ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫಿಲಿಪ್ಪೀನ್‌ ಪರ್ವತಗಳಲ್ಲಿ ದೇವರನ್ನು ಮಹಿಮೆಪಡಿಸುವುದು

ಫಿಲಿಪ್ಪೀನ್‌ ಪರ್ವತಗಳಲ್ಲಿ ದೇವರನ್ನು ಮಹಿಮೆಪಡಿಸುವುದು

ಫಿಲಿಪ್ಪೀನ್‌ ಪರ್ವತಗಳಲ್ಲಿ ದೇವರನ್ನು ಮಹಿಮೆಪಡಿಸುವುದು

ನೀವು ಫಿಲಿಪ್ಪೀನ್ಸ್‌ ಅನ್ನು ದ್ವೀಪ ದೇಶವೆಂದು ನೆನಸುವುದಾದರೆ ಅದು ಸರಿಯೇ. ಆದರೆ ಅದು ಪ್ರಭಾವಶಾಲಿ ಪರ್ವತಗಳ ನಾಡೂ ಆಗಿದೆ. ಯೆಹೋವನ ಸಾಕ್ಷಿಗಳಿಗಾದರೋ, ನಗರಗಳಲ್ಲಿ ಮತ್ತು ಕೆಳನಾಡಿನ ಪ್ರದೇಶಗಳಲ್ಲಿ ಸಾರುವ ಕೆಲಸವು ಸ್ವಲ್ಪಮಟ್ಟಿಗೆ ಸುಲಭವೂ ಪರಿಣಾಮಕಾರಿಯೂ ಆಗಿದೆ. ಆದರೂ, ಪರ್ವತ ಪ್ರದೇಶಗಳ ವಿಷಯದಲ್ಲಾದರೋ ಸಂಗತಿಯು ಬೇರೆ ರೀತಿಯದ್ದಾಗಿದೆ.

ಈ ದೇಶದ ಶೋಭಾಯಮಾನವಾದ ಪರ್ವತಗಳು, ಅದರ ಮರಳ ಕಿನಾರೆಗಳಿಗೂ, ಹವಳ ದಿಬ್ಬಗಳಿಗೂ, ಮೀನುಗಾರಿಕೆಯ ಹಳ್ಳಿಗಳಿಗೂ, ಮತ್ತು ದ್ವೀಪ ಬಯಲುಗಳ ಗದ್ದಲಭರಿತ ಪಟ್ಟಣಗಳಿಗೂ ಪೂರ್ತಿ ತದ್ವಿರುದ್ಧವಾಗಿ ನಿಲ್ಲುತ್ತವೆ. ಮಾತ್ರವಲ್ಲದೆ, ದೇವರ ರಾಜ್ಯದ “ಸುವಾರ್ತೆ”ಯನ್ನು ಸಾರುವುದಕ್ಕೆ ಪರ್ವತಗಳು ಒಂದು ಪಂಥಾಹ್ವಾನದಾಯಕ ಅಡಚಣೆಯಾಗಿ ನಿಲ್ಲುತ್ತವೆ.​—ಮತ್ತಾಯ 24:14.

ಫಿಲಿಪ್ಪೀನ್‌ ದ್ವೀಪಗಳು ಎಲ್ಲಿ ಭೂಮಿಯ ಎರಡು ಹೊರಪದರ ಫಲಕಗಳು ಡಿಕ್ಕಿಹೊಡೆಯುತ್ತವೋ ಅಂತಹ ಸ್ಥಳದಲ್ಲಿ ನೆಲೆಸಿವೆ. ಈ ಕ್ಷೇತ್ರದಲ್ಲಿ ಭೂಮಿಯ ಜಗ್ಗುವಿಕೆಯು ದೊಡ್ಡದಾದ ದ್ವೀಪಗಳಲ್ಲಿ ಚೂಪಾದ ಬೆಟ್ಟದ ಸಾಲುಗಳನ್ನು ಉಂಟುಮಾಡಿದೆ. ಫಿಲಿಪ್ಪೀನ್ಸ್‌ ಅನ್ನು ರೂಪಿಸುವ 7,100ಕ್ಕಿಂತಲೂ ಹೆಚ್ಚಿನ ದ್ವೀಪಗಳು, ಪ್ಯಾಸಿಫಿಕ್‌ ರಿಂಗ್‌ ಆಫ್‌ ಫೈಯರ್‌ ಭೂಪ್ರದೇಶದ ಪಶ್ಚಿಮ ಕಮಾನಿನ ಮೇಲೆ ನೆಲೆಸಿವೆ. ಆದ್ದರಿಂದ, ಈ ದ್ವೀಪಗಳಲ್ಲಿ ಅಲ್ಲಲ್ಲಿ ಹೆಚ್ಚು ಜ್ವಾಲಾಮುಖಿಗಳಿವೆ, ಮತ್ತು ಇವು ಕೂಡ ಪರ್ವತಮಯ ಭೂದೃಶ್ಯಕ್ಕೆ ಹೆಚ್ಚನ್ನು ಕೂಡಿಸುತ್ತವೆ. ಇಂತಹ ಏರುಪೇರುಗಳುಳ್ಳ ಭೂಪ್ರದೇಶವು ಪರ್ವತವಾಸಿಗಳನ್ನು ಪ್ರತ್ಯೇಕಿಸಿದೆ. ಈ ಜನರನ್ನು ತಲಪುವುದು ಕಷ್ಟಕರವಾಗಿದೆ, ಏಕೆಂದರೆ ಮೋಟಾರ್‌ ವಾಹನಗಳ ಚಲನೆಗೆ ಯೋಗ್ಯವಾಗಿರುವ ರಸ್ತೆಗಳು ಇಲ್ಲಿ ತೀರ ಕಡಿಮೆಯಾಗಿವೆ.

ಈ ಅಡಚಣೆಗಳ ಹೊರತೂ, “ಎಲ್ಲಾ ಮನುಷ್ಯ”ರನ್ನು ತಲಪಬೇಕಾದ ಜರೂರಿಯನ್ನು ಯೆಹೋವನ ಸಾಕ್ಷಿಗಳು ಗ್ರಹಿಸಿದ್ದಾರೆ. (1 ತಿಮೊಥೆಯ 2:4) ಆದಕಾರಣ, ಫಿಲಿಪ್ಪೀನ್ಸ್‌ನಲ್ಲಿರುವ ಸಾಕ್ಷಿಗಳು ಯೆಶಾಯ 42:​11, 12ರ ಹುರುಪಿಗೆ ಹೊಂದಾಣಿಕೆಯಲ್ಲಿ ಕ್ರಿಯೆಗೈದಿದ್ದಾರೆ: “ಸೆಲಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಕೇಕೆಹಾಕಲಿ. ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.”

ಪರ್ವತಗಳಲ್ಲಿ ವಾಸಿಸುವ ಜನರಿಗೆ ಸಾಕ್ಷಿಕೊಡಲಿಕ್ಕಾದ ತೀವ್ರವಾದ ಪ್ರಯತ್ನಗಳು, ಸುಮಾರು 50ಕ್ಕಿಂತಲೂ ಹೆಚ್ಚು ವರ್ಷಗಳಿಗೆ ಮುಂಚೆ ಆರಂಭವಾದವು. ಎರಡನೆಯ ವಿಶ್ವ ಯುದ್ಧದ ನಂತರ, ಮಿಷನೆರಿಗಳು ಕೆಲಸಕ್ಕೆ ಜೀವುದ್ವೇಗವನ್ನು ಕೊಡಲು ಸಹಾಯಮಾಡಿದರು. ಅನೇಕ ಸ್ಥಳಿಕ ವಾಸಿಗರು ಬೈಬಲ್‌ ಸತ್ಯವನ್ನು ಸ್ವೀಕರಿಸಿದರು, ಮತ್ತು ಈ ಸತ್ಯವನ್ನು ಅತಿ ಎತ್ತರದ ಪರ್ವತಗಳಲ್ಲಿ ಹಬ್ಬಿಸಲು ಸಹಾಯಮಾಡಿದರು. ಇದು ಉತ್ತಮವಾದ ಫಲಿತಾಂಶಗಳಿಗೆ ನಡೆಸಿತು. ಉದಾಹರಣೆಗಾಗಿ, ಉತ್ತರ ಲೂಸಾನಿನ ಕೊರ್‌ಡಲರ ಸೆಂಟ್ರಾಲ್‌ ಪರ್ವತಗಳಲ್ಲಿ, ಸುವಾರ್ತೆಯನ್ನು ಸಾರುವ 6,000ಕ್ಕಿಂತಲೂ ಹೆಚ್ಚಿನ ಪ್ರಚಾರಕರಿದ್ದಾರೆ. ಈಬಲೋಯ್‌, ಈಫುಗಉ ಮತ್ತು ಕಲಿಂಗವನ್ನು ಒಳಗೊಂಡು ಇವರಲ್ಲಿ ಹೆಚ್ಚಿನವರು ಸ್ಥಳಿಕ ನಾಡಿಗರೇ.

ಹಾಗಿದ್ದರೂ, ಪರ್ವತಗಳಲ್ಲಿ ತಲಪಲು ಕಷ್ಟಕರವಾಗಿರುವ ಸ್ಥಳಗಳು ಇನ್ನೂ ಇವೆ. ಅಲ್ಲಿರುವ ಜನರನ್ನು ಮರೆತುಬಿಡಲಾಗಿಲ್ಲ. ಅಲ್ಲಿನ ಕೆಲವರನ್ನು ಹೇಗೆ ತಲಪಲಾಗಿದೆ, ಮತ್ತು ಪ್ರತಿಕ್ರಿಯೆಯು ಏನಾಗಿದೆ?

ನಿಜವಾದ ನಂಬಿಕೆಯು ಸಂಪ್ರದಾಯವನ್ನು ಸ್ಥಾನಾಂತರಿಸುತ್ತದೆ

ಉತ್ತರ ದ್ವೀಪವಾದ ಲಾಸಾನ್‌ನ ಮೇಲೆ, ಆಬ್ರಾ ಪ್ರಾಂತದ ಪರ್ವತ ಪ್ರದೇಶಗಳಲ್ಲಿ ಟಿಂಜ್ಜಿಯನ್‌ ಜನರು ವಾಸವಾಗಿದ್ದಾರೆ. ಈ ಹೆಸರು ಮಲಯಾ ಭಾಷೆಯ “ಪರ್ವತ” ಎಂದು ಅರ್ಥೈಸುವ ಟಿಂಜ್ಜೀ ಎಂಬ ಶಬ್ದದಿಂದ ತೆಗೆಯಲ್ಪಟ್ಟದ್ದಾಗಿರಬೇಕು. ಅತಿ ಸೂಕ್ತವಾಗಿದೆ ನಿಜ! ಜನರು ತಮ್ಮನ್ನು ಮತ್ತು ತಮ್ಮ ಭಾಷೆಯನ್ನು ಇಟ್‌ನೆಗ್‌ ಎಂಬ ಶಬ್ದದಿಂದ ಪರಿಚಯಿಸಿಕೊಳ್ಳುತ್ತಾರೆ. ಕಾಬೂನ್ಯನ್‌ ಎಂಬ ದೇವರನ್ನು ಅವರು ನಂಬುತ್ತಾರೆ, ಮತ್ತು ದಿನನಿತ್ಯದ ಜೀವಿತವು ಮೂಢನಂಬಿಕೆಗಳಿಂದ ಹೆಚ್ಚಾಗಿ ಪ್ರಭಾವಿಸಲ್ಪಟ್ಟಿದೆ. ಉದಾಹರಣೆಗೆ, ಯಾವುದೇ ಸ್ಥಳಕ್ಕೆ ಪ್ರಯಾಣಿಸಬೇಕೆಂದಿರುವ ವ್ಯಕ್ತಿ ಸೀನುವುದಾದರೆ, ಅದು ಅಪಶಕುನವಾಗಿದೆ. ಆ ಅಪಶಕುನದ ಕೆಟ್ಟ ಪ್ರಭಾವವು ಇಲ್ಲವಾಗಲಿಕ್ಕಾಗಿ ಆ ವ್ಯಕ್ತಿಯು ಕೆಲವು ತಾಸುಗಳ ವರೆಗೆ ಕಾಯಬೇಕು.

ಇಸವಿ 1572ರಲ್ಲಿ, ಸ್ಪ್ಯಾನಿಷ್‌ ಜನರು ಕ್ಯಾಥೊಲಿಕ್‌ ಧರ್ಮದೊಂದಿಗೆ ಅಲ್ಲಿಗೆ ಬಂದರು, ಆದರೆ ಟಿಂಜ್ಜಿಯನ್‌ರಿಗೆ ನಿಜವಾದ ಕ್ರೈಸ್ತತ್ವವನ್ನು ಬೋಧಿಸಲು ತಪ್ಪಿಹೋದರು. ಕ್ಯಾಥೊಲಿಕರಾಗಿ ಪರಿವರ್ತನೆ ಹೊಂದಿದವರು ಕಾಬೂನ್ಯನ್‌ ದೇವರಲ್ಲಿನ ತಮ್ಮ ನಂಬಿಕೆಗೇ ಅಂಟಿಕೊಂಡಿದ್ದರು ಮತ್ತು ದೇಶೀಯ ಆಚರಣೆಗಳನ್ನು ಅನುಸರಿಸಿದರು. ಬೈಬಲಿನ ಕುರಿತಾದ ನಿಷ್ಕೃಷ್ಟ ಜ್ಞಾನವು, 1930ರಲ್ಲಿ ಯೆಹೋವನ ಸಾಕ್ಷಿಗಳು ಆ ಪರ್ವತಗಳಲ್ಲಿ ರಾಜ್ಯ ಸಂದೇಶವನ್ನು ಹಬ್ಬಿಸಲಾರಂಭಿಸಿದಾಗ ಮೊದಲು ತಲಪಿತು. ಆಗಿನಿಂದ ಅನೇಕ ಪ್ರಾಮಾಣಿಕ ಟಿಂಜ್ಜಿಯನ್‌ ಜನರು ಯೆಹೋವನನ್ನು “ಪರ್ವತಾಗ್ರಗಳಲ್ಲಿ” ಘನಪಡಿಸಲು ಆರಂಭಿಸಿದ್ದಾರೆ.

ಉದಾಹರಣೆಗಾಗಿ, ಲಿಂಬೌಆನ್‌ ಮುಂಚಿತವಾಗಿ ಆ ಕ್ಷೇತ್ರದಲ್ಲಿ ಒಬ್ಬ ಗೌರವಾನ್ವಿತ ಬುಡಕಟ್ಟು ನಾಯಕನಾಗಿದ್ದನು. ಅವನಿಗೆ ಟಿಂಜ್ಜಿಯನ್‌ ಸಂಸ್ಕೃತಿಯ ಹೆಚ್ಚು ಹೊಕ್ಕುಬಳಕೆಯಿತ್ತು. “ನಾನು ನಂಬಿಗಸ್ತಿಕೆಯಿಂದ ಟಿಂಜ್ಜಿಯನ್‌ ಆಚರಣೆಗಳನ್ನು ಹಿಂಬಾಲಿಸಿದೆ. ಒಬ್ಬ ವ್ಯಕ್ತಿಯು ಕೊಲ್ಲಲ್ಪಟ್ಟರೆ, ಶವಸಂಸ್ಕಾರದ ಬಳಿಕ ನಾವು ಒಂದು ನೃತ್ಯವನ್ನು ಆಡುತ್ತಿದ್ದೆವು, ಮತ್ತು ಜಾಗಟೆಯನ್ನು ಬಾರಿಸುತ್ತಿದ್ದೆವು. ನಾವು ಪ್ರಾಣಿ ಬಲಿಯನ್ನೂ ಕೊಡುತ್ತಿದ್ದೆವು. ನಾವು ಕಾಬೂನ್ಯನ್‌ನಲ್ಲಿ ನಂಬಿಕೆಯನ್ನಿಟ್ಟಿದ್ದೆವು, ಮತ್ತು ನನಗೆ ಬೈಬಲಿನ ದೇವರ ಕುರಿತು ಗೊತ್ತಿರಲಿಲ್ಲ.” ಅವನು ಒಬ್ಬ ನಾಮಮಾತ್ರದ ಕ್ಯಾಥೊಲಿಕನಾಗಿದ್ದರೂ ವಿಷಯವು ಹೀಗಿತ್ತು.

ಯೆಹೋವನ ಸಾಕ್ಷಿಗಳ ಶುಶ್ರೂಷಕರು ಆ ಕ್ಷೇತ್ರದಲ್ಲಿ ಸಾರಲು ಬಂದರು. ಅವರು ಲಿಂಬೌಆನ್‌ ಅನ್ನು ಭೇಟಿಮಾಡಿದರು ಮತ್ತು ಬೈಬಲನ್ನು ಓದುವಂತೆ ಅವನನ್ನು ಪ್ರೋತ್ಸಾಹಿಸಿದರು. ಅವನು ಮರುಜ್ಞಾಪಿಸಿಕೊಳ್ಳುವುದು: “ಯೆಹೋವನೇ ಸತ್ಯ ದೇವರಾಗಿದ್ದಾನೆ ಎಂಬುದನ್ನು ನನಗೆ ಮನದಟ್ಟುಮಾಡಿದ್ದು ಬೈಬಲೇ.” ನಂತರ ಒಬ್ಬ ಸಾಕ್ಷಿಯು ಅವನೊಂದಿಗೆ ಬೈಬಲನ್ನು ಅಧ್ಯಯನ ಮಾಡಿದನು, ಮತ್ತು ಲಿಂಬೌಆನ್‌, ಸತ್ಯ ದೇವರನ್ನು ಸೇವಿಸುವ ತೀರ್ಮಾನವನ್ನು ಮಾಡಿದನು. ಅವನು ತನ್ನ ಹಿಂದಿನ ಮಾರ್ಗಗಳನ್ನು ಬಿಟ್ಟುಬಿಟ್ಟನು, ಮತ್ತು ಇದರಲ್ಲಿ ಸ್ಥಳಿಕ ಪಾದ್ರಿಯನ್ನು ಮತ್ತು ಅವನ ಹಿಂದಿನ ಸಂಗಡಿಗರನ್ನು ಕೋಪಗೊಳಿಸಿದ ಹೆಜ್ಜೆಯಾದ ತನ್ನ ಬುಡಕಟ್ಟಿನ ನಾಯಕನ ಸ್ಥಾನವನ್ನು ತೊರೆಯುವುದೂ ಒಳಗೂಡಿತ್ತು. ಆದರೆ, ಲಿಂಬೌಆನ್‌ ತಾನು ಬೈಬಲಿನಲ್ಲಿ ಕಂಡುಕೊಂಡಿದ್ದ ಸತ್ಯಗಳನ್ನು ಅನುಸರಿಸುವ ದೃಢತೀರ್ಮಾನವನ್ನು ಮಾಡಿದ್ದನು. ಈಗ ಅವನು ಒಬ್ಬ ಸಭಾ ಹಿರಿಯನಾಗಿ ಸೇವೆ ಸಲ್ಲಿಸುತ್ತಾನೆ.

ಏಳು ದಿನ ಮತ್ತು ಆರು ರಾತ್ರಿ

ಆಬ್ರಾದ ಕೆಲವು ಕ್ಷೇತ್ರಗಳು ಈಗ ಆಗಿಂದಾಗ್ಗೆ ಕ್ರಮವಾಗಿ ಸುವಾರ್ತೆಯನ್ನು ಕೇಳಿಸಿಕೊಳ್ಳುವುದಾದರೂ, ಬೇರೆಯವು ಬಹುದೂರದಲ್ಲಿವೆ ಮತ್ತು ಕೆಲವೊಮ್ಮೆ ಮಾತ್ರ ಒಂದು ಸಾಕ್ಷಿಯನ್ನು ಪಡೆದುಕೊಳ್ಳುತ್ತವೆ. ಸ್ವಲ್ಪ ಕಾಲಕ್ಕೆ ಮುಂಚೆ, ಈ ಕ್ಷೇತ್ರಗಳಲ್ಲೊಂದನ್ನು ತಲಪುವ ಪ್ರಯತ್ನವನ್ನು ಮಾಡಲಾಯಿತು. 35 ಸಾಕ್ಷಿಗಳ ಒಂದು ಗುಂಪು ಆಬ್ರಾದ ಟೀನಗ್‌ ಎಂಬ ಅನಿಯಮಿತ ಕ್ಷೇತ್ರದಲ್ಲಿ ಸಾರುವ ಯೋಜನೆಯೊಂದಿಗೆ ಹೊರಟಿತು​—ಈ ಸ್ಥಳವನ್ನು 27 ವರ್ಷಗಳಿಂದ ತಲಪಲಾಗಿರಲಿಲ್ಲ.

ಈ ಸಾರುವ ಕಾರ್ಯಾಚರಣೆಯು ಕಾಲುನಡಿಗೆಯಿಂದ ಮಾಡಲ್ಪಟ್ಟಿತು ಮತ್ತು ಏಳು ದಿನಗಳಿಗಿಂತ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಂಡಿತು. ಕೇವಲ ಯಾರು ಸುವಾರ್ತೆಯನ್ನು ಅಪರೂಪವಾಗಿ ಕೇಳಿಸಿಕೊಂಡಿದ್ದಾರೋ ಅವರಿಗೆ ಅದನ್ನು ಸಾರಲಿಕ್ಕಾಗಿ, ತೂಗು ಸೇತುವೆಗಳು ಮತ್ತು ಆಳವಾದ ನದಿಗಳನ್ನು ದಾಟುತ್ತಾ, ನಿಮ್ಮ ಸರಬರಾಯಿಯನ್ನು ಹೊತ್ತವರಾಗಿ ನೀವು ಹಲವಾರು ತಾಸುಗಳ ವರೆಗೆ ಪರ್ವತ ಇಳಿಜಾರುಗಳ ಸುತ್ತ ನಡೆದುಕೊಂಡು ಹೋಗುವುದನ್ನು ತುಸು ಯೋಚಿಸಿ ನೋಡಿ! ಇಡೀ ಪ್ರಯಾಣದ ಆರು ರಾತ್ರಿಗಳಲ್ಲಿ, ನಾಲ್ಕು ರಾತ್ರಿಗಳನ್ನು ಪರ್ವತದ ತೆರೆದ ಬಯಲಿನಲ್ಲಿ ನಿದ್ರಿಸುತ್ತಾ ಕಳೆಯಲಾಯಿತು.

ಈ ಕಾರ್ಯಾಚರಣೆಯ ಭಾಗವಾಗಿದ್ದ ಧೀರ ಸಾಕ್ಷಿಗಳು ತಮ್ಮೊಂದಿಗೆ ಸ್ವಲ್ಪ ಆಹಾರವನ್ನು ಕೊಂಡೊಯ್ದಿದ್ದರೂ, ಪೂರ್ತಿ ಪ್ರಯಾಣಕ್ಕಾಗಿ ಸಾಕಾಗುವಷ್ಟು ಆಹಾರವನ್ನು ಅವರು ತೆಗೆದುಕೊಂಡು ಹೋಗಸಾಧ್ಯವಾಗಲಿಲ್ಲ. ಆದರೆ ಇದು ಒಂದು ಸಮಸ್ಯೆಯಾಗಿರಲಿಲ್ಲ, ಏಕೆಂದರೆ ಜನರು ಬೈಬಲ್‌ ಆಧಾರಿತ ಪ್ರಕಾಶನಗಳಿಗಾಗಿ ಆಹಾರವನ್ನು ವಿನಿಮಯಮಾಡಿಕೊಳ್ಳಲು ಹೆಚ್ಚು ಸಂತೋಷಪಟ್ಟರು. ಸಾಕ್ಷಿಗಳು ಹೆಚ್ಚಾಗಿ ಜಮೀನಿನ ಉತ್ಪನ್ನ, ಮೀನು ಮತ್ತು ಜಿಂಕೆ ಮಾಂಸವನ್ನು ಪಡೆದುಕೊಂಡರು. ಕೆಲವು ಅನನುಕೂಲಗಳಿದ್ದವಾದರೂ, ಆ ಗುಂಪು ಹೇಳುವುದು: “ಈ ತ್ಯಾಗಗಳು ನಾವು ಅನುಭವಿಸಿದ ಹೊರಹೊಮ್ಮುವ ಆನಂದದಿಂದ ಸರಿದೂಗಿಸಲ್ಪಟ್ಟವು.”

ಏಳು ದಿನಗಳ ಅವಧಿಯಲ್ಲಿ, ಈ ಶುಶ್ರೂಷಕರು ಹತ್ತು ಹಳ್ಳಿಗಳಲ್ಲಿ ಸಾಕ್ಷಿಕೊಟ್ಟರು ಮತ್ತು 60 ಪುಸ್ತಕಗಳು, 186 ಪತ್ರಿಕೆಗಳು, 50 ಬ್ರೋಷರ್‌ಗಳು ಮತ್ತು ಅನೇಕ ಟ್ರ್ಯಾಕ್ಟ್‌ಗಳನ್ನು ನೀಡಿದರು. ಅವರು 74 ಗುಂಪುಗಳ ಜನರಿಗೆ ಬೈಬಲ್‌ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿದರು. ಟೀನಗ್‌ ಪಟ್ಟಣದಲ್ಲಿ, ಸ್ಥಳಿಕ ಅಧಿಕಾರಿಗಳು ಮತ್ತು ಇನ್ನು ಕೆಲವು ಅಗ್ರಗಣ್ಯ ನಾಡಿಗರ ಕೋರಿಕೆಗನುಸಾರ, ಒಂದು ಸಭಾ ಕೂಟವು ನಡೆಸಲ್ಪಟ್ಟಿತು ಮತ್ತು ಅದಕ್ಕೆ 78 ಮಂದಿ ಹಾಜರಿದ್ದರು. ಹಾಜರಾದವರಲ್ಲಿ ಹೆಚ್ಚಿನವರು ಶಿಕ್ಷಕರು ಅಥವಾ ಪೊಲೀಸರಾಗಿದ್ದರು. ಇನ್ನೂ ಅನೇಕ ಟಿಂಜ್ಜಿಯನ್‌ರು ‘ಹರ್ಷಧ್ವನಿಗೈಯುವ’ ಮತ್ತು ಪರ್ವತಾಗ್ರಗಳಲ್ಲಿ ಯೆಹೋವನನ್ನು ಘನಪಡಿಸುವವರನ್ನು ಸೇರಿಕೊಳ್ಳುವರೆಂಬ ನಿರೀಕ್ಷೆಯಿದೆ.

ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವಂಥದ್ದು

ಫಿಲಿಪ್ಪೀನ್ಸ್‌ನ ತೀರ ದಕ್ಷಿಣಕ್ಕೆ, ಎಲ್ಲಿ ಸ್ಪ್ಯಾನಿಷ್‌ ಜನರು ಚಿನ್ನವನ್ನು ಕಂಡುಹಿಡಿದರೋ ಆ ಕೆಲವು ದ್ವೀಪಗಳಿವೆ. ಇದು ಮಿಂಡೊರೊ ಎಂಬ ಹೆಸರು ಬರಲು ಕಾರಣವಾಯಿತು. ಮಿಂಡೊರೊ ಎಂಬುದು ಸ್ಪ್ಯಾನಿಷ್‌ ಭಾಷೆಯ ಮೀನಾ ಡ ಓರೋ ಅಥವಾ “ಚಿನ್ನದ ಗಣಿ” ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಆದರೂ, ಚಿನ್ನಕ್ಕಿಂತಲೂ ಬೆಲೆಬಾಳುವಂಥದ್ದು ಈಗ ಆ ದ್ವೀಪಗಳಲ್ಲಿ ಕಂಡುಕೊಳ್ಳಲ್ಪಡುತ್ತಿದೆ. ಅದೇನೆಂದರೆ ಸತ್ಯ ದೇವರಾದ ಯೆಹೋವನನ್ನು ಸೇವಿಸಲು ಬಯಸುವ ಜನರೇ ಆಗಿದ್ದಾರೆ.

ಮನ್ಯಾನ್‌ ಎಂದು ಕರೆಯಲ್ಪಡುವ ಸುಮಾರು 1,25,000 ಜನರು, ಮಿಂಡೊರೋದ ಏಕಾಂತ ಕಾಡಿನ ಒಳಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಒಂದು ಸರಳವಾದ ಜೀವನವನ್ನು ಜೀವಿಸುತ್ತಾರೆ, ಹೊರಗಿನವರೊಂದಿಗೆ ಕಡಿಮೆ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ ಮತ್ತು ಅವರದೇ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಅನೇಕರು ಸರ್ವಚೇತನವಾದಿಗಳೂ ಬಹುದೇವತಾರಾಧಕರೂ ಆಗಿದ್ದಾರೆ, ಮತ್ತು ನಿಸರ್ಗದ ವಿಭಿನ್ನ ಭೂತಾತ್ಮಗಳಲ್ಲಿ ನಂಬಿಕೆಯುಳ್ಳವರಾಗಿದ್ದಾರೆ.

ಕೆಲವೊಮ್ಮೆ, ಅವರಿಗೆ ಆಹಾರ ಮತ್ತು ಇನ್ನಿತರ ಸರಬರಾಯಿಗಳ ಕೊರತೆಯಿರುವಾಗ, ವ್ಯಕ್ತಿಗತವಾಗಿ ಕೆಲವು ಮನ್ಯಾನ್‌ ಜನರು ಕೆಲಸವನ್ನು ಹುಡುಕಲಿಕ್ಕಾಗಿ ತೀರ ಪ್ರದೇಶಗಳಿಗೆ ಇಳಿದುಬರುತ್ತಾರೆ. ಪಾಈಲಿಂಗ್‌ ಎಂಬವನ ಕಥೆಯೂ ಇದೇ ಆಗಿತ್ತು ಮತ್ತು ಇವನು ಮನ್ಯಾನ್‌ ಜನರ ಬಟಾನ್‌ಗಾನ್‌ ಎಂದು ಕರೆಯಲ್ಪಡುವ ಒಂದು ಉಪಗುಂಪಿನಿಂದ ಬಂದವನಾಗಿದ್ದಾನೆ. ಅವನು ತನ್ನ ಜನರೊಂದಿಗೆ ಪರ್ವತ ಅರಣ್ಯಗಳಲ್ಲಿ ಬೆಳೆದಿದ್ದನು, ಮತ್ತು ಅವನು ಬಟಾನ್‌ಗಾನ್‌ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಮೋದಿಸುವವನಾಗಿದ್ದನು. ಅವನ ಸಾಮಾನ್ಯ ವಸ್ತ್ರವು ಕೇವಲ ಒಂದು ತುಂಡುದಟ್ಟಿಯಾಗಿತ್ತು. ಒಳ್ಳೆಯ ಬೆಳೆಯನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಬಟಾನ್‌ಗಾನ್‌ನ ಪಾರಂಪರ್ಯವು, ಆರಾಧಕರು ಒಂದು ಕೋಳಿಯನ್ನು ಕೊಂದು, ಪ್ರಾರ್ಥಿಸುತ್ತಿರುವಾಗ ಅದರ ರಕ್ತವನ್ನು ನೀರಿನಲ್ಲಿ ತೊಟ್ಟಿಕ್ಕುವಂತೆ ಬಿಡುವುದನ್ನು ಅವಶ್ಯಪಡಿಸಿತು.

ಪಾಈಲಿಂಗ್‌ ಆ ಪಾರಂಪರ್ಯಗಳನ್ನು ಈಗ ಪಾಲಿಸುತ್ತಿಲ್ಲ. ಏಕಿಲ್ಲ? ಅವನು ಕೆಳನಾಡಿಗೆ ಹೋದಾಗ, ಯೆಹೋವನ ಸಾಕ್ಷಿಗಳ ಕುಟುಂಬಗಳೊಂದಿಗೆ ಕೆಲಸವನ್ನು ಕಂಡುಕೊಂಡನು. ಈ ಪರಿಸ್ಥಿತಿಯ ಸದುಪಯೋಗವನ್ನು ಮಾಡಿಕೊಳ್ಳುತ್ತಾ, ಈ ಕುಟುಂಬಗಳಲ್ಲಿ ಒಂದು ಕುಟುಂಬವು ಪಾಈಲಿಂಗ್‌ಗೆ ಬೈಬಲ್‌ ಸತ್ಯವನ್ನು ಪರಿಚಯಿಸಿತು. ಅವನು ಒಳ್ಳೆಯದಾಗಿ ಪ್ರತಿಕ್ರಿಯಿಸಿದನು ಮತ್ತು ಮಾನವರಿಗಾಗಿ ಮತ್ತು ಭೂಮಿಗಾಗಿ ಯೆಹೋವನಿಗಿರುವ ಉದ್ದೇಶವನ್ನು ಕಲಿತುಕೊಳ್ಳುವುದನ್ನು ನಿಜವಾಗಿಯೂ ಗಣ್ಯಮಾಡಿದನು. ಅವನು ಪ್ರಾಥಮಿಕ ಶಾಲೆಗೆ ಹೋಗುವ ಏರ್ಪಾಡನ್ನು, ಮಾತ್ರವಲ್ಲದೆ ಬೈಬಲನ್ನು ಅಧ್ಯಯನ ಮಾಡುವ ಏರ್ಪಾಡನ್ನು ಅವರು ಮಾಡಿದರು. ಪಾಈಲಿಂಗ್‌ 24ರ ಪ್ರಾಯದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡನು. 30 ವರ್ಷ ಪ್ರಾಯದಲ್ಲಿ ಅವನು ಪ್ರೌಢ ಶಾಲೆಯ ಎರಡನೆಯ ವರ್ಷದಲ್ಲಿದ್ದನು, ಮತ್ತು ಅವನು ತನ್ನ ಶಾಲೆಯನ್ನು ತನ್ನ ಸಾರುವ ಕ್ಷೇತ್ರವಾಗಿ ಮಾಡಿಕೊಂಡನು. ಈಗ ಅವರು ಅವನನ್ನು ರೋಲಾಂಡೋ (ಕೆಳನಾಡಿನ ಹೆಸರು) ಎಂದು ಕರೆಯುತ್ತಾರೆ.

ನೀವು ರೋಲಾಂಡೋನನ್ನು ಭೇಟಿಮಾಡುವುದಾದರೆ, ನೀವು ಪೂರ್ಣ ಸಮಯದ ಸೌವಾರ್ತಿಕನಾಗಿ ಮತ್ತು ಮಿಂಡೊರೋದ ಸಭೆಗಳಲ್ಲೊಂದರಲ್ಲಿ ಶುಶ್ರೂಷಾ ಸೇವಕನಾಗಿ ಸೇವೆ ಸಲ್ಲಿಸುತ್ತಿರುವ ಒಬ್ಬ ಸುವಸ್ತ್ರಧಾರಿತ ಹಸನ್ಮುಖಿ ಶುಶ್ರೂಷಕನನ್ನು ನೋಡುವಿರಿ. ರೋಲಾಂಡೋ ಇತ್ತೀಚೆಗೆ ಪರ್ವತಗಳಿಗೆ ಹಿಂದಿರುಗಿದನು​—ಬಟಾನ್‌ಗಾನ್‌ರೊಂದಿಗೆ ಸೇರಿ ಅವನ ಪಾರಂಪರ್ಯಗಳಲ್ಲಿ ಭಾಗವಹಿಸಲಿಕ್ಕಾಗಿ ಅಲ್ಲ, ಬದಲಿಗೆ ಬೈಬಲಿನಿಂದ ಜೀವದಾಯಕ ಸತ್ಯಗಳನ್ನು ಹಂಚಿಕೊಳ್ಳಲಿಕ್ಕಾಗಿ.

ಒಂದು ರಾಜ್ಯ ಸಭಾಗೃಹವನ್ನು ಪಡೆದುಕೊಳ್ಳಲು ಕಾತುರರು

ಬುಕಿಡ್‌ನೋನ್‌ನ (ಸೆಬುವಾನೋ ಭಾಷೆಯಲ್ಲಿ “ಪರ್ವತ ನಿವಾಸಿಗಳು” ಎಂದರ್ಥ) ಪ್ರಾಂತವು, ಮಿಂಡಾನಾವೋದ ದಕ್ಷಿಣ ದ್ವೀಪದಲ್ಲಿ ನೆಲೆಸಿದೆ. ಇದು ಪರ್ವತಗಳ, ಕಮ್ಮರಿಹಳ್ಳಗಳ, ನದಿ ಕಣಿವೆಗಳ, ಮತ್ತು ಪ್ರಸ್ಥಭೂಮಿಗಳ ಪ್ರದೇಶವಾಗಿದೆ. ಅಲ್ಲಿನ ಫಲವತ್ತಾದ ನೆಲ, ಅನಾನಾಸ್‌, ಮುಸುಕಿನ ಜೋಳ, ಕಾಫಿ, ಅಕ್ಕಿ, ಮತ್ತು ಬಾಳೆಹಣ್ಣುಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಮಲೆನಾಡಿನ ಬುಡಕಟ್ಟುಗಳಾದ ಟಲಾಂಡಿಗ್‌ ಮತ್ತು ಹಿಗಾಓನೋನ್‌ ಅಲ್ಲಿ ಜೀವಿಸುತ್ತವೆ. ಈ ಜನರು ಸಹ ಯೆಹೋವನ ಕುರಿತು ಕಲಿಯಬೇಕು. ಇತ್ತೀಚೆಗೆ ಟಾಲಾಕಾಗ್‌ ಪಟ್ಟಣದ ಸಮೀಪದಲ್ಲಿ, ಈ ಅವಕಾಶವು ಅತಿ ಆಸಕ್ತಿಕರವಾದ ರೀತಿಯಲ್ಲಿ ಒದಗಿಬಂತು.

ಮಲೆನಾಡು ಪ್ರದೇಶಗಳ ಮೇಲೆ ತಣ್ಣಗಿನ ಹವಾಮಾನವಿತ್ತಾದರೂ, ಸಾಕ್ಷಿಗಳು ಅಲ್ಲಿ ಒಂದು ಹಾರ್ದಿಕ ಸ್ವಾಗತವನ್ನು ಪಡೆದುಕೊಂಡರು. ಸರ್ವಶಕ್ತ ದೇವರಲ್ಲಿ, ತಂದೆಯಲ್ಲಿ ನಂಬಿಕೆಯಿಡುತ್ತೇವೆ ಎಂದು ಸ್ಥಳಿಕ ಜನರು ಹೇಳಿಕೊಳ್ಳುತ್ತಿದ್ದರಾದರೂ ಅವರಿಗೆ ಆತನ ಹೆಸರು ತಿಳಿದಿರಲಿಲ್ಲ. ಅವರು ತಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಕಳೆಯುತ್ತಾರಾದ್ದರಿಂದ, ಅವರು ಯೆಹೋವನ ಸಾಕ್ಷಿಗಳನ್ನು ಭೇಟಿಯಾದದ್ದು ಇದೇ ಮೊದಲ ಬಾರಿಯಾಗಿತ್ತು. ದೇವರ ಹೆಸರು ಹಾಗೂ ರಾಜ್ಯದ ಸಂಬಂಧದಲ್ಲಿ ಆತನ ಅದ್ಭುತಕರ ಉದ್ದೇಶವು ಅವರಿಗೆ ಪರಿಚಯಿಸಲ್ಪಟ್ಟಿತು. ಜನರು ತುಂಬ ಸಂತೋಷಗೊಂಡರು. ಆದುದರಿಂದ ಅವರ ಹಳ್ಳಿಗೆ ಇನ್ನೂ ಹೆಚ್ಚಿನ ಭೇಟಿಗಳು ನೀಡಲ್ಪಡಬೇಕೆಂದು ನಿರ್ಧರಿಸಲಾಯಿತು.

ಅನೇಕ ಪುನರ್ಭೇಟಿಗಳು ಮಾಡಲ್ಪಟ್ಟವು. ಇದರ ಫಲಿತಾಂಶವಾಗಿ, ಸ್ಥಳಿಕ ಜನರು ಯೆಹೋವನ ಸಾಕ್ಷಿಗಳ “ಮನೆ”ಗಾಗಿ ಒಂದು ನಿವೇಶನವನ್ನು ನೀಡಿದರು. ಸಾಕ್ಷಿಗಳು ಈ ನೀಡುವಿಕೆಯನ್ನು ಸಂತೋಷದಿಂದ ಸ್ವೀಕರಿಸಿದರು. ಆ ಕ್ಷೇತ್ರದಲ್ಲಿದ್ದ ಅತಿ ಎತ್ತರವಾದ ಗುಡ್ಡದ ಮೇಲೆ ಆ ನಿವೇಶನವಿತ್ತು. ಅಲ್ಲಿಂದ ರಸ್ತೆಯು ಕಾಣುತ್ತಿತ್ತು. ಆ ಕಟ್ಟಡವು ಮರ, ಬಿದಿರು, ಹಾಗೂ ತಾಳೆಗರಿಗಳಿಂದ ಕಟ್ಟಲ್ಪಟ್ಟಿತು. ಮೂರು ತಿಂಗಳು ಹಾಗೂ ಹತ್ತು ದಿನದಲ್ಲಿ ಆ ಕೆಲಸವು ಪೂರ್ಣಗೊಳಿಸಲ್ಪಟ್ಟಿತು. “ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂಬ ಫಲಕವು ಆ ಕಟ್ಟಡದ ಮುಂದೆ ಎದ್ದುಕಾಣುತ್ತಿತ್ತು. ಇದರ ಕುರಿತು ತುಸು ಯೋಚಿಸಿರಿ, ಒಂದು ಸಭೆಯು ರಚಿಸಲ್ಪಡುವುದಕ್ಕೆ ಮುಂಚೆಯೇ ಒಂದು ರಾಜ್ಯ ಸಭಾಗೃಹವು ಕಟ್ಟಲ್ಪಟ್ಟಿತು!

ಅಂದಿನಿಂದ, ಪೂರ್ಣ ಸಮಯದ ಶುಶ್ರೂಷಕನಾಗಿರುವ ಒಬ್ಬ ಶುಶ್ರೂಷಾ ಸೇವಕನು ಮಾಡಿದಂತೆಯೇ ಒಬ್ಬ ಸಭಾ ಹಿರಿಯನು ಇಲ್ಲಿಗೆ ಸ್ಥಳಾಂತರಿಸಿದನು. ನೆರೆಹೊರೆಯ ಕ್ಷೇತ್ರಗಳಿಂದ ಬಂದ ಸಾಕ್ಷಿಗಳೊಂದಿಗೆ ಜೊತೆಗೂಡಿ ಇವರು, ಒಂದು ಸಭೆಯನ್ನು ರೂಪಿಸುವ ಗುರಿಯ ಕಡೆಗೆ ಕೆಲಸಮಾಡಿದರು. 1998ರ ಆಗಸ್ಟ್‌ ತಿಂಗಳಿನಲ್ಲಿ ಇದು ನಿಜವಾಗಿ ಪರಿಣಮಿಸಿತು. ಪರ್ವತದ ಜನರು ಬೈಬಲ್‌ ಸತ್ಯಗಳ ಕುರಿತು ಕಲಿಯುವಂತೆ ಸಹಾಯಮಾಡುವುದರಲ್ಲಿ, ಒಂದು ಚಿಕ್ಕ ಸಭೆಯು ಈ ರಾಜ್ಯ ಸಭಾಗೃಹವನ್ನು ಈಗ ಪೂರ್ಣ ರೀತಿಯಲ್ಲಿ ಉಪಯೋಗಿಸುತ್ತಿದೆ.

ಖಂಡಿತವಾಗಿಯೂ ಯೆಹೋವನು ಫಿಲಿಪ್ಪೀನ್ಸ್‌ನಲ್ಲಿರುವ ತನ್ನ ಸಿದ್ಧಮನಸ್ಸಿನ ಸಾಕ್ಷಿಗಳನ್ನು, ತಲಪಲು ಕಷ್ಟಕರವಾಗಿರುವ ಪರ್ವತಗಳಲ್ಲಿಯೂ ರಾಜ್ಯದ ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ ಅದ್ಭುತಕರ ರೀತಿಯಲ್ಲಿ ಉಪಯೋಗಿಸಿದ್ದಾನೆ. ಇದು ನಮಗೆ ಯೆಶಾಯ 52:7ನ್ನು ಜ್ಞಾಪಕಕ್ಕೆ ತರುತ್ತದೆ. ಅದು ಹೇಳುವುದು: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!”

[ಪುಟ 11ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಬ್ರಾ

ಮಿಂಡೊರೊ

ಬುಕಿಡ್‌ನೋನ್‌

[ಕೃಪೆ]

ಭೂಗೋಳ: Mountain High Maps® Copyright © 1997 Digital Wisdom, Inc.

[ಪುಟ 10ರಲ್ಲಿರುವ ಚಿತ್ರಗಳು]

ಪರ್ವತಗಳಲ್ಲಿ ಸಾರುವ ಕೆಲಸದಲ್ಲಿ ಏರುತಗ್ಗಿನ ಪ್ರದೇಶದಲ್ಲಿ ಹಲವಾರು ತಾಸುಗಳ ಕಾಲ್ನಡೆಯು ಒಳಗೂಡಿದೆ

[ಪುಟ 10ರಲ್ಲಿರುವ ಚಿತ್ರಗಳು]

ಒಂದು ಪರ್ವತ ನದಿಯಲ್ಲಿ ದೀಕ್ಷಾಸ್ನಾನ