ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಧರ್ಮಕ್ಕೆ ಏನು ಸಂಭವಿಸುತ್ತಿದೆ?

ದಾನಧರ್ಮಕ್ಕೆ ಏನು ಸಂಭವಿಸುತ್ತಿದೆ?

ದಾನಧರ್ಮಕ್ಕೆ ಏನು ಸಂಭವಿಸುತ್ತಿದೆ?

ನ್ಯೂಯಾರ್ಕ್‌ ನಗರ ಮತ್ತು ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಇಸವಿ 2001, ಸೆಪ್ಟೆಂಬರ್‌ 11ರಂದು ಸಂಭವಿಸಿದ ದಾಳಿಗಳ ನಂತರ, ದುರಂತಕ್ಕೀಡಾದವರಿಗೆ ಸಾರ್ವಜನಿಕರ ಬೆಂಬಲವು ಗಮನಾರ್ಹವಾಗಿತ್ತು. ಬಲಿಯಾದವರ ಕುಟುಂಬಗಳಿಗೆ ಸಹಾಯಮಾಡುವ ಸಲುವಾಗಿ ಕಳುಹಿಸಲ್ಪಟ್ಟ 270 ಕೋಟಿ ಡಾಲರ್‌ ಮೊತ್ತದ ದಾನಗಳಿಂದ ಧರ್ಮಕಾರ್ಯಸಂಸ್ಥೆಗಳು ತುಂಬಿತುಳುಕಿದವು. ವಿನಾಶದ ವ್ಯಾಪ್ತಿಯನ್ನು ನೋಡಿ ದುಃಖಿತರಾಗಿ ಎಲ್ಲಾ ಕಡೆಯಲ್ಲಿರುವ ಜನರು ಸಹಾಯಮಾಡಬಯಸಿದರು.

ಹಾಗಿದ್ದರೂ, ಪ್ರಖ್ಯಾತ ಧರ್ಮಕಾರ್ಯಸಂಸ್ಥೆಗಳು ಹಣವನ್ನು ದುರುಪಯೋಗಿಸಿಕೊಂಡವೆಂದು ತಿಳಿದುಬಂದಾಗ ಸಾರ್ವಜನಿಕರಲ್ಲಿ ಕೆಲವರು ಬಹಳ ಕೋಪಗೊಂಡರು. ಒಂದು ದೊಡ್ಡ ಧರ್ಮಕಾರ್ಯಸಂಸ್ಥೆಯು, ಟ್ರೇಡ್‌ ಸೆಂಟರ್‌ನ ದಾಳಿಗೊಳಗಾದವರ ಸಹಾಯಕ್ಕೆಂದು ದೊರೆತ 54.6 ಕೋಟಿ ಡಾಲರ್‌ ಹಣದಲ್ಲಿ ಸುಮಾರು ಅರ್ಧದಷ್ಟನ್ನು ಇತರ ಉದ್ದೇಶಗಳಿಗಾಗಿ ಉಪಯೋಗಿಸಲು ಬದಿಗಿರಿಸಿದೆ ಎಂಬ ವರದಿಯನ್ನು ಕೇಳಿಸಿಕೊಂಡಾಗ ಜನರ ಕೋಪವು ಉಕ್ಕಿಹರಿಯಿತು. ನಂತರ ಆ ಸಂಸ್ಥೆಯು ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡು, ಈ ತಪ್ಪಿಗಾಗಿ ಕ್ಷಮೆಯಾಚಿಸಿತಾದರೂ, ದಾಳಿಗಳು ಸಂಭವಿಸುವುದಕ್ಕಿಂತ ಮೊದಲು ಇದ್ದ “ಜನರ ಭರವಸೆಯನ್ನು ಆ ಸಂಸ್ಥೆಯು ಪುನಃ ಗಳಿಸುವಂತೆ ಈ ಬದಲಾವಣೆಯು ಮಾಡಸಾಧ್ಯವಿಲ್ಲ ಎಂಬುದು ವಿಮರ್ಶಕರ ದೃಷ್ಟಿಕೋನ” ಎಂದು ವರದಿಗಾರ್ತಿಯೊಬ್ಬಳು ತಿಳಿಸಿದಳು. ನಿಮ್ಮ ಕುರಿತಾಗಿ ಏನು? ಧರ್ಮಕಾರ್ಯಸಂಸ್ಥೆಯ ಮೇಲೆ ನಿಮಗಿದ್ದ ಭರವಸೆಯು ಇತ್ತೀಚೆಗೆ ಅಲುಗಾಡಿಸಲ್ಪಟ್ಟಿದೆಯೋ?

ಉಪಯುಕ್ತವೋ ವ್ಯರ್ಥವೋ?

ಧರ್ಮಕಾರ್ಯಸಂಸ್ಥೆಗಳಿಗೆ ದಾನನೀಡುವುದನ್ನು ಸಾಮಾನ್ಯವಾಗಿ ಸದ್ಗುಣವೆಂದು ಪರಿಗಣಿಸಲಾಗುತ್ತದೆ. ಆದರೆ, ಈ ರೀತಿಯ ಭಾವನೆಯು ಪ್ರತಿಯೊಬ್ಬರಲ್ಲೂ ಇರುವುದಿಲ್ಲ. 200 ವರುಷಗಳ ಹಿಂದೆ ಸ್ಯಾಮುವೇಲ್‌ ಜಾನ್ಸನ್‌ ಎಂಬ ಒಬ್ಬ ಆಂಗ್ಲ ಪ್ರಬಂಧಕಾರನು ಬರೆದದ್ದು: “ಒಂದು ಧರ್ಮಕಾರ್ಯಸಂಸ್ಥೆಗೆ ದಾನವಾಗಿ ಹಣವನ್ನು ಕೊಡುವುದಕ್ಕಿಂತಲೂ ಒಬ್ಬನ ಕೆಲಸಕ್ಕೆ ಸಂಬಳದೋಪಾದಿ ಹಣವನ್ನು ಕೊಡುವಾಗ ನೀವು ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರೆಂದು ನಿಮಗೆ ಹೆಚ್ಚು ಖಚಿತವಾಗುತ್ತದೆ.” ಧರ್ಮಕಾರ್ಯಸಂಸ್ಥೆಗಳಿಗೆ ಹಣವನ್ನು ದಾನವಾಗಿ ಕೊಡುವುದರ ವಿಷಯದಲ್ಲಿ ಇದೇ ರೀತಿಯ ಹಿಂಜರಿಕೆಯ ಭಾವನೆ ಇಂದು ಅನೇಕರಿಗಿದೆ. ಮತ್ತು ಧರ್ಮಕಾರ್ಯಸಂಸ್ಥೆಗಳು ಹಣವನ್ನು ದುರುಪಯೋಗಿಸುತ್ತಿರುವ ಅಥವಾ ತಪ್ಪಾಗಿ ಬಳಸುತ್ತಿರುವ ವರದಿಗಳಿಂದಾಗಿ ಸಾರ್ವಜನಿಕರ ಭರವಸೆಯು ಇನ್ನಷ್ಟೂ ಕಡಿಮೆಯಾಗಿದೆ. ಇತ್ತೀಚಿನ ಎರಡು ಉದಾಹರಣೆಗಳನ್ನು ಪರಿಗಣಿಸಿರಿ.

ಸಾನ್‌ ಫ್ರಾನ್ಸಿಸ್ಕೋನಲ್ಲಿರುವ ಒಂದು ಧಾರ್ಮಿಕ ಧರ್ಮಕಾರ್ಯಸಂಸ್ಥೆಯ ಕಾರ್ಯನಿರ್ವಾಹಕನು, ತನ್ನ ಅಂಗಭಿನ್ನ ಚಿಕಿತ್ಸೆಗಾಗಿ ಮತ್ತು ಪ್ರತಿವಾರವೂ 500 ಡಾಲರ್‌ಗಳಂತೆ ಎರಡು ವರ್ಷಗಳವರೆಗೆ ಅವನು ರೆಸ್ಟೊರೆಂಟ್‌ಗಳಲ್ಲಿ ಖರ್ಚುಮಾಡಿದ ಹಣವನ್ನು ಆ ಸಂಸ್ಥೆಯಿಂದ ಪುನಃಭರ್ತಿ ಮಾಡಿದ್ದಕ್ಕಾಗಿ ವಜಾಮಾಡಲ್ಪಟ್ಟನು. ರೊಮೇನಿಯದಲ್ಲಿ ಹೊಸ ಅನಾಥಾಶ್ರಮಗಳನ್ನು ಕಟ್ಟಲು ಸಹಾಯಾರ್ಥವಾಗಿ ಕಳುಹಿಸಲ್ಪಟ್ಟ ಸುಮಾರು 65 ಲಕ್ಷ ಪೌಂಡ್‌ (ಸುಮಾರು ಒಂದು ಕೋಟಿ ಡಾಲರ್‌) ಹಣದಲ್ಲಿ ಕೇವಲ 12 ಕೀಳುದರ್ಜೆಯ ಮನೆಗಳನ್ನು ಕಟ್ಟಿ, ಉಳಿದ ನೂರಾರು ಸಾವಿರ ಡಾಲರ್‌ ಹಣವು ಹೇಗೆ ಖರ್ಚುಮಾಡಲ್ಪಟ್ಟಿತ್ತೆಂಬುದಕ್ಕೆ ಯಾವುದೇ ವಿವರಣೆ ಕೊಡಲ್ಪಟ್ಟಿಲ್ಲ ಎಂಬುದು ಬ್ರಿಟನಿನ ಒಂದು ಪ್ರಖ್ಯಾತ ಟೆಲಿವಿಷನ್‌ ಧರ್ಮಕಾರ್ಯ ಸಮಾರಂಭದ ಸಂಘಟಕರಿಗೆ ತಿಳಿದುಬಂದಾಗ ಅವರು ಪೇಚಾಟಕ್ಕೊಳಗಾದರು. ಇಂತಹ ನಕಾರಾತ್ಮಕ ವರದಿಗಳು ಕೆಲವು ದಾನಿಗಳನ್ನು, ತಾವು ಎಷ್ಟು ದಾನಕೊಡುತ್ತೇವೆ ಮತ್ತು ಯಾರಿಗೆ ಕೊಡುತ್ತೇವೆ ಎಂಬುದರ ಕುರಿತು ಹೆಚ್ಚು ಎಚ್ಚರಿಕೆ ವಹಿಸುವಂತೆ ನ್ಯಾಯೋಚಿತವಾಗಿ ಪ್ರೇರೇಪಿಸಿದೆ.

ಕೊಡಬೇಕೋ ಬೇಡವೋ?

ಆದರೆ, ಕೆಲವು ವ್ಯಕ್ತಿಗಳ ಅಥವಾ ಸಂಸ್ಥಾಪನೆಗಳ ಕಾರ್ಯಗಳು, ನಾವು ಇತರರ ಕಡೆಗೆ ನೈಜವಾದ ಕಾಳಜಿ ಮತ್ತು ಅನುಕಂಪವನ್ನು ತೋರಿಸುವುದರಿಂದ ನಮ್ಮನ್ನು ತಡೆಯುವಂತೆ ಬಿಡುವುದು ನಿಜವಾಗಿಯೂ ವಿಷಾದಕರವಾಗಿದೆ. ಬೈಬಲ್‌ ತಿಳಿಸುವುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ . . . ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.” (ಯಾಕೋಬ 1:27) ಹೌದು, ಬಡವರ ಮತ್ತು ಅನನುಕೂಲ ಪರಿಸ್ಥಿತಿಯಲ್ಲಿರುವವರಿಗಾಗಿ ಕ್ರಿಯೆಯಲ್ಲಿ ಹಿತಚಿಂತನೆಯನ್ನು ತೋರಿಸುವುದೇ ಕ್ರೈಸ್ತತ್ವದ ಮುಖ್ಯ ಅಂಶವಾಗಿದೆ.

ಆದರೂ, ನೀವು ಹೀಗೆ ಯೋಚಿಸಬಹುದು: ‘ನಾನು ಧರ್ಮಕಾರ್ಯಸಂಸ್ಥೆಗಳಿಗೆ ದಾನ ಕೊಡುವುದನ್ನು ಮುಂದುವರಿಸಬೇಕೋ, ಅಥವಾ ವೈಯಕ್ತಿಕವಾಗಿ ನಾನೇ ಆಯಾ ವ್ಯಕ್ತಿಗಳಿಗೆ ಕೊಡುಗೆಗಳನ್ನು ನೀಡುವ ಮೂಲಕ ಸಹಾಯಮಾಡಲು ಪ್ರಯತ್ನಿಸಿದರೆ ಸಾಕೋ?’ ಯಾವ ರೀತಿಯ ಕೊಡುವಿಕೆಯನ್ನು ದೇವರು ಮೆಚ್ಚುತ್ತಾನೆ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಉತ್ತರಿಸಲಿದೆ.