ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ

ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ

ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ

“ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು.”​—ಕೀರ್ತನೆ 9:10.

1, 2. ಭದ್ರತೆಗಾಗಿ ಜನರು ವ್ಯರ್ಥವಾಗಿ ಭರವಸವಿಡುವಂಥ ಕೆಲವು ವಿಷಯಗಳಾವುವು?

ಇಂದು ಎಷ್ಟೋ ವಿಷಯಗಳು ನಮ್ಮ ಸುಕ್ಷೇಮಕ್ಕೆ ಬೆದರಿಕೆಯನ್ನು ಹಾಕುತ್ತಿರುವಾಗ, ನಮಗೆ ಭದ್ರತೆಯನ್ನು ಒದಗಿಸಬಲ್ಲ ಯಾರಾದರೊಬ್ಬರ ಕಡೆಗೆ ಅಥವಾ ಯಾವುದಾದರೊಂದರ ಕಡೆಗೆ ತಿರುಗುವುದು ಸ್ವಾಭಾವಿಕವಾಗಿದೆ. ತಮ್ಮ ಬಳಿ ಹೆಚ್ಚು ಹಣವಿದ್ದರೆ ತಮ್ಮ ಭವಿಷ್ಯವು ಭದ್ರವಾಗಿರುವುದೆಂದು ಕೆಲವರು ನೆನಸುತ್ತಾರೆ. ಆದರೆ ಸತ್ಯ ಸಂಗತಿಯೇನಂದರೆ, ಹಣವು ಅತಿ ಅಸ್ಥಿರವಾದ ಆಶ್ರಯವಾಗಿರುತ್ತದೆ. ಬೈಬಲು ಅನ್ನುವುದು: “ಧನವನ್ನೇ ನಂಬಿದವನು ಬಿದ್ದುಹೋಗುವನು.” (ಜ್ಞಾನೋಕ್ತಿ 11:28) ಇನ್ನೂ ಕೆಲವರು, ಮಾನವ ಮುಖಂಡರ ಮೇಲೆ ತಮ್ಮ ಭರವಸೆಯಿಡುತ್ತಾರೆ. ಆದರೆ ಅತ್ಯುತ್ತಮವಾದ ಮುಖಂಡರು ಸಹ ತಪ್ಪುಗಳನ್ನು ಮಾಡುತ್ತಾರೆ. ಮತ್ತು ಕಟ್ಟಕಡೆಗೆ ಅವರೆಲ್ಲರೂ ಮರಣಾಧೀನರಾಗುತ್ತಾರೆ. ಬೈಬಲು ವಿವೇಕಯುತವಾಗಿ ಹೀಗನ್ನುತ್ತದೆ: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ.” (ಕೀರ್ತನೆ 146:3) ನಮ್ಮ ಸ್ವಂತ ಪ್ರಯತ್ನಗಳ ಮೇಲೆ ಭರವಸವಿಡುವುದರ ಕುರಿತೂ ಆ ಪ್ರೇರಿತ ಮಾತುಗಳು ಎಚ್ಚರಿಕೆ ನೀಡುತ್ತವೆ. ನಾವು ಸಹ ಬರಿಯ ‘ಮಾನವ’ ಮಾತ್ರದವರು ಆಗಿದ್ದೇವಲ್ಲವೆ.

2 ಪ್ರವಾದಿಯಾದ ಯೆಶಾಯನು ತನ್ನ ದಿನದಲ್ಲಿದ್ದ ಇಸ್ರಾಯೇಲಿನ ರಾಷ್ಟ್ರೀಯ ಮುಖಂಡರನ್ನು ಟೀಕಿಸಿದ್ದನು. ಯಾಕಂದರೆ ಅವರು “ಅಸತ್ಯವನ್ನು ಆಶ್ರಯಿಸಿ”ಕೊಂಡಿದ್ದರು. (ಯೆಶಾಯ 28:15-17) ಭದ್ರತೆಯನ್ನು ಪಡೆದುಕೊಳ್ಳಲು ಅವರು ನಡೆಸಿದ ಅನ್ವೇಷಣೆಯಲ್ಲಿ, ನೆರೆಹೊರೆಯ ದೇಶಗಳೊಂದಿಗೆ ಅವರು ರಾಜಕೀಯ ಮೈತ್ರಿಸಂಬಂಧಗಳನ್ನು ಮಾಡಿಕೊಂಡಿದ್ದರು. ಅಂಥ ಮೈತ್ರಿಸಂಬಂಧಗಳು ಭರವಸಯೋಗ್ಯವಾಗಿರಲಿಲ್ಲ, ಅವು ಅಸತ್ಯವಾಗಿದ್ದವು. ಅದೇ ರೀತಿ ಇಂದು, ಅನೇಕ ಧಾರ್ಮಿಕ ಮುಖಂಡರು ರಾಜಕೀಯ ಮುಖಂಡರೊಂದಿಗೆ ಮಿತ್ರಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಆ ಮೈತ್ರಿಗಳೂ “ಅಸತ್ಯ” ಸಂಬಂಧಗಳಾಗಿ ರುಜುವಾಗುವವು. (ಪ್ರಕಟನೆ 17:16, 17) ಬಾಳುವಂಥ ಭದ್ರತೆಯನ್ನು ಅವು ತರಲಾರವು.

ಯೆಹೋಶುವ ಮತ್ತು ಕಾಲೇಬರ ಒಳ್ಳೆಯ ಮಾದರಿಗಳು

3, 4. ಯೆಹೋಶುವ ಮತ್ತು ಕಾಲೇಬರು ತಂದ ವರದಿಯು ಉಳಿದ ಹತ್ತು ಮಂದಿ ಗೂಢಚಾರರ ವರದಿಗಿಂತ ಭಿನ್ನವಾಗಿದದ್ದು ಹೇಗೆ?

3 ಹಾಗಾದರೆ ಭದ್ರತೆಗಾಗಿ ನಾವು ಎಲ್ಲಿ ಹೋಗಬೇಕು? ಮೋಶೆಯ ದಿನಗಳಲ್ಲಿ ಯೆಹೋಶುವ ಮತ್ತು ಕಾಲೇಬರು ತೆರಳಿದ ಅದೇ ಮೂಲಕ್ಕೆ ನಾವೂ ತೆರಳಬೇಕು. ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಹೊಂದಿದ ಸ್ವಲ್ಪದರಲ್ಲೇ, ಆ ಜನಾಂಗವು ವಾಗ್ದತ್ತ ಕಾನಾನ್‌ ದೇಶವನ್ನು ಪ್ರವೇಶಿಸಲು ಪೂರ್ಣವಾಗಿ ಸಿದ್ಧವಾಗಿತ್ತು. ಆ ದೇಶವನ್ನು ಬೇಹುನೋಡಲಿಕ್ಕಾಗಿ ಹನ್ನೆರಡು ಮಂದಿ ಪುರುಷರನ್ನು ಕಳುಹಿಸಲಾಯಿತು. ನಾಲ್ವತ್ತು ದಿನಗಳ ಅಂತ್ಯದಲ್ಲಿ ಅವರು ಅಲ್ಲಿಂದ ಹಿಂದಿರುಗಿ, ತಮ್ಮ ವರದಿಯನ್ನು ಒಪ್ಪಿಸಿದರು. ಆ ಗೂಢಚಾರರಲ್ಲಿ ಇಬ್ಬರಾದ ಯೆಹೋಶುವ ಮತ್ತು ಕಾಲೇಬರು ಮಾತ್ರ ಕಾನಾನಿನಲ್ಲಿ ಇಸ್ರಾಯೇಲ್ಯರಿಗಿರುವ ಪ್ರತೀಕ್ಷೆಗಳ ಕುರಿತು ಸಕಾರಾತ್ಮಕವಾಗಿ ಮಾತಾಡಿದರು. ಉಳಿದವರೆಲ್ಲರೂ ಆ ದೇಶವು ಅಪೇಕ್ಷಣೀಯವಾಗಿದೆ ಎಂಬುದನ್ನು ಒಪ್ಪಿಕೊಂಡರು ನಿಜ, ಆದರೆ ಅವರಂದದ್ದು: “ಆ ದೇಶದ ನಿವಾಸಿಗಳು ಬಲಿಷ್ಠರು; ಅವರಿರುವ ಪಟ್ಟಣಗಳು ದೊಡ್ಡವಾಗಿಯೂ ಕೋಟೆ ಕೊತ್ತಲುಗಳುಳ್ಳವಾಗಿಯೂ ಅವೆ; ಅದಲ್ಲದೆ ಅಲ್ಲಿ ಉನ್ನತರಾದ ಪುರುಷರನ್ನು ನೋಡಿದೆವು. . . . ಆ ಜನರು ನಮಗಿಂತ ಬಲಿಷ್ಠರು; ಅವರ ಮೇಲೆ ಹೋಗುವದಕ್ಕೆ ನಮಗೆ ಶಕ್ತಿಸಾಲದು.”​—ಅರಣ್ಯಕಾಂಡ 13:27, 28, 31.

4 ಇಸ್ರಾಯೇಲ್ಯರು ಆ ಹತ್ತು ಮಂದಿ ಗೂಢಚಾರರ ಮಾತುಗಳನ್ನು ಕೇಳಿ ಭಯಭೀತರಾದರು. ಎಷ್ಟರ ಮಟ್ಟಿಗೆಂದರೆ, ಅವರು ಮೋಶೆಯ ವಿರುದ್ಧವಾಗಿ ಗುಣುಗುಟ್ಟಲೂ ಶುರುಮಾಡಿದರು. ಕೊನೆಗೆ ಯೆಹೋಶುವ ಮತ್ತು ಕಾಲೇಬರು, ಹೃತ್ಪೂರ್ವಕ ಭಾವಾವೇಶದಿಂದ ಅಂದದ್ದು: “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು; ಹೀಗಿರುವದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಅದಲ್ಲದೆ ಆ ದೇಶದ ಜನರಿಗೆ ದಿಗಿಲುಪಡಬೇಡಿರಿ.” (ಅರಣ್ಯಕಾಂಡ 14:6-9) ಆದರೆ ಈ ಉತ್ತೇಜನದ ಬಳಿಕ ಸಹ ಇಸ್ರಾಯೇಲ್ಯರು ಕಿವಿಗೊಡಲು ನಿರಾಕರಿಸಿದರು. ಅದರ ಫಲವಾಗಿ, ಅವರು ಆ ಸಮಯದಲ್ಲಿ ವಾಗ್ದತ್ತ ದೇಶದೊಳಗೆ ಪ್ರವೇಶಿಸಲು ಅನುಮತಿಸಲ್ಪಡಲಿಲ್ಲ.

5. ಯೆಹೋಶುವ ಮತ್ತು ಕಾಲೇಬರು ಒಳ್ಳೆಯ ವರದಿಯನ್ನು ಕೊಟ್ಟದ್ದೇಕೆ?

5 ಯೆಹೋಶುವ ಮತ್ತು ಕಾಲೇಬರು ಆ ದೇಶದ ಕುರಿತು ಒಳ್ಳೆಯ ವರದಿಯನ್ನು ಕೊಟ್ಟಾಗ, ಉಳಿದ ಹತ್ತು ಮಂದಿ ಅದರ ಕುರಿತು ಕೆಟ್ಟ ವರದಿಯನ್ನು ಕೊಟ್ಟದ್ದೇಕೆ? ಆ ಹನ್ನೆರಡು ಮಂದಿಯಲ್ಲಿ ಎಲ್ಲರೂ ಅದೇ ಬಲಾಢ್ಯ ಪಟ್ಟಣಗಳನ್ನು, ಅದೇ ಬಲಿಷ್ಠ ಜನಾಂಗಗಳನ್ನು ನೋಡಿದರು. ಮತ್ತು ಆ ದೇಶವನ್ನು ಜಯಿಸಿಬಿಡಲು ಇಸ್ರಾಯೇಲಿಗೆ ಶಕ್ತಿಸಾಲದು ಎಂದು ಆ ಹತ್ತು ಮಂದಿ ಹೇಳಿದ ಮಾತೂ ಸತ್ಯವಾಗಿತ್ತು. ಯೆಹೋಶುವ ಮತ್ತು ಕಾಲೇಬರಿಗೆ ಸಹ ಅದು ಗೊತ್ತಿತ್ತು. ಆದರೂ, ಆ ಹತ್ತು ಮಂದಿ, ವಿಷಯಗಳನ್ನು ಮಾನುಷ ದೃಷ್ಟಿಕೋನದಿಂದ ನೋಡಿದರು. ಇನ್ನೊಂದು ಕಡೆಯಲ್ಲಿ ಯೆಹೋಶುವ ಕಾಲೇಬರಾದರೊ ಯೆಹೋವನ ಶಕ್ತಿಯಲ್ಲಿ ಭರವಸವಿಟ್ಟರು. ಐಗುಪ್ತದ ಕೆಂಪು ಸಮುದ್ರದಲ್ಲಿ ಹಾಗೂ ಸೀನಾಯಿ ಬೆಟ್ಟದ ತಪ್ಪಲಿನಲ್ಲಿ ಯೆಹೋವನ ಶಕ್ತಿಶಾಲಿ ಕೃತ್ಯಗಳನ್ನು ಅವರು ಕಣ್ಣಾರೆ ಕಂಡಿದ್ದರು. ಆತನ ಮಹಾಕೃತ್ಯಗಳು ಎಷ್ಟು ಪ್ರಭಾವಶಾಲಿಯಾಗಿದ್ದವೆಂದರೆ, ವರ್ಷಗಳಾನಂತರ ಅದರ ಕುರಿತಾದ ಬರಿಯ ಸುದ್ದಿಗಳೇ, ಯೆರಿಕೋ ಪಟ್ಟಣದ ರಾಹಾಬಳು ಯೆಹೋವನ ಜನರಿಗಾಗಿ ತನ್ನ ಜೀವವನ್ನೇ ಅಪಾಯಕ್ಕೊಡ್ಡುವಂತೆ ಪ್ರೇರೇಪಿಸಿದ್ದವು! (ಯೆಹೋಶುವ 2:1-24; 6:22-25) ಯೆಹೋವನ ಮಹತ್ಕಾರ್ಯಗಳ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಯೆಹೋಶುವ ಮತ್ತು ಕಾಲೇಬರಿಗೆ, ಯೆಹೋವನು ತನ್ನ ಜನರಿಗಾಗಿ ಹೋರಾಡುವುದನ್ನು ಮುಂದುವರಿಸುವನೆಂಬ ಪೂರ್ಣ ಭರವಸವಿತ್ತು. ನಾಲ್ವತ್ತು ವರ್ಷಗಳ ಅನಂತರ, ಇಸ್ರಾಯೇಲ್ಯರ ಒಂದು ಹೊಸ ತಲೆಮಾರಿನವರು, ಯೆಹೋಶುವನ ನಾಯಕತ್ವದ ಕೆಳಗೆ ಕಾನಾನ್‌ ದೇಶಕ್ಕೆ ಮುಂದೊತ್ತಿ ಅದನ್ನು ವಶಪಡಿಸಿಕೊಂಡಾಗ, ಅವರ ಆ ಭರವಸವು ನ್ಯಾಯಸಮ್ಮತವಾಗಿ ರುಜುವಾಯಿತು.

ನಾವು ಸ್ವಲ್ಪವೂ ಸಂಶಯಪಡದೆ ಯೆಹೋವನಲ್ಲಿ ಏಕೆ ಭರವಸವಿಡಬೇಕು?

6. ಕ್ರೈಸ್ತರು ಇಂದು ಏಕೆ ಒತ್ತಡದ ಕೆಳಗಿದ್ದಾರೆ, ಮತ್ತು ಅವರು ತಮ್ಮ ಭರವಸವನ್ನು ಯಾರಲ್ಲಿ ಇಡಬೇಕು?

6 “ವ್ಯವಹರಿಸಲು ಕಷ್ಟಕರವಾದ ಈ ಕಠಿನಕಾಲ”ಗಳಲ್ಲಿ, ಇಸ್ರಾಯೇಲ್ಯರಂತೆ ನಾವು ಸಹ ನಮಗಿಂತ ಎಷ್ಟೊ ಬಲಾಢ್ಯರಾದ ಶತ್ರುಗಳನ್ನು ಎದುರಿಸುತ್ತಿದ್ದೇವೆ. (2 ತಿಮೊಥೆಯ 3:1) ನಮ್ಮ ಮೇಲೆ ನೈತಿಕವಾಗಿ, ಆತ್ಮಿಕವಾಗಿ ಮತ್ತು ಕೆಲವು ಸಾರಿ ಶಾರೀರಿಕವಾಗಿಯೂ ಒತ್ತಡಗಳನ್ನು ಹಾಕಲಾಗುತ್ತದೆ. ನಮ್ಮ ಸ್ವಂತ ಬಲದಿಂದ ಆ ಕಷ್ಟಗಳನ್ನು ತಾಳಿಕೊಳ್ಳಲು ನಾವು ಶಕ್ತರಲ್ಲ, ಯಾಕೆಂದರೆ ಪಿಶಾಚನಾದ ಸೈತಾನನೆಂಬ ಮನುಷ್ಯಾತೀತ ಮೂಲದಿಂದ ಆ ಒತ್ತಡಗಳು ಬರುತ್ತವೆ. (ಎಫೆಸ 6:12; 1 ಯೋಹಾನ 5:19) ಹಾಗಾದರೆ ನಾವು ಎಲ್ಲಿಂದ ಸಹಾಯವನ್ನು ಪಡೆಯಬಲ್ಲೆವು? ಯೆಹೋವನಿಗೆ ಪ್ರಾರ್ಥನೆಯಲ್ಲಿ, ಪುರಾತನ ಕಾಲದ ನಂಬಿಗಸ್ತ ಪುರುಷನೊಬ್ಬನು ಹೇಳಿದ್ದು: “ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು.” (ಕೀರ್ತನೆ 9:10) ನಾವು ನಿಜವಾಗಿಯೂ ಯೆಹೋವನನ್ನು ತಿಳಿದಿದ್ದರೆ ಮತ್ತು ಆತನ ನಾಮವು ಏನನ್ನು ಸೂಚಿಸುತ್ತದೆಂದು ಬಲ್ಲವರಾಗಿದ್ದರೆ, ಯೆಹೋಶುವ ಕಾಲೇಬರಂತೆ ನಾವೂ ಆತನಲ್ಲಿ ನಿಶ್ಚಯವಾಗಿಯೂ ಭರವಸವಿಡುವೆವು.​—ಯೋಹಾನ 17:3.

7, 8. (ಎ) ಯೆಹೋವನಲ್ಲಿ ಭರವಸವಿಡುವುದಕ್ಕೆ ಸೃಷ್ಟಿಯು ನಮಗೆ ಹೇಗೆ ಕಾರಣಗಳನ್ನು ಕೊಡುತ್ತದೆ? (ಬಿ) ಯೆಹೋವನಲ್ಲಿ ಭರವಸವಿಡಲು ಬೈಬಲ್‌ ಯಾವ ಕಾರಣಗಳನ್ನು ಕೊಡುತ್ತದೆ?

7 ಯೆಹೋವನಲ್ಲಿ ನಾವು ಯಾಕೆ ಭರವಸವನ್ನಿಡಬೇಕು? ಯೆಹೋಶುವ ಮತ್ತು ಕಾಲೇಬರು ಆತನಲ್ಲಿ ಭರವಸವಿಟ್ಟದ್ದಕ್ಕೆ ಒಂದು ಕಾರಣವು, ಆತನ ಶಕ್ತಿಯ ಮಹತ್ಕಾರ್ಯಗಳನ್ನು ನೋಡಿರುವುದೇ ಆಗಿತ್ತು. ನಾವು ಸಹ ಆತನ ಮಹತ್ಕಾರ್ಯಗಳನ್ನು ಕಂಡಿದ್ದೇವೆ. ಉದಾಹರಣೆಗಾಗಿ, ನೂರಾರು ಕೋಟಿ ಕ್ಷೀರಪಥಗಳುಳ್ಳ ವಿಶ್ವವನ್ನೂ ಸೇರಿಸಿ, ಯೆಹೋವನ ಸೃಷ್ಟಿಕಾರ್ಯಗಳನ್ನು ಪರಿಗಣಿಸಿರಿ. ಯೆಹೋವನ ನಿಯಂತ್ರಣದಲ್ಲಿರುವ ಅಪಾರವಾದ ಭೌತಿಕ ಶಕ್ತಿಗಳು, ಆತನು ಖಂಡಿತವಾಗಿಯೂ ಸರ್ವಶಕ್ತನು ಎಂಬುದನ್ನು ತೋರಿಸಿಕೊಡುತ್ತವೆ. ಸೃಷ್ಟಿಯ ಅದ್ಭುತಗಳ ಕುರಿತು ನಾವು ಪರ್ಯಾಲೋಚಿಸುವಾಗ, ಯೋಬನ ಮಾತುಗಳನ್ನು ನಾವು ಒಪ್ಪಲೇಬೇಕು. ಅವನು ಯೆಹೋವನ ಕುರಿತು ಅಂದದ್ದು: “ಆತನನ್ನು ತಳ್ಳುವವರು ಯಾರು? ನೀನು ಏನು ಮಾಡುತ್ತಿ ಎಂದು ಆತನನ್ನು ಕೇಳುವವರಾರು?” (ಯೋಬ 9:12) ನಿಜವಾಗಿಯೂ ಯೆಹೋವನು ನಮ್ಮ ಬೆಂಬಲಿಗನಾಗಿ ಇರುವಲ್ಲಿ, ಇಡೀ ವಿಶ್ವದಲ್ಲಿ ನಾವು ಯಾರಿಗೂ ಭಯಪಡಬೇಕಾಗಿಲ್ಲ.​—ರೋಮಾಪುರ 8:31.

8 ಯೆಹೋವನ ವಾಕ್ಯವಾದ ಬೈಬಲನ್ನು ಸಹ ಪರಿಗಣಿಸಿರಿ. ದೈವಿಕ ವಿವೇಕದ ಈ ಅಕ್ಷಯ ಮೂಲವು, ದುರಭ್ಯಾಸಗಳನ್ನು ಜಯಿಸುವುದರಲ್ಲಿ ಮತ್ತು ನಮ್ಮ ಜೀವಿತಗಳನ್ನು ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ತರುವುದರಲ್ಲಿ ಶಕ್ತಿಶಾಲಿ ಸಹಾಯಕವಾಗಿರುತ್ತದೆ. (ಇಬ್ರಿಯ 4:12) ಯೆಹೋವ ಎಂಬ ದೈವಿಕ ಹೆಸರನ್ನು ನಾವು ಕಲಿತದ್ದು ಮತ್ತು ಆತನ ಹೆಸರಿನ ಅರ್ಥವನ್ನು ನಾವು ತಿಳಿದುಕೊಂಡದ್ದು ಈ ಬೈಬಲಿನ ಮೂಲಕವಾಗಿಯೆ. (ವಿಮೋಚನಕಾಂಡ 3:14) ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುವುದಕ್ಕೋಸ್ಕರ ತನ್ನ ಆಯ್ಕೆಗನುಸಾರ ಏನು ಬೇಕಾದರೂ ಆಗಬಲ್ಲನು, ಅಂದರೆ ಒಬ್ಬ ಪ್ರೀತಿಯುಳ್ಳ ತಂದೆ, ನೀತಿವಂತ ನ್ಯಾಯಾಧಿಪತಿ, ಜಯಶಾಲಿಯಾದ ಯೋಧನು ಆಗಬಲ್ಲನೆಂಬುದನ್ನು ನಾವು ಗ್ರಹಿಸುತ್ತೇವೆ. ಮತ್ತು ಆತನ ಮಾತು ಹೇಗೆ ಯಾವಾಗಲೂ ಸತ್ಯವಾಗಿ ನೆರವೇರುತ್ತದೆಂಬುದನ್ನು ನಾವು ನೋಡಿದ್ದೇವೆ. ನಾವು ದೇವರ ವಾಕ್ಯದ ಅಧ್ಯಯನ ಮಾಡುತ್ತಾ ಹೋದ ಹಾಗೆ, ಕೀರ್ತನೆಗಾರನಂತೆ ಹೀಗೆ ಹೇಳಲು ಪ್ರೇರಿಸಲ್ಪಡುತ್ತೇವೆ: “ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನಲ್ಲಾ.”​—ಕೀರ್ತನೆ 119:42; ಯೆಶಾಯ 40:8.

9. ಯೇಸುವಿನ ಪ್ರಾಯಶ್ಚಿತ್ತ ಯಜ್ಞ ಮತ್ತು ಪುನರುತ್ಥಾನವು ಯೆಹೋವನಲ್ಲಿ ನಮ್ಮ ಭರವಸವನ್ನು ಹೇಗೆ ಬಲಪಡಿಸುತ್ತದೆ?

9 ಪ್ರಾಯಶ್ಚಿತ್ತ ಯಜ್ಞದ ಏರ್ಪಾಡು, ಯೆಹೋವನಲ್ಲಿ ಭರವಸವಿಡುವುದಕ್ಕೆ ಇನ್ನೊಂದು ಕಾರಣವಾಗಿರುತ್ತದೆ. (ಮತ್ತಾಯ 20:28) ನಮಗೋಸ್ಕರ ಪ್ರಾಯಶ್ಚಿತ್ತವಾಗಿ ಸಾಯಲಿಕ್ಕಾಗಿ ದೇವರು ತನ್ನ ಸ್ವಂತ ಮಗನನ್ನು ಕಳುಹಿಸಿದನು ಎಂಬುದು ಅದೆಷ್ಟು ಅದ್ಭುತವಾದ ಸಂಗತಿಯಾಗಿದೆ! ಮತ್ತು ಆ ಪ್ರಾಯಶ್ಚಿತ್ತ ಯಜ್ಞವು ನಿಜವಾಗಿಯೂ ಪರಿಣಾಮಕಾರಿಯಾಗಿದೆ. ಅದು, ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ಪ್ರಾಮಾಣಿಕ ಹೃದಯದಿಂದ ತಿರುಗಿಕೊಳ್ಳುವ ಸಕಲ ಮಾನವ ಕುಲದ ಪಾಪಗಳನ್ನು ಪರಿಹಾರಮಾಡುತ್ತದೆ. (ಯೋಹಾನ 3:16; ಇಬ್ರಿಯ 6:10; 1 ಯೋಹಾನ 4:16, 19) ಪ್ರಾಯಶ್ಚಿತ್ತವನ್ನು ತೆರುವ ಕಾರ್ಯಗತಿಯ ಒಂದು ಭಾಗವು, ಯೇಸುವಿನ ಪುನರುತ್ಥಾನವಾಗಿತ್ತು. ಸಾವಿರಾರು ಮಂದಿ ಪ್ರತ್ಯಕ್ಷ ಸಾಕ್ಷಿಗಳಿಂದ ದೃಢೀಕರಿಸಲ್ಪಟ್ಟ ಆ ಪುನರುತ್ಥಾನದ ಅದ್ಭುತವು, ಯೆಹೋವನಲ್ಲಿ ನಂಬಿಕೆಯಿಡಲು ಇನ್ನೊಂದು ಕಾರಣವಾಗಿರುತ್ತದೆ. ನಮ್ಮ ನಿರೀಕ್ಷೆಗಳೆಲ್ಲವೂ ಆಶಾಭಂಗದಲ್ಲಿ ಕೊನೆಗೊಳ್ಳಲಾರವೆಂಬುದಕ್ಕೆ ಅದೊಂದು ಖಾತರಿಯಾಗಿದೆ.​—ಅ. ಕೃತ್ಯಗಳು 17:31; ರೋಮಾಪುರ 5:5; 1 ಕೊರಿಂಥ 15:3-8.

10. ಯೆಹೋವನಲ್ಲಿ ಭರವಸವಿಡಲು ನಮಗೆ ಯಾವ ವೈಯಕ್ತಿಕ ಕಾರಣಗಳಿರುತ್ತವೆ?

10 ನಾವು ಯೆಹೋವನಲ್ಲಿ ಸಂಪೂರ್ಣ ಭರವಸವನ್ನು ಏಕೆ ಇಡಬಲ್ಲೆವು ಮತ್ತು ಏಕೆ ಇಡಲೇಬೇಕೆಂಬುದಕ್ಕೆ ಇವು ಕೇವಲ ಕೆಲವು ಕಾರಣಗಳು ಅಷ್ಟೆ. ಆದರೆ ಕಾರಣಗಳು ಇನ್ನೂ ಅನೇಕವಿವೆ, ಅವುಗಳಲ್ಲಿ ಕೆಲವು ವೈಯಕ್ತಿಕವಾದವುಗಳು ಆಗಿವೆ. ಉದಾಹರಣೆಗಾಗಿ, ನಾವೆಲ್ಲರೂ ಆಗಿಂದಾಗ್ಗೆ ನಮ್ಮ ಜೀವಿತಗಳಲ್ಲಿ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸುತ್ತೇವೆ. ಅವನ್ನು ನಿರ್ವಹಿಸಲಿಕ್ಕಾಗಿ ನಾವು ಯೆಹೋವನ ಮಾರ್ಗದರ್ಶನವನ್ನು ಕೋರುವಾಗ, ಆ ಮಾರ್ಗದರ್ಶನವೆಷ್ಟು ವ್ಯಾವಹಾರಿಕವಾಗಿದೆ ಎಂಬುದನ್ನು ನಾವು ನೋಡಬಲ್ಲೆವು. (ಯಾಕೋಬ 1:5-8) ನಮ್ಮ ದಿನನಿತ್ಯದ ಜೀವಿತದಲ್ಲಿ ನಾವು ಎಷ್ಟು ಹೆಚ್ಚಾಗಿ ಯೆಹೋವನಲ್ಲಿ ಆತುಕೊಳ್ಳುತ್ತೇವೊ ಮತ್ತು ಅದರ ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೇವೊ, ಆತನಲ್ಲಿ ನಮ್ಮ ಭರವಸವು ಅಷ್ಟೇ ಬಲಗೊಳ್ಳುವದು.

ದಾವೀದನು ಯೆಹೋವನಲ್ಲಿ ಭರವಸವಿಟ್ಟನು

11. ಯಾವ ಪರಿಸ್ಥಿತಿಗಳ ಎದುರಿನಲ್ಲೂ ದಾವೀದನು ಯೆಹೋವನಲ್ಲಿ ಭರವಸವನ್ನಿಟ್ಟನು?

11 ಪುರಾತನ ಇಸ್ರಾಯೇಲಿನ ದಾವೀದನು ಯೆಹೋವನಲ್ಲಿ ಭರವಸವಿಟ್ಟಿದ್ದ ಒಬ್ಬ ವ್ಯಕ್ತಿಯಾಗಿದ್ದನು. ದಾವೀದನನ್ನು ಕೊಲ್ಲಲು ಹವಣಿಸುತ್ತಿದ್ದ ರಾಜ ಸೌಲನ ಮತ್ತು ಇಸ್ರಾಯೇಲ್ಯರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದ ಫಿಲಿಷ್ಟಿಯರ ಬಲಿಷ್ಠ ಸೇನೆಯ ಬೆದರಿಕೆಯನ್ನು ಅವನು ಎದುರಿಸಿದನು. ಆದರೂ ಅವನು ಬದುಕಿ ಉಳಿದನು, ಮತ್ತು ಜಯಪ್ರದನಾದನು ಸಹ. ಯಾಕೆ? ದಾವೀದನು ತಾನೇ ವಿವರಿಸುವುದು: “ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?” (ಕೀರ್ತನೆ 27:1) ನಾವು ಸಹ ಈ ರೀತಿಯಲ್ಲಿ ಯೆಹೋವನಲ್ಲಿ ಭರವಸವಿಡುವುದಾದರೆ, ಜಯಶಾಲಿಗಳಾಗುವೆವು.

12, 13. ವಿರೋಧಿಗಳು ನಮ್ಮ ವಿರುದ್ಧವಾಗಿ ತಮ್ಮ ನಾಲಗೆಗಳನ್ನು ಶಸ್ತ್ರಗಳಾಗಿ ಉಪಯೋಗಿಸುವಾಗಲೂ, ನಾವು ಯೆಹೋವನಲ್ಲಿ ಭರವಸವಿಡಬೇಕೆಂದು ದಾವೀದನು ಹೇಗೆ ತೋರಿಸಿದನು?

12 ಒಂದು ಸಂದರ್ಭದಲ್ಲಿ ದಾವೀದನು ಪ್ರಾರ್ಥನೆಮಾಡಿದ್ದು: “ದೇವರೇ, ನನ್ನ ಆರ್ತಸ್ವರವನ್ನು ಕೇಳಿ ಶತ್ರುಭಯದಿಂದ ನನ್ನ ಜೀವವನ್ನು ರಕ್ಷಿಸು. ದುಷ್ಟರ ಒಳಸಂಚಿಗೂ ಕೆಡುಕರ ದೊಂಬಿಗೂ ಸಿಕ್ಕದಂತೆ ನನ್ನನ್ನು ತಪ್ಪಿಸಿ ಭದ್ರಪಡಿಸು. ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿ ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ.” (ಕೀರ್ತನೆ 64:1-4) ಈ ಮಾತುಗಳನ್ನು ಬರೆಯುವಂತೆ ದಾವೀದನನ್ನು ಯಾವುದು ಪ್ರೇರೇಪಿಸಿತೆಂಬುದಕ್ಕೆ ನಮಗೆ ನಿಶ್ಚಿತ ಕಾರಣ ಗೊತ್ತಿಲ್ಲ. ಆದರೆ ತದ್ರೀತಿಯಲ್ಲಿ, ಇಂದು ವಿರೋಧಿಗಳು ತಮ್ಮ ಮಾತುಗಳನ್ನು ಯುದ್ಧಶಸ್ತ್ರದೋಪಾದಿ ಉಪಯೋಗಿಸುತ್ತಾ, ತಮ್ಮ ‘ನಾಲಗೆಯನ್ನು ಮಸೆಯುತ್ತಿದ್ದಾರೆ’ ಎಂಬುದು ನಮಗೆ ತಿಳಿದಿದೆ. ಬಾಯಿಮಾತುಗಳು ಅಥವಾ ಲಿಖಿತ ಮಾತುಗಳನ್ನು ತಪ್ಪು ವೃತ್ತಾಂತಗಳೆಂಬ “ಬಾಣಗಳಾಗಿ” ಉಪಯೋಗಿಸುತ್ತಾ, ಅವರು ಸಜ್ಜನರಾದ ಕ್ರೈಸ್ತರಿಗೆ “ಗುರಿ”ಯಿಡುತ್ತಾರೆ. ನಾವು ಯೆಹೋವನಲ್ಲಿ ಅಚಲ ಭರವಸವನ್ನಿಡುವುದಾದರೆ, ಪರಿಣಾಮವೇನಾಗಿರುವುದು?

13 ದಾವೀದನು ಮುಂದುವರಿಸಿ ಹೇಳಿದ್ದು: “ದೇವರು ಬಾಣವನ್ನು ಎಸೆಯಲು ಫಕ್ಕನೆ ಅವರಿಗೆ ಗಾಯವಾಗುವದು. ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಎಡವಿ ಬೀಳುವರು; . . . ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು.” (ಕೀರ್ತನೆ 64:7-10) ಹೌದು, ವಿರೋಧಿಗಳು ನಮಗೆದುರಾಗಿ ತಮ್ಮ ನಾಲಿಗೆಯೆಂಬ ಕತ್ತಿಯನ್ನು ಮಸೆದರೂ, ಕೊನೆಗೆ ‘ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ’ ಎದುರುಬೀಳುವವು. ಯೆಹೋವನಲ್ಲಿ ಭರವಸವಿಟ್ಟವರೆಲ್ಲರೂ ಆತನಲ್ಲಿ ಆನಂದಿಸಲಾಗುವಂತೆ, ಕಟ್ಟಕಡೆಗೆ ಯೆಹೋವನು ವಿಷಯಗಳನ್ನು ಯಶಸ್ವಿಕರ ಫಲಿತಾಂಶಕ್ಕೆ ನಡಿಸುತ್ತಾನೆ.

ಹಿಜ್ಕೀಯನ ಭರವಸವು ಸಾರ್ಥಕವೆಂದು ರುಜುವಾಯಿತು

14. (ಎ) ಯಾವ ಅಪಾಯಕರ ಸನ್ನಿವೇಶದ ಎದುರಿನಲ್ಲಿ ಹಿಜ್ಕೀಯನು ಯೆಹೋವನಲ್ಲಿ ಭರವಸವನ್ನು ಇಟ್ಟನು? (ಬಿ) ಅಶ್ಶೂರ್ಯನ ಸುಳ್ಳು ಮಾತುಗಳನ್ನು ತಾನು ನಂಬಲಿಲ್ಲವೆಂದು ಹಿಜ್ಕೀಯನು ತೋರಿಸಿದ್ದು ಹೇಗೆ?

14 ಯೆಹೋವನಲ್ಲಿ ತಾನಿಟ್ಟ ಭರವಸವು ಸಾರ್ಥಕವೆಂದು ರುಜುಪಡಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿಯು ರಾಜ ಹಿಜ್ಕೀಯನು. ಹಿಜ್ಕೀಯನ ಆಳಿಕೆಯ ಸಮಯದಲ್ಲಿ, ಬಲಾಢ್ಯ ಅಶ್ಶೂರ್ಯ ಸೇನೆಯು ಯೆರೂಸಲೇಮಿಗೆ ಬೆದರಿಕೆಯನ್ನು ಹಾಕಿತ್ತು. ಆ ಸೇನೆಯು ಇತರ ಅನೇಕ ರಾಷ್ಟ್ರಗಳನ್ನು ಸೋಲಿಸಿತ್ತು. ಯೆಹೂದದ ಪಟ್ಟಣಗಳನ್ನು ಸಹ ಅದು ವಶಪಡಿಸಿಕೊಂಡಿತ್ತಾದ್ದರಿಂದ ಈಗ ಉಳಿದದ್ದು ಯೆರೂಸಲೇಮ್‌ ಮಾತ್ರ. ಅದನ್ನು ಕೂಡಾ ತಾನು ಜಯಿಸುವೆನೆಂದು ಸನ್ಹೇರೀಬನು ಜಂಬಕೊಚ್ಚಿಕೊಂಡಿದ್ದನು. ಸಹಾಯಕ್ಕಾಗಿ ಐಗುಪ್ತದ ಮರೆಹೋಗುವುದು ವ್ಯರ್ಥವಾಗಿರುವುದು ಎಂದು ರಬ್ಷಾಕೆಯ ಮೂಲಕ ಸನ್ಹೇರೀಬನು ತಿಳಿಯಪಡಿಸಿದನು. ಮತ್ತು ಇದು ಸರಿಯಾಗಿತ್ತು. ಆದರೆ ಅವನು ಮತ್ತೆ ಅಂದದ್ದು: “ನೀನು ನಂಬುವ ದೇವರು​—ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು.” (ಯೆಶಾಯ 37:10) ಆದರೆ ಯೆಹೋವನು ಮೋಸಗೊಳಿಸುವವನಲ್ಲವೆಂದು ಹಿಜ್ಕೀಯನಿಗೆ ಗೊತ್ತಿತ್ತು. ಆದುದರಿಂದ ಅವನು ಪ್ರಾರ್ಥಿಸುತ್ತಾ ಅಂದದ್ದು: “ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು.” (ಯೆಶಾಯ 37:20) ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಲಾಲಿಸಿದನು. ಒಂದೇ ರಾತ್ರಿಯಲ್ಲಿ, ದೇವದೂತನೊಬ್ಬನು 1,85,000 ಮಂದಿ ಅಶ್ಶೂರ್ಯ ಸೈನಿಕರನ್ನು ಹತಿಸಿದನು. ಯೆರೂಸಲೇಮ್‌ ಪಾರಾಗಿ ಉಳಿಯಿತು ಮತ್ತು ಸನ್ಹೇರೀಬನು ಯೆಹೂದ ದೇಶವನ್ನು ಬಿಟ್ಟುಹೋದನು. ಈ ಘಟನೆಯ ಕುರಿತು ಕೇಳಿಸಿಕೊಂಡವರೆಲ್ಲರು ಯೆಹೋವನ ಮಹೋನ್ನತೆಯ ಕುರಿತು ತಿಳಿದುಕೊಂಡರು.

15. ಅಸ್ಥಿರವಾದ ಈ ಲೋಕದಲ್ಲಿ, ನಾವು ಎದುರಿಸಬಹುದಾದ ಯಾವುದೇ ಕಠಿನ ಪರಿಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಲು ಯಾವುದು ಮಾತ್ರ ಸಹಾಯಮಾಡುವುದು?

15 ಇಂದು ಹಿಜ್ಕೀಯನಂತೆ ನಾವೂ ಯುದ್ಧಕ್ಕೆ ಸಮಾನವಾದ ಒಂದು ಸನ್ನಿವೇಶದಲ್ಲಿದ್ದೇವೆ. ನಮ್ಮ ಹೋರಾಟವಾದರೊ ಅಕ್ಷರಾರ್ಥವಲ್ಲ, ಆತ್ಮಿಕ ಹೋರಾಟವಾಗಿದೆ. ಆದಾಗ್ಯೂ, ಆತ್ಮಿಕ ಯೋಧರೋಪಾದಿ ನಾವು ಆತ್ಮಿಕ ರೀತಿಯಲ್ಲಿ ಸಜೀವವಾಗಿ ಉಳಿಯಲು ಅಗತ್ಯವಿರುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ನಾವು ಆಕ್ರಮಣಗಳನ್ನು ಮುನ್ನೋಡುವ ಅಗತ್ಯವಿದೆ ಮತ್ತು ಅವುಗಳನ್ನು ಎದುರಿಸಲು ಶಕ್ತರಾಗುವಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವ ಅಗತ್ಯವಿದೆ. (ಎಫೆಸ 6:11, 12, 17) ಈ ಅಸ್ಥಿರವಾದ ಲೋಕದಲ್ಲಿ, ಪರಿಸ್ಥಿತಿಗಳು ತಟ್ಟನೆ ಬದಲಾಗಸಾಧ್ಯವಿದೆ. ಪೌರ ಅಶಾಂತಿಯು ಅನಿರೀಕ್ಷಿತವಾಗಿ ತಲೆಯೆತ್ತಬಹುದು. ಪರಧರ್ಮ ಸಹಿಷ್ಣುತೆಯನ್ನು ಯಾವಾಗಲೂ ತೋರಿಸಿದಂಥ ದೇಶಗಳು ಅಸಹಿಷ್ಣುತೆಯನ್ನು ತೋರಿಸತೊಡಗಬಹುದು. ಹಿಜ್ಕೀಯನಂತೆ ನಾವು ಯೆಹೋವನಲ್ಲಿ ಸಂಪೂರ್ಣ ಭರವಸವನ್ನು ಬೆಳೆಸಿಕೊಂಡು ನಮ್ಮನ್ನು ಸಿದ್ಧಗೊಳಿಸಿಕೊಂಡರೆ ಮಾತ್ರ, ಸಂಭವಿಸಬಹುದಾದ ಯಾವುದೇ ಸಂಕಟವನ್ನು ಎದುರಿಸಲು ನಾವು ತಯಾರಾಗಿರುವೆವು.

ಯೆಹೋವನಲ್ಲಿ ಭರವಸವಿಡುವದು ಎಂದರೇನು?

16, 17. ಯೆಹೋವನಲ್ಲಿ ನಮ್ಮ ಭರವಸವನ್ನು ನಾವು ಹೇಗೆ ತೋರಿಸಿಕೊಡುತ್ತೇವೆ?

16 ಯೆಹೋವನಲ್ಲಿ ಭರವಸವಿಡುವುದು ಬರಿಯ ಬಾಯಿಮಾತಿನ ವಿಷಯವಲ್ಲ. ಅದರಲ್ಲಿ ನಮ್ಮ ಹೃದಯವು ಒಳಗೂಡಿದ್ದು, ಅದು ನಮ್ಮ ಕ್ರಿಯೆಗಳಿಂದ ಪ್ರದರ್ಶಿಸಲ್ಪಡುತ್ತದೆ. ನಾವು ಯೆಹೋವನಲ್ಲಿ ಭರವಸವಿಡುವುದಾದರೆ, ಆತನ ವಾಕ್ಯವಾದ ಬೈಬಲಿನಲ್ಲಿ ಸಂಪೂರ್ಣ ಭರವಸವನ್ನಿಡುವೆವು. ನಾವು ಅದನ್ನು ದಿನಂಪ್ರತಿ ಓದುವೆವು, ಮನನ ಮಾಡುವೆವು ಮತ್ತು ನಮ್ಮ ಜೀವನವನ್ನು ಅದು ಮಾರ್ಗದರ್ಶಿಸುವಂತೆ ಬಿಡುವೆವು. (ಕೀರ್ತನೆ 119:105) ಯೆಹೋವನಲ್ಲಿ ಭರವಸವಿಡುವುದು, ಪವಿತ್ರಾತ್ಮದ ಶಕ್ತಿಯಲ್ಲಿ ಸಹ ಭರವಸವಿಡುವುದನ್ನು ಒಳಗೂಡಿಸುತ್ತದೆ. ಪವಿತ್ರಾತ್ಮದ ಸಹಾಯದಿಂದ, ನಾವು ಯೆಹೋವನಿಗೆ ಮೆಚ್ಚಿಗೆಯಾದ ಫಲಗಳನ್ನು ಬೆಳೆಸಿಕೊಳ್ಳಬಲ್ಲೆವು ಮತ್ತು ಬಲವಾಗಿ ಬೇರೂರಿರುವ ದುಶ್ಚಟಗಳನ್ನು ಜಯಿಸಬಲ್ಲೆವು. (1 ಕೊರಿಂಥ 6:11; ಗಲಾತ್ಯ 5:22-24) ಹೀಗೆ ಪವಿತ್ರಾತ್ಮದ ಸಹಾಯದಿಂದ, ಅನೇಕರು ಸಿಗರೇಟು ಸೇದುವುದನ್ನು ಮತ್ತು ಮಾದಕ ದ್ರವ್ಯದ ಸೇವನೆಯನ್ನು ಬಿಟ್ಟುಬಿಡಲು ಶಕ್ತರಾಗಿದ್ದಾರೆ. ಇತರರು ಅನೈತಿಕ ಜೀವನ ಕ್ರಮಗಳನ್ನು ತ್ಯಜಿಸಿಬಿಟ್ಟಿರುತ್ತಾರೆ. ಹೌದು, ನಾವು ಯೆಹೋವನಲ್ಲಿ ಭರವಸವಿಡುವುದಾದರೆ, ನಾವು ನಮ್ಮ ಸ್ವಂತ ಶಕ್ತಿಯಲ್ಲಲ್ಲ ಬದಲಾಗಿ ಆತನ ಬಲದಲ್ಲಿ ಕ್ರಿಯೆಗೈಯುವೆವು.​—ಎಫೆಸ 3:14-18.

17 ಅಷ್ಟಲ್ಲದೆ, ಯೆಹೋವನಲ್ಲಿ ಭರವಸವಿಡುವುದು ಅಂದರೆ, ಆತನು ಭರವಸವಿಡುವಂಥ ಜನರಲ್ಲಿ ಭರವಸವಿಡುವುದೂ ಆಗಿದೆ. ಉದಾಹರಣೆಗೆ, ಯೆಹೋವನು ಭೂಮಿಯ ರಾಜ್ಯಾಭಿರುಚಿಗಳನ್ನು ನೋಡಿಕೊಳ್ಳಲು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಏರ್ಪಡಿಸಿದ್ದಾನೆ. (ಮತ್ತಾಯ 24:45-47) ಆದುದರಿಂದ ನಾವು ನಮ್ಮ ಸ್ವಇಚ್ಛೆಯ ಮೇರೆಗೆ ಸ್ವತಂತ್ರವಾಗಿ ವರ್ತಿಸಲು ಪ್ರಯತ್ನಿಸುವುದಿಲ್ಲ, ಮತ್ತು ನಂಬಿಗಸ್ತ ಆಳಿನ ನೇಮಕವನ್ನು ಅಸಡ್ಡೆಮಾಡುವುದಿಲ್ಲ, ಯಾಕೆಂದರೆ ಯೆಹೋವನ ಏರ್ಪಾಡಿನಲ್ಲಿ ನಮಗೆ ಭರವಸವಿದೆ. ಅದಲ್ಲದೆ, ಸ್ಥಳಿಕ ಕ್ರೈಸ್ತ ಸಭೆಯಲ್ಲಿ ಸೇವೆಮಾಡುವ ಹಿರಿಯರು ಸಹ ಇದ್ದಾರೆ, ಮತ್ತು ಅಪೊಸ್ತಲ ಪೌಲನಿಗನುಸಾರ ಅವರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿರುತ್ತಾರೆ. (ಅ. ಕೃತ್ಯಗಳು 20:28) ಸಭೆಯಲ್ಲಿರುವ ಹಿರಿಯರ ಏರ್ಪಾಡಿನೊಂದಿಗೆ ಸಹಕರಿಸುವ ಮೂಲಕವೂ, ನಾವು ಯೆಹೋವನಲ್ಲಿ ಭರವಸವಿಡುತ್ತೇವೆ ಎಂಬುದನ್ನು ತೋರಿಸುತ್ತೇವೆ.​—ಇಬ್ರಿಯ 13:17.

ಪೌಲನ ಮಾದರಿಯನ್ನು ಅನುಸರಿಸಿರಿ

18. ಪೌಲನ ಮಾದರಿಯನ್ನು ಇಂದು ಕ್ರೈಸ್ತರು ಹೇಗೆ ಅನುಸರಿಸುತ್ತಾರೆ, ಆದರೆ ಯಾವುದರಲ್ಲಿ ಅವರು ತಮ್ಮ ಭರವಸವನ್ನು ಇಡುವುದಿಲ್ಲ?

18 ನಮ್ಮಂತೆ ಪೌಲನು ಸಹ ತನ್ನ ಶುಶ್ರೂಷೆಯಲ್ಲಿ ಅನೇಕ ಒತ್ತಡಗಳನ್ನು ಎದುರಿಸಿದನು. ಅವನ ದಿನಗಳಲ್ಲಿ ಕ್ರೈಸ್ತತ್ವದ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ತಪ್ಪಾದ ವೃತ್ತಾಂತವನ್ನು ಕೊಡಲಾಗಿತ್ತು. ಆ ತಪ್ಪಭಿಪ್ರಾಯಗಳನ್ನು ಸರಿಪಡಿಸಲು ಅವನು ಕೆಲವು ಸಾರಿ ಪ್ರಯತ್ನಮಾಡಿದನು ಇಲ್ಲವೆ ಸಾರುವ ಕಾರ್ಯವನ್ನು ನ್ಯಾಯಬದ್ಧವಾಗಿ ಸ್ಥಾಪಿಸಲು ನೋಡಿದನು. (ಅ. ಕೃತ್ಯಗಳು 28:19-22; ಫಿಲಿಪ್ಪಿ 1:7) ಇಂದು ಕ್ರೈಸ್ತರು ಅವನ ಮಾದರಿಯನ್ನೇ ಅನುಸರಿಸುತ್ತಾರೆ. ಸಾಧ್ಯವಿರುವಲ್ಲೆಲ್ಲ, ಲಭ್ಯವಿರುವ ಯಾವುದೇ ಸಾಧನ ಮತ್ತು ವಿಧಾನಗಳನ್ನುಪಯೋಗಿಸಿ ಇತರರಿಗೆ ನಮ್ಮ ಕಾರ್ಯದ ಕುರಿತಾಗಿ ಸರಿಯಾದ ತಿಳಿವಳಿಕೆ ಇರುವಂತೆ ನಾವು ಸಹಾಯಮಾಡುತ್ತೇವೆ. ಮತ್ತು ಸುವಾರ್ತೆಯನ್ನು ಕಾನೂನುಬದ್ಧವಾಗಿ ಸಮರ್ಥಿಸಲು ಹಾಗೂ ಸ್ಥಾಪಿಸಲು ಕಾರ್ಯನಡಿಸುತ್ತೇವೆ. ಆದರೂ, ಅಂಥ ಪ್ರಯತ್ನಗಳಲ್ಲಿ ನಾವು ನಮ್ಮ ಸಂಪೂರ್ಣ ಭರವಸವನ್ನಿಡುವುದಿಲ್ಲ, ಯಾಕಂದರೆ ಕೋರ್ಟ್‌ ಕೇಸ್‌ಗಳನ್ನು ಜಯಿಸುವ ಮೇಲಾಗಲಿ ಒಳ್ಳೇ ಪ್ರಚಾರವನ್ನು ಪಡೆಯುವ ಮೇಲಾಗಲಿ, ನಮ್ಮ ಸಾಫಲ್ಯ ಅಥವಾ ವೈಫಲ್ಯವು ಆತುಕೊಂಡಿದೆಯೆಂಬದು ನಮ್ಮ ಅಭಿಪ್ರಾಯವಾಗಿರುವುದಿಲ್ಲ. ಬದಲಾಗಿ, ನಮ್ಮ ಭರವಸವು ಯೆಹೋವನಲ್ಲಿದೆ. ಪುರಾತನ ಇಸ್ರಾಯೇಲಿಗೆ ಆತನು ಕೊಟ್ಟ ಪ್ರೋತ್ಸಾಹನೆಯನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ: “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವದು; ಶಾಂತರಾಗಿ ಭರವಸದಿಂದಿರುವದೇ ನಿಮಗೆ ಬಲ.”​—ಯೆಶಾಯ 30:15.

19. ಹಿಂಸೆಗೆ ಗುರಿಯಾಗಿದ್ದಾಗ, ನಮ್ಮ ಸಹೋದರರಿಗೆ ಯೆಹೋವನಲ್ಲಿದ್ದ ಭರವಸವು ಹೇಗೆ ಸಾರ್ಥಕವೆಂದು ರುಜುವಾಯಿತು?

19 ನಮ್ಮ ಆಧುನಿಕ ಇತಿಹಾಸದ ಕೆಲವೊಂದು ಸಮಯಗಳಲ್ಲಿ, ನಮ್ಮ ಕಾರ್ಯವು ಪೂರ್ವ ಮತ್ತು ಪಶ್ಚಿಮ ಯೂರೋಪಿನಲ್ಲಿ, ಏಷ್ಯಾ ಮತ್ತು ಆಫ್ರಿಕದ ಕೆಲವು ಭಾಗಗಳಲ್ಲಿ ಹಾಗೂ ದಕ್ಷಿಣ ಮತ್ತು ಉತ್ತರ ಅಮೆರಿಕದಲ್ಲಿ ನಿಷೇಧಿಸಲ್ಪಟ್ಟಿದೆ ಇಲ್ಲವೆ ನಿರ್ಬಂಧಿಸಲ್ಪಟ್ಟಿದೆ. ಯೆಹೋವನಲ್ಲಿ ನಮ್ಮ ಭರವಸವು ಅನುಚಿತವೂ ವ್ಯರ್ಥವೂ ಆಗಿತ್ತು ಎಂದಿದರ ಅರ್ಥವೋ? ಇಲ್ಲವೆ ಇಲ್ಲ. ಕೆಲವು ಸಾರಿ ತನ್ನ ಸ್ವಂತ ಸದುದ್ದೇಶಕ್ಕಾಗಿ ಆತನು ಕಟುಹಿಂಸೆಯನ್ನು ಅನುಮತಿಸಿದ್ದಾನಾದರೂ, ಆ ಹಿಂಸೆಯನ್ನು ಅನುಭವಿಸಿದವರನ್ನು ಯೆಹೋವನು ಪ್ರೀತಿಯಿಂದ ಬಲಪಡಿಸಿರುತ್ತಾನೆ. ಅಂಥ ಹಿಂಸೆಯ ಕೆಳಗೆ ಅನೇಕ ಕ್ರೈಸ್ತರು ದೇವರಲ್ಲಿ ನಂಬಿಕೆ ಮತ್ತು ಭರವಸೆಯ ಒಂದು ಅದ್ಭುತಕರ ದಾಖಲೆಯನ್ನು ಸ್ಥಾಪಿಸಿರುತ್ತಾರೆ.

20. ಕಾನೂನುಬದ್ಧ ಸ್ವಾತಂತ್ರ್ಯಗಳಿಂದ ನಮಗೆ ಪ್ರಯೋಜನವಾಗಬಹುದಾದರೂ, ಯಾವ ವಿಷಯಗಳಲ್ಲಿ ನಾವೆಂದೂ ಒಪ್ಪಂದವನ್ನು ಮಾಡದಿರುವೆವು?

20 ಇನ್ನೊಂದು ಕಡೆಯಲ್ಲಿ ನೋಡುವುದಾದರೆ, ಹೆಚ್ಚಿನ ದೇಶಗಳಲ್ಲಿ ನಮಗೆ ಕಾನೂನುಬದ್ಧ ಮನ್ನಣೆಯಿದೆ. ಮತ್ತು ಕೆಲವೊಮ್ಮೆ ವಾರ್ತಾಮಾಧ್ಯಮದಿಂದ ನಮಗೆ ಒಳ್ಳೆಯ ಪ್ರಚಾರವು ದೊರೆಯುತ್ತದೆ. ಇದಕ್ಕಾಗಿ ನಾವು ಕೃತಜ್ಞರು ಮತ್ತು ಇದು ಸಹ ಯೆಹೋವನ ಉದ್ದೇಶವನ್ನು ಪೂರೈಸಲು ಸಹಾಯಮಾಡುತ್ತದೆಂದು ನಾವು ಅಂಗೀಕರಿಸುತ್ತೇವೆ. ಆತನ ಆಶೀರ್ವಾದದಿಂದ, ನಾವು ಈ ಹೆಚ್ಚಿನ ಸ್ವಾತಂತ್ರ್ಯವನ್ನು ನಮ್ಮ ವೈಯಕ್ತಿಕ ಜೀವನ ಶೈಲಿಗಳನ್ನು ಪ್ರವರ್ಧಿಸಲಿಕ್ಕಾಗಿ ಅಲ್ಲ, ಬದಲಾಗಿ ಯೆಹೋವನನ್ನು ಬಹಿರಂಗವಾಗಿ ಮತ್ತು ಪೂರ್ಣವಾಗಿ ಸೇವಿಸಲಿಕ್ಕಾಗಿ ಉಪಯೋಗಿಸುತ್ತೇವೆ. ಆದರೂ ಕೇವಲ ಅಧಿಕಾರಿಗಳಿಂದ ಮೆಚ್ಚಿಗೆಯನ್ನು ಗಳಿಸಲಿಕ್ಕಾಗಿ ನಮ್ಮ ತಾಟಸ್ಥ್ಯದಲ್ಲಿ ನಾವು ಎಂದೂ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ, ಅಥವಾ ಸಾರುವ ಚಟುವಟಿಕೆಯನ್ನು ಕಡಿಮೆಮಾಡುವುದಿಲ್ಲ, ಇಲ್ಲವೆ ಯೆಹೋವನಿಗೆ ನಾವು ಸಲ್ಲಿಸುವ ಸೇವೆಯ ಗುಣಮಟ್ಟವನ್ನು ಬೇರಾವುದೇ ರೀತಿಯಲ್ಲಾದರೂ ಕುಂದಿಸುವದಿಲ್ಲ. ನಾವು ಮೆಸ್ಸೀಯ ಸಂಬಂಧಿತ ರಾಜ್ಯದ ಪ್ರಜೆಗಳಾಗಿದ್ದೇವೆ ಮತ್ತು ಯೆಹೋವನ ಪರಮಾಧಿಕಾರದ ಪಕ್ಷದಲ್ಲಿ ದೃಢರಾಗಿದ್ದೇವೆ. ನಮ್ಮ ನಿರೀಕ್ಷೆಯು ಈ ವಿಷಯಗಳ ವ್ಯವಸ್ಥೆಯಲ್ಲಿ ಅಲ್ಲ, ಬದಲಾಗಿ ದೇವರ ಹೊಸ ಲೋಕದಲ್ಲಿದೆ. ಆಗ ಮೆಸ್ಸೀಯನ ಸ್ವರ್ಗೀಯ ರಾಜ್ಯವು ಈ ಭೂಮಿಯನ್ನಾಳುವ ಏಕಮಾತ್ರ ಸರ್ಕಾರವಾಗಿರುವುದು. ಬಾಂಬ್‌ಗಳಾಗಲಿ, ಕ್ಷಿಪಣಿಗಳಾಗಲಿ, ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳಾಗಲಿ ಆ ಸರ್ಕಾರವನ್ನು ಕದಲಿಸಲಾರವು ಇಲ್ಲವೆ ಸ್ವರ್ಗದಿಂದ ಕೆಳಗೆ ಉರುಳಿಸಲಾರವು. ಅದು ಅಜೇತ ಸರ್ಕಾರವಾಗಿರುವುದು ಮತ್ತು ಅದಕ್ಕಾಗಿರುವ ಯೆಹೋವನ ಉದ್ದೇಶವನ್ನು ಪೂರೈಸಿಯೆ ತೀರುವುದು.​—ದಾನಿಯೇಲ 2:44; ಇಬ್ರಿಯ 12:28; ಪ್ರಕಟನೆ 6:2.

21. ಯಾವ ಮಾರ್ಗಕ್ರಮವನ್ನು ನಾವು ಅನುಸರಿಸಲು ದೃಢಚಿತ್ತರಾಗಿದ್ದೇವೆ?

21 ಪೌಲನು ಹೇಳುವುದು: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:39) ಹೀಗಿರಲಾಗಿ, ನಾವೆಲ್ಲರೂ ಅಂತ್ಯದ ತನಕ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಇರೋಣ. ಈಗಲೂ ಎಂದೆಂದಿಗೂ ಯೆಹೋವನಲ್ಲಿ ನಮ್ಮ ಸಂಪೂರ್ಣ ಭರವಸವನ್ನಿಡಲು ನಮಗೆ ಸಕಾರಣವದೆ.​—ಕೀರ್ತನೆ 37:3; 125:1.

ನೀವೇನನ್ನು ಕಲಿತಿರಿ?

• ಯೆಹೋಶುವ ಮತ್ತು ಕಾಲೇಬರು ಒಳ್ಳೆಯ ವರದಿಯನ್ನು ತಂದದ್ದೇಕೆ?

• ಯೆಹೋವನಲ್ಲಿ ನಿಸ್ಸಂಶಯವಾಗಿ ಭರವಸವಿಡುವುದಕ್ಕೆ ನಮಗಿರುವ ಕೆಲವು ಕಾರಣಗಳು ಯಾವುವು?

• ಯೆಹೋವನಲ್ಲಿ ಭರವಸವಿಡುವುದರ ಅರ್ಥವೇನು?

• ಯೆಹೋವನಲ್ಲಿ ಭರವಸವಿಡುತ್ತಾ, ನಾವು ಯಾವ ನಿಲುವನ್ನು ತೆಗೆದುಕೊಳ್ಳಲು ದೃಢಚಿತ್ತರಾಗಿದ್ದೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಯೆಹೋಶುವ ಮತ್ತು ಕಾಲೇಬರು ಒಳ್ಳೆಯ ವರದಿಯನ್ನು ಕೊಟ್ಟದ್ದೇಕೆ?

[ಪುಟ 16ರಲ್ಲಿರುವ ಚಿತ್ರಗಳು]

ಎಲ್ಲಾ ಮೂರು ಚಿತ್ರಗಳು: Courtesy of Anglo-Australian Observatory, photograph by David Malin

[ಕೃಪೆ]

ಯೆಹೋವನಲ್ಲಿ ಭರವಸವನ್ನಿಡಲು ಸೃಷ್ಟಿಯು ನಮಗೆ ಬಲವಾದ ಕಾರಣವನ್ನು ಕೊಡುತ್ತದೆ

[ಪುಟ 18ರಲ್ಲಿರುವ ಚಿತ್ರ]

ಯೆಹೋವನಲ್ಲಿ ಭರವಸವೆಂದರೆ, ಆತನ ಭರವಸೆಗೆ ಪಾತ್ರರಾದವರಲ್ಲಿ ಭರವಸವಿಡುವದೇ