ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಷ್ಟೊಂದು ಭ್ರಷ್ಟಾಚಾರ ಏಕೆ ಇದೆ?

ಇಷ್ಟೊಂದು ಭ್ರಷ್ಟಾಚಾರ ಏಕೆ ಇದೆ?

ಇಷ್ಟೊಂದು ಭ್ರಷ್ಟಾಚಾರ ಏಕೆ ಇದೆ?

“ಲಂಚವನ್ನು ತೆಗೆದುಕೊಳ್ಳಬಾರದು; ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ, ನಿರಪರಾಧಿಯಾದವನ ನ್ಯಾಯವನ್ನು ಕೆಡಿಸುತ್ತದೆ.”—ವಿಮೋಚನಕಾಂಡ 23:8.

ಮೂರು ಸಾವಿರದ ಐನೂರು ವರ್ಷಗಳ ಹಿಂದೆ, ಮೋಶೆಯ ಧರ್ಮಶಾಸ್ತ್ರವು ಲಂಚವನ್ನು ಖಂಡಿಸಿತು. ಆಗಿನಿಂದಲೂ, ಭ್ರಷ್ಟಾಚಾರದ ವಿರುದ್ಧ ಅಸಂಖ್ಯಾತ ನಿಯಮಗಳು ಜಾರಿಗೆ ಬಂದಿವೆ. ಹೀಗಿದ್ದರೂ, ಭ್ರಷ್ಟಾಚಾರವನ್ನು ಕಿತ್ತೆಸೆಯುವುದರಲ್ಲಿ ಯಾವ ಕಾನೂನೂ ಸಫಲವಾಗಿಲ್ಲ. ಪ್ರತಿದಿನ ಲಂಚದ ರೂಪದಲ್ಲಿ ಕೋಟ್ಯಂತರ ರೂಪಾಯಿಗಳು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ದಾಟಿಸಲ್ಪಡುತ್ತಿರುತ್ತವೆ ಮತ್ತು ನೂರಾರು ಕೋಟಿ ಜನರು ಭ್ರಷ್ಟಾಚಾರದಿಂದಾಗುವ ದುಷ್ಪರಿಣಾಮಗಳನ್ನು ಅನುಭವಿಸುತ್ತಾರೆ.

ಭ್ರಷ್ಟಾಚಾರವು ಎಷ್ಟು ವ್ಯಾಪಕವಾಗಿದೆಯೆಂದರೆ, ಅದು ಸಮಾಜದ ರಚನೆಯನ್ನೇ ಬಲಹೀನಗೊಳಿಸುತ್ತಾ, ಅದರ ಪ್ರತಿಯೊಂದು ಭಾಗವನ್ನು ಬುಡದಿಂದ ಅಲುಗಾಡಿಸುತ್ತಿದೆ. ಕೆಲವು ದೇಶಗಳಲ್ಲಿ ಕೈಬಿಸಿಮಾಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ತಕ್ಕ ವ್ಯಕ್ತಿಗೆ ಲಂಚ ಕೊಡುವುದರಿಂದ ಒಬ್ಬನು ಪರೀಕ್ಷೆಯಲ್ಲಿ ಸುಲಭವಾಗಿ ಪಾಸಾಗಬಲ್ಲನು, ಡ್ರೈವಿಂಗ್‌ ಲೈಸನ್ಸನ್ನು ಪಡೆದುಕೊಳ್ಳಬಲ್ಲನು, ಒಂದು ಉದ್ಯೋಗಕ್ಕಾಗಿ ಒಪ್ಪಂದವನ್ನು ಮಾಡಿಕೊಳ್ಳಬಲ್ಲನು ಅಥವಾ ಕೋರ್ಟ್‌ ಮೊಕದ್ದಮೆಯನ್ನೂ ಗೆಲ್ಲಬಲ್ಲನು. ಪ್ಯಾರಿಸ್‌ನ ವಕೀಲರಾಗಿರುವ ಆರ್‌ನೌಡ್‌ ಮೊಂಟೆಬುರ್‌ ಪ್ರಲಾಪಿಸುವುದು, “ಭ್ರಷ್ಟಾಚಾರವು ಎಷ್ಟೊಂದು ದೊಡ್ಡ ಹೊರೆಯಾಗಿದೆಯೆಂದರೆ, ಅದು ಜನರ ಹೊರನೋಟವನ್ನು ಬಹಳವಾಗಿ ಬಾಧಿಸುವ ದಟ್ಟವಾದ ಮಲಿನ ಗಾಳಿಯಂತಿದೆ.”

ವಿಶೇಷವಾಗಿ ವ್ಯಾಪಾರ ಜಗತ್ತಿನಲ್ಲಿ ಲಂಚವು ಎಲ್ಲೆಲ್ಲೂ ತಾಂಡವವಾಡುತ್ತಿದೆ. ಕೆಲವು ಕಂಪೆನಿಗಳು ತಮಗೆ ಸಿಗುವ ಲಾಭಾಂಶದಲ್ಲಿ ಮೂರನೇ ಒಂದಂಶವನ್ನು ಸರಕಾರದ ಭ್ರಷ್ಟ ಅಧಿಕಾರಿಗಳಿಗೆ ಲಂಚಕೊಡುವುದಕ್ಕಾಗಿಯೇ ಬದಿಗಿರಿಸುತ್ತವೆ. ದಿ ಇಕಾನಮಿಸ್ಟ್‌ ಎಂಬ ಬ್ರಿಟಿಷ್‌ ಪತ್ರಿಕೆಗನುಸಾರ, ಪ್ರತಿ ವರ್ಷ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳ ವ್ಯಾಪಾರದಲ್ಲಿ, 1,07,500 ಕೋಟಿ ರೂಪಾಯಿಗಳು ಖರ್ಚಾಗುತ್ತವೆ. ಮತ್ತು ಇದರಲ್ಲಿ ಶೇಕಡ 10ರಷ್ಟು ಹಣವನ್ನು ಭಾವೀ ಗಿರಾಕಿಗಳಿಗೆ ಲಂಚವಾಗಿ ಕೊಡಲು ಉಪಯೋಗಿಸುತ್ತಾರೆ. ಈ ಭ್ರಷ್ಟಾಚಾರದ ಮಟ್ಟವು ವೇಗವಾಗಿ ಬೆಳೆಯುತ್ತಾ ಹೋದಂತೆ, ಅದರಿಂದಾಗುವ ಪರಿಣಾಮಗಳೂ ಅಷ್ಟೇ ವಿನಾಶಕರವಾಗುತ್ತವೆ. ಕಳೆದ ಹತ್ತು ವರ್ಷಗಳಲ್ಲಿ, “ಸ್ವಜನ ಪಕ್ಷಪಾತ”ವನ್ನು ತೋರಿಸುವ ಬಂಡವಾಳಶಾಯಿಯು ಇಡೀ ದೇಶದ ಆರ್ಥಿಕತೆಯನ್ನು ಹಾಳುಗೆಡಹಿದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಉತ್ತಮ ವ್ಯಾಪಾರ ಸಂಬಂಧವಿರುವ ಕೆಲವರು ಲಾಭವನ್ನು ಗಳಿಸಲು ಕೆಲವು ಭ್ರಷ್ಟ ವ್ಯಾಪಾರ ರೀತಿನೀತಿಗಳನ್ನು ಅನುಸರಿಸುತ್ತಾರೆ.

ಈ ರೀತಿಯ ಭ್ರಷ್ಟಾಚಾರದಿಂದ ಮತ್ತು ಅದು ತರುವ ಆರ್ಥಿಕ ವಿನಾಶದಿಂದ ಹೆಚ್ಚಾಗಿ ಬಡವರೇ ಕಷ್ಟವನ್ನನುಭವಿಸುತ್ತಾರೆ. ಇದು ಅನಿವಾರ್ಯವು ಕೂಡ. ಯಾಕೆಂದರೆ ಇವರು ಯಾರಿಗೂ ಲಂಚವನ್ನು ಕೊಡುವ ಸ್ಥಿತಿಯಲ್ಲಿರುವುದಿಲ್ಲ. ದಿ ಇಕಾನಮಿಸ್ಟ್‌ ಪತ್ರಿಕೆಯು ಸಂಕ್ಷಿಪ್ತವಾಗಿ ಹೇಳಿದಂತೆ, “ಭ್ರಷ್ಟಾಚಾರವು ಒಂದು ರೀತಿಯ ದಬ್ಬಾಳಿಕೆಯಾಗಿದೆ.” ಈ ರೀತಿಯ ದಬ್ಬಾಳಿಕೆಯಿಂದ ನಾವು ಎಂದಾದರೂ ಸ್ವತಂತ್ರರಾಗಬಲ್ಲೆವೋ ಅಥವಾ ಭ್ರಷ್ಟಾಚಾರದಿಂದ ನಮಗೆ ಬಿಡುಗಡೆಯೇ ಇಲ್ಲವೊ? ಈ ಪ್ರಶ್ನೆಯನ್ನು ಉತ್ತರಿಸುವುದಕ್ಕಾಗಿ, ಭ್ರಷ್ಟಾಚಾರದ ಕೆಲವು ಮೂಲಭೂತ ಕಾರಣಗಳನ್ನು ನಾವು ಮೊದಲು ಗುರುತಿಸಬೇಕು.

ಭ್ರಷ್ಟಾಚಾರದ ಕಾರಣಗಳಾವುವು?

ಜನರು ಪ್ರಾಮಾಣಿಕರಾಗಿರುವುದಕ್ಕಿಂತಲೂ ಭ್ರಷ್ಟಾಚಾರಿಗಳಾಗಿರಲು ಏಕೆ ಬಯಸುತ್ತಾರೆ? ಕೆಲವರಿಗಾದರೋ ಲಂಚ ಕೊಟ್ಟು ಕೆಲಸಮಾಡಿಸಿಕೊಳ್ಳುವುದು ಬಹಳ ಸುಲಭವಾದ ದಾರಿಯಾಗಿರಬಹುದು ಇಲ್ಲವೇ ತಾವು ಬಯಸಿದ್ದನ್ನು ಗಳಿಸಲು ಉಳಿದಿರುವ ಏಕೈಕ ಮಾರ್ಗವಾಗಿರಬಹುದು. ಕೆಲವೊಮ್ಮೆ, ಲಂಚ ಕೊಡುವ ಮೂಲಕ ಒಬ್ಬನು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಗಳು, ಪೊಲೀಸರು ಮತ್ತು ನ್ಯಾಯಾಧೀಶರಂತಹವರೇ ಭ್ರಷ್ಟಾಚಾರವನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದೆ, ಅದನ್ನು ಅಲಕ್ಷಿಸುತ್ತಿರುವುದನ್ನು ಅಥವಾ ಅಂತಹವರೇ ಭ್ರಷ್ಟಾಚಾರದಲ್ಲಿ ಒಳಗೂಡಿರುವುದನ್ನು ನೋಡುತ್ತಿರುವ ಅನೇಕರು ಭ್ರಷ್ಟಾಚಾರಿಗಳ ಹೆಜ್ಜೆಯನ್ನು ಕಣ್ಣುಮುಚ್ಚಿಕೊಂಡು ಅನುಸರಿಸುತ್ತಾರೆ.

ಭ್ರಷ್ಟಾಚಾರವು ವಿಪರೀತವಾಗುತ್ತಾ ಹೋದಂತೆ, ಅದು ಹೆಚ್ಚು ಸ್ವೀಕರಣೀಯವಾಗುತ್ತಾ ಕೊನೆಗೆ ಅವರ ಜೀವನ ರೀತಿಯಾಗಿಬಿಡುತ್ತದೆ. ಬಹಳ ಕಡಿಮೆ ಸಂಬಳವನ್ನು ತೆಗೆದುಕೊಳ್ಳುವ ಜನರಿಗೆ ಲಂಚ ತೆಗೆದುಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲವೆಂಬ ಅನಿಸಿಕೆ ಬರುತ್ತದೆ. ನೆಮ್ಮದಿಯ ಬದುಕನ್ನು ನಡೆಸಬೇಕಾದರೆ ಅವರು ಲಂಚವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಲಂಚವನ್ನು ಬಲಾತ್ಕಾರವಾಗಿ ತೆಗೆದುಕೊಳ್ಳುವವರು ಅಥವಾ ಹಣ ಕೊಟ್ಟು ಪರಿಸ್ಥಿತಿಯ ಅನುಚಿತ ಪ್ರಯೋಜನವನ್ನು ಪಡೆದುಕೊಳ್ಳುವವರು ಶಿಕ್ಷೆ ಅನುಭವಿಸದೆ ಇರುವುದನ್ನು ಕಾಣುವಾಗ, ಕೆಲವರು ಮಾತ್ರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಯಾರಾಗಿರುತ್ತಾರೆ. “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು” ಎಂಬುದನ್ನು ರಾಜ ಸೊಲೊಮೋನನು ಅವಲೋಕಿಸಿದನು.—ಪ್ರಸಂಗಿ 8:11.

ಭ್ರಷ್ಟಾಚಾರದ ಜ್ವಾಲೆಯನ್ನು ತೀಕ್ಷ್ಣಗೊಳಿಸುವ ಎರಡು ಬಲವಾದ ಶಕ್ತಿಗಳು, ಸ್ವಾರ್ಥ ಮತ್ತು ಲೋಭಗಳೇ ಆಗಿವೆ. ಸ್ವಾರ್ಥದ ಕಾರಣಕ್ಕಾಗಿ ತಮ್ಮ ಭ್ರಷ್ಟಾಚಾರವು ಇತರರಿಗೆ ಉಂಟುಮಾಡುವ ಕಷ್ಟಾನುಭವವನ್ನು ಭ್ರಷ್ಟ ಜನರು ಅಲಕ್ಷಿಸುತ್ತಾರೆ ಮತ್ತು ತಾವು ಲಂಚದಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಒಂದೇ ಕಾರಣದಿಂದಾಗಿ ಲಂಚ ತೆಗೆದುಕೊಳ್ಳುವುದು ಸರಿಯೆಂದು ಅವರು ಸಮರ್ಥಿಸುತ್ತಾರೆ. ಭ್ರಷ್ಟಾಚಾರ ನಡೆಸುವವರು ಹೆಚ್ಚೆಚ್ಚು ಭೌತಿಕ ವಸ್ತುಗಳನ್ನು ಶೇಖರಿಸುತ್ತಾ ಹೋದಂತೆ, ಹೆಚ್ಚೆಚ್ಚು ಲೋಭಿಗಳಾಗುತ್ತಾರೆ. ಸೊಲೊಮೋನನು ಅವಲೋಕಿಸಿದ್ದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು.” (ಪ್ರಸಂಗಿ 5:10) ಲೋಭವು ಹಣ ಗಳಿಸಲು ಸುಲಭವಾದ ದಾರಿಯಾಗಿರುವುದಾದರೂ ಅದು ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಕೃತ್ಯವನ್ನು ಕಡೆಗಣಿಸುತ್ತದೆ ಎಂಬ ಸತ್ಯವನ್ನು ನಾವು ನಿರಾಕರಿಸಸಾಧ್ಯವಿಲ್ಲ.

ನಾವು ಅಲಕ್ಷಿಸಬಾರದಂತಹ ಇನ್ನೊಂದು ಅಂಶವು, ಈ ಲೋಕದ ಅದೃಶ್ಯ ಅಧಿಪತಿಯ ಪಾತ್ರವಾಗಿದೆ. ಬೈಬಲು ಇವನನ್ನು ಪಿಶಾಚನಾದ ಸೈತಾನನು ಎಂದು ಗುರುತಿಸುತ್ತದೆ. (1 ಯೋಹಾನ 5:19; ಪ್ರಕಟನೆ 12:9) ಸೈತಾನನು ಭ್ರಷ್ಟಾಚಾರವನ್ನು ಸಕ್ರಿಯವಾಗಿ ಪ್ರವರ್ಧಿಸುತ್ತಾನೆ. ಈ ವರೆಗೆ ಮಾಡಲಾದ ಅತಿ ದೊಡ್ಡ ತರಹದ ಲಂಚದ ನೀಡಿಕೆಯನ್ನು ಸೈತಾನನು ಕ್ರಿಸ್ತನಿಗೆ ಮಾಡಿದ್ದನು. ಅವನು ಹೀಗೆ ಹೇಳಿದ್ದು: “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ನಿನಗೆ ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕೊಡುವೆನು.”—ಮತ್ತಾಯ 4:8, 9, NW.

ಹೀಗಿದ್ದರೂ ಯೇಸು ಭ್ರಷ್ಟಾಚಾರಿಯಾಗಿರಲಿಲ್ಲ ಮತ್ತು ಅದೇ ರೀತಿಯಲ್ಲಿ ಅವನ ಹಿಂಬಾಲಕರು ಸಹ ಇರಬೇಕೆಂದು ಅವನು ಕಲಿಸಿದನು. ಇಂದು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕ್ರಿಸ್ತನ ಬೋಧನೆಗಳು ಪರಿಣಾಮಕಾರಿ ಸಾಧನವಾಗಿರಬಲ್ಲವೋ? ಮುಂದಿನ ಲೇಖನವು ಈ ಪ್ರಶ್ನೆಯನ್ನು ಪರಿಶೀಲಿಸುವುದು.