ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇತನವನ್ನು ತೋರಿಸುತ್ತಾ ಇರಿ

ಒಳ್ಳೇತನವನ್ನು ತೋರಿಸುತ್ತಾ ಇರಿ

ಒಳ್ಳೇತನವನ್ನು ತೋರಿಸುತ್ತಾ ಇರಿ

“ಬೆಳಕಿನ ಫಲವು ಎಲ್ಲ ರೀತಿಯ ಒಳ್ಳೇತನ ಹಾಗೂ ನೀತಿ ಮತ್ತು ಸತ್ಯವನ್ನು ಒಳಗೂಡಿದೆ.”​—ಎಫೆಸ 5:​9, NW.

1. ತಾವು ಕೀರ್ತನೆ 31:19ರೊಂದಿಗೆ ಸಮ್ಮತಿಸುತ್ತೇವೆ ಎಂಬುದನ್ನು ಇಂದು ಲಕ್ಷಾಂತರ ಮಂದಿ ಹೇಗೆ ತೋರಿಸುತ್ತಾರೆ?

ಯಾವನೇ ಮಾನವನು ಮಾಡಸಾಧ್ಯವಿರುವ ಅತ್ಯಂತ ಪ್ರಶಂಸಾರ್ಹ ಒಳಿತು, ಯೆಹೋವನಿಗೆ ಮಹಿಮೆಯನ್ನು ತರುವುದೇ ಆಗಿದೆ. ಇಂದು, ದೇವರ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸುವ ಮೂಲಕ ಲಕ್ಷಾಂತರ ಮಂದಿ ಹೀಗೆ ಮಾಡುತ್ತಿದ್ದಾರೆ. ಯೆಹೋವನ ನಿಷ್ಠಾವಂತ ಸಾಕ್ಷಿಗಳೋಪಾದಿ, “ನಿನಗೆ ಭಯಪಡುವವರಿಗೋಸ್ಕರ ನೀನು ಜಾಗರೂಕತೆಯಿಂದ ಕಾಪಾಡಿಕೊಂಡಿರುವ ನಿನ್ನ ಒಳ್ಳೇತನವು ಎಷ್ಟು ಹೇರಳವಾಗಿದೆ!” ಎಂದು ಹಾಡಿದಂಥ ಕೀರ್ತನೆಗಾರನೊಂದಿಗೆ ನಾವು ಮನಃಪೂರ್ವಕವಾಗಿ ಸಮ್ಮತಿಸುತ್ತೇವೆ.​—ಕೀರ್ತನೆ 31:​19, NW.

2, 3. ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸವು ಒಳ್ಳೇ ನಡತೆಯಿಂದ ಬೆಂಬಲಿಸಲ್ಪಡದಿರುವಲ್ಲಿ ಏನು ಸಂಭವಿಸಸಾಧ್ಯವಿದೆ?

2 ಯೆಹೋವನ ಕಡೆಗೆ ಪೂಜ್ಯಭಾವನೆಯಿಂದ ಕೂಡಿದ ಭಯವು, ಆತನ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಅದು ‘ಯೆಹೋವನನ್ನು ಸ್ತುತಿಸುವಂತೆ, ಕೊಂಡಾಡುವಂತೆ ಹಾಗೂ ಆತನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸು’ವಂತೆ ನಮ್ಮನ್ನು ಹುರಿದುಂಬಿಸುತ್ತದೆ. (ಕೀರ್ತನೆ 145:​10-13) ಆದುದರಿಂದಲೇ, ರಾಜ್ಯದ ಕುರಿತಾಗಿ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸುತ್ತೇವೆ. (ಮತ್ತಾಯ 24:14; 28:​19, 20) ನಮ್ಮ ಸಾರುವ ಚಟುವಟಿಕೆಯು ಒಳ್ಳೇ ನಡತೆಯಿಂದ ಬೆಂಬಲಿಸಲ್ಪಡಬೇಕು ಎಂಬುದಂತೂ ಖಂಡಿತ. ಇಲ್ಲದಿದ್ದರೆ, ಯೆಹೋವನ ಪವಿತ್ರ ನಾಮದ ಮೇಲೆ ನಾವು ಕಳಂಕವನ್ನು ತರಸಾಧ್ಯವಿದೆ.

3 ದೇವರನ್ನು ಆರಾಧಿಸುತ್ತೇವೆ ಎಂದು ಅನೇಕರು ಹೇಳಿಕೊಳ್ಳುತ್ತಾರಾದರೂ, ಅವರ ನಡತೆಯು ಆತನ ಪ್ರೇರಿತ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಮಟ್ಟಗಳಿಗೆ ಹೊಂದಿಕೆಯಲ್ಲಿರುವುದಿಲ್ಲ. ಒಳ್ಳೇದನ್ನು ಮಾಡುತ್ತಿದ್ದೇವೆಂದು ಹೇಳಿಕೊಂಡರೂ ಅದಕ್ಕನುಸಾರ ಜೀವಿಸದಿದ್ದಂಥ ಕೆಲವರ ಕುರಿತು ಅಪೊಸ್ತಲ ಪೌಲನು ಬರೆದುದು: “ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ? . . . ನಿಮ್ಮ ದೆಸೆಯಿಂದ ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತದೆಂದು ಬರೆದದೆಯಲ್ಲಾ.”​—ರೋಮಾಪುರ 2:​21, 22, 24.

4. ನಮ್ಮ ಒಳ್ಳೇ ನಡತೆಯು ಯಾವ ಪರಿಣಾಮವನ್ನು ಬೀರುತ್ತದೆ?

4 ಯೆಹೋವನ ನಾಮದ ಮೇಲೆ ಕಳಂಕವನ್ನು ತರುವುದಕ್ಕೆ ಬದಲಾಗಿ, ನಮ್ಮ ಒಳ್ಳೇ ನಡತೆಯ ಮೂಲಕ ನಾವು ಅದನ್ನು ಮಹಿಮೆಗೇರಿಸಲು ಪ್ರಯತ್ನಿಸುತ್ತೇವೆ. ಇದು ಕ್ರೈಸ್ತ ಸಭೆಯ ಹೊರಗಿರುವವರ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಿದೆ. ಒಂದು ವಿಷಯವೇನೆಂದರೆ, ಇದು ನಮ್ಮ ವಿರೋಧಿಗಳ ಬಾಯಿಯನ್ನು ಮುಚ್ಚಿಸಲು ನಮಗೆ ಸಹಾಯಮಾಡುತ್ತದೆ. (1 ಪೇತ್ರ 2:15) ಅದಕ್ಕಿಂತಲೂ ಪ್ರಾಮುಖ್ಯವಾಗಿ, ನಮ್ಮ ಒಳ್ಳೇ ನಡತೆಯು, ಜನರನ್ನು ಯೆಹೋವನ ಸಂಸ್ಥೆಯ ಕಡೆಗೆ ಸೆಳೆಯುತ್ತದೆ ಮತ್ತು ಅವರು ಸಹ ಆತನಿಗೆ ಮಹಿಮೆ ತರುವಂತೆ ಮತ್ತು ನಿತ್ಯಜೀವವನ್ನು ಪಡೆದುಕೊಳ್ಳುವಂತೆ ಅವರಿಗೆ ಮಾರ್ಗವನ್ನು ತೆರೆಯುತ್ತದೆ.​—ಅ. ಕೃತ್ಯಗಳು 13:48.

5. ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸತಕ್ಕದ್ದು?

5 ನಾವು ಅಪರಿಪೂರ್ಣರಾಗಿರುವುದರಿಂದ, ಯೆಹೋವನಿಗೆ ಅಗೌರವವನ್ನು ಉಂಟುಮಾಡಸಾಧ್ಯವಿರುವ ಹಾಗೂ ಸತ್ಯಾನ್ವೇಷಿಗಳನ್ನು ಎಡವಿಸಬಲ್ಲ ನಡತೆಯನ್ನು ಹೇಗೆ ದೂರಮಾಡಬಲ್ಲೆವು? ವಾಸ್ತವದಲ್ಲಿ, ಒಳ್ಳೇತನವನ್ನು ತೋರಿಸುವುದರಲ್ಲಿ ನಾವು ಹೇಗೆ ಯಶಸ್ಸನ್ನು ಪಡೆಯಸಾಧ್ಯವಿದೆ?

ಬೆಳಕಿನ ಫಲ

6. ‘ಕತ್ತಲೆಗೆ ಸಂಬಂಧಿಸಿದ ಫಲರಹಿತ ಕೃತ್ಯಗಳಲ್ಲಿ’ ಕೆಲವು ಯಾವುವು, ಆದರೆ ಕ್ರೈಸ್ತರ ನಡುವೆ ಯಾವ ಫಲವು ಕಂಡುಬರಬೇಕು?

6 ಸಮರ್ಪಿತ ಕ್ರೈಸ್ತರೋಪಾದಿ, ‘ಕತ್ತಲೆಗೆ ಸಂಬಂಧಿಸಿದ ಫಲರಹಿತ ಕೃತ್ಯಗಳನ್ನು’ ದೂರಮಾಡಲು ನಮಗೆ ಸಹಾಯಮಾಡುವಂಥ ಯಾವುದೋ ಸಂಗತಿಯಲ್ಲಿ ನಾವು ಆನಂದವನ್ನು ಪಡೆದುಕೊಳ್ಳುತ್ತೇವೆ. ಕತ್ತಲೆಗೆ ಸಂಬಂಧಿಸಿದ ಈ ಕೃತ್ಯಗಳಲ್ಲಿ, ಸುಳ್ಳು ಹೇಳುವುದು, ಕದಿಯುವುದು, ನಿಂದಾತ್ಮಕ ಮಾತುಗಳನ್ನಾಡುವುದು, ಲೈಂಗಿಕತೆಯ ವಿಷಯದಲ್ಲಿ ಅಹಿತಕರವಾಗಿ ಮಾತಾಡುವುದು, ಹೊಲಸು ಮಾತು, ಹುಚ್ಚು ಮಾತು ಹಾಗೂ ಕುಡಿಕತನಗಳಂಥ, ದೇವರಿಗೆ ಅಗೌರವವನ್ನು ಉಂಟುಮಾಡುವ ಕೃತ್ಯಗಳು ಒಳಗೂಡಿವೆ. (ಎಫೆಸ 4:​25, 28, 31; 5:​3, 4, 11, 12, 18) ಇಂತಹ ಕೃತ್ಯಗಳಲ್ಲಿ ನಮ್ಮನ್ನು ಒಳಗೂಡಿಸಿಕೊಳ್ಳುವುದಕ್ಕೆ ಬದಲಾಗಿ, ನಾವು “ಬೆಳಕಿನ ಮಕ್ಕಳಂತೆ ನಡೆದುಕೊಳ್ಳುತ್ತಾ” ಇರಬೇಕು. “ಬೆಳಕಿನ ಫಲವು ಎಲ್ಲ ರೀತಿಯ ಒಳ್ಳೇತನ ಹಾಗೂ ನೀತಿ ಮತ್ತು ಸತ್ಯವನ್ನು ಒಳಗೂಡಿದೆ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ಎಫೆಸ 5:​8, 9, NW) ಆದುದರಿಂದ, ಬೆಳಕಿನಲ್ಲಿ ನಡೆಯುವ ಮೂಲಕ ನಾವು ಒಳ್ಳೇತನವನ್ನು ತೋರಿಸುತ್ತಾ ಮುಂದುವರಿಯಲು ಶಕ್ತರಾಗಿರುತ್ತೇವೆ. ಆದರೆ ಇದು ಯಾವ ರೀತಿಯ ಬೆಳಕಾಗಿದೆ?

7. ಒಳ್ಳೇತನದ ಫಲವನ್ನು ತೋರಿಸುತ್ತಾ ಮುಂದುವರಿಯಲಿಕ್ಕಾಗಿ ನಾವೇನು ಮಾಡಬೇಕು?

7 ನಾವು ಅಪರಿಪೂರ್ಣರಾಗಿರುವುದಾದರೂ, ಆತ್ಮಿಕ ಬೆಳಕಿನಲ್ಲಿ ಮುಂದುವರಿಯುವಲ್ಲಿ ನಾವು ಒಳ್ಳೇತನವನ್ನು ತೋರಿಸಸಾಧ್ಯವಿದೆ. “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 119:105) ‘ಎಲ್ಲ ರೀತಿಯ ಒಳ್ಳೇತನದ’ ಮೂಲಕ ನಾವು ‘ಬೆಳಕಿನ ಫಲವನ್ನು’ ತೋರಿಸುತ್ತಾ ಮುಂದುವರಿಯಲು ಬಯಸುವಲ್ಲಿ, ದೇವರ ವಾಕ್ಯದಲ್ಲಿ ಕಂಡುಬರುವ, ಕ್ರೈಸ್ತ ಪ್ರಕಾಶನಗಳಲ್ಲಿ ಜಾಗರೂಕತೆಯಿಂದ ಪರೀಕ್ಷಿಸಲ್ಪಟ್ಟಿರುವ, ಮತ್ತು ನಮ್ಮ ಆರಾಧನಾ ಕೂಟಗಳಲ್ಲಿ ಕ್ರಮವಾಗಿ ಚರ್ಚಿಸಲ್ಪಡುವ ಆತ್ಮಿಕ ಬೆಳಕನ್ನು ನಾವು ಸದುಪಯೋಗಿಸಿಕೊಳ್ಳುತ್ತಾ ಇರಬೇಕು. (ಲೂಕ 12:42; ರೋಮಾಪುರ 15:4; ಇಬ್ರಿಯ 10:​24, 25) ‘ಲೋಕಕ್ಕೆ ಬೆಳಕಾಗಿರುವ’ ಮತ್ತು “[ಯೆಹೋವನ] ಪ್ರಭಾವದ ಪ್ರಕಾಶ”ವಾಗಿರುವ ಯೇಸು ಕ್ರಿಸ್ತನ ಮಾದರಿಗೆ ಮತ್ತು ಬೋಧನೆಗಳಿಗೆ ನಾವು ವಿಶೇಷ ಗಮನವನ್ನು ಸಹ ಕೊಡುವ ಆವಶ್ಯಕತೆಯಿದೆ.​—ಯೋಹಾನ 8:12; ಇಬ್ರಿಯ 1:​1-3.

ಆತ್ಮದ ಫಲ

8. ನಾವೇಕೆ ಒಳ್ಳೇತನವನ್ನು ತೋರಿಸಸಾಧ್ಯವಿದೆ?

8 ಆತ್ಮಿಕ ಬೆಳಕು ನಾವು ಒಳ್ಳೇತನವನ್ನು ತೋರಿಸುವಂತೆ ನಮಗೆ ಸಹಾಯಮಾಡುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದಲ್ಲದೆ, ದೇವರ ಪವಿತ್ರಾತ್ಮದಿಂದ ಅಥವಾ ಕ್ರಿಯಾಶೀಲ ಶಕ್ತಿಯಿಂದ ನಾವು ಮಾರ್ಗದರ್ಶಿಸಲ್ಪಡುವ ಕಾರಣ, ಈ ಗುಣವನ್ನು ತೋರ್ಪಡಿಸಲು ನಾವು ಶಕ್ತರಾಗಿದ್ದೇವೆ. ಒಳ್ಳೇತನವು ‘ದೇವರಾತ್ಮದಿಂದ ಉಂಟಾಗುವ ಫಲವಾಗಿದೆ.’ (ಗಲಾತ್ಯ 5:​22, 23, NW) ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ನೀವು ನಿಮ್ಮನ್ನು ಅಧೀನಪಡಿಸಿಕೊಳ್ಳುವಲ್ಲಿ, ಅದು ನಿಮ್ಮಲ್ಲಿ ಒಳ್ಳೇತನದ ಅದ್ಭುತ ಫಲವನ್ನು ಉಂಟುಮಾಡುವುದು.

9. ಲೂಕ 11:​9-13ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳೊಂದಿಗೆ ಹೊಂದಿಕೆಯಲ್ಲಿ ನಾವು ಹೇಗೆ ಕ್ರಿಯೆಗೈಯಸಾಧ್ಯವಿದೆ?

9 ಒಳ್ಳೇತನವೆಂಬ ಆತ್ಮದ ಫಲವನ್ನು ತೋರಿಸುವ ಮೂಲಕ ಯೆಹೋವನನ್ನು ಸಂತೋಷಪಡಿಸಲಿಕ್ಕಾಗಿರುವ ನಮ್ಮ ತೀವ್ರಾಪೇಕ್ಷೆಯು, ಯೇಸುವಿನ ಈ ಮುಂದಿನ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ನಮ್ಮನ್ನು ಪ್ರಚೋದಿಸತಕ್ಕದ್ದು: “ಬೇಡಿಕೊಳ್ಳಿರಿ [“ಬೇಡಿಕೊಳ್ಳುತ್ತಾ ಇರಿ,” NW], ನಿಮಗೆ ದೊರೆಯುವದು; ಹುಡುಕಿರಿ [“ಹುಡುಕುತ್ತಾ ಇರಿ,” NW], ನಿಮಗೆ ಸಿಕ್ಕುವದು, ತಟ್ಟಿರಿ [“ತಟ್ಟುತ್ತಾ ಇರಿ,” NW], ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು. ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ? ಹಾಗಾದರೆ [ಅಪರಿಪೂರ್ಣರು ಹಾಗೂ ತುಲನಾತ್ಮಕವಾಗಿ] ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:​9-13) ನಾವು ಒಳ್ಳೇತನವೆಂಬ ಆತ್ಮದ ಫಲವನ್ನು ತೋರಿಸುತ್ತಾ ಮುಂದುವರಿಯಸಾಧ್ಯವಾಗುವಂತೆ, ಯೆಹೋವನ ಆತ್ಮಕ್ಕಾಗಿ ಪ್ರಾರ್ಥಿಸುವ ಮೂಲಕ ಯೇಸುವಿನ ಸಲಹೆಯನ್ನು ಅನುಸರಿಸೋಣ.

‘ಒಳ್ಳೇದನ್ನು ಮಾಡುತ್ತಾ ಇರಿ’

10. ಯೆಹೋವನ ಒಳ್ಳೇತನದ ಯಾವ ಅಂಶಗಳು ವಿಮೋಚನಕಾಂಡ 34:​6, 7ರಲ್ಲಿ ಉದ್ಧರಿಸಲ್ಪಟ್ಟಿವೆ?

10 ದೇವರ ವಾಕ್ಯದ ಆತ್ಮಿಕ ಬೆಳಕಿನಿಂದ ಹಾಗೂ ದೇವರ ಪವಿತ್ರಾತ್ಮದ ಸಹಾಯದಿಂದ ನಾವು ‘ಒಳ್ಳೇದನ್ನು ಮಾಡುತ್ತಾ ಇರ’ಸಾಧ್ಯವಿದೆ. (ರೋಮಾಪುರ 13:3) ಕ್ರಮವಾದ ಬೈಬಲ್‌ ಅಧ್ಯಯನದ ಮೂಲಕ ಯೆಹೋವನ ಒಳ್ಳೇತನವನ್ನು ಹೇಗೆ ಅನುಕರಿಸುವವರಾಗಿರಸಾಧ್ಯವಿದೆ ಎಂಬುದರ ಕುರಿತು ನಾವು ಹೆಚ್ಚೆಚ್ಚು ವಿಷಯಗಳನ್ನು ಕಲಿಯುತ್ತೇವೆ. ವಿಮೋಚನಕಾಂಡ 34:​6, 7ರಲ್ಲಿ (NW) ದಾಖಲಿಸಲ್ಪಟ್ಟಿರುವ ಮೋಶೆಗೆ ತಿಳಿಸಲ್ಪಟ್ಟ ಪ್ರಕಟನೆಯಲ್ಲಿ ಉದ್ಧರಿಸಲ್ಪಟ್ಟ ದೇವರ ಒಳ್ಳೇತನದ ಅಂಶಗಳನ್ನು ಹಿಂದಿನ ಲೇಖನವು ಪರಿಗಣಿಸಿತು. ಅಲ್ಲಿ ನಾವು ಓದುವುದು: “ಯೆಹೋವ, ಯೆಹೋವ, ಕರುಣೆಯೂ ದಯೆಯೂ ಉಳ್ಳ ದೇವರು, ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯೂ ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧನೂ, ಸಾವಿರಾರು ತಲೆಗಳ ವರೆಗೆ ಪ್ರೀತಿಪೂರ್ವಕ ದಯೆಯನ್ನು ಉಳಿಸಿಕೊಳ್ಳುವಾತನೂ, ದೋಷ ಮತ್ತು ಅಪರಾಧ ಹಾಗೂ ಪಾಪವನ್ನು ಕ್ಷಮಿಸುವವನೂ, ಆದರೆ ಯಾವುದೇ ಕಾರಣಕ್ಕೂ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸದೆ ಬಿಡದವನೂ . . . ಆಗಿದ್ದಾನೆ.” ಯೆಹೋವನ ಒಳ್ಳೇತನದ ಈ ಅಂಶಗಳ ಕಡೆಗೆ ನಿಕಟವಾಗಿ ಗಮನ ಹರಿಸುವುದು, ‘ಒಳ್ಳೇದನ್ನು ಮಾಡುತ್ತಾ ಇರು’ವಂತೆ ನಮಗೆ ಸಹಾಯಮಾಡುವುದು.

11. ಯೆಹೋವನು ಕರುಣಾಭರಿತನೂ ದಯಾಪರನೂ ಆಗಿದ್ದಾನೆ ಎಂಬ ಜ್ಞಾನದಿಂದ ನಾವು ಹೇಗೆ ಪ್ರಭಾವಿಸಲ್ಪಡಬೇಕು?

11 ಈ ದೈವಿಕ ಪ್ರಕಟನೆಯು, ಕರುಣಾಭರಿತರೂ ದಯಾಪರರೂ ಆಗಿರುವ ಮೂಲಕ ಯೆಹೋವನನ್ನು ಅನುಕರಿಸುವ ಆವಶ್ಯಕತೆಯ ಕುರಿತು ನಮಗೆ ಎಚ್ಚರಿಕೆ ನೀಡುತ್ತದೆ. “ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು” ಎಂದು ಯೇಸು ಹೇಳಿದನು. (ಮತ್ತಾಯ 5:7; ಲೂಕ 6:36) ಯೆಹೋವನು ದಯಾಪರನಾಗಿದ್ದಾನೆ ಎಂಬ ಅರಿವುಳ್ಳವರಾಗಿದ್ದು, ನಾವು ಯಾರಿಗೆ ಸಾರುತ್ತೇವೋ ಅವರನ್ನೂ ಒಳಗೊಂಡು ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ದಯಾಪರರಾಗಿರುವಂತೆ ಮತ್ತು ಹಿತಕರವಾಗಿರುವಂತೆ ನಾವು ಪ್ರಚೋದಿಸಲ್ಪಡುತ್ತೇವೆ. ಇದು ಪೌಲನ ಸಲಹೆಯೊಂದಿಗೆ ಹೊಂದಿಕೆಯಲ್ಲಿದೆ: “ನಿಮ್ಮ ಸಂಭಾಷಣೆ ಯಾವಾಗಲೂ ದಯಾಪರತೆಯುಳ್ಳದ್ದೂ ಉಪ್ಪಿನಿಂದ ರುಚಿಗೊಳಿಸಲ್ಪಟ್ಟದ್ದೂ ಆಗಿರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”​—ಕೊಲೊಸ್ಸೆ 4:6, NW.

12. (ಎ) ದೇವರು ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯಾಗಿರುವುದರಿಂದ, ಇತರರ ಕಡೆಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ಯೆಹೋವನ ಪ್ರೀತಿಪೂರ್ವಕ ದಯೆಯು ಏನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ?

12 ದೇವರು ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯಾಗಿರುವುದರಿಂದ, ‘ಒಳ್ಳೇದನ್ನು ಮಾಡುತ್ತಾ ಇರ’ಬೇಕೆಂಬ ನಮ್ಮ ಬಯಕೆಯು, ಜೊತೆ ವಿಶ್ವಾಸಿಗಳ ಚಿಕ್ಕ ಪುಟ್ಟ ತಪ್ಪುಗಳನ್ನು ಸಹಿಸಿಕೊಳ್ಳುವಂತೆ ಮತ್ತು ಅವರ ಒಳ್ಳೇ ಗುಣಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. (ಮತ್ತಾಯ 7:5; ಯಾಕೋಬ 1:19) ಯೆಹೋವನ ಪ್ರೀತಿಪೂರ್ವಕ ದಯೆಯು, ಅತಿ ಪರೀಕ್ಷಾತ್ಮಕ ಸನ್ನಿವೇಶಗಳ ಕೆಳಗೂ ನಿಷ್ಠಾವಂತ ಪ್ರೀತಿಯನ್ನು ತೋರಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಇದು ಖಂಡಿತವಾಗಿಯೂ ತುಂಬ ಅಪೇಕ್ಷಣೀಯವಾಗಿದೆ.​—ಜ್ಞಾನೋಕ್ತಿ 19:22.

13. ಯೆಹೋವನು ‘ಸತ್ಯದಲ್ಲಿ ಸಮೃದ್ಧ’ನಾಗಿದ್ದಾನೆ ಎಂಬುದನ್ನು ಪ್ರತಿಬಿಂಬಿಸಲಿಕ್ಕಾಗಿ ನಾವು ಹೇಗೆ ಕ್ರಿಯೆಗೈಯಬೇಕು?

13 ನಮ್ಮ ಸ್ವರ್ಗೀಯ ಪಿತನು ‘ಸತ್ಯದಲ್ಲಿ ಸಮೃದ್ಧ’ನಾಗಿರುವುದರಿಂದ, ‘ಸತ್ಯವಾದ ಮಾತುಗಳಿಂದ ಆತನ ಶುಶ್ರೂಷಕರೋಪಾದಿ ನಮ್ಮನ್ನು ಯೋಗ್ಯರಾಗಿ ನಡೆಸಿಕೊಳ್ಳಲು’ ನಾವು ಪ್ರಯತ್ನಿಸುತ್ತೇವೆ. (2 ಕೊರಿಂಥ 6:​3-7, NW) ಯೆಹೋವನು ಹಗೆಮಾಡುವಂಥ ಏಳು ವಿಷಯಗಳಲ್ಲಿ “ಸುಳ್ಳಿನ ನಾಲಿಗೆ” ಮತ್ತು “ಅಸತ್ಯವಾಡುವ ಸುಳ್ಳುಸಾಕ್ಷಿ”ಗಳೂ ಸೇರಿವೆ. (ಜ್ಞಾನೋಕ್ತಿ 6:​16-19) ಆದುದರಿಂದ, ದೇವರಿಗೆ ಸಂತೋಷವನ್ನುಂಟುಮಾಡುವ ನಮ್ಮ ಬಯಕೆಯು, ನಾವು ‘ಸುಳ್ಳಾಡುವದನ್ನು ಬಿಟ್ಟುಬಿಟ್ಟು ಸತ್ಯವನ್ನೇ ಆಡುವಂತೆ’ ನಮ್ಮನ್ನು ಪ್ರಚೋದಿಸಿದೆ. (ಎಫೆಸ 4:25) ಈ ಅತ್ಯಾವಶ್ಯಕ ವಿಧದಲ್ಲಿ ಒಳ್ಳೇತನವನ್ನು ತೋರ್ಪಡಿಸಲು ನಾವೆಂದಿಗೂ ತಪ್ಪದಿರೋಣ.

14. ನಾವೇಕೆ ಕ್ಷಮಿಸುವವರಾಗಿರಬೇಕು?

14 ಮೋಶೆಗೆ ನೀಡಲ್ಪಟ್ಟ ದೇವರ ಪ್ರಕಟನೆಯು, ನಾವು ಕ್ಷಮಿಸುವವರಾಗಿರುವಂತೆಯೂ ನಮ್ಮನ್ನು ಉತ್ತೇಜಿಸತಕ್ಕದ್ದು; ಏಕೆಂದರೆ ಯೆಹೋವನು ತಪ್ಪುಗಳನ್ನು ಕ್ಷಮಿಸಲು ಸಿದ್ಧನಿದ್ದಾನೆ. (ಮತ್ತಾಯ 6:​14, 15) ಯೆಹೋವನು ಪಶ್ಚಾತ್ತಾಪ ಪಡದಿರುವಂಥ ಪಾಪಿಗಳ ಮೇಲೆ ಶಿಕ್ಷೆಯನ್ನು ಬರಮಾಡುತ್ತಾನೆ ಎಂಬುದಂತೂ ನಿಶ್ಚಯ. ಆದುದರಿಂದ, ಸಭೆಯ ಆತ್ಮಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಾವು ಆತನ ಒಳ್ಳೇತನದ ಮಟ್ಟಗಳನ್ನು ಎತ್ತಿಹಿಡಿಯಬೇಕು.​—ಯಾಜಕಕಾಂಡ 5:1; 1 ಕೊರಿಂಥ 5:​11, 12; 1 ತಿಮೊಥೆಯ 5:22.

“ಚೆನ್ನಾಗಿ ನೋಡಿಕೊಳ್ಳಿರಿ”

15, 16. ಎಫೆಸ 5:​15-19ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಸಲಹೆಯು, ಒಳ್ಳೇತನವನ್ನು ತೋರಿಸುತ್ತಾ ಇರುವಂತೆ ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?

15 ನಮ್ಮ ಸುತ್ತಲೂ ಇರುವ ಕೆಟ್ಟತನದ ಮಧ್ಯೆಯೂ ಒಳ್ಳೇತನವನ್ನು ತೋರಿಸುತ್ತಾ ಮುಂದುವರಿಯಬೇಕಾದರೆ, ನಾವು ದೇವರಾತ್ಮಭರಿತರಾಗಿರಬೇಕು ಹಾಗೂ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಬಗ್ಗೆ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇದಕ್ಕೆ ಹೊಂದಿಕೆಯಲ್ಲಿ ಪೌಲನು ಎಫೆಸದಲ್ಲಿದ್ದ ಕ್ರೈಸ್ತರನ್ನು ಹೀಗೆ ಉತ್ತೇಜಿಸಿದನು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ. ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ [“ಆತ್ಮಿಕ ಹಾಡುಗಳಿಂದಲೂ,” NW] ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ [“ಯೆಹೋವನಿಗೆ,” NW] ಗಾನಮಾಡುತ್ತಾ” ಇರಿ. (ಎಫೆಸ 5:​15-19) ಕಷ್ಟಕರವಾಗಿರುವ ಈ ಕಡೇ ದಿವಸಗಳಲ್ಲಿ ಈ ಸಲಹೆಯು ಖಂಡಿತವಾಗಿಯೂ ನಮಗೆ ಸೂಕ್ತವಾದದ್ದಾಗಿದೆ.​—2 ತಿಮೊಥೆಯ 3:1.

16 ಒಂದುವೇಳೆ ನಾವು ಒಳ್ಳೇತನವನ್ನು ಅಭ್ಯಾಸಿಸುತ್ತಾ ಮುಂದುವರಿಯಬೇಕಾದರೆ, ದೈವಿಕ ವಿವೇಕವನ್ನು ಪಾಲಿಸುತ್ತಾ ಇರುವವರಂತೆ ನಾವು ನಡೆದುಕೊಳ್ಳುತ್ತಿದ್ದೇವೋ ಎಂಬುದನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿದೆ. (ಯಾಕೋಬ 3:17) ನಾವು ಗಂಭೀರವಾದ ಪಾಪಗಳನ್ನು ಮಾಡುವುದರಿಂದ ದೂರವಿರಬೇಕು ಮತ್ತು ಪವಿತ್ರಾತ್ಮಭರಿತರಾಗಿದ್ದು, ನಾವು ಅದರಿಂದ ಮಾರ್ಗದರ್ಶಿಸಲ್ಪಡುವಂತೆ ನಮ್ಮನ್ನು ಬಿಟ್ಟುಕೊಡಬೇಕು. (ಗಲಾತ್ಯ 5:​19-25) ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಕೊಡಲ್ಪಡುವ ಆತ್ಮಿಕ ಉಪದೇಶವನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ಒಳ್ಳೇದನ್ನು ಮಾಡುತ್ತಾ ಇರಸಾಧ್ಯವಿದೆ. ಎಫೆಸದವರಿಗೆ ಬರೆದ ಪೌಲನ ಮಾತುಗಳು, ನಮ್ಮ ಹೆಚ್ಚಿನ ಆರಾಧನಾ ಕೂಟಗಳಲ್ಲಿ, ಒಳ್ಳೇತನದಂಥ ಆತ್ಮಿಕ ಗುಣಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂಥ ‘ಆತ್ಮಿಕ ಹಾಡುಗಳನ್ನು’ ಹೃತ್ಪೂರ್ವಕವಾಗಿ ಹಾಡುವ ಮೂಲಕ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ ಎಂಬುದನ್ನು ಸಹ ನಮಗೆ ನೆನಪು ಹುಟ್ಟಿಸಬಹುದು.

17. ಗಂಭೀರವಾಗಿ ರೋಗಪೀಡಿತರಾದ ಕ್ರೈಸ್ತರ ಸನ್ನಿವೇಶಗಳು, ಅವರು ಕ್ರಮವಾಗಿ ಕೂಟಗಳಿಗೆ ಹಾಜರಾಗುವುದರಿಂದ ಅವರನ್ನು ತಡೆಯುತ್ತಿರುವುದಾದರೆ, ಅಂಥವರು ಯಾವ ವಿಷಯದಲ್ಲಿ ಖಾತ್ರಿಯಿಂದಿರಬಹುದು?

17 ಗಂಭೀರವಾಗಿ ರೋಗಪೀಡಿತರಾಗಿರುವ ಕಾರಣ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಅಶಕ್ತರಾಗಿರುವ ನಮ್ಮ ಜೊತೆ ವಿಶ್ವಾಸಿಗಳ ಕುರಿತಾಗಿ ಏನು? ಯಾವಾಗಲೂ ತಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ನೇರವಾಗಿ ಸಹವಾಸಮಾಡುವ ಮೂಲಕ ಯೆಹೋವನನ್ನು ಆರಾಧಿಸಲು ಅಸಮರ್ಥರಾಗಿರುವ ಕಾರಣ, ಅವರಿಗೆ ಜಜ್ಜಿಹೋದ ಅನಿಸಿಕೆಯಾಗುತ್ತಿರಬಹುದು. ಯೆಹೋವನು ಅವರ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುತ್ತಾನೆ, ಮತ್ತು ಅವರನ್ನು ಸತ್ಯದಲ್ಲಿ ಕಾಪಾಡುವನು, ತನ್ನ ಪವಿತ್ರಾತ್ಮವನ್ನು ಅವರಿಗೆ ಕೊಡುವನು ಹಾಗೂ ಒಳ್ಳೇದನ್ನು ಮಾಡುತ್ತಾ ಇರಲು ಅವರಿಗೆ ಸಹಾಯಮಾಡುವನು ಎಂಬ ವಿಷಯದಲ್ಲಿ ಅವರು ಖಾತ್ರಿಯಿಂದಿರಸಾಧ್ಯವಿದೆ.​—ಯೆಶಾಯ 57:15.

18. ಒಳ್ಳೇತನದ ಮಾರ್ಗವನ್ನು ಬೆನ್ನಟ್ಟುವಂತೆ ನಮಗೆ ಯಾವುದು ಸಹಾಯಮಾಡುವುದು?

18 ಒಳ್ಳೇತನದ ಮಾರ್ಗವನ್ನು ಬೆನ್ನಟ್ಟುವುದು, ನಾವು ನಮ್ಮ ಸಹವಾಸದ ವಿಷಯದಲ್ಲಿ ಜಾಗರೂಕರಾಗಿರುವುದನ್ನು ಮತ್ತು ‘ಒಳ್ಳೇದನ್ನು ಪ್ರೀತಿಸದಂಥ’ ಜನರಿಂದ ದೂರವಿರುವುದನ್ನು ಅಗತ್ಯಪಡಿಸುತ್ತದೆ. (2 ತಿಮೊಥೆಯ 3:​2-5; 1 ಕೊರಿಂಥ 15:33) ಅಂಥ ಸಲಹೆಯನ್ನು ಅನ್ವಯಿಸಿಕೊಳ್ಳುವುದು, ದೇವರ ಪವಿತ್ರಾತ್ಮದ ಮುನ್ನಡಿಸುವಿಕೆಗೆ ವ್ಯತಿರಿಕ್ತವಾಗಿ ಕ್ರಿಯೆಗೈಯುವ ಮೂಲಕ ‘ಅದನ್ನು ದುಃಖಪಡಿಸುವುದರಿಂದ’ ದೂರವಿರುವಂತೆ ನಮಗೆ ಸಹಾಯಮಾಡುತ್ತದೆ. (ಎಫೆಸ 4:30) ಅಷ್ಟುಮಾತ್ರವಲ್ಲ, ಯಾರ ಜೀವಿತಗಳು ತಾವು ಒಳ್ಳೇತನವನ್ನು ಪ್ರೀತಿಸುತ್ತೇವೆ ಮತ್ತು ಯೆಹೋವನ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತೇವೆ ಎಂಬ ಪುರಾವೆಯನ್ನು ನೀಡುತ್ತವೋ ಅಂಥವರೊಂದಿಗೆ ನಾವು ನಿಕಟವಾಗಿ ಸಹವಾಸಮಾಡುವಲ್ಲಿ, ಒಳ್ಳೇದನ್ನು ಮಾಡುವಂತೆ ನಮಗೆ ಸಹಾಯವು ನೀಡಲ್ಪಡುತ್ತದೆ.​—ಆಮೋಸ 5:15; ರೋಮಾಪುರ 8:14; ಗಲಾತ್ಯ 5:18.

ಒಳ್ಳೇತನವು ಅತ್ಯುತ್ತಮ ಫಲಿತಾಂಶಗಳನ್ನು ತರುತ್ತದೆ

19-21. ಒಳ್ಳೇತನವನ್ನು ತೋರಿಸುವುದರಿಂದ ಸಿಗುವ ಪರಿಣಾಮವನ್ನು ವ್ಯಕ್ತಪಡಿಸುವ ಅನುಭವಗಳನ್ನು ತಿಳಿಸಿರಿ.

19 ಆತ್ಮಿಕ ಬೆಳಕಿನಲ್ಲಿ ನಡೆಯುವುದು, ದೇವರಾತ್ಮದ ಮಾರ್ಗದರ್ಶನಕ್ಕೆ ಅಧೀನಪಡಿಸಿಕೊಳ್ಳುವುದು, ಮತ್ತು ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಚೆನ್ನಾಗಿ ನೋಡಿಕೊಳ್ಳುವುದು, ಯಾವುದು ಕೆಟ್ಟದ್ದಾಗಿದೆಯೋ ಅದನ್ನು ದೂರಮಾಡಲು ಮತ್ತು ‘ಒಳ್ಳೇದನ್ನು ಮಾಡುತ್ತಾ ಇರಲು’ ನಮಗೆ ಸಹಾಯಮಾಡುವುದು. ಇದು ಅತ್ಯುತ್ತಮ ಫಲಿತಾಂಶಗಳನ್ನು ಉತ್ಪಾದಿಸಬಲ್ಲದು. ದಕ್ಷಿಣ ಆಫ್ರಿಕದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ಸಾಂಗ್‌ಸೀಲೀಯ ಅನುಭವವನ್ನು ಪರಿಗಣಿಸಿರಿ. ಒಂದು ದಿನ ಬೆಳಗ್ಗೆ ಶಾಲೆಗೆ ಹೋಗುತ್ತಿರುವಾಗ, ಬ್ಯಾಂಕ್‌ನಲ್ಲಿ ಇಟ್ಟಿರುವ ತನ್ನ ಚಿಕ್ಕ ಉಳಿತಾಯದ ಮೊತ್ತವು ಎಷ್ಟಿದೆ ಎಂದು ತಿಳಿದುಕೊಳ್ಳಲು ಅವನು ಪ್ರಯತ್ನಿಸಿದನು. ಆಟೊಮ್ಯಾಟಿಕ್‌ ಟೆಲ್ಲರ್‌ ಯಂತ್ರವು, ಅವನ ಹಣಕ್ಕಿಂತ 42,000 ರ್ಯಾಂಡ್‌ಗಳಷ್ಟು (6,000 ಅಮೆರಿಕನ್‌ ಡಾಲರುಗಳಷ್ಟು) ಹೆಚ್ಚಿನ ಮೊತ್ತವನ್ನು ಸ್ಲಿಪ್‌ನ ಮೇಲೆ ತಪ್ಪಾಗಿ ತೋರಿಸಿತು. ಬ್ಯಾಂಕ್‌ನ ಸೆಕ್ಯುರಿಟಿ ಗಾರ್ಡ್‌ ಹಾಗೂ ಇನ್ನಿತರರು, ಆ ಹಣವನ್ನು ಆ ಬ್ಯಾಂಕ್‌ನಿಂದ ತೆಗೆದುಬಿಟ್ಟು, ಇನ್ನೊಂದು ಬ್ಯಾಂಕ್‌ನಲ್ಲಿ ಹೊಸ ಖಾತೆಯನ್ನು ತೆರೆದು ಡೆಪೊಸಿಟ್‌ ಮಾಡುವಂತೆ ಅವನನ್ನು ಉತ್ತೇಜಿಸಿದರು. ಅವನು ಯಾರೊಂದಿಗೆ ವಾಸಿಸುತ್ತಿದ್ದನೋ ಆ ಸಾಕ್ಷಿ ದಂಪತಿಯು ಮಾತ್ರ, ಅವನು ಆ ಹಣವನ್ನು ಬ್ಯಾಂಕ್‌ನಿಂದ ತೆಗೆದುಬಿಡದಿದ್ದಕ್ಕಾಗಿ ಅವನನ್ನು ಪ್ರಶಂಸಿಸಿದರು.

20 ಆ ಬ್ಯಾಂಕ್‌ ಕೆಲಸಮಾಡುತ್ತಿದ್ದ ವಾರದ ಇನ್ನೊಂದು ದಿನ, ಸಾಂಗ್‌ಸೀಲೀ ಆ ತಪ್ಪನ್ನು ಬ್ಯಾಂಕ್‌ಗೆ ವರದಿಸಿದನು. ಒಬ್ಬ ಶ್ರೀಮಂತ ವ್ಯಾಪಾರಿಯ ಅಕೌಂಟ್‌ ನಂಬರಿಗೆ ಹೋಲುವಂಥದ್ದೇ ಅಕೌಂಟ್‌ ನಂಬರ್‌ ಇವನಿಗೂ ಇದ್ದು, ಗೊತ್ತಿಲ್ಲದೆ ಆ ಶ್ರೀಮಂತನು ತಪ್ಪಾದ ಅಕೌಂಟಿನಲ್ಲಿ ಹಣವನ್ನು ಡೆಪೊಸಿಟ್‌ ಮಾಡುತ್ತಿದ್ದನು ಎಂಬುದು ಕಂಡುಕೊಳ್ಳಲ್ಪಟ್ಟಿತು. ಈ ಹಣದಲ್ಲಿ ಸ್ವಲ್ಪವನ್ನೂ ಸಾಂಗ್‌ಸೀಲೀ ತನಗಾಗಿ ಉಪಯೋಗಿಸಿಕೊಂಡಿರಲಿಲ್ಲವೆಂಬುದನ್ನು ನೋಡಿ ಆಶ್ಚರ್ಯಚಕಿತನಾದ ಆ ವ್ಯಾಪಾರಿಯು, “ನೀನು ಯಾವ ಧರ್ಮದವನು?” ಎಂದು ಕೇಳಿದನು. ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ ಎಂದು ಸಾಂಗ್‌ಸೀಲೀ ವಿವರಿಸಿದನು. ಅವನು ಬ್ಯಾಂಕ್‌ ಅಧಿಕಾರಿಗಳಿಂದ ಹೃತ್ಪೂರ್ವಕವಾಗಿ ಪ್ರಶಂಸಿಸಲ್ಪಟ್ಟನು. ಅವರು ಹೇಳಿದ್ದು: “ಎಲ್ಲರೂ ಯೆಹೋವನ ಸಾಕ್ಷಿಗಳಷ್ಟು ಪ್ರಾಮಾಣಿಕರಾಗಿರುತ್ತಿದ್ದರೆ ಎಷ್ಟು ಒಳ್ಳೇದಿರುತ್ತಿತ್ತು.” ನಿಜವಾಗಿಯೂ, ಪ್ರಾಮಾಣಿಕತೆ ಹಾಗೂ ಒಳ್ಳೇತನದ ಕ್ರಿಯೆಗಳು, ಇತರರು ಯೆಹೋವನನ್ನು ಮಹಿಮೆಪಡಿಸುವಂತೆ ಮಾಡಬಲ್ಲವು.​—ಇಬ್ರಿಯ 13:18.

21 ಒಳ್ಳೇತನದ ಕೃತ್ಯಗಳು ಅತ್ಯುತ್ತಮ ಪರಿಣಾಮವನ್ನು ಬೀರಬೇಕಾದರೆ, ಅವು ತುಂಬ ಗಮನಾರ್ಹವಾಗಿರಬೇಕೆಂದೇನಿಲ್ಲ. ಒಂದು ಉದಾಹರಣೆ ಹೀಗಿದೆ: ಸಮೋವದ ದ್ವೀಪಗಳಲ್ಲೊಂದರಲ್ಲಿ ಪೂರ್ಣ ಸಮಯದ ಸೇವಕನಾಗಿ ಸೇವೆಮಾಡುತ್ತಿರುವ ಒಬ್ಬ ಯುವ ಸಾಕ್ಷಿಯು ಸ್ಥಳಿಕ ಆಸ್ಪತ್ರೆಗೆ ಹೋಗಬೇಕಾಗಿತ್ತು. ಒಬ್ಬ ವೈದ್ಯನನ್ನು ಭೇಟಿಯಾಗಲಿಕ್ಕಾಗಿ ಜನರು ಕಾಯುತ್ತಿದ್ದರು; ಸಾಲಿನಲ್ಲಿ ತನ್ನ ನಂತರ ನಿಂತಿದ್ದ ಒಬ್ಬ ವೃದ್ಧ ಸ್ತ್ರೀಯು ತುಂಬ ಅಸ್ವಸ್ಥಳಾಗಿರುವುದನ್ನು ಸಾಕ್ಷಿಯು ಗಮನಿಸಿದನು. ಆ ಸ್ತ್ರೀಯು ಬೇಗನೆ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಅವನು ಅವಳನ್ನು ತನ್ನ ಮುಂದೆ ನಿಲ್ಲಿಸಿ ತಾನು ಅವಳ ನಂತರ ನಿಂತುಕೊಂಡನು. ಇನ್ನೊಂದು ಸಂದರ್ಭದಲ್ಲಿ, ಆ ಸಾಕ್ಷಿಯು ಮಾರುಕಟ್ಟೆಯಲ್ಲಿ ಈ ವೃದ್ಧ ಸ್ತ್ರೀಯನ್ನು ಸಂಧಿಸಿದನು. ಅವಳು ಅವನನ್ನೂ, ಆಸ್ಪತ್ರೆಯಲ್ಲಿ ಅವನು ಮಾಡಿದ ಒಳ್ಳೇ ಕೆಲಸವನ್ನೂ ಜ್ಞಾಪಿಸಿಕೊಂಡಳು. “ಯೆಹೋವನ ಸಾಕ್ಷಿಗಳು ತಮ್ಮ ನೆರೆಯವರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಎಂಬುದು ಈಗ ನನಗೆ ಮನದಟ್ಟಾಗಿದೆ” ಎಂದು ಅವಳು ಹೇಳಿದಳು. ಈ ಮುಂಚೆ ಅವಳು ರಾಜ್ಯದ ಸಂದೇಶಕ್ಕೆ ಎಂದೂ ಪ್ರತಿಕ್ರಿಯೆ ತೋರಿಸಿರಲಿಲ್ಲ, ಆದರೆ ಆ ಸಾಕ್ಷಿಯಿಂದ ಅವಳಿಗೆ ತೋರಿಸಲ್ಪಟ್ಟ ಒಳ್ಳೇತನವು ಅವಳ ಮೇಲೆ ಒಳ್ಳೇ ಪರಿಣಾಮವನ್ನು ಬೀರಿತು. ಒಂದು ಮನೆ ಬೈಬಲ್‌ ಅಧ್ಯಯನವನ್ನು ಮಾಡಲು ಅವಳು ಒಪ್ಪಿಕೊಂಡಳು ಮತ್ತು ದೇವರ ವಾಕ್ಯದ ಜ್ಞಾನವನ್ನು ಪಡೆದುಕೊಳ್ಳಲಾರಂಭಿಸಿದಳು.

22. ‘ಒಳ್ಳೇದನ್ನು ಮಾಡುತ್ತಾ ಇರು’ವುದರಲ್ಲಿ ವಿಶೇಷವಾಗಿ ಗಮನಾರ್ಹವಾಗಿರುವ ಒಂದು ವಿಧವು ಯಾವುದು?

22 ಒಳ್ಳೇತನವನ್ನು ತೋರಿಸುವುದರ ಮೌಲ್ಯವನ್ನು ವ್ಯಕ್ತಪಡಿಸುವ ಅನುಭವಗಳನ್ನು ನೀವೂ ತಿಳಿಸಸಾಧ್ಯವಿರುವುದು ಸಂಭವನೀಯ. ‘ಒಳ್ಳೇದನ್ನು ಮಾಡುತ್ತಾ ಇರ’ಲಿಕ್ಕಾಗಿರುವ ಒಂದು ವಿಶೇಷ ಗಮನಾರ್ಹ ವಿಧವು, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದೇ ಆಗಿದೆ. (ಮತ್ತಾಯ 24:14) ವಿಶೇಷವಾಗಿ ಯಾರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸುತ್ತಾರೋ ಅವರಿಗೆ ಒಳ್ಳೇದನ್ನು ಮಾಡುವ ಒಂದು ವಿಧವು ಇದಾಗಿದೆ ಎಂಬುದನ್ನು ಮನಗಂಡವರಾಗಿದ್ದು, ಈ ಅಮೂಲ್ಯ ಚಟುವಟಿಕೆಯಲ್ಲಿ ನಾವು ಹುರುಪಿನಿಂದ ಒಳಗೂಡುತ್ತಾ ಇರೋಣ. ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಶುಶ್ರೂಷೆ ಹಾಗೂ ಒಳ್ಳೇ ನಡತೆಯು, ಒಳ್ಳೇತನದ ಆದಿ ಮೂಲನಾಗಿರುವ ಯೆಹೋವನನ್ನು ಮಹಿಮೆಗೇರಿಸುತ್ತದೆ.​—ಮತ್ತಾಯ 19:​16, 17.

‘ಒಳ್ಳೇದನ್ನು ಮಾಡುತ್ತಾ’ ಮುಂದುವರಿಯೋಣ

23. ಕ್ರೈಸ್ತ ಶುಶ್ರೂಷೆಯು ಒಂದು ಒಳ್ಳೇ ಕೆಲಸವಾಗಿದೆ ಏಕೆ?

23 ನಮ್ಮ ಶುಶ್ರೂಷೆಯು ಒಂದು ಒಳ್ಳೆಯ ಕೆಲಸವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದು ನಮಗೆ ಮತ್ತು ಬೈಬಲ್‌ ಸಂದೇಶಕ್ಕೆ ಕಿವಿಗೊಟ್ಟು ನಿತ್ಯ ಜೀವಕ್ಕೆ ನಡಿಸುವ ದಾರಿಯಲ್ಲಿ ಮುಂದುವರಿಯುವವರಿಗೆ ರಕ್ಷಣೆಯಲ್ಲಿ ಫಲಿಸಸಾಧ್ಯವಿದೆ. (ಮತ್ತಾಯ 7:​13, 14; 1 ತಿಮೊಥೆಯ 4:16) ಹಾಗಾದರೆ, ನಾವು ನಿರ್ಣಯಗಳನ್ನು ಮಾಡಬೇಕಾಗಿರುವಾಗ, ಒಳ್ಳೇದನ್ನು ಮಾಡಲಿಕ್ಕಾಗಿರುವ ನಮ್ಮ ಬಯಕೆಯು ನಾವು ಸ್ವತಃ ಹೀಗೆ ಕೇಳಿಕೊಳ್ಳುವಂತೆ ಮಾಡಬಹುದು: ‘ನನ್ನ ರಾಜ್ಯದ ಸಾರುವಿಕೆಯ ಚಟುವಟಿಕೆಯ ಮೇಲೆ ಈ ನಿರ್ಣಯವು ಹೇಗೆ ಪರಿಣಾಮ ಬೀರುವುದು? ನಾನು ಪರಿಗಣಿಸುತ್ತಿರುವ ಮಾರ್ಗಕ್ರಮವು ನಿಜವಾಗಿಯೂ ಪ್ರಯೋಜನಾರ್ಹವಾಗಿದೆಯೋ? ಅದು ಇತರರೂ “ನಿತ್ಯವಾದ ಶುಭವರ್ತಮಾನ”ವನ್ನು ಅಂಗೀಕರಿಸುವಂತೆ ಹಾಗೂ ಯೆಹೋವ ದೇವರೊಂದಿಗೆ ಒಂದು ನಿಕಟ ಸಂಬಂಧವನ್ನು ಪಡೆದುಕೊಳ್ಳುವಂತೆ ಅವರಿಗೆ ನೆರವಾಗಲು ನನಗೆ ಸಹಾಯಮಾಡುವುದೋ?’ (ಪ್ರಕಟನೆ 14:6) ರಾಜ್ಯಾಭಿರುಚಿಗಳನ್ನು ಉತ್ತೇಜಿಸುವಂಥ ಒಂದು ನಿರ್ಣಯದಿಂದ ಮಹಾನ್‌ ಸಂತೋಷವು ಫಲಿಸುವುದು.​—ಮತ್ತಾಯ 6:33; ಅ. ಕೃತ್ಯಗಳು 20:35.

24, 25. ಸಭೆಯಲ್ಲಿ ಒಳ್ಳೇದನ್ನು ಮಾಡಸಾಧ್ಯವಿರುವ ಕೆಲವು ವಿಧಗಳು ಯಾವುವು, ಮತ್ತು ಒಂದುವೇಳೆ ನಾವು ಒಳ್ಳೇತನವನ್ನು ತೋರಿಸುತ್ತಾ ಮುಂದುವರಿಯುವಲ್ಲಿ ನಾವು ಯಾವ ಖಾತ್ರಿಯಿಂದಿರಸಾಧ್ಯವಿದೆ?

24 ಒಳ್ಳೇತನದ ಪ್ರಯೋಜನಾರ್ಹ ಪರಿಣಾಮಗಳನ್ನು ನಾವೆಂದಿಗೂ ಕ್ಷುಲ್ಲಕವಾಗಿ ಪರಿಗಣಿಸದಿರೋಣ. ಕ್ರೈಸ್ತ ಸಭೆಯನ್ನು ಬೆಂಬಲಿಸುವ ಮೂಲಕ ಹಾಗೂ ಅದರ ಅಭಿರುಚಿಗಳು ಮತ್ತು ಹಿತಕ್ಷೇಮವನ್ನು ನೋಡಿಕೊಳ್ಳಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡುವ ಮೂಲಕ, ನಾವು ಈ ಗುಣವನ್ನು ತೋರಿಸುತ್ತಾ ಮುಂದುವರಿಯಸಾಧ್ಯವಿದೆ. ನಾವು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ ಮತ್ತು ಅವುಗಳಲ್ಲಿ ಭಾಗವಹಿಸುವಾಗ, ಖಂಡಿತವಾಗಿಯೂ ನಾವು ಒಳ್ಳೇದನ್ನು ಮಾಡುತ್ತೇವೆ. ನಾವು ಕೂಟಗಳಲ್ಲಿ ಉಪಸ್ಥಿತರಿರುವುದು ತಾನೇ ಜೊತೆ ಆರಾಧಕರನ್ನು ಉತ್ತೇಜಿಸುತ್ತದೆ, ಮತ್ತು ಚೆನ್ನಾಗಿ ತಯಾರಿಸಲ್ಪಟ್ಟ ನಮ್ಮ ಉತ್ತರಗಳು ಅವರನ್ನು ಆತ್ಮಿಕವಾಗಿ ಬಲಪಡಿಸುತ್ತದೆ. ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲಿಕ್ಕಾಗಿ ನಮ್ಮ ಸಂಪನ್ಮೂಲಗಳನ್ನು ಉಪಯೋಗಿಸುವಾಗ ಮತ್ತು ಅದರ ಯೋಗ್ಯವಾದ ಪರಾಮರಿಕೆಯನ್ನು ಮಾಡಲು ಸಹಾಯ ನೀಡುವಾಗಲೂ ನಾವು ಒಳ್ಳೇದನ್ನು ಮಾಡುತ್ತೇವೆ. (2 ಅರಸುಗಳು 22:​3-7; 2 ಕೊರಿಂಥ 9:​6, 7) ವಾಸ್ತವದಲ್ಲಿ, “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”​—ಗಲಾತ್ಯ 6:10.

25 ಪ್ರತಿಯೊಂದು ಸನ್ನಿವೇಶವು ಒಳ್ಳೇತನವನ್ನು ತೋರಿಸಲಿಕ್ಕಾಗಿ ಕರೆಕೊಡುತ್ತದೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ. ಆದುದರಿಂದ, ನಾವು ಹೊಸ ಪಂಥಾಹ್ವಾನಗಳನ್ನು ಎದುರಿಸುವಾಗ, ಶಾಸ್ತ್ರವಚನಗಳಿಂದ ಜ್ಞಾನೋದಯವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ, ಯೆಹೋವನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸೋಣ, ಮತ್ತು ಆತನ ಒಳ್ಳೆಯ ಹಾಗೂ ಪರಿಪೂರ್ಣ ಚಿತ್ತವನ್ನು ಪೂರೈಸಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡೋಣ. (ರೋಮಾಪುರ 2:​9, 10; 12:2) ನಾವು ಒಳ್ಳೇತನವನ್ನು ತೋರಿಸುತ್ತಾ ಮುಂದುವರಿಯುವಾಗ, ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸುವನು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ.

ನೀವು ಹೇಗೆ ಉತ್ತರಿಸುವಿರಿ?

• ಅತ್ಯಂತ ಪ್ರಶಂಸಾರ್ಹ ಒಳಿತನ್ನು ನಾವು ಹೇಗೆ ಸಾಧಿಸಸಾಧ್ಯವಿದೆ?

• ಒಳ್ಳೇತನವನ್ನು ‘ಬೆಳಕಿನ ಫಲ’ ಎಂದು ಏಕೆ ಕರೆಯಲಾಗಿದೆ?

• ಒಳ್ಳೇತನವನ್ನು ‘ಆತ್ಮದ ಫಲ’ ಎಂದು ಏಕೆ ಕರೆಯಲಾಗಿದೆ?

• ನಮ್ಮ ಒಳ್ಳೇ ನಡತೆಯು ಯಾವ ಪರಿಣಾಮವನ್ನು ಬೀರುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ದೇವರ ವಾಕ್ಯ ಮತ್ತು ಆತನ ಪವಿತ್ರಾತ್ಮವು ನಾವು ಒಳ್ಳೇತನವನ್ನು ತೋರಿಸುವಂತೆ ನಮಗೆ ಸಹಾಯಮಾಡುತ್ತದೆ

[ಪುಟ 18ರಲ್ಲಿರುವ ಚಿತ್ರಗಳು]

ಒಳ್ಳೇತನವನ್ನು ತೋರಿಸುವುದು ಅತ್ಯುತ್ತಮ ಫಲಿತಾಂಶಗಳನ್ನು ತರುತ್ತದೆ