎಬ್ಬಿಸುತ್ತಿದ್ದಾನೆ. ಅದು ‘ಲೋಕದಲ್ಲೆಲ್ಲಾ ಸಂಚರಿಸಿ’ ಅನೇಕಾನೇಕ ವಾಸಸ್ಥಾನಗಳನ್ನು ವಶಪಡಿಸಿಕೊಳ್ಳುವುದು. ಇದೆಷ್ಟು ದಿಗಿಲುಹುಟ್ಟಿಸುವಂತಹ ಸಂಗತಿಯಾಗಿದೆ! ಕಸ್ದೀಯರ ತಂಡವು ‘ಕ್ರೂರವೂ ಭಯಂಕರವೂ’ ಆಗಿದೆ, ಅಂದರೆ ಭೀತಿಕಾರಕವೂ ಭಯಾನಕವೂ ಆಗಿದೆ. ಅದು ತನ್ನದೇ ಆದ ಅಚಲ ನಿಯಮಗಳನ್ನು ಮಾಡಿಕೊಳ್ಳುತ್ತದೆ. ‘ಅದರ ನ್ಯಾಯವು ಅದರಿಂದಲೇ ಹೊರಡುವುದು.’

11. ಬಾಬೆಲಿನ ಸೈನ್ಯವು ಯೆಹೂದದ ಸೈನ್ಯದ ವಿರುದ್ಧ ಬರುತ್ತಿರುವುದನ್ನು ನೀವು ಹೇಗೆ ವರ್ಣಿಸುವಿರಿ?

11 ಬಾಬೆಲಿನ ಕುದುರೆಗಳು ವೇಗವಾಗಿ ಓಡುವ ಚಿರತೆಗಳಿಗಿಂತಲೂ ಚುರುಕಾಗಿವೆ. ಅದರ ಅಶ್ವಸೈನ್ಯವು, ರಾತ್ರಿಯಲ್ಲಿ ಬೇಟೆಯಾಡುವ ಹಸಿದ ತೋಳಗಳಿಗಿಂತಲೂ ಕ್ರೂರವಾಗಿದೆ. ಹೊರಡಲು ಹಾತೊರೆಯುತ್ತಿದ್ದು, ತಾಳ್ಮೆಯನ್ನು ಕಳೆದುಕೊಂಡಿರುವ ‘ಅದರ ಯುದ್ಧಾಶ್ವಗಳು ನೆಲವನ್ನು ಗೊರಸಿನಿಂದ ಕೆರೆಯುತ್ತವೆ.’ ಬಾಯಲ್ಲಿ ನೀರೂರಿಸುವ ಆಹಾರವನ್ನು ತಿನ್ನಲಿಕ್ಕಾಗಿ ಮಿಂಚಿನ ವೇಗದಲ್ಲಿ ಹಾರುತ್ತಿರುವ ಹದ್ದಿನಂತೆ ಕಸ್ದೀಯರು ಥಟ್ಟನೆ ತಮ್ಮ ಬೇಟೆಯ ಮೇಲೆ ಎರಗುವರು. ಇದು ಕೇವಲ ಕೊಳ್ಳೆಹೊಡೆಯುವಿಕೆಯಾಗಿದೆಯೊ, ಅಂದರೆ ಕೆಲವೇ ಸೈನಿಕರಿಂದ ಮಾಡಲ್ಪಡುವ ಒಂದು ದಾಳಿಯಾಗಿದೆಯೊ? ಖಂಡಿತವಾಗಿಯೂ ಇಲ್ಲ! ಧ್ವಂಸಮಾಡಲಿಕ್ಕಾಗಿ ಹಿಂಡುಹಿಂಡಾಗಿ ಬರುತ್ತಿರುವ ಬಹು ದೊಡ್ಡ ಗುಂಪಿನಂತೆ, ಅದು ‘ಎಲ್ಲರನ್ನು ಬಾಧಿಸಲಿಕ್ಕಾಗಿಯೇ’ ಬರುತ್ತಿದೆ. ಅವರ ಮುಖಗಳು ಅತ್ಯುತ್ಸಾಹದಿಂದ ಪ್ರಜ್ವಲಿಸುತ್ತಿವೆ. ಅವರು ಪಶ್ಚಿಮ ದಿಕ್ಕಿನಲ್ಲಿರುವ ಯೆಹೂದದ ಕಡೆಗೂ ಯೆರೂಸಲೇಮಿನ ಕಡೆಗೂ ಸಾಗುವಾಗ, ಮೂಡಲಗಾಳಿಯಂತೆ ವೇಗವಾಗಿ ಚಲಿಸುತ್ತಾರೆ. ಬಾಬೆಲಿನ ಸೈನ್ಯವು ಎಷ್ಟು ಜನರನ್ನು ಸೆರೆವಾಸಿಗಳಾಗಿ ಮಾಡುತ್ತದೆಂದರೆ, ಅದು ‘ಸೆರೆಯಾಳುಗಳನ್ನು ಉಸುಬಿನಂತೆ ಗುಂಪುಕೂಡಿಸುತ್ತಿದೆ.’

12. ಬಾಬೆಲಿನವರ ಮನೋಭಾವವೇನಾಗಿದೆ, ಮತ್ತು ಈ ದುಸ್ಸಾಧ್ಯ ವೈರಿಯು ಯಾವ ‘ಅಪರಾಧಕ್ಕೆ ಒಳಗಾಗುವನು’?

12 ಕಸ್ದೀಯರ ಸೇನೆಯು ಅರಸರನ್ನು ಧಿಕ್ಕರಿಸಿ, ಸರದಾರರನ್ನು ಅಪಹಾಸ್ಯಕ್ಕೆ ಗುರಿಮಾಡುತ್ತದೆ. ಇವರಲ್ಲಿ ಯಾರಿಗೂ ಅದರ ನಿರಂತರವಾದ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ. ಅದು ‘ಒಂದೊಂದು ಕೋಟೆಯನ್ನು ತಾತ್ಸಾರಮಾಡುತ್ತದೆ.’ ಏಕೆಂದರೆ ಬಾಬೆಲಿನವರು ‘ದೂಳದಿಬ್ಬಹಾಕು’ವಾಗ, ಅಂದರೆ ಆಕ್ರಮಣಮಾಡಲಿಕ್ಕಾಗಿ ದೂಳಿನ ದಿಬ್ಬವನ್ನು ನಿರ್ಮಿಸುವಾಗ ಪ್ರತಿಯೊಂದು ಕೋಟೆಯು ಇವರ ಕೈವಶವಾಗುತ್ತದೆ. ಯೆಹೋವನ ನೇಮಿತ ಸಮಯದಲ್ಲಿ, ಈ ದುಸ್ಸಾಧ್ಯ ವೈರಿಯು “ಬಿರುಗಾಳಿಯಂತೆ ಬೀಸುತ್ತಾ ಹಾದುಹೋಗು”ವನು. ಯೆಹೂದ ಹಾಗೂ ಯೆರೂಸಲೇಮನ್ನು ಆಕ್ರಮಿಸುವ ಮೂಲಕ, ಅದು ದೇವಜನರಿಗೆ ಹಾನಿಯನ್ನು ಉಂಟುಮಾಡುವ ‘ಅಪರಾಧಕ್ಕೆ ಒಳಗಾಗುವದು.’ ಕ್ಷಿಪ್ರವಾದ ವಿಜಯದ ಬಳಿಕ ಕಸ್ದೀಯರ ಸೇನಾಪತಿಯು ಹೀಗೆ ಜಂಬಕೊಚ್ಚಿಕೊಳ್ಳುವನು: ‘ಈ ಬಲವು ನಮ್ಮ ದೇವನಿಂದ ಬಂದದ್ದಾಗಿದೆ.’ ಆದರೆ ವಾಸ್ತವ ಸಂಗತಿಯ ಕುರಿತು ಅವನಿಗೆ ಎಷ್ಟು ಕೊಂಚ ತಿಳಿದಿದೆ!

ನಿರೀಕ್ಷೆಗಾಗಿ ದೃಢವಾದ ಆಧಾರ

13. ಹಬಕ್ಕೂಕನಲ್ಲಿ ಏಕೆ ನಿರೀಕ್ಷೆ ಹಾಗೂ ದೃಢಭರವಸೆಯಿತ್ತು?

13 ಯೆಹೋವನ ಉದ್ದೇಶಗಳ ಕುರಿತು ಹೆಚ್ಚಿನ ತಿಳಿವಳಿಕೆಯನ್ನು ಪಡೆದುಕೊಂಡ ಬಳಿಕ ಹಬಕ್ಕೂಕನ ಹೃದಯದಲ್ಲಿ ನಿರೀಕ್ಷೆಯು ಹುಟ್ಟುತ್ತದೆ. ಪೂರ್ಣ ಭರವಸೆಯುಳ್ಳವನಾಗಿ ಅವನು ಯೆಹೋವನ ಕುರಿತು ಪ್ರೀತಿ ಮತ್ತು ಆದರದಿಂದ ಮಾತಾಡುತ್ತಾನೆ. ಹಬಕ್ಕೂಕ 1:12ರಲ್ಲಿ (NW) ಗಮನಿಸಿದಂತೆ ಪ್ರವಾದಿಯು ಹೇಳುವುದು: “ನನ್ನ ದೇವರಾದ ಯೆಹೋವನೇ, ನನ್ನ ಸದಮಲಸ್ವಾಮಿಯೇ, ನೀನು ಅನಾದಿಯಿಂದಿದ್ದೀಯಲ್ಲಾ; ನಿನಗೆ ಸಾವಿಲ್ಲ.” ನಿಶ್ಚಯವಾಗಿಯೂ, ಯೆಹೋವನು “ಯುಗಯುಗಾಂತರಗಳಲ್ಲಿಯೂ” ಅಂದರೆ ಸದಾಕಾಲಕ್ಕೂ ದೇವರಾಗಿದ್ದಾನೆ.—ಕೀರ್ತನೆ 90:1, 2.

14. ಯೆಹೂದದ ಧರ್ಮಭ್ರಷ್ಟರು ಯಾವ ಮಾರ್ಗಕ್ರಮವನ್ನು ಬೆನ್ನಟ್ಟುತ್ತಿದ್ದರು?

14 ತನ್ನ ದೇವದತ್ತ ದರ್ಶನದ ಕುರಿತು ಪುನರಾಲೋಚಿಸುತ್ತಾ, ಹಾಗೂ ಅದು ಒದಗಿಸಿದ ಒಳನೋಟದಲ್ಲಿ ಆನಂದಿಸುತ್ತಾ ಆ ಪ್ರವಾದಿಯು ಹೇಳಿದ್ದು: “ಯೆಹೋವನೇ, . . . ನ್ಯಾಯತೀರ್ಪಿಗಾಗಿ ಅವರನ್ನು ನೇಮಿಸಿದ್ದೀ; ಶರಣನೇ, . . . ಶಿಕ್ಷೆಗಾಗಿ ಅವರನ್ನು ನಿಲ್ಲಿಸಿದ್ದೀ.” ದೇವರು ಯೆಹೂದದ ಧರ್ಮಭ್ರಷ್ಟರಿಗೆ ಪ್ರತಿಕೂಲವಾದ ನ್ಯಾಯದಂಡನೆಯನ್ನು ವಿಧಿಸಿದ್ದಾನೆ, ಮತ್ತು ಯೆಹೋವನಿಂದ ಬರುವ ಬಲವಾದ ತಿದ್ದುಪಾಟಿಗೆ, ಉಗ್ರವಾದ ದಂಡನೆಗೆ ಅವರು ಅರ್ಹರಾಗಿದ್ದಾರೆ. ಅವರು ಆತನನ್ನು ತಮ್ಮ ಬಂಡೆಯಂತೆ, ಏಕಮಾತ್ರ ಕೋಟೆಯಂತೆ, ಆಶ್ರಯದಂತೆ, ಮತ್ತು ರಕ್ಷಣೆಯ ಮೂಲನಂತೆ ಪರಿಗಣಿಸಬೇಕಾಗಿತ್ತು. (ಕೀರ್ತನೆ 62:7; 94:22; 95:1) ಆದರೂ, ಯೆಹೂದದ ಧರ್ಮಭ್ರಷ್ಟ ನಾಯಕರು ದೇವರ ಸಮೀಪಕ್ಕೆ ಬರುವುದಿಲ್ಲ, ಮತ್ತು ಯೆಹೋವನ ಹಾನಿರಹಿತ ಆರಾಧಕರನ್ನು ಎಡೆಬಿಡದೆ ಪೀಡಿಸುತ್ತಾರೆ.

15. ಯಾವ ಅರ್ಥದಲ್ಲಿ ಯೆಹೋವನ “ಕಣ್ಣುಗಳು ಕೇಡನ್ನು ನೋಡಲಾರದಷ್ಟು ಶುದ್ಧವಾಗಿವೆ”?

15 ಈ ಸನ್ನಿವೇಶವು ಯೆಹೋವನ ಪ್ರವಾದಿಯನ್ನು ಬಹಳವಾಗಿ ದುಃಖಕ್ಕೀಡುಮಾಡುತ್ತದೆ. ಆದುದರಿಂದ ಅವನು ಹೇಳುವುದು: “ನಿನ್ನ ಕಣ್ಣುಗಳು ಕೇಡನ್ನು ನೋಡಲಾರದಷ್ಟು ಶುದ್ಧವಾಗಿವೆ; ಮತ್ತು ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ.” (ಹಬಕ್ಕೂಕ 1:13, NW) ಹೌದು, ಯೆಹೋವನ “ಕಣ್ಣುಗಳು ಕೇಡನ್ನು ನೋಡಲಾರದಷ್ಟು ಶುದ್ಧವಾಗಿವೆ,” ಅಂದರೆ ಯೆಹೋವನು ಕೇಡನ್ನು ಸಹಿಸುವುದಿಲ್ಲ.

16. ಹಬಕ್ಕೂಕ 1:13-17ರಲ್ಲಿ ದಾಖಲಿಸಲ್ಪಟ್ಟಿರುವ ವಿಷಯವನ್ನು ನೀವು ಹೇಗೆ ಸಂಕ್ಷಿಪ್ತವಾಗಿ ತಿಳಿಸಬಲ್ಲಿರಿ?

16 ಆದುದರಿಂದ, ಹಬಕ್ಕೂಕನ ಮನಸ್ಸಿನಲ್ಲಿ ಕೆಲವು ವಿಚಾರಪ್ರೇರಕ ಪ್ರಶ್ನೆಗಳಿವೆ. ಅವನು ಕೇಳುವುದು: “ಏಕೆ ಕೆಡುಕರನ್ನು ಕಟಾಕ್ಷಿಸುತ್ತೀ? ದುಷ್ಟನು ತನಗಿಂತ ಯೋಗ್ಯನನ್ನು ನುಂಗಿಬಿಡುವಾಗ ಏಕೆ ಸುಮ್ಮನಿದ್ದೀ? ಮನುಷ್ಯರನ್ನು ಸಮುದ್ರದ ಮೀನುಗಳ ಸ್ಥಿತಿಗೆ ಏಕೆ ತಂದಿದ್ದೀ, ನಾಯಕನಿಲ್ಲದ ಕ್ರಿಮಿಕೀಟಗಳ ಗತಿಗೆ ಏಕೆ ಬರಮಾಡಿದ್ದೀ? ಆಹಾ, ಅವರನ್ನೆಲ್ಲಾ ತನ್ನ ಗಾಳದಿಂದ ಮೇಲಕ್ಕೆಳೆಯುತ್ತಾನೆ, ತನ್ನ ಬಲೆಯಿಂದ ಬಾಚುತ್ತಾನೆ, ತನ್ನ ಜಾಲದಲ್ಲಿ ಗುಡ್ಡೆಮಾಡುತ್ತಾನೆ; ಇದಕ್ಕೆ ಹಿಗ್ಗುತ್ತಾನೆ, ಹೆಚ್ಚಳಪಡುತ್ತಾನೆ; ತನ್ನ ಬಲೆಗೆ ಬಲಿಕೊಡುತ್ತಾನೆ; ತನ್ನ ಜಾಲಕ್ಕೆ ಧೂಪಹಾಕುತ್ತಾನೆ; ಅವುಗಳ ಮೂಲಕವೇ ಅವನ ಭೋಜನವು ಪುಷ್ಟಿ, ಅವನ ಆಹಾರವು ರುಚಿ. ಹೀಗಿರಲು ತನ್ನ ಬಲೆಗೆ ಸಿಕ್ಕಿದ್ದನ್ನು ಅವನು ನಿತ್ಯವೂ ಈಚೆಗೆ ಸುರಿಯುತ್ತಿರಲೋ, ಜನಾಂಗಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?”—ಹಬಕ್ಕೂಕ 1:13-17.

17. (ಎ) ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದಾಳಿಮಾಡುವುದರಲ್ಲಿ ಬಾಬೆಲಿನವರು ದೇವರ ಉದ್ದೇಶವನ್ನು ಹೇಗೆ ಪೂರೈಸುತ್ತಿದ್ದರು? (ಬಿ) ಯೆಹೋವನು ಹಬಕ್ಕೂಕನಿಗೆ ಏನನ್ನು ತಿಳಿಯಪಡಿಸಲಿದ್ದನು?

17 ಯೆಹೂದ ಮತ್ತು ಅದರ ರಾಜಧಾನಿ ನಗರವಾದ ಯೆರೂಸಲೇಮಿನ ಮೇಲೆ ದಾಳಿಮಾಡುವಾಗ, ಬಾಬೆಲಿನವರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ಕಾರ್ಯನಡಿಸುವರು. ಅಪನಂಬಿಗಸ್ತ ಜನರ ಮೇಲೆ ದೇವರ ನೀತಿಯ ನ್ಯಾಯತೀರ್ಪನ್ನು ವಿಧಿಸಲಿಕ್ಕಾಗಿ ತಾವು ದೇವರ ಸಾಧನವಾಗಿ ಉಪಯೋಗಿಸಲ್ಪಡುತ್ತಿದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ದೇವರು ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸಲಿಕ್ಕಾಗಿ ಬಾಬೆಲಿನ ಈ ದುಷ್ಟ ಜನರನ್ನು ಏಕೆ ಉಪಯೋಗಿಸುವನೆಂಬುದನ್ನು ತಿಳಿದುಕೊಳ್ಳುವುದು ಹಬಕ್ಕೂಕನಿಗೆ ಏಕೆ ಕಷ್ಟಕರವಾಗಿತ್ತೆಂದು ಗ್ರಹಿಸುವುದು ಸುಲಭ. ನಿರ್ದಯಿಗಳಾಗಿದ್ದ ಆ ಕಸ್ದೀಯರು ಯೆಹೋವನ ಆರಾಧಕರಾಗಿರಲಿಲ್ಲ. ಅವರ ದೃಷ್ಟಿಯಲ್ಲಿ ಮಾನವರು ಸೆರೆಹಿಡಿದು ಅಧೀನಗೊಳಿಸಲ್ಪಡಬಹುದಾದ ‘ಕ್ರಿಮಿಕೀಟ’ಗಳಂತಿದ್ದರು. ಆದರೆ ಈ ವಿಷಯಗಳ ಕುರಿತಾದ ಹಬಕ್ಕೂಕನ ದಿಗ್ಭ್ರಮೆಯು ಹೆಚ್ಚು ಸಮಯ ಉಳಿಯುವುದಿಲ್ಲ. ಬಾಬೆಲಿನವರು ಅತ್ಯಾಶೆಯಿಂದ ಕೊಳ್ಳೆಹೊಡೆದ ಕಾರಣ ಮತ್ತು ಅವರ ಉದ್ದೇಶಪೂರ್ವಕವಾದ ರಕ್ತದೋಷದ ಕಾರಣ ಅವರು ಖಂಡಿತವಾಗಿಯೂ ದಂಡನೆಗೊಳಗಾಗುವರು ಎಂದು ಯೆಹೋವನು ತನ್ನ ಪ್ರವಾದಿಗೆ ಬೇಗನೆ ತಿಳಿಯಪಡಿಸಲಿದ್ದನು.—ಹಬಕ್ಕೂಕ 2:8.

ಯೆಹೋವನ ಮುಂದಿನ ಮಾತುಗಳಿಗೆ ಕಿವಿಗೊಡಲು ಸಿದ್ಧನು

18. ಹಬಕ್ಕೂಕ 2:1ರಲ್ಲಿ ತಿಳಿಸಲ್ಪಟ್ಟಿರುವಂತೆ, ಹಬಕ್ಕೂಕನ ಮನೋಭಾವದಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಬಲ್ಲೆವು?

18 ಆದರೆ ಈಗ, ಯೆಹೋವನು ನುಡಿಯುವ ಮುಂದಿನ ಮಾತುಗಳಿಗೆ ಕಿವಿಗೊಡಲು ಹಬಕ್ಕೂಕನು ಕಾಯುತ್ತಾನೆ. ಆ ಪ್ರವಾದಿಯು ದೃಢನಿಶ್ಚಯದಿಂದ ಹೇಳುವುದು: “ನನ್ನ ಕೋವರದಲ್ಲಿ ನಿಂತುಕೊಳ್ಳುವೆನು, ಬುರುಜಿನ ಮೇಲೆ ನೆಲೆಯಾಗಿರುವೆನು, ಯೆಹೋವನು ನನಗೆ ಏನು ಹೇಳುವನೋ, ನನ್ನ ಆಕ್ಷೇಪಣೆಯನ್ನು ನಿವಾರಿಸಿಕೊಳ್ಳಲು ಯಾವ ಉತ್ತರಕೊಡಬೇಕೋ ಎಂದು ಎದುರುನೋಡುವೆನು [ಅಂದುಕೊಂಡೆನು.]” (ಹಬಕ್ಕೂಕ 2:1) ಒಬ್ಬ ಪ್ರವಾದಿಯೋಪಾದಿ ತನ್ನ ಮೂಲಕ ದೇವರು ಇನ್ನಾವ ವಿಷಯವನ್ನು ಮಾತಾಡಲಿರುವನು ಎಂಬುದನ್ನು ತಿಳಿದುಕೊಳ್ಳಲು ಹಬಕ್ಕೂಕನು ಅತ್ಯಾಸಕ್ತಿಯುಳ್ಳವನಾಗಿದ್ದಾನೆ. ಕೆಡುಕನ್ನು ಸಹಿಸದ ಒಬ್ಬ ದೇವರೋಪಾದಿ ಯೆಹೋವನಲ್ಲಿ ಅವನಿಗಿರುವ ನಂಬಿಕೆಯು, ದುಷ್ಟತನವು ಏಕೆ ಇಷ್ಟು ವ್ಯಾಪಕವಾಗಿದೆ ಎಂದು ಆಶ್ಚರ್ಯಪಡುವಂತೆ ಮಾಡಿದರೂ, ತನ್ನ ಯೋಚನೆಯನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಅವನು ಮನಃಪೂರ್ವಕವಾಗಿ ಸಿದ್ಧನಾಗಿದ್ದಾನೆ. ಹಾಗಾದರೆ, ನಮ್ಮ ಕುರಿತಾಗಿ ಏನು? ಕೆಲವು ದುಷ್ಟ ಸಂಗತಿಗಳು ಏಕೆ ಅನುಮತಿಸಲ್ಪಡುತ್ತವೆ ಎಂದು ನಾವು ವಿಸ್ಮಯಪಡುವಾಗ, ಯೆಹೋವ ದೇವರ ನೀತಿಯಲ್ಲಿ ನಮಗಿರುವ ಭರವಸೆಯು ನಮ್ಮ ಸಮತೂಕವನ್ನು ಕಾಪಾಡಿಕೊಳ್ಳುವಂತೆ ಹಾಗೂ ಆತನ ಮೇಲೆ ಆತುಕೊಳ್ಳುವಂತೆ ನಮಗೆ ಸಹಾಯ ಮಾಡತಕ್ಕದ್ದು.—ಕೀರ್ತನೆ 42:5, 11.

19. ದೇವರು ಹಬಕ್ಕೂಕನಿಗೆ ಮಾತುಕೊಟ್ಟಿದ್ದಂತೆ, ಹಟಮಾರಿಗಳಾಗಿದ್ದ ಯೆಹೂದ್ಯರಿಗೆ ಏನು ಸಂಭವಿಸಿತು?

19 ಹಬಕ್ಕೂಕನಿಗೆ ಮಾತುಕೊಟ್ಟಿದ್ದಂತೆಯೇ, ಬಾಬೆಲಿನವರು ಯೆಹೂದದ ಮೇಲೆ ದಾಳಿಮಾಡುವಂತೆ ಬಿಡುವ ಮೂಲಕ ಹಟಮಾರಿ ಯೆಹೂದಿ ಜನಾಂಗದ ಮೇಲೆ ದೇವರು ತನ್ನ ನ್ಯಾಯತೀರ್ಪನ್ನು ಬರಮಾಡಿದನು. ಸಾ.ಶ.ಪೂ. 607ರಲ್ಲಿ ಅವರು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ಕೆಡವಿಹಾಕಿ, ಆಬಾಲವೃದ್ಧರನ್ನು ಕೊಂದು, ಅನೇಕರನ್ನು ಸೆರೆವಾಸಿಗಳಾಗಿ ಕೊಂಡೊಯ್ದರು. (2 ಪೂರ್ವಕಾಲವೃತ್ತಾಂತ 36:17-20) ಬಾಬೆಲಿನಲ್ಲಿ ದೇಶಭ್ರಷ್ಟರಾಗಿ ಅನೇಕ ವರ್ಷಗಳನ್ನು ಕಳೆದ ಬಳಿಕ, ನಂಬಿಗಸ್ತ ಯೆಹೂದಿ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗಿದರು ಮತ್ತು ದೇವಾಲಯವನ್ನು ಪುನಃ ಕಟ್ಟಿದರು. ಆದರೂ, ತದನಂತರ ಯೆಹೂದ್ಯರು ವಿಶೇಷವಾಗಿ ಯೇಸುವನ್ನು ಮೆಸ್ಸೀಯನೋಪಾದಿ ತಿರಸ್ಕರಿಸಿದಾಗ, ಅವರು ಮತ್ತೊಮ್ಮೆ ಯೆಹೋವನಿಗೆ ಅಪನಂಬಿಗಸ್ತರಾಗಿ ನಡೆದುಕೊಂಡರು.

20. ಯೇಸುವನ್ನು ತಿರಸ್ಕರಿಸುವುದರ ಸಂಬಂಧದಲ್ಲಿ, ಹಬಕ್ಕೂಕ 1:5ನ್ನು ಪೌಲನು ಹೇಗೆ ಉಪಯೋಗಿಸಿದನು?

20ಅ. ಕೃತ್ಯಗಳು 13:38-41ಕ್ಕನುಸಾರ, ಯೇಸುವನ್ನು ತಿರಸ್ಕರಿಸಿ, ಅವನ ಪ್ರಾಯಶ್ಚಿತ್ತ ಯಜ್ಞವನ್ನು ಧಿಕ್ಕರಿಸುವುದರ ಪರಿಣಾಮವು ಏನಾಗಿರುವುದೆಂದು ಅಪೊಸ್ತಲ ಪೌಲನು ಅಂತಿಯೋಕ್ಯದ ಯೆಹೂದ್ಯರಿಗೆ ತೋರಿಸಿದನು. ಗ್ರೀಕ್‌ ಸೆಪ್ಟ್ಯುಅಜಿಂಟ್‌ ಭಾಷಾಂತರದಿಂದ ಹಬಕ್ಕೂಕ 1:5ನ್ನು ಆಧಾರವಾಗಿ ಉಪಯೋಗಿಸುತ್ತಾ ಪೌಲನು ಎಚ್ಚರಿಕೆ ನೀಡಿದ್ದು: “ಪ್ರವಾದಿಗಳ ಗ್ರಂಥದಲ್ಲಿ ತಿಳಿಸಲ್ಪಟ್ಟ ಸಂಗತಿಗಳು ನಿಮ್ಮ ಮೇಲೆ ಸಂಭವಿಸದೆ ಇರುವಂತೆ ನೋಡಿಕೊಳ್ಳಿರಿ, ‘ತಿರಸ್ಕೃತ ಜನರೇ, ಅದನ್ನು ನೋಡಿರಿ, ಬೆರಗಾಗಿರಿ, ಮತ್ತು ಕಣ್ಮರೆಯಾಗಿರಿ, ಏಕೆಂದರೆ ನಾನು ನಿಮ್ಮ ದಿನಗಳಲ್ಲಿ ಒಂದು ಕಾರ್ಯವನ್ನು ಮಾಡುತ್ತಿದ್ದೇನೆ, ಇದು ಎಂತಹ ಕಾರ್ಯವಾಗಿರುವುದೆಂದರೆ, ಯಾರಾದರೂ ಅದನ್ನು ನಿಮಗೆ ಸವಿವರವಾಗಿ ಹೇಳಿದರು ಕೂಡ ನೀವು ಅದನ್ನು ಖಂಡಿತವಾಗಿಯೂ ನಂಬಲಾರಿರಿ.’” ಪೌಲನ ಉಲ್ಲೇಖಕ್ಕೆ ಹೊಂದಿಕೊಂಡು, ಸಾ.ಶ. 70ರಲ್ಲಿ ರೋಮನ್‌ ಸೇನೆಗಳು ಯೆರೂಸಲೇಮನ್ನು ಮತ್ತು ಅದರ ದೇವಾಲಯವನ್ನು ನಾಶಪಡಿಸಿದಾಗ, ಹಬಕ್ಕೂಕ 1:5ರ ಎರಡನೆಯ ನೆರವೇರಿಕೆಯು ಸಂಭವಿಸಿತು.

21. ಬಾಬೆಲಿನವರನ್ನು ಉಪಯೋಗಿಸಿ ಯೆರೂಸಲೇಮನ್ನು ನಾಶಗೊಳಿಸುವ ದೇವರ ‘ಕಾರ್ಯದ’ ಕುರಿತು ಹಬಕ್ಕೂಕನ ದಿನದ ಯೆಹೂದ್ಯರ ಅಭಿಪ್ರಾಯವೇನಾಗಿತ್ತು?

21 ಹಬಕ್ಕೂಕನ ದಿನದಲ್ಲಿ ಜೀವಿಸುತ್ತಿದ್ದ ಯೆಹೂದ್ಯರಿಗೆ, ಬಾಬೆಲಿನವರನ್ನು ಉಪಯೋಗಿಸಿಕೊಂಡು ಯೆರೂಸಲೇಮನ್ನು ನಾಶಗೊಳಿಸುವ ದೇವರ ‘ಕಾರ್ಯವು’ ಯೋಚಿಸಲಸಾಧ್ಯವಾದ ಸಂಗತಿಯಾಗಿತ್ತು. ಏಕೆಂದರೆ ಆ ನಗರವು ಯೆಹೋವನ ಆರಾಧನೆಯ ಕೇಂದ್ರವಾಗಿತ್ತು ಮತ್ತು ಆತನ ಅಭಿಷಿಕ್ತ ರಾಜನು ಸಿಂಹಾಸನಾರೂಢನಾಗಿರುವ ಸ್ಥಳವಾಗಿತ್ತು. (ಕೀರ್ತನೆ 132:11-18) ಅಷ್ಟುಮಾತ್ರವಲ್ಲ, ಈ ಮುಂಚೆ ಯೆರೂಸಲೇಮ್‌ ಎಂದೂ ನಾಶಗೊಳಿಸಲ್ಪಟ್ಟಿರಲಿಲ್ಲ. ಅದರ ದೇವಾಲಯವು ಎಂದೂ ಸುಡಲ್ಪಟ್ಟಿರಲಿಲ್ಲ. ದಾವೀದನ ರಾಜವಂಶವು ಎಂದೂ ಪತನಗೊಂಡಿರಲಿಲ್ಲ. ಇಂತಹ ಘಟನೆಗಳು ಸಂಭವಿಸುವಂತೆ ಯೆಹೋವನು ಮಾಡುವನೆಂಬುದು ನಂಬಲಸಾಧ್ಯವಾದ ಸಂಗತಿಯಾಗಿತ್ತು. ಆದರೆ ಈ ತಲ್ಲಣಗೊಳಿಸುವ ಘಟನೆಗಳು ಸಂಭವಿಸುವವು ಎಂಬುದರ ಕುರಿತು ದೇವರು ಹಬಕ್ಕೂಕನ ಮೂಲಕ ಸಾಕಷ್ಟು ಎಚ್ಚರಿಕೆಯನ್ನು ನೀಡಿದ್ದನು. ಮತ್ತು ಮುಂತಿಳಿಸಲ್ಪಟ್ಟಂತೆಯೇ ಅವು ಸಂಭವಿಸಿದವು ಎಂಬುದನ್ನು ಇತಿಹಾಸವು ರುಜುಪಡಿಸುತ್ತದೆ.

ನಮ್ಮ ದಿನದಲ್ಲಿ ದೇವರ ನಂಬಲಸಾಧ್ಯವಾದ “ಕಾರ್ಯ”

22. ಯೆಹೋವನು ನಮ್ಮ ದಿನದಲ್ಲಿ ಮಾಡುವ ನಂಬಲಸಾಧ್ಯವಾದ ‘ಕಾರ್ಯವು’ ಯಾವುದಾಗಿರುವುದು?

22 ನಮ್ಮ ದಿನದಲ್ಲಿಯೂ ಯೆಹೋವನು ನಂಬಲಸಾಧ್ಯವಾದ ಒಂದು “ಕಾರ್ಯ”ವನ್ನು ಮಾಡಲಿದ್ದಾನೋ? ಇದು ಸಂದೇಹವಾದಿಗಳಿಗೆ ನಂಬಲಸಾಧ್ಯವಾದದ್ದಾಗಿ ಕಂಡುಬರುವುದಾದರೂ, ಆತನು ಖಂಡಿತವಾಗಿಯೂ ಕ್ರಿಯೆಗೈಯುವನೆಂಬ ಆಶ್ವಾಸನೆ ನಿಮಗಿರಲಿ. ಆದರೆ ಈಗ ಯೆಹೋವನ ನಂಬಲಸಾಧ್ಯವಾದ ಕಾರ್ಯವು ಕ್ರೈಸ್ತಪ್ರಪಂಚದ ನಾಶವಾಗಿರುವುದು. ಪುರಾತನ ಯೆಹೂದದಂತೆ, ಕ್ರೈಸ್ತಪ್ರಪಂಚವು ದೇವರನ್ನು ಆರಾಧಿಸುತ್ತಿರುವುದಾಗಿ ಪ್ರತಿಪಾದಿಸುತ್ತದೆಯಾದರೂ ಅದು ಸಂಪೂರ್ಣವಾಗಿ ಭ್ರಷ್ಟಗೊಂಡಿದೆ. ಕ್ರೈಸ್ತಪ್ರಪಂಚದ ಧಾರ್ಮಿಕ ವ್ಯವಸ್ಥೆಯ ಪ್ರತಿಯೊಂದು ಕುರುಹನ್ನೂ ಯೆಹೋವನು ಅಳಿಸಿಹಾಕುವನು, ಮತ್ತು ಅದರೊಂದಿಗೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ “ಮಹಾ ಬಾಬೆಲ್‌” ಸಹ ನಾಶಗೊಳಿಸಲ್ಪಡುವುದು.—ಪ್ರಕಟನೆ 18:1-24.

23. ತದನಂತರ ಏನು ಮಾಡುವಂತೆ ದೇವರ ಆತ್ಮವು ಹಬಕ್ಕೂಕನನ್ನು ಪ್ರಚೋದಿಸಿತು?

23 ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನವು ಸಂಭವಿಸುವುದಕ್ಕೆ ಮೊದಲು ಹಬಕ್ಕೂಕನಿಗೆ ಇನ್ನೂ ಹೆಚ್ಚಿನ ಕೆಲಸವನ್ನು ಯೆಹೋವನು ನೇಮಿಸಿದ್ದನು. ದೇವರು ತನ್ನ ಪ್ರವಾದಿಗೆ ಇನ್ನೂ ಯಾವ ವಿಷಯವನ್ನು ಹೇಳಲಿಕ್ಕಿದ್ದನು? ಹೌದು, ಹಬಕ್ಕೂಕನು ಎಂತಹ ವಿಷಯಗಳನ್ನು ಕೇಳಿಸಿಕೊಳ್ಳಲಿದ್ದನೆಂದರೆ, ಅವನು ತನ್ನ ಸಂಗೀತ ವಾದ್ಯವನ್ನು ತೆಗೆದುಕೊಂಡು ಯೆಹೋವನಿಗೆ ಪ್ರಾರ್ಥನಾಭರಿತ ಶೋಕಗೀತೆಗಳನ್ನು ಹಾಡುವಂತೆ ಅವು ಪ್ರಚೋದಿಸಲಿದ್ದವು. ಆದರೆ, ಮೊದಲಾಗಿ ಪ್ರವಾದಿಯು ನಾಟಕೀಯ ವಿಪತ್ತುಗಳನ್ನು ಘೋಷಿಸುವಂತೆ ದೇವರಾತ್ಮವು ಅವನನ್ನು ಪ್ರಚೋದಿಸಲಿತ್ತು. ದೇವರ ನೇಮಿತ ಸಮಯಕ್ಕಾಗಿರುವ ಇಂತಹ ಪ್ರವಾದನ ವಾಕ್ಯಗಳ ಗಹನವಾದ ಅರ್ಥದ ಒಳನೋಟವನ್ನು ಪಡೆದುಕೊಳ್ಳುವುದನ್ನು ನಾವು ನಿಜವಾಗಿಯೂ ಗಣ್ಯಮಾಡುವೆವು. ಆದುದರಿಂದ, ಹಬಕ್ಕೂಕನ ಪ್ರವಾದನೆಗೆ ಇನ್ನೂ ಹೆಚ್ಚಿನ ಗಮನವನ್ನು ಕೊಡೋಣ.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಹಬಕ್ಕೂಕನ ದಿನದಲ್ಲಿ ಯೆಹೂದದಲ್ಲಿ ಪರಿಸ್ಥಿತಿಗಳು ಯಾವ ರೀತಿಯಲ್ಲಿದ್ದವು?

• ಹಬಕ್ಕೂಕನ ಸಮಯದಲ್ಲಿ ಯೆಹೋವನು ನಂಬಲಸಾಧ್ಯವಾದ ಯಾವ “ಕಾರ್ಯ”ವನ್ನು ಮಾಡಿದನು?

• ಹಬಕ್ಕೂಕನಿಗೆ ನಿರೀಕ್ಷೆಗಾಗಿ ಯಾವ ಆಧಾರವಿತ್ತು?

• ನಮ್ಮ ದಿನದಲ್ಲಿ ದೇವರು ನಂಬಲಸಾಧ್ಯವಾದ ಯಾವ “ಕಾರ್ಯ”ವನ್ನು ಮಾಡುವನು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ದುಷ್ಟತನವು ಇಷ್ಟು ವ್ಯಾಪಕವಾಗಿರುವಂತೆ ದೇವರು ಏಕೆ ಅನುಮತಿಸಿದನು ಎಂದು ಹಬಕ್ಕೂಕನು ಕುತೂಹಲಪಟ್ಟನು. ನಿಮಗೂ ಹಾಗೆಯೇ ಅನಿಸುತ್ತದೋ?

[ಪುಟ 10ರಲ್ಲಿರುವ ಚಿತ್ರ]

ಬಾಬೆಲಿನವರಿಂದ ಯೆಹೂದ ದೇಶದ ಜನರ ಮೇಲೆ ವಿಪತ್ತು ಬಂದೆರಗಲಿದೆ ಎಂದು ಹಬಕ್ಕೂಕನು ಮುಂತಿಳಿಸಿದನು

[ಪುಟ 10ರಲ್ಲಿರುವ ಚಿತ್ರ]

ಸಾ.ಶ.ಪೂ. 607ರಲ್ಲಿ ನಾಶಮಾಡಲ್ಪಟ್ಟ ಯೆರೂಸಲೇಮಿನ ಪುರಾತನ ಶೋಧನಶಾಸ್ತ್ರದ ಅವಶೇಷಗಳು