ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಾತ್ಮವು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಿರಿ

ದೇವರಾತ್ಮವು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಿರಿ

ದೇವರಾತ್ಮವು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಿರಿ

“ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”—ಯೆಶಾಯ 30:21.

1, 2. ಇತಿಹಾಸದಾದ್ಯಂತ ಯೆಹೋವನು ಮಾನವರೊಂದಿಗೆ ಹೇಗೆ ಸಂವಾದಮಾಡಿದ್ದಾನೆ?

ಪೋರ್ಟರೀಕೊ ದ್ವೀಪದಲ್ಲಿ, ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಹಾಗೂ ಅತ್ಯಂತ ಸೂಕ್ಷ್ಮವಾದ ಸಿಂಗಲ್‌ ಡಿಶ್‌ ರೇಡಿಯೋ ಟೆಲಿಸ್ಕೋಪ್‌ ಇದೆ. ಶತಮಾನಗಳಿಂದ ವಿಜ್ಞಾನಿಗಳು ಈ ಬೃಹತ್‌ ಉಪಕರಣವನ್ನು ಉಪಯೋಗಿಸಿ, ಭೂಮಿಯಾಚೆಯಿರುವ ಜೀವಿಗಳಿಂದ ಸಂದೇಶಗಳನ್ನು ಪಡೆದುಕೊಳ್ಳುವೆವು ಎಂಬ ಭರವಸೆಯಿಂದ ಕಾಯುತ್ತಾ ಇದ್ದಾರೆ. ಆದರೆ ಅವರು ಇಂದಿನ ತನಕ ಅಂತಹ ಯಾವುದೇ ಸಂದೇಶಗಳನ್ನು ಪಡೆದುಕೊಂಡಿಲ್ಲ. ವ್ಯಂಗ್ಯವಾಗಿ, ಮನುಷ್ಯ ಪ್ರಪಂಚದ ಹೊರಗಿನಿಂದ ನಮ್ಮಲ್ಲಿ ಯಾರಾದರೂ ಯಾವುದೇ ಸಮಯದಲ್ಲಿ, ಅದು ಕೂಡ ಜಟಿಲವಾದ ಉಪಕರಣಗಳನ್ನು ಉಪಯೋಗಿಸದೆ ಪಡೆದುಕೊಳ್ಳಬಹುದಾದ ಸ್ಪಷ್ಟವಾದ ಸಂದೇಶಗಳಿವೆ. ಈ ಸಂದೇಶಗಳು, ಕಾಲ್ಪನಿಕವಾದ ಯಾವುದೇ ಭೂಮ್ಯತೀತ ಜೀವಿಗಿಂತಲೂ ಹೆಚ್ಚು ಉನ್ನತವಾದ ಮೂಲದಿಂದ ಬರುತ್ತವೆ. ಇಂತಹ ಸಂದೇಶಗಳ ಮೂಲನು ಯಾರಾಗಿದ್ದಾನೆ ಮತ್ತು ಇವುಗಳನ್ನು ಯಾರು ಪಡೆದುಕೊಳ್ಳುತ್ತಿದ್ದಾರೆ? ಆ ಸಂದೇಶಗಳು ಏನನ್ನು ತಿಳಿಯಪಡಿಸುತ್ತವೆ?

2 ದೈವಿಕ ಮೂಲದ ಈ ಸಂದೇಶಗಳನ್ನು ಮನುಷ್ಯರು ಕೇಳಿಸಿಕೊಂಡ ಹಲವಾರು ಸಂದರ್ಭಗಳ ಬಗ್ಗೆ ಬೈಬಲಿನಲ್ಲಿ ದಾಖಲೆಗಳಿವೆ. ಈ ಸಂದೇಶಗಳು ಕೆಲವೊಮ್ಮೆ ದೇವರ ಸಂದೇಶವಾಹಕರೋಪಾದಿ ಕಾರ್ಯಮಾಡಿದ ಆತ್ಮ ಜೀವಿಗಳಿಂದ ನೀಡಲ್ಪಟ್ಟವು. (ಆದಿಕಾಂಡ 22:11, 15; ಜೆಕರ್ಯ 4:4, 5; ಲೂಕ 1:26-28) ಮೂರು ಸಂದರ್ಭಗಳಲ್ಲಿ ಯೆಹೋವನೇ ಖುದ್ದಾಗಿ ಮಾತಾಡಿದನು. (ಮತ್ತಾಯ 3:17; 17:5; ಯೋಹಾನ 12:28, 29) ದೇವರು ಪ್ರವಾದಿಗಳ ಮುಖಾಂತರವಾಗಿಯೂ ಮಾತಾಡಿದನು. ಇವರಲ್ಲಿ ಅನೇಕರು, ಅವರು ಹೇಳುವಂತೆ ಪ್ರೇರಿಸಲ್ಪಟ್ಟಿದ್ದ ವಿಷಯಗಳನ್ನು ಬರವಣಿಗೆಯಲ್ಲಿ ಹಾಕಿದರು. ಮತ್ತು ಇಂದು ನಮ್ಮ ಬಳಿ ಬೈಬಲ್‌ ಇದೆ. ಈ ಸಂದೇಶಗಳಲ್ಲಿ ಅನೇಕ ಸಂದೇಶಗಳು ಹಾಗೂ ಯೇಸುವಿನ ಮತ್ತು ಅವನ ಶಿಷ್ಯರ ಬೋಧನೆಗಳ ಲಿಖಿತ ದಾಖಲೆ ಸಹ ಇದರಲ್ಲಿದೆ. (ಇಬ್ರಿಯ 1:1, 2) ಯೆಹೋವನು ಖಂಡಿತವಾಗಿಯೂ ಮನುಷ್ಯರಿಗೆ ಮಾಹಿತಿಯನ್ನು ಒದಗಿಸಿದ್ದಾನೆ.

3. ದೇವರಿಂದ ಬಂದಿರುವ ಸಂದೇಶಗಳ ಉದ್ದೇಶವೇನು, ಮತ್ತು ನಮ್ಮಿಂದ ಏನನ್ನು ಅಪೇಕ್ಷಿಸಲಾಗಿದೆ?

3 ದೇವರಿಂದ ಬಂದಿರುವ ಈ ಎಲ್ಲ ಪ್ರೇರಿತ ಸಂದೇಶಗಳು ನಮ್ಮ ವಿಶ್ವದ ಬಗ್ಗೆ ಅಷ್ಟೇನೂ ಮಾಹಿತಿಯನ್ನು ನೀಡುವುದಿಲ್ಲ. ಅವು ಇದಕ್ಕಿಂತಲೂ ಹೆಚ್ಚು ಮುಖ್ಯವಾದ ವಿಷಯಗಳ ಮೇಲೆ, ಅಂದರೆ ಈಗ ಮತ್ತು ಮುಂದಿನ ಭವಿಷ್ಯತ್ತಿನಲ್ಲಿ ನಮ್ಮ ಜೀವಿತದ ಮೇಲೆ ಪರಿಣಾಮವನ್ನು ಬೀರುವಂತಹ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ. (ಕೀರ್ತನೆ 19:7-11; 1 ತಿಮೊಥೆಯ 4:8) ತನ್ನ ಚಿತ್ತವನ್ನು ತಿಳಿಸಲಿಕ್ಕಾಗಿ ಹಾಗೂ ತನ್ನ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ಯೆಹೋವನು ಇವುಗಳನ್ನು ಉಪಯೋಗಿಸುತ್ತಾನೆ. ಪ್ರವಾದಿಯಾದ ಯೆಶಾಯನ ಮಾತುಗಳು ನೆರವೇರುತ್ತಿರುವ ಒಂದು ವಿಧವು ಇದಾಗಿದೆ. ಅವನು ಹೇಳುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ತನ್ನ ‘ಮಾತಿಗೆ’ ಕಿವಿಗೊಡಲೇಬೇಕೆಂದು ಯೆಹೋವನು ನಮ್ಮನ್ನು ಬಲವಂತಪಡಿಸುವುದಿಲ್ಲ. ದೇವರ ನಿರ್ದೇಶನವನ್ನು ಅನುಸರಿಸಿ, ಆತನ ಮಾರ್ಗದಲ್ಲಿ ನಡೆಯುವೆವೊ ಇಲ್ಲವೊ ಎಂಬುದು ನಮಗೆ ಬಿಟ್ಟದ್ದಾಗಿದೆ. ಈ ಕಾರಣಕ್ಕಾಗಿಯೇ ಯೆಹೋವನಿಂದ ಬರುವ ಸಂದೇಶಗಳನ್ನು ನಾವು ಕೇಳಿಸಿಕೊಳ್ಳುವಂತೆ ನಮಗೆ ಶಾಸ್ತ್ರವಚನಗಳು ಬುದ್ಧಿವಾದವನ್ನು ನೀಡುತ್ತವೆ. ಪ್ರಕಟನೆಯ ಪುಸ್ತಕದಲ್ಲಿ, “ದೇವರಾತ್ಮನು . . . ಹೇಳುವದನ್ನು ಕಿವಿಯುಳ್ಳವನು ಕೇಳಲಿ” ಎಂಬ ಉತ್ತೇಜನವು ಸುಮಾರು ಏಳು ಬಾರಿ ಕಂಡುಬರುತ್ತದೆ.—ಪ್ರಕಟನೆ 2:7, 11, 17, 29; 3:6, 13, 22.

4. ನಮ್ಮ ದಿನದಲ್ಲಿ ದೇವರು ಸ್ವರ್ಗದಿಂದ ನೇರವಾಗಿ ಮಾತಾಡುವುದನ್ನು ನಿರೀಕ್ಷಿಸುವುದು ಸಮಂಜಸವಾಗಿದೆಯೋ?

4 ಇಂದು, ಯೆಹೋವನು ನಮ್ಮೊಂದಿಗೆ ನೇರವಾಗಿ ಸ್ವರ್ಗದಿಂದ ಮಾತಾಡುವುದಿಲ್ಲ. ಬೈಬಲಿನ ಸಮಯಗಳಲ್ಲೂ, ಈ ಅತಿಲೌಕಿಕ ಸಂವಾದಗಳು ಬಹಳ ಅಪರೂಪದ ಘಟನೆಗಳಾಗಿದ್ದವು. ಕೆಲವೊಮ್ಮೆ ಇವು ಬಹಳ ಶತಮಾನಗಳ ಅಂತರದಲ್ಲಿ ನಡೆದವು. ಇತಿಹಾಸದಾದ್ಯಂತ, ಯೆಹೋವನು ತನ್ನ ಜನರೊಂದಿಗೆ ಪರೋಕ್ಷವಾಗಿ ಸಂವಾದ ನಡೆಸಿರುವ ಸಂದರ್ಭಗಳೇ ಹೆಚ್ಚು. ನಮ್ಮ ದಿನಗಳಲ್ಲೂ ಇದು ನಿಜವಾಗಿದೆ. ಇಂದು ನಮ್ಮೊಂದಿಗೆ ಯೆಹೋವನು ಮಾತಾಡುವ ಮೂರು ವಿಧಗಳನ್ನು ನಾವು ನೋಡೋಣ.

‘ಪ್ರತಿಯೊಂದು ಶಾಸ್ತ್ರವೂ ದೈವಪ್ರೇರಿತವಾಗಿದೆ’

5. ಇಂದು ಯೆಹೋವನ ಸಂವಾದದ ಮುಖ್ಯ ಸಾಧನವು ಯಾವುದಾಗಿದೆ, ಮತ್ತು ಅದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?

5 ದೇವರು ಹಾಗೂ ಮನುಷ್ಯರ ನಡುವಿನ ಸಂವಾದದ ಮುಖ್ಯ ಮಾಧ್ಯಮವು ಬೈಬಲ್‌ ಆಗಿದೆ. ಇದು ದೇವರಿಂದ ಪ್ರೇರಿತವಾಗಿದೆ ಹಾಗೂ ಅದರಲ್ಲಿರುವ ಪ್ರತಿಯೊಂದು ವಿಷಯವೂ ನಮಗೆ ಪ್ರಯೋಜನವನ್ನು ತರಬಲ್ಲದು. (2 ತಿಮೊಥೆಯ 3:16) ಯೆಹೋವನ ಮಾತಿಗೆ ಕಿವಿಗೊಡಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸಲು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಿದ ಅನೇಕ ನೈಜ ವ್ಯಕ್ತಿಗಳ ಉದಾಹರಣೆಗಳಿಂದ ಬೈಬಲು ತುಂಬಿತುಳುಕುತ್ತಿದೆ. ಇಂತಹ ಉದಾಹರಣೆಗಳು ದೇವರಾತ್ಮವು ಹೇಳಲಿಕ್ಕಿರುವಂತಹ ವಿಷಯಗಳಿಗೆ ಕಿವಿಗೊಡುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ನಮಗೆ ಮರುಜ್ಞಾಪಿಸುತ್ತದೆ. (1 ಕೊರಿಂಥ 10:11) ಜೀವಿತದಲ್ಲಿ ನಮಗೆ ನಿರ್ಣಯಗಳನ್ನು ಮಾಡಬೇಕಾದಾಗ, ಅದಕ್ಕೆ ಆವಶ್ಯಕವಾಗಿರುವ ಪ್ರಾಯೋಗಿಕ ವಿವೇಕವನ್ನು ಮತ್ತು ಸಲಹೆಯನ್ನು ಬೈಬಲು ನೀಡುತ್ತದೆ. ಇದು ಒಂದು ರೀತಿಯಲ್ಲಿ ದೇವರೇ ನಮ್ಮ ಹಿಂದೆ ಇದ್ದುಕೊಂಡು, ನಮ್ಮ ಕಿವಿಗಳಲ್ಲಿ “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಹೇಳುತ್ತಿದ್ದಾನೋ ಎಂಬಂತೆ ಇರುತ್ತದೆ.

6. ಇತರ ಎಲ್ಲ ಬರಹಗಳಿಗಿಂತಲೂ ಬೈಬಲ್‌ ಅತಿ ಶ್ರೇಷ್ಠವಾದುದ್ದಾಗಿದೆ ಏಕೆ?

6 ಬೈಬಲಿನ ಮುಖಾಂತರ ದೇವರಾತ್ಮವು ಹೇಳುವ ವಿಷಯಗಳನ್ನು ಕೇಳಿಸಿಕೊಳ್ಳಬೇಕಾದರೆ, ನಾವು ಅದನ್ನು ಕ್ರಮವಾಗಿ ಓದತಕ್ಕದ್ದು. ಬೈಬಲ್‌, ಇಂದು ಲಭ್ಯವಿರುವ ಅನೇಕ ಪುಸ್ತಕಗಳಲ್ಲಿ ಕೇವಲ ಒಂದು ಉತ್ಕೃಷ್ಟ ಬರಹದ, ಜನಪ್ರಿಯ ಪುಸ್ತಕವಾಗಿರುವುದಿಲ್ಲ. ಬೈಬಲ್‌ ದೇವರಾತ್ಮಪ್ರೇರಿತವಾಗಿದ್ದು, ಅದರಲ್ಲಿ ಆತನ ಆಲೋಚನೆಗಳಿವೆ. ಇಬ್ರಿಯ 4:12 ಹೇಳುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” ನಾವು ಬೈಬಲನ್ನು ಓದಿದಂತೆ, ಅದರಲ್ಲಿರುವ ವಿಷಯಗಳು ಕತ್ತಿಯ ಅಲಗಿನೋಪಾದಿ ನಮ್ಮ ಆಂತರಿಕ ಆಲೋಚನೆಗಳನ್ನು ಮತ್ತು ಪ್ರೇರೇಪಣೆಗಳನ್ನು ಭೇದಿಸುತ್ತವೆ. ಇದು ನಮ್ಮ ಜೀವಿತಗಳು ಎಷ್ಟರ ಮಟ್ಟಿಗೆ ದೇವರ ಚಿತ್ತದೊಂದಿಗೆ ಹೊಂದಾಣಿಕೆಯಲ್ಲಿವೆ ಎಂಬುದನ್ನು ಹೊರಗೆಡಹುತ್ತದೆ.

7. ಬೈಬಲನ್ನು ಓದುವುದು ಏಕೆ ಅತಿ ಪ್ರಾಮುಖ್ಯವಾಗಿದೆ ಮತ್ತು ನಾವು ಅದನ್ನು ಎಷ್ಟು ಬಾರಿ ಓದುವಂತೆ ಉತ್ತೇಜಿಸಲ್ಪಟ್ಟಿದ್ದೇವೆ?

7 ಸಮಯವು ಗತಿಸಿದಂತೆ ಹಾಗೂ ಜೀವಿತದಲ್ಲಿ ನಮಗೆ ಸಿಹಿಕಹಿ ಅನುಭವಗಳಾದಂತೆ ನಮ್ಮ ‘ಹೃದಯದ ಆಲೋಚನೆಗಳೂ ಉದ್ದೇಶಗಳೂ’ ಬದಲಾಗಸಾಧ್ಯವಿದೆ. ನಾವು ಎಡೆಬಿಡದೇ ದೇವರ ವಾಕ್ಯವನ್ನು ಅಧ್ಯಯನ ಮಾಡದಿದ್ದಲ್ಲಿ, ನಮ್ಮ ಆಲೋಚನೆಗಳು, ಮನೋಭಾವಗಳು ಮತ್ತು ಭಾವನೆಗಳು ದೈವಿಕ ತತ್ತ್ವಗಳಿಗೆ ಹೊಂದಿಕೆಯಲ್ಲಿರದೇ ಹೋಗಸಾಧ್ಯವಿದೆ. ಆದುದರಿಂದ, ಬೈಬಲು ನಮಗೆ ಬುದ್ಧಿವಾದವನ್ನು ನೀಡುವುದು: “ನೀವು ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳುತ್ತಾ ಇರಿ.” (2 ಕೊರಿಂಥ 13:5, NW) ದೇವರಾತ್ಮವು ಹೇಳಲಿಕ್ಕಿರುವ ವಿಷಯಗಳನ್ನು ನಾವು ಕೇಳಿಸಿಕೊಳ್ಳುತ್ತಾ ಇರಬೇಕಾದರೆ, ಆತನ ವಾಕ್ಯವನ್ನು ದಿನನಿತ್ಯವೂ ಓದಬೇಕೆಂಬ ಸಲಹೆಯನ್ನು ನಾವು ಪಾಲಿಸತಕ್ಕದ್ದು.—ಕೀರ್ತನೆ 1:2.

8. ಬೈಬಲನ್ನು ಓದುವುದರ ಸಂಬಂಧದಲ್ಲಿ ಅಪೊಸ್ತಲ ಪೌಲನ ಯಾವ ಮಾತುಗಳು ನಮ್ಮನ್ನು ಪರೀಕ್ಷಿಸಿಕೊಳ್ಳಲು ಸಹಾಯಮಾಡುತ್ತವೆ?

8 ಬೈಬಲ್‌ ವಾಚಕರಿಗೆ ಒಂದು ಮುಖ್ಯವಾದ ಮರುಜ್ಞಾಪನವು ಇದಾಗಿದೆ: ನೀವು ಓದುವಂತಹ ವಿಷಯಗಳನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ! ದಿನನಿತ್ಯವೂ ಬೈಬಲನ್ನು ಓದಬೇಕು ಎಂಬ ಸಲಹೆಗನುಸಾರವಾಗಿ ನಡೆಯಲಿಕ್ಕೆ ಪ್ರಯತ್ನಿಸುವಾಗ, ನಾವೇನನ್ನು ಓದುತ್ತೇವೋ ಅದನ್ನು ಅರ್ಥಮಾಡಿಕೊಳ್ಳದೇ ಹಲವಾರು ಅಧ್ಯಾಯಗಳನ್ನು ಬೇಗಬೇಗನೇ ಓದಿಮುಗಿಸಬಾರದು. ಬೈಬಲನ್ನು ಕ್ರಮವಾಗಿ ಓದುವುದು ತುಂಬ ಪ್ರಾಮುಖ್ಯವಾಗಿರುವುದಾದರೂ, ಅದನ್ನು ಮಾಡುವ ನಮ್ಮ ಉದ್ದೇಶವು ಕೇವಲ ಶೆಡ್ಯೂಲಿನಲ್ಲಿ ಕೊಡಲ್ಪಟ್ಟಿರುವ ಭಾಗವನ್ನು ಓದಿಮುಗಿಸುವುದಾಗಿರಬಾರದು. ಅದರ ಬದಲು, ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ಕಲಿತುಕೊಳ್ಳುವ ಯಥಾರ್ಥವಾದ ಬಯಕೆಯು ನಮಗಿರಬೇಕು. ಈ ಸಂಬಂಧದಲ್ಲಿ, ನಮ್ಮನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಅಪೊಸ್ತಲ ಪೌಲನ ಈ ಮುಂದಿನ ಮಾತುಗಳನ್ನು ನಾವು ಉಪಯೋಗಿಸಬಹುದು. ಜೊತೆ ಕ್ರೈಸ್ತರಿಗೆ ಬರೆಯುವಾಗ ಅವನು ಹೇಳಿದ್ದು: “ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು . . . ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವ ಹಾಗೆಯೂ ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ; ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತರಾಗಿದ್ದು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.”—ಎಫೆಸ 3:14, 16-19.

9. ಯೆಹೋವನಿಂದ ಕಲಿತುಕೊಳ್ಳುವ ಅಭಿಲಾಷೆಯನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಗಾಢಗೊಳಿಸಸಾಧ್ಯವಿದೆ?

9 ನಮ್ಮಲ್ಲಿ ಕೆಲವರು ಸ್ವಭಾವತಃ ಓದುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ, ಆದರೆ ಇತರರು ಕಟ್ಟಾಸೆಯ ಓದುಗರಾಗಿರುತ್ತಾರೆ ಎಂಬುದು ಒಪ್ಪತಕ್ಕ ವಿಷಯವೇ. ನಮ್ಮ ವೈಯಕ್ತಿಕ ಪ್ರವೃತ್ತಿಯು ಏನೇ ಆಗಿರಲಿ, ಯೆಹೋವನಿಂದ ಕಲಿತುಕೊಳ್ಳುವ ಅಭಿಲಾಷೆಯನ್ನು ನಾವು ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಅದನ್ನು ಗಾಢಗೊಳಿಸಸಾಧ್ಯವಿದೆ. ಬೈಬಲಿನ ಜ್ಞಾನಕ್ಕಾಗಿ ನಮಗೆ ಉತ್ಕಟವಾದ ಹಂಬಲವಿರಬೇಕೆಂದು ಅಪೊಸ್ತಲ ಪೇತ್ರನು ವಿವರಿಸಿದನು ಮತ್ತು ಅಂತಹ ಹಂಬಲವು ವಿಕಸಿಸಲ್ಪಡಬೇಕು ಎಂಬುದನ್ನು ಅವನು ಗ್ರಹಿಸಿದನು. ಅವನು ಬರೆದುದು: “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ [“ಹಂಬಲವನ್ನು ಕಲ್ಪಿಸಿಕೊಳ್ಳಿರಿ,” NW]; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ.” (1 ಪೇತ್ರ 2:2) ಬೈಬಲ್‌ ಅಭ್ಯಾಸಕ್ಕಾಗಿ ‘ಹಂಬಲವನ್ನು ಕಲ್ಪಿಸಿಕೊಳ್ಳಲಿಕ್ಕಾಗಿ’ ಸ್ವಶಿಸ್ತು ಆವಶ್ಯಕ. ಒಂದು ಹೊಸ ರೀತಿಯ ಆಹಾರವನ್ನು ಮೊದಲ ಬಾರಿ ರುಚಿನೋಡುವಾಗ ಸಾಮಾನ್ಯವಾಗಿ ನಾವು ಅದನ್ನು ಇಷ್ಟಪಡುವುದಿಲ್ಲ. ಆದರೆ ಆ ಆಹಾರವನ್ನು ನಾವು ಹಲವಾರು ಬಾರಿ ಸೇವಿಸಿದಾಗಲೇ ಇಷ್ಟಪಡಲಾರಂಭಿಸುತ್ತೇವೆ. ಹಾಗೆಯೇ ಕ್ರಮವಾಗಿ ಓದಲು ಹಾಗೂ ಅಧ್ಯಯನಮಾಡಲು ನಾವು ನಮ್ಮನ್ನು ಶಿಸ್ತುಪಡಿಸಿಕೊಂಡರೆ, ಆಗ ಅದರ ಕಡೆಗಿನ ನಮ್ಮ ಮನೋಭಾವವು ಉತ್ತಮಗೊಳ್ಳಸಾಧ್ಯವಿದೆ.

“ಹೊತ್ತುಹೊತ್ತಿಗೆ ಆಹಾರ”

10. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಲ್ಲಿ’ ಯಾರು ಸೇರಿದ್ದಾರೆ, ಮತ್ತು ಇಂದು ಅವರನ್ನು ಯೆಹೋವನು ಹೇಗೆ ಉಪಯೋಗಿಸುತ್ತಿದ್ದಾನೆ?

10 ಇಂದು ನಮ್ಮೊಂದಿಗೆ ಮಾತಾಡಲು ಯೆಹೋವನು ಉಪಯೋಗಿಸುವ ಮತ್ತೊಂದು ಮಾಧ್ಯಮವು, ಮತ್ತಾಯ 24:45-47ರಲ್ಲಿ ಯೇಸುವಿನಿಂದ ಗುರುತಿಸಲ್ಪಟ್ಟಿದೆ. ಅಲ್ಲಿ ಅವನು ಆತ್ಮಾಭಿಷಿಕ್ತ ಕ್ರೈಸ್ತ ಸಭೆಯ ಬಗ್ಗೆ ಮಾತಾಡಿದನು. ಇವರು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನೋಪಾದಿ’ “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ”ವನ್ನು ಒದಗಿಸಲು ನೇಮಿಸಲ್ಪಟ್ಟಿದ್ದಾರೆ. ಈ ವರ್ಗದ ಒಬ್ಬೊಬ್ಬ ಸದಸ್ಯರು ಯೇಸುವಿನ ‘ಮನೆಯವರಾಗಿದ್ದಾರೆ.’ ಇವರು ಮತ್ತು ‘ಬೇರೆ ಕುರಿಗಳ’ “ಮಹಾ ಸಮೂಹ”ವು ಉತ್ತೇಜನವನ್ನೂ ಮಾರ್ಗದರ್ಶನವನ್ನೂ ಪಡೆದುಕೊಳ್ಳುತ್ತಾರೆ. (ಪ್ರಕಟನೆ 7:9; ಯೋಹಾನ 10:16) ಹೊತ್ತುಹೊತ್ತಿಗೆ ಸಿಗುವ ಹೆಚ್ಚಿನ ಆಹಾರವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಹಾಗೂ ಇತರ ಸಾಹಿತ್ಯಗಳಂತಹ ಮುದ್ರಿತ ಪ್ರಕಾಶನಗಳಲ್ಲಿ ಬರುತ್ತದೆ. ಇನ್ನೂ ಹೆಚ್ಚಿನ ಆತ್ಮಿಕ ಆಹಾರವು ಅಧಿವೇಶನಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಸಭಾಕೂಟಗಳಲ್ಲಿನ ಭಾಷಣಗಳು ಹಾಗೂ ಪ್ರತ್ಯಕ್ಷಾಭಿನಯಗಳ ಮುಖಾಂತರ ಸಿಗುತ್ತದೆ.

11. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮುಖಾಂತರ ದೇವರಾತ್ಮಕ್ಕೆ ಏನನ್ನು ಹೇಳಲಿಕ್ಕಿದೆಯೋ ಅದನ್ನು ನಾವು ಕೇಳಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಹೇಗೆ ರುಜುಪಡಿಸುವೆವು?

11 “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಮಾಹಿತಿಯು, ನಮ್ಮ ನಂಬಿಕೆಯನ್ನು ಬಲಪಡಿಸಲು ಹಾಗೂ ನಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಲು ರಚಿಸಲಾಗಿದೆ. (ಇಬ್ರಿಯ 5:14) ಇಂತಹ ಸಲಹೆಯು ಎಲ್ಲರಿಗೂ ಅನ್ವಯವಾಗುವಂತಹ ರೀತಿಯಲ್ಲಿ ಕೊಡಲ್ಪಟ್ಟಿರಬಹುದು. ಇದು ಪ್ರತಿಯೊಬ್ಬರೂ ವೈಯಕ್ತಿಕ ಅನ್ವಯವನ್ನು ಮಾಡಿಕೊಳ್ಳಸಾಧ್ಯವಾಗುವಂತೆ ಮಾಡುತ್ತದೆ. ಆಗಿಂದಾಗ್ಗೆ, ನಮ್ಮ ನಡವಳಿಕೆಯ ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸುವ ಸಲಹೆಯನ್ನು ಸಹ ನಾವು ಪಡೆದುಕೊಳ್ಳುತ್ತೇವೆ. ಆಳು ವರ್ಗದ ಮುಖಾಂತರ ದೇವರಾತ್ಮವು ಹೇಳುವ ವಿಷಯಗಳನ್ನು ನಾವು ನಿಜವಾಗಿಯೂ ಕೇಳಿಸಿಕೊಳ್ಳುತ್ತಿರುವಲ್ಲಿ ಯಾವ ರೀತಿಯ ಮನೋಭಾವವು ನಮಗಿರತಕ್ಕದ್ದು? ಅಪೊಸ್ತಲ ಪೌಲನು ಉತ್ತರಿಸುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ.” (ಇಬ್ರಿಯ 13:7) ಈ ಏರ್ಪಾಡಿನಲ್ಲಿ ಒಳಗೊಂಡಿರುವ ಎಲ್ಲರೂ ಅಪರಿಪೂರ್ಣರೇ ಆಗಿದ್ದಾರೆ. ತನ್ನ ಮಾನವ ಸೇವಕರು ಅಪರಿಪೂರ್ಣರಾಗಿರುವುದಾದರೂ, ಈ ಅಂತ್ಯದ ಸಮಯದಲ್ಲಿ ನಮಗೆ ಮಾರ್ಗದರ್ಶನವನ್ನು ಕೊಡಲು ಇವರನ್ನು ಉಪಯೋಗಿಸುವುದರಲ್ಲಿ ಯೆಹೋವನು ಆನಂದಿಸುತ್ತಾನೆ.

ನಮ್ಮ ಮನಸ್ಸಾಕ್ಷಿಯಿಂದ ಮಾರ್ಗದರ್ಶನ

12, 13. (ಎ) ಯೆಹೋವನು ನಮಗೆ ಮಾರ್ಗದರ್ಶನದ ಬೇರೆ ಯಾವ ಮೂಲವನ್ನು ಕೊಟ್ಟಿದ್ದಾನೆ? (ಬಿ) ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಹೊಂದಿರದ ಜನರ ಮೇಲೆ ಕೂಡ ಮನಸ್ಸಾಕ್ಷಿಯು ಯಾವ ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು?

12 ಯೆಹೋವನು ನಮಗೆ ಮಾರ್ಗದರ್ಶನದ ಮತ್ತೊಂದು ಮೂಲವನ್ನು ಕೊಟ್ಟಿದ್ದಾನೆ. ಅದು ನಮ್ಮ ಮನಸ್ಸಾಕ್ಷಿಯಾಗಿದೆ. ಸರಿ ಮತ್ತು ತಪ್ಪನ್ನು ಗ್ರಹಿಸುವ ಒಳಪ್ರಜ್ಞೆಯೊಂದಿಗೆ ಆತನು ಮಾನವನನ್ನು ಸೃಷ್ಟಿಸಿದನು. ಇದು ನಮ್ಮ ಸ್ವರೂಪದ ಭಾಗವಾಗಿದೆ. ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಅಪೊಸ್ತಲ ಪೌಲನು ವಿವರಿಸಿದ್ದು: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.”—ರೋಮಾಪುರ 2:14, 15.

13 ಯೆಹೋವನ ಪರಿಚಯವಿಲ್ಲದ ಅನೇಕ ಜನರು ಸ್ವಲ್ಪ ಮಟ್ಟಿಗೆ, ತಮ್ಮ ಆಲೋಚನೆಗಳು ಹಾಗೂ ಕ್ರಿಯೆಗಳನ್ನು ಸರಿ ಮತ್ತು ತಪ್ಪಿನ ಕುರಿತಾದ ದೈವಿಕ ತತ್ತ್ವಗಳಿಗೆ ಹೊಂದಿಕೆಯಲ್ಲಿ ತರಬಲ್ಲರು. ಸರಿಯಾದ ದಿಕ್ಕಿನಲ್ಲಿ ತಮ್ಮನ್ನು ಮಾರ್ಗದರ್ಶಿಸುತ್ತಿರುವ ಅಸ್ಪಷ್ಟವಾದ ಆಂತರಿಕ ಧ್ವನಿ ಅವರಿಗೆ ಕೇಳಿಸುತ್ತಿರುವಂತೆ ಭಾಸವಾಗುತ್ತದೆ. ದೇವರ ವಾಕ್ಯದ ನಿಷ್ಕೃಷ್ಟವಾದ ಜ್ಞಾನ ಇಲ್ಲದವರಿಗೇ ಹೀಗನಿಸುವಾಗ, ಸತ್ಯ ಕ್ರೈಸ್ತರ ವಿಷಯದಲ್ಲಾದರೋ ಆ ಆಂತರಿಕ ಧ್ವನಿಯು ಇನ್ನೂ ಎಷ್ಟರ ಮಟ್ಟಿಗೆ ಮಾತಾಡಬೇಕು! ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನದಿಂದ ಪರಿಶುದ್ಧಗೊಳಿಸಲ್ಪಟ್ಟಿರುವ ಮತ್ತು ಯೆಹೋವನ ಪವಿತ್ರಾತ್ಮದೊಂದಿಗೆ ಹೊಂದಿಕೆಯಲ್ಲಿ ಕೆಲಸಮಾಡುವ ಒಂದು ಕ್ರೈಸ್ತ ಮನಸ್ಸಾಕ್ಷಿಯು ಭರವಸಾರ್ಹ ಮಾರ್ಗದರ್ಶನವನ್ನು ನೀಡಸಾಧ್ಯವಿದೆ.—ರೋಮಾಪುರ 9:2.

14. ಯೆಹೋವನ ಆತ್ಮದ ಮಾರ್ಗದರ್ಶನವನ್ನು ಅನುಸರಿಸಲು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ನಮಗೆ ಹೇಗೆ ಸಹಾಯವನ್ನು ನೀಡಬಲ್ಲದು?

14 ಒಂದು ಒಳ್ಳೇ ಮನಸ್ಸಾಕ್ಷಿಯು, ಅಂದರೆ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು, ದೇವರಾತ್ಮವು ಯಾವ ಮಾರ್ಗದಲ್ಲಿ ನಾವು ನಡೆಯುವಂತೆ ಬಯಸುತ್ತದೋ ಆ ಮಾರ್ಗವನ್ನು ಅದು ನಮಗೆ ಜ್ಞಾಪಿಸಬಲ್ಲದು. ನಾವು ಎದುರಾಗುವಂತಹ ನಿರ್ದಿಷ್ಟ ಪರಿಸ್ಥಿತಿಯ ಬಗ್ಗೆ ಶಾಸ್ತ್ರವಚನಗಳು ಇಲ್ಲವೇ ಬೈಬಲ್‌ ಆಧಾರಿತ ಪ್ರಕಾಶನಗಳು ನಿಖರವಾಗಿ ಏನನ್ನೂ ಹೇಳದಿರುವಂತಹ ಸಂದರ್ಭಗಳೂ ಇರಬಹುದು. ಆದರೂ, ನಮ್ಮ ಮನಸ್ಸಾಕ್ಷಿಯು ಎಚ್ಚರಿಕೆಯನ್ನು ನೀಡುತ್ತಾ, ಹಾನಿಯನ್ನು ತರಬಹುದಾದ ಮಾರ್ಗದಲ್ಲಿ ಹೋಗದಂತೆ ನಮ್ಮನ್ನು ಜಾಗೃತಗೊಳಿಸಬಹುದು. ಅಂತಹ ಸಂದರ್ಭಗಳಲ್ಲಿ, ನಮ್ಮ ಮನಸ್ಸಾಕ್ಷಿಯು ಏನು ಹೇಳುತ್ತದೋ ಅದನ್ನು ಅಲಕ್ಷಿಸುವುದು ಯೆಹೋವನ ಆತ್ಮವು ಏನು ಹೇಳುತ್ತದೋ ಅದನ್ನು ಅಲಕ್ಷಿಸುವುದಕ್ಕೆ ಸಮಾನವಾಗಿರುವುದು. ಇನ್ನೊಂದು ಕಡೆಯಲ್ಲಿ, ನಾವು ನಮ್ಮ ಶಿಕ್ಷಿತ ಕ್ರೈಸ್ತ ಮನಸ್ಸಾಕ್ಷಿಯ ಮೇಲೆ ಆತುಕೊಳ್ಳಲು ಕಲಿತುಕೊಳ್ಳುವ ಮೂಲಕ, ಬರವಣಿಗೆಯಲ್ಲಿ ನಿಖರವಾದ ಯಾವುದೇ ನಿರ್ದೇಶನವಿಲ್ಲದಿರುವಾಗಲೂ ಸರಿಯಾದ ಆಯ್ಕೆಗಳನ್ನು ನಾವು ಮಾಡಸಾಧ್ಯವಿದೆ. ಆದರೆ ಈ ವಿಷಯವನ್ನೂ ಮನಸ್ಸಿನಲ್ಲಿಡುವುದು ಅತ್ಯಾವಶ್ಯಕ: ಜೊತೆ ಕ್ರೈಸ್ತರ ವೈಯಕ್ತಿಕ ವಿಷಯಗಳ ಕುರಿತು ದೈವಿಕ ರೀತಿಯಲ್ಲಿ ಒದಗಿಸಲ್ಪಟ್ಟಿರುವ ಯಾವುದೇ ತತ್ತ್ವ, ನಿಯಮ ಅಥವಾ ಕಟ್ಟಳೆಯಿಲ್ಲದಿರುವಾಗ, ನಾವು ನಮ್ಮ ಸ್ವಂತ ಮನಸ್ಸಾಕ್ಷಿಯ ನಿರ್ಣಯಗಳನ್ನು ಅವರ ಮೇಲೆ ಬಲವಂತವಾಗಿ ಹೇರುವುದು ಸರಿಯಾಗಿರುವುದಿಲ್ಲ.—ರೋಮಾಪುರ 14:1-4; ಗಲಾತ್ಯ 6:5.

15, 16. ಯಾವುದು ನಮ್ಮ ಮನಸ್ಸಾಕ್ಷಿಯು ಸರಿಯಾಗಿ ಕೆಲಸಮಾಡದಂತೆ ಮಾಡುವುದು ಮತ್ತು ಹಾಗಾಗುವುದನ್ನು ನಾವು ಹೇಗೆ ತಡೆಗಟ್ಟಸಾಧ್ಯವಿದೆ?

15 ಶುದ್ಧವಾದ, ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ದೇವರಿಂದ ಕೊಡಲ್ಪಟ್ಟಿರುವ ಒಂದು ಒಳ್ಳೆಯ ಕೊಡುಗೆಯಾಗಿದೆ. (ಯಾಕೋಬ 1:17) ಆದರೆ ಇದು ಒಂದು ನೈತಿಕ ಸುರಕ್ಷಾ ಸಾಧನವಾಗಿ ಸರಿಯಾಗಿ ಕೆಲಸಮಾಡಬೇಕಾದರೆ, ಈ ಕೊಡುಗೆಯನ್ನು ಭ್ರಷ್ಟ ಪ್ರಭಾವಗಳಿಂದ ನಾವು ಕಾಪಾಡಬೇಕು. ದೇವರ ಮಟ್ಟಗಳಿಗೆ ವಿರುದ್ಧವಾಗಿರುವ ಸ್ಥಳಿಕ ಆಚಾರಗಳು, ಸಂಪ್ರದಾಯಗಳು ಮತ್ತು ಅಭ್ಯಾಸಗಳನ್ನು ನಾವು ಅನುಸರಿಸುವುದಾದರೆ ನಮ್ಮ ಮನಸ್ಸಾಕ್ಷಿಯು ಸರಿಯಾಗಿ ಕೆಲಸಮಾಡದಂತೆ ಮತ್ತು ಸರಿಯಾದ ದಿಕ್ಕಿನಲ್ಲಿ ನಮ್ಮನ್ನು ಪ್ರೇರಿಸಲು ತಪ್ಪಿಹೋಗುವಂತೆ ಮಾಡಬಲ್ಲವು. ನಾವು ವಿಷಯಗಳನ್ನು ಸರಿಯಾದ ರೀತಿಯಲ್ಲಿ ನಿರ್ಧರಿಸಲು ಅಶಕ್ತರಾಗಬಹುದು ಮತ್ತು ಒಂದು ಕೆಟ್ಟ ಕೃತ್ಯವು ನಿಜವಾಗಿಯೂ ಒಳ್ಳೆಯದಾಗಿದೆ ಎಂದು ನಂಬುತ್ತಾ ನಾವು ನಮ್ಮನ್ನು ಮೋಸಗೊಳಿಸಿಕೊಳ್ಳಬಹುದು.—ಯೋಹಾನ 16:2ನ್ನು ಹೋಲಿಸಿರಿ.

16 ನಮ್ಮ ಮನಸ್ಸಾಕ್ಷಿಯ ಎಚ್ಚರಿಕೆಗಳನ್ನು ನಾವು ಅಲಕ್ಷಿಸುತ್ತಾ ಹೋದಲ್ಲಿ, ಅದರ ಧ್ವನಿಯು ಅಸ್ಪಷ್ಟವಾಗುತ್ತಾ ಹೋಗುವುದು. ಇದು ಎಷ್ಟರ ಮಟ್ಟಿಗೆ ಮುಂದುವರಿಯಬಹುದೆಂದರೆ, ನಾವು ನೈತಿಕವಾಗಿ ಜಡವಾಗಿಹೋಗಬಹುದು ಅಥವಾ ಸಂವೇದನೆಯನ್ನು ಕಳೆದುಕೊಳ್ಳಬಹುದು. ಅಂತಹ ಜನರ ಬಗ್ಗೆಯೇ ಕೀರ್ತನೆಗಾರನು ಹೀಗೆ ಹೇಳಿದನು: “ಕೊಬ್ಬಿನಂತೆ ಅವರ ಬುದ್ಧಿ ಮಂದವಾಯಿತು.” (ಕೀರ್ತನೆ 119:70) ತಮ್ಮ ಮನಸ್ಸಾಕ್ಷಿಯು ಚುಚ್ಚುವಾಗ ಅದನ್ನು ಕಡೆಗಣಿಸುವ ಕೆಲವರು ಸರಿಯಾದ ರೀತಿಯಲ್ಲಿ ಆಲೋಚಿಸಿ ನೋಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರು ಇನ್ನು ಮುಂದೆ ದೈವಿಕ ತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವುದಿಲ್ಲ ಮತ್ತು ಅವರು ಸರಿಯಾದ ನಿರ್ಣಯಗಳನ್ನು ಮಾಡಲು ಅಶಕ್ತರಾಗುತ್ತಾರೆ. ನಾವು ಅಂತಹ ಸ್ಥಿತಿಗೆ ಬಂದು ತಲಪದಂತೆ, ತೀರ ಚಿಕ್ಕದಾಗಿ ತೋರುವ ವಿಷಯಗಳಲ್ಲೂ ನಮ್ಮ ಕ್ರೈಸ್ತ ಮನಸ್ಸಾಕ್ಷಿಯು ಕೊಡುವ ಮಾರ್ಗದರ್ಶನಗಳಿಗೆ ನಾವು ಸಂವೇದನಾಶೀಲರಾಗಿರತಕ್ಕದ್ದು.—ಲೂಕ 16:10.

ಕಿವಿಗೊಟ್ಟು ವಿಧೇಯತೆಯನ್ನು ತೋರಿಸುವವರು ಸಂತುಷ್ಟರು

17. ‘ನಮ್ಮ ಹಿಂದೆ ಆಡುವ ಮಾತಿಗೆ’ ನಾವು ಕಿವಿಗೊಡುವಾಗ ಮತ್ತು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ಗಮನಕೊಡುವಾಗ ನಾವು ಹೇಗೆ ಆಶೀರ್ವಾದವನ್ನು ಪಡೆದುಕೊಳ್ಳುವೆವು?

17 ಶಾಸ್ತ್ರವಚನಗಳು ಮತ್ತು ನಂಬಿಗಸ್ತನೂ ವಿವೇಕಿಯೂ ಆದ ಆಳು ‘ನಮ್ಮ ಹಿಂದೆ ಆಡುವ ಮಾತಿಗೆ’ ನಾವು ಕಿವಿಗೊಡುವುದನ್ನು ಅಭ್ಯಾಸಮಾಡಿಕೊಳ್ಳಬೇಕು ಮತ್ತು ನಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ನೀಡುವ ಮರುಜ್ಞಾಪನಗಳನ್ನು ನಾವು ಪಾಲಿಸಬೇಕು. ಆಗ ಯೆಹೋವನು ತನ್ನ ಆತ್ಮದಿಂದ ನಮ್ಮನ್ನು ಆಶೀರ್ವದಿಸುವನು. ಮತ್ತು ಯೆಹೋವನು ನಮಗೆ ಹೇಳುವಂತಹ ವಿಷಯಗಳನ್ನು ಅಂಗೀಕರಿಸುವ ಹಾಗೂ ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಪವಿತ್ರಾತ್ಮವು ಹೆಚ್ಚಿಸುವುದು.

18, 19. ನಮ್ಮ ಪ್ರಚಾರ ಕಾರ್ಯದಲ್ಲಿ ಮತ್ತು ನಮ್ಮ ವೈಯಕ್ತಿಕ ಜೀವನದಲ್ಲಿ ಯೆಹೋವನ ಮಾರ್ಗದರ್ಶನವು ಹೇಗೆ ಪ್ರಯೋಜನವನ್ನು ತರಸಾಧ್ಯವಿದೆ?

18 ಕಷ್ಟಕರವಾದ ಪರಿಸ್ಥಿತಿಗಳನ್ನು ವಿವೇಕ ಹಾಗೂ ಧೈರ್ಯದಿಂದ ಎದುರಿಸಿ ನಿಲ್ಲುವದಕ್ಕೆ ಸಹ ಯೆಹೋವನ ಆತ್ಮವು ನಮ್ಮನ್ನು ಹುರಿದುಂಬಿಸುವುದು. ಅಪೊಸ್ತಲರಿಗಾದಂತೆ, ದೇವರಾತ್ಮವು ನಮ್ಮ ಮಾನಸಿಕ ಶಕ್ತಿಗಳನ್ನು ಪ್ರಚೋದಿಸಿ, ನಾವು ಯಾವಾಗಲೂ ಬೈಬಲ್‌ ತತ್ತ್ವಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ಹಾಗೂ ಮಾತಾಡುವಂತೆ ಸಹಾಯಮಾಡಬಲ್ಲದು. (ಮತ್ತಾಯ 10:18-20; ಯೋಹಾನ 14:26; ಅ. ಕೃತ್ಯಗಳು 4:5-8, 13, 31; 15:28) ಯೆಹೋವನ ಆತ್ಮ ಹಾಗೂ ನಮ್ಮ ಸ್ವಂತ ವೈಯಕ್ತಿಕ ಪ್ರಯತ್ನಗಳು ನಾವು ಜೀವಿತದಲ್ಲಿ ಮುಖ್ಯ ನಿರ್ಣಯಗಳನ್ನು ಮಾಡುವಾಗ ನಮ್ಮನ್ನು ಸಫಲರನ್ನಾಗಿ ಮಾಡುವುದು. ಮತ್ತು ಇವು ಆ ನಿರ್ಣಯಗಳಿಗೆ ತಕ್ಕ ಹಾಗೆ ಕ್ರಿಯೆಗೈಯುವಂತೆ ನಮ್ಮಲ್ಲಿ ಧೈರ್ಯವನ್ನು ತುಂಬುವುವು. ಉದಾಹರಣೆಗೆ, ಆತ್ಮಿಕ ವಿಷಯಗಳಿಗಾಗಿ ಹೆಚ್ಚಿನ ಸಮಯವನ್ನು ಬದಿಗಿಡಲಿಕ್ಕಾಗಿ ನಿಮ್ಮ ಜೀವನ ಶೈಲಿಯನ್ನು ಸರಿಹೊಂದಿಸಿಕೊಳ್ಳುವುದಕ್ಕೆ ನೀವು ಯೋಚಿಸುತ್ತಿರಬಹುದು. ಅಥವಾ ಒಬ್ಬ ಜೀವನ ಸಂಗಾತಿಯನ್ನು ಆಯ್ಕೆಮಾಡುವ, ಸಿಕ್ಕಿರುವ ಒಂದು ಉದ್ಯೋಗದ ಅವಕಾಶವನ್ನು ತೂಗಿನೋಡುವ, ಅಥವಾ ಮನೆಯೊಂದನ್ನು ಖರೀದಿಸುವಂತಹ ಮುಂತಾದ, ಜೀವಿತವನ್ನೇ ಮಾರ್ಪಡಿಸುವ ಪ್ರಾಮುಖ್ಯವಾದ ಆಯ್ಕೆಗಳನ್ನು ನೀವು ಎದುರಿಸಬಹುದು. ನಿರ್ಣಯಗಳನ್ನು ಮಾಡುವಾಗ ಕೇವಲ ನಮ್ಮ ಮಾನವ ಭಾವನೆಗಳಿಗೆ ಮಹತ್ವವನ್ನು ಕೊಡುವ ಬದಲಿಗೆ, ಇದರ ಬಗ್ಗೆ ದೇವರಾತ್ಮವು ಏನನ್ನು ಹೇಳುತ್ತದೆ ಎಂಬುದಕ್ಕೆ ನಾವು ಕಿವಿಗೊಡಬೇಕು ಮತ್ತು ಅದರ ಮಾರ್ಗದರ್ಶನಕ್ಕನುಸಾರ ಕ್ರಿಯೆಗೈಯಬೇಕು.

19 ಹಿರಿಯರನ್ನೂ ಒಳಗೊಂಡು ಜೊತೆ ಕ್ರೈಸ್ತರಿಂದ ನಾವು ಪಡೆದುಕೊಳ್ಳುವ ದಯಾಭರಿತ ಮರುಜ್ಞಾಪನಗಳು ಹಾಗೂ ಸಲಹೆಯನ್ನು ನಾವು ನಿಜವಾಗಿಯೂ ಗಣ್ಯಮಾಡುತ್ತೇವೆ. ಆದರೂ, ವಿಷಯಗಳನ್ನು ಯಾವಾಗಲೂ ಇತರರು ನಮ್ಮ ಗಮನಕ್ಕೆ ತರುವಂತೆ ನಾವು ಕಾಯುವ ಅಗತ್ಯವಿಲ್ಲ. ನಾವು ಯಾವ ವಿವೇಕಯುತ ಮಾರ್ಗವನ್ನು ಅನುಸರಿಸಬೇಕು ಮತ್ತು ದೇವರನ್ನು ಸಂತೋಷಪಡಿಸಲಿಕ್ಕಾಗಿ ನಮ್ಮ ಮನೋಭಾವ ಹಾಗೂ ನಡೆನುಡಿಯಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿರುವಲ್ಲಿ, ನಾವು ಅದಕ್ಕನುಸಾರ ಕ್ರಿಯೆಗೈಯೋಣ. ಯೇಸು ಹೇಳಿದ್ದು: “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.”—ಯೋಹಾನ 13:17.

20. ‘ತಮ್ಮ ಹಿಂದೆ ಆಡುವ ಮಾತಿಗೆ’ ಕಿವಿಗೊಡುವವರಿಗೆ ಯಾವ ಆಶೀರ್ವಾದ ಸಿಗುವುದು?

20 ದೇವರನ್ನು ಯಾವ ರೀತಿಯಲ್ಲಿ ಸಂತೋಷಪಡಿಸಬೇಕು ಎಂಬುದನ್ನು ತಿಳಿದುಕೊಳ್ಳಲು, ಕ್ರೈಸ್ತರಿಗೆ ಸ್ವರ್ಗದಿಂದ ಅಕ್ಷರಾರ್ಥ ಧ್ವನಿಯನ್ನು ಕೇಳಿಸಿಕೊಳ್ಳುವ ಇಲ್ಲವೆ ದೇವದೂತನೊಬ್ಬನು ಪ್ರತ್ಯಕ್ಷನಾಗುವ ಅಗತ್ಯವಿಲ್ಲ. ದೇವರ ಲಿಖಿತ ವಾಕ್ಯ ಹಾಗೂ ಭೂಮಿಯಲ್ಲಿರುವ ಆತನ ಅಭಿಷಿಕ್ತ ವರ್ಗದ ಮುಖಾಂತರ ಸಿಗುವ ಪ್ರೀತಿಪರ ಮಾರ್ಗದರ್ಶನದಿಂದ ಇವರು ಆಶೀರ್ವದಿಸಲ್ಪಟ್ಟಿದ್ದಾರೆ. ‘ತಮ್ಮ ಹಿಂದೆ ಆಡುವ ಮಾತನ್ನು’ ಇವರು ಜಾಗರೂಕತೆಯಿಂದ ಆಲಿಸಿದರೆ ಮತ್ತು ತಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಮಾರ್ಗದರ್ಶನವನ್ನು ಅನುಸರಿಸಿದರೆ, ದೇವರ ಚಿತ್ತವನ್ನು ಮಾಡುವುದರಲ್ಲಿ ಅವರು ಸಫಲತೆಯನ್ನು ಹೊಂದುವರು. ಆಗ ಅವರು ಅಪೊಸ್ತಲ ಯೋಹಾನನ ವಾಗ್ದಾನವು ನೆರವೇರುವುದನ್ನು ಖಂಡಿತವಾಗಿಯೂ ನೋಡುವರು: “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.

ಒಂದು ಸಂಕ್ಷಿಪ್ತ ಪುನರ್ವಿಮರ್ಶೆ

• ಯೆಹೋವನು ಮಾನವರೊಂದಿಗೆ ಏಕೆ ಸಂವಾದಮಾಡುತ್ತಾನೆ?

• ಬೈಬಲನ್ನು ಕ್ರಮವಾಗಿ ಓದುವ ಕಾರ್ಯಕ್ರಮದಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು?

• ಆಳು ವರ್ಗದಿಂದ ಬರುವ ಮಾರ್ಗದರ್ಶನಕ್ಕೆ ನಾವು ಹೇಗೆ ಸ್ಪಂದಿಸಬೇಕು?

• ಒಂದು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ಏನನ್ನು ಹೇಳುತ್ತದೋ ಅದನ್ನು ನಾವು ಏಕೆ ಅಲಕ್ಷಿಸಬಾರದು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರವಿವರಣೆ]

ದೇವರಿಂದ ಸಂದೇಶಗಳನ್ನು ಪಡೆದುಕೊಳ್ಳಲು ಮನುಷ್ಯನಿಗೆ ಜಟಿಲವಾದ ಉಪಕರಣದ ಅಗತ್ಯವಿಲ್ಲ

[ಕೃಪೆ]

Courtesy Arecibo Observatory/David Parker/Science Photo Library

[ಪುಟ 15ರಲ್ಲಿರುವ ಚಿತ್ರ]

ಯೆಹೋವನು ಬೈಬಲ್‌ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮುಖಾಂತರ ನಮ್ಮೊಂದಿಗೆ ಮಾತಾಡುತ್ತಾನೆ