ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷದ ಕುರಿತಾದ ದೇವರ ನಿಯಮವನ್ನು ಉಲ್ಲಂಘಿಸುವ ಉಪಾಯವನ್ನು, ಏದೆನ್‌ ತೋಟದಲ್ಲಿನ ಸರ್ಪವು ಹವ್ವಳಿಗೆ ಹೇಗೆ ತಿಳಿಯಪಡಿಸಿತು?

ಆದಿಕಾಂಡ 3:1 ಹೇಳುವುದು: ‘ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು​—ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಿತು.’ ಸರ್ಪವು ಹವ್ವಳೊಂದಿಗೆ ಹೇಗೆ ಸಂವಾದ ಮಾಡಿದ್ದಿರಬಹುದು ಎಂಬ ವಿಷಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಅದು ದೇಹಭಾಷೆಯ ಮೂಲಕ ಅಥವಾ ಭಾವಾಭಿನಯದ ಮೂಲಕ ಸಂವಾದಿಸಿತು ಎಂಬುದು ಒಂದು ಕಲ್ಪನೆಯಾಗಿದೆ. ಉದಾಹರಣೆಗೆ, ಇಂಗ್ಲೆಂಡ್‌ನ ಪಾದ್ರಿಯಾದ ಜೋಸೆಫ್‌ ಬೆನ್ಸನ್‌ ಹೇಳಿದ್ದು: “ಕೆಲವು ರೀತಿಯ ಸಂಜ್ಞೆಗಳ ಮೂಲಕ ಹಾಗೆ ಮಾಡಿದಂತೆ ತೋರುತ್ತದೆ. ವಾಸ್ತವದಲ್ಲಿ, ಆ ಕಾಲದಲ್ಲಿ ಆಲೋಚನಾ ಸಾಮರ್ಥ್ಯ ಮತ್ತು ಮಾತು, ಸರ್ಪಗಳ ಪ್ರಸಿದ್ಧ ಪ್ರವೃತ್ತಿಯಾಗಿತ್ತು ಎಂಬುದು ಇನ್ನಿತರರ ಊಹೆಯಾಗಿತ್ತು, . . . ಆದರೆ ಇದರ ಕುರಿತು ಯಾವುದೇ ಪುರಾವೆ ಇಲ್ಲ.”

ಆದರೂ, ಕೇವಲ ದೇಹಭಾಷೆಯನ್ನು ಮಾತ್ರ ಉಪಯೋಗಿಸುವ ಮೂಲಕ, ನಿಷೇಧಿತ ಹಣ್ಣನ್ನು ತಿಂದರೆ ಅವಳು ದೇವರಂತಾಗುವಳು, ಒಳ್ಳೇದರ ಕೆಟ್ಟದ್ದರ ಭೇದವನ್ನು ನಿರ್ಧರಿಸಲು ಶಕ್ತಳಾಗುವಳು ಎಂಬ ವಿಚಾರವನ್ನು ಸರ್ಪವು ಹವ್ವಳಿಗೆ ಹೇಗೆ ತಿಳಿಯಪಡಿಸಸಾಧ್ಯವಿತ್ತು? ಅಷ್ಟುಮಾತ್ರವಲ್ಲ, ಆ ಸರ್ಪದಿಂದ ಎಬ್ಬಿಸಲ್ಪಟ್ಟ ಪ್ರಶ್ನೆಗೆ ಉತ್ತರಿಸುವ ಮೂಲಕ ಹವ್ವಳು ಸಹ ಸಂಭಾಷಣೆಯಲ್ಲಿ ಒಳಗೂಡಿದಳು. (ಆದಿಕಾಂಡ 3:​2-5) ಸರ್ಪವು ಕೇವಲ ಸಂಜ್ಞೆಗಳು ಮತ್ತು ದೇಹಭಾಷೆಯ ಮೂಲಕ ಹವ್ವಳೊಂದಿಗೆ ಸಂವಾದಿಸಿತು ಎಂಬ ದೃಷ್ಟಿಕೋನವು, ಅವಳು ಸಹ ಭಾವಾಭಿನಯವನ್ನು ಉಪಯೋಗಿಸಿ ಪ್ರತ್ಯುತ್ತರಿಸಿದಳು ಎಂಬ ತೀರ್ಮಾನಕ್ಕೆ ನಡಿಸಸಾಧ್ಯವಿದೆ. ಆದರೆ ಅವಳು ಮಾತಾಡಿದಳೆಂದು ಬೈಬಲು ಹೇಳುತ್ತದೆ.

ಈ ಘಟನೆಗೆ ಕೈತೋರಿಸುತ್ತಾ, ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಎಚ್ಚರಿಕೆ ನೀಡಿದ್ದು: ‘ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕೆಟ್ಟುಹೋದೀತೆಂದು ನನಗೆ ಭಯವುಂಟು.’ ಪೌಲನು ಯಾವ ಅಪಾಯದ ಕುರಿತು ಮಾತಾಡಿದನೋ ಅದು, ‘ಸುಳ್ಳು ಅಪೊಸ್ತಲರು ಮತ್ತು ಮೋಸಗಾರರಿಂದ’ ಬಂದದ್ದಾಗಿತ್ತು. ಅಂತಹ “ಅತಿಶ್ರೇಷ್ಠರಾದ ಅಪೊಸ್ತಲರು” ಒಡ್ಡಿದ ಬೆದರಿಕೆಯು, ದೇಹಭಾಷೆ ಮತ್ತು ಭಾವಾಭಿನಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಅವರ ಮಾತುಗಳನ್ನು, ಅಂದರೆ ಇತರರನ್ನು ದಾರಿತಪ್ಪಿಸಲಿಕ್ಕಾಗಿ ಮಾತಾಡಲ್ಪಟ್ಟ ಅವರ ಕುಯುಕ್ತಿಯ ನುಡಿಗಳನ್ನು ಒಳಗೂಡಿತ್ತು.​—2 ಕೊರಿಂಥ 11:​3-5, 13.

ಏದೆನ್‌ ತೋಟದಲ್ಲಿ ಹವ್ವಳನ್ನು ತಪ್ಪುದಾರಿಗೆ ನಡೆಸಲಿಕ್ಕಾಗಿ ಮಾತು ಉಪಯೋಗಿಸಲ್ಪಟ್ಟಿತ್ತಾದರೂ, ಅಕ್ಷರಾರ್ಥ ಸರ್ಪಕ್ಕೆ ಧ್ವನಿ ತಂತು ಇತ್ತು ಎಂದು ಸೂಚಿಸಲು ಯಾವ ಆಧಾರವೂ ಇಲ್ಲ. ವಾಸ್ತವದಲ್ಲಿ ಅದಕ್ಕೆ ಅವುಗಳ ಆವಶ್ಯಕತೆಯಿರಲಿಲ್ಲ. ದೇವರ ದೂತನು ಕತ್ತೆಯ ಮೂಲಕ ಬಿಳಾಮನೊಂದಿಗೆ ಮಾತಾಡಿದಾಗ, ಒಬ್ಬ ಮಾನವನಿಗೆ ಇರುವಂತಹ ರೀತಿಯ ಜಟಿಲ ಧ್ವನಿಪೆಟ್ಟಿಗೆಯ ಆವಶ್ಯಕತೆ ಆ ಪ್ರಾಣಿಗಿರಲಿಲ್ಲ. (ಅರಣ್ಯಕಾಂಡ 22:​26-31) ಈ ‘ಮೂಕಪಶುವು ಮನುಷ್ಯ ಸ್ವರದಿಂದ ಮಾತಾಡಿದಾಗ,’ ಆ ಕ್ರಿಯೆಗಾಗಿರುವ ಶಕ್ತಿಯು ಆತ್ಮಲೋಕದಿಂದ ಬಂದದ್ದಾಗಿತ್ತು ಎಂಬುದಂತೂ ಸ್ಪಷ್ಟ.​—2 ಪೇತ್ರ 2:16.

ಹವ್ವಳೊಂದಿಗೆ ಮಾತಾಡಿದ ಸರ್ಪದ ಹಿಂದಿದ್ದ ಆತ್ಮ ಜೀವಿಯು ಬೈಬಲಿನಲ್ಲಿ, “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಗುರುತಿಸಲ್ಪಟ್ಟಿದೆ. (ಪ್ರಕಟನೆ 12:9) ಹವ್ವಳು ಕೇಳಿಸಿಕೊಂಡ ಕರ್ಣಗೋಚರ ಮಾತುಗಳು ಮತ್ತು ಅವಳ ಪ್ರತಿಕ್ರಿಯೆಯು, ‘ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವ’ ಸೈತಾನನಿಂದ ಪ್ರೇರೇಪಿಸಲ್ಪಟ್ಟದ್ದಾಗಿತ್ತು.​—2 ಕೊರಿಂಥ 11:14.

[ಪುಟ 27ರಲ್ಲಿರುವ ಚಿತ್ರ]

“ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ”