ವಧಿಸಲ್ಪಟ್ಟ ಯೆಹೋವನ ಸಾಕ್ಷಿಗಳನ್ನು ಸ್ಮರಿಸಲಾಗುತ್ತದೆ
ವಧಿಸಲ್ಪಟ್ಟ ಯೆಹೋವನ ಸಾಕ್ಷಿಗಳನ್ನು ಸ್ಮರಿಸಲಾಗುತ್ತದೆ
ಇಸವಿ 2002ರ ಮಾರ್ಚ್ 7ರಂದು, ಪಶ್ಚಿಮ ಹಂಗೆರಿಯ ಕಾರ್ಮೆಂಡ್ ಪಟ್ಟಣದಲ್ಲಿ ಒಂದು ಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಯಿತು. ಇದು 1945ರಲ್ಲಿ ನಾಸಿಗಳಿಂದ ಹತ್ಯೆಗೈಯಲ್ಪಟ್ಟ ಮೂವರು ಯೆಹೋವನ ಸಾಕ್ಷಿಗಳ ಮರಣದ ಸ್ಮಾರಕವನ್ನು ಆಚರಿಸಲಿಕ್ಕಾಗಿತ್ತು.
ಈ ಸ್ಮಾರಕ ಫಲಕವನ್ನು, ಹುನ್ಯಾಡೀ ರೋಡ್ನಲ್ಲಿರುವ ಅಗ್ನಿಶಾಮಕ ಇಲಾಖೆಯ ಆಧುನಿಕ ದಿನದ ಮುಖ್ಯಕಾರ್ಯಾಲಯದ ಗೋಡೆಗೆ ಜೋಡಿಸಲಾಗಿತ್ತು. ಆ ಸಾರ್ವಜನಿಕ ವಧೆಯು ಸಂಭವಿಸಿದ್ದು ಈ ಸ್ಥಳದಲ್ಲೇ. ಆ ಸ್ಮಾರಕ ಫಲಕವು, ‘1945ರ ಮಾರ್ಚ್ ತಿಂಗಳಿನಲ್ಲಿ ಆತ್ಮಸಾಕ್ಷಿಕ ಆಕ್ಷೇಪಕರೋಪಾದಿ ವಧಿಸಲ್ಪಟ್ಟಿದ್ದ ಕ್ರೈಸ್ತರ’ ನೆನಪಿಗಾಗಿ ಸಮರ್ಪಿಸಲ್ಪಟ್ಟಿತ್ತು. ‘ಆಂಟಾಲ್ ಹಾನಿಚ್ (1911-1945), ಬರ್ಟಾಲಾನ್ ಸಾಬಾ (1921-1945), ಯಾನಾಶ್ ಸಾನ್ಡಾರ್ (1923-1945), 2002, ಯೆಹೋವನ ಸಾಕ್ಷಿಗಳು.’
ಈ ವಧೆಗಳು IIನೇ ಲೋಕ ಯುದ್ಧವು ಕೊನೆಗೊಳ್ಳುವ ಎರಡು ತಿಂಗಳಿಗೆ ಮುಂಚೆಯಷ್ಟೇ ನಡೆಸಲ್ಪಟ್ಟಿದ್ದವು. ಈ ಕ್ರೈಸ್ತರನ್ನು ಏಕೆ ಹತಿಸಲಾಯಿತು? ವಾಶ್ ನೇಪೆ ಎಂಬ ಹಂಗೆರಿಯನ್ ವಾರ್ತಾಪತ್ರಿಕೆಯು ಹೀಗೆ ವಿವರಿಸುತ್ತದೆ: “ಜರ್ಮನಿಯಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದ ಬಳಿಕ, ಕೇವಲ ಯೆಹೂದ್ಯರು ಮಾತ್ರವಲ್ಲ ನಂಬಿಗಸ್ತ ಯೆಹೋವನ ಸಾಕ್ಷಿಗಳು ಸಹ ತಮ್ಮ ಧಾರ್ಮಿಕ ನಿಶ್ಚಿತಾಭಿಪ್ರಾಯವನ್ನು ತೊರೆಯದಿರುವಲ್ಲಿ, ಅವರನ್ನು ಹಿಂಸೆ ಮತ್ತು ಚಿತ್ರಹಿಂಸೆ, ಕೂಟಶಿಬಿರ ಹಾಗೂ ಮರಣಕ್ಕೆ ಗುರಿಪಡಿಸಲಾಗುತ್ತಿತ್ತು. . . . 1945ರ ಮಾರ್ಚ್ ತಿಂಗಳಿನಲ್ಲಿ, ಹಂಗೆರಿಯ ಪಶ್ಚಿಮ ಭಾಗದಲ್ಲೆಲ್ಲಾ ಭಯವು ತಾಂಡವವಾಡುತ್ತಿತ್ತು. . . . ಈ ಭೀಕರ ಸನ್ನಿವೇಶದ ಒಂದು ಭಾಗವು, ಯೆಹೋವನ ಸಾಕ್ಷಿಗಳ ಸದಸ್ಯರನ್ನು ಗಡೀಪಾರುಮಾಡಿ ಕೊಲ್ಲುವುದಾಗಿತ್ತು.”
ಆ ಸ್ಮಾರಕ ಫಲಕವನ್ನು ಅನಾವರಣಗೊಳಿಸುವುದರ ಸಂಬಂಧದಲ್ಲಿ ನಡೆದ ಕಾರ್ಯಕ್ರಮವು ಎರಡು ಭಾಗಗಳಾಗಿ ವರ್ಗೀಕರಿಸಲ್ಪಟ್ಟಿತ್ತು. ಮೊದಲನೆಯ ಭಾಗವು ಬಾಟ್ಟ್ಯಾನೀ ಕಾಸಲ್ನ ಥಿಯೇಟರ್ನಲ್ಲಿ ಜರುಗಿತು. ಅಲ್ಲಿನ ಭಾಷಣಕರ್ತರುಗಳು, ಬುಡಪೆಸ್ಟ್ನಲ್ಲಿರುವ ಹತ್ಯಾಕಾಂಡ ದಾಖಲೆ ಸಂಗ್ರಹಣ ಕೇಂದ್ರದ ಮುಖ್ಯಸ್ಥರಾಗಿರುವ ಪ್ರೊಫೆಸರ್ ಸಾಬೋಚ್ ಸೀಟಾ; ಹಂಗೆರಿಯನ್ ಮಾನವಹಕ್ಕು, ಅಲ್ಪಸಂಖ್ಯಾತರು ಮತ್ತು ಧಾರ್ಮಿಕ ವಿಚಾರಗಳ ಪಾರ್ಲಿಮೆಂಟ್ ಕಮಿಟಿಯ ಸದಸ್ಯರಾಗಿರುವ ಲಾಸ್ಲೋ ಡೋನಾತ್; ಮತ್ತು ಈಗ ಪಟ್ಟಣದ ಇತಿಹಾಸಕಾರರಾಗಿದ್ದು, ಆ ವಧೆಗಳನ್ನು ಕಣ್ಣಾರೆ ನೋಡಿರುವ ಕಾಲ್ಮಾನ್ ಕೋಮ್ಯಾಚೀ ಅವರಾಗಿದ್ದರು. ಅಲ್ಲಿ ಹಾಜರಿದ್ದ 500ಕ್ಕಿಂತಲೂ ಹೆಚ್ಚು ಜನರು ಕಾರ್ಯಕ್ರಮದ ಎರಡನೆಯ ಭಾಗಕ್ಕಾಗಿ ಪಟ್ಟಣದ ಇನ್ನೊಂದು ಬದಿಗೆ ನಡೆದುಕೊಂಡು ಹೋದರು. ಈ ಎರಡನೆಯ ಭಾಗವು ಸ್ಮಾರಕ ಫಲಕದ ಅನಾವರಣವೇ ಆಗಿದ್ದು, ಕಾರ್ಮೆಂಡ್ ಪಟ್ಟಣದ ಮೇಯರ್ ಆಗಿರುವ ಯೋಸೆಫ್ ಹೋನ್ಫೀಯವರು ಇದನ್ನು ಉದ್ಘಾಟಿಸಿದರು.
ಯಾನಾಶ್ ಸಾನ್ಡಾರ್ ತಮ್ಮ ಬೀಳ್ಕೊಡುವಿಕೆಯ ಪತ್ರದಲ್ಲಿ, ತನ್ನ ಕ್ರೈಸ್ತ ಸಹೋದರ ಸಹೋದರಿಯರು ಅಳದಿರುವಂತೆ ಪ್ರೋತ್ಸಾಹಿಸಿದರು. ಅವರು ಬರೆದುದು: “ಪ್ರಕಟನೆ 2:10ರಲ್ಲಿ ಕಂಡುಬರುವ ‘ನೀನು ಸಾಯಬೇಕಾದರೂ ನಂಬಿಗಸ್ತನಾಗಿರು’ ಎಂಬ ಯೋಹಾನನ ಮಾತುಗಳು ಈಗಲೂ ನನ್ನ ಮನಸ್ಸಿನಲ್ಲಿವೆ . . . ನನಗೋಸ್ಕರ ಅಳಬೇಡಿರೆಂದು ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿರಿ, ಏಕೆಂದರೆ ನಾನು ಸತ್ಯಕ್ಕೋಸ್ಕರ ಸಾಯುತ್ತಿದ್ದೇನೆ, ಅಪರಾಧಿಯಾಗಿ ಅಲ್ಲ.”
[ಪುಟ 32ರಲ್ಲಿರುವ ಚಿತ್ರ]
ಬರ್ಟಾಲಾನ್ ಸಾಬಾ
[ಪುಟ 32ರಲ್ಲಿರುವ ಚಿತ್ರ]
ಆಂಟಾಲ್ ಹಾನಿಚ್
[ಪುಟ 32ರಲ್ಲಿರುವ ಚಿತ್ರ]
ಯಾನಾಶ್ ಸಾನ್ಡಾರ್