ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವ್ಯಾಪಕ ಶಾಂತಿ ಸಾಧ್ಯವೇ?

ಲೋಕವ್ಯಾಪಕ ಶಾಂತಿ ಸಾಧ್ಯವೇ?

ಲೋಕವ್ಯಾಪಕ ಶಾಂತಿ ಸಾಧ್ಯವೇ?

ಲೋಕವ್ಯಾಪಕ ಶಾಂತಿಯು ಹತ್ತಿರವಾಗಿದೆಯೊ? ಹತ್ತಿರವಾಗಿದೆ ಎಂದು ಈ ಮುಂಚೆ ಅನೇಕರು ನೆನಸಿದ್ದರು. ಆದರೆ ಈಗ ಅವರಿಗೆ ಇದರ ಬಗ್ಗೆ ಸಂದೇಹವಿದೆ. ನಮ್ಮ ಭವಿಷ್ಯತ್ತಿನ ಪಂಥಾಹ್ವಾನಗಳ ಬಗ್ಗೆ ನಡೆದಂತಹ ಚರ್ಚೆಯ ಕುರಿತಾದ ಒಂದು ವರದಿಯು, ದಕ್ಷಿಣ ಆಫ್ರಿಕದ ಡೈಲಿ ಮೆಯ್‌ಲ್‌ ಆ್ಯಂಡ್‌ ಗಾರ್ಡಿಯನ್‌ನಲ್ಲಿ ಪ್ರಕಾಶಿಸಲ್ಪಟ್ಟಿತು. ಆ ವರದಿಗನುಸಾರ, “ಒಂದು ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಯು ಬರಲಿಕ್ಕಿದೆ ಎಂದು 10 ವರ್ಷಗಳ ಹಿಂದೆ ಮುಂತಿಳಿಸಲಾಗಿತ್ತು. ಆದರೆ ಈಗ ಆ ಭವಿಷ್ಯನುಡಿಯು ಆಶಾರಹಿತವಾದದ್ದಾಗಿ ತೋರುತ್ತದೆ.”

ಕೆಲವು ದಶಕಗಳ ಹಿಂದೆ ಪ್ರಚಲಿತವಾಗಿದ್ದ ಆಶಾದಾಯಕ ಮನೋಭಾವದ ಕುರಿತು, ಈ ಮೇಲಿನ ವರದಿಯ ಲೇಖಕರು ಪುನರಾಲೋಚಿಸುತ್ತಾರೆ. ರಾಷ್ಟ್ರಗಳ ನಡುವಣ ಶೀತಲ ಸಮರವು ಆಗಷ್ಟೇ ಕೊನೆಗೊಂಡಿತ್ತು ಮತ್ತು ಅತ್ಯಂತ ಪ್ರಬಲ ರಾಷ್ಟ್ರಗಳ ಹೋರಾಟವು ಸಹ ನಿಂತುಹೋಗಿತ್ತು. ಇದರಿಂದಾಗಿ, ಇನ್ನೇನು ಒಂದು ಹೊಸ ಶಕವು ಆರಂಭವಾಗಲಿದೆಯೋ ಎಂಬಂತೆ ತೋರಿತು. ಬಡತನ, ಅನಾರೋಗ್ಯ ಹಾಗೂ ಪರಿಸರ ಸಂಬಂಧಿತ ವಿವಾದಗಳನ್ನು ನಿಭಾಯಿಸುವುದರಲ್ಲಿ ಮಾನವಕುಲವು ಗಮನಾರ್ಹವಾದ ರೀತಿಯಲ್ಲಿ ಪ್ರಗತಿಯನ್ನು ಮಾಡಲು ಆರಂಭಿಸುವುದೆಂದು ಅನೇಕರು ನಿರೀಕ್ಷಿಸಿದರು. ಅದೇ ವರದಿಯು ಹೇಳುವುದೇನೆಂದರೆ, “ಆ ಮುನ್‌ಸೂಚನೆಗಳು ಈಗ ಸಂಪೂರ್ಣವಾಗಿ ಅಸಾಧ್ಯಾದರ್ಶದಂತೆ ಕಂಡುಬರುತ್ತಿವೆ. ಇಷ್ಟರ ತನಕ ಹೋರಾಟದ ಸುಳಿವೇ ಇಲ್ಲದಿದ್ದಂತಹ ಕ್ಷೇತ್ರಗಳಲ್ಲಿ ಈಗ ಹೋರಾಟಗಳು ತಲೆದೋರುತ್ತಿವೆ; ಲೋಕವ್ಯಾಪಕವಾಗಿ ಬಡತನವು ಇನ್ನಷ್ಟು ಅಧಿಕಗೊಳ್ಳುತ್ತಿದೆ. ಇನ್ನೂ ಎರಡು ಹೊಸ ಪರಮಾಣು ಶಕ್ತಿಗಳು ಅಸ್ತಿತ್ವಕ್ಕೆ ಬಂದಿವೆ. ವಿಶ್ವಸಂಸ್ಥೆಯ ಹೆಸರು ಹಾಳಾಗುತ್ತಿದೆ, ಏಕೆಂದರೆ ಒಂದರ ನಂತರ ಇನ್ನೊಂದರಂತೆ ಸಂಭವಿಸುತ್ತಿರುವ ಬಿಕ್ಕಟ್ಟುಗಳಿಗೆ, ಲೋಕಹಿತದ ದೃಷ್ಟಿಯಿಂದಲೂ ಅದು ಯಾವುದೇ ಪ್ರತ್ಯುತ್ತರವನ್ನು ಕೊಡುತ್ತಿಲ್ಲ. ಈಗಿನ ಸ್ಥಿತಿಯು ಅಸಾಧ್ಯಾದರ್ಶದಿಂದ ಹದಗೆಟ್ಟ ಸ್ಥಿತಿಗೆ ಬದಲಾಗುತ್ತಿದೆ.”

ಆದರೆ, ಮನುಷ್ಯನ ಪ್ರಯತ್ನಗಳು ಎಷ್ಟೇ ಪ್ರಶಂಸಾರ್ಹವಾಗಿರುವುದಾದರೂ, ಅವುಗಳು ಎಂದೂ ಸಫಲವಾಗಲಾರವು ಎಂಬುದನ್ನು ಬೈಬಲ್‌ ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದಾರೆ. ಏಕೆ? ಏಕೆಂದರೆ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 5:19) ಸೈತಾನನ ನಿಯಂತ್ರಣದ ಕೆಳಗಿರುವಾಗ, ದೇವರು ಸೃಷ್ಟಿಸಿರುವ ಈ ಲೋಕವನ್ನು ಪ್ರಮೋದವನದಂತಹ ಸ್ಥಿತಿಗೆ ತರಲು ಸಾಧ್ಯವೇ ಇಲ್ಲ.

ಆದರೆ ಅದೇ ಸಮಯದಲ್ಲಿ, ನಮ್ಮ ಆಶಾವಾದಕ್ಕೆ ಆಧಾರವಿದೆ. ಲೋಕವ್ಯಾಪಕ ಶಾಂತಿಯನ್ನು ತರುವ ವಾಗ್ದಾನವನ್ನು ಯೆಹೋವ ದೇವರು ಮಾಡಿದ್ದಾನೆ. ಆದರೆ ಈ ವಿಷಯಗಳ ವ್ಯವಸ್ಥೆಗೆ ತೇಪೆಹಚ್ಚುವ ಮೂಲಕ ಅಲ್ಲ, ಬದಲಾಗಿ ಆತನು ಒಂದು “ನೂತನಭೂಮಂಡಲವನ್ನು” ಉಂಟುಮಾಡುವ ಮೂಲಕವೇ. ಮತ್ತು ಅದರಲ್ಲಿ “ನೀತಿಯು ವಾಸವಾಗಿರುವದು.” (2 ಪೇತ್ರ 3:13) ಹೌದು, ದೇವರ ರಾಜ್ಯದ ಮೂಲಕ, ನಮ್ಮ ಭೂಮಿಯು ಶಾಂತಿಭರಿತ ಹಾಗೂ ಸಂತೋಷಮಯ ಭೂಗೃಹವಾಗಿ ರೂಪಾಂತರಿಸಲ್ಪಡುವುದು. ಆ ಸಮಯದಲ್ಲಿ ಎಲ್ಲ ವಿಧೇಯ ಮಾನವಕುಲವು ಜೀವಿಸುವುದರಲ್ಲಿ ಹಾಗೂ ಕೆಲಸಮಾಡುವುದರಲ್ಲಿ ಸತತವಾದ ಆನಂದವನ್ನು ಕಂಡುಕೊಳ್ಳುವುದು. ಅಷ್ಟುಮಾತ್ರವಲ್ಲ, “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂಬ ಆಶ್ವಾಸನೆಯನ್ನೂ ದೇವರು ನೀಡುತ್ತಾನೆ. ಈ ವಾಗ್ದಾನಗಳು, ಮನುಷ್ಯರು ಮುನ್ನುಡಿಯುವ ನಂಬಲಸಾಧ್ಯವಾದ ಭವಿಷ್ಯನುಡಿಗಳ ಮೇಲಾಧಾರಿತವಾದವುಗಳಲ್ಲ. ಬದಲಾಗಿ, ಅವು ಸುಳ್ಳಾಡಸಾಧ್ಯವಿಲ್ಲದಂತಹ ಸೃಷ್ಟಿಕರ್ತನ ನಿಶ್ಚಿತ ಮಾತುಗಳ ಮೇಲಾಧಾರಿತವಾದವುಗಳಾಗಿವೆ.​—⁠ಪ್ರಕಟನೆ 21:4; ತೀತ 1:⁠2.