ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಎಚ್ಚರವಾಗಿರಿ!

ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಎಚ್ಚರವಾಗಿರಿ!

ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಎಚ್ಚರವಾಗಿರಿ!

“ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.”​—1 ಥೆಸಲೊನೀಕ 5:6.

1, 2. (ಎ) ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ಯಾವ ರೀತಿಯ ನಗರಗಳಾಗಿದ್ದವು? (ಬಿ) ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ನ ಜನರು ಯಾವ ಎಚ್ಚರಿಕೆಯನ್ನು ಅಲಕ್ಷಿಸಿದರು, ಮತ್ತು ಇದರ ಫಲಿತಾಂಶವೇನಾಗಿತ್ತು?

ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ, ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ಎಂಬ ಎರಡು ಸಮೃದ್ಧ ರೋಮನ್‌ ನಗರಗಳು, ವೆಸೂವೀಯಸ್‌ ಪರ್ವತದ ತಪ್ಪಲಿನಲ್ಲಿ ನೆಲೆಸಿದ್ದವು. ಧನಿಕರಾಗಿದ್ದ ರೋಮನ್‌ ಜನರಿಗೆ ಇವು ವಿಶ್ರಾಂತಿಯ ಜನಪ್ರಿಯ ತಾಣಗಳಾಗಿದ್ದವು. ಅವುಗಳಲ್ಲಿದ್ದ ನಾಟಕರಂಗಗಳಲ್ಲಿ, ಒಂದು ಸಾವಿರಕ್ಕಿಂತಲೂ ಹೆಚ್ಚು ಸಂಖ್ಯೆಯ ಸಭಿಕರನ್ನು ಕುಳ್ಳಿರಿಸಸಾಧ್ಯವಿತ್ತು ಮತ್ತು ಪಾಂಪೇಯಲ್ಲಿ ಬಹುಮಟ್ಟಿಗೆ ಇಡೀ ನಗರದ ಜನರನ್ನು ಕುಳ್ಳಿರಿಸಬಹುದಾಗಿದ್ದ ಒಂದು ದೊಡ್ಡ ವೃತ್ತಾಕಾರದ ನಾಟಕಶಾಲೆಯಿತ್ತು. ಪಾಂಪೇಯ ಅಗೆತಶಾಸ್ತ್ರಜ್ಞರು, ಅಲ್ಲಿ 118 ಹೆಂಡದಂಗಡಿಗಳು ಮತ್ತು ಊಟವಸತಿ ಗೃಹಗಳು ಇದ್ದವೆಂಬುದನ್ನು ದಾಖಲಿಸಿದ್ದಾರೆ. ಇವುಗಳಲ್ಲಿ ಕೆಲವೊಂದರಲ್ಲಿ ಜೂಜಾಟ ಹಾಗೂ ವೇಶ್ಯಾವಾಟಿಕೆಯೂ ನಡೆಯುತ್ತಿತ್ತು. ಅನೈತಿಕತೆ ಮತ್ತು ಪ್ರಾಪಂಚಿಕತೆಯು ಎಲ್ಲೆಡೆಯೂ ಹಬ್ಬಿಕೊಂಡಿತ್ತು. ಅಲ್ಲಿನ ಗೋಡೆಗಳಲ್ಲಿದ್ದ ವರ್ಣಚಿತ್ರಗಳು ಹಾಗೂ ಇತರ ಅವಶೇಷಗಳು ಇದಕ್ಕೆ ಸಾಕ್ಷ್ಯವನ್ನು ಕೊಡುತ್ತವೆ.

2 ಸಾ.ಶ. 79ರ ಆಗಸ್ಟ್‌ 24ರಂದು, ವೆಸೂವೀಯಸ್‌ ಪರ್ವತವು ಹೊಗೆ ಕಾರತೊಡಗಿತು. ಮೊದಲನೆಯ ಸ್ಫೋಟವು ಆ ಎರಡೂ ನಗರಗಳ ಮೇಲೆ ಜ್ವಾಲಾಮುಖಿನೊರೆ ಮತ್ತು ಬೂದಿಯನ್ನು ಧಾರಾಕಾರವಾಗಿ ಸುರಿಸಿತೆಂದು ಜ್ವಾಲಾಮುಖಿ ಶಾಸ್ತ್ರಜ್ಞರು ಅಭಿಪ್ರಯಿಸುತ್ತಾರೆ. ಆದರೆ ಇದು, ಅಲ್ಲಿನ ನಿವಾಸಿಗಳು ಅಲ್ಲಿಂದ ಓಡಿಹೋಗುವುದನ್ನು ಬಹುಶಃ ಅಡ್ಡಗಟ್ಟಲು ಸಾಧ್ಯವಿರಲಿಕ್ಕಿಲ್ಲ. ಏಕೆಂದರೆ ಅನೇಕರು ಅಲ್ಲಿಂದ ಓಡಿಹೋಗಿರುವಂತೆ ತೋರುತ್ತದೆ. ಆದರೆ ಅಪಾಯವನ್ನು ಕಡಿಮೆ ಅಂದಾಜುಮಾಡಿದ ಇಲ್ಲವೆ ಎಚ್ಚರಿಕೆಯ ಸೂಚನೆಗಳನ್ನು ಅಲಕ್ಷಿಸಿದ ಇತರರು, ಅಲ್ಲಿಯೇ ಉಳಿಯುವ ಆಯ್ಕೆಮಾಡಿದ್ದರು. ಆದರೆ ಸುಮಾರು ಮಧ್ಯರಾತ್ರಿಯಷ್ಟಕ್ಕೆ ತೀಕ್ಷ್ಣವಾಗಿ ಕಾವೇರಿದಂಥ ಅನಿಲಗಳು, ಜ್ವಾಲಾಮುಖಿನೊರೆ ಮತ್ತು ಕಲ್ಲುಬಂಡೆಗಳು ಹರ್ಕ್ಯಲೇನ್ಯಮ್‌ ನಗರದೊಳಗೆ ರಭಸದಿಂದ ನುಗ್ಗುತ್ತಾ, ಆ ನಗರದಲ್ಲಿದ್ದ ಎಲ್ಲಾ ನಿವಾಸಿಗಳ ಉಸಿರುಕಟ್ಟಿಸಿದವು. ಮರುದಿನ ಮುಂಜಾನೆ, ಅದೇ ರೀತಿಯ ಪ್ರವಾಹವು ಪಾಂಪೇಯಲ್ಲಿದ್ದವರೆಲ್ಲರನ್ನೂ ಕೊಂದುಹಾಕಿತು. ಎಚ್ಚರಿಕೆಯ ಸೂಚನೆಗಳಿಗೆ ಲಕ್ಷ್ಯಕೊಡದೆ ಹೋದವರಿಗೆ ಎಂಥ ದುರಂತಮಯ ಫಲಿತಾಂಶ!

ಯೆಹೂದಿ ವಿಷಯ ವ್ಯವಸ್ಥೆಯ ಅಂತ್ಯ

3. ಯೆರೂಸಲೇಮಿನ ನಾಶನಕ್ಕೂ ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ನಗರಗಳ ನಾಶನದ ನಡುವೆಯೂ ಯಾವ ಸಮಾನತೆಯಿದೆ?

3 ಇದು ಸಂಭವಿಸುವ ಒಂಬತ್ತು ವರ್ಷಗಳಿಗೆ ಮುಂಚೆ ಯೆರೂಸಲೇಮಿನ ವಿಪ್ಲವಕಾರಿ ನಾಶನವು ಸಂಭವಿಸಿತ್ತು. ಮತ್ತು ಇದು ಮಾನವರಿಂದ ಮಾಡಲ್ಪಟ್ಟ ವಿನಾಶವಾಗಿದ್ದರೂ ಅದು ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ನಗರಗಳ ಭೀತಿದಾಯಕ ಅಂತ್ಯಕ್ಕಿಂತ ಎಷ್ಟೋ ಘೋರವಾಗಿತ್ತು. “ಇತಿಹಾಸದಲ್ಲೇ ಅತಿ ಭೀಕರ ಮುತ್ತಿಗೆಗಳಲ್ಲೊಂದು” ಎಂದು ಇದರ ಬಗ್ಗೆ ವರ್ಣಿಸಲಾಗಿದೆ. ಅದು, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಯೆಹೂದ್ಯರ ಸಾವಿಗೆ ನಡೆಸಿತ್ತೆಂದು ಹೇಳಲಾಗುತ್ತದೆ. ಆದರೆ ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ನಲ್ಲಿ ನಡೆದ ಆ ವಿಪತ್ತಿನಂತೆಯೇ, ಯೆರೂಸಲೇಮಿನ ನಾಶನದ ಮುಂಚೆಯೂ ಎಚ್ಚರಿಕೆಯು ಕೊಡಲ್ಪಟ್ಟಿತ್ತು.

4. ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆಯೆಂದು ತನ್ನ ಹಿಂಬಾಲಕರಿಗೆ ಎಚ್ಚರಿಸಲಿಕ್ಕಾಗಿ ಯೇಸು ಅವರಿಗೆ ಯಾವ ಪ್ರವಾದನಾತ್ಮಕ ಸೂಚನೆಯನ್ನು ಕೊಟ್ಟನು, ಮತ್ತು ಅದು ಪ್ರಥಮ ಶತಮಾನದಲ್ಲಿ ಹೇಗೆ ಮೊದಲು ನೆರವೇರಿತು?

4 ಆ ನಗರದ ನಾಶನದ ಬಗ್ಗೆ ಯೇಸು ಕ್ರಿಸ್ತನು ಮುಂದಾಗಿಯೇ ತಿಳಿಸಿದ್ದನು. ಆ ನಾಶನಕ್ಕಿಂತಲೂ ಮುಂಚೆ, ಯುದ್ಧಗಳು, ಬರಗಾಲಗಳು, ಭೂಕಂಪಗಳು ಮತ್ತು ನಿಯಮರಾಹಿತ್ಯದಂಥ ಮನಕಲಕಿಸುವ ಘಟನೆಗಳು ನಡೆಯುವವೆಂಬದನ್ನೂ ಅವನು ಮುಂತಿಳಿಸಿದ್ದನು. ಸುಳ್ಳು ಪ್ರವಾದಿಗಳು ಕ್ರಿಯಾಶೀಲರಾಗಲಿದ್ದರು. ಹಾಗಿದ್ದರೂ ದೇವರ ರಾಜ್ಯದ ಸುವಾರ್ತೆಯು ಲೋಕವ್ಯಾಪಕವಾಗಿ ಸಾರಲ್ಪಡುವುದೆಂದು ಅವನು ಹೇಳಿದನು. (ಮತ್ತಾಯ 24:​4-7, 11-14) ಇಂದು ಯೇಸುವಿನ ಮಾತುಗಳು ಪ್ರಧಾನವಾಗಿ ನೆರವೇರುತ್ತಿರುವುದಾದರೂ, ಹಿಂದೆ ಆ ಸಮಯದಲ್ಲಿ ಅವು ಚಿಕ್ಕ ನೆರವೇರಿಕೆಯನ್ನು ಪಡೆದವು. ಯೂದಾಯದಲ್ಲಿ ತೀಕ್ಷ್ಣವಾದ ಕ್ಷಾಮವಿತ್ತೆಂದು ಇತಿಹಾಸವು ದಾಖಲೆಯನ್ನು ಒದಗಿಸುತ್ತದೆ. (ಅ. ಕೃತ್ಯಗಳು 11:28) ಯೆರೂಸಲೇಮಿನ ನಾಶನದ ಸ್ವಲ್ಪ ಸಮಯಕ್ಕೆ ಮುಂಚೆ ಆ ಕ್ಷೇತ್ರದಲ್ಲಿ ಒಂದು ಭೂಕಂಪವಾಗಿತ್ತೆಂದು ಇತಿಹಾಸಕಾರ ಜೋಸೀಫಸನು ವರದಿಸುತ್ತಾನೆ. ಯೆರೂಸಲೇಮಿನ ಅಂತ್ಯವು ಸಮೀಪಿಸಿದಂತೆ, ಅಲ್ಲಿ ನಿರಂತರವಾಗಿ ಬಂಡಾಯಗಳು, ಯೆಹೂದಿ ರಾಜಕೀಯ ಗುಂಪುಗಳ ನಡುವೆ ಆಂತರಿಕ ಹೋರಾಟಗಳು, ಮತ್ತು ಯೆಹೂದಿ ಹಾಗೂ ಅನ್ಯಜನಾಂಗಗಳ ಜನರು ಒಟ್ಟಿಗೆ ಜೀವಿಸುತ್ತಿದ್ದಂಥ ಹಲವಾರು ನಗರಗಳಲ್ಲಿ ಹತ್ಯಾಕಾಂಡಗಳು ನಡೆಯುತ್ತಿದ್ದವು. ಹೀಗಿದ್ದರೂ, ರಾಜ್ಯದ ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತು.​—ಕೊಲೊಸ್ಸೆ 1:23.

5, 6. (ಎ) ಯೇಸುವಿನ ಯಾವ ಪ್ರವಾದನಾತ್ಮಕ ಮಾತುಗಳು ಸಾ.ಶ. 66ರಲ್ಲಿ ನೆರವೇರಿದವು? (ಬಿ) ಯೆರೂಸಲೇಮು ಕೊನೆಗೆ ಸಾ.ಶ. 70ರಲ್ಲಿ ಪರಾಜಯಗೊಂಡಾಗ ಮರಣದ ಸಂಖ್ಯೆಯು ಏಕೆ ಅಷ್ಟು ದೊಡ್ಡದಾಗಿತ್ತು?

5 ಕೊನೆಗೆ ಸಾ.ಶ. 66ರಲ್ಲಿ ಯೆಹೂದ್ಯರು ರೋಮನ್‌ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದರು. ಸೆಸ್ಟಿಯಸ್‌ ಗ್ಯಾಲಸನು ಯೆರೂಸಲೇಮನ್ನು ವಶಪಡಿಸಿಕೊಳ್ಳಲು ದಂಡೆತ್ತಿ ಬಂದಾಗ, ಯೇಸುವಿನ ಹಿಂಬಾಲಕರು ಅವನ ಈ ಮಾತುಗಳನ್ನು ಜ್ಞಾಪಿಸಿಕೊಂಡರು: “ದಂಡುಗಳು ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ಯೆರೂಸಲೇಮನ್ನು ಬಿಟ್ಟುಹೋಗುವ ಸಮಯ ಬಂದಿತ್ತು. ಆದರೆ ಅಲ್ಲಿಂದ ಹೊರಡುವುದು ಹೇಗೆ? ಅನಿರೀಕ್ಷಿತವಾಗಿ, ಗ್ಯಾಲಸನು ತನ್ನ ದಂಡುಗಳೊಂದಿಗೆ ಹಿಂದಿರುಗಿಹೋದನು, ಮತ್ತು ಇದು ಯೆರೂಸಲೇಮಿನಲ್ಲಿ ಹಾಗೂ ಯೂದಾಯದಲ್ಲಿದ್ದ ಕ್ರೈಸ್ತರು ಯೇಸುವಿನ ಮಾತುಗಳಿಗೆ ವಿಧೇಯರಾಗಿ ಬೆಟ್ಟಗಳಿಗೆ ಓಡಿಹೋಗಲು ಮಾರ್ಗವನ್ನು ತೆರೆಯಿತು.​—ಮತ್ತಾಯ 24:​15, 16.

6 ನಾಲ್ಕು ವರ್ಷಗಳ ನಂತರ, ಪಸ್ಕಹಬ್ಬದ ಸಮಯದಷ್ಟಕ್ಕೆ ರೋಮನ್‌ ಸೈನ್ಯಗಳು ಹಿಂದಿರುಗಿ ಬಂದವು. ಆದರೆ ಈ ಸಲ ಆ ಸೈನ್ಯಗಳು, ಯೆಹೂದ್ಯರ ದಂಗೆಯನ್ನು ಸಂಪೂರ್ಣವಾಗಿ ನಿಗ್ರಹಿಸಲು ನಿರ್ಧರಿಸಿದ್ದಂಥ ಜನರಲ್‌ ಟೈಟಸ್‌ನ ನೇತೃತ್ವದಲ್ಲಿ ಬಂದವು. ಅವನ ಸೇನೆಯು ಯೆರೂಸಲೇಮನ್ನು ಸುತ್ತುವರಿದು, ಯಾರೂ ಪಲಾಯನಗೈಯಲು ಸಾಧ್ಯವಿಲ್ಲದಂಥ ರೀತಿಯಲ್ಲಿ, “ಒಡ್ಡುಕಟ್ಟಿ . . . ಸುತ್ತಲೂ ಮುತ್ತಿಗೆ ಹಾಕಿ”ತು. (ಲೂಕ 19:​43, 44) ಯುದ್ಧದ ಅಪಾಯವಿದ್ದರೂ, ರೋಮನ್‌ ಸಾಮ್ರಾಜ್ಯದಾದ್ಯಂತ ಇದ್ದ ಯೆಹೂದ್ಯರು ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹಿಂಡುಹಿಂಡಾಗಿ ಬಂದಿದ್ದರು. ಈಗ ಅವರೆಲ್ಲರೂ ಸಿಕ್ಕಿಬಿದ್ದಿದ್ದರು. ಜೋಸೀಫಸನಿಗನುಸಾರ, ಈ ಸಂದರ್ಶಕರೇ ರೋಮನ್‌ ಮುತ್ತಿಗೆಯ ಸಮಯದಲ್ಲಾದ ಮರಣ ಸಂಖ್ಯೆಯ ಅಧಿಕಾಂಶ ಭಾಗವಾಗಿದ್ದರು. * ಕೊನೆಯಲ್ಲಿ ಯೆರೂಸಲೇಮು ಪರಾಜಯಗೊಂಡಾಗ, ರೋಮನ್‌ ಸಾಮ್ರಾಜ್ಯದಲ್ಲಿದ್ದ ಯೆಹೂದ್ಯರ ಪೈಕಿ ಸುಮಾರು ಏಳರಲ್ಲೊಂದು ಭಾಗದಷ್ಟು ಮಂದಿ ನಾಶವಾದರು. ಯೆರೂಸಲೇಮ್‌ ಮತ್ತು ಅದರ ಆಲಯದ ನಾಶನವು, ಯೆಹೂದಿ ರಾಜ್ಯವೂ, ಮೋಶೆಯ ಧರ್ಮಶಾಸ್ತ್ರದ ಮೇಲೆ ಆಧಾರಿತವಾಗಿದ್ದ ಅದರ ಧಾರ್ಮಿಕ ವ್ಯವಸ್ಥೆಯೂ ಅಂತ್ಯಗೊಂಡಿತ್ತೆಂಬದನ್ನು ಅರ್ಥೈಸಿತು. *​—ಮಾರ್ಕ 13:​1, 2.

7. ನಂಬಿಗಸ್ತ ಕ್ರೈಸ್ತರು ಯೆರೂಸಲೇಮಿನ ನಾಶನದಿಂದ ತಪ್ಪಿಸಿಕೊಳ್ಳಲು ಕಾರಣವೇನು?

7 ಸಾ.ಶ. 70ರಲ್ಲಿ ಯೆಹೂದಿ ಕ್ರೈಸ್ತರು ಕೊಲ್ಲಲ್ಪಡುವ ಇಲ್ಲವೆ ಯೆರೂಸಲೇಮಿನಲ್ಲಿದ್ದ ಇತರರೊಂದಿಗೆ ಬಂಧಿಸಲ್ಪಡುವ ಸಾಧ್ಯತೆಯಿತ್ತು. ಆದರೆ ಐತಿಹಾಸಿಕ ದಾಖಲೆಗನುಸಾರ, ಅವರು ಯೇಸು 37 ವರ್ಷಗಳ ಹಿಂದೆ ಕೊಟ್ಟಿದ್ದ ಎಚ್ಚರಿಕೆಗನುಸಾರ ಪ್ರತಿಕ್ರಿಯಿಸಿದ್ದರು. ಅವರು ನಗರವನ್ನು ಬಿಟ್ಟು ಹೋಗಿದ್ದರು, ಮತ್ತು ವಾಪಸ್ಸು ಬಂದಿರಲಿಲ್ಲ.

ಅಪೊಸ್ತಲರಿಂದ ಸಮಯೋಚಿತ ಎಚ್ಚರಿಕೆಗಳು

8. ಪೇತ್ರನು ಯಾವ ಅಗತ್ಯವನ್ನು ವಿವೇಚಿಸಿದನು, ಮತ್ತು ಯೇಸುವಿನ ಯಾವ ಮಾತುಗಳು ಅವನ ಮನಸ್ಸಿನಲ್ಲಿದ್ದಿರಬಹುದು?

8 ಇಂದು, ಹೆಚ್ಚು ವ್ಯಾಪ್ತಿಯುಳ್ಳ ನಾಶನವು ನಮ್ಮೆದುರಿಗೇ ಇದೆ. ಅದು, ಈ ಇಡೀ ವಿಷಯಗಳ ವ್ಯವಸ್ಥೆಯನ್ನೇ ಅಂತ್ಯಗೊಳಿಸುವುದು. ಯೆರೂಸಲೇಮಿನ ನಾಶನಕ್ಕಿಂತ ಆರು ವರ್ಷಗಳ ಹಿಂದೆ ಅಪೊಸ್ತಲ ಪೇತ್ರನು, ವಿಶೇಷವಾಗಿ ನಮ್ಮೀ ದಿನಗಳ ಕ್ರೈಸ್ತರಿಗೆ ಅನ್ವಯವಾಗುವ ತುರ್ತಿನ ಮತ್ತು ಸಮಯೋಚಿತವಾದ ಈ ಸಲಹೆಯನ್ನು ಕೊಟ್ಟನು: ಎಚ್ಚರಿಕೆಯಿಂದಿರಿ! ಕ್ರೈಸ್ತರು, ‘ಕರ್ತನಾದ’ ಯೇಸು ಕ್ರಿಸ್ತನು ‘ಕೊಟ್ಟ ಅಪ್ಪಣೆಯನ್ನು’ ಅಲಕ್ಷಿಸದಂತೆ ತಮ್ಮ ‘ಮನಸ್ಸನ್ನು ಪ್ರೇರಿಸುವ’ ಅಗತ್ಯವಿದೆ ಎಂಬದನ್ನು ಪೇತ್ರನು ಮನಗಂಡನು. (2 ಪೇತ್ರ 3:​1, 2) ಎಚ್ಚರವಾಗಿರುವಂತೆ ಪೇತ್ರನು ಕ್ರೈಸ್ತರನ್ನು ಉತ್ತೇಜಿಸಿದಾಗ, ತನ್ನ ಮರಣಕ್ಕೆ ಕೆಲವು ದಿವಸಗಳ ಮುಂಚೆ ಯೇಸು ತನ್ನ ಅಪೊಸ್ತಲರಿಗೆ ಏನು ಹೇಳಿದ್ದನ್ನು ಕೇಳಿಸಿಕೊಂಡಿದ್ದನೋ ಅದು ಪೇತ್ರನ ಮನಸ್ಸಿನಲ್ಲಿದ್ದಿರಬಹುದು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ.”​—ಮಾರ್ಕ 13:33.

9. (ಎ) ಕೆಲವು ಮಂದಿ ಯಾವ ಅಪಾಯಕಾರಿ ಮನೋಭಾವವನ್ನು ವಿಕಸಿಸಿಕೊಳ್ಳುವರು? (ಬಿ) ಸಂದೇಹಾಸ್ಪದವಾದ ಮನೋಭಾವವು ಏಕೆ ವಿಶೇಷವಾಗಿ ಅಪಾಯಕಾರಿಯಾಗಿದೆ?

9 ಇಂದು ಕೆಲವರು ಕುಚೋದ್ಯಮಾಡುತ್ತಾ ಹೀಗೆ ಕೇಳುತ್ತಾರೆ: “ಆತನು ಮತ್ತೆ ಬರುವುದಾಗಿ ವಾಗ್ದಾನ ಮಾಡಿದ್ದನು. ಆತನು ಎಲ್ಲಿದ್ದಾನೆ?” (2 ಪೇತ್ರ 3:​3, 4, ಪರಿಶುದ್ಧ ಬೈಬಲ್‌ *) ಹೀಗೆ ಕೇಳುವವರಿಗೆ, ಪರಿಸ್ಥಿತಿಗಳು ಜಗತ್ತಿನ ಸೃಷ್ಟಿಯಂದಿನಿಂದ ಹೇಗೆ ನಡೆಯುತ್ತಿವೆಯೋ ಹಾಗೆಯೇ ಮುಂದುವರಿಯುವವೇ ಹೊರತು ಅವು ನಿಜವಾಗಿ ಬದಲಾಗುವುದಿಲ್ಲವೆಂದು ಅನಿಸುತ್ತಿರಬಹುದು. ಅಂಥ ಸಂದೇಹಭಾವನೆಯು ಅಪಾಯಕಾರಿಯಾಗಿದೆ. ಸಂದೇಹಗಳು ನಮ್ಮ ತುರ್ತು ಪ್ರಜ್ಞೆಯನ್ನು ದುರ್ಬಲಗೊಳಿಸುತ್ತಾ, ಭೋಗಾಸಕ್ತಿಯ ಕಡೆಗೆ ತೇಲಿಹೋಗುವಂತೆ ನಮ್ಮನ್ನು ಪ್ರಭಾವಿಸಬಹುದು. (ಲೂಕ 21:34) ಅಲ್ಲದೆ, ಪೇತ್ರನು ತೋರಿಸುವಂತೆ, ಅಂಥ ಅಪಹಾಸ್ಯಗಾರರು ನೋಹನ ದಿನದ ಜಲಪ್ರಳಯವನ್ನು ಮರೆತುಬಿಡುತ್ತಾರೆ. ಅದು ಲೋಕವ್ಯಾಪಕವಾದ ವಿಷಯಗಳ ವ್ಯವಸ್ಥೆಯನ್ನು ನಾಶಪಡಿಸಿತು. ಅಂದಿನ ಜಗತ್ತು ನಿಜವಾಗಿಯೂ ಬದಲಾಯಿತು!​—ಆದಿಕಾಂಡ 6:​13, 17; 2 ಪೇತ್ರ 3:​5, 6.

10. ತಾಳ್ಮೆಗೆಡಬಹುದಾದ ಜನರನ್ನು ಪೇತ್ರನು ಯಾವ ಮಾತುಗಳಿಂದ ಉತ್ತೇಜಿಸುತ್ತಾನೆ?

10 ಅನೇಕವೇಳೆ ದೇವರು ಏಕೆ ಆ ಕೂಡಲೆ ಕ್ರಿಯೆಗೈಯುವುದಿಲ್ಲ ಎಂಬುದರ ಕಾರಣವನ್ನು ತನ್ನ ವಾಚಕರಿಗೆ ಜ್ಞಾಪಿಸುವುದರ ಮೂಲಕ, ಅವರು ತಾಳ್ಮೆಯನ್ನು ಬೆಳೆಸಿಕೊಳ್ಳುವಂತೆ ಪೇತ್ರನು ಅವರಿಗೆ ಸಹಾಯಮಾಡುತ್ತಾನೆ. ಪ್ರಥಮವಾಗಿ ಪೇತ್ರನು ಹೇಳುವುದು: “ಪ್ರಿಯರೇ, ಕರ್ತನ [“ಯೆಹೋವನ,” NW] ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ.” (2 ಪೇತ್ರ 3:8) ಯೆಹೋವನು ಸದಾಕಾಲ ಜೀವಿಸುತ್ತಿರುವುದರಿಂದ, ಅವನು ಎಲ್ಲಾ ಅಂಶಗಳನ್ನೂ ಪರಿಗಣಿಸಬಲ್ಲನು ಮತ್ತು ಕ್ರಿಯೆಗೈಯಲು ಅತ್ಯುತ್ತಮ ಸಮಯ ಯಾವುದು ಎಂಬುದನ್ನೂ ಆಯ್ಕೆಮಾಡಬಲ್ಲನು. ಅನಂತರ ಪೇತ್ರನು, ಎಲ್ಲಾ ಜನರು ಪಶ್ಚಾತ್ತಾಪಪಡಬೇಕೆಂಬ ಯೆಹೋವನ ಅಪೇಕ್ಷೆಯ ಕುರಿತು ಹೇಳುತ್ತಾನೆ. ದೇವರು ಆತುರದಿಂದ ಕ್ರಿಯೆಗೈಯುವಲ್ಲಿ ನಾಶವಾಗಸಾಧ್ಯವಿರುವಂಥ ಅನೇಕರಿಗೆ, ಆತನ ತಾಳ್ಮೆಯು ರಕ್ಷಣೆಯ ಅರ್ಥದಲ್ಲಿದೆ. (1 ತಿಮೊಥೆಯ 2:​3, 4; 2 ಪೇತ್ರ 3:9) ಆದರೆ ಯೆಹೋವನಿಗೆ ತಾಳ್ಮೆಯಿದೆ ಎಂದು ಹೇಳುವುದು, ಆತನು ಎಂದಿಗೂ ಕ್ರಿಯೆಗೈಯುವುದಿಲ್ಲ ಎಂಬುದನ್ನು ಅರ್ಥೈಸುವುದಿಲ್ಲ. “ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ” ಎಂದು ಪೇತ್ರನು ಹೇಳುತ್ತಾನೆ. (ಓರೆ ಅಕ್ಷರಗಳು ನಮ್ಮವು.)​—2 ಪೇತ್ರ 3:10.

11. ನಾವು ಆತ್ಮಿಕವಾಗಿ ಎಚ್ಚರವಾಗಿರುವಂತೆ ಯಾವುದು ಸಹಾಯಮಾಡುವುದು, ಮತ್ತು ಅದು ಯಾವ ರೀತಿಯಲ್ಲಿ ಯೆಹೋವನ ದಿನದ “ವೇಗವನ್ನು ಹೆಚ್ಚಿಸು”ವಂತಿರುವುದು?

11 ಪೇತ್ರನ ಈ ಹೋಲಿಕೆಯು ಗಮನಾರ್ಹವಾದದ್ದಾಗಿದೆ. ಕಳ್ಳರನ್ನು ಹಿಡಿಯುವುದು ಸುಲಭವಲ್ಲ. ಆದರೆ ಆಗಿಂದಾಗ್ಗೆ ತೂಕಡಿಸುತ್ತಿರುವ ಒಬ್ಬ ಕಾವಲುಗಾರನಿಗಿಂತಲೂ, ಇಡೀ ರಾತ್ರಿ ಎಚ್ಚರವಾಗಿರುವ ಒಬ್ಬ ಕಾವಲುಗಾರನೇ ಕಳ್ಳನನ್ನು ಹಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ಕಾವಲುಗಾರನು ಹೇಗೆ ಎಚ್ಚರವಾಗಿರಬಲ್ಲನು? ಇಡೀ ರಾತ್ರಿ ಕುಳಿತುಕೊಂಡೇ ಇರುವ ಬದಲು, ಅತ್ತಿತ್ತ ನಡೆದಾಡುತ್ತಿರುವುದು ಎಚ್ಚರವಾಗಿರಲು ಹೆಚ್ಚು ಸಹಾಯಮಾಡುವುದು. ತದ್ರೀತಿಯಲ್ಲಿ ಆತ್ಮಿಕವಾಗಿ ಸಕ್ರಿಯರಾಗಿರುವುದು, ಕ್ರೈಸ್ತರೋಪಾದಿ ನಾವು ಎಚ್ಚರವಾಗಿರುವಂತೆ ನಮಗೆ ಸಹಾಯಮಾಡುವುದು. ಹೀಗಿರುವುದರಿಂದ ಪೇತ್ರನು ನಮಗೆ, “ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳ”ವರಾಗಿರುವುದರಲ್ಲಿ ಕಾರ್ಯಮಗ್ನರಾಗಿರುವಂತೆ ಉತ್ತೇಜಿಸುತ್ತಾನೆ. (2 ಪೇತ್ರ 3:11) ಅಂಥ ಕಾರ್ಯಮಗ್ನತೆಯು, ನಾವು “ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಮನಸ್ಸಿನಲ್ಲಿ ನಿಕಟವಾಗಿಡುವುದನ್ನು” ಮುಂದುವರಿಸುವಂತೆ ಸಹಾಯಮಾಡುವುದು. “ಮನಸ್ಸಿನಲ್ಲಿ ನಿಕಟವಾಗಿಡು” ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದವನ್ನು ಅಕ್ಷರಶಃ “ವೇಗವನ್ನು ಹೆಚ್ಚಿಸು” ಎಂದು ಭಾಷಾಂತರಿಸಸಾಧ್ಯವಿದೆ. (2 ಪೇತ್ರ 3:​12, NW ಪಾದಟಿಪ್ಪಣಿ) ನಾವು ಯೆಹೋವನ ವೇಳಾಪಟ್ಟಿಯನ್ನು ಬದಲಾಯಿಸಲಾರೆವು ಎಂಬ ಮಾತು ನಿಜ. ಆತನ ದಿನವು ಆತನ ನೇಮಿತ ಸಮಯದಲ್ಲೇ ಬರುವುದು. ಆದರೆ ನಾವು ಆತನ ಸೇವೆಯಲ್ಲಿ ಕಾರ್ಯಮಗ್ನರಾಗಿರುವಲ್ಲಿ, ಈ ಹೊತ್ತಿನಿಂದ ಅಲ್ಲಿಯ ವರೆಗೂ ಇರುವ ಸಮಯವು ಹೆಚ್ಚು ಬೇಗನೆ ಗತಿಸಿಹೊಗುತ್ತಿರುವಂತೆ ತೋರುವುದು.​—1 ಕೊರಿಂಥ 15:58.

12. ನಾವು ವೈಯಕ್ತಿಕವಾಗಿ ಹೇಗೆ ಯೆಹೋವನ ತಾಳ್ಮೆಯ ಲಾಭವನ್ನು ಪಡೆದುಕೊಳ್ಳಬಹುದು?

12 ಹೀಗಿರುವುದರಿಂದ, ಯೆಹೋವನ ದಿನವು ತಡವಾಗುತ್ತಾ ಇದೆಯೆಂದು ಯಾರಿಗಾದರೂ ಅನಿಸುವಲ್ಲಿ, ಅವರು ಯೆಹೋವನ ನೇಮಿತ ಸಮಯಕ್ಕಾಗಿ ತಾಳ್ಮೆಯಿಂದ ಕಾಯಲಿಕ್ಕಾಗಿ ಪೇತ್ರನು ಕೊಟ್ಟಿರುವ ಸಲಹೆಯನ್ನು ಪಾಲಿಸುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ದೇವರ ತಾಳ್ಮೆಯಿಂದಾಗಿ ಸಿಗುತ್ತಿರುವ ಹೆಚ್ಚಿನ ಸಮಯವನ್ನು ನಾವು ಖಂಡಿತವಾಗಿಯೂ ಬುದ್ಧಿವಂತಿಕೆಯಿಂದ ಉಪಯೋಗಿಸಸಾಧ್ಯವಿದೆ. ಉದಾಹರಣೆಗಾಗಿ, ನಾವು ಅತ್ಯಾವಶ್ಯಕವಾದ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಮುಂದುವರಿಸಸಾಧ್ಯವಿದೆ ಹಾಗೂ ತಲಪಲು ಅಸಾಧ್ಯವಾಗಿರುತ್ತಿದ್ದ ಇನ್ನೂ ಹೆಚ್ಚಿನ ಜನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಸಾಧ್ಯವಿದೆ. ನಾವು ಎಚ್ಚರವಾಗಿ ಇರುವಲ್ಲಿ, ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ನಾವು ‘ನಿರ್ಮಲರೂ ನಿರ್ದೋಷಿಗಳೂ’ ಆಗಿರುವುದನ್ನು ಯೆಹೋವನು ಕಂಡುಕೊಳ್ಳುವನು. (2 ಪೇತ್ರ 3:​14, 15) ಅದೆಂಥ ಮಹಾ ಆಶೀರ್ವಾದವಾಗಿರುವುದು!

13. ಥೆಸಲೊನೀಕದ ಕ್ರೈಸ್ತರಿಗೆ ಪೌಲನು ಬರೆದ ಯಾವ ಮಾತುಗಳು ವಿಶೇಷವಾಗಿ ಇಂದು ಸೂಕ್ತವಾದವುಗಳಾಗಿವೆ?

13 ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ, ಪೌಲನು ಸಹ ಎಚ್ಚರವಾಗಿರುವುದರ ಆವಶ್ಯಕತೆಯ ಕುರಿತಾಗಿ ಮಾತಾಡುತ್ತಾನೆ. ಅವನು ಸಲಹೆ ನೀಡುವುದು: “ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:2, 6) ಇಂದು, ಇಡೀ ಲೋಕದ ವಿಷಯಗಳ ವ್ಯವಸ್ಥೆಯ ನಾಶನವು ಸಮೀಪಿಸುತ್ತಿರುವುದರಿಂದ, ಈ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವುದು ಎಷ್ಟು ಆವಶ್ಯಕ! ಆತ್ಮಿಕ ವಿಷಯಗಳ ಕಡೆಗೆ ಅನಾಸಕ್ತಿಯನ್ನು ತೋರಿಸುವಂಥ ಜನರಿಂದ ತುಂಬಿರುವಂಥ ಒಂದು ಲೋಕದಲ್ಲಿ ಯೆಹೋವನ ಆರಾಧಕರು ಜೀವಿಸುತ್ತಿದ್ದಾರೆ ಮತ್ತು ಇದು ಅವರ ಮೇಲೂ ಪ್ರಭಾವವನ್ನು ಬೀರಬಲ್ಲದು. ಹೀಗಿರುವುದರಿಂದಲೇ ಪೌಲನು ಸಲಹೆ ನೀಡುವುದು: “ನಾವಾದರೋ . . . ವಿಶ್ವಾಸಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:8) ದೇವರ ವಾಕ್ಯದ ಕ್ರಮವಾದ ಅಧ್ಯಯನ ಮತ್ತು ಕೂಟಗಳಲ್ಲಿ ನಮ್ಮ ಸಹೋದರರೊಂದಿಗೆ ಕ್ರಮವಾದ ಸಹವಾಸವು, ನಾವು ಪೌಲನ ಸಲಹೆಗೆ ಕಿವಿಗೊಡುವಂತೆ ಮತ್ತು ನಮ್ಮ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಂಡು ಹೋಗುವಂತೆ ಸಹಾಯಮಾಡುವುದು.​—ಮತ್ತಾಯ 16:​1-3.

ಲಕ್ಷಗಟ್ಟಲೆ ಮಂದಿ ಎಚ್ಚರವಾಗಿದ್ದಾರೆ

14. ಎಚ್ಚರವಾಗಿರುವಂತೆ ಪೇತ್ರನು ಕೊಟ್ಟಿರುವ ಸಲಹೆಯನ್ನು ಇಂದು ಅನೇಕರು ಪಾಲಿಸುತ್ತಿದ್ದಾರೆಂದು ಯಾವ ಅಂಕಿಸಂಖ್ಯೆಗಳು ಸೂಚಿಸುತ್ತವೆ?

14 ಎಚ್ಚರವಾಗಿರುವಂತೆ ಕೊಡಲ್ಪಟ್ಟಿರುವ ಆತ್ಮಪ್ರೇರಿತ ಪ್ರೋತ್ಸಾಹವನ್ನು ಅನೇಕರು ಪಾಲಿಸುತ್ತಿದ್ದಾರೊ? ಹೌದು. 2002ನೆಯ ಸೇವಾ ವರ್ಷದಲ್ಲಿ, 2001ಕ್ಕಿಂತಲೂ 3.1 ಪ್ರತಿಶತ ವೃದ್ಧಿಯಾಗಿರುವ 63,04,645 ಉಚ್ಚಾಂಕದ ಪ್ರಚಾರಕರು, ಬೇರೆಯವರೊಂದಿಗೆ ದೇವರ ರಾಜ್ಯದ ಕುರಿತಾಗಿ ಮಾತಾಡುತ್ತಾ 120,23,81,302 ತಾಸುಗಳನ್ನು ಕಳೆಯುವ ಮೂಲಕ, ತಾವು ಆತ್ಮಿಕವಾಗಿ ಎಚ್ಚರವಾಗಿದ್ದೇವೆಂಬ ಪುರಾವೆಯನ್ನು ಕೊಟ್ಟರು. ಇವರಿಗೆ, ಅಂಥ ಚಟುವಟಿಕೆಯು ಸಾಮಾನ್ಯವಾದ ವಿಷಯವಾಗಿರಲಿಲ್ಲ. ಅದು ಅವರ ಜೀವಿತದ ಕೇಂದ್ರಬಿಂದುವಾಗಿತ್ತು. ಅವರಲ್ಲಿ ಹೆಚ್ಚಿನವರಿಗಿದ್ದ ಮನೋಭಾವವು, ಎಲ್‌ ಸಾಲ್ವಡಾರ್‌ನಲ್ಲಿರುವ ಎಡ್ವಾರ್ಡೊ ಮತ್ತು ನೊಎಮಿಯಿಂದ ದೃಷ್ಟಾಂತಿಸಲ್ಪಟ್ಟಿದೆ.

15. ಅನೇಕರು ಆತ್ಮಿಕವಾಗಿ ಎಚ್ಚರವಾಗಿದ್ದಾರೆ ಎಂಬದನ್ನು ಎಲ್‌ ಸಾಲ್ವಡಾರ್‌ನ ಯಾವ ಅನುಭವವು ತೋರಿಸುತ್ತದೆ?

15 ಕೆಲವು ವರ್ಷಗಳ ಹಿಂದೆ, ಎಡ್ವಾರ್ಡೊ ಮತ್ತು ನೊಎಮಿ, “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಇದೆ” ಎಂಬ ಪೌಲನ ಮಾತುಗಳಿಗೆ ಲಕ್ಷ್ಯಕೊಟ್ಟರು. (1 ಕೊರಿಂಥ 7:31) ಅವರು ತಮ್ಮ ಜೀವನಗಳನ್ನು ಸರಳೀಕರಿಸಿದರು ಮತ್ತು ಪೂರ್ಣ ಸಮಯದ ಪಯನೀಯರ್‌ ಶುಶ್ರೂಷೆಯನ್ನು ಆರಂಭಿಸಿದರು. ಸಮಯ ದಾಟಿದಂತೆ, ಅವರು ಅನೇಕ ವಿಧಗಳಲ್ಲಿ ಆಶೀರ್ವದಿಸಲ್ಪಟ್ಟರು ಮತ್ತು ಸರ್ಕಿಟ್‌ ಹಾಗೂ ಡಿಸ್ಟ್ರಿಕ್ಟ್‌ ಕೆಲಸದಲ್ಲೂ ಪಾಲ್ಗೊಂಡರು. ಅವರು ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದರೂ, ಪೂರ್ಣ ಸಮಯದ ಸೇವೆಗಾಗಿ ಪ್ರಾಪಂಚಿಕ ಸುಖಸೌಕರ್ಯಗಳನ್ನು ತ್ಯಾಗಮಾಡಲು ತಾವು ತೆಗೆದುಕೊಂಡ ನಿರ್ಣಯವು ಸರಿಯಾದದ್ದಾಗಿತ್ತೆಂದು ಎಡ್ವಾರ್ಡೊ ಮತ್ತು ನೊಎಮಿಗೆ ಮನದಟ್ಟಾಗಿದೆ. ಎಲ್‌ ಸಾಲ್ವಡಾರ್‌ನಲ್ಲಿರುವ 29,269 ಪ್ರಚಾರಕರಲ್ಲಿ ಅನೇಕರು, 2,454 ಮಂದಿ ಪಯನೀಯರರೂ ಸೇರಿ, ಅದೇ ರೀತಿಯ ಸ್ವತ್ಯಾಗದ ಮನೋಭಾವವನ್ನು ತೋರಿಸಿದ್ದಾರೆ. ಮತ್ತು ಇದು, ಗತ ವರ್ಷದಲ್ಲಿ ಆ ದೇಶದ ಪ್ರಚಾರಕರ ಸಂಖ್ಯೆಯಲ್ಲಿ 2 ಪ್ರತಿಶತ ವೃದ್ಧಿಗೆ ಒಂದು ಕಾರಣವಾಗಿದೆ.

16. ಕೋಟ್‌ಡೀವಾರ್‌ನಲ್ಲಿರುವ ಒಬ್ಬ ಯುವ ಸಹೋದರನು ಯಾವ ಮನೋಭಾವವನ್ನು ವ್ಯಕ್ತಪಡಿಸಿದನು?

16 ಕೋಟ್‌ಡೀವಾರ್‌ನಲ್ಲಿ, ಬ್ರಾಂಚ್‌ ಆಫೀಸಿಗೆ ಈ ಪತ್ರವನ್ನು ಬರೆದ ಒಬ್ಬ ಕ್ರೈಸ್ತ ಯುವಕನು ಇದೇ ರೀತಿಯ ಮನೋಭಾವವನ್ನು ವ್ಯಕ್ತಪಡಿಸಿದನು: “ನಾನೊಬ್ಬ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಿದ್ದೇನೆ. ಆದರೆ ನಾನು ಸಹೋದರರಿಗೆ ಪಯನೀಯರ್‌ ಸೇವೆಯನ್ನು ಮಾಡಿರಿ ಎಂದು ಹೇಳಲಾರೆ, ಏಕೆಂದರೆ ಸ್ವತಃ ನಾನೇ ಒಂದು ಒಳ್ಳೇ ಮಾದರಿಯನ್ನು ಇಟ್ಟಿಲ್ಲ. ಆದುದರಿಂದ, ಒಳ್ಳೆಯ ಸಂಬಳವನ್ನು ಕೊಡುತ್ತಿದ್ದ ಉದ್ಯೋಗವನ್ನು ಬಿಟ್ಟು, ಈಗ ಸ್ವಉದ್ಯೋಗವನ್ನು ಮಾಡುತ್ತಿದ್ದೇನೆ. ಇದು ನನಗೆ ಶುಶ್ರೂಷೆಗಾಗಿ ಹೆಚ್ಚಿನ ಸಮಯವನ್ನು ಕೊಡುತ್ತದೆ.” ಈ ಯುವಕನು, ಕೋಟ್‌ಡೀವಾರ್‌ನಲ್ಲಿ ಸೇವೆಸಲ್ಲಿಸುತ್ತಿರುವ 983 ಮಂದಿ ಪಯನೀಯರರಲ್ಲಿ ಒಬ್ಬನಾದನು. ಮತ್ತು ಈ ದೇಶವು ಕಳೆದ ವರ್ಷ, 6,701 ಮಂದಿ ಪ್ರಚಾರಕರನ್ನು ವರದಿಸಿತು. ಇದು 5 ಪ್ರತಿಶತ ವೃದ್ಧಿಯಾಗಿತ್ತು.

17. ಬೆಲ್ಜಿಯಮ್‌ನಲ್ಲಿದ್ದ ಒಬ್ಬ ಯುವ ಸಾಕ್ಷಿಯು, ತಾನು ಪೂರ್ವಕಲ್ಪಿತ ಅಭಿಪ್ರಾಯದಿಂದ ಧೈರ್ಯಗೆಟ್ಟಿಲ್ಲ ಎಂಬದನ್ನು ಹೇಗೆ ತೋರಿಸಿದಳು?

17 ಅಸಹಿಷ್ಣುತೆ, ಪೂರ್ವಕಲ್ಪಿತ ಅಭಿಪ್ರಾಯ ಮತ್ತು ಭೇದಭಾವವು, ಬೆಲ್ಜಿಯಮ್‌ನಲ್ಲಿರುವ 24,961 ಮಂದಿ ರಾಜ್ಯ ಪ್ರಚಾರಕರಿಗೆ ಈಗಲೂ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಹಾಗಿದ್ದರೂ, ಅವರು ಹುರುಪುಳ್ಳವರಾಗಿದ್ದಾರೆ ಮತ್ತು ಧೈರ್ಯಗೆಟ್ಟಿಲ್ಲ. ಶಾಲೆಯಲ್ಲಿ ನೀತಿತತ್ತ್ವಗಳ ಕುರಿತಾದ ಒಂದು ಪಾಠದ ಸಮಯದಲ್ಲಿ, ಯೆಹೋವನ ಸಾಕ್ಷಿಗಳನ್ನು ಒಂದು ಪಂಥವೆಂದು ವರ್ಣಿಸಲಾದಾಗ, ಅಲ್ಲಿದ್ದ 16 ವರ್ಷ ಪ್ರಾಯದ ಒಬ್ಬ ಸಾಕ್ಷಿಯು, ತಾನು ಆ ವಿಷಯದ ಕುರಿತಾಗಿ ಯೆಹೋವನ ಸಾಕ್ಷಿಗಳ ದೃಷ್ಟಿಕೋನವೇನೆಂಬದನ್ನು ತಿಳಿಸಬಹುದೊ ಎಂದು ಅನುಮತಿಯನ್ನು ಕೇಳಿದಳು. ಯೆಹೋವನ ಸಾಕ್ಷಿಗಳು​—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್‌) ಎಂಬ ವಿಡಿಯೋ ಮತ್ತು ಯೆಹೋವನ ಸಾಕ್ಷಿಗಳು​—ಅವರು ಯಾರು? ಎಂಬ ಬ್ರೋಷರನ್ನು ಉಪಯೋಗಿಸುತ್ತಾ, ಯೆಹೋವನ ಸಾಕ್ಷಿಗಳು ನಿಜವಾಗಿಯೂ ಯಾರಾಗಿದ್ದಾರೆ ಎಂಬದನ್ನು ಅವಳು ವಿವರಿಸಲು ಶಕ್ತಳಾದಳು. ಆ ಮಾಹಿತಿಯನ್ನು ತುಂಬ ಗಣ್ಯಮಾಡಲಾಯಿತು, ಮತ್ತು ಮುಂದಿನ ವಾರದಲ್ಲಿ ವಿದ್ಯಾರ್ಥಿಗಳಿಗೆ ಯೆಹೋವನ ಸಾಕ್ಷಿಗಳ ಕ್ರೈಸ್ತ ಧರ್ಮಕ್ಕೆ ಮಾತ್ರ ಸಂಬಂಧಪಟ್ಟ ಪ್ರಶ್ನೆಗಳೇ ಇದ್ದಂಥ ಒಂದು ಪರೀಕ್ಷೆಯನ್ನು ಕೊಡಲಾಗಿತ್ತು.

18. ಆರ್ಜೆಂಟೀನ ಮತ್ತು ಮೊಸಾಂಬೀಕ್‌ನಲ್ಲಿರುವ ಪ್ರಚಾರಕರು, ಆರ್ಥಿಕ ಸಮಸ್ಯೆಗಳಿಂದಾಗಿ ಯೆಹೋವನನ್ನು ಸೇವಿಸುವುದರಿಂದ ಅಪಕರ್ಷಿಸಲ್ಪಡಲಿಲ್ಲವೆಂಬದಕ್ಕೆ ಯಾವ ಪುರಾವೆಯಿದೆ?

18 ಹೆಚ್ಚಿನ ಕ್ರೈಸ್ತರು ಈ ಕಡೇ ದಿವಸಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೂ, ಅವರು ತಾವು ಅಪಕರ್ಷಣೆಗೊಳಗಾಗದಿರಲು ಪ್ರಯತ್ನಿಸುತ್ತಾರೆ. ಆರ್ಜೆಂಟೀನದ ಆರ್ಥಿಕ ಸಮಸ್ಯೆಗಳ ಬಗ್ಗೆ ವಾರ್ತಾಮಾಧ್ಯಮಗಳು ಬಹಳಷ್ಟು ಪ್ರಚಾರಮಾಡಿರುವುದಾದರೂ, ಆ ದೇಶವು ಕಳೆದ ವರ್ಷ 1,26,709 ಮಂದಿ ಸಾಕ್ಷಿಗಳ ಹೊಸ ಉಚ್ಚಾಂಕವನ್ನು ವರದಿಸಿತು. ಮೊಸಾಂಬೀಕ್‌ನಲ್ಲಿ ಈಗಲೂ ವ್ಯಾಪಕವಾದ ಬಡತನವಿದೆ. ಹಾಗಿದ್ದರೂ, 37,563 ಮಂದಿ ಸಾಕ್ಷಿಕಾರ್ಯದಲ್ಲಿ ಪಾಲ್ಗೊಂಡಿರುವುದಾಗಿ ವರದಿಸಲಾಗಿದ್ದು, ಇದು 4 ಪ್ರತಿಶತ ವೃದ್ಧಿಯಾಗಿದೆ. ಅಲ್ಬೇನಿಯದಲ್ಲಿ ಜೀವನವು ಕಷ್ಟಕರವಾಗಿದ್ದರೂ, ಆ ದೇಶದಲ್ಲಿ 12 ಪ್ರತಿಶತ ವೃದ್ಧಿಯಿತ್ತು. ಅವರು 2,708 ಮಂದಿ ಪ್ರಚಾರಕರ ಉಚ್ಚಾಂಕವನ್ನು ತಲಪಿದರು. ಯೆಹೋವನ ಸೇವಕರು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವಾಗ, ಕಷ್ಟಕರ ಪರಿಸ್ಥಿತಿಗಳ ದೆಸೆಯಿಂದ ಆತನ ಆತ್ಮಕ್ಕೆ ಅಡಚಣೆಯುಂಟಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.​—ಮತ್ತಾಯ 6:33.

19. (ಎ) ಈಗಲೂ ಬೈಬಲ್‌ ಸತ್ಯಕ್ಕಾಗಿ ಹಸಿದಿರುವ ಅನೇಕ ಜನರಿದ್ದಾರೆಂಬುದಕ್ಕೆ ಯಾವುದು ಪುರಾವೆಯನ್ನು ನೀಡುತ್ತದೆ? (ಬಿ) ಯೆಹೋವನ ಸೇವಕರು ಆತ್ಮಿಕವಾಗಿ ಎಚ್ಚರವಾಗಿದ್ದಾರೆ ಎಂಬುದನ್ನು ತೋರಿಸುವ ವಾರ್ಷಿಕ ವರದಿಯ ಇನ್ನಿತರ ವಿವರಗಳು ಯಾವುವು? (12-15ನೆಯ ಪುಟಗಳಲ್ಲಿರುವ ಚಾರ್ಟ್‌ ಅನ್ನು ನೋಡಿರಿ.)

19 ಕಳೆದ ವರ್ಷ ಲೋಕವ್ಯಾಪಕವಾಗಿ ವರದಿಸಲ್ಪಟ್ಟಿದ್ದ ಮಾಸಿಕ ಸರಾಸರಿಯಾದ, 53,09,289 ಬೈಬಲ್‌ ಅಧ್ಯಯನಗಳು, ಇನ್ನೂ ಅನೇಕ ಕುರಿಸದೃಶ ಜನರು ಬೈಬಲ್‌ ಸತ್ಯಕ್ಕಾಗಿ ಹಸಿದಿದ್ದಾರೆಂಬದನ್ನು ತೋರಿಸುತ್ತದೆ. ಜ್ಞಾಪಕಾಚರಣೆಗೆ ಹಾಜರಾದ ಹೊಸ ಉಚ್ಚಾಂಕ, ಅಂದರೆ 1,55,97,746 ಜನರಲ್ಲಿ ಅಧಿಕಾಂಶ ಮಂದಿ ಈಗಲೂ ಯೆಹೋವನನ್ನು ಸಕ್ರಿಯವಾಗಿ ಸೇವಿಸುತ್ತಿಲ್ಲ. ಅವರು ಜ್ಞಾನದಲ್ಲೂ, ಯೆಹೋವನಿಗಾಗಿಯೂ ಸಹೋದರತ್ವಕ್ಕಾಗಿಯೂ ಇರುವ ಪ್ರೀತಿಯಲ್ಲೂ ಬೆಳೆಯುತ್ತಾ ಹೋಗಲಿ. “ಬೇರೆ ಕುರಿಗಳ” “ಮಹಾ ಸಮೂಹವು,” ತಮ್ಮ ಆತ್ಮಾಭಿಷಿಕ್ತ ಸಹೋದರರೊಂದಿಗೆ ಜೊತೆಗೂಡಿ, ಸೃಷ್ಟಿಕರ್ತನಿಗೆ “ಆತನ ಆಲಯದಲ್ಲಿ ಹಗಲಿರುಳು” ಸೇವೆಸಲ್ಲಿಸುತ್ತಾ ಇರುವಾಗ ಫಲದಾಯಕವಾಗಿರುವುದನ್ನು ನೋಡುವುದು ರೋಮಾಂಚಕ ಸಂಗತಿಯಾಗಿದೆ.​—ಪ್ರಕಟನೆ 7:​9, 15; ಯೋಹಾನ 10:16.

ಲೋಟನಿಂದ ಒಂದು ಪಾಠ

20. ಲೋಟನ ಮತ್ತು ಅವನ ಹೆಂಡತಿಯ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

20 ದೇವರ ನಂಬಿಗಸ್ತ ಸೇವಕರು ಸಹ, ಕ್ಷಣಿಕವಾಗಿ ತಮ್ಮ ತುರ್ತು ಪ್ರಜ್ಞೆಯನ್ನು ಕಳೆದುಕೊಳ್ಳಸಾಧ್ಯವಿದೆ ನಿಜ. ಅಬ್ರಹಾಮನ ಸೋದರಳಿಯನಾದ ಲೋಟನ ಕುರಿತಾಗಿ ಯೋಚಿಸಿರಿ. ದೇವರು ಸೋದೋಮ್‌ ಗೊಮೋರ ಪಟ್ಟಣಗಳನ್ನು ನಾಶಮಾಡಲಿದ್ದಾನೆ ಎಂಬದನ್ನು ಇಬ್ಬರು ದೇವದೂತ ಸಂದರ್ಶಕರಿಂದ ಅವನು ತಿಳಿದುಕೊಂಡನು. ಈ ಸುದ್ದಿಯು ಲೋಟನನ್ನು ಚಕಿತಗೊಳಿಸಿರಲಿಕ್ಕಿಲ್ಲ. ಏಕೆಂದರೆ ಅವನು ಆ “ಅಧರ್ಮಿಗಳ ನಾಚಿಕೆಗೆಟ್ಟ ನಡತೆಗೆ ವೇದನೆ”ಗೊಂಡಿದ್ದನು. (2 ಪೇತ್ರ 2:7) ಹಾಗಿದ್ದರೂ, ಆ ಇಬ್ಬರು ದೇವದೂತರು ಅವನನ್ನು ಸೋದೋಮ್‌ ನಗರದಿಂದ ಹೊರಗೆ ಕರೆತರಲು ಬಂದಾಗ, ಅವನು ‘ತಡಮಾಡಿದನು.’ ಆ ದೇವದೂತರು ಅವನನ್ನೂ ಅವನ ಕುಟುಂಬವನ್ನೂ ಆ ನಗರದಿಂದ ಹೆಚ್ಚುಕಡಿಮೆ ಎಳೆದುಕೊಂಡೇ ಹೊರತರಬೇಕಾಯಿತು. ತದನಂತರ, ಹಿಂದೆ ತಿರುಗಿ ನೋಡದಂತೆ ದೇವದೂತರು ಕೊಟ್ಟ ಎಚ್ಚರಿಕೆಯನ್ನು ಲೋಟನ ಹೆಂಡತಿಯು ಅಲಕ್ಷಿಸಿದಳು. ಅವಳ ಆ ಅಸಡ್ಡೆಯ ಮನೋಭಾವಕ್ಕೆ ಅವಳು ಭಾರೀ ಬೆಲೆಯನ್ನು ತೆರಬೇಕಾಯಿತು. (ಆದಿಕಾಂಡ 19:​14-17, 26) “ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಯೇಸು ಎಚ್ಚರಿಸಿದನು.​—ಲೂಕ 17:32.

21. ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಎಚ್ಚರವಾಗಿರುವುದು ಅತ್ಯಾವಶ್ಯವೇಕೆ?

21 ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ನಲ್ಲಿ ನಡೆದ ವಿಪತ್ತು ಹಾಗೂ ಯೆರೂಸಲೇಮಿನ ನಾಶನಕ್ಕೆ ಮುಂಚೆ ಮತ್ತು ನಂತರ ನಡೆದಂಥ ಘಟನೆಗಳು, ಹಾಗೂ ನೋಹನ ದಿನದ ಜಲಪ್ರಳಯ ಮತ್ತು ಲೋಟನ ಉದಾಹರಣೆಗಳು, ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದರ ಮಹತ್ವವನ್ನು ದೃಷ್ಟಾಂತಿಸುತ್ತವೆ. ಯೆಹೋವನ ಸೇವಕರೋಪಾದಿ, ನಾವು ಅಂತ್ಯ ಕಾಲದ ಸೂಚನೆಯನ್ನು ಗ್ರಹಿಸುತ್ತೇವೆ. (ಮತ್ತಾಯ 24:3) ನಾವು ಸುಳ್ಳು ಧರ್ಮದಿಂದ ನಮ್ಮನ್ನು ಪ್ರತ್ಯೇಕಿಸಿಕೊಂಡಿದ್ದೇವೆ. (ಪ್ರಕಟನೆ 18:4) ಪ್ರಥಮ ಶತಮಾನದ ಕ್ರೈಸ್ತರಂತೆ ನಾವು ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಮನಸ್ಸಿನಲ್ಲಿ ನಿಕಟವಾಗಿ’ಟ್ಟುಕೊಳ್ಳಬೇಕು. (2 ಪೇತ್ರ 3:​12, NW) ಹೌದು, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಾವು ಎಚ್ಚರವಾಗಿರಲೇಬೇಕು! ಇದಕ್ಕಾಗಿ ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು, ಮತ್ತು ಎಚ್ಚರವಾಗಿರಲಿಕ್ಕಾಗಿ ನಾವು ಯಾವ ಗುಣಗಳನ್ನು ವಿಕಸಿಸಿಕೊಳ್ಳಬಲ್ಲೆವು? ಮುಂದಿನ ಲೇಖನವು ಈ ವಿಷಯಗಳನ್ನು ಪರಿಗಣಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 6 ಪ್ರಥಮ ಶತಮಾನದಲ್ಲಿದ್ದ ಯೆರೂಸಲೇಮಿನಲ್ಲಿ, 1,20,000ಕ್ಕಿಂತಲೂ ಹೆಚ್ಚು ನಿವಾಸಿಗಳಿರುವುದು ಅಸಂಭಾವ್ಯ. ಯೂಸೀಬಿಯಸ್‌ನ ಲೆಕ್ಕಾಚಾರಕ್ಕನುಸಾರ, ಯೂದಾಯದ ಪ್ರಾಂತದಿಂದ 3,00,000 ನಿವಾಸಿಗಳು ಸಾ.ಶ. 70ರ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಪ್ರಯಾಣಿಸಿದರು. ಸಾವಿಗೆ ತುತ್ತಾದವರಲ್ಲಿ ಉಳಿದವರು, ಆ ಸಾಮ್ರಾಜ್ಯದ ಬೇರೆ ಭಾಗಗಳಿಂದ ಬಂದಿದ್ದವರಾಗಿರಬೇಕು.

^ ಪ್ಯಾರ. 6 ಯೆಹೋವನ ದೃಷ್ಟಿಕೋನದಿಂದ, ಸಾ.ಶ. 33ರಲ್ಲೇ ಹೊಸ ಒಡಂಬಡಿಕೆಯು ಮೋಶೆಯ ಧರ್ಮಶಾಸ್ತ್ರವನ್ನು ಸ್ಥಾನಪಲ್ಲಟಗೊಳಿಸಿತ್ತು.​—ಎಫೆಸ 2:14.

^ ಪ್ಯಾರ. 9 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ಹೇಗೆ ಉತ್ತರಿಸುವಿರಿ?

• ಯಾವ ವಿಕಸನದಿಂದಾಗಿ, ಯೆಹೂದಿ ಕ್ರೈಸ್ತರು ಯೆರೂಸಲೇಮಿನ ನಾಶನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು?

• ಅಪೊಸ್ತಲ ಪೇತ್ರ ಮತ್ತು ಪೌಲರ ಬರಹಗಳಲ್ಲಿರುವ ಯಾವ ಸಲಹೆಯು ನಾವು ಎಚ್ಚರವಾಗಿರುವಂತೆ ಸಹಾಯಮಾಡುತ್ತದೆ?

• ಪೂರ್ಣವಾಗಿ ಎಚ್ಚರವಾಗಿದ್ದೇವೆಂಬ ಪುರಾವೆಯನ್ನು ಇಂದು ಯಾರು ಕೊಡುತ್ತಾರೆ?

• ಲೋಟನ ಮತ್ತು ಅವನ ಹೆಂಡತಿಯ ಕುರಿತಾದ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 12-15ರಲ್ಲಿರುವ ಚಾರ್ಟು]

ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 2002ನೆಯ ಇಸವಿಯ ಸೇವಾ ವರ್ಷದ ವರದಿ

(ಬೌಂಡ್‌ ವಾಲ್ಯುಮ್‌ ನೋಡಿ)

[ಪುಟ 9ರಲ್ಲಿರುವ ಚಿತ್ರ]

ಸಾ.ಶ. 66ರಲ್ಲಿ, ಯೆರೂಸಲೇಮಿನಲ್ಲಿನ ಕ್ರೈಸ್ತರು ಯೇಸುವಿನ ಎಚ್ಚರಿಕೆಯನ್ನು ಪಾಲಿಸಿದರು

[ಪುಟ 10ರಲ್ಲಿರುವ ಚಿತ್ರಗಳು]

ಕಾರ್ಯಮಗ್ನರಾಗಿರುವುದು ಕ್ರೈಸ್ತರಿಗೆ ಎಚ್ಚರವಾಗಿರುವಂತೆ ಸಹಾಯಮಾಡುತ್ತದೆ