ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆಳಕನ್ನು ಆಯ್ಕೆಮಾಡುವವರಿಗಾಗಿ ರಕ್ಷಣೆ

ಬೆಳಕನ್ನು ಆಯ್ಕೆಮಾಡುವವರಿಗಾಗಿ ರಕ್ಷಣೆ

ಬೆಳಕನ್ನು ಆಯ್ಕೆಮಾಡುವವರಿಗಾಗಿ ರಕ್ಷಣೆ

“ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು?”​—ಕೀರ್ತನೆ 27:1.

1. ಯೆಹೋವನು ಜೀವದಾಯಕವಾದ ಯಾವ ಏರ್ಪಾಡುಗಳನ್ನು ಮಾಡುತ್ತಾನೆ?

ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೆ ಸೂರ್ಯನ ಬೆಳಕು ಬೇಕೇಬೇಕು. ಮತ್ತು ಈ ಸೂರ್ಯನ ಬೆಳಕಿನ ಮೂಲನು ಯೆಹೋವನಾಗಿದ್ದಾನೆ. (ಆದಿಕಾಂಡ 1:​2, 14) ಆತನು, ಆತ್ಮಿಕ ಬೆಳಕಿನ ಉಗಮನೂ ಆಗಿದ್ದಾನೆ. ಈ ಬೆಳಕಾದರೊ, ಸೈತಾನನ ಲೋಕದಲ್ಲಿನ ಮರಣಕಾರಕ ಕತ್ತಲನ್ನು ಹೊಡೆದೋಡಿಸುತ್ತದೆ. (ಯೆಶಾಯ 60:2; 2 ಕೊರಿಂಥ 4:6; ಎಫೆಸ 5:​8-11; 6:12) ಕತ್ತಲಿನ ಬದಲು ಬೆಳಕನ್ನು ಆರಿಸಿಕೊಳ್ಳುವವರು ಕೀರ್ತನೆಗಾರನೊಂದಿಗೆ ಹೀಗನ್ನಬಹುದು: “ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು?” (ಕೀರ್ತನೆ 27:1ಎ) ಆದರೆ ಯೇಸುವಿನ ಸಮಯದಲ್ಲಿದ್ದ ಜನರಂತೆ ಕತ್ತಲನ್ನು ಇಷ್ಟಪಡುವವರು, ಪ್ರತಿಕೂಲವಾದ ನ್ಯಾಯತೀರ್ಪನ್ನು ನಿರೀಕ್ಷಿಸಸಾಧ್ಯವಿದೆ.​—ಯೋಹಾನ 1:​9-11; 3:​19-21, 36.

2. ಪ್ರಾಚೀನ ಸಮಯಗಳಲ್ಲಿ, ಯೆಹೋವನ ಬೆಳಕನ್ನು ತಿರಸ್ಕರಿಸಿದವರಿಗೆ ಏನಾಯಿತು ಮತ್ತು ಆತನ ವಾಕ್ಯಕ್ಕೆ ಕಿವಿಗೊಟ್ಟವರಿಗೆ ಏನಾಯಿತು?

2 ಯೆಶಾಯನ ದಿನಗಳಲ್ಲಿ ಯೆಹೋವನ ಒಡಂಬಡಿಕೆಯ ಜನರಲ್ಲಿ ಹೆಚ್ಚಿನವರು ಬೆಳಕನ್ನು ತಿರಸ್ಕರಿಸಿದರು. ಫಲಸ್ವರೂಪ, ಇಸ್ರಾಯೇಲ್‌ ಎಂಬ ಉತ್ತರ ರಾಜ್ಯವು ಒಂದು ಜನಾಂಗದೋಪಾದಿ ನಾಶವಾಗುವುದನ್ನು ಯೆಶಾಯನು ನೋಡಿದನು. ಮತ್ತು ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ಮತ್ತು ಅದರ ದೇವಾಲಯವೂ ನಾಶವಾಯಿತು, ಮತ್ತು ಯೆಹೂದದ ನಿವಾಸಿಗಳನ್ನು ಸೆರೆಯಾಳುಗಳಾಗಿ ಬೇರೆ ದೇಶಕ್ಕೆ ಕೊಂಡೊಯ್ಯಲಾಯಿತು. ಆದರೆ ಯೆಹೋವನ ವಾಕ್ಯಕ್ಕೆ ಕಿವಿಗೊಟ್ಟವರು, ಆ ದಿನದಲ್ಲಿನ ಧರ್ಮಭ್ರಷ್ಟತೆಯನ್ನು ನಿರೋಧಿಸುವ ಬಲವನ್ನು ಪಡೆದರು. ಸಾ.ಶ.ಪೂ. 607ರ ಸಂಬಂಧದಲ್ಲಿ, ತನಗೆ ಕಿವಿಗೊಡುವವರು ಪಾರಾಗುವರೆಂದು ಯೆಹೋವನು ವಾಗ್ದಾನಿಸಿದ್ದನು. (ಯೆರೆಮೀಯ 21:​8, 9) ಇಂದು ಬೆಳಕನ್ನು ಪ್ರೀತಿಸುವವರಾದ ನಾವು, ಹಿಂದೆ ಆ ಸಮಯದಲ್ಲಿ ನಡೆದಂಥ ಸಂಗತಿಗಳಿಂದ ಎಷ್ಟೋ ವಿಷಯಗಳನ್ನು ಕಲಿಯಬಲ್ಲೆವು.​—ಎಫೆಸ 5:5.

ಬೆಳಕಿನಲ್ಲಿರುವವರ ಸಂತೋಷ

3. ಇಂದು ನಮಗೆ ಯಾವ ಭರವಸೆಯಿರಸಾಧ್ಯವಿದೆ, ನಾವು ಯಾವ ‘ಧರ್ಮಸತ್ಯಗಳ ಜನಾಂಗವನ್ನು’ ಪ್ರೀತಿಸುತ್ತೇವೆ, ಮತ್ತು ಆ ಜನಾಂಗಕ್ಕೆ ಯಾವ ‘ಬಲವಾದ ಪಟ್ಟಣ’ ಇದೆ?

3 “ನಮಗೆ ಬಲವಾದ ಪಟ್ಟಣವಿದೆ. [ಯೆಹೋವನು ತನ್ನ] ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ. ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗವು ಪ್ರವೇಶಿಸಲಿ!” (ಯೆಶಾಯ 26:1, 2) ಯೆಹೋವನಲ್ಲಿ ಭರವಸೆಯನ್ನಿಟ್ಟಿರುವವರ ಹರ್ಷಭರಿತ ಮಾತುಗಳು ಇವಾಗಿವೆ. ಯೆಶಾಯನ ದಿನದಲ್ಲಿದ್ದ ನಂಬಿಗಸ್ತ ಯೆಹೂದ್ಯರು ಸುರಕ್ಷೆಯ ಒಂದೇ ನಿಜವಾದ ಮೂಲನೋಪಾದಿ, ತಮ್ಮ ಜೊತೆ ನಾಡಿನವರ ಸುಳ್ಳು ದೇವತೆಗಳ ಕಡೆಗಲ್ಲ, ಬದಲಾಗಿ ಯೆಹೋವನ ಕಡೆಗೆ ನೋಡಿದರು. ಇಂದು ನಮಗೆ ಇದೇ ಭರವಸೆಯಿದೆ. ಅಷ್ಟುಮಾತ್ರವಲ್ಲ, ನಾವು ಯೆಹೋವನ “ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗ,” ಅಂದರೆ ‘ದೇವರ ಇಸ್ರಾಯೇಲನ್ನು’ ಪ್ರೀತಿಸುತ್ತೇವೆ. (ಗಲಾತ್ಯ 6:16; ಮತ್ತಾಯ 21:43) ಯೆಹೋವನು ಕೂಡ ಈ ಜನಾಂಗವನ್ನು ಪ್ರೀತಿಸುತ್ತಾನೆ. ಯಾಕೆಂದರೆ ಅದು ನಂಬಿಗಸ್ತಿಕೆಯಿಂದ ನಡೆದುಕೊಳ್ಳುತ್ತದೆ. ಆತನ ಆಶೀರ್ವಾದದೊಂದಿಗೆ ದೇವರ ಇಸ್ರಾಯೇಲಿಗೆ ‘ಒಂದು ಬಲವಾದ ಪಟ್ಟಣವಿದೆ,’ ಅಂದರೆ ಅದನ್ನು ಬೆಂಬಲಿಸಿ ಸಂರಕ್ಷಿಸುವ ಒಂದು ಪಟ್ಟಣಸದೃಶ ಸಂಸ್ಥೆಯಿದೆ.

4. ನಾವು ಯಾವ ಮನೋಭಾವವನ್ನು ವಿಕಸಿಸಿಕೊಳ್ಳುವುದು ಒಳ್ಳೆಯದು?

4 “ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ [ಯೆಹೋವನಲ್ಲಿ] ಭರವಸವಿದೆ” ಎಂಬ ಸಂಗತಿಯು ಈ “ಪಟ್ಟಣ”ದೊಳಗೆ ಇರುವವರಿಗೆ ಚೆನ್ನಾಗಿ ತಿಳಿದಿದೆ. ಯೆಹೋವನ ಮೇಲೆ ಭರವಸೆಯಿಡುವ ಹಾಗೂ ಆತನ ನೀತಿಯ ತತ್ವಗಳಿಗೆ ಅನುಸಾರವಾಗಿ ನಡೆಯಬೇಕು ಎಂಬ ಮನೋಚಿತ್ತವುಳ್ಳವರನ್ನು ಯೆಹೋವನು ನೆಲೆಗೊಳಿಸುತ್ತಾನೆ. ಹೀಗಿರುವುದರಿಂದ ಯೆಹೂದದಲ್ಲಿದ್ದ ನಂಬಿಗಸ್ತ ಜನರು ಯೆಶಾಯನ ಈ ಬುದ್ಧಿವಾದಕ್ಕೆ ಕಿವಿಗೊಟ್ಟರು: “ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.” (ಯೆಶಾಯ 26:​3, 4; ಕೀರ್ತನೆ 9:10; 37:3; ಜ್ಞಾನೋಕ್ತಿ 3:5) ಆ ಮನೋಭಾವವುಳ್ಳವರು, ‘ಯಾಹುಯೆಹೋವನೇ’ ಏಕಮಾತ್ರ ಸುರಕ್ಷೆಯ ಬಂಡೆಯಾಗಿರುವವನೋಪಾದಿ ಆತನೆಡೆಗೆ ನೋಡುತ್ತಾರೆ. ಅವರು ಆತನೊಂದಿಗೆ ಸದಾ ‘ಶಾಂತಿಯಿಂದಿರುತ್ತಾರೆ.’​—ಫಿಲಿಪ್ಪಿ 1:2; 4:​6, 7.

ದೇವರ ಶತ್ರುಗಳಿಗೆ ಅವಮಾನ

5, 6. (ಎ) ಪ್ರಾಚೀನ ಬಾಬೆಲಿನ ಅವಮಾನವಾದದ್ದು ಹೇಗೆ? (ಬಿ) “ಮಹಾ ಬಾಬೆಲ್‌” ಹೇಗೆ ಅವಮಾನಕ್ಕೊಳಗಾಯಿತು?

5 ಯೆಹೋವನಲ್ಲಿ ಭರವಸೆಯಿಡುವವರು ಸಂಕಷ್ಟವನ್ನು ಅನುಭವಿಸುವುದಾದರೆ ಆಗೇನು? ಅವರು ಭಯಪಡಬೇಕಾಗಿಲ್ಲ. ಯೆಹೋವನು ಅದನ್ನು ಸ್ವಲ್ಪ ಸಮಯಕ್ಕಾಗಿ ಅನುಮತಿಸುತ್ತಾನೆ ನಿಜ. ಆದರೆ ಕಟ್ಟಕಡೆಗೆ ಅವನು ಪರಿಹಾರವನ್ನು ತರುತ್ತಾನೆ, ಮತ್ತು ಅಂತಹ ಸಂಕಷ್ಟವನ್ನು ಉಂಟುಮಾಡುವವರು ಆತನ ನ್ಯಾಯತೀರ್ಪನ್ನು ಎದುರಿಸಲೇಬೇಕು. (2 ಥೆಸಲೊನೀಕ 1:​4-7; 2 ತಿಮೊಥೆಯ 1:​8-10) ಒಂದು ನಿರ್ದಿಷ್ಟ “ಉನ್ನತ ಪಟ್ಟಣ”ದ ಉದಾಹರಣೆಯನ್ನು ಪರಿಗಣಿಸಿರಿ. ಯೆಶಾಯನು ಹೇಳುವುದು: “ಆತನು ಎತ್ತರದಲ್ಲಿ ವಾಸಿಸುವವರನ್ನೂ [ಅವರ] ಉನ್ನತ ಪಟ್ಟಣವನ್ನೂ ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ. ಅದು ಕಾಲತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದುಬಿಡುತ್ತಾರೆ.” (ಯೆಶಾಯ 26:5, 6) ಇಲ್ಲಿ ತಿಳಿಸಲ್ಪಟ್ಟಿರುವ ಉನ್ನತ ಪಟ್ಟಣವು ಬಾಬೆಲ್‌ ಆಗಿರಬಹುದು. ಆ ಪಟ್ಟಣವು, ದೇವರ ಜನರಿಗೆ ತುಂಬ ಕಷ್ಟವನ್ನು ಕೊಡುತ್ತಿತ್ತು. ಆದರೆ ಅದಕ್ಕೇನಾಯಿತು? ಸಾ.ಶ.ಪೂ. 539ರಲ್ಲಿ ಅದು ಮೇದ್ಯಪಾರಸಿಯರ ಕೈವಶವಾಯಿತು. ಎಂಥ ಕೀಳುದೆಸೆ!

6 ನಮ್ಮ ದಿನದಲ್ಲಿ ಇಸವಿ 1919ರಂದಿನಿಂದ “ಮಹಾ ಬಾಬೆಲಿಗೆ” ಏನು ಸಂಭವಿಸಿದೆ ಎಂಬುದನ್ನು ಯೆಶಾಯನ ಪ್ರವಾದನಾತ್ಮಕ ಮಾತುಗಳು ಚೆನ್ನಾಗಿ ವರ್ಣಿಸುತ್ತವೆ. ಆ ವರ್ಷ ಅದು ಯೆಹೋವನ ಜನರನ್ನು ಆತ್ಮಿಕ ಬಂಧಿವಾಸದಿಂದ ಬಿಡುಗಡೆಮಾಡುವಂತೆ ಒತ್ತಾಯಿಸಲ್ಪಟ್ಟಾಗ ಆ ಉನ್ನತ ಪಟ್ಟಣವು ಅವಮಾನಕರವಾದ ಪತನಕ್ಕೊಳಗಾಯಿತು. (ಪ್ರಕಟನೆ 14:8) ಮುಂದೆ ನಡೆದಂಥ ಸಂಗತಿಗಳು ಇನ್ನೂ ಹೆಚ್ಚು ಅವಮಾನಕರವಾದದ್ದಾಗಿದೆ. ಕ್ರೈಸ್ತರ ಆ ಚಿಕ್ಕ ಹಿಂಡೇ, ತಮ್ಮ ಮಾಜಿ ಸೆರೆಹಿಡಿದವನನ್ನು ‘ಕೆಡವಿದರು.’ 1922ರಲ್ಲಿ ಅವರು, ಕ್ರೈಸ್ತಪ್ರಪಂಚದ ಬರುತ್ತಿರುವ ಅಂತ್ಯವನ್ನು ಪ್ರಕಟಿಸಲಾರಂಭಿಸಿದರು. ಅವರು ಪ್ರಕಟನೆ 8:​7-12ರಲ್ಲಿರುವ, ಸ್ವರ್ಗದೂತರ ನಾಲ್ಕು ತುತೂರಿ ಧ್ವನಿಗಳನ್ನು ಮತ್ತು ಪ್ರಕಟನೆ 9:​1–11:15ರಲ್ಲಿ ಮುಂತಿಳಿಸಲ್ಪಟ್ಟಿರುವ ಮೂರು ವಿಪತ್ತುಗಳ ಕುರಿತಾಗಿ ಬಹಿರಂಗವಾಗಿ ತಿಳಿಸಿದರು.

“ಶಿಷ್ಟನ ಮಾರ್ಗವು ನೇರವಾಗಿದೆ”

7. ಯೆಹೋವನ ಬೆಳಕಿನ ಕಡೆಗೆ ತಿರುಗುವವರಿಗೆ ಯಾವ ಮಾರ್ಗದರ್ಶನ ಸಿಗುತ್ತದೆ, ಅವರು ಯಾರಲ್ಲಿ ನಿರೀಕ್ಷೆಯಿಡುತ್ತಾರೆ ಮತ್ತು ಏನನ್ನು ಪ್ರೀತಿಸುತ್ತಾರೆ?

7 ತನ್ನ ಬೆಳಕಿನ ಕಡೆಗೆ ತಿರುಗುವವರಿಗೆ ಯೆಹೋವನು ರಕ್ಷಣೆಯನ್ನು ಒದಗಿಸುತ್ತಾನೆ. ಮತ್ತು ಅವರ ದಾರಿಯನ್ನು ಮಾರ್ಗದರ್ಶಿಸುತ್ತಾನೆ. ಇದನ್ನೇ ಯೆಶಾಯನು ಮುಂದೆ ತೋರಿಸುತ್ತಾನೆ: “ನೀನು ಅವನ ದಾರಿಯನ್ನು ಸರಿಪಡಿಸಿ ಸಮಮಾಡುತ್ತೀ. ಹೌದು, ಯೆಹೋವನೇ, ನಿನ್ನ ನ್ಯಾಯಕಾರ್ಯಗಳು ತೋರತಕ್ಕ ಮಾರ್ಗದಲ್ಲಿ ನಿನ್ನನ್ನು ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಕೇವಲ ಇಷ್ಟವಾಗಿದೆ.” (ಯೆಶಾಯ 26:7, 8) ಯೆಹೋವನು ಒಬ್ಬ ನೀತಿಯ ದೇವರಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರು ಸಹ ಆತನ ನೀತಿಯ ಮಟ್ಟಗಳನ್ನು ಪಾಲಿಸಬೇಕು. ಅವರು ಹಾಗೆ ಮಾಡುವಾಗ, ಯೆಹೋವನು ಅವರಿಗೆ ಮಾರ್ಗದರ್ಶನವನ್ನು ಕೊಡುತ್ತಾನೆ ಮತ್ತು ಅವರ ಮಾರ್ಗವನ್ನು ಸುಗಮಗೊಳಿಸುತ್ತಾನೆ. ಆತನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ, ಈ ದೀನ ಜನರು, ತಾವು ಯೆಹೋವನಲ್ಲಿ ನಿರೀಕ್ಷೆಯನ್ನಿಡುತ್ತೇವೆ ಮತ್ತು ಆತನ ಹೆಸರನ್ನು, ಆತನ “ನಾಮ”ವನ್ನು ಮನಪೂರ್ವಕವಾಗಿ ಪ್ರೀತಿಸುತ್ತೇವೆಂಬುದನ್ನು ತೋರಿಸುತ್ತಾರೆ.​—ವಿಮೋಚನಕಾಂಡ 3:15.

8. ಯೆಶಾಯನು ಯಾವ ಆದರ್ಶಪ್ರಾಯ ಮನೋಭಾವವನ್ನು ತೋರಿಸಿದನು?

8 ಯೆಶಾಯನು ಯೆಹೋವನ ಹೆಸರನ್ನು ಪ್ರೀತಿಸಿದನು. ಅವನ ಮುಂದಿನ ಮಾತುಗಳಿಂದ ಇದು ವ್ಯಕ್ತವಾಗುತ್ತದೆ: “ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡಿಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.” (ಯೆಶಾಯ 26:9) ಯೆಶಾಯನು ಯೆಹೋವನನ್ನು “ಮನಃಪೂರ್ವಕವಾಗಿ” ಅಂದರೆ ತನ್ನ ಇಡೀ ಜೀವದೊಂದಿಗೆ ಹಾರೈಸಿದನು. ಈ ಪ್ರವಾದಿಯು ರಾತ್ರಿಯ ಶಾಂತ ಸಮಯಗಳನ್ನು ಯೆಹೋವನಿಗೆ ಪ್ರಾರ್ಥಿಸಲಿಕ್ಕೆ ಉಪಯೋಗಿಸುತ್ತಿದ್ದದ್ದನ್ನು ಸ್ವಲ್ಪ ಚಿತ್ರಿಸಿಕೊಳ್ಳಿ. ಆಗ ಅವನು ತನ್ನ ಮನದಾಳದ ವಿಚಾರಗಳನ್ನು ವ್ಯಕ್ತಪಡಿಸಿ, ಕಟ್ಟಕ್ಕರೆಯಿಂದ ಯೆಹೋವನಿಂದ ಮಾರ್ಗದರ್ಶನವನ್ನು ಕೋರುತ್ತಿದ್ದನು. ಎಂತಹ ಒಂದು ಉತ್ತಮ ಮಾದರಿ! ಅಷ್ಟುಮಾತ್ರವಲ್ಲದೆ, ಯೆಹೋವನ ನ್ಯಾಯತೀರ್ಪಿನ ಕೃತ್ಯಗಳಿಂದಲೂ ನೀತಿಯನ್ನು ಕಲಿತುಕೊಂಡನು. ಇದರ ಮೂಲಕ, ನಾವು ಯೆಹೋವನ ಚಿತ್ತವನ್ನು ಗ್ರಹಿಸಲಿಕ್ಕಾಗಿ ಎಚ್ಚರವಾಗಿದ್ದು, ಸತತವಾಗಿ ಜಾಗರೂಕತೆಯ ಸ್ಥಿತಿಯಲ್ಲಿರುವ ಅಗತ್ಯದ ಕುರಿತಾಗಿ ನಮಗೆ ಜ್ಞಾಪಕಹುಟ್ಟಿಸುತ್ತಾನೆ.

ಕೆಲವರು ಕತ್ತಲನ್ನು ಆರಿಸಿಕೊಂಡರು

9, 10. ತನ್ನ ಅಪನಂಬಿಗಸ್ತ ಜನಾಂಗಕ್ಕೋಸ್ಕರ ಯೆಹೋವನು ಯಾವ ದಯೆಯ ಕೃತ್ಯಗಳನ್ನು ನಡಿಸಿದನು, ಆದರೆ ಅವರ ಪ್ರತಿಕ್ರಿಯೆಯೇನಾಗಿತ್ತು?

9 ಯೆಹೋವನು ಯೆಹೂದಕ್ಕೆ ಬಹಳಷ್ಟು ಪ್ರೀತಿದಯೆಯನ್ನು ತೋರಿಸಿದನು. ಆದರೆ ಅವರಲ್ಲಿ ಎಲ್ಲರೂ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ ಎಂಬುದು ದುಃಖಕರ ಸಂಗತಿ. ಹೆಚ್ಚಿನವರು ಆಗಿಂದಾಗ್ಗೆ, ಯೆಹೋವನ ಸತ್ಯದ ಬೆಳಕಿನ ಬದಲಿಗೆ ಆತನ ವಿರುದ್ಧ ದಂಗೆಯೇಳುವ ಮತ್ತು ಧರ್ಮಭ್ರಷ್ಟರಾಗುವ ಆಯ್ಕೆಯನ್ನು ಮಾಡಿದರು. ಯೆಶಾಯನು ಹೇಳಿದ್ದು: “ದುಷ್ಟರನ್ನು ಕರುಣಿಸಿದರೂ ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥವಂತರ ದೇಶದಲ್ಲಿಯೂ ಅನ್ಯಾಯವನ್ನಾಚರಿಸುವರು.”​—ಯೆಶಾಯ 26:10.

10 ಯೆಶಾಯನ ದಿನದಲ್ಲಿ ಯೆಹೋವನು ಯೆಹೂದವನ್ನು ಅವಳ ಶತ್ರುಗಳ ವಿರುದ್ಧ ಸಂರಕ್ಷಿಸಿದಾಗ, ಹೆಚ್ಚಿನವರು ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಆತನು ಅವರಿಗೆ ಶಾಂತಿಯನ್ನು ಕೊಟ್ಟು ಆಶೀರ್ವದಿಸಿದಾಗ, ಆ ಜನಾಂಗವು ಕೃತಜ್ಞತೆಯನ್ನು ತೋರಿಸಲಿಲ್ಲ. ಆದುದರಿಂದ, ಅವರು ‘ಬೇರೆ ಒಡೆಯರನ್ನು’ ಸೇವಿಸಲಿಕ್ಕಾಗಿ ಮತ್ತು ಕೊನೆಯಲ್ಲಿ ಸಾ.ಶ.ಪೂ. 607ರಲ್ಲಿ ಯೆಹೂದ್ಯರು ಬಾಬೆಲಿಗೆ ಸೆರೆಯಾಳುಗಳಾಗಿ ಕೊಂಡೊಯ್ಯಲ್ಪಡಲು ಯೆಹೋವನು ಬಿಟ್ಟುಬಿಟ್ಟನು. (ಯೆಶಾಯ 26:​11-13) ಹೀಗಿದ್ದರೂ, ಆ ಜನಾಂಗದ ಉಳಿಕೆಯವರು ಶುದ್ಧರಾಗಿ ಅವರ ಸ್ವದೇಶಕ್ಕೆ ಹಿಂದಿರುಗಿದರು.

11, 12. (ಎ) ಯೆಹೂದವನ್ನು ಸೆರೆಹಿಡಿದವರಿಗೆ ಯಾವ ಭವಿಷ್ಯವಿತ್ತು? (ಬಿ) ಯೆಹೋವನ ಅಭಿಷಿಕ್ತ ಸೇವಕರನ್ನು ಈ ಹಿಂದೆ ಸೆರೆಹಿಡಿದವರಿಗೆ 1919ರಲ್ಲಿ ಯಾವ ಭವಿಷ್ಯವಿತ್ತು?

11 ಯೆಹೂದವನ್ನು ಸೆರೆಹಿಡಿದವರ ಕುರಿತಾಗಿ ಏನು? ಯೆಶಾಯನು ಪ್ರವಾದನಾತ್ಮಕವಾಗಿ ಉತ್ತರಿಸುವುದು: “ನೀನು ಆ ಒಡೆಯರ ಮೇಲೆ ಕೈಮಾಡಿ ನಿರ್ಮೂಲಪಡಿಸಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದೀ; ಸತ್ತವರು ಪುನಃ ಬದುಕುವದಿಲ್ಲ, ಪ್ರೇತಗಳು ಎದ್ದು ಬರುವದಿಲ್ಲವಲ್ಲಾ.” (ಯೆಶಾಯ 26:14) ಹೌದು, ಸಾ.ಶ.ಪೂ. 539ರಲ್ಲಿ ಬಾಬೆಲಿನ ಪತನವಾದಾಗ, ಅವಳಿಗೆ ಯಾವುದೇ ಭವಿಷ್ಯವಿರಲಿಲ್ಲ. ಸ್ವಲ್ಪ ಸಮಯದೊಳಗೆ ಆ ನಗರವು ಇಲ್ಲವಾಗಲಿತ್ತು. ಅವಳು ‘ಪುನಃ ಬದುಕುವದಿಲ್ಲ’ ಮತ್ತು ಅವಳ ದೊಡ್ಡ ಸಾಮ್ರಾಜ್ಯವು ಕೊನೆಗೊಂಡು, ಇತಿಹಾಸದ ಪುಟಗಳನ್ನು ಸೇರುವುದು. ಈ ಲೋಕದ ಶಕ್ತಿಶಾಲಿ ವ್ಯಕ್ತಿಗಳಲ್ಲಿ ನಿರೀಕ್ಷೆಯನ್ನಿಡುವವರಿಗೆ ಎಂತಹ ಎಚ್ಚರಿಕೆ!

12 ಈ ಪ್ರವಾದನೆಯ ಕೆಲವೊಂದು ಅಂಶಗಳು, ದೇವರ ಅಭಿಷಿಕ್ತ ಸೇವಕರು 1918ರಲ್ಲಿ ಆತ್ಮಿಕ ಬಂಧಿವಾಸಕ್ಕೆ ಹೋಗಲು ಮತ್ತು ಆನಂತರ ಅವರನ್ನು 1919ರಲ್ಲಿ ಬಿಡುಗಡೆಗೊಳಿಸಿದಾಗ ನೆರವೇರಿದವು. ಆ ಸಮಯದಿಂದ ಹಿಡಿದು, ಅವರನ್ನು ಈ ಹಿಂದೆ ಸೆರೆಹಿಡಿದವರ ಭವಿಷ್ಯವು, ವಿಶೇಷವಾಗಿ ಕ್ರೈಸ್ತಪ್ರಪಂಚದ ಭವಿಷ್ಯವು ವಿಷಣ್ಣವಾದದ್ದಾಗಿದೆ. ಆದರೆ ಯೆಹೋವನ ಜನರಿಗಾದರೋ ಕಾದಿರಿಸಲ್ಪಟ್ಟಿದ್ದ ಆಶೀರ್ವಾದಗಳು ನಿಜವಾಗಿಯೂ ಹೇರಳವಾಗಿದ್ದವು.

“ನಿನ್ನ ಜನವನ್ನು ಹೆಚ್ಚಿಸಿದ್ದೀ”

13, 14. ಇಸವಿ 1919ರಿಂದ ಯೆಹೋವನ ಅಭಿಷಿಕ್ತ ಸೇವಕರು ಯಾವ ಹೇರಳ ಆಶೀರ್ವಾದಗಳನ್ನು ಅನುಭವಿಸಿದ್ದಾರೆ?

13 ದೇವರು ತನ್ನ ಅಭಿಷಿಕ್ತ ಸೇವಕರ ಪಶ್ಚಾತ್ತಾಪಿ ಮನೋಭಾವವನ್ನು 1919ರಲ್ಲಿ ಆಶೀರ್ವದಿಸಿ, ಅವರಿಗೆ ವೃದ್ಧಿಯನ್ನು ದಯಪಾಲಿಸಿದನು. ಮೊದಲಾಗಿ, ದೇವರ ಇಸ್ರಾಯೇಲಿನ ಕೊನೆಯ ಸದಸ್ಯರನ್ನು ಒಟ್ಟುಗೂಡಿಸಲು ಗಮನವನ್ನು ಕೊಡಲಾಯಿತು ಮತ್ತು ಆನಂತರ ‘ಬೇರೆ ಕುರಿಗಳ’ ‘ಮಹಾ ಸಮೂಹವನ್ನು’ ಒಟ್ಟುಗೊಡಿಸಲಾಯಿತು. (ಪ್ರಕಟನೆ 7:9; ಯೋಹಾನ 10:16) ಈ ಆಶೀರ್ವಾದಗಳನ್ನು ಯೆಶಾಯನ ಪ್ರವಾದನೆಯಲ್ಲಿ ಮುಂತಿಳಿಸಲಾಯಿತು: “ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಪ್ರಜೆಯನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ. ಯೆಹೋವನೇ, [ನಿನ್ನ ಜನರು] ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಆಶ್ರಯಿಸಿದರು, ನಿನ್ನ ಶಿಕ್ಷೆಗೆ ಗುರಿಯಾಗಿ ಜಪಮಾಡಿದರು.”​—ಯೆಶಾಯ 26:15, 16.

14 ಇಂದು ದೇವರ ಇಸ್ರಾಯೇಲಿನ ಮೇರೆಗಳು ಭೂಮಿಯಾದ್ಯಂತ ವಿಸ್ತರಿಸಿವೆ. ಮತ್ತು ಈಗ ಒಟ್ಟುಗೂಡಿಸಲ್ಪಟ್ಟಿರುವ ಮಹಾ ಸಮೂಹದ ಸಂಖ್ಯೆಯು ಸುಮಾರು 60 ಲಕ್ಷ ಆಗಿದೆ. ಇವರೆಲ್ಲರೂ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವವರಾಗಿದ್ದಾರೆ. (ಮತ್ತಾಯ 24:14) ಯೆಹೋವನಿಂದ ಎಂಥ ಆಶೀರ್ವಾದ! ಮತ್ತು ಇದು ಆತನ ಹೆಸರಿಗೆ ಎಷ್ಟು ಮಹಿಮೆಯನ್ನು ತರುತ್ತದೆ! ಇಂದು ಆ ಹೆಸರು 235 ದೇಶಗಳಲ್ಲಿ ಕೇಳಿಬರುತ್ತಿದೆ ಮತ್ತು ಇದು ಆತನ ವಾಗ್ದಾನದ ಅದ್ಭುತವಾದ ನೆರವೇರಿಕೆಯಾಗಿದೆ.

15. ಇಸವಿ 1919ರಲ್ಲಿ ಯಾವ ಸಾಂಕೇತಿಕ ಪುನರುತ್ಥಾನವಾಯಿತು?

15 ಬಾಬೆಲಿನ ಬಂಧಿವಾಸದಿಂದ ಪಾರಾಗಲಿಕ್ಕಾಗಿ ಯೆಹೂದಕ್ಕೆ ಯೆಹೋವನ ಸಹಾಯದ ಅಗತ್ಯವಿತ್ತು. ಅವರನ್ನು ಅದನ್ನು ತಮ್ಮಷ್ಟಕ್ಕೆ ಮಾಡಲು ಸಾಧ್ಯವೇ ಇರಲಿಲ್ಲ. (ಯೆಶಾಯ 26:​17, 18) ಅಂತೆಯೇ, 1919ರಲ್ಲಿ ದೇವರ ಇಸ್ರಾಯೇಲಿನ ಬಿಡುಗಡೆಯು, ಯೆಹೋವನ ಬೆಂಬಲದ ರುಜುವಾತಾಗಿತ್ತು. ಆತನ ಸಹಾಯವಿಲ್ಲದೇ ಅದು ಸಂಭವಿಸಲು ಸಾಧ್ಯವೇ ಇರಲಿಲ್ಲ. ಅವರ ಸ್ಥಿತಿಯಲ್ಲಾದ ಬದಲಾವಣೆಯು ಎಷ್ಟು ಚಕಿತಗೊಳಿಸುವಂಥದ್ದಾಗಿತ್ತೆಂದರೆ, ಯೆಶಾಯನು ಅದನ್ನು ಪುನರುತ್ಥಾನಕ್ಕೆ ಹೋಲಿಸುತ್ತಾನೆ: “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.” (ಯೆಶಾಯ 26:19; ಪ್ರಕಟನೆ 11:7-11) ಹೌದು, ಸತ್ತವರು ಸಹ ಹೆಚ್ಚಿನ ಚಟುವಟಿಕೆಗಾಗಿ ಪುನಃ ಜನಿಸುವರೋ ಎಂಬಂತಿರುವುದು!

ಅಪಾಯಕಾರಿ ಸಮಯಗಳಲ್ಲಿ ಸಂರಕ್ಷಣೆ

16, 17. (ಎ) ಸಾ.ಶ.ಪೂ. 539ರಲ್ಲಿ ಬಾಬೆಲಿನ ಪತನದಿಂದ ಪಾರಾಗಲಿಕ್ಕಾಗಿ ಯೆಹೂದ್ಯರು ಏನು ಮಾಡಬೇಕಾಗಿತ್ತು? (ಬಿ) ಇಂದು ಆ ‘ಕೋಣೆಗಳು’ ಏನಾಗಿರಬಹುದು, ಮತ್ತು ಅವು ನಮಗೆ ಹೇಗೆ ಪ್ರಯೋಜನಕಾರಿಯಾಗಿದೆ?

16 ಯೆಹೋವನ ಸೇವಕರಿಗೆ ಯಾವಾಗಲೂ ಆತನ ಸಹಾಯದ ಅಗತ್ಯವಿದೆ. ಆದರೆ ಆತನು ಈಗ ಕೊನೆಯ ಬಾರಿ ಸೈತಾನನ ಲೋಕದ ವಿರುದ್ಧ ತನ್ನ ಕೈಯೆತ್ತಲಿದ್ದಾನೆ. ಮತ್ತು ಆ ಸಮಯದಲ್ಲಿ ಯೆಹೋವನ ಆರಾಧಕರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಸಹಾಯದ ಅಗತ್ಯವಿರುವುದು. (1 ಯೋಹಾನ 5:19) ಆ ಅಪಾಯಕಾರಿ ಸಮಯದ ಕುರಿತಾಗಿ ಯೆಹೋವನು ನಮ್ಮನ್ನು ಎಚ್ಚರಿಸುವುದು: “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ. ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು. ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ; ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ!” (ಯೆಶಾಯ 26:20, 21; ಚೆಫನ್ಯ 1:14) ಸಾ.ಶ.ಪೂ. 539ರಲ್ಲಿ ಬಾಬೆಲಿನ ಪತನವನ್ನು ಪಾರಾಗುವುದು ಹೇಗೆಂಬುದನ್ನು ಈ ಎಚ್ಚರಿಕೆಯು ಯೆಹೂದ್ಯರಿಗೆ ತೋರಿಸಿಕೊಟ್ಟಿತು. ಆ ಎಚ್ಚರಿಕೆಯನ್ನು ಪಾಲಿಸಿದವರು, ತಮ್ಮ ಮನೆಗಳಲ್ಲಿಯೇ ಉಳಿಯಬೇಕಾಗಿತ್ತು. ಹೀಗೆ ಅವರು ಬೀದಿಗಳಲ್ಲಿ ದಾಳಿಯಿಡುತ್ತಿದ್ದ ಸೈನಿಕರಿಂದ ಸುರಕ್ಷಿತರಾಗಿರಸಾಧ್ಯವಿತ್ತು.

17 ಆ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ “ಕೋಣೆಗಳು” ಇಂದು, ಲೋಕದಾದ್ಯಂತವಿರುವ ಯೆಹೋವನ ಜನರ ಸಾವಿರಾರು ಸಭೆಗಳನ್ನು ಚಿತ್ರಿಸುತ್ತಿರಬೇಕು. ಈ ಸಭೆಗಳು ಈಗಲೂ ಒಂದು ಸಂರಕ್ಷಣೆಯಾಗಿದೆ. ಅವು, ಕ್ರೈಸ್ತರು ತಮ್ಮ ಸಹೋದರರ ನಡುವೆ, ಹಿರಿಯರ ಪ್ರೀತಿಯ ಆರೈಕೆಯ ಕೆಳಗೆ ಸುರಕ್ಷೆಯನ್ನು ಪಡೆಯುವ ಸ್ಥಳವಾಗಿದೆ. (ಯೆಶಾಯ 32:​1, 2; ಇಬ್ರಿಯ 10:​24, 25) ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಾಗುತ್ತಿರುವುದರಿಂದ ಇದು ವಿಶೇಷವಾಗಿ ಸತ್ಯವಾಗಿದೆ. ಆ ಸಮಯದಲ್ಲಿ ಪಾರಾಗುವಿಕೆಯು ವಿಧೇಯತೆಯ ಮೇಲೆ ಅವಲಂಬಿಸಿರುವುದು.​—ಚೆಫನ್ಯ 2:3.

18. ಯೆಹೋವನು ಬೇಗನೆ ಹೇಗೆ ‘ಸಮುದ್ರ ಘಟಸರ್ಪವನ್ನು ಕೊಂದುಹಾಕುವನು?’

18 ಆ ಸಮಯದ ಕುರಿತಾಗಿ ಯೆಶಾಯನು ಪ್ರವಾದಿಸುವುದು: “ಆ ದಿನದಲ್ಲಿ ಯೆಹೋವನು ಕಠಿನವೂ ಮಹತ್ತೂ ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಸರಿದುಹೋಗುವ ಸರ್ಪ, ಲಿವ್ಯಾತಾನ್‌ ಎಂಬ ಡೊಂಕಾಗಿ ಹರಿಯುವ ಸರ್ಪದ ಕಡೆಗೆ ತನ್ನ ಗಮನವನ್ನು ಹರಿಸುವನು, ಮತ್ತು ಆತನು ಆ ಸಮುದ್ರ ಘಟಸರ್ಪವನ್ನು ಖಂಡಿತವಾಗಿಯೂ ಕೊಂದುಹಾಕುವನು.” (ಯೆಶಾಯ 27:​1, NW) ಆಧುನಿಕ ದಿನದ “ಲಿವ್ಯಾತಾನ್‌” ಏನಾಗಿದೆ? ಅದು “ಪುರಾತನ ಸರ್ಪ” ಆಗಿರುವ ಸೈತಾನನು ಮತ್ತು ಅವನ ದುಷ್ಟ ವಿಷಯಗಳ ವ್ಯವಸ್ಥೆ ಆಗಿರಬೇಕು. ದೇವರ ಇಸ್ರಾಯೇಲಿನ ವಿರುದ್ಧ ಯುದ್ಧ ನಡೆಸಲಿಕ್ಕಾಗಿ ಆತನು ಈ ವ್ಯವಸ್ಥೆಯನ್ನು ಉಪಯೋಗಿಸುತ್ತಾನೆ. (ಪ್ರಕಟನೆ 12:​9, 10, 17; 13:​14, 16, 17) 1919ರಲ್ಲಿ ಲಿವ್ಯಾತಾನ್‌ ದೇವರ ಜನರ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿತು. ಕಾಲಾನಂತರ, ಅದು ಸಂಪೂರ್ಣವಾಗಿ ಮಾಯವಾಗಲಿದೆ. (ಪ್ರಕಟನೆ 19:​19-21; 20:​1-3, 10) ಹೀಗೆ, ಯೆಹೋವನು ‘ಆ ಸಮುದ್ರ ಘಟಸರ್ಪವನ್ನು ಕೊಂದುಹಾಕುವನು.’ ಅಲ್ಲಿವರೆಗೆ, ಯೆಹೋವನ ಜನರ ವಿರುದ್ಧ ಲಿವ್ಯಾತಾನ್‌ ಏನನ್ನೇ ಮಾಡಲು ಪ್ರಯತ್ನಿಸಿದರೂ ಅದು ಹೆಚ್ಚು ಸಮಯದ ವರೆಗೆ ಸಫಲವಾಗದು. (ಯೆಶಾಯ 54:17) ಈ ಆಶ್ವಾಸನೆಯು ಎಷ್ಟು ಸಾಂತ್ವನದಾಯಕವಾಗಿದೆ!

“ನೊರೆಸೂಸುವ ಮದ್ಯದ ದ್ರಾಕ್ಷಾತೋಟ”

19. ಇಂದು ಉಳಿಕೆಯವರ ಸ್ಥಿತಿಯು ಏನಾಗಿದೆ?

19 ಯೆಹೋವನಿಂದ ಬರುವ ಈ ಎಲ್ಲ ಬೆಳಕಿನ ನೋಟದಲ್ಲಿ, ನಮಗೆ ಹರ್ಷಿಸಲು ಪ್ರತಿಯೊಂದೂ ಕಾರಣವಿದೆಯಲ್ಲವೇ? ಹೌದು, ಇದೆ! ಯೆಶಾಯನು ಈ ಮುಂದಿನ ಮಾತುಗಳಲ್ಲಿ ಯೆಹೋವನ ಜನರ ಆನಂದವನ್ನು ಸೊಗಸಾದ ರೀತಿಯಲ್ಲಿ ವರ್ಣಿಸುತ್ತಾನೆ: “ಜನರೇ, ಆ ದಿನದಲ್ಲಿ ಹೀಗೆ ಹಾಡಿರಿ: ‘ನೊರೆಸೂಸುವ ಮದ್ಯದ ದ್ರಾಕ್ಷಾತೋಟವು! ಯೆಹೋವನಾದ ನಾನು, ಅದನ್ನು ರಕ್ಷಿಸುತ್ತಿರುವೆ. ಪ್ರತಿ ಗಳಿಗೆ ಅದಕ್ಕೆ ನೀರು ಹಾಯಿಸುವೆ. ಅದರ ಕಡೆಗೆ ಯಾರೊಬ್ಬರೂ ತಮ್ಮ ಗಮನವನ್ನು ಹರಿಸದಂತೆ, ನಾನು ಹಗಲೂರಾತ್ರಿ ಅದನ್ನು ಕಾಪಾಡುವೆ.’” (ಯೆಶಾಯ 27:​2, 3, NW) ಯೆಹೋವನು ತನ್ನ ‘ದ್ರಾಕ್ಷಾತೋಟ,’ ಅಂದರೆ ದೇವರ ಇಸ್ರಾಯೇಲಿನ ಉಳಿಕೆಯವರ ಮತ್ತು ಅವರ ಪರಿಶ್ರಮಿ ಸಂಗಡಿಗರ ಆರೈಕೆಮಾಡಿದ್ದಾನೆ. (ಯೋಹಾನ 15:​1-8) ಇದರಿಂದಾಗಿ, ಆತನ ನಾಮಕ್ಕೆ ಮಹಿಮೆಯನ್ನು ತರುವ ಮತ್ತು ಭೂಮಿಯ ಮೇಲಿನ ಆತನ ಸೇವಕರಲ್ಲಿ ತುಂಬ ಹರ್ಷಾನಂದವನ್ನು ಉಂಟುಮಾಡುವ ಫಲ ದೊರಕಿದೆ.

20. ಯೆಹೋವನು ಕ್ರೈಸ್ತ ಸಭೆಯನ್ನು ಹೇಗೆ ಸಂರಕ್ಷಿಸುತ್ತಾನೆ?

20 ತನ್ನ ಅಭಿಷಿಕ್ತ ಸೇವಕರ ವಿರುದ್ಧ ಯೆಹೋವನಿಗಿದ್ದ ಆರಂಭದ ಕೋಪದಿಂದಾಗಿ, ಅವರು 1918ರಲ್ಲಿ ಆತ್ಮಿಕ ಬಂದಿವಾಸಕ್ಕೊಳಗಾಗುವಂತೆ ಆತನು ಅನುಮತಿಸಿದನು. ಆದರೆ ಈಗ ಆ ಕೋಪವು ಆರಿಹೋಗಿರುವುದಕ್ಕಾಗಿ ನಾವು ಸಂತೋಷಿಸುತ್ತೇವೆ. ಸ್ವತಃ ಯೆಹೋವನು ಹೇಳುತ್ತಾನೆ: “ರೌದ್ರವು ನನ್ನಲ್ಲಿಲ್ಲ; ಮುಳ್ಳುಗಿಳ್ಳು ನನಗೆ ಎದುರುಬಿದ್ದರೆ ಎಷ್ಟೋ ಒಳ್ಳೇದು! ಅವುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ನಡೆದು ಹೋಗಿ ಒಟ್ಟಿಗೆ ಸುಟ್ಟುಬಿಡುವೆನು. ಬೇಡವಾದರೆ ಆ ಶತ್ರುಗಳು ನನ್ನ ಬಲವನ್ನು ಶರಣುಹೊಂದಲಿ, ನನ್ನ ಸಂಗಡ ಸಮಾಧಾನಕ್ಕೆ ಬರಲಿ, ನನ್ನೊಡನೆ ಸಂಧಿಮಾಡಿಕೊಳ್ಳಲಿ.” (ಯೆಶಾಯ 27:4, 5) ಆತನ ದ್ರಾಕ್ಷಾಲತೆಗಳು ಹೇರಳವಾಗಿ “ನೊರೆಸೂಸುವ ಮದ್ಯ”ವನ್ನು ಉತ್ಪಾದಿಸುವಂತೆ, ಅವುಗಳನ್ನು ಕೆಡಿಸಬಲ್ಲ ಯಾವುದೇ ರೀತಿಯ ಕಳೆಗಳನ್ನು ಜಜ್ಜಿಹಾಕಿ, ನಾಶಮಾಡುತ್ತಾನೆ. ಹೀಗಿರುವುದರಿಂದ, ಕ್ರೈಸ್ತ ಸಭೆಯ ಕ್ಷೇಮಕ್ಕೆ ಯಾರೂ ಅಪಾಯವನ್ನೊಡ್ಡದಿದ್ದರೆ ಒಳ್ಳೇದು! ಯೆಹೋವನ ಅನುಗ್ರಹ ಮತ್ತು ಸಂರಕ್ಷೆಯನ್ನು ಕೋರುತ್ತಾ ಎಲ್ಲರೂ ‘ಯೆಹೋವನ ಬಲವನ್ನು ಶರಣುಹೊಂದಲಿ.’ ಹೀಗೆ ಮಾಡುವುದರಿಂದ ನಾವು ದೇವರೊಂದಿಗೆ ಸಮಾಧಾನವನ್ನು ಮಾಡಿಕೊಳ್ಳುವೆವು. ಇದು ಎಷ್ಟು ಪ್ರಾಮುಖ್ಯವಾದದ್ದೆಂದರೆ, ಯೆಶಾಯನು ಅದರ ಕುರಿತಾಗಿ ಎರಡು ಸಲ ತಿಳಿಸುತ್ತಾನೆ.​—ಕೀರ್ತನೆ 85:​1, 2, 8; ರೋಮಾಪುರ 5:1.

21. ಭೂಮಂಡಲವು ಯಾವ ರೀತಿಯಲ್ಲಿ “ಫಲದಿಂದ” ತುಂಬಿದೆ?

21 ಆಶೀರ್ವಾದಗಳು ಮುಂದುವರಿಯುತ್ತಾ ಇರುವವು: “ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವದು, ಇಸ್ರಾಯೇಲು ಹೂಬಿಟ್ಟು ಚಿಗುರುವದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವದು.” (ಯೆಶಾಯ 27:6) ಈ ವಚನವು 1919ರಿಂದ ನೆರವೇರಿದೆ. ಮತ್ತು ಇದು ಯೆಹೋವನ ಶಕ್ತಿಯ ವಿಷಯದಲ್ಲಿ ಅದ್ಭುತವಾದ ಪುರಾವೆಯನ್ನು ಒದಗಿಸಿದೆ. ಅಭಿಷಿಕ್ತ ಕ್ರೈಸ್ತರು ಇಡೀ ಭೂಮಿಯನ್ನು “ಫಲದಿಂದ” ಅಂದರೆ ಪುಷ್ಟಿದಾಯಕ ಆತ್ಮಿಕ ಆಹಾರದೊಂದಿಗೆ ತುಂಬಿಸಿದ್ದಾರೆ. ಈ ಭ್ರಷ್ಟ ಲೋಕದ ಮಧ್ಯೆಯೂ, ಅವರು ಆನಂದದಿಂದ ದೇವರ ಶ್ರೇಷ್ಠ ಮಟ್ಟಗಳನ್ನು ಪಾಲಿಸುತ್ತಾರೆ. ಮತ್ತು ಯೆಹೋವನು ಅವರಿಗೆ ವೃದ್ಧಿಯೊಂದಿಗೆ ಆಶೀರ್ವದಿಸುತ್ತಾ ಇದ್ದಾನೆ. ಫಲಿತಾಂಶವಾಗಿ, ಅವರ ಲಕ್ಷಾಂತರ ಮಂದಿ ಸಂಗಡಿಗರಾದ ಬೇರೆ ಕುರಿಗಳು, “ಹಗಳಿರುಳು [ದೇವರ] ಸೇವೆಮಾಡುತ್ತಾ ಇದ್ದಾರೆ.” (ಪ್ರಕಟನೆ 7:15) ಈ “ಫಲ”ದಲ್ಲಿ ಪಾಲ್ಗೊಳ್ಳುವ ಮತ್ತು ಇತರರೊಂದಿಗೆ ಅದನ್ನು ಹಂಚಿಕೊಳ್ಳಲು ನಮಗಿರುವ ಭವ್ಯವಾದ ಸುಯೋಗವನ್ನು ನಾವು ಎಂದೂ ಮರೆಯದಿರೋಣ!

22. ಬೆಳಕನ್ನು ಸ್ವೀಕರಿಸುವವರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

22 ಕತ್ತಲು ಈ ಭೂಮಿಯನ್ನು ಕವಿದಿರುವ ಹಾಗೂ ಘೋರ ಅಂಧಕಾರವು ಜನಾಂಗಗಳನ್ನು ಮುಚ್ಚಿರುವ ಈ ಕಷ್ಟಕರವಾದ ಸಮಯಗಳಲ್ಲಿ, ಯೆಹೋವನಾದರೋ ತನ್ನ ಜನರ ಮೇಲೆ ಆತ್ಮಿಕ ಬೆಳಕನ್ನು ಪ್ರಕಾಶಿಸುತ್ತಿರುವುದಕ್ಕಾಗಿ ನಾವು ಕೃತಜ್ಞರಾಗಿಲ್ಲವೊ? (ಯೆಶಾಯ 60:2; ರೋಮಾಪುರ 2:19; 13:12) ಆ ಬೆಳಕನ್ನು ಸ್ವೀಕರಿಸುವವರೆಲ್ಲರಿಗೆ ಅದರಿಂದಾಗಿ ಈಗಲೇ ಮನಶ್ಶಾಂತಿ ಮತ್ತು ಆನಂದವು ಸಿಗುತ್ತದೆ ಮಾತ್ರವಲ್ಲ ಭವಿಷ್ಯದಲ್ಲಿ ನಿತ್ಯಜೀವವೂ ಸಿಗುವುದು. ಆದುದರಿಂದ, ಆ ಬೆಳಕನ್ನು ಪ್ರೀತಿಸುವವರಾದ ನಾವು ಯೆಹೋವನನ್ನು ಹೃದಯದಾಳದಿಂದ ಸ್ತುತಿಸುತ್ತಾ, ಕೀರ್ತನೆಗಾರನೊಂದಿಗೆ ಹೀಗೆ ಹೇಳಲು ಸಕಾರಣವಿದೆ: “ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.”​—ಕೀರ್ತನೆ 27:1ಬಿ, 14.

ನಿಮಗೆ ನೆನಪಿದೆಯೊ?

• ಯೆಹೋವನ ಜನರ ಮೇಲೆ ದಬ್ಬಾಳಿಕೆ ನಡೆಸುವವರ ಭವಿಷ್ಯವೇನಾಗಿದೆ?

• ಯೆಶಾಯನು ಯಾವ ವೃದ್ಧಿಯನ್ನು ಪ್ರವಾದಿಸಿದನು?

• ನಾವು ಯಾವ ‘ಕೋಣೆಗಳೊಳಗೆ’ ಇರಬೇಕು ಮತ್ತು ಏಕೆ?

• ಯೆಹೋವನ ಜನರ ಸ್ಥಿತಿಯು ಏಕೆ ಆತನಿಗೆ ಸ್ತುತಿಯನ್ನು ತರುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚೌಕ]

ಹೊಸ ಪ್ರಕಾಶನ

ಈ ಎರಡು ಅಭ್ಯಾಸ ಲೇಖನಗಳಲ್ಲಿದ್ದ ಹೆಚ್ಚಿನ ಮಾಹಿತಿಯು, 2000/2001 ಇಸವಿಗಳ ಜಿಲ್ಲಾ ಅಧಿವೇಶನದಲ್ಲಿನ ಒಂದು ಭಾಷಣದಲ್ಲಿ ಪ್ರಸ್ತುತಪಡಿಸಲಾಗಿತ್ತು. ಆ ಭಾಷಣದ ಅಂತ್ಯದಲ್ಲಿ ಒಂದು ಹೊಸ ಪ್ರಕಾಶನವನ್ನು ಬಿಡುಗಡೆಮಾಡಲಾಯಿತು. ಅದರ ಶೀರ್ಷಿಕೆಯು, ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು I ಆಗಿತ್ತು. ಇದು 416 ಪುಟಗಳ ಪುಸ್ತಕವಾಗಿದ್ದು, ಅದರಲ್ಲಿ ಯೆಶಾಯನ ಪುಸ್ತಕದ ಮೊದಲ 40 ಅಧ್ಯಾಯಗಳ ಒಂದೊಂದು ವಚನವನ್ನು ಕ್ರಮಬದ್ಧವಾಗಿ ಚರ್ಚಿಸಲಾಗಿದೆ.

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ‘ಬಲವಾದ ಪಟ್ಟಣದಲ್ಲಿ,’ ಅಂದರೆ ಆತನ ಸಂಸ್ಥೆಯಲ್ಲಿ ಕೇವಲ ನೀತಿವಂತರನ್ನು ಅನುಮತಿಸಲಾಗುತ್ತದೆ

[ಪುಟ 19ರಲ್ಲಿರುವ ಚಿತ್ರ]

ಯೆಶಾಯನು “ರಾತ್ರಿಯಲ್ಲಿ” ಯೆಹೋವನಿಂದ ಮಾರ್ಗದರ್ಶನವನ್ನು ಕೋರಿದನು

[ಪುಟ 21ರಲ್ಲಿರುವ ಚಿತ್ರ]

ಯೆಹೋವನು ತನ್ನ “ದ್ರಾಕ್ಷಾತೋಟವನ್ನು” ಸಂರಕ್ಷಿಸಿ, ಅದನ್ನು ಫಲದಾಯಕವನ್ನಾಗಿ ಮಾಡುತ್ತಾನೆ