ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೈವಾನಿನ ಭತ್ತದ ಹೊಲಗದ್ದೆಗಳಲ್ಲಿ ಸುವಾರ್ತೆಯನ್ನು ಸಾರುವುದು

ತೈವಾನಿನ ಭತ್ತದ ಹೊಲಗದ್ದೆಗಳಲ್ಲಿ ಸುವಾರ್ತೆಯನ್ನು ಸಾರುವುದು

ನಾವಾದರೋ ನಂಬುವವರಾಗಿದ್ದೇವೆ

ತೈವಾನಿನ ಭತ್ತದ ಹೊಲಗದ್ದೆಗಳಲ್ಲಿ ಸುವಾರ್ತೆಯನ್ನು ಸಾರುವುದು

ತೈವಾನ್‌ನಲ್ಲಿ ಸಾಮಾನ್ಯವಾಗಿ ಒಳ್ಳೆಯ ಮಳೆ ಬೀಳುತ್ತದೆ. ಇದರಿಂದ ವರ್ಷದಲ್ಲಿ ಎರಡು ಬಾರಿ ಭತ್ತದ ಬೆಳೆಯನ್ನು ಕೊಯ್ಯಸಾಧ್ಯವಿದೆ. ಯಾವಾಗಲಾದರೊಮ್ಮೆ, ಮಳೆ ಬರಬೇಕಾಗಿದ್ದ ಸಮಯದಲ್ಲಿ ಬರುವುದಿಲ್ಲ, ಆಗ ಸಸಿಗಳು ಸತ್ತುಹೋಗುತ್ತವೆ. ಇಂತಹ ಸಮಯದಲ್ಲಿ, ರೈತನು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾನೋ? ಖಂಡಿತವಾಗಿಯೂ ಇಲ್ಲ. ಪಟ್ಟುಹಿಡಿಯುವುದರಿಂದ ಫಲಸಿಗುತ್ತದೆ ಎಂಬುದು ಅವನಿಗೆ ಗೊತ್ತು. ಆದುದರಿಂದ ಅವನು ಹೊಸ ಸಸಿಗಳನ್ನು ಬೆಳೆಸಿ, ಅವುಗಳನ್ನು ಹೊಲಗದ್ದೆಗಳಲ್ಲಿ ಪುನಃ ನೆಡುತ್ತಾನೆ. ಆಗ ಹವಾಮಾನವು ಒಳ್ಳೆಯದಾದರೆ, ರೈತನು ಫಲವತ್ತಾದ ಬೆಳೆಯನ್ನು ಕೊಯ್ಯುತ್ತಾನೆ. ಆತ್ಮಿಕ ಗಿಡ ನೆಡುವಿಕೆ ಹಾಗೂ ಕೊಯ್ಯುವಿಕೆ ಸಹ ಕೆಲವೊಮ್ಮೆ ಇದನ್ನೇ ಹೋಲುತ್ತದೆ.

ಆತ್ಮಿಕ ಕೊಯ್ಲಿನ ಕೆಲಸದಲ್ಲಿ ಪಟ್ಟುಹಿಡಿಯುವುದು

ತೈವಾನಿನಲ್ಲಿ ಸುಮಾರು ವರ್ಷಗಳಿಂದ ಯೆಹೋವನ ಸಾಕ್ಷಿಗಳು, ಅಷ್ಟೊಂದು ಫಲವನ್ನು ನೀಡದಂತಹ ಕೆಲವೊಂದು ಕ್ಷೇತ್ರಗಳಲ್ಲಿ ಸತ್ಯದ ಬೀಜಗಳನ್ನು ನೆಡಲು ಹಾಗೂ ಕೊಯ್ಯಲು ಬಹಳಷ್ಟು ಶ್ರಮಿಸಿದ್ದಾರೆ. ಅದರಲ್ಲಿ ಒಂದು ಕ್ಷೇತ್ರವು ಮೀಯಲೀ ಆಗಿದೆ. ಆ ಸ್ಥಳದಲ್ಲಿ ಸಾಕ್ಷಿಗಳು ಆಗೊಮ್ಮೆ ಈಗೊಮ್ಮೆ ಮಾಡಿದ್ದ ಪ್ರಯತ್ನಗಳಿಗೆ ಸ್ವಲ್ಪವೇ ಪ್ರತಿಕ್ರಿಯೆ ಸಿಕ್ಕಿತ್ತು. ಆದುದರಿಂದ, 1973ರಲ್ಲಿ ಪೂರ್ಣ ಸಮಯದ ರಾಜ್ಯ ಘೋಷಕರೋಪಾದಿ ಆ ಕ್ಷೇತ್ರದಲ್ಲಿ ಕೆಲಸಮಾಡುವಂತೆ ಒಬ್ಬ ವಿಶೇಷ ಪಯನೀಯರ್‌ ದಂಪತಿಯನ್ನು ನೇಮಿಸಲಾಯಿತು. ಮೊದಮೊದಲು, ಸುವಾರ್ತೆಯಲ್ಲಿ ಕೆಲವರು ಆಸಕ್ತಿಯನ್ನು ತೋರಿಸಿದರು. ಆದರೆ, ಆ ಆಸಕ್ತಿಯು ಬಹಳ ಬೇಗನೆ ಕಮರಿಹೋಯಿತು. ಆಗ ಈ ವಿಶೇಷ ಪಯನೀಯರರನ್ನು ಮತ್ತೊಂದು ಕ್ಷೇತ್ರಕ್ಕೆ ನೇಮಿಸಲಾಯಿತು.

1991ರಲ್ಲಿ ಇನ್ನಿಬ್ಬರು ವಿಶೇಷ ಪಯನೀಯರರು ಮೀಯಲೀ ಕ್ಷೇತ್ರಕ್ಕೆ ನೇಮಿಸಲ್ಪಟ್ಟರು. ಆದರೆ ಪುನಃ ಹವಾಮಾನವು ಆತ್ಮಿಕ ಬೆಳವಣಿಗೆಗೆ ತಕ್ಕದ್ದಾಗಿಲ್ಲವೆಂಬ ಸೂಚನೆಯು ಸಿಕ್ಕಿತು. ಆದುದರಿಂದ ಕೆಲವು ವರ್ಷಗಳು ಕಳೆದ ನಂತರ, ಹೆಚ್ಚು ಫಲದಾಯಕ ಕ್ಷೇತ್ರಗಳೆಂದು ನೆನಸಲಾದ ಸ್ಥಳಗಳಿಗೆ ಈ ವಿಶೇಷ ಪಯನೀಯರರು ನೇಮಿಸಲ್ಪಟ್ಟರು. ಹೀಗೆ, ಆ ಕ್ಷೇತ್ರವನ್ನು ಸ್ವಲ್ಪ ಸಮಯದ ತನಕ ಪಾಳುಬಿಡಲಾಯಿತು.

ಪುನರಾರಂಭಿಸಲ್ಪಟ್ಟ ಪ್ರಯತ್ನಗಳಿಗೆ ಯಶಸ್ಸು ಸಿಗುತ್ತದೆ

1998ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ತೈವಾನಿನಲ್ಲಿ ಸುವಾರ್ತೆಯನ್ನು ಸಾರಿರದ ವಿಶಾಲವಾದ ಟೆರಿಟೊರಿಯಲ್ಲಿ ಹೆಚ್ಚು ಫಲದಾಯಕವಾದ ಕ್ಷೇತ್ರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಂತೆ ನಿರ್ಧರಿಸಲಾಯಿತು. ಆದರೆ ಇದನ್ನು ಹೇಗೆ ಕಂಡುಕೊಳ್ಳಸಾಧ್ಯವಿತ್ತು? ಈ ಹಿಂದೆ ಸಾರಿರದ ಜನನಿಬಿಡದ ಟೆರಿಟೊರಿಗಳಲ್ಲಿ ಕೆಲಸಮಾಡಲು ಸುಮಾರು 40 ತಾತ್ಕಾಲಿಕ ವಿಶೇಷ ಪಯನೀಯರುಗಳನ್ನು ನೇಮಿಸಲಾಯಿತು.

ಮೀಯಲೀ ಕ್ಷೇತ್ರದಲ್ಲಿರುವ ಎರಡು ಅಕ್ಕಪಕ್ಕದ ನಗರಗಳು ಸಹ ಇದರಲ್ಲಿ ಒಳಗೂಡಿದ್ದವು. ಆ ಟೆರಿಟೊರಿಯು ಫಲದಾಯಕವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡಲು ಸುಮಾರು ಮೂರು ತಿಂಗಳುಗಳ ಕಾಲ ನಾಲ್ಕು ಅವಿವಾಹಿತ ಸಹೋದರಿಯರು ಅಲ್ಲಿ ಕೆಲಸಮಾಡಬೇಕಾಗಿತ್ತು. ಆ ಟೆರಿಟೊರಿಯಲ್ಲಿ ಕೆಲಸವನ್ನು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲೇ, ತಾವು ಅನೇಕ ಆಸಕ್ತ ಜನರನ್ನು ಕಂಡುಕೊಂಡೆವು ಎಂಬ ವರದಿಗಳನ್ನು ಅವರು ಬರೆದು ಕಳುಹಿಸಿದರು. ಆ ಸ್ಥಳದಲ್ಲಿ ಮೂರು ತಿಂಗಳುಗಳ ಪಯನೀಯರ್‌ ಸೇವೆಯನ್ನು ಮಾಡಿಮುಗಿಸುವಷ್ಟರಲ್ಲಿ, ಅವರು ಹಲವಾರು ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದರು. ಹತ್ತಿರದ ಸಭೆಯಿಂದ ಒಬ್ಬ ಹಿರಿಯನು ಅಲ್ಲಿ ಒಂದು ಪುಸ್ತಕ ಅಭ್ಯಾಸದ ಗುಂಪನ್ನು ಸಹ ನಡೆಸುವಂತೆ ಏರ್ಪಾಡು ಮಾಡಲಾಯಿತು.

ಬಹಳ ಚೆನ್ನಾಗಿ ಬೆಳೆಯುತ್ತಿದ್ದ ಈ ಎಳೆಯ “ಗಿಡಗಳನ್ನು” ನೋಡಿಕೊಳ್ಳುವುದನ್ನು ಮುಂದುವರಿಸಲು ತಾವು ಇಷ್ಟಪಡುತ್ತೇವೆಂದು ಅವರಲ್ಲಿ ಮೂವರು ಸಹೋದರಿಯರು ಹೇಳಿದರು. ಇದಕ್ಕೆ ಉತ್ತರವಾಗಿ, ಅವರಲ್ಲಿ ಇಬ್ಬರು ಅಲ್ಲಿ ವಿಶೇಷ ಪಯನೀಯರರಾಗಿ ನೇಮಿಸಲ್ಪಟ್ಟರು ಮತ್ತು ಮೂರನೆಯ ಸಹೋದರಿ ಅಲ್ಲಿ ಒಬ್ಬ ರೆಗ್ಯುಲರ್‌ ಪಯನೀಯರ್‌ ಆಗಿ ಕೆಲಸಮಾಡುವಂತೆ ನೇಮಿಸಲ್ಪಟ್ಟರು. ಹತ್ತಿರದ ಸಭೆಯಲ್ಲಿದ್ದ ಹಿರಿಯನೊಬ್ಬನು ಅವರಿಗೆ ಸಹಾಯಮಾಡಲು ಅಲ್ಲಿಗೆ ಸ್ಥಳಾಂತರಿಸಿದನು. ಆ ಕ್ಷೇತ್ರದಲ್ಲಿ ನೀಡಲ್ಪಟ್ಟ ಮೊದಲನೇ ಬಹಿರಂಗ ಭಾಷಣಕ್ಕೆ ಸುಮಾರು 60ಕ್ಕಿಂತಲೂ ಹೆಚ್ಚು ಜನರು ಹಾಜರಾದರು. ಹೊಸದಾಗಿ ಆರಂಭವಾಗಿರುವ ಈ ಗುಂಪು, ಹಲವಾರು ಪುಸ್ತಕ ಅಭ್ಯಾಸಗಳ ಜೊತೆಗೆ ಕ್ರಮವಾಗಿ ಭಾನುವಾರದ ಕೂಟಗಳನ್ನು ನಡೆಸುವಂತೆ ಹತ್ತಿರದಲ್ಲಿರುವ ಒಂದು ಸಭೆಯು ಈಗ ಸಹಾಯಮಾಡುತ್ತಿದೆ. ಬೇಗನೆ ಈ ಕ್ಷೇತ್ರದಲ್ಲಿ ಒಂದು ಹೊಸ ಸಭೆಯು ಸ್ಥಾಪನೆಯಾಗುವ ನಿರೀಕ್ಷೆಯಿದೆ.

ಪಟ್ಟುಹಿಡಿಯುವಿಕೆಯು ತೈವಾನಿನ ಇತರ ಭಾಗಗಳಲ್ಲಿ ಆಶೀರ್ವಾದಗಳನ್ನು ತರುತ್ತದೆ

ಇತರ ಕ್ಷೇತ್ರಗಳಲ್ಲಿ ಸಹ ಇದೇ ರೀತಿಯ ಪ್ರತಿಕ್ರಿಯೆಗಳು ಸಿಕ್ಕಿದವು. ದ್ವೀಪದ ಈಶಾನ್ಯ ದಿಕ್ಕಿಗಿರುವ ಈಲಾನ್‌ ಕ್ಷೇತ್ರದಲ್ಲಿ, ಒಂದು ಹೊಸ ಸಭಾ ಪುಸ್ತಕ ಅಭ್ಯಾಸವು ಪ್ರಾರಂಭಿಸಲ್ಪಟ್ಟಿತು. ಇಲ್ಲಿ ಈ ಮೊದಲು ತಾತ್ಕಾಲಿಕ ವಿಶೇಷ ಪಯನೀಯರರು ಸಾರುವ ಕೆಲಸವನ್ನು ಮಾಡಿದ್ದರು.

ಒಂದು ದಿನ ಸಾಯಂಕಾಲ, ಒಬ್ಬ ತಾತ್ಕಾಲಿಕ ವಿಶೇಷ ಪಯನೀಯರಳು ಮನೆಯಿಂದ ಮನೆಗೆ ಭೇಟಿಮಾಡುತ್ತಿದ್ದಳು, ಆಗ ಅವಳು ಒಬ್ಬ ಪುರುಷನನ್ನು ಸಂಧಿಸಿ, ಸಭೆಯ ಕೂಟಗಳ ಕುರಿತಾದ ಒಂದು ಕರಪತ್ರವನ್ನು ಅವನಿಗೆ ತೋರಿಸಿದಳು. ಅವನು ತಕ್ಷಣವೇ, “ನಾಳೆ ರಾತ್ರಿ ನಾನು ಕೂಟಕ್ಕೆ ಹಾಜರಾಗಬಹುದೋ? ನಾನು ಅಲ್ಲಿಗೆ ಬರಬಹುದೆಂದರೆ, ಯಾವ ರೀತಿಯ ಬಟ್ಟೆಯನ್ನು ನಾನು ಧರಿಸಿಕೊಂಡು ಬರಬೇಕು?” ಎಂದು ಕೇಳಿದನು. ಪ್ರತಿ ವಾರ ಈ ಪಯನೀಯರಳು ಆಸಕ್ತ ಜನರೊಟ್ಟಿಗೆ ಸುಮಾರು ಎಂಟು ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದಳು. ಈ ಬೈಬಲ್‌ ವಿದ್ಯಾರ್ಥಿಗಳಲ್ಲಿ ಅನೇಕರು ದೀಕ್ಷಾಸ್ನಾನವಾಗುವ ಗುರಿಯೊಂದಿಗೆ, ಸುವಾರ್ತೆಯ ಪ್ರಚಾರಕರಾಗಲು ನಿರ್ಧರಿಸಿದರು.

ಅದೇ ಪಟ್ಟಣದಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಮಹಿಳೆಯು ಅನೇಕ ವರ್ಷಗಳಿಂದ ಚರ್ಚಿಗೆ ಹೋಗುತ್ತಿದ್ದಳು. ಆದರೆ ಅಲ್ಲಿ ಅವಳಿಗೆ ಬೈಬಲಿನ ಬಗ್ಗೆ ಕಲಿಸಿಕೊಡುವವರು ಯಾರೂ ಸಿಗಲಿಲ್ಲ. ಆದುದರಿಂದ ಬೈಬಲ್‌ ಅಧ್ಯಯನದ ಏರ್ಪಾಡಿನ ಕುರಿತಾಗಿ ಅವಳು ತಿಳಿದುಕೊಂಡ ಬಳಿಕ, ಅವಳು ಆ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡಲಿಲ್ಲ. ಅವಳು ಅದಕ್ಕೆ ಒಪ್ಪಿಕೊಂಡಳು ಮತ್ತು ಪಾಠವನ್ನು ಮೊದಲೇ ತಯಾರಿಮಾಡುವಂತೆ ಅವಳಿಗೆ ಉತ್ತೇಜನವು ನೀಡಲ್ಪಟ್ಟಿತು. ಆ ತಾತ್ಕಾಲಿಕ ವಿಶೇಷ ಪಯನೀಯರಳು ಅಭ್ಯಾಸವನ್ನು ನಡೆಸಲು ಬಂದಾಗ, ಆ ಮಹಿಳೆಯು ತನ್ನ “ಹೋಮ್‌ವರ್ಕ್‌” ಅನ್ನು ಮಾಡಿಮುಗಿಸಿದ್ದಳು. ಅಂದರೆ, ಆ ಮಹಿಳೆಯು ಒಂದು ನೋಟ್‌ ಪುಸ್ತಕವನ್ನು ಖರೀದಿಸಿ, ಅಭ್ಯಾಸಮಾಡಲಿದ್ದ ಪಾಠಗಳ ಮುದ್ರಿತ ಪ್ರಶ್ನೆಗಳನ್ನೆಲ್ಲ ಬರೆಯುವುದರ ಜೊತೆಗೆ ಪ್ರತಿ ಪ್ರಶ್ನೆಗೆ ತನ್ನ ಉತ್ತರಗಳನ್ನು ಸಹ ಬರೆದಿದ್ದಳು. ತಾನು ಅಭ್ಯಾಸಮಾಡಲಿದ್ದ ಪಾಠದಲ್ಲಿರುವ ಎಲ್ಲ ಉಲ್ಲೇಖಿತ ಶಾಸ್ತ್ರವಚನಗಳನ್ನು ಸಹ ಅದರಲ್ಲಿ ಬರೆದಿದ್ದಳು. ಸಹೋದರಿಯು ಅವಳೊಂದಿಗೆ ಮೊದಲ ಅಭ್ಯಾಸವನ್ನು ನಡೆಸುವುದಕ್ಕೆ ಮುಂಚೆಯೇ, ಈ ಮಹಿಳೆಯು ಅಭ್ಯಾಸದ ಮೊದಲ ಮೂರು ಪಾಠಗಳನ್ನು ತಯಾರಿಮಾಡಿಬಿಟ್ಟಿದ್ದಳು!

ಸೆಂಟ್ರಲ್‌ ತೈವಾನಿನಲ್ಲಿರುವ ಡಾಂಗ್‌ಶಿ ಪಟ್ಟಣದಲ್ಲಿಯೂ ಇದೇ ರೀತಿಯ ಪ್ರತಿಕ್ರಿಯೆಯು ಸಿಕ್ಕಿತು. ಅಲ್ಲಿ ಸಾರುವ ಕೆಲಸವನ್ನು ಮಾಡಿದ ಮೂರು ತಿಂಗಳುಗಳಲ್ಲಿ ಈ ತಾತ್ಕಾಲಿಕ ವಿಶೇಷ ಪಯನೀಯರರು ಸುಮಾರು 2,000ಕ್ಕಿಂತಲೂ ಹೆಚ್ಚಿನ ಬ್ರೋಷರುಗಳನ್ನು ನೀಡಿದ್ದರು. ಮೂರು ತಿಂಗಳುಗಳು ಮುಗಿಯುವುದರೊಳಗೆ, ಅವರು ಅಲ್ಲಿ ಸುಮಾರು 16 ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದರು. 1999ರ ಸೆಪ್ಟೆಂಬರ್‌ 21ರಂದು ಸೆಂಟ್ರಲ್‌ ತೈವಾನಿನಲ್ಲಿ ಭೂಕಂಪವು ಸಂಭವಿಸಿತಾದ್ದರಿಂದ, ಆ ಪಟ್ಟಣವು ಬಹಳಷ್ಟು ಹಾನಿಗೊಳಗಾಯಿತು. ಆದರೂ ಕೆಲವು ಆಸಕ್ತ ಜನರು ಈಗಲೂ ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದಾರೆ. ಅವರು ಅತಿ ಸಮೀಪದ ರಾಜ್ಯ ಸಭಾಗೃಹಕ್ಕೆ ಕೂಟಗಳನ್ನು ಹಾಜರಾಗಲು ಸುಮಾರು ಒಂದು ತಾಸಿನಷ್ಟು ಸಮಯವನ್ನು ಪ್ರಯಾಣದಲ್ಲೇ ಕಳೆಯಬೇಕಾಗಿರುತ್ತದೆ. ಆದರೂ ಸಹ ಅವರು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದಾರೆ. ಹೌದು, ಭೌತಿಕ ಉತ್ಪನ್ನವಾಗಿರಲಿ, ಆತ್ಮಿಕ ರೀತಿಯ ಉತ್ಪನ್ನವಾಗಿರಲಿ ಒಳ್ಳೆಯ ಬೆಳೆಯನ್ನು ಕೊಯ್ಯಬೇಕಾದರೆ ಪಟ್ಟುಹಿಡಿಯಬೇಕು.

[ಪುಟ 8ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಚೀನ

ತೈವಾನಿನ ಜಲಸಂಧಿ

ತೈವಾನ್‌

[ಕೃಪೆ]

Mountain High Maps® Copyright © 1997 Digital Wisdom, Inc.