ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೇನನ್ನು ನಂಬುತ್ತೀರೊ ಅದಕ್ಕೆ ಆಧಾರವೇನು?

ನೀವೇನನ್ನು ನಂಬುತ್ತೀರೊ ಅದಕ್ಕೆ ಆಧಾರವೇನು?

ನೀವೇನನ್ನು ನಂಬುತ್ತೀರೊ ಅದಕ್ಕೆ ಆಧಾರವೇನು?

ನಂಬುವುದರ ಅರ್ಥ, ಒಂದು ವಿಷಯವನ್ನು ಸತ್ಯ, ಯಥಾರ್ಥ ಅಥವಾ ನೈಜವೆಂದು ಅಂಗೀಕರಿಸುವುದೇ ಆಗಿದೆ. ಪ್ರತಿಯೊಬ್ಬ ವ್ಯಕ್ತಿಗೆ, “ವಿಚಾರ, ಮನಸ್ಸಾಕ್ಷಿ ಮತ್ತು ಧರ್ಮ ಸ್ವಾತಂತ್ರ್ಯವನ್ನು ಪಡೆಯುವ ಹಕ್ಕು” ಇದೆ ಮತ್ತು ಇದನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಇಂಗ್ಲಿಷ್‌) ಎಂಬ ದಸ್ತಾವೇಜು ಸಮರ್ಥಿಸುತ್ತದೆ. ಒಬ್ಬ ವ್ಯಕ್ತಿಯು ಬಯಸುವಲ್ಲಿ “ತನ್ನ ಧರ್ಮ ಅಥವಾ ನಂಬಿಕೆಯನ್ನು ಬದಲಾಯಿಸುವ” ಸ್ವಾತಂತ್ರ್ಯವು ಈ ಹಕ್ಕಿನಲ್ಲಿ ಒಳಗೂಡಿದೆ.

ಆದರೆ ಒಬ್ಬ ವ್ಯಕ್ತಿಯು ತನ್ನ ಧರ್ಮ ಅಥವಾ ನಂಬಿಕೆಯನ್ನು ಏಕೆ ಬದಲಾಯಿಸಲು ಬಯಸುವನು? “ನನಗೆ ನನ್ನ ಸ್ವಂತ ನಂಬಿಕೆಗಳಿವೆ ಮತ್ತು ಅವುಗಳಿಂದ ನಾನು ತೃಪ್ತನಾಗಿದ್ದೇನೆ” ಎಂಬುದು ಹೆಚ್ಚಿನವರು ವ್ಯಕ್ತಪಡಿಸುವ ಸಾಮಾನ್ಯ ಅಭಿಪ್ರಾಯವಾಗಿದೆ. ಆ ನಂಬಿಕೆಗಳು ತಪ್ಪಾಗಿರುವುದಾದರೂ, ಅವುಗಳಿಂದ ಯಾರಿಗೂ ಹಾನಿಯಾಗುವುದಿಲ್ಲವೆಂದು ಅನೇಕರಿಗನಿಸುತ್ತದೆ. ಉದಾಹರಣೆಗಾಗಿ, ಭೂಮಿಯು ಚಪ್ಪಟೆಯಾಗಿದೆ ಎಂದು ನಂಬುವ ವ್ಯಕ್ತಿಗೆ ಸ್ವತಃ ಯಾವುದೇ ಹಾನಿಯಾಗುವುದಿಲ್ಲ ಅಥವಾ ಬೇರೆ ಯಾರಿಗೂ ಹಾನಿಯಾಗುವುದಿಲ್ಲ. “ಭಿನ್ನಾಭಿಪ್ರಾಯಪಡಲು ಸಮ್ಮತಿಸು” ಎಂದು ಕೆಲವರು ಹೇಳುತ್ತಾರೆ. ಇದು ಬುದ್ಧಿವಂತಿಕೆಯ ಸಂಗತಿಯೊ? ಜೊತೆ ಡಾಕ್ಟರ್‌ಗಳಲ್ಲಿ ಒಬ್ಬನು, ಶವಾಗಾರದಲ್ಲಿ ಹೆಣಗಳನ್ನು ಸ್ಪರ್ಶಿಸಿದ ನಂತರ ತಾನು ನೇರವಾಗಿ ಆಸ್ಪತ್ರೆಯ ವಾರ್ಡಿಗೆ ಹೋಗಿ ರೋಗಿಗಳನ್ನು ಪರೀಕ್ಷಿಸಬಹುದೆಂದು ನಂಬುತ್ತಾ ಇರುವಲ್ಲಿ, ಅವನ ಈ ಭಿನ್ನಾಭಿಪ್ರಾಯವನ್ನು ಇನ್ನೊಬ್ಬ ಡಾಕ್ಟರನು ಸಮ್ಮತಿಸುವನೋ?

ಧರ್ಮದ ವಿಷಯಕ್ಕೆ ಬರುವಾಗ, ತಪ್ಪಾದ ನಂಬಿಕೆಗಳಿಂದಾಗಿ ಬಹಳಷ್ಟು ಹಾನಿಯಾಗಿದೆಯೆಂದು ಇತಿಹಾಸವು ತೋರಿಸುತ್ತದೆ. ಮಧ್ಯ ಯುಗಗಳ ಧರ್ಮಯುದ್ಧಗಳೆಂದು ಕರೆಯಲಾದ ಹೋರಾಟಗಳ ಸಮಯದಲ್ಲಿ ಧಾರ್ಮಿಕ ಮುಖಂಡರು, “ಕ್ರೈಸ್ತ ಹಠೋತ್ಸಾಹಿಗಳು ನಿರ್ದಯಿ ಹಿಂಸಾಚಾರವನ್ನು ನಡೆಸುವಂತೆ ಹುರಿದುಂಬಿಸಿ”ದಾಗ ಪರಿಣಮಿಸಿದ ಘೋರ ಕೃತ್ಯಗಳ ಕುರಿತಾಗಿ ಯೋಚಿಸಿರಿ. ಅಥವಾ, ಇತ್ತೀಚಿನ ಒಂದು ಆಂತರಿಕ ಯುದ್ಧದಲ್ಲಿ ಭಾಗವಹಿಸಿದ ಆಧುನಿಕ ದಿನದ “ಕ್ರೈಸ್ತ” ಬಂದೂಕುಧಾರಿಗಳ ಕುರಿತಾಗಿ ಯೋಚಿಸಿರಿ. ಇವರು, ಮಧ್ಯ ಯುಗಗಳ ಯೋಧರು ತಮ್ಮ ಕತ್ತಿಗಳ ಹಿಡಿಗಳಲ್ಲಿ ಸಂತರ ಹೆಸರುಗಳನ್ನು ಬರೆಯುತ್ತಿದ್ದಂತೆ, ತಮ್ಮ ಬಂದೂಕುಗಳ ದಪ್ಪ ತುದಿಗಳಲ್ಲಿ, ಕನ್ಯೆ ಮರಿಯಳ ಚಿತ್ರಗಳನ್ನು ಅಂಟಿಸಿದ್ದರು. ತಾವೇನನ್ನು ಮಾಡುತ್ತಿದ್ದೇವೊ ಅದು ಸರಿಯಾಗಿದೆ ಎಂದು ಈ ಎಲ್ಲ ಹಠೋತ್ಸಾಹಿಗಳು ನಂಬಿದರು. ಆದರೆ, ಈ ಯುದ್ಧದಲ್ಲಿ ಮತ್ತು ಇನ್ನಿತರ ಧಾರ್ಮಿಕ ಸಂಘರ್ಷಗಳು ಹಾಗೂ ಹೋರಾಟಗಳಲ್ಲಿ ಯಾವುದೋ ಗಂಭೀರವಾದ ತಪ್ಪು ಇತ್ತೆಂಬುದು ಸುವ್ಯಕ್ತ.

ಇಂದು ಇಷ್ಟೊಂದು ಗಲಿಬಿಲಿ ಮತ್ತು ಘರ್ಷಣೆಗಳು ಏಕಿವೆ? ಪಿಶಾಚನಾದ ಸೈತಾನನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿದ್ದಾನೆ ಎಂಬುದು ಬೈಬಲ್‌ ಕೊಡುವ ಉತ್ತರವಾಗಿದೆ. (ಪ್ರಕಟನೆ 12:9; 2 ಕೊರಿಂಥ 4:4; 11:3) ದುಃಖಕರವಾಗಿ ಅನೇಕ ಧಾರ್ಮಿಕ ಜನರು ‘ನಾಶನಮಾರ್ಗದಲ್ಲಿರುವರು,’ ಯಾಕಂದರೆ ಅವರು “ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ”ಗಳ ಮೂಲಕ ಸೈತಾನನಿಂದ ವಂಚಿಸಲ್ಪಡುವರು ಎಂದು ಅಪೊಸ್ತಲ ಪೌಲನು ಎಚ್ಚರಿಸಿದನು. ಅಂಥವರು, ‘ರಕ್ಷಣೆಯನ್ನು ಕೊಡಬಹುದಾಗಿದ್ದ ಸತ್ಯದ ಮೇಲೆ ಪ್ರೀತಿಯನ್ನಿಡದೆ,’ ‘ಸುಳ್ಳನ್ನು ನಂಬುತ್ತಾರೆ’ ಎಂದು ಪೌಲನು ಹೇಳಿದನು. (2 ಥೆಸಲೊನೀಕ 2:​9-12) ನೀವು ಒಂದು ಸುಳ್ಳನ್ನು ನಂಬುವ ಸಾಧ್ಯತೆಯನ್ನು ಹೇಗೆ ಕಡಿಮೆಗೊಳಿಸಬಹುದು? ವಾಸ್ತವದಲ್ಲಿ ನೀವೇನನ್ನು ನಂಬುತ್ತಿದ್ದೀರೊ ಅದನ್ನು ನಂಬುವುದೇಕೆ?

ಚಿಕ್ಕಂದಿನಿಂದಲೂ ನಂಬುತ್ತಾ ಬಂದಿದ್ದೀರೊ?

ಪ್ರಾಯಶಃ ನಿಮ್ಮ ಕುಟುಂಬವು ನಿಮಗೆ ಚಿಕ್ಕಂದಿನಿಂದಲೂ ಈ ನಂಬಿಕೆಗಳನ್ನು ಕಲಿಸುತ್ತಾ ಬಂದಿದೆ. ಹಾಗೆ ಕಲಿಸಿದ್ದು ಒಂದು ಒಳ್ಳೆಯ ಸಂಗತಿಯಾಗಿದೆ. ಯಾಕೆಂದರೆ ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವಂತೆ ದೇವರು ಬಯಸುತ್ತಾನೆ. (ಧರ್ಮೋಪದೇಶಕಾಂಡ 6:​4-9; 11:​18-21) ಉದಾಹರಣೆಗಾಗಿ, ಯುವಕನಾಗಿದ್ದ ತಿಮೊಥೆಯನು ತನ್ನ ತಾಯಿ ಮತ್ತು ಅಜ್ಜಿಗೆ ಕಿವಿಗೊಡುವುದರಿಂದ ತುಂಬ ಪ್ರಯೋಜನವನ್ನು ಪಡೆದನು. (2 ತಿಮೊಥೆಯ 1:5; 3:​14, 15) ಹೆತ್ತವರು ಏನನ್ನು ನಂಬುತ್ತಾರೊ ಅದಕ್ಕಾಗಿ ಗೌರವವನ್ನು ತೋರಿಸುವಂತೆ ಶಾಸ್ತ್ರವಚನಗಳು ಉತ್ತೇಜಿಸುತ್ತವೆ. (ಜ್ಞಾನೋಕ್ತಿ 1:8; ಎಫೆಸ 6:1) ಆದರೆ ನಿಮ್ಮ ಹೆತ್ತವರು ಕೆಲವೊಂದು ವಿಷಯಗಳನ್ನು ನಂಬುತ್ತಾರೆಂಬ ಮಾತ್ರಕ್ಕೆ, ನೀವು ಕೂಡ ಆ ವಿಷಯಗಳನ್ನೇ ನಂಬಬೇಕೆಂದು ನಿಮ್ಮ ಸೃಷ್ಟಿಕರ್ತನು ಉದ್ದೇಶಿಸುತ್ತಾನೊ? ಹಿಂದಿನ ಸಂತತಿಗಳು ಏನನ್ನು ನಂಬಿದವೊ ಅದರ ಬಗ್ಗೆ ಯೋಚಿಸದೆಯೇ ಅವುಗಳಿಗೆ ಅಂಟಿಕೊಳ್ಳುವುದು ವಾಸ್ತವದಲ್ಲಿ ಅಪಾಯಕಾರಿಯಾಗಿರಬಲ್ಲದು.​—ಕೀರ್ತನೆ 78:8; ಆಮೋಸ 2:4.

ಒಮ್ಮೆ, ಯೇಸು ಕ್ರಿಸ್ತನು ಒಬ್ಬ ಸಮಾರ್ಯ ಸ್ತ್ರೀಯನ್ನು ಭೇಟಿಯಾದನು. ಅವಳು ಬಾಲ್ಯಾವಸ್ಥೆಯಿಂದಲೇ ಸಮಾರ್ಯ ಧರ್ಮವನ್ನು ನಂಬಿಕೊಂಡು ಬೆಳೆದಿದ್ದಳು. (ಯೋಹಾನ 4:20) ಅವಳಿಗೆ ಇಷ್ಟವಿರುವಂಥದ್ದನ್ನು ನಂಬಲು ಅವಳಿಗಿರುವ ಹಕ್ಕನ್ನು ಯೇಸು ಗೌರವಿಸಿದನು. ಆದರೆ ಅದೇ ಸಮಯದಲ್ಲಿ ಅವಳಿಗೆ ಈ ವಿಷಯವನ್ನೂ ತಿಳಿಸಿದನು: “ನೀವು ಅರಿಯದೇ ಇರುವಂಥದನ್ನು ಆರಾಧಿಸುವವರು.” ವಾಸ್ತವದಲ್ಲಿ ಅವಳ ಅನೇಕ ಧಾರ್ಮಿಕ ನಂಬಿಕೆಗಳು ತಪ್ಪಾಗಿದ್ದವು, ಮತ್ತು ಅವಳು ದೇವರನ್ನು ಸ್ವೀಕಾರಾರ್ಹವಾಗಿ, ಅಂದರೆ “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸ”ಲು ಬಯಸುವುದಾದರೆ, ತನ್ನ ನಂಬಿಕೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದೀತೆಂದು ಅವನು ಅವಳಿಗೆ ಹೇಳಿದನು. ಅವಳ ನೆಚ್ಚಿನ ಧಾರ್ಮಿಕ ನಂಬಿಕೆಗಳಿಗೆ ಅಂಟಿಕೊಂಡಿರುವ ಬದಲು, ಸಮಯಾನಂತರ ಅವಳು ಮತ್ತು ಇನ್ನಿತರರು, ಯೇಸು ಕ್ರಿಸ್ತನ ಮೂಲಕ ಪ್ರಕಟಿಸಲ್ಪಟ್ಟ “ನಂಬಿಕೆಗೆ ವಿಧೇಯ”ರಾಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ.​—ಯೋಹಾನ 4:​21-24, 39-41; ಅ. ಕೃತ್ಯಗಳು 6:7, NW.

ಅವುಗಳನ್ನು ನಂಬುವಂತೆ ಶಿಕ್ಷಣಪಡೆದಿದ್ದೀರೊ?

ಜ್ಞಾನದ ವಿಶೇಷ ಕ್ಷೇತ್ರಗಳ ಅನೇಕ ಶಿಕ್ಷಕರು ಮತ್ತು ಅಧಿಕಾರಿಗಳು ತುಂಬ ಮಾನಕ್ಕೆ ಅರ್ಹರಾಗಿದ್ದಾರೆ. ಆದರೆ, ಸಂಪೂರ್ಣವಾಗಿ ತಪ್ಪಾಗಿದ್ದ ವಿಷಯಗಳ ಸುಪ್ರಸಿದ್ಧ ಶಿಕ್ಷಕರ ಉದಾಹರಣೆಗಳಿಂದಲೂ ಇತಿಹಾಸವು ತುಂಬಿದೆ. ಉದಾಹರಣೆಗಾಗಿ, ಗ್ರೀಕ್‌ ತತ್ತ್ವಜ್ಞಾನಿ ಅರಿಸ್ಟಾಟಲನು ವೈಜ್ಞಾನಿಕ ವಿಷಯಗಳ ಬಗ್ಗೆ ಬರೆದ ಎರಡು ಪುಸ್ತಕಗಳ ಕುರಿತು ಇತಿಹಾಸಗಾರ ಬಟ್ರಂಡ್‌ ರಸಲ್‌ ಹೇಳಿದ್ದೇನೆಂದರೆ, “ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಆ ಎರಡೂ ಪುಸ್ತಕಗಳಲ್ಲಿನ ಒಂದೇ ಒಂದು ವಾಕ್ಯವನ್ನು ಸಹ ಅಂಗೀಕರಿಸಲು ಸಾಧ್ಯವಿಲ್ಲ.” ಆಧುನಿಕ ದಿನದ ಅಧಿಕಾರಿಗಳು ಸಹ ಅನೇಕವೇಳೆ ತೀವ್ರವಾಗಿ ತಪ್ಪಾದ ತರ್ಕಸಿದ್ಧಾಂತಗಳನ್ನು ರೂಪಿಸುತ್ತಾರೆ. “ವಾಯುವಿಗಿಂತ ಭಾರವಾದ ಹಾರುವ ಯಂತ್ರಗಳಿರಲು ಸಾಧ್ಯವೇ ಇಲ್ಲ” ಎಂದು ಲಾರ್ಡ್‌ ಕೇವಿನ್‌ ಎಂಬ ಬ್ರಿಟಿಷ್‌ ವಿಜ್ಞಾನಿಯೊಬ್ಬರು 1895ರಲ್ಲಿ ತುಂಬ ಭರವಸೆಯಿಂದ ಹೇಳಿದರು. ಆದುದರಿಂದ ಒಬ್ಬ ಬುದ್ಧಿವಂತ ವ್ಯಕ್ತಿಯು, ಅಧಿಕಾರವುಳ್ಳ ಯಾವುದೊ ವ್ಯಕ್ತಿಯು ಒಂದು ವಿಷಯವನ್ನು ಹೇಳಿದ ಮಾತ್ರಕ್ಕೆ ಅದು ಸತ್ಯವೆಂದು ಕಣ್ಮುಚ್ಚಿಕೊಂಡು ನಂಬುವುದಿಲ್ಲ.​—ಕೀರ್ತನೆ 146:3.

ಧಾರ್ಮಿಕ ಶಿಕ್ಷಣದ ವಿಷಯದಲ್ಲೂ ಇದೇ ರೀತಿಯಲ್ಲಿ ಎಚ್ಚರಿಕೆ ವಹಿಸುವುದು ಆವಶ್ಯಕ. ಅಪೊಸ್ತಲ ಪೌಲನು ತನ್ನ ಧಾರ್ಮಿಕ ಶಿಕ್ಷಕರಿಂದ ಚೆನ್ನಾಗಿ ಶಿಕ್ಷಿತನಾಗಿದ್ದನು ಮತ್ತು “[ತನ್ನ] ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ”ದ್ದನು. ಆದರೆ ತನ್ನ ಪೂರ್ವಜರ ಸಾಂಪ್ರದಾಯಿಕ ನಂಬಿಕೆಗಳಿಗಾಗಿ ಅವನಿಗಿದ್ದ ಹುರುಪು ವಾಸ್ತವದಲ್ಲಿ ಅವನಿಗೆ ಸಮಸ್ಯೆಗಳನ್ನು ಉಂಟುಮಾಡಿತು. ಅವನು “ದೇವರ ಸಭೆಯನ್ನು ಅತ್ಯಂತವಾಗಿ ಹಿಂಸೆಪಡಿಸಿ ಹಾಳು ಮಾಡು”ವಂತೆ ಅದು ನಡೆಸಿತು. (ಗಲಾತ್ಯ 1:​13, 14; ಯೋಹಾನ 16:​2, 3) ಇದಕ್ಕಿಂತ ಕೆಟ್ಟ ಸಂಗತಿಯೇನೆಂದರೆ, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವಂತೆ ಅವನನ್ನು ನಡೆಸಬಹುದಾಗಿದ್ದ ಪ್ರಭಾವಗಳನ್ನು ವಿರೋಧಿಸುತ್ತಾ, ಅವನು ಹೀಗೆ ‘ಮುಳ್ಳುಗೋಲನ್ನು ಒದೆಯುತ್ತಿದ್ದನು.’ ಪೌಲನು ತನ್ನ ನಂಬಿಕೆಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಿಕ್ಕಾಗಿ ಸ್ವತಃ ಯೇಸುವೇ ನಾಟಕೀಯ ರೀತಿಯಲ್ಲಿ ಅಡ್ಡಬರಬೇಕಾಯಿತು.​—ಅ. ಕೃತ್ಯಗಳು 9:​1-6; 26:14.

ವಾರ್ತಾಮಾಧ್ಯಮದ ಪ್ರಭಾವ

ವಾರ್ತಾಮಾಧ್ಯಮವು ನಿಮ್ಮ ನಂಬಿಕೆಗಳನ್ನು ಬಹಳಷ್ಟು ಮಟ್ಟಿಗೆ ಪ್ರಭಾವಿಸಿರಬಹುದು. ವಾರ್ತಾಮಾಧ್ಯಮದಲ್ಲಿ ವಾಕ್‌ಸ್ವಾತಂತ್ರ್ಯ ಇದೆಯೆಂಬ ವಿಷಯದಲ್ಲಿ ಹೆಚ್ಚಿನ ಜನರು ಸಂತೋಷಪಡುತ್ತಾರೆ. ಇದು ಅವರಿಗೆ ಉಪಯುಕ್ತಕರವಾಗಿರುವ ಮಾಹಿತಿಯನ್ನು ಲಭ್ಯಗೊಳಿಸುತ್ತದೆ. ಆದರೆ ವಾರ್ತಾಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಿರುವ ಮತ್ತು ನಿಯಂತ್ರಿಸುತ್ತಿರುವ ಶಕ್ತಿಶಾಲಿ ಪ್ರಭಾವಗಳಿವೆ. ಅವುಗಳ ಮೂಲಕ ಸಾದರಪಡಿಸಲ್ಪಡುವ ಮಾಹಿತಿಯು ಅನೇಕವೇಳೆ ಪೂರ್ವಾಭಿಪ್ರಾಯವುಳ್ಳದ್ದಾಗಿರುತ್ತದೆ ಮತ್ತು ಇದು ನಿಮ್ಮ ಯೋಚನಾಧಾಟಿಯನ್ನು ಅಗೋಚರವಾಗಿ ಬಾಧಿಸಬಲ್ಲದು.

ಅಷ್ಟುಮಾತ್ರವಲ್ಲದೆ, ತಮ್ಮ ಶ್ರೋತೃವೃಂದವನ್ನು ಹೆಚ್ಚಿಸಲಿಕ್ಕಾಗಿ ಅಥವಾ ಆಕರ್ಷಿಸಲಿಕ್ಕಾಗಿ ವಾರ್ತಾಮಾಧ್ಯಮದವರು, ಕೌತುಕವನ್ನೆಬ್ಬಿಸುವಂಥ ಮತ್ತು ಅಸಾಮಾನ್ಯವಾಗಿರುವಂಥ ವಿಷಯಗಳನ್ನು ಪ್ರಸಾರಮಾಡುತ್ತಾರೆ. ಕೆಲವೇ ವರ್ಷಗಳ ಹಿಂದೆ ಯಾವುದನ್ನು ಸಾರ್ವಜನಿಕರ ಕಿವಿಗಳು ಅಥವಾ ಕಣ್ಣುಗಳಿಗೆ ಬೀಳಿಸುವುದು ಅಯೋಗ್ಯವೆಂದು ನೆನಸಲಾಗುತ್ತಿತ್ತೊ ಅಂಥ ವಿಷಯಗಳೇ ಇಂದು ಸರ್ವಸಾಮಾನ್ಯವಾಗಿ ಬಿಟ್ಟಿವೆ. ನಿಧಾನವಾಗಿಯಾದರೂ ಸರಿ, ನಡವಳಿಕೆಯ ಕುರಿತಾಗಿ ಸ್ಥಾಪಿಸಲ್ಪಟ್ಟಿದ್ದಂಥ ಮಟ್ಟಗಳ ಮೇಲೆ ಖಂಡಿತವಾಗಿಯೂ ದಾಳಿಮಾಡಲಾಗುತ್ತಿದ್ದು, ಅವು ಶಿಥಿಲವಾಗುತ್ತಾ ಇವೆ. ಜನರ ಯೋಚನಾಧಾಟಿಯೇ ಮೆಲ್ಲಮೆಲ್ಲನೆ ವಿರೂಪಗೊಳ್ಳುತ್ತಿದೆ. “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಅವರು ನಂಬಲಾರಂಭಿಸುತ್ತಿದ್ದಾರೆ.​—ಯೆಶಾಯ 5:20; 1 ಕೊರಿಂಥ 6:​9, 10.

ನಂಬಿಕೆಗಾಗಿ ದೃಢವಾದ ಆಧಾರವನ್ನು ಕಂಡುಕೊಳ್ಳುವುದು

ಮನುಷ್ಯರ ವಿಚಾರಗಳು ಮತ್ತು ತತ್ತ್ವಜ್ಞಾನಗಳ ಮೇಲೆ ನಂಬಿಕೆಗಳನ್ನು ಕಟ್ಟುವುದು, ಉಸುಬಿನ ಮೇಲೆ ಮನೆಯನ್ನು ಕಟ್ಟುವಂತಿದೆ. (ಮತ್ತಾಯ 7:26; 1 ಕೊರಿಂಥ 1:​19, 20) ಹಾಗಾದರೆ, ದೃಢಭರವಸೆಯೊಂದಿಗೆ ನೀವು ನಿಮ್ಮ ನಂಬಿಕೆಗಳನ್ನು ಯಾವುದರ ಮೇಲೆ ಆಧಾರಿಸಬಲ್ಲಿರಿ? ನಿಮ್ಮ ಸುತ್ತಲಿರುವ ಲೋಕವನ್ನು ಪರಿಶೋಧಿಸುವ ಮತ್ತು ಆತ್ಮಿಕ ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳುವಂಥ ವಿವೇಕವನ್ನು ದೇವರು ನಿಮಗೆ ಕೊಟ್ಟಿರುವುದರಿಂದ, ಆ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಪಡೆಯುವ ಮಾಧ್ಯಮವನ್ನೂ ಆತನು ಒದಗಿಸಿರಲೇಬೇಕೆಂಬುದು ಅರ್ಥಮಾಡಿಕೊಳ್ಳಬಲ್ಲ ಸಂಗತಿಯಲ್ಲವೊ? (1 ಯೋಹಾನ 5:20) ಖಂಡಿತವಾಗಿಯೂ! ಆದರೆ ಆರಾಧನೆಯ ವಿಷಯದಲ್ಲಿ ಯಾವುದು ಸತ್ಯ, ಯಥಾರ್ಥ ಅಥವಾ ನೈಜವಾದದ್ದೆಂದು ನೀವು ಹೇಗೆ ನಿರ್ಧರಿಸಬಲ್ಲಿರಿ? ದೇವರ ವಾಕ್ಯವಾಗಿರುವ ಬೈಬಲ್‌ ಮಾತ್ರ ಇದನ್ನು ಮಾಡುವುದಕ್ಕಾಗಿರುವ ಏಕಮಾತ್ರ ಆಧಾರವಾಗಿದೆ ಎಂದು ಹೇಳಲು ನಾವು ಹಿಂಜರಿಯುವುದಿಲ್ಲ.​—ಯೋಹಾನ 17:17; 2 ತಿಮೊಥೆಯ 3:​16, 17.

“ಆದರೆ ಸ್ವಲ್ಪ ನಿಲ್ಲಿ. ಯಾರ ಬಳಿ ಬೈಬಲ್‌ ಇದೆಯೊ ಅವರೇ ಈ ಲೋಕದಲ್ಲಿ ಅತಿ ಹೆಚ್ಚಿನ ಸಂಘರ್ಷ ಮತ್ತು ಗಲಿಬಿಲಿಯನ್ನು ಉಂಟುಮಾಡಿದ್ದಾರಲ್ಲವೇ?” ಎಂದು ಒಬ್ಬ ವ್ಯಕ್ತಿಯು ಹೇಳಬಹುದು. ಬೈಬಲನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿರುವ ಧಾರ್ಮಿಕ ಮುಖಂಡರೇ ಗಲಿಬಿಲಿಗೊಳಿಸುವ ಮತ್ತು ಪರಸ್ಪರ ಅಸಂಬದ್ಧವಾಗಿರುವ ವಿಚಾರಗಳನ್ನು ಉತ್ಪಾದಿಸಿದ್ದಾರೆಂಬುದು ನಿಜ. ಅವರು ತಮ್ಮ ನಂಬಿಕೆಗಳನ್ನು ಬೈಬಲಿನ ಮೇಲೆ ಆಧಾರಿಸಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಅಪೊಸ್ತಲ ಪೇತ್ರನು ಅವರನ್ನು “ನಾಶಕರವಾದ ಮತಭೇದಗಳನ್ನು” ಉಂಟುಮಾಡುವ ‘ಸುಳ್ಳುಪ್ರವಾದಿಗಳು’ ಮತ್ತು “ಸುಳ್ಳುಬೋಧಕರು” ಎಂದು ವರ್ಣಿಸುತ್ತಾನೆ. (2 ಪೇತ್ರ 2:​1, 2) ಹೀಗಿದ್ದರೂ, “ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷಕೊಡುವದೇ ಒಳ್ಳೇದು” ಎಂದು ಪೇತ್ರನು ಬರೆಯುತ್ತಾನೆ.​—2 ಪೇತ್ರ 1:19; ಕೀರ್ತನೆ 119:105.

ನಮ್ಮ ನಂಬಿಕೆಗಳನ್ನು, ಬೈಬಲ್‌ ಏನನ್ನು ಕಲಿಸುತ್ತದೊ ಅದರೊಂದಿಗೆ ಹೋಲಿಸಿ ನೋಡುವಂತೆ ಅದು ನಮ್ಮನ್ನು ಉತ್ತೇಜಿಸುತ್ತದೆ. (1 ಯೋಹಾನ 4:1) ಹೀಗೆ ಮಾಡುವುದರಿಂದ ತಮ್ಮ ಜೀವಿತಗಳಿಗೆ ಒಂದು ಉದ್ದೇಶ ಮತ್ತು ಸ್ಥಿರತೆ ಸಿಕ್ಕಿದೆಯೆಂಬುದಕ್ಕೆ ಈ ಪತ್ರಿಕೆಯ ಲಕ್ಷಗಟ್ಟಲೆ ಮಂದಿ ವಾಚಕರು ಸಾಕ್ಷ್ಯವನ್ನು ಕೊಡಬಲ್ಲರು. ಆದುದರಿಂದ ಸದ್ಗುಣಿಗಳಾದ ಬೆರೋಯದವರಂತಿರಿ. ನೀವೇನನ್ನು ನಂಬಬೇಕೆಂದು ನಿರ್ಣಯಿಸುವ ಮುಂಚೆ, ‘ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸಿರಿ.’ (ಅ. ಕೃತ್ಯಗಳು 17:11) ಇದನ್ನು ಮಾಡುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ. ಆದರೆ, ನೀವೇನನ್ನು ನಂಬಲು ಬಯಸುತ್ತೀರೊ ಅದು ಖಂಡಿತವಾಗಿಯೂ ನಿಮ್ಮ ನಿರ್ಣಯವಾಗಿರುತ್ತದೆ. ಹೀಗಿದ್ದರೂ, ನಿಮ್ಮ ನಂಬಿಕೆಗಳು ಮಾನವ ಬುದ್ಧಿ ಮತ್ತು ಇಚ್ಛೆಗಳಿಂದಲ್ಲ, ಬದಲಾಗಿ ದೇವರ ಪ್ರಕಟಿತ ಸತ್ಯ ವಾಕ್ಯದಿಂದ ರೂಪಿಸಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿವೇಕಭರಿತವಾದದ್ದಾಗಿದೆ.​—1 ಥೆಸಲೊನೀಕ 2:13; 5:21.

[ಪುಟ 6ರಲ್ಲಿರುವ ಚಿತ್ರಗಳು]

ನೀವು ಭರವಸೆಯಿಂದ ನಿಮ್ಮ ನಂಬಿಕೆಗಳನ್ನು ಬೈಬಲಿನ ಮೇಲೆ ಆಧಾರಿಸಬಹುದು