ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮಗೆ ಮಾದರಿಯನ್ನು ತೋರಿಸಿದ್ದೇನೆ”

“ನಿಮಗೆ ಮಾದರಿಯನ್ನು ತೋರಿಸಿದ್ದೇನೆ”

“ನಿಮಗೆ ಮಾದರಿಯನ್ನು ತೋರಿಸಿದ್ದೇನೆ”

‘ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಿತ್ತು.’​—ಇಬ್ರಿಯ 5:12.

1. ಇಬ್ರಿಯ 5:12ರ ಮಾತುಗಳು, ಒಬ್ಬ ಕ್ರೈಸ್ತನಿಗೆ ಸಹಜವಾಗಿ ಸ್ವಲ್ಪ ಮಟ್ಟಿಗಿನ ಚಿಂತೆಯನ್ನು ಏಕೆ ಉಂಟುಮಾಡಬಹುದು?

ಮುಖ್ಯ ವಚನದ ಪ್ರೇರಿತ ಮಾತುಗಳನ್ನು ಓದುವಾಗ ನಿಮಗೆ ನಿಮ್ಮ ಬಗ್ಗೆ ಸ್ವಲ್ಪ ಚಿಂತೆಯಾಗುತ್ತದೊ? ಹಾಗಾಗುವಲ್ಲಿ, ಈ ಅನಿಸಿಕೆ ನಿಮಗೊಬ್ಬರಿಗೇ ಆಗುವುದಿಲ್ಲ. ಕ್ರಿಸ್ತನ ಹಿಂಬಾಲಕರೋಪಾದಿ, ನಾವು ಬೋಧಕರಾಗಿರಬೇಕೆಂಬುದು ನಮಗೆ ತಿಳಿದಿದೆ. (ಮತ್ತಾಯ 28:​19, 20) ನಾವೀಗ ಜೀವಿಸುತ್ತಿರುವ ಸಮಯಗಳು, ನಮ್ಮಿಂದ ಸಾಧ್ಯವಿರುವಷ್ಟು ನಿಪುಣತೆಯಿಂದ ಬೋಧಿಸುವುದನ್ನು ಹೆಚ್ಚು ತುರ್ತಿನ ವಿಷಯವನ್ನಾಗಿ ಮಾಡುತ್ತವೆ ಎಂಬುದು ನಮಗೆ ತಿಳಿದಿದೆ. ಮತ್ತು ನಮ್ಮ ಬೋಧಿಸುವಿಕೆಯು ನಾವು ಯಾರಿಗೆ ಕಲಿಸುತ್ತೇವೊ ಅವರಿಗೆ ಜೀವನ್ಮರಣಗಳ ವಿಷಯವಾಗಿರಬಲ್ಲದೆಂದೂ ನಮಗೆ ತಿಳಿದಿದೆ! (1 ತಿಮೊಥೆಯ 4:16) ಸಹಜವಾಗಿಯೇ ನಾವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ನಾನು ನಿಜವಾಗಿ ಹೇಗಿರಬೇಕೊ ಆ ರೀತಿಯ ಬೋಧಕನಾಗಿದ್ದೇನೊ? ನಾನು ಹೇಗೆ ಅಭಿವೃದ್ಧಿಮಾಡಬಲ್ಲೆ?’

2, 3. (ಎ) ಒಳ್ಳೆಯ ಬೋಧಿಸುವಿಕೆಯ ಅಸ್ತಿವಾರವೇನೆಂಬುದನ್ನು ಒಬ್ಬ ಶಿಕ್ಷಕನು ಹೇಗೆ ವಿವರಿಸಿದನು? (ಬಿ) ಬೋಧಿಸುವಿಕೆಯ ವಿಷಯದಲ್ಲಿ ಯೇಸು ನಮಗೋಸ್ಕರ ಯಾವ ಮಾದರಿಯನ್ನಿಟ್ಟನು?

2 ಆದರೆ ಅಂಥ ಚಿಂತೆಗಳು ನಮ್ಮನ್ನು ನಿರುತ್ಸಾಹಗೊಳಿಸಬೇಕಾಗಿಲ್ಲ. ನಾವು ಬೋಧಿಸುವಿಕೆಯನ್ನು ವಿಶೇಷವಾದ ಕಲಾಕೌಶಲಗಳನ್ನು ಅಗತ್ಯಪಡಿಸುವಂಥ ಒಂದು ವಿಷಯವಾಗಿ ದೃಷ್ಟಿಸುವಲ್ಲಿ, ಸುಧಾರಣೆಗಳನ್ನು ಮಾಡುವುದು ತೀರ ಕಷ್ಟಕರವೆಂದು ನಮಗನಿಸಬಹುದು. ಆದರೆ ಒಳ್ಳೆಯ ಬೋಧಿಸುವಿಕೆಗೆ ಆಧಾರವು ವಿಶೇಷವಾದ ಕಲಾಕೌಶಲವಲ್ಲ, ಬದಲಾಗಿ ಇನ್ನೂ ಹೆಚ್ಚು ಪ್ರಾಮುಖ್ಯವಾದದ್ದೇನೊ ಆಗಿದೆ. ಒಬ್ಬ ಅನುಭವಿ ಶಿಕ್ಷಕನು ಈ ವಿಷಯದ ಕುರಿತು ಒಂದು ಪುಸ್ತಕದಲ್ಲಿ ಏನು ಬರೆದನೆಂಬುದನ್ನು ಗಮನಿಸಿರಿ: “ಒಳ್ಳೆಯ ಬೋಧಿಸುವಿಕೆಯು, ನಿರ್ದಿಷ್ಟ ಕಲಾಕೌಶಲಗಳು ಇಲ್ಲವೆ ಶೈಲಿಗಳು, ಯೋಜನೆಗಳು ಇಲ್ಲವೆ ಕ್ರಿಯೆಗಳ ಮೇಲೆ ಅವಲಂಬಿಸಿರುವುದಿಲ್ಲ. . . . ಬೋಧಿಸುವಿಕೆಯು ಮೂಲತಃ ಪ್ರೀತಿಗೆ ಸಂಬಂಧಪಟ್ಟದ್ದಾಗಿದೆ.” ಇದು, ಒಬ್ಬ ಐಹಿಕ ಶಿಕ್ಷಕನ ದೃಷ್ಟಿಕೋನವಾಗಿತ್ತೆಂಬುದು ನಿಜ. ಆದರೂ, ಅವನು ಹೇಳಿದ ಮಾತು ಕ್ರೈಸ್ತರೋಪಾದಿ ನಾವು ಮಾಡುವ ಬೋಧಿಸುವಿಕೆಗೆ ಇನ್ನೂ ಹೆಚ್ಚು ಅನ್ವಯವಾಗಬಹುದು. ಹೇಗೆ?

3 ಒಬ್ಬ ಬೋಧಕನು ಹೇಗಿರಬೇಕೆಂಬ ವಿಷಯದಲ್ಲಿ ನಮಗಿರುವ ಮಾದರಿಯು ಯೇಸು ಕ್ರಿಸ್ತನಲ್ಲದೆ ಬೇರಾರೂ ಅಲ್ಲ. ಅವನು ತನ್ನ ಹಿಂಬಾಲಕರಿಗೆ ಅಂದದ್ದು: “ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” (ಯೋಹಾನ 13:15) ಇಲ್ಲಿ ಅವನು ನಮ್ರತೆಯನ್ನು ತೋರಿಸುವ ವಿಷಯದಲ್ಲಿ ತಾನಿಟ್ಟ ಮಾದರಿಗೆ ಸೂಚಿಸುತ್ತಿದ್ದನಾದರೂ, ಯೇಸು ನಮಗೋಸ್ಕರ ಇಟ್ಟ ಮಾದರಿಯಲ್ಲಿ, ಭೂಮಿಯ ಮೇಲೆ ಮಾನವನೋಪಾದಿ ಅವನು ಮಾಡಿದ ಪ್ರಮುಖ ಕೆಲಸವೂ ಖಂಡಿತವಾಗಿ ಒಳಗೂಡಿದೆ. ಮತ್ತು ಆ ಕೆಲಸವು, ದೇವರ ರಾಜ್ಯದ ಸುವಾರ್ತೆಯನ್ನು ಜನರಿಗೆ ಕಲಿಸುವುದೇ ಆಗಿತ್ತು. (ಲೂಕ 4:43) ಈಗ ಯೇಸುವಿನ ಶುಶ್ರೂಷೆಯನ್ನು ವರ್ಣಿಸಲಿಕ್ಕಾಗಿ ಒಂದೇ ಒಂದು ಪದವನ್ನು ಆಯ್ಕೆಮಾಡಿ ಎಂದು ನಿಮಗೆ ಹೇಳಲ್ಪಟ್ಟರೆ, ನೀವು ಯೋಗ್ಯವಾಗಿಯೇ “ಪ್ರೀತಿ” ಎಂಬ ಪದವನ್ನು ಆಯ್ಕೆಮಾಡುವಿರಿ, ಅಲ್ಲವೇ? (ಕೊಲೊಸ್ಸೆ 1:15; 1 ಯೋಹಾನ 4:8) ತನ್ನ ಸ್ವರ್ಗೀಯ ತಂದೆಯಾದ ಯೆಹೋವನಿಗಾಗಿರುವ ಪ್ರೀತಿಯೇ ಯೇಸುವಿಗೆ ಪರಮಪ್ರಧಾನ ಸಂಗತಿಯಾಗಿತ್ತು. (ಯೋಹಾನ 14:31) ಆದರೆ ಒಬ್ಬ ಬೋಧಕನೋಪಾದಿ ಯೇಸು ಪ್ರೀತಿಯನ್ನು ಇನ್ನೂ ಎರಡು ವಿಧಗಳಲ್ಲಿ ತೋರಿಸಿದನು. ತಾನು ಬೋಧಿಸಿದಂಥ ಸತ್ಯಗಳನ್ನು ಅವನು ಪ್ರೀತಿಸಿದನು ಮತ್ತು ತಾನು ಯಾರಿಗೆ ಬೋಧಿಸಿದನೋ ಆ ಜನರನ್ನು ಅವನು ಪ್ರೀತಿಸಿದನು. ಅವನು ನಮಗೋಸ್ಕರ ಇಟ್ಟ ಮಾದರಿಯ ಈ ಎರಡು ಅಂಶಗಳ ಮೇಲೆ ನಾವೀಗ ಹೆಚ್ಚು ನಿಕಟ ಗಮನವನ್ನು ಕೇಂದ್ರೀಕರಿಸೋಣ.

ದೈವಿಕ ಸತ್ಯಗಳಿಗಾಗಿ ದೀರ್ಘಕಾಲೀನ ಪ್ರೀತಿ

4. ಯೆಹೋವನ ಬೋಧನೆಗಳಿಗಾಗಿ ಯೇಸು ಹೇಗೆ ಪ್ರೀತಿಯನ್ನು ಬೆಳೆಸಿಕೊಂಡನು?

4 ಒಬ್ಬ ಶಿಕ್ಷಕನಿಗೆ ತನ್ನ ವಿಷಯವಸ್ತುವಿನ ಕಡೆಗಿರುವ ಮನೋಭಾವವು, ಅವನ ಕಲಿಸುವಿಕೆಯ ಗುಣಮಟ್ಟದ ಮೇಲೆ ತುಂಬ ಪ್ರಭಾವ ಬೀರುತ್ತದೆ. ಅದರ ಕಡೆಗೆ ಅವನಿಗೆ ನಿರಾಸಕ್ತಿ ಇರುವಲ್ಲಿ ಅದು ಅವನ ಕಲಿಸುವಿಕೆಯಲ್ಲಿ ತೋರಿಬರುವುದು ಮತ್ತು ಅವನ ವಿದ್ಯಾರ್ಥಿಗಳಿಗೂ ಈ ನಿರಾಸಕ್ತಿಯು ಅಂಟಿಕೊಳ್ಳಬಹುದು. ಆದರೆ ಯೇಸುವಿಗೆ, ಯೆಹೋವನ ಕುರಿತಾಗಿ ಮತ್ತು ಆತನ ರಾಜ್ಯದ ಕುರಿತಾಗಿ ಅವನು ಕಲಿಸಿದಂಥ ಅಮೂಲ್ಯವಾದ ಸತ್ಯಗಳ ಬಗ್ಗೆ ಸ್ವಲ್ಪವೂ ಅನಾಸಕ್ತಿಯಿರಲಿಲ್ಲ. ಈ ವಿಷಯದ ಕುರಿತಾಗಿ ಅವನಿಗಿದ್ದ ಪ್ರೀತಿಯು ತುಂಬ ಗಹನವಾಗಿತ್ತು. ಈ ಪ್ರೀತಿಯನ್ನು ಅವನು ಒಬ್ಬ ವಿದ್ಯಾರ್ಥಿಯಾಗಿದ್ದಾಗಲೇ ಬೆಳೆಸಿಕೊಂಡಿದ್ದನು. ತನ್ನ ಮಾನವಪೂರ್ವ ಅಸ್ತಿತ್ವದ ದೀರ್ಘವಾದ ಯುಗಗಳಾದ್ಯಂತ ಈ ಏಕಜಾತ ಪುತ್ರನು ಒಬ್ಬ ಉತ್ಸುಕ ವಿದ್ಯಾರ್ಥಿಯಾಗಿದ್ದನು. ಯೆಶಾಯ 50:​4, 5 ಈ ಯುಕ್ತವಾದ ಮಾತುಗಳನ್ನು ದಾಖಲಿಸುತ್ತದೆ: “ಬಳಲಿಹೋದವರನ್ನು ಮಾತುಗಳಿಂದ ಸುದಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ; ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ. ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.”

5, 6. (ಎ) ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಯೇಸುವಿಗೆ ಯಾವ ಅನುಭವವಾಯಿತೆಂದು ವ್ಯಕ್ತವಾಗುತ್ತದೆ, ಮತ್ತು ಇದು ಅವನ ಮೇಲೆ ಯಾವ ಪರಿಣಾಮವನ್ನು ಬೀರಿತು? (ಬಿ) ದೇವರ ವಾಕ್ಯವನ್ನು ಉಪಯೋಗಿಸುವ ವಿಷಯದಲ್ಲಿ ಯೇಸು ಮತ್ತು ಸೈತಾನನ ನಡುವೆ ನಾವು ಯಾವ ವ್ಯತ್ಯಾಸವನ್ನು ನೋಡುತ್ತೇವೆ?

5 ಭೂಮಿಯ ಮೇಲೆ ಯೇಸು ಒಬ್ಬ ಮಾನವನೋಪಾದಿ ಬೆಳೆಯುತ್ತಾ ಇದ್ದಾಗ, ಅವನು ದೈವಿಕ ಜ್ಞಾನವನ್ನು ಪ್ರೀತಿಸುವುದನ್ನು ಮುಂದುವರಿಸಿದನು. (ಲೂಕ 2:52) ಆಮೇಲೆ, ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಅವನಿಗೆ ಒಂದು ಅಪೂರ್ವವಾದ ಅನುಭವವಾಯಿತು. “ಆಕಾಶವು ತೆರೆಯಿತು” ಎಂದು ಲೂಕ 3:21 ಹೇಳುತ್ತದೆ. ಆಗ ಯೇಸು ತನ್ನ ಮಾನವಪೂರ್ವ ಅಸ್ತಿತ್ವವನ್ನು ನೆನಪಿಸಿಕೊಳ್ಳಲು ಶಕ್ತನಾದನೆಂದು ವ್ಯಕ್ತವಾಗುತ್ತದೆ. ತದನಂತರ ಅವನು ಅರಣ್ಯದಲ್ಲಿ ಉಪವಾಸಮಾಡುತ್ತಾ 40 ದಿನಗಳನ್ನು ಕಳೆದನು. ತಾನು ಸ್ವರ್ಗದಲ್ಲಿದ್ದಾಗ ಯೆಹೋವನಿಂದ ಉಪದೇಶವನ್ನು ಪಡೆಯುತ್ತಾ ಕಳೆದ ಅನೇಕಾನೇಕ ಸಂದರ್ಭಗಳ ಕುರಿತು ಮನನಮಾಡುವುದರಲ್ಲಿ ಅವನು ತೀವ್ರ ಆನಂದವನ್ನು ಕಂಡುಕೊಂಡಿರಬೇಕು. ಆದರೆ ಸ್ವಲ್ಪ ಸಮಯದಲ್ಲೇ, ದೇವರ ಸತ್ಯಗಳಿಗಾಗಿ ಅವನಿಗಿದ್ದ ಪ್ರೀತಿಯು ಪರೀಕ್ಷೆಗೊಡ್ಡಲ್ಪಟ್ಟಿತು.

6 ಯೇಸು ಬಹಳ ದಣಿದು ಹಸಿವಿನಿಂದಿದ್ದಾಗ, ಸೈತಾನನು ಅವನನ್ನು ಪ್ರಲೋಭಿಸಲು ಪ್ರಯತ್ನಿಸಿದನು. ದೇವರ ಈ ಇಬ್ಬರೂ ಪುತ್ರರ ನಡುವೆ ಎಷ್ಟೊಂದು ವ್ಯತ್ಯಾಸವನ್ನು ನಾವು ನೋಡುತ್ತೇವೆ! ಇಬ್ಬರೂ ಹೀಬ್ರು ಶಾಸ್ತ್ರವಚನಗಳಿಂದಲೇ ಉಲ್ಲೇಖಿಸಿದರು. ಆದರೆ ಸಂಪೂರ್ಣವಾಗಿ ಭಿನ್ನವಾದ ಮನೋಭಾವಗಳೊಂದಿಗೆ ಹಾಗೆ ಮಾಡಿದರು. ಸೈತಾನನು ದೇವರ ವಾಕ್ಯವನ್ನು ತನ್ನ ಸ್ವಂತ ಸ್ವಾರ್ಥಪರ ಉದ್ದೇಶಗಳಿಗಾಗಿ ಅಗೌರವಪೂರ್ವಕವಾಗಿ ಉಪಯೋಗಿಸುತ್ತಾ, ಅದರ ವಿಷಯಗಳನ್ನು ತಿರುಚಿದನು. ವಾಸ್ತವದಲ್ಲಿ ಆ ದಂಗೆಕೋರನಿಗೆ ದೈವಿಕ ಸತ್ಯಗಳ ಬಗ್ಗೆ ಕೇವಲ ತಿರಸ್ಕಾರವಿತ್ತಷ್ಟೆ. ಆದರೆ ಇನ್ನೊಂದು ಬದಿಯಲ್ಲಿ ಯೇಸು, ತನ್ನ ಪ್ರತಿಯೊಂದು ಉತ್ತರದಲ್ಲಿ ದೇವರ ವಾಕ್ಯವನ್ನು ಜಾಗರೂಕತೆಯಿಂದ ಉಪಯೋಗಿಸುತ್ತಾ, ಸುವ್ಯಕ್ತವಾಗಿದ್ದ ಪ್ರೀತಿಯಿಂದ ಶಾಸ್ತ್ರವಚನಗಳನ್ನು ಉಲ್ಲೇಖಿಸಿದನು. ಆ ಪ್ರೇರಿತ ಮಾತುಗಳು ಮೊದಲಾಗಿ ಬರೆಯಲ್ಪಡುವ ಎಷ್ಟೋ ಸಮಯದ ಹಿಂದೆಯೇ ಯೇಸು ಅಸ್ತಿತ್ವದಲ್ಲಿದ್ದನು. ಆದರೂ ಅವನು ಆ ಮಾತುಗಳನ್ನು ಭಯಭಕ್ತಿಯಿಂದ ಪರಿಗಣಿಸಿದನು. ಏಕೆಂದರೆ ಅವು ಅವನ ಸ್ವರ್ಗೀಯ ತಂದೆಯಿಂದ ಬಂದಂಥ ಅಮೂಲ್ಯವಾದ ಸತ್ಯಗಳಾಗಿದ್ದವು! ಯೆಹೋವನಿಂದ ಬಂದಿರುವ ಆ ಮಾತುಗಳು ಆಹಾರಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿದ್ದವೆಂದು ಅವನು ಸೈತಾನನಿಗೆ ಹೇಳಿದನು. (ಮತ್ತಾಯ 4:​1-11) ಯೆಹೋವನು ತನಗೆ ಕಲಿಸಿದಂಥ ಎಲ್ಲ ಸತ್ಯಗಳನ್ನು ಯೇಸು ಪ್ರೀತಿಸಿದನು. ಆದರೆ ಈ ಪ್ರೀತಿಯನ್ನು ಒಬ್ಬ ಬೋಧಕನೋಪಾದಿ ಅವನು ತೋರಿಸಿದ್ದು ಹೇಗೆ?

ತಾನು ಬೋಧಿಸಿದಂಥ ಸತ್ಯಗಳಿಗಾಗಿ ಪ್ರೀತಿ

7. ತನ್ನ ಸ್ವಂತ ಬೋಧನೆಗಳನ್ನು ಕಲ್ಪಿಸಿಕೊಳ್ಳುವುದರಿಂದ ಯೇಸು ದೂರವಿದ್ದದ್ದು ಏಕೆ?

7 ತಾನು ಬೋಧಿಸಿದಂಥ ಸತ್ಯಗಳಿಗಾಗಿ ಯೇಸುವಿಗಿದ್ದ ಪ್ರೀತಿಯು ಯಾವಾಗಲೂ ವ್ಯಕ್ತವಾಗುತ್ತಿತ್ತು. ಅವನಿಗೆ ಮನಸ್ಸಿದ್ದರೆ, ಅವನು ಸುಲಭವಾಗಿ ತನ್ನ ಸ್ವಂತ ವಿಚಾರಗಳನ್ನೇ ವಿಕಸಿಸಬಹುದಿತ್ತು. ಯಾಕೆಂದರೆ ಅವನಲ್ಲಿ ಜ್ಞಾನವಿವೇಕಗಳ ವಿಸ್ತಾರವಾದ ಭಂಡಾರವೇ ಇತ್ತು. (ಕೊಲೊಸ್ಸೆ 2:2) ಹಾಗಿದ್ದರೂ, ತಾನು ಬೋಧಿಸುವಂಥದ್ದೆಲ್ಲವೂ ತನ್ನದಲ್ಲ ಬದಲಾಗಿ ತನ್ನ ಸ್ವರ್ಗೀಯ ತಂದೆಯಿಂದ ಬಂದದ್ದಾಗಿದೆ ಎಂಬುದನ್ನು ಅವನು ತನ್ನ ಕೇಳುಗರಿಗೆ ಪದೇ ಪದೇ ಜ್ಞಾಪಕಹುಟ್ಟಿಸಿದನು. (ಯೋಹಾನ 7:16; 8:28; 12:49; 14:10) ಅವನು ದೈವಿಕ ಸತ್ಯಗಳನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ, ಅವುಗಳ ಸ್ಥಾನದಲ್ಲಿ ಅವನೆಂದೂ ತನ್ನ ಸ್ವಂತ ವಿಚಾರಗಳನ್ನು ಹಾಕಲಿಲ್ಲ.

8. ತನ್ನ ಶುಶ್ರೂಷೆಯ ಆರಂಭದಲ್ಲಿ ಯೇಸು, ದೇವರ ವಾಕ್ಯದ ಮೇಲೆ ಆತುಕೊಳ್ಳುವುದರ ವಿಷಯದಲ್ಲಿ ಹೇಗೆ ಮಾದರಿಯನ್ನಿಟ್ಟನು?

8 ಯೇಸು ತನ್ನ ಬಹಿರಂಗ ಶುಶ್ರೂಷೆಯನ್ನು ಆರಂಭಿಸಿದಾಗ, ಸ್ವಲ್ಪ ಸಮಯದೊಳಗೇ ಅವನು ಒಂದು ಮಾದರಿಯನ್ನಿಟ್ಟನು. ತಾನು ವಾಗ್ದತ್ತ ಮೆಸ್ಸೀಯನಾಗಿದ್ದೇನೆಂದು ಅವನು ದೇವಜನರಿಗೆ ಮೊತ್ತಮೊದಲ ಬಾರಿ ಘೋಷಿಸಿದ ವಿಧವನ್ನು ಪರಿಗಣಿಸಿರಿ. ಜನಸಮೂಹಗಳ ಮುಂದೆ ನಿಂತು, ನಾನೇ ಕ್ರಿಸ್ತನು ಎಂದು ಘೋಷಿಸಿ, ಅನಂತರ ತನ್ನ ಈ ಮಾತನ್ನು ಸಾಬೀತುಗೊಳಿಸಲಿಕ್ಕಾಗಿ ಕಣ್ಣುಕುಕ್ಕುವಂಥ ರೀತಿಯ ಅದ್ಭುತಗಳನ್ನು ನಡೆಸಿದನೊ? ಇಲ್ಲ. ಅವನೊಂದು ಸಭಾಮಂದಿರಕ್ಕೆ ಹೋದನು. ಅಲ್ಲಿ ದೇವಜನರು ಶಾಸ್ತ್ರವಚನಗಳನ್ನು ಓದುವುದು ವಾಡಿಕೆಯಾಗಿತ್ತು. ಆ ಸಭಾಮಂದಿರದಲ್ಲಿ ಅವನು ಯೆಶಾಯ 61:​1, 2ರ ಪ್ರವಾದನೆಯನ್ನು ಗಟ್ಟಿಯಾಗಿ ಓದಿಹೇಳಿದನು ಮತ್ತು ಈ ಪ್ರವಾದನಾ ಸತ್ಯಗಳು ತನಗೆ ಅನ್ವಯಿಸುತ್ತವೆಂದು ವಿವರಿಸಿದನು. (ಲೂಕ 4:​16-22) ಅವನ ಅನೇಕ ಅದ್ಭುತಗಳು, ಅವನಿಗೆ ದೇವರ ಬೆಂಬಲವಿದೆಯೆಂಬುದನ್ನು ರುಜುಪಡಿಸಲು ಸಹಾಯಮಾಡಿದವು. ಹಾಗಿದ್ದರೂ ತನ್ನ ಬೋಧಿಸುವಿಕೆಯಲ್ಲಿ ಅವನು ಯಾವಾಗಲೂ ದೇವರ ವಾಕ್ಯದ ಮೇಲೆ ಆತುಕೊಂಡನು.

9. ಫರಿಸಾಯರೊಂದಿಗಿನ ತನ್ನ ವ್ಯವಹಾರಗಳಲ್ಲಿ, ದೇವರ ವಾಕ್ಯಕ್ಕಾಗಿ ತನಗಿದ್ದ ನಿಷ್ಠಾವಂತ ಪ್ರೀತಿಯನ್ನು ಯೇಸು ಹೇಗೆ ತೋರಿಸಿದನು?

9 ಧಾರ್ಮಿಕ ವಿರೋಧಿಗಳು ಯೇಸುವಿಗೆ ಸವಾಲೊಡ್ಡಿದಾಗ, ಅವನು ಅವರನ್ನು ಬುದ್ಧಿವಂತಿಕೆಯಲ್ಲಿ ಮೀರಿಸಲು ಪ್ರಯತ್ನಿಸಲಿಲ್ಲ. ಒಂದುವೇಳೆ ಅವನು ಇದನ್ನು ಮಾಡುತ್ತಿದ್ದರೂ, ಅವನು ಸುಲಭವಾಗಿ ಅವರನ್ನು ಜಯಿಸಸಾಧ್ಯವಿತ್ತು. ಅದರ ಬದಲು ದೇವರ ವಾಕ್ಯವೇ ಅವರನ್ನು ತಪ್ಪೆಂದು ರುಜುಪಡಿಸುವಂತೆ ಬಿಟ್ಟನು. ಉದಾಹರಣೆಗಾಗಿ, ಈ ಘಟನೆಯನ್ನು ಜ್ಞಾಪಿಸಿಕೊಳ್ಳಿರಿ. ಯೇಸುವಿನ ಹಿಂಬಾಲಕರು ಹೊಲಗಳಲ್ಲಿ ತೆನೆಗಳನ್ನು ಮುರಿದು ತಿಂದಾಗ, ಅವರು ಸಬ್ಬತ್‌ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಫರಿಸಾಯರು ಅವರ ಮೇಲೆ ಆರೋಪ ಹೊರಿಸಿದರು. ಯೇಸು ಉತ್ತರಿಸಿದ್ದು: “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬದನ್ನು ನೀವು ಓದಲಿಲ್ಲವೋ”? (ಮತ್ತಾಯ 12:​1-5) 1 ಸಮುವೇಲ 21:​1-6ರಲ್ಲಿ ದಾಖಲಿಸಲ್ಪಟ್ಟಿರುವ ಈ ಪ್ರೇರಿತ ವೃತ್ತಾಂತವನ್ನು ಆ ಸ್ವನೀತಿವಂತ ಪುರುಷರು ಖಂಡಿತವಾಗಿ ಓದಿದ್ದಿರಬೇಕು. ಅವರು ಓದಿದರೂ, ಅದರಲ್ಲಿ ಅಡಕವಾಗಿದ್ದ ಒಂದು ಪ್ರಮುಖ ಪಾಠವನ್ನು ಗ್ರಹಿಸಲು ತಪ್ಪಿಬಿದ್ದರು. ಯೇಸುವಾದರೊ ಆ ವೃತ್ತಾಂತವನ್ನು ಓದುವುದಕ್ಕಿಂತ ಹೆಚ್ಚನ್ನು ಮಾಡಿದ್ದನು. ಅವನು ಅದರ ಕುರಿತಾಗಿ ಯೋಚಿಸಿದ್ದನು ಮತ್ತು ಅದರಿಂದ ಕಲಿತಂಥ ಮೂಲತತ್ತ್ವಗಳನ್ನು ಅಂಗೀಕರಿಸಿದ್ದನು. ಶಾಸ್ತ್ರವಚನಗಳ ಆ ಭಾಗದ ಮುಖಾಂತರ ಯೆಹೋವನು ಕಲಿಸಿದಂಥ ಮೂಲತತ್ತ್ವಗಳನ್ನು ಅವನು ಪ್ರೀತಿಸಿದನು. ಆದುದರಿಂದ ಅವನು ಆ ವೃತ್ತಾಂತವನ್ನೂ, ಅದರೊಂದಿಗೆ ಮೋಶೆಯ ಧರ್ಮಶಾಸ್ತ್ರದಿಂದ ಒಂದು ಉದಾಹರಣೆಯನ್ನೂ ಉಪಯೋಗಿಸಿ, ಧರ್ಮಶಾಸ್ತ್ರದ ಸಾಮಂಜಸ್ಯತೆಯನ್ನು ತೋರಿಸಿದನು. ಅದೇ ರೀತಿಯಲ್ಲಿ, ಯೇಸುವಿಗಿದ್ದ ನಿಷ್ಠಾಭರಿತ ಪ್ರೀತಿಯು, ತಮ್ಮ ಸ್ವಂತ ಪ್ರಯೋಜನಕ್ಕಾಗಿ ದೇವರ ವಾಕ್ಯದ ಅರ್ಥವನ್ನು ಬದಲಾಯಿಸಲು ಅಥವಾ ಮಾನವ ಸಂಪ್ರದಾಯಗಳೆಂಬ ಉಸುಬಿನಡಿಯಲ್ಲಿ ಅದನ್ನು ಹೂತುಹಾಕಲು ಧಾರ್ಮಿಕ ಮುಖಂಡರು ಮಾಡುತ್ತಿದ್ದ ಪ್ರಯತ್ನಗಳ ವಿರುದ್ಧ ಅದನ್ನು ರಕ್ಷಿಸುವಂತೆ ಅವನನ್ನು ಪ್ರೇರಿಸಿತು.

10. ತನ್ನ ಬೋಧಿಸುವಿಕೆಯ ಗುಣಮಟ್ಟದ ಕುರಿತಾದ ಪ್ರವಾದನೆಗಳನ್ನು ಯೇಸು ಹೇಗೆ ನೆರವೇರಿಸಿದನು?

10 ತಾನು ಬೋಧಿಸುತ್ತಿದ್ದ ಸತ್ಯಕ್ಕಾಗಿ ಯೇಸುವಿಗಿದ್ದ ಪ್ರೀತಿಯು, ಅವನು ಹೇಳಿದ್ದನ್ನೇ ಪುನಃ ಪುನಃ ಹೇಳುತ್ತಾ, ಬೇಸರಹಿಡಿಸುವಂಥ ಇಲ್ಲವೆ ಯಾಂತ್ರಿಕವಾಗಿರುವ ರೀತಿಯಲ್ಲಿ ಕಲಿಸುವಂತೆ ಎಂದಿಗೂ ಅನುಮತಿಸಲಿಲ್ಲ. ಮೆಸ್ಸೀಯನ ಮಾತು “ಮಧುರ”ವಾಗಿರುವುದು ಮತ್ತು ಅವನು ‘ಇಂಪಾದ ಮಾತುಗಳನ್ನು’ ಉಪಯೋಗಿಸುವನೆಂದು ಪ್ರೇರಿತ ಪ್ರವಾದನೆಗಳು ಸೂಚಿಸಿದ್ದವು. (ಕೀರ್ತನೆ 45:2; ಆದಿಕಾಂಡ 49:21) ತಾನು ಬಹಳಷ್ಟು ಪ್ರೀತಿಸುತ್ತಿದ್ದ ಸತ್ಯಗಳನ್ನು ಬೋಧಿಸುತ್ತಿರುವಾಗ ‘ಇಂಪಾದ ಮಾತುಗಳನ್ನು’ ಉಪಯೋಗಿಸುತ್ತಾ, ತನ್ನ ಸಂದೇಶವನ್ನು ಆಸಕ್ತಿದಾಯಕವಾಗಿ ಹಾಗೂ ಜೀವಂತವಾಗಿರಿಸುವ ಮೂಲಕ ಯೇಸು ಆ ಪ್ರವಾದನೆಗಳನ್ನು ನೆರವೇರಿಸಿದನು. (ಲೂಕ 4:22) ಅವನಿಗಿದ್ದ ಉತ್ಸಾಹವು ಅವನ ಮುಖಭಾವಗಳನ್ನು ಚೇತನಗೊಳಿಸುತ್ತಾ, ಅವನು ಮಾತಾಡುತ್ತಿದ್ದ ವಿಷಯದಲ್ಲಿ ಅವನಿಗಿದ್ದ ನಿಜವಾದ ಆಸಕ್ತಿಯಿಂದ ಅವನ ಕಣ್ಣುಗಳು ಮಿನುಗುತ್ತಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಅವನಿಗೆ ಕಿವಿಗೊಡುವುದು ಎಷ್ಟು ಆನಂದದಾಯಕವಾಗಿದ್ದಿರಬೇಕು, ಮತ್ತು ಇದು ನಾವು ಏನನ್ನು ಕಲಿತಿದ್ದೇವೊ ಅದರ ಬಗ್ಗೆ ಇತರರೊಂದಿಗೆ ಮಾತಾಡುವಾಗ ಅನುಸರಿಸಲಿಕ್ಕಾಗಿ ಎಂಥ ಉತ್ತಮ ಮಾದರಿ!

11. ಒಬ್ಬ ಬೋಧಕನೋಪಾದಿ ಯೇಸುವಿಗಿದ್ದ ಸಾಮರ್ಥ್ಯಗಳು, ಅವನು ಎಂದಿಗೂ ಗರ್ವದಿಂದ ಉಬ್ಬಿಹೋಗುವಂತೆ ಮಾಡಲಿಲ್ಲವೇಕೆ?

11 ದೈವಿಕ ಸತ್ಯಗಳ ಕುರಿತು ಯೇಸುವಿಗಿದ್ದಂಥ ಅಪಾರ ಗ್ರಹಣಶಕ್ತಿ ಮತ್ತು ಕೇಳಲು ಹಿತಕರವಾದ ಅವನ ನುಡಿಯು, ಅವನು ಗರ್ವದಿಂದ ಉಬ್ಬಿಹೋಗುವಂತೆ ಮಾಡಿತೊ? ಇದು ಮಾನವ ಶಿಕ್ಷಕರ ವಿಷಯದಲ್ಲಿ ಅನೇಕವೇಳೆ ಸಂಭವಿಸುತ್ತದೆ. ಯೇಸುವಾದರೊ ದೈವಿಕ ವಿಧದಲ್ಲಿ ವಿವೇಕಿಯಾಗಿದ್ದನು ಎಂಬುದನ್ನು ನೆನಪಿನಲ್ಲಿಡಿರಿ. ಮತ್ತು ಅಂಥ ವಿವೇಕವು, ಅಹಂಭಾವಕ್ಕೆ ಎಡೆಗೊಡುವುದಿಲ್ಲ, ಯಾಕೆಂದರೆ “ವಿವೇಕವಿರುವುದು ವಿನಯಶೀಲರಲ್ಲೇ.” (ಜ್ಞಾನೋಕ್ತಿ 11:2, NW) ಯೇಸು ಗರ್ವಿಷ್ಟನು ಇಲ್ಲವೆ ಅಹಂಭಾವದವನಾಗುವುದರಿಂದ ಅವನನ್ನು ತಡೆಗಟ್ಟಿದಂಥ ಬೇರಾವುದೊ ವಿಷಯವೂ ಇತ್ತು.

ತಾನು ಯಾರಿಗೆ ಬೋಧಿಸಿದನೊ ಆ ಜನರನ್ನು ಯೇಸು ಪ್ರೀತಿಸಿದನು

12. ತನ್ನ ಹಿಂಬಾಲಕರು ತನಗೆ ಹೆದರುವಂತೆ ಯೇಸು ಬಯಸಲಿಲ್ಲವೆಂಬುದನ್ನು ಅವನು ಹೇಗೆ ತೋರಿಸಿದನು?

12 ಜನರಿಗಾಗಿ ಯೇಸುವಿಗಿದ್ದ ಗಾಢವಾದ ಪ್ರೀತಿಯು ಅವನ ಬೋಧಿಸುವಿಕೆಯಲ್ಲಿ ಯಾವಾಗಲೂ ವ್ಯಕ್ತವಾಗುತ್ತಿತ್ತು. ಅವನ ಬೋಧಿಸುವಿಕೆಯು, ಅಹಂಕಾರಭರಿತ ಮಾನವರ ಬೋಧಿಸುವಿಕೆಯಂತೆ ಜನರಲ್ಲಿ ಎಂದೂ ಭಯವನ್ನು ಹುಟ್ಟಿಸುತ್ತಿರಲಿಲ್ಲ. (ಪ್ರಸಂಗಿ 8:9) ಯೇಸುವಿನ ಅದ್ಭುತಕಾರ್ಯಗಳಲ್ಲೊಂದನ್ನು ಕಣ್ಣಾರೆ ಕಂಡ ನಂತರ, ಆಶ್ಚರ್ಯದಿಂದ ಭಾವಪರವಶನಾದ ಪೇತ್ರನು ಯೇಸುವಿನ ಮೊಣಕಾಲುಗಳ ಬಳಿ ಅಡ್ಡಬಿದ್ದನು. ಆದರೆ ತನ್ನ ಹಿಂಬಾಲಕರಿಗೆ ತನ್ನ ವಿಷಯದಲ್ಲಿ ಅಹಿತಕರವಾದ ಹೆದರಿಕೆಯಿರುವಂತೆ ಯೇಸು ಬಯಸಲಿಲ್ಲ. ಅವನು ದಯೆಯಿಂದ, “ಅಂಜಬೇಡ” ಎಂದು ಹೇಳಿದನು ಮತ್ತು ನಂತರ ಪೇತ್ರನಿಗೆ, ಅವನು ಪಾಲ್ಗೊಳ್ಳಲಿರುವ ಶಿಷ್ಯರನ್ನಾಗಿ ಮಾಡುವ ರೋಮಾಂಚಕ ಕೆಲಸದ ಕುರಿತಾಗಿ ಹೇಳಿದನು. (ಲೂಕ 5:​8-10) ತನ್ನ ಶಿಷ್ಯರು ತಮಗೆ ಉಪದೇಶ ನೀಡುವವನ ಭಯದಿಂದಲ್ಲ, ಬದಲಾಗಿ ದೇವರ ಕುರಿತಾದ ಅಮೂಲ್ಯವಾದ ಸತ್ಯಗಳಿಗಾಗಿ ತಮ್ಮ ಸ್ವಂತ ಪ್ರೀತಿಯಿಂದ ಪ್ರಚೋದಿಸಲ್ಪಡುವುದನ್ನು ಯೇಸು ಬಯಸಿದನು.

13, 14. ಯೇಸು ಯಾವ ವಿಧಗಳಲ್ಲಿ ಜನರಿಗಾಗಿ ಪರಾನುಭೂತಿಯನ್ನು ತೋರಿಸಿದನು?

13 ಯೇಸು ಯಾರಿಗೆ ಕಲಿಸಿದನೋ ಆ ಜನರಿಗಾಗಿ ಅವನಿಗಿದ್ದ ಪ್ರೀತಿಯು, ಅವರಿಗಾಗಿ ಅವನಲ್ಲಿದ್ದ ಪರಾನುಭೂತಿಯಿಂದಲೂ ವ್ಯಕ್ತವಾಗುತ್ತಿತ್ತು. “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಅವರಿದ್ದ ಕರುಣಾಜನಕ ಸ್ಥಿತಿಯ ಬಗ್ಗೆ ಅವನು ಮರುಗಿದನು ಮತ್ತು ಅವರಿಗೆ ಸಹಾಯ ನೀಡುವಂತೆ ಪ್ರೇರಿಸಲ್ಪಟ್ಟನು.

14 ಇನ್ನೊಂದು ಸಂದರ್ಭದಲ್ಲಿ ಯೇಸು ತೋರಿಸಿದ ಪರಾನುಭೂತಿಯನ್ನು ಗಮನಿಸಿರಿ. ರಕ್ತಕುಸುಮರೋಗವಿದ್ದ ಒಬ್ಬ ಸ್ತ್ರೀಯು ಜನಸಂದಣಿಯಲ್ಲಿ ಅವನ ಬಳಿ ಬಂದು ಅವನ ಬಟ್ಟೆಯ ಅಂಚನ್ನು ಮುಟ್ಟಿದಾಗ, ಅವಳು ಅದ್ಭುತಕರವಾಗಿ ಗುಣಹೊಂದಿದಳು. ತನ್ನಿಂದ ಶಕ್ತಿಯು ಹೊರಡುವುದು ಯೇಸುವಿಗೆ ತಿಳಿದುಬಂತು, ಆದರೆ ಯಾರು ಗುಣಪಡಿಸಲ್ಪಟ್ಟಿದ್ದರೆಂಬುದನ್ನು ಅವನು ನೋಡಿರಲಿಲ್ಲ. ಆ ಸ್ತ್ರೀ ಯಾರೆಂಬುದನ್ನು ಅವನು ತಿಳಿದುಕೊಳ್ಳಬೇಕೆಂದು ಪಟ್ಟುಹಿಡಿದನು. ಯಾಕೆ? ಅವಳು ಭಯಪಟ್ಟಂತೆ, ಧರ್ಮಶಾಸ್ತ್ರವನ್ನು ಅಥವಾ ಶಾಸ್ತ್ರಿಗಳು ಮತ್ತು ಫರಿಸಾಯರ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವಳನ್ನು ಎಲ್ಲರ ಮುಂದೆ ಟೀಕಿಸುವುದಕ್ಕಾಗಿ ಅಲ್ಲ. ಬದಲಾಗಿ ಅವನು ಅವಳಿಗೆ ಹೀಗಂದನು: “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ.” (ಮಾರ್ಕ 5:25-34) ಆ ಮಾತುಗಳಲ್ಲಿನ ಪರಾನುಭೂತಿಯನ್ನು ಗಮನಿಸಿರಿ. ಅವನು “ಗುಣವಾಗು” ಎಂದಷ್ಟೇ ಹೇಳಲಿಲ್ಲ. ಬದಲಾಗಿ, “ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ” ಎಂದು ಹೇಳಿದನು. ಮಾರ್ಕನು ಇಲ್ಲಿ ಉಪಯೋಗಿಸಿದಂಥ ಒಂದು ಪದದ ಅಕ್ಷರಾರ್ಥವು, “ಕೊರಡೆಯ ಏಟನ್ನು ಕೊಡುವುದು” ಎಂದಾಗಿದೆ. ಇದು, ಹೆಚ್ಚಾಗಿ ಚಿತ್ರಹಿಂಸೆಗಾಗಿ ಉಪಯೋಗಿಸಲಾಗುತ್ತಿದ್ದ ಒಂದು ರೀತಿಯ ಚಾವಟಿಯೇಟು ಆಗಿತ್ತು. ಹೀಗೆ, ಅವಳ ಅಸ್ವಸ್ಥತೆಯು ಅವಳಿಗೆ ಪೀಡೆಯನ್ನು, ಪ್ರಾಯಶಃ ತೀಕ್ಷ್ಣವಾದ ಶಾರೀರಿಕ ಹಾಗೂ ಭಾವನಾತ್ಮಕ ನೋವನ್ನು ಉಂಟುಮಾಡಿತ್ತೆಂಬುದನ್ನು ಯೇಸು ಗ್ರಹಿಸಿದನು. ಅವನು ಅವಳಿಗೆ ಪರಾನುಭೂತಿಯನ್ನು ತೋರಿಸಿದನು.

15, 16. ಯೇಸುವಿನ ಶುಶ್ರೂಷೆಯಲ್ಲಿನ ಯಾವ ಘಟನೆಗಳು, ಅವನು ಜನರಲ್ಲಿನ ಒಳ್ಳೆಯ ಗುಣಗಳಿಗಾಗಿ ಹುಡುಕುತ್ತಿದ್ದನೆಂಬುದನ್ನು ತೋರಿಸುತ್ತದೆ?

15 ಜನರಲ್ಲಿದ್ದ ಒಳ್ಳೆಯ ಗುಣಗಳನ್ನು ಹುಡುಕುವ ಮೂಲಕವೂ ಯೇಸು ಅವರಿಗಾಗಿ ತನಗಿದ್ದ ಪ್ರೀತಿಯನ್ನು ತೋರಿಸಿದನು. ಸಮಯಾನಂತರ ಒಬ್ಬ ಅಪೊಸ್ತಲನಾಗಿ ಪರಿಣಮಿಸಿದ ನತಾನಯೇಲನನ್ನು ಅವನು ಭೇಟಿಯಾದಾಗ ಏನಾಯಿತೆಂಬುದನ್ನು ಪರಿಗಣಿಸಿರಿ. “ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ​—ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.” ಅದ್ಭುತಕರವಾದ ಶಕ್ತಿಯ ಮೂಲಕ ಯೇಸು ನತಾನಯೇಲನ ಆಂತರಿಕ ಗುಣಗಳನ್ನು ಗಮನಿಸಿ, ಅವನ ಕುರಿತಾಗಿ ಬಹಳಷ್ಟನ್ನು ತಿಳಿದುಕೊಂಡಿದ್ದನು. ನತಾನಯೇಲನು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿರಲಿಲ್ಲ ನಿಜ. ನಮ್ಮೆಲ್ಲರಂತೆ ಅವನಲ್ಲೂ ಅವನದ್ದೇ ಆದ ಲೋಪದೋಷಗಳಿದ್ದವು. ವಾಸ್ತವದಲ್ಲಿ ಅವನು ಯೇಸುವಿನ ಕುರಿತಾಗಿ ಕೇಳಿಸಿಕೊಂಡಾಗ, “ಒಳ್ಳೇದೇನಾದರೂ ನಜರೇತಿನಿಂದ ಬರುವದುಂಟೇ?” ಎಂದು ಬಹುಮಟ್ಟಿಗೆ ನಿರ್ದಾಕ್ಷಿಣ್ಯವಾಗಿ ಕೇಳಿದ್ದನು. (ಯೋಹಾನ 1:45-51) ಆದರೆ ನತಾನಯೇಲನ ಬಗ್ಗೆ ಹೇಳಬಹುದಾದ ಎಲ್ಲ ಸಂಗತಿಗಳಲ್ಲಿ, ಯೇಸು ಅವನ ಕುರಿತಾದ ಒಂದು ಶ್ಲಾಘನೀಯ ವಿಷಯದ ಮೇಲೆ, ಅಂದರೆ ಅವನ ಪ್ರಾಮಾಣಿಕತೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಆಯ್ಕೆಮಾಡಿದನು.

16 ಅದೇ ರೀತಿಯಲ್ಲಿ ಒಬ್ಬ ಶತಾಧಿಪತಿಯು, ಪ್ರಾಯಶಃ ಅನ್ಯಜನಾಂಗದವನಾಗಿದ್ದ ಒಬ್ಬ ರೋಮನ್‌ ವ್ಯಕ್ತಿಯು, ಯೇಸುವಿನ ಬಳಿಗೆ ಬಂದು ತನ್ನ ಅಸ್ವಸ್ಥ ಆಳನ್ನು ಗುಣಪಡಿಸುವಂತೆ ಕೇಳಿಕೊಂಡಾಗ, ಆ ಸೈನಿಕನಲ್ಲಿ ದೋಷಗಳಿದ್ದವೆಂದು ಯೇಸುವಿಗೆ ತಿಳಿದಿತ್ತು. ಆ ದಿನಗಳಲ್ಲಿ ಒಬ್ಬ ಶತಾಧಿಪತಿಯ ಚರಿತ್ರೆಯು, ಅನೇಕ ಹಿಂಸಾಕೃತ್ಯಗಳು, ರಕ್ತಪಾತ ಮತ್ತು ಸುಳ್ಳಾರಾಧನೆಯಿಂದ ತುಂಬಿದ್ದಿರಬಹುದು. ಹಾಗಿದ್ದರೂ ಯೇಸು ಒಂದು ಒಳ್ಳೇ ವಿಷಯದ ಮೇಲೆ, ಅಂದರೆ ಆ ಮನುಷ್ಯನ ಎದ್ದುಕಾಣುವಂಥ ನಂಬಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದನು. (ಮತ್ತಾಯ 8:​5-13) ತದನಂತರ, ತನ್ನ ಪಕ್ಕದಲ್ಲಿದ್ದ ಯಾತನಾ ಕಂಬದಲ್ಲಿ ತೂಗುಹಾಕಲ್ಪಟ್ಟಿದ್ದ ದುಷ್ಕರ್ಮಿಯೊಂದಿಗೆ ಯೇಸು ಮಾತಾಡುತ್ತಿದ್ದಾಗ, ಅವನ ಗತಕಾಲದ ಪಾತಕಗಳಿಗಾಗಿ ಅವನನ್ನು ಖಂಡಿಸದೆ, ಭವಿಷ್ಯಕ್ಕಾಗಿರುವ ಒಂದು ನಿರೀಕ್ಷೆಯೊಂದಿಗೆ ಅವನನ್ನು ಉತ್ತೇಜಿಸಿದನು. (ಲೂಕ 23:43) ಬೇರೆಯವರ ಕುರಿತಾಗಿ ನಕಾರಾತ್ಮಕವಾದ, ಟೀಕಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಅವರನ್ನು ಕೇವಲ ನಿರುತ್ಸಾಹಗೊಳಿಸುವುದೆಂದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. ಇತರರಲ್ಲಿ ಒಳ್ಳೇದನ್ನು ಹುಡುಕಲು ಅವನು ಮಾಡಿದ ಪ್ರಯತ್ನಗಳು ನಿಸ್ಸಂದೇಹವಾಗಿಯೂ ಅನೇಕರು ಹೆಚ್ಚು ಅಭಿವೃದ್ಧಿಯನ್ನು ಮಾಡುವಂತೆ ಅವರನ್ನು ಉತ್ತೇಜಿಸಿತು.

ಜನರ ಸೇವೆಮಾಡಲು ಸಿದ್ಧಮನಸ್ಸು

17, 18. ಭೂಮಿಗೆ ಬರುವ ನೇಮಕವನ್ನು ಸ್ವೀಕರಿಸುವ ಮೂಲಕ, ಯೇಸು ಇತರರ ಸೇವೆಮಾಡಲು ತನಗಿರುವ ಸಿದ್ಧಮನಸ್ಸನ್ನು ಹೇಗೆ ತೋರಿಸಿದನು?

17 ತಾನು ಕಲಿಸುತ್ತಿದ್ದ ಜನರ ಕಡೆಗೆ ಯೇಸುವಿಗಿದ್ದ ಪ್ರೀತಿಯ ಇನ್ನೊಂದು ಬಲವಾದ ರುಜುವಾತು, ಅವರ ಸೇವೆಮಾಡಲು ಅವನಿಗಿದ್ದ ಸಿದ್ಧಮನಸ್ಸಾಗಿತ್ತು. ತನ್ನ ಮಾನವಪೂರ್ವ ಜೀವಿತದಲ್ಲಿ, ದೇವರ ಕುಮಾರನು ಯಾವಾಗಲೂ ಮಾನವಕುಲವನ್ನು ಪ್ರೀತಿಸಿದ್ದನು. (ಜ್ಞಾನೋಕ್ತಿ 8:​30, 31) ಯೆಹೋವನ “ವಾಕ್ಯ” ಇಲ್ಲವೆ ವದನಕನೋಪಾದಿ, ಅವನು ಮನುಷ್ಯರೊಂದಿಗೆ ಅನೇಕಸಲ ವ್ಯವಹರಿಸಿದ್ದಿರಬಹುದು. (ಯೋಹಾನ 1:1) ಆದರೆ ಅವನು ಈ ಭೂಮಿಗೆ ಬಂದ ಕಾರಣಗಳಲ್ಲೊಂದು, ಮಾನವಕುಲಕ್ಕೆ ಇನ್ನೂ ನೇರವಾದ ರೀತಿಯಲ್ಲಿ ಬೋಧಿಸುವುದೇ ಆಗಿತ್ತು. ಇದಕ್ಕಾಗಿ ಅವನು ಸ್ವರ್ಗದಲ್ಲಿ ತನಗಿದ್ದ ಉಚ್ಚ ಸ್ಥಾನವನ್ನು ಬಿಟ್ಟು, “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡ”ನು. (ಫಿಲಿಪ್ಪಿ 2:7; 2 ಕೊರಿಂಥ 8:9) ಭೂಮಿಯ ಮೇಲಿದ್ದಾಗ, ಇತರರು ತನ್ನ ಸೇವೆಮಾಡುವಂತೆ ಯೇಸು ಕಾದುಕೊಂಡಿರಲಿಲ್ಲ. ಅದರ ಬದಲು ಅವನು ಹೇಳಿದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.” (ಮತ್ತಾಯ 20:28) ಯೇಸು ಪೂರ್ಣವಾಗಿ ಆ ಮಾತುಗಳಿಗನುಸಾರ ಬದುಕಿದನು.

18 ಯೇಸು ಯಾರಿಗೆ ಬೋಧಿಸಿದನೊ ಅವರ ಅಗತ್ಯಗಳನ್ನು ನಮ್ರತೆಯಿಂದ ಪೂರೈಸಿದನು, ಮತ್ತು ಅವರಿಗೋಸ್ಕರ ಹಿಂದೆಮುಂದೆ ನೋಡದೆ ತನ್ನನ್ನೇ ನೀಡಿಕೊಂಡನು. ಸಾಧ್ಯವಿರುವಷ್ಟು ಜನರನ್ನು ತಲಪುವ ಪ್ರಯತ್ನದಲ್ಲಿ ಸಾರುವ ಸಂಚಾರಗಳಲ್ಲಿ ಅವನು ವಾಗ್ದತ್ತ ದೇಶದಾದ್ಯಂತ ನೂರಾರು ಕಿಲೊಮೀಟರ್‌ಗಳಷ್ಟು ದೂರ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದನು. ಅಹಂಕಾರಿಗಳಾಗಿದ್ದ ಫರಿಸಾಯರು ಮತ್ತು ಶಾಸ್ತ್ರಿಗಳಂತಿರದೆ, ಅವನು ನಮ್ರನೂ ಸಂಕೋಚವಿಲ್ಲದೆ ಮಾತಾಡಬಲ್ಲ ವ್ಯಕ್ತಿಯೂ ಆಗಿದ್ದನು. ಎಲ್ಲ ರೀತಿಯ ಜನರು, ಅಂದರೆ ಪ್ರತಿಷ್ಠಿತ ವ್ಯಕ್ತಿಗಳು, ಸೈನಿಕರು, ವಕೀಲರು, ಮಹಿಳೆಯರು, ಮಕ್ಕಳು, ಬಡವರು, ಅಸ್ವಸ್ಥರು ಮತ್ತು ಸಮಾಜದಿಂದ ಬಹಿಷ್ಕೃತರಾದವರು ಸಹ ಕಾತುರದಿಂದ, ಯಾವುದೇ ಅಂಜಿಕೆಯಿಲ್ಲದೆ ಅವನ ಬಳಿಗೆ ಬಂದರು. ಯೇಸು ಪರಿಪೂರ್ಣನಾಗಿದ್ದರೂ, ಅವನೊಬ್ಬ ಮನುಷ್ಯನಾಗಿದ್ದನು. ಅವನಿಗೂ ದಣಿವಾಗುತ್ತಿತ್ತು ಮತ್ತು ಹಸಿವಾಗುತ್ತಿತ್ತು. ಹೀಗಿರುವಾಗ, ಅವನು ದಣಿದಿದ್ದಾಗ ಇಲ್ಲವೆ ಅವನಿಗೆ ವಿಶ್ರಾಂತಿಯ ಅಗತ್ಯವಿದ್ದಾಗ ಅಥವಾ ಪ್ರಾರ್ಥಿಸಲಿಕ್ಕಾಗಿ ಸ್ವಲ್ಪ ಏಕಾಂತದ ಆವಶ್ಯಕತೆಯಿದ್ದಾಗಲೂ, ಅವನು ತನ್ನ ಸ್ವಂತ ಅಗತ್ಯಗಳಿಗಿಂತ ಬೇರೆಯವರ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡಿದನು.​—ಮಾರ್ಕ 1:​35-39.

19. ಯೇಸು ತನ್ನ ಶಿಷ್ಯರೊಂದಿಗೆ ನಮ್ರತೆಯಿಂದ, ತಾಳ್ಮೆಯಿಂದ ಮತ್ತು ದಯೆಯಿಂದ ವ್ಯವಹರಿಸುವ ವಿಷಯದಲ್ಲಿ ಹೇಗೆ ಒಂದು ಮಾದರಿಯನ್ನಿಟ್ಟನು?

19 ಯೇಸು ತನ್ನ ಸ್ವಂತ ಶಿಷ್ಯರ ಸೇವೆಯನ್ನು ಮಾಡಲೂ ಅಷ್ಟೇ ಸಿದ್ಧಮನಸ್ಸುಳ್ಳವನಾಗಿದ್ದನು. ಅವರಿಗೆ ದಯೆಯಿಂದಲೂ ತಾಳ್ಮೆಯಿಂದಲೂ ಕಲಿಸುವ ಮೂಲಕ ಅವನು ಹಾಗೆ ಮಾಡಿದನು. ಕೆಲವೊಂದು ಪ್ರಮುಖ ಪಾಠಗಳನ್ನು ಅವರು ಬೇಗನೆ ಕಲಿಯದಿದ್ದಾಗ, ಅವನು ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ, ಸಿಟ್ಟುಗೊಳ್ಳಲಿಲ್ಲ, ಇಲ್ಲವೆ ಅವರನ್ನು ಕೀಳಾಗಿಸಲಿಲ್ಲ. ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಹೊಸ ಹೊಸ ವಿಧಾನಗಳನ್ನು ಹುಡುಕುತ್ತಿದ್ದನು. ಉದಾಹರಣೆಗೆ, ತಮ್ಮಲ್ಲಿ ಯಾರು ಹೆಚ್ಚಿನವರೆಂಬ ವಿಷಯದಲ್ಲಿ ಶಿಷ್ಯರು ಎಷ್ಟೊಂದು ಸಲ ಕಚ್ಚಾಡಿಕೊಂಡರೆಂಬುದರ ಕುರಿತು ಸ್ವಲ್ಪ ಯೋಚಿಸಿರಿ. ಆದರೆ ಅವರು ಪರಸ್ಪರ ನಮ್ರತೆಯಿಂದ ವ್ಯವಹರಿಸಬೇಕೆಂಬುದನ್ನು ಯೇಸು ಪುನಃ ಪುನಃ, ತನ್ನ ಮರಣದ ಹಿಂದಿನ ರಾತ್ರಿಯಂದೂ, ಕಲಿಸಲಿಕ್ಕಾಗಿ ಹೊಸ ವಿಧಾನಗಳನ್ನು ಕಂಡುಹಿಡಿದನು. ಬೇರೆ ಸಂಗತಿಗಳಂತೆಯೇ ನಮ್ರತೆಯ ವಿಷಯದಲ್ಲೂ ಯೇಸು ಯೋಗ್ಯವಾಗಿಯೇ ಹೀಗೆ ಹೇಳಶಕ್ತನಾಗಿದ್ದನು: “ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”​—ಯೋಹಾನ 13:​5-15; ಮತ್ತಾಯ 20:25; ಮಾರ್ಕ 9:​34-37.

20. ಯೇಸುವಿನ ಯಾವ ಬೋಧಿಸುವಿಕೆಯ ವಿಧಾನವು ಅವನು ಫರಿಸಾಯರಿಗಿಂತ ಭಿನ್ನನಾಗಿದ್ದನೆಂಬುದನ್ನು ತೋರಿಸಿತು, ಮತ್ತು ಈ ವಿಧಾನವು ಏಕೆ ಪರಿಣಾಮಕಾರಿಯಾಗಿತ್ತು?

20 ಆ ಮಾದರಿ ಏನಾಗಿದೆ ಎಂದು ಯೇಸು ಶಿಷ್ಯರಿಗೆ ಬರೀ ಬಾಯಿಮಾತಿನಲ್ಲಿ ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅವನು ‘ಮಾದರಿಯನ್ನು ತೋರಿಸಿದನು.’ ಅವನು ಮಾದರಿಯ ಮೂಲಕ ಅವರಿಗೆ ಕಲಿಸಿದನು. ಅವರು ಮಾಡಬೇಕೆಂದು ತಾನು ಹೇಳುತ್ತಿದ್ದ ವಿಷಯಗಳನ್ನು ಸ್ವತಃ ಮಾಡದಿರಲು ತಾನೊಬ್ಬ ಅತಿ ಪ್ರಧಾನ ವ್ಯಕ್ತಿಯೊ ಎಂಬಂತೆ ದೊಡ್ಡಸ್ತಿಕೆ ತೋರಿಸುತ್ತಾ ಅವನು ಅವರೊಂದಿಗೆ ಮಾತಾಡಲಿಲ್ಲ. ಅದು ಫರಿಸಾಯರ ರೀತಿಯಾಗಿತ್ತು. “ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ” ಎಂದು ಯೇಸು ಅವರ ಬಗ್ಗೆ ಹೇಳಿದನು. (ಮತ್ತಾಯ 23:3) ತನ್ನ ಬೋಧನೆಗಳು ನಿರ್ದಿಷ್ಟವಾಗಿ ಏನಾಗಿವೆ ಎಂಬುದನ್ನು, ಅವುಗಳಿಗನುಸಾರ ಜೀವಿಸುವ ಮೂಲಕ, ಅವುಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಯೇಸು ನಮ್ರತೆಯಿಂದ ತನ್ನ ವಿದ್ಯಾರ್ಥಿಗಳಿಗೆ ತೋರಿಸಿದನು. ಆದುದರಿಂದ, ಪ್ರಾಪಂಚಿಕತೆಯಿಂದ ಮುಕ್ತವಾಗಿರುವ ಒಂದು ಸರಳ ಜೀವನವನ್ನು ನಡೆಸುವಂತೆ ಯೇಸು ತನ್ನ ಹಿಂಬಾಲಕರಿಗೆ ಪ್ರೇರಿಸಿದಾಗ, ಅವನು ಏನನ್ನು ಅರ್ಥೈಸಿದನು ಎಂಬುದನ್ನು ಅವರು ಊಹಿಸಬೇಕಾಗಿರಲಿಲ್ಲ. “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂಬ ಅವನ ಮಾತುಗಳ ನೈಜತೆಯನ್ನು ಅವರು ಕಣ್ಣಾರೆ ನೋಡಸಾಧ್ಯವಿತ್ತು. (ಮತ್ತಾಯ 8:20) ನಮ್ರತೆಯಿಂದ ಅವರಿಗೋಸ್ಕರ ಮಾದರಿಯನ್ನಿಡುವ ಮೂಲಕ ಯೇಸು ತನ್ನ ಶಿಷ್ಯರ ಸೇವೆಮಾಡಿದನು.

21. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

21 ಭೂಮಿಯ ಮೇಲೆ ಜೀವಿಸಿರುವ ಬೋಧಕರಲ್ಲಿ ಯೇಸುವೇ ಅತಿ ಮಹಾ ಬೋಧಕನಾಗಿದ್ದನೆಂಬ ವಿಷಯದಲ್ಲಿ ಎರಡು ಮಾತಿಲ್ಲ! ತಾನು ಬೋಧಿಸಿದಂಥ ವಿಷಯಗಳಿಗಾಗಿ ಅವನಿಗಿದ್ದ ಪ್ರೀತಿ ಮತ್ತು ಅವನು ಬೋಧಿಸಿದಂಥ ಜನರಿಗೋಸ್ಕರ ಅವನಿಗಿದ್ದ ಪ್ರೀತಿಯು, ಅವನನ್ನು ನೋಡಿ, ಅವನಿಗೆ ಕಿವಿಗೊಟ್ಟ ಎಲ್ಲ ಪ್ರಾಮಾಣಿಕ ಹೃದಯದ ಜನರಿಗೆ ಸುಸ್ಪಷ್ಟವಾಗಿತ್ತು. ಅವನು ಇಟ್ಟಂಥ ಮಾದರಿಯನ್ನು ಇಂದು ಅನುಸರಿಸುತ್ತಿರುವವರೆಲ್ಲರಿಗೂ ಅಷ್ಟೇ ಸ್ಪಷ್ಟವಾಗಿದೆ. ಆದರೆ ಕ್ರಿಸ್ತನ ಪರಿಪೂರ್ಣ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು? ಈ ಪ್ರಶ್ನೆಯನ್ನೇ ಮುಂದಿನ ಲೇಖನವು ಚರ್ಚಿಸುವುದು.

ನೀವು ಹೇಗೆ ಉತ್ತರಿಸುವಿರಿ?

• ಒಳ್ಳೇ ಬೋಧಿಸುವಿಕೆಗೆ ಯಾವುದು ಅಸ್ತಿವಾರವಾಗಿದೆ, ಮತ್ತು ಇದನ್ನು ಯಾರು ಪ್ರದರ್ಶಿಸಿದ್ದಾರೆ?

• ತಾನು ಬೋಧಿಸಿದಂಥ ಸತ್ಯಗಳಿಗಾಗಿ ಯೇಸು ಯಾವ ವಿಧಗಳಲ್ಲಿ ಪ್ರೀತಿಯನ್ನು ತೋರಿಸಿದನು?

• ತಾನು ಯಾರಿಗೆ ಬೋಧಿಸಿದನೊ ಆ ಜನರಿಗಾಗಿ ಯೇಸು ಹೇಗೆ ಪ್ರೀತಿಯನ್ನು ತೋರಿಸಿದನು?

• ತಾನು ಯಾವ ಜನರಿಗೆ ಬೋಧಿಸಿದನೋ ಅವರ ಸೇವೆಮಾಡಲು ಯೇಸುವಿಗಿದ್ದ ನಮ್ರ ಸಿದ್ಧಮನಸ್ಸನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

ದೇವರ ವಾಕ್ಯದಲ್ಲಿ ಕಂಡುಬರುವ ಮೂಲತತ್ತ್ವಗಳನ್ನು ತಾನು ಪ್ರೀತಿಸುತ್ತೇನೆಂಬುದನ್ನು ಯೇಸು ಹೇಗೆ ತೋರಿಸಿದನು?