ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗುಡ್ಡದ ಮೇಲೆ ಕಟ್ಟಲ್ಪಟ್ಟಿರುವ ಊರು

ಗುಡ್ಡದ ಮೇಲೆ ಕಟ್ಟಲ್ಪಟ್ಟಿರುವ ಊರು

ಗುಡ್ಡದ ಮೇಲೆ ಕಟ್ಟಲ್ಪಟ್ಟಿರುವ ಊರು

“ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು.” ಯೇಸು ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗದಲ್ಲಿ ಇದನ್ನು ತನ್ನ ಶಿಷ್ಯರಿಗೆ ಹೇಳಿದನು.​—ಮತ್ತಾಯ 5:14.

ಯೂದಾಯ ಮತ್ತು ಗಲಿಲಾಯದ ಹೆಚ್ಚಿನ ಪಟ್ಟಣಗಳು, ಕೆಳಗಿರುವ ಕಣಿವೆಗಳಲ್ಲಿ ಅಲ್ಲ ಬದಲಾಗಿ ಗುಡ್ಡಗಳ ಮೇಲಿರುತ್ತಿದ್ದವು. ಈ ಗುಡ್ಡದ ಮೇಲಿನ ಸ್ಥಾನವನ್ನು ಆಯ್ಕೆಮಾಡಲಿಕ್ಕಾಗಿರುವ ಒಂದು ಮುಖ್ಯ ಕಾರಣವು ಸುರಕ್ಷತೆಯಾಗಿತ್ತು. ದಾಳಿಮಾಡುತ್ತಿದ್ದ ಸೈನ್ಯಗಳಲ್ಲದೆ, ಸುಲಿಗೆಯ ಗುಂಪುಗಳು ಸಹ ಇಸ್ರಾಯೇಲ್ಯರ ವಸಾಹತುಗಳ ಮೇಲೆ ಹಾವಳಿಮಾಡುತ್ತಿದ್ದವು. (2 ಅರಸು 5:2; 24:2) ಸಂರಕ್ಷಣೆಗಾಗಿ ಒಂದು ಎತ್ತರವಾದ ಗೋಡೆಯನ್ನು ಅವಶ್ಯಪಡಿಸುವ ತಗ್ಗುಪ್ರದೇಶದಲ್ಲಿರುವ ಊರಿಗಿಂತಲೂ, ಒಂದು ಗುಡ್ಡದ ಮೇಲಿರುವ, ಒತ್ತೊತ್ತಾಗಿರುವ ಮನೆಗಳ ಒಂದು ಗುಂಪಿಗೆ ಧೀರ ಪ್ರಜೆಗಳು ಹೆಚ್ಚು ರಕ್ಷಣೆಯನ್ನು ಒದಗಿಸುವುದು ಸುಲಭವಾಗಿತ್ತು.

ಯೆಹೂದಿ ಮನೆಗಳಿಗೆ ಸುಣ್ಣವನ್ನು ಬಳಿಯಲಾಗುತ್ತಿದ್ದದರಿಂದ, ಈ ಸುಣ್ಣಹಚ್ಚಿರುವ ಮನೆಗಳ ಒಂದು ಇಡೀ ಗುಂಪು ಒಂದು ಗುಡ್ಡದ ಮೇಲೆ ಒಟ್ಟಿಗಿರುವುದನ್ನು ಎಷ್ಟೋ ಮೈಲಿ ದೂರದ ವರೆಗೆ ನೋಡಸಾಧ್ಯವಿತ್ತು. (ಅ. ಕೃತ್ಯಗಳು 23:3) ಪ್ಯಾಲೆಸ್ಟೈನಿನ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ, ಈ ಗುಡ್ಡದ ಮೇಲಿನ ಊರುಗಳು ಸಂಜ್ಞಾಜ್ಯೋತಿಯಂತೆ ಪ್ರಕಾಶಿಸುತ್ತಿದ್ದವು. ಇಂದು ನಮ್ಮ ದಿನಗಳಲ್ಲೂ ತದ್ರೀತಿಯ ಮೆಡಿಟರೇನಿಯನ್‌ ಪಟ್ಟಣಗಳು ಹಾಗೆಯೇ ಪ್ರಕಾಶಿಸುತ್ತವೆ.

ಒಬ್ಬ ಸತ್ಕ್ರೈಸ್ತನ ಪಾತ್ರವನ್ನು ತನ್ನ ಹಿಂಬಾಲಕರಿಗೆ ಕಲಿಸಲಿಕ್ಕಾಗಿ, ಗಲಿಲಾಯ ಮತ್ತು ಯೂದಾಯದ ಊರುಗಳ ಈ ಎದ್ದುಕಾಣುವಂಥ ಅಂಶವನ್ನು ಯೇಸು ಉಪಯೋಗಿಸಿದನು. ಅವನು ಅವರಿಗಂದದ್ದು: “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:16) ಜನರಿಂದ ಸ್ತುತಿಯನ್ನು ಪಡೆಯಲಿಕ್ಕಾಗಿ ಕ್ರೈಸ್ತರು ಉತ್ತಮ ಕಾರ್ಯಗಳನ್ನು ಮಾಡದಿದ್ದರೂ, ಅವರ ಒಳ್ಳೇ ನಡತೆಯು ಲಕ್ಷಿಸಲ್ಪಡದೇ ಹೋಗುವುದಿಲ್ಲ.​—ಮತ್ತಾಯ 6:1.

ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳ ಸಮಯದಲ್ಲಿ ಅಂಥ ಒಳ್ಳೇ ನಡತೆಯು ವಿಶೇಷವಾಗಿ ಎದ್ದುಕಾಣುತ್ತದೆ. ಇತ್ತೀಚಿನ ಅಧಿವೇಶನವೊಂದಕ್ಕೆ ಸೂಚಿಸುತ್ತಾ, ಸ್ಪೆಯ್ನ್‌ನಲ್ಲಿರುವ ಒಂದು ವಾರ್ತಾಪತ್ರಿಕೆಯು ವರದಿಸಿದ್ದು: “ಬೇರೆ ಪಂಗಡಗಳಲ್ಲಿ ಧಾರ್ಮಿಕ ವಿಷಯಗಳ ಕುರಿತಾದ ಆಸಕ್ತಿಯು ಕಡಿಮೆಯಾಗುತ್ತಾ ಹೋಗುತ್ತಿರುವುದಾದರೂ, ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಬೈಬಲ್‌ ತನ್ನ ಪ್ರಾಯೋಗಿಕತೆಯನ್ನು ಕಳೆದುಕೊಳ್ಳಬಾರದೆಂದು ಅವರು ಬಯಸುವುದರಿಂದ, ಅವರು ದೇವರ ವಾಕ್ಯವನ್ನು ಕಾರ್ಯರೂಪಕ್ಕೆ ಹಾಕುತ್ತಾರೆ.”

ಸ್ಪೆಯ್ನ್‌ನ ನೈರುತ್ಯದಲ್ಲಿ ಸಾಕ್ಷಿಗಳು ಕ್ರಮವಾಗಿ ಉಪಯೋಗಿಸುತ್ತಿದ್ದ ಸ್ಟೇಡಿಯಮ್‌ನ ಕಾವಲುಗಾರನಾದ ಥಾಮಸ್‌, ದೇವರ ವಾಕ್ಯವನ್ನು ತಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳುವ ಜನರೊಂದಿಗಿರಲು ಆನಂದಿಸುತ್ತಿದ್ದನು. ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಹಾಜರಿರಲು ಶಕ್ತನಾಗುವಂತೆ, ಅವನು ತನ್ನ ನಿವೃತ್ತಿಯನ್ನು ಹಲವಾರು ವಾರಗಳ ವರೆಗೆ ಮುಂದೂಡಿದನು. ಅಧಿವೇಶನಕ್ಕೆ ಹಾಜರಾದ ಅನೇಕರು, ಎಳೆಯರು ಸಹ, ಅಧಿವೇಶನದ ನಂತರ ಅವನ ಬಳಿ ಬಂದು, ಗತ ವರ್ಷಗಳಲ್ಲೆಲ್ಲಾ ಅವನು ತೋರಿಸಿದ ಸಹಕಾರಕ್ಕಾಗಿ ಉಪಕಾರ ಹೇಳಿ, ಅವನ ನಿವೃತ್ತಿ ಜೀವನಕ್ಕಾಗಿ ಶುಭ ಹಾರೈಸಿದಾಗ, ಅವನು ಅತ್ತುಬಿಟ್ಟನು. “ನಿಮ್ಮಂಥ ಜನರ ಪರಿಚಯವಾದದ್ದೇ ನನ್ನ ಜೀವಿತದ ಅತ್ಯುತ್ತಮ ಅನುಭವಗಳಲ್ಲೊಂದಾಗಿತ್ತು” ಎಂದವನು ಹೇಳಿದನು.

ಒಂದು ಗುಡ್ಡದ ಮೇಲಿರುವ ಊರು, ಒಬ್ಬ ಪ್ರೇಕ್ಷಕನ ಗಮನವನ್ನು ಸೆಳೆಯುತ್ತದೆ, ಏಕೆಂದರೆ ಅದು ಆಕಾಶದ ಹಿನ್ನೆಲೆಯಲ್ಲಿ ಎದ್ದುಕಾಣುತ್ತದೆ ಮತ್ತು ಆ ಊರಿನಲ್ಲಿರುವ ಬಿಳಿ ಬಣ್ಣದ ಯಾವುದೇ ಮನೆಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಅದೇ ರೀತಿಯಲ್ಲಿ ಸತ್ಯ ಕ್ರೈಸ್ತರು ಭಿನ್ನರಾಗಿ ಎದ್ದುನಿಲ್ಲುತ್ತಾರೆ, ಯಾಕೆಂದರೆ ಅವರು ಪ್ರಾಮಾಣಿಕತೆ, ನೈತಿಕತೆ ಮತ್ತು ಕರುಣೆಯ ಉಚ್ಚ ಶಾಸ್ತ್ರೀಯ ಮಟ್ಟಗಳನ್ನು ಪಾಲಿಸಲು ಪ್ರಯತ್ನಿಸುತ್ತಾರೆ.

ಅಷ್ಟುಮಾತ್ರವಲ್ಲದೆ, ಕ್ರೈಸ್ತರು ತಮ್ಮ ಸಾರುವ ಚಟುವಟಿಕೆಯ ಮೂಲಕ ಸತ್ಯದ ಬೆಳಕನ್ನು ಪ್ರತಿಫಲಿಸುತ್ತಾರೆ. ಪ್ರಥಮ ಶತಮಾನದ ಕ್ರೈಸ್ತರ ಕುರಿತಾಗಿ ಅಪೊಸ್ತಲ ಪೌಲನು ಹೇಳಿದ್ದು: “ಆದದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ. . . . ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.” (2 ಕೊರಿಂಥ 4:1, 2) ಅವರು ಸಾರಿದ ಎಲ್ಲ ಕಡೆಗಳಲ್ಲೂ ಹಿಂಸೆಯನ್ನು ಎದುರಿಸಬೇಕಾಗಿತ್ತಾದರೂ, ಯೆಹೋವನು ಅವರ ಶುಶ್ರೂಷೆಯನ್ನು ಆಶೀರ್ವದಿಸಿದನು. ಆದುದರಿಂದ, ಸುಮಾರು ಸಾ.ಶ. 60ರಷ್ಟಕ್ಕೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ’ ಸಾರಲ್ಪಟ್ಟಿತ್ತೆಂದು ಪೌಲನು ಬರೆಯಸಾಧ್ಯವಿತ್ತು.​—ಕೊಲೊಸ್ಸೆ 1:23.

ಯೇಸುವಿನ ಆಜ್ಞೆಗನುಸಾರ ಇಂದು ಯೆಹೋವನ ಸಾಕ್ಷಿಗಳು ಸಹ ‘ತಮ್ಮ ಬೆಳಕನ್ನು ಜನರ ಮುಂದೆ ಪ್ರಕಾಶಿಸುವ’ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಬಾಯಿಮಾತಿನ ಮೂಲಕ ಮತ್ತು ಮುದ್ರಿತ ಸಾಹಿತ್ಯದ ಮೂಲಕ ಯೆಹೋವನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಲೋಕದಲ್ಲೆಲ್ಲ 235 ದೇಶಗಳಲ್ಲಿ ಹಬ್ಬಿಸುತ್ತಾರೆ. ಸಾಧ್ಯವಿರುವಷ್ಟು ಹೆಚ್ಚು ಜನರಿಗೆ ಬೈಬಲ್‌ ಸತ್ಯದ ಬೆಳಕು ತಲಪುವಂತೆ, ಅವರು ತಮ್ಮ ಬೈಬಲ್‌ ಪ್ರಕಾಶನಗಳನ್ನು ಸುಮಾರು 370 ಭಾಷೆಗಳಲ್ಲಿ ಲಭ್ಯಗೊಳಿಸಿದ್ದಾರೆ.​—ಮತ್ತಾಯ 24:14; ಪ್ರಕಟನೆ 14:​6, 7.

ಎಲ್ಲಿ ಸಾರುವ ಕೆಲಸವು ನಿಷೇಧಿಸಲ್ಪಟ್ಟಿದೆಯೊ ಅಥವಾ ಒಂದು ಕಾಲದಲ್ಲಿ ನಿಷೇಧಿಸಲ್ಪಟ್ಟಿತ್ತೊ ಆ ದೇಶಗಳಿಂದ ವಲಸೆಹೋಗಿರುವ ಜನರ ಭಾಷೆಗಳನ್ನು ಕಲಿಯುವ ಪಂಥಾಹ್ವಾನವನ್ನು ಅನೇಕ ಸ್ಥಳಗಳಲ್ಲಿರುವ ಸಾಕ್ಷಿಗಳು ಸ್ವೀಕರಿಸಿದ್ದಾರೆ. ಉದಾಹರಣೆಗಾಗಿ, ಉತ್ತರ ಅಮೆರಿಕದಲ್ಲಿನ ಅನೇಕ ದೊಡ್ಡ ದೊಡ್ಡ ನಗರಗಳಲ್ಲಿ, ಚೀನಾ ಮತ್ತು ರಷ್ಯಾದಿಂದ ಜನರ ದೊಡ್ಡ ಪ್ರವಾಹವೇ ಬಂದಿದೆ. ಆದುದರಿಂದ ಅಲ್ಲಿನ ಸ್ಥಳಿಕ ಸಾಕ್ಷಿಗಳು, ಈ ಹೊಸಬರಿಗೆ ಸುವಾರ್ತೆಯನ್ನು ಸಾರಲು ಸಾಧ್ಯವಾಗುವಂತೆ, ಚೈನೀಸ್‌, ರಷ್ಯನ್‌ ಹಾಗೂ ಇನ್ನಿತರ ಭಾಷೆಗಳನ್ನು ಕಲಿಯಲು ಪ್ರಯತ್ನಿಸಿದ್ದಾರೆ. ವಾಸ್ತವದಲ್ಲಿ, ಹೊಲವು “ಬೆಳ್ಳಗಾಗಿ ಕೊಯ್ಲಿಗೆ” ಬಂದಿರುವಾಗಲೇ ಸುವಾರ್ತೆಯನ್ನು ಇತರರಿಗೆ ಸಾರಲು ಸಾಧ್ಯವಾಗುವಂತೆ, ಈ ಭಾಷೆಗಳನ್ನು ಹೆಚ್ಚು ಬೇಗನೆ ಕಲಿಯುವುದನ್ನು ಸಾಧ್ಯಗೊಳಿಸುವ ಪಾಠಕ್ರಮಗಳನ್ನು ನಡೆಸಲಾಗುತ್ತಿದೆ.​—ಯೋಹಾನ 4:35.

ಪ್ರವಾದಿಯಾದ ಯೆಶಾಯನು ಹೀಗೆ ಮುಂತಿಳಿಸಿದನು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.” ತಮ್ಮ ನಡತೆ ಮತ್ತು ಶುಶ್ರೂಷೆಯ ಮೂಲಕ ಯೆಹೋವನ ಸಾಕ್ಷಿಗಳು, ಎಲ್ಲೆಡೆಯೂ ಇರುವ ಜನರು ದೇವರ ಮಾರ್ಗಗಳ ಕುರಿತಾಗಿ, ದೇವರ ಮಾರ್ಗದಲ್ಲಿ ನಡೆಯಲು ಕಲಿಯಲಿಕ್ಕಾಗಿ “ಯೆಹೋವನ ಪರ್ವತಕ್ಕೆ” ಬರುವಂತೆ ಸಹಾಯಮಾಡುತ್ತಿದ್ದಾರೆ. (ಯೆಶಾಯ 2:2, 3) ಇದರಿಂದ ಸಿಗುವ ಸಂತೋಷದ ಫಲಿತಾಂಶವೇನೆಂದರೆ, ಅವರೆಲ್ಲರೂ ಜೊತೆಗೂಡಿ ‘ಪರಲೋಕದಲ್ಲಿರುವ ತಮ್ಮ ತಂದೆ’ಯಾದ ಯೆಹೋವ ದೇವರನ್ನು ‘ಕೊಂಡಾಡುತ್ತಾರೆ.’​—ಮತ್ತಾಯ 5:16; 1 ಪೇತ್ರ 2:12.