ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಕೊದೇಮನಿಂದ ಪಾಠವನ್ನು ಕಲಿಯಿರಿ

ನಿಕೊದೇಮನಿಂದ ಪಾಠವನ್ನು ಕಲಿಯಿರಿ

ನಿಕೊದೇಮನಿಂದ ಪಾಠವನ್ನು ಕಲಿಯಿರಿ

“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಲೂಕ 9:23) ನಮ್ರಭಾವದ ಬೆಸ್ತರು ಮತ್ತು ಇತರರಿಂದ ತುಚ್ಛರೆಂದೆಣಿಸಲ್ಪಡುತ್ತಿದ್ದ ಸುಂಕ ವಸೂಲಿಗಾರನೊಬ್ಬನು ಆ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದನು. ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಅವರು ಎಲ್ಲವನ್ನೂ ತೊರೆದು ಅವನ ಹಿಂದೆ ಬಂದರು.​—ಮತ್ತಾಯ 4:​18-22; ಲೂಕ 5:​27, 28.

ಯೇಸುವಿನ ಕರೆಯು ಈಗಲೂ ಧ್ವನಿಸಲ್ಪಡುತ್ತಿದೆ ಮತ್ತು ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದರೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡುವ ಕೆಲವರು, ‘ತಮ್ಮನ್ನೇ ನಿರಾಕರಿಸಿ ತಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳಲು’ ಹಿಂದೆಮುಂದೆ ನೋಡುತ್ತಾರೆ. ಯೇಸುವಿನ ಶಿಷ್ಯರಾಗಿರುವ ಜವಾಬ್ದಾರಿ ಹಾಗೂ ಸುಯೋಗವನ್ನು ಸ್ವೀಕರಿಸಲು ಅವರು ಹಿಂಜರಿಯುತ್ತಾರೆ.

ಯೇಸುವಿನ ಆಮಂತ್ರಣವನ್ನು ಸ್ವೀಕರಿಸಿ, ಯೆಹೋವ ದೇವರಿಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಕೆಲವರು ಏಕೆ ಹಿಂಜರಿಯುತ್ತಾರೆ? ಚಿಕ್ಕಂದಿನಿಂದಲೂ, ಒಬ್ಬನೇ ದೇವರಿದ್ದಾನೆ ಎಂಬ ಯೂದಾಯ ಹಾಗೂ ಕ್ರೈಸ್ತಮತದ ವಿಚಾರವು ಕಲಿಸಲ್ಪಡದೇ ಬೆಳೆದವರಿಗೆ, ವ್ಯಕ್ತಿತ್ವವುಳ್ಳ ಒಬ್ಬ ಸರ್ವಶಕ್ತ ಸೃಷ್ಟಿಕರ್ತನಿದ್ದಾನೆಂಬುದನ್ನು ಪೂರ್ಣವಾಗಿ ಗ್ರಹಿಸಲು ಸಾಕಷ್ಟು ಸಮಯ ಬೇಕಾಗಬಹುದೆಂಬುದು ಒಪ್ಪತಕ್ಕ ಮಾತು. ಆದರೆ ದೇವರು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಂದು ಮನಗಾಣಿಸಲ್ಪಟ್ಟ ನಂತರವೂ ಕೆಲವರು ಯೇಸುವಿನ ಹೆಜ್ಜೆಜಾಡನ್ನು ಅನುಸರಿಸಲು ನಿರಾಕರಿಸುತ್ತಾರೆ. ತಾವು ಯೆಹೋವನ ಸಾಕ್ಷಿಗಳಾದರೆ, ತಮ್ಮ ಸಂಬಂಧಿಕರು ಅಥವಾ ಸ್ನೇಹಿತರು ತಮ್ಮ ಕುರಿತಾಗಿ ಏನು ಯೋಚಿಸುವರೋ ಎಂಬುದರ ಬಗ್ಗೆ ಅವರು ಭಯಪಡುತ್ತಾರೆ. ಇನ್ನಿತರರು, ನಾವು ಜೀವಿಸುತ್ತಿರುವ ಸಮಯಗಳು ಎಷ್ಟು ತುರ್ತಿನದ್ದಾಗಿವೆ ಎಂಬುದನ್ನು ಮರೆತುಬಿಟ್ಟು, ಹಣ ಮತ್ತು ಪ್ರಸಿದ್ಧಿಯನ್ನು ಬೆನ್ನಟ್ಟುತ್ತಾರೆ. (ಮತ್ತಾಯ 24:​36-42; 1 ತಿಮೊಥೆಯ 6:​9, 10) ಕಾರಣವೇನೇ ಇರಲಿ, ಯೇಸುವಿನ ಹಿಂಬಾಲಕರಾಗುವ ತಮ್ಮ ನಿರ್ಣಯವನ್ನು ಮುಂದೂಡುತ್ತಾ ಇರುವವರು, ಯೇಸುವಿನ ದಿನದಲ್ಲಿದ್ದ ಒಬ್ಬ ಧನಿಕನೂ ಯೆಹೂದ್ಯರ ಹಿರೀಸಭೆಯವನೂ ಆದ ನಿಕೊದೇಮನಿಂದ ಪಾಠವನ್ನು ಕಲಿಯಬಹುದು.

ಅದ್ಭುತಕರವಾದ ಅವಕಾಶಗಳೊಂದಿಗೆ ಆಶೀರ್ವದಿತನು

ಯೇಸು ತನ್ನ ಭೂಶುಶ್ರೂಷೆಯನ್ನು ಆರಂಭಿಸಿ ಕೇವಲ ಆರು ತಿಂಗಳುಗಳು ಕಳೆಯುವಷ್ಟರಲ್ಲಿ, ಅವನು “ದೇವರ ಕಡೆಯಿಂದ ಬಂದ ಬೋಧಕ”ನೆಂಬುದನ್ನು ನಿಕೊದೇಮನು ಗುರುತಿಸಿದನು. ಸ್ವಲ್ಪ ಸಮಯದ ಹಿಂದೆಯೇ, ಅಂದರೆ ಸಾ.ಶ. 30ರ ಪಸ್ಕಹಬ್ಬದ ಸಮಯದಲ್ಲಿ ಯೆರೂಸಲೇಮಿನಲ್ಲಿ ಯೇಸು ನಡೆಸಿದ ಅದ್ಭುತಗಳಿಂದ ಅವನು ಪ್ರಭಾವಿತನಾಗಿದ್ದನು. ಆದುದರಿಂದ, ಯೇಸುವಿನಲ್ಲಿ ತನಗಿದ್ದ ನಂಬಿಕೆಯನ್ನು ಅರಿಕೆಮಾಡಲು ಮತ್ತು ಈ ಬೋಧಕನ ಕುರಿತಾಗಿ ಹೆಚ್ಚನ್ನು ತಿಳಿದುಕೊಳ್ಳಲು ನಿಕೊದೇಮನು ರಾತ್ರಿ ಸಮಯದಲ್ಲಿ ಅವನ ಬಳಿಗೆ ಬರುತ್ತಾನೆ. ಆಗ ಯೇಸು ನಿಕೊದೇಮನಿಗೆ, ಒಬ್ಬ ವ್ಯಕ್ತಿಯು ದೇವರ ರಾಜ್ಯವನ್ನು ಪ್ರವೇಶಿಸಲಿಕ್ಕಾಗಿ ‘ಹೊಸದಾಗಿ ಹುಟ್ಟುವುದರ’ ಅಗತ್ಯದ ಕುರಿತಾದ ಗಂಭೀರ ಸತ್ಯವನ್ನು ತಿಳಿಸುತ್ತಾನೆ. ಇದೇ ಸಂದರ್ಭದಲ್ಲಿ ಯೇಸು ಈ ಮಾತುಗಳನ್ನೂ ಹೇಳುತ್ತಾನೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”​—ಯೋಹಾನ 3:1-16.

ನಿಕೊದೇಮನ ಮುಂದೆ ಎಷ್ಟೊಂದು ಅದ್ಭುತಕರವಾದ ಪ್ರತೀಕ್ಷೆಯಿತ್ತು! ಅವನು ಯೇಸುವಿನ ಭೂಜೀವಿತದ ವಿಭಿನ್ನ ಅಂಶಗಳನ್ನು ಕಣ್ಣಾರೆ ನೋಡುತ್ತಾ, ಅವನ ನಿಕಟವರ್ತಿಯಾಗಬಹುದಿತ್ತು. ಯೆಹೂದ್ಯರ ಹಿರೀಸಭೆಯವನೋಪಾದಿ ಮತ್ತು ಇಸ್ರಾಯೇಲಿನಲ್ಲಿ ಒಬ್ಬ ಬೋಧಕನೋಪಾದಿ ನಿಕೊದೇಮನಿಗೆ ದೇವರ ವಾಕ್ಯದ ಕುರಿತಾಗಿ ಗಣನೀಯ ಪ್ರಮಾಣದ ಜ್ಞಾನವಿತ್ತು. ಅವನು ಯೇಸುವನ್ನು ದೇವರು ಕಳುಹಿಸಿರುವ ಒಬ್ಬ ಬೋಧಕನಾಗಿ ಗುರುತಿಸಿದನೆಂಬ ಸಂಗತಿಯಿಂದ ಅವನಿಗೆ ತೀಕ್ಷ್ಣ ಒಳನೋಟವೂ ಇತ್ತೆಂಬುದನ್ನು ನೋಡಬಹುದು. ನಿಕೊದೇಮನು ಆತ್ಮಿಕ ವಿಷಯಗಳಲ್ಲಿ ಆಸಕ್ತನಾಗಿದ್ದನು ಮತ್ತು ಅಸಾಮಾನ್ಯವಾದ ರೀತಿಯಲ್ಲಿ ಅವನು ನಮ್ರನಾಗಿದ್ದನು. ಯೆಹೂದ್ಯರ ಸರ್ವೋಚ್ಚ ನ್ಯಾಯಾಲಯದ ಒಬ್ಬ ಸದಸ್ಯನಿಗೆ, ಒಬ್ಬ ದೀನ ಬಡಗಿಯ ಮಗನನ್ನು ದೇವರಿಂದ ಕಳುಹಿಸಲ್ಪಟ್ಟಿರುವ ಒಬ್ಬ ಪುರುಷನೆಂದು ಅಂಗೀಕರಿಸುವುದು ಎಷ್ಟು ಕಷ್ಟಕರವಾಗಿದ್ದಿರಬಹುದು! ಈ ಎಲ್ಲ ಗುಣಗಳು, ಒಬ್ಬ ವ್ಯಕ್ತಿಯು ಯೇಸುವಿನ ಶಿಷ್ಯನಾಗಲು ಅತ್ಯಾವಶ್ಯಕವಾಗಿವೆ.

ನಜರೇತಿನವನಾಗಿದ್ದ ಈ ಪುರುಷನಲ್ಲಿ ನಿಕೊದೇಮನಿಗಿದ್ದ ಆಸಕ್ತಿಯು ಎಂದೂ ಸ್ವಲ್ಪವೂ ಕುಂದಿಹೋಗಲಿಲ್ಲವೆಂದು ತೋರುತ್ತದೆ. ಎರಡೂವರೆ ವರ್ಷಗಳ ನಂತರ, ಪರ್ಣಶಾಲೆಗಳ ಜಾತ್ರೆಯ ಸಮಯದಲ್ಲಿ ನಿಕೊದೇಮನು ಹಿರೀಸಭೆಯಲ್ಲಿ ನಡೆದ ಒಂದು ಕೂಟಕ್ಕೆ ಹಾಜರಾಗುತ್ತಾನೆ. ಈ ಸಮಯದಲ್ಲಿ ನಿಕೊದೇಮನು ಇನ್ನೂ “ಅವರಲ್ಲಿ ಒಬ್ಬನಾಗಿದ್ದನು.” ಮಹಾಯಾಜಕರು ಮತ್ತು ಫರಿಸಾಯರು, ಯೇಸುವನ್ನು ಬಂಧಿಸಲಿಕ್ಕಾಗಿ ಓಲೇಕಾರರನ್ನು ಕಳುಹಿಸುತ್ತಾರೆ. ಆದರೆ ಇವರು ಹಿಂದಿರುಗಿ ಬಂದು, “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ” ಎಂದು ವರದಿಸುತ್ತಾರೆ. ಆಗ ಫರಿಸಾಯರು ಅವರನ್ನು, “ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ” ಎಂದು ತುಚ್ಛೀಕರಿಸುತ್ತಾರೆ. ಈಗ ನಿಕೊದೇಮನಿಗೆ ಸುಮ್ಮನೆ ಕೂರಲಾಗುವುದಿಲ್ಲ. ಅವನು ಮಾತಾಡಲಾರಂಭಿಸಿ, “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವದೇನೆಂದು ತಿಳುಕೊಳ್ಳದೆ ಅವನ ವಿಷಯವಾಗಿ ತೀರ್ಪು ಮಾಡುವದುಂಟೇ?” ಎಂದು ಕೇಳುತ್ತಾನೆ. ಈಗ ಅವನು ಆ ಫರಿಸಾಯರ ಟೀಕೆಗೆ ಗುರಿಯಾಗುತ್ತಾನೆ: “ನೀನೂ ಗಲಿಲಾಯದವನೋ? ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು.”​—ಯೋಹಾನ 7:1, 10, 32, 45-52.

ಸುಮಾರು ಆರು ತಿಂಗಳುಗಳ ಬಳಿಕ, ಸಾ.ಶ. 33ರ ಪಸ್ಕದ ದಿನದಂದು, ಯೇಸುವಿನ ದೇಹವು ಯಾತನಾ ಕಂಬದಿಂದ ಕೆಳಗಿಳಿಸಲ್ಪಡುತ್ತಿರುವಾಗ ನಿಕೊದೇಮನು ಅಲ್ಲಿಯೇ ಇದ್ದನು. ಹೂಳುವಿಕೆಗಾಗಿ ಯೇಸುವಿನ ಶವವನ್ನು ಸಿದ್ಧಗೊಳಿಸುವುದರಲ್ಲಿ, ಹಿರೀಸಭೆಯ ಇನ್ನೊಬ್ಬ ಸದಸ್ಯನಾಗಿದ್ದ ಅರಿಮಥಾಯದ ಯೋಸೇಫನೊಂದಿಗೆ ಅವನು ಜೊತೆಗೂಡಿದನು. ಅದಕ್ಕೋಸ್ಕರ ನಿಕೊದೇಮನು, “ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು” ತರುತ್ತಾನೆ. ಇದು ರೋಮನ್ನರ 100 ಸೇರುಗಳಷ್ಟಿತ್ತು. ಅಂದರೆ 72 ಆಂಗ್ಲ ಪೌಂಡುಗಳಷ್ಟು ತೂಕದ್ದಾಗಿತ್ತು. ಜೊತೆ ಫರಿಸಾಯರು ಯಾರನ್ನು “ಮೋಸಗಾರನು” ಎಂದು ಕರೆಯುತ್ತಿದ್ದರೋ ಆ ಯೇಸುವಿನೊಂದಿಗೆ ವರ್ಗೀಕರಿಸಲ್ಪಡಲಿಕ್ಕಾಗಿ ಅವನಿಗೆ ಧೈರ್ಯವೂ ಬೇಕಾಗಿತ್ತು. ಹೂಳಿಡುವಿಕೆಗಾಗಿ ಯೇಸುವಿನ ಶವವನ್ನು ಬೇಗನೆ ಸಿದ್ಧಗೊಳಿಸುತ್ತಾ, ಹತ್ತಿರದಲ್ಲೇ ಇರುವ ಒಂದು ಹೊಸ ಸ್ಮಾರಕ ಸಮಾಧಿಯಲ್ಲಿ ಅವರು ಯೇಸುವನ್ನಿಟ್ಟರು. ಆದರೆ ಈ ಕ್ಷಣದಲ್ಲೂ ನಿಕೊದೇಮನನ್ನು ಯೇಸುವಿನ ಶಿಷ್ಯನೆಂದು ಗುರುತಿಸಲಾಗುವುದಿಲ್ಲ!​—ಯೋಹಾನ 19:​38-42; ಮತ್ತಾಯ 27:63; ಮಾರ್ಕ 15:43.

ಅವನು ಕ್ರಿಯೆಗೈಯದಿರಲು ಕಾರಣ

ನಿಕೊದೇಮನು ‘ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು,’ ಯೇಸುವನ್ನು ಹಿಂಬಾಲಿಸಲು ಏಕೆ ಹಿಂದೇಟು ಹಾಕಿದನೆಂಬುದನ್ನು ಯೋಹಾನನು ತನ್ನ ವೃತ್ತಾಂತದಲ್ಲಿ ತಿಳಿಸುವುದಿಲ್ಲ. ಆದರೆ ಈ ಫರಿಸಾಯನ ಅನಿರ್ಧಾರಕ್ಕೆ ಕಾರಣಗಳನ್ನು ಕೊಡಬಹುದಾದ ಕೆಲವು ಸುಳಿವುಗಳನ್ನು ಅವನು ಕೊಟ್ಟಿದ್ದಾನೆ.

ಪ್ರಥಮ ವಿಷಯವೇನೆಂದರೆ, ಆ ಯೆಹೂದಿ ಅಧಿಪತಿಯು “ರಾತ್ರಿಯಲ್ಲಿ ಯೇಸುವಿನ ಬಳಿಗೆ” ಬಂದನೆಂದು ಯೋಹಾನನು ತಿಳಿಸುತ್ತಾನೆ. (ಯೋಹಾನ 3:2) ಒಬ್ಬ ಬೈಬಲ್‌ ವಿದ್ವಾಂಸನು ಹೀಗೆ ಸೂಚಿಸುತ್ತಾನೆ: “ನಿಕೊದೇಮನು ರಾತ್ರಿ ಸಮಯದಲ್ಲಿ ಬಂದದ್ದಕ್ಕೆ ಕಾರಣ ಭಯವಲ್ಲ, ಬದಲಾಗಿ ಯೇಸುವಿನೊಂದಿಗಿನ ತನ್ನ ಮಾತುಕತೆಯನ್ನು ಅಡ್ಡಿಪಡಿಸಸಾಧ್ಯವಿದ್ದ ಜನಸಮೂಹವನ್ನು ತಪ್ಪಿಸಿಕೊಳ್ಳುವುದಾಗಿತ್ತು.” ಆದರೆ ಯೋಹಾನನು ಅರಿಮಥಾಯದ ಯೋಸೇಫನ ಬಗ್ಗೆ ತಿಳಿಸುತ್ತಾ, ಅವನು “ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ” ಎಂದು ಸೂಚಿಸುವ ವಚನಗಳಲ್ಲೇ, ನಿಕೊದೇಮನನ್ನು “ಮೊದಲು ಒಂದು ಸಾರಿ ರಾತ್ರಿವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ” ವ್ಯಕ್ತಿಯೆಂದು ಸೂಚಿಸುತ್ತಾನೆ. (ಯೋಹಾನ 19:​38, 39) ಹೀಗಿರುವುದರಿಂದ, ನಿಕೊದೇಮನ ದಿನದಲ್ಲಿದ್ದ ಇತರರು ಯೇಸುವಿನೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಲು ಹೆದರುತ್ತಿದ್ದಂತೆಯೇ, ಇವನು ಸಹ “ಯೆಹೂದ್ಯರ ಭಯದಿಂದ”ಲೇ ರಾತ್ರಿ ಸಮಯದಲ್ಲಿ ಯೇಸುವನ್ನು ಭೇಟಿಮಾಡಲು ಹೋಗಿದ್ದಿರಬಹುದು.​—ಯೋಹಾನ 7:13.

ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಸಹಕರ್ಮಿಗಳು ಏನು ಹೇಳುವರೆಂಬ ಕಾರಣದಿಂದಲೇ ನೀವು ಯೇಸುವಿನ ಶಿಷ್ಯರಲ್ಲೊಬ್ಬರಾಗುವ ನಿರ್ಣಯವನ್ನು ಮುಂದೂಡುತ್ತಿದ್ದೀರೊ? “ಮನುಷ್ಯನ ಭಯ ಉರುಲು” ಎಂದು ಒಂದು ಜ್ಞಾನೋಕ್ತಿಯು ಹೇಳುತ್ತದೆ. ನೀವು ಆ ಭಯವನ್ನು ಹೇಗೆ ನಿಭಾಯಿಸಬಹುದು? ಅದೇ ಜ್ಞಾನೋಕ್ತಿಯು ಮುಂದುವರಿಸುತ್ತಾ ಹೇಳುವುದು: “ಯೆಹೋವನ ಭರವಸ ಉದ್ಧಾರ.” (ಜ್ಞಾನೋಕ್ತಿ 29:25) ಯೆಹೋವನಲ್ಲಿ ಆ ಭರವಸೆಯನ್ನು ಕಟ್ಟಲಿಕ್ಕೋಸ್ಕರ, ಆತನು ನಿಮ್ಮನ್ನು ಕಡು ಸಂಕಟದ ಸಮಯದಲ್ಲಿ ಪೋಷಿಸುವನೆಂಬುದನ್ನು ನೀವು ಸ್ವತಃ ಅನುಭವದಿಂದಲೇ ತಿಳಿದುಕೊಳ್ಳಬೇಕು. ಯೆಹೋವನಿಗೆ ಪ್ರಾರ್ಥಿಸಿ, ನಿಮ್ಮ ಆರಾಧನೆಯ ಸಂಬಂಧದಲ್ಲಿ ಚಿಕ್ಕಪುಟ್ಟ ನಿರ್ಣಯಗಳನ್ನು ಮಾಡಲು ಬೇಕಾದ ಧೈರ್ಯವನ್ನು ಕೊಡುವಂತೆ ಆತನಿಗೆ ಭಿನ್ನೈಸಿರಿ. ಮೆಲ್ಲಮೆಲ್ಲನೆ ಯೆಹೋವನಲ್ಲಿ ನಿಮ್ಮ ನಂಬಿಕೆ ಮತ್ತು ಭರವಸೆಯು ಎಷ್ಟು ಹೆಚ್ಚುವುದೆಂದರೆ, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನೀವು ದೊಡ್ಡ ನಿರ್ಣಯಗಳನ್ನೂ ಮಾಡಲು ಶಕ್ತರಾಗುವಿರಿ.

ಆಳುವ ವರ್ಗದ ಒಬ್ಬ ಸದಸ್ಯನೋಪಾದಿ ನಿಕೊದೇಮನಿಗಿದ್ದ ಸ್ಥಾನಮಾನ ಮತ್ತು ಪ್ರತಿಷ್ಠೆಯು ಸಹ, ಅವನು ತನ್ನನ್ನೇ ನಿರಾಕರಿಸಿಕೊಳ್ಳುವ ಪ್ರಾಮುಖ್ಯ ಹೆಜ್ಜೆಯನ್ನು ತೆಗೆದುಕೊಳ್ಳುವುದರಿಂದ ಅವನನ್ನು ತಡೆದಿರಬೇಕು. ಆ ಸಮಯದಲ್ಲಿ ಇನ್ನೂ ಅವನಿಗೆ ಹಿರೀಸಭೆಯ ಒಬ್ಬ ಸದಸ್ಯನೋಪಾದಿ ಇದ್ದ ಹುದ್ದೆಯೊಂದಿಗೆ ಬಲವಾದ ಅಂಟಿಕೆ ಇದ್ದಿರಬಹುದು. ಸಮಾಜದಲ್ಲಿ ಒಂದು ಪ್ರತಿಷ್ಠಿತ ಸ್ಥಾನವನ್ನು ಕಳೆದುಕೊಳ್ಳುವಿರಿ ಇಲ್ಲವೇ ಏಳಿಗೆಗಾಗಿರುವ ಪ್ರತೀಕ್ಷೆಗಳನ್ನು ತ್ಯಾಗಮಾಡಬೇಕಾಗಬಹುದೆಂಬ ಕಾರಣದಿಂದ ನೀವು ಕ್ರಿಸ್ತನ ಹಿಂಬಾಲಕರಾಗುವ ಹೆಜ್ಜೆಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತೀರೊ? ಇವೆಲ್ಲವೂ, ವಿಶ್ವದ ಸರ್ವೋನ್ನತನ ಸೇವೆಮಾಡಲು ಶಕ್ತರಾಗುವ ಸನ್ಮಾನದ ಮುಂದೆ ತುಂಬ ಗೌಣವಾಗಿದೆ. ನೀವು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಮಾಡುವ ಬೇಡಿಕೆಗಳನ್ನು ತೃಪ್ತಿಪಡಿಸಲು ಆತನು ಸಿದ್ಧನಾಗಿದ್ದಾನೆ.​—ಕೀರ್ತನೆ 10:17; 83:18; 145:18.

ನಿಕೊದೇಮನು ಕಾಲವಿಳಂಬ ಮಾಡಲು ಇನ್ನೊಂದು ಸಂಭಾವ್ಯ ಕಾರಣವು, ಅವನ ಐಶ್ವರ್ಯಕ್ಕೆ ಸಂಬಂಧಿಸಿದ್ದಿರಬಹುದು. ಒಬ್ಬ ಫರಿಸಾಯನೋಪಾದಿ, “ಹಣದಾಸೆಯುಳ್ಳವರಾಗಿದ್ದ” ಇತರರಿಂದ ಅವನು ಪ್ರಭಾವಿಸಲ್ಪಟ್ಟಿರಬಹುದು. (ಲೂಕ 16:14) ಅವನು ದುಬಾರಿಯಾದ ರಕ್ತಬೋಳ ಮತ್ತು ಅಗರುಗಳನ್ನು ಕಲಸಿದ ಚೂರ್ಣವನ್ನು ಖರೀದಿಸಲು ಶಕ್ತನಾಗಿದ್ದನೆಂಬ ಸಂಗತಿಯು ಅವನ ಬಳಿ ಇದ್ದ ಐಶ್ವರ್ಯಕ್ಕೆ ಪುರಾವೆಯಾಗಿದೆ. ಇಂದು, ಕೆಲವರು ತಮ್ಮ ಭೌತಿಕ ಸ್ವತ್ತುಗಳ ಕುರಿತಾಗಿ ಚಿಂತಿತರಾಗಿರುವುದರಿಂದ, ಒಬ್ಬ ಕ್ರೈಸ್ತರಾಗಿರುವ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ನಿರ್ಣಯವನ್ನು ಮುಂದಕ್ಕೆ ತಳ್ಳುತ್ತಾರೆ. ಆದರೆ ಯೇಸು ತನ್ನ ಹಿಂಬಾಲಕರಿಗೆ ಬುದ್ಧಿಹೇಳಿದ್ದು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ . . . ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”​—ಮತ್ತಾಯ 6:25-33.

ಅವನು ಬಹಳಷ್ಟನ್ನು ಕಳೆದುಕೊಂಡನು

ಕೇವಲ ಯೋಹಾನನ ಸುವಾರ್ತೆಯಲ್ಲಿರುವ ನಿಕೊದೇಮನ ಕುರಿತಾದ ವೃತ್ತಾಂತವು, ಅವನು ಯೇಸುವಿನ ಹಿಂಬಾಲಕನಾದನೊ ಇಲ್ಲವೊ ಎಂಬುದನ್ನು ಕೊನೆಯಲ್ಲಿ ಹೇಳದೇ ಇರುವುದು ಆಸಕ್ತಿಯ ಸಂಗತಿಯಾಗಿದೆ. ಒಂದು ಸಾಂಪ್ರದಾಯಿಕ ಕಥೆಗನುಸಾರ, ನಿಕೊದೇಮನು ಯೇಸುವಿನ ಪರವಾಗಿ ನಿಲುವನ್ನು ತೆಗೆದುಕೊಂಡನು, ದೀಕ್ಷಾಸ್ನಾನಹೊಂದಿದನು, ಯೆಹೂದ್ಯರ ಹಿಂಸೆಗೆ ಗುರಿಯಾದನು, ತನ್ನ ಪದವಿಯಿಂದ ಉಚ್ಛಾಟಿಸಲ್ಪಟ್ಟನು, ಮತ್ತು ಕೊನೆಯಲ್ಲಿ ಅವನು ಯೆರೂಸಲೇಮಿನಿಂದ ಗಡೀಪಾರುಮಾಡಲ್ಪಟ್ಟನು. ಇದು ನಿಜವೊ ಅಲ್ಲವೊ ಎಂಬುದು ನಮಗೆ ಗೊತ್ತಿರದಿದ್ದರೂ, ಒಂದು ವಿಷಯವಂತೂ ಖಂಡಿತ: ಯೇಸು ಈ ಭೂಮಿಯ ಮೇಲಿದ್ದಾಗ ಅವನು ನಿಲುವನ್ನು ತೆಗೆದುಕೊಳ್ಳಲು ಕಾಲವಿಳಂಬಮಾಡಿದ್ದರಿಂದ ಬಹಳಷ್ಟನ್ನು ಕಳೆದುಕೊಂಡನು.

ನಿಕೊದೇಮನು ಕರ್ತನೊಂದಿಗೆ ಮೊತ್ತಮೊದಲ ಬಾರಿ ಭೇಟಿಯಾದಂದಿನಿಂದಲೇ ಯೇಸುವನ್ನು ಹಿಂಬಾಲಿಸಲು ಆರಂಭಿಸಿದ್ದಲ್ಲಿ, ಅವನು ಯೇಸುವಿನ ಒಬ್ಬ ಆಪ್ತ ಶಿಷ್ಯನಾಗುತ್ತಿದ್ದನು. ನಿಕೊದೇಮನಿಗಿದ್ದ ಜ್ಞಾನ, ಒಳನೋಟ, ನಮ್ರಭಾವ ಮತ್ತು ಆತ್ಮಿಕ ಅಗತ್ಯಗಳ ಅರಿವಿನಿಂದಾಗಿ, ಅವನೊಬ್ಬ ಗಮನಾರ್ಹ ಶಿಷ್ಯನಾಗಸಾಧ್ಯವಿತ್ತು. ಹೌದು, ಅವನು ಮಹಾನ್‌ ಬೋಧಕನಿಂದ ಮಾಡಲ್ಪಟ್ಟ ಆಶ್ಚರ್ಯಚಕಿತಗೊಳಿಸುವ ಭಾಷಣಗಳನ್ನು ಕೇಳಿಸಿಕೊಳ್ಳಬಹುದಿತ್ತು, ಯೇಸುವಿನ ದೃಷ್ಟಾಂತಗಳಿಂದ ಪ್ರಮುಖ ಪಾಠಗಳನ್ನು ಕಲಿಯಸಾಧ್ಯವಿತ್ತು, ಯೇಸು ನಡೆಸಿದಂಥ ಆಶ್ಚರ್ಯಕರ ಅದ್ಭುತಗಳನ್ನು ಕಣ್ಣಾರೆ ನೋಡಬಹುದಿತ್ತು ಮತ್ತು ಯೇಸು ತನ್ನ ಅಪೊಸ್ತಲರನ್ನು ಅಗಲುವಾಗ ಕೊಟ್ಟ ಬುದ್ಧಿವಾದದಿಂದ ಬಲವನ್ನು ಪಡೆಯಬಹುದಿತ್ತು. ಆದರೆ, ನಿಕೊದೇಮನು ಅದೆಲ್ಲವನ್ನೂ ಕಳೆದುಕೊಂಡನು.

ನಿಕೊದೇಮನ ಅನಿರ್ಧಾರವು ಅವನಿಗೆ ಒಂದು ಭಾರಿ ನಷ್ಟವಾಗಿತ್ತು. ಅವನು ಕಳೆದುಕೊಂಡಂಥ ವಿಷಯಗಳಲ್ಲಿ ಯೇಸುವಿನ ಈ ಬೆಚ್ಚಗಿನ ಆಮಂತ್ರಣವೂ ಸೇರಿತ್ತು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು [“ಚೈತನ್ಯ ನೀಡುವೆನು,” NW]. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು [“ಚೈತನ್ಯ ಸಿಗುವುದು,” NW]. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಸ್ವತಃ ಯೇಸುವಿನಿಂದಲೇ ಈ ಚೈತನ್ಯವನ್ನು ಅಕ್ಷರಾರ್ಥವಾಗಿ ಅನುಭವಿಸುವ ಅವಕಾಶವನ್ನು ನಿಕೊದೇಮನು ಕಳೆದುಕೊಂಡನು!

ನಿಮ್ಮ ಕುರಿತಾಗಿ ಏನು?

ಇಸವಿ 1914ರಿಂದ, ಯೇಸು ಕ್ರಿಸ್ತನು ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ ಪರಲೋಕದಲ್ಲಿ ಉಪಸ್ಥಿತನಾಗಿದ್ದಾನೆ. ತನ್ನ ಸಾನ್ನಿಧ್ಯದ ಸಮಯದಲ್ಲಿ ಏನೆಲ್ಲ ನಡೆಯುವುದೆಂಬುದನ್ನು ಮುಂತಿಳಿಸುವಾಗ ಅವನು ಇದನ್ನೂ ಹೇಳಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಈ ಅಂತ್ಯವು ಬರುವ ಮುಂಚೆ ಲೋಕವ್ಯಾಪಕವಾಗಿ ಸಾರುವ ಕೆಲಸವು ಪೂರೈಸಲ್ಪಡಲೇಬೇಕು. ಅಪರಿಪೂರ್ಣ ಮಾನವರು ಈ ಕೆಲಸದಲ್ಲಿ ಪಾಲ್ಗೊಳ್ಳುವಾಗ ಯೇಸು ಕ್ರಿಸ್ತನು ಸಂತೋಷಪಡುತ್ತಾನೆ. ನೀವೂ ಈ ಕೆಲಸದಲ್ಲಿ ಪಾಲ್ಗೊಳ್ಳುವಂತಾಗಲಿ.

ಯೇಸು, ದೇವರಿಂದ ಬಂದವನಾಗಿದ್ದಾನೆಂಬುದನ್ನು ನಿಕೊದೇಮನು ಗ್ರಹಿಸಿದನು. (ಯೋಹಾನ 3:2) ಬೈಬಲಿನ ಅಧ್ಯಯನವನ್ನು ಮಾಡುವ ಮೂಲಕ, ನೀವು ಸಹ ಇದೇ ತೀರ್ಮಾನಕ್ಕೆ ಬಂದಿರಬಹುದು. ಬೈಬಲಿನ ಮಟ್ಟಗಳಿಗೆ ಹೊಂದಿಕೊಳ್ಳಲು ನಿಮ್ಮ ಜೀವನ ರೀತಿಯಲ್ಲಿ ನೀವು ಬದಲಾವಣೆಗಳನ್ನು ಮಾಡಿರಬಹುದು. ಬೈಬಲಿನ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ನೀವು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಿರಲೂಬಹುದು. ನಿಮ್ಮ ಈ ಎಲ್ಲ ಪ್ರಯಾಸಗಳಿಗಾಗಿ ನಿಮ್ಮನ್ನು ಶ್ಲಾಘಿಸುತ್ತೇವೆ. ಆದರೆ, ನಿಕೊದೇಮನು ಯೇಸು ದೇವರಿಂದ ಕಳುಹಿಸಲ್ಪಟ್ಟವನಾಗಿದ್ದಾನೆ ಎಂಬುದಕ್ಕೆ ಗಣ್ಯತೆಯನ್ನು ತೋರಿಸುವುದಕ್ಕಿಂತಲೂ ಹೆಚ್ಚನ್ನು ಮಾಡಬೇಕಿತ್ತು. ಅವನು “ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ದಿನಾಲೂ ಹೊತ್ತುಕೊಂಡು [ಯೇಸುವಿನ] ಹಿಂದೆ” ಹೋಗಬೇಕಾಗಿತ್ತು.​—ಲೂಕ 9:23.

ಅಪೊಸ್ತಲ ಪೌಲನು ನಮಗೆ ಏನು ಹೇಳುತ್ತಾನೊ ಅದನ್ನು ಮನಸ್ಸಿಗೆ ತಂದುಕೊಳ್ಳಿ. ಅವನು ಬರೆದುದು: “ನಾವು ಆತನೊಂದಿಗೆ ಕೆಲಸನಡಿಸುವವರಾಗಿದ್ದು​—ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ. ಪ್ರಸನ್ನತೆಯಕಾಲದಲ್ಲಿ ನಿನ್ನ ಮನವೆಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.”​—2 ಕೊರಿಂಥ 6:1, 2.

ನಿಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುವ ಆ ನಂಬಿಕೆಯನ್ನು ಬೆಳೆಸಿಕೊಳ್ಳುವ ಸಮಯವು ಇದೇ ಆಗಿದೆ. ಯೆಹೋವನಿಗೆ ಪ್ರಾರ್ಥಿಸಿರಿ, ಮತ್ತು ಅಂಥ ನಂಬಿಕೆಯನ್ನು ತೋರಿಸುವಂತೆ ಆತನ ಸಹಾಯವನ್ನು ಕೇಳಿರಿ. ಆತನ ಸಹಾಯಹಸ್ತವನ್ನು ನೀವು ಅನುಭವಿಸುವಾಗ, ಆತನಿಗಾಗಿರುವ ನಿಮ್ಮ ಗಣ್ಯತೆ ಮತ್ತು ಪ್ರೀತಿಯು, ನೀವು ‘ನಿಮ್ಮನ್ನೇ ನಿರಾಕರಿಸಿ, ನಿಮ್ಮ ಯಾತನಾ ಕಂಬವನ್ನು ದಿನಾಲೂ ಹೊತ್ತುಕೊಂಡು ಯೇಸು ಕ್ರಿಸ್ತನ ಹಿಂದೆ’ ನಿರಂತರವಾಗಿ ಹೋಗುವಂತೆ ಪ್ರಚೋದಿಸುವುದು. ನೀವು ಈಗಲೇ ಕ್ರಿಯೆಗೈಯುವಿರೊ?

[ಪುಟ 9ರಲ್ಲಿರುವ ಚಿತ್ರ]

ಆರಂಭದಲ್ಲಿ ನಿಕೊದೇಮನು ಧೈರ್ಯದಿಂದ ಯೇಸುವಿನ ಪರವಾಗಿ ಮಾತಾಡಿದನು

[ಪುಟ 9ರಲ್ಲಿರುವ ಚಿತ್ರ]

ವಿರೋಧದ ಎದುರಿನಲ್ಲೂ, ಹೂಳುವಿಕೆಗಾಗಿ ಯೇಸುವಿನ ಶವವನ್ನು ಸಿದ್ಧಗೊಳಿಸಲು ನಿಕೊದೇಮನು ಸಹಾಯಮಾಡಿದನು

[ಪುಟ 10ರಲ್ಲಿರುವ ಚಿತ್ರ]

ವೈಯಕ್ತಿಕ ಅಧ್ಯಯನ ಮತ್ತು ಪ್ರಾರ್ಥನೆಯು, ಕ್ರಿಯೆಗೈಯುವಂತೆ ನಿಮ್ಮನ್ನು ಬಲಪಡಿಸುವುದು

[ಪುಟ 10ರಲ್ಲಿರುವ ಚಿತ್ರ]

ಯೇಸು ಕ್ರಿಸ್ತನ ಮುಂದಾಳತ್ವದ ಕೆಳಗೆ ಕೆಲಸಮಾಡುವ ಸುಯೋಗವನ್ನು ನೀವು ಸ್ವೀಕರಿಸುವಿರೊ?