ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಪಾಪಗಳನ್ನು ಕ್ಷಮಿಸಲು ಯೆಹೋವನು ಮನಃಪೂರ್ವಕವಾಗಿ ಸಿದ್ಧನಿರುವಾಗ, ಕ್ರೈಸ್ತರು ಸಭೆಯಲ್ಲಿರುವ ಹಿರಿಯರಿಗೆ ಪಾಪವನ್ನು ನಿವೇದಿಸಿಕೊಳ್ಳುವ ಅಗತ್ಯ ಏಕಿದೆ?

ದಾವೀದ ಮತ್ತು ಬತ್ಷೆಬೆಯ ವಿಷಯದಲ್ಲಿ ನೋಡಸಾಧ್ಯವಿರುವಂತೆ, ದಾವೀದನ ಪಾಪವು ತುಂಬ ಗಂಭೀರವಾಗಿತ್ತಾದರೂ, ಅವನು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದ ಕಾರಣ ಯೆಹೋವನು ಅವನನ್ನು ಕ್ಷಮಿಸಿದನು. ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಬಂದಾಗ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ” ಎಂದು ಅವನು ಬಿಚ್ಚುಮನಸ್ಸಿನಿಂದ ತಪ್ಪನ್ನು ಒಪ್ಪಿಕೊಂಡನು.​—2 ಸಮುವೇಲ 12:13.

ಆದರೂ, ಒಬ್ಬ ಪಾಪಿಯು ಯಥಾರ್ಥ ರೀತಿಯಲ್ಲಿ ಪಾಪವನ್ನು ನಿವೇದಿಸಿಕೊಂಡಾಗ, ಯೆಹೋವನು ಅವನ ತಪ್ಪನ್ನು ಮನ್ನಿಸಿ ಅವನನ್ನು ಕ್ಷಮಿಸುತ್ತಾನೆ. ಅಷ್ಟುಮಾತ್ರವಲ್ಲ, ತಪ್ಪಿತಸ್ಥನು ಆತ್ಮಿಕ ರೀತಿಯಲ್ಲಿ ಗುಣಹೊಂದುವಂತೆ ಪ್ರಗತಿಯನ್ನು ಮಾಡಲು ಬೇಕಾದ ಪ್ರೀತಿಯ ಒದಗಿಸುವಿಕೆಗಳನ್ನೂ ಮಾಡುತ್ತಾನೆ. ದಾವೀದನಿಗಾದರೋ ಪ್ರವಾದಿಯಾದ ನಾತಾನನ ಮೂಲಕ ಸಹಾಯವು ಒದಗಿಸಲ್ಪಟ್ಟಿತು. ಇಂದು, ಕ್ರೈಸ್ತ ಸಭೆಯಲ್ಲಿ ಆತ್ಮಿಕವಾಗಿ ಪ್ರೌಢರಾಗಿರುವ ಹಿರೀ ಪುರುಷರು ಅಥವಾ ಹಿರಿಯರು ಸಹಾಯಮಾಡುವ ಸ್ಥಾನದಲ್ಲಿದ್ದಾರೆ. ಶಿಷ್ಯನಾದ ಯಾಕೋಬನು ವಿವರಿಸುವುದು: “ನಿಮ್ಮಲ್ಲಿ [ಆತ್ಮಿಕವಾಗಿ] ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [“ಯೆಹೋವನ,” NW] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು [“ಯೆಹೋವನು,” NW] ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು.”​—ಯಾಕೋಬ 5:​14, 15.

ಪಶ್ಚಾತ್ತಾಪ ತೋರಿಸುವ ಪಾಪಿಯು ಅನುಭವಿಸುವ ಮಾನಸಿಕ ವೇದನೆಯನ್ನು ಕಡಿಮೆಮಾಡಲು, ಅನುಭವಸ್ಥ ಹಿರಿಯರು ಹೆಚ್ಚಿನ ರೀತಿಯಲ್ಲಿ ಸಹಾಯಮಾಡಬಲ್ಲರು. ಪಾಪಿಯೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಹಿರಿಯರು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುವರು. ತುಂಬ ಕಟ್ಟುನಿಟ್ಟಾದ ಶಿಸ್ತನ್ನು ನೀಡುವುದು ಸೂಕ್ತವಾಗಿರುವಾಗಲೂ, ಅವರೆಂದೂ ನಿರ್ದಯದಿಂದ ವರ್ತಿಸಲು ಬಯಸುವುದಿಲ್ಲ. ಅದಕ್ಕೆ ಬದಲಾಗಿ, ಆ ವ್ಯಕ್ತಿಯ ಆವಶ್ಯಕತೆಗಳನ್ನು ಸಹಾನುಭೂತಿಯಿಂದ ಪರಿಗಣಿಸುತ್ತಾರೆ. ದೇವರ ವಾಕ್ಯವನ್ನು ಉಪಯೋಗಿಸುವ ಮೂಲಕ ತಪ್ಪಿತಸ್ಥನ ಆಲೋಚನಾ ರೀತಿಯನ್ನು ಸರಿಪಡಿಸಲು ಅವರು ತಾಳ್ಮೆಯಿಂದ ಶ್ರಮಿಸುತ್ತಾರೆ. (ಗಲಾತ್ಯ 6:1) ಒಬ್ಬ ವ್ಯಕ್ತಿಯು ತನ್ನ ಪಾಪವನ್ನು ತಾನಾಗಿಯೇ ಅರಿಕೆಮಾಡದಿರುವುದಾದರೂ, ಹಿರಿಯರೇ ಅವನ ಬಳಿಗೆ ಹೋದಾಗ ಅವನು ಪಾಪವನ್ನು ಒಪ್ಪಿಕೊಂಡು ಪಶ್ಚಾತ್ತಾಪವನ್ನು ತೋರಿಸುವಂತೆಯೂ ಪ್ರಚೋದಿಸಲ್ಪಡಬಹುದು. ಏಕೆಂದರೆ ನಾತಾನನು ದಾವೀದನ ಬಳಿಗೆ ಹೋಗಿ ಮಾತಾಡಿದಾಗ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪಪಟ್ಟನು. ಹೀಗೆ, ಹಿರಿಯರಿಂದ ಕೊಡಲ್ಪಡುವ ಬೆಂಬಲವು, ಒಬ್ಬ ಪಾಪಿಯು ಪುನಃ ಅದೇ ತಪ್ಪನ್ನು ಮಾಡದಂತೆ ನೆರವು ನೀಡುತ್ತದೆ ಮತ್ತು ಪದೇ ಪದೇ ಪಾಪವನ್ನು ಮಾಡುವ ಮೂಲಕ ಕಲ್ಲೆದೆಯವನಾಗುವುದರಿಂದ ಉಂಟಾಗುವ ಗಂಭೀರವಾದ ಪರಿಣಾಮಗಳನ್ನು ತಡೆಯುತ್ತದೆ.​—ಇಬ್ರಿಯ 10:​26-31.

ಒಬ್ಬನು ಯಾವ ಕೃತ್ಯಗಳ ಬಗ್ಗೆ ನಾಚಿಕೆಪಡುತ್ತಾನೋ ಅವುಗಳ ಬಗ್ಗೆ ಇತರರಿಗೆ ತಿಳಿಸಿ, ಕ್ಷಮೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ಖಂಡಿತವಾಗಿಯೂ ಸುಲಭದ ಕೆಲಸವೇನಲ್ಲ. ಇದಕ್ಕೆ ಆಂತರಿಕ ಬಲದ ಅಗತ್ಯವಿದೆ. ಆದರೂ, ಇದಕ್ಕಿರುವ ಬದಲಿ ಮಾರ್ಗದ ಕುರಿತು ಒಂದು ಕ್ಷಣ ಆಲೋಚಿಸಿರಿ. ತನ್ನ ಗಂಭೀರ ಪಾಪದ ಬಗ್ಗೆ ಸಭೆಯಲ್ಲಿರುವ ಹಿರಿಯರಿಗೆ ತಿಳಿಸಲು ತಪ್ಪಿಹೋದ ಒಬ್ಬ ವ್ಯಕ್ತಿಯು ಹೇಳಿದ್ದು: “ನನ್ನ ಹೃದಯದಲ್ಲಿ ನೋವಿನ ಅನಿಸಿಕೆಯಾಗುತ್ತಿತ್ತು ಮತ್ತು ಆ ನೋವು ಹೋಗಲೇ ಇಲ್ಲ. ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ನನ್ನ ಪ್ರಯತ್ನಗಳನ್ನು ಇನ್ನೂ ಹೆಚ್ಚಿಸಿದೆ, ಆದರೆ ಆ ಅಸ್ವಸ್ಥಕರ ಅನಿಸಿಕೆ ಮಾತ್ರ ಹಾಗೇ ಉಳಿಯಿತು.” ಪ್ರಾರ್ಥನೆಯಲ್ಲಿ ದೇವರ ಬಳಿ ಪಾಪ ನಿವೇದನೆಮಾಡಿಕೊಂಡರೆ ಸಾಕು ಎಂಬುದು ಅವನ ಅನಿಸಿಕೆಯಾಗಿತ್ತು. ಆದರೆ ಅದಷ್ಟೇ ಸಾಕಾಗುವುದಿಲ್ಲ ಎಂಬುದು ಅವನಿಗೆ ಸ್ಪಷ್ಟವಾಗತೊಡಗಿತು, ಏಕೆಂದರೆ ಅರಸನಾದ ದಾವೀದನಿಗೆ ಆದಂಥ ಅನಿಸಿಕೆಗಳು ಇವನಿಗೂ ಆದವು. (ಕೀರ್ತನೆ 51:​8, 11) ಹಿರಿಯರ ಮೂಲಕ ಯೆಹೋವನು ಒದಗಿಸುವಂತಹ ಪ್ರೀತಿಯ ಸಹಾಯವನ್ನು ಅಂಗೀಕರಿಸುವುದು ಎಷ್ಟು ಉತ್ತಮವಾದದ್ದಾಗಿದೆ!