ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು

ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು

ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು

“ಶಿಸ್ತು” ಎಂಬ ಪದವನ್ನು ಕೇಳಿಸಿಕೊಂಡ ಕೂಡಲೆ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಒಂದು ಶಬ್ದಕೋಶವು ಶಿಸ್ತನ್ನು, “ಜನರನ್ನು ನಿಯಮಗಳಿಗೆ ಅಥವಾ ವರ್ತನಾ ಮಟ್ಟಗಳಿಗೆ ವಿಧೇಯರಾಗುವಂತೆ ಮಾಡುವ, ಮತ್ತು ಅವರು ವಿಧೇಯರಾಗದಿದ್ದಾಗ ಅವರಿಗೆ ಶಿಕ್ಷೆಯನ್ನು ನೀಡುವ ರೂಢಿ” ಎಂದು ಅರ್ಥನಿರೂಪಿಸುತ್ತದೆ. ನಿಶ್ಚಯವಾಗಿಯೂ ಇದೇ ಏಕಮಾತ್ರ ಅಂಗೀಕೃತ ಅರ್ಥನಿರೂಪಣೆಯಾಗಿರದಿದ್ದರೂ, ಇಂದು ಅನೇಕ ಜನರು ಯಾವುದೇ ರೀತಿಯ ಶಿಸ್ತಿಗೆ ತದ್ರೀತಿಯ ನಕಾರಾತ್ಮಕ ಅರ್ಥವನ್ನೇ ಕೊಡುತ್ತಾರೆ.

ಬೈಬಲಾದರೋ ಶಿಸ್ತನ್ನು ತೀರ ಭಿನ್ನವಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. “ಮಗನೇ, ಯೆಹೋವನ ಶಿಕ್ಷೆಯನ್ನು [“ಶಿಸ್ತನ್ನು,” NW] ತಾತ್ಸಾರಮಾಡಬೇಡ” ಎಂದು ಬುದ್ಧಿವಂತ ರಾಜ ಸೊಲೊಮೋನನು ಬರೆದನು. (ಜ್ಞಾನೋಕ್ತಿ 3:11) ಈ ಮಾತುಗಳು ಸರ್ವಸಾಮಾನ್ಯವಾದ ಶಿಸ್ತಿಗಲ್ಲ, ಬದಲಾಗಿ ‘ಯೆಹೋವನ ಶಿಸ್ತಿಗೆ’ ಅಂದರೆ ದೇವರ ಅತ್ಯುಚ್ಚ ಮೂಲತತ್ತ್ವಗಳ ಮೇಲಾಧಾರಿತವಾದ ಶಿಸ್ತಿಗೆ ಸೂಚಿಸುತ್ತವೆ. ಅಂಥ ಶಿಸ್ತು ಮಾತ್ರ ಆತ್ಮಿಕವಾಗಿ ಪ್ರತಿಫಲದಾಯಕ ಮತ್ತು ಪ್ರಯೋಜನದಾಯಕವಾಗಿರುತ್ತದೆ ಹಾಗೂ ಅಪೇಕ್ಷಣೀಯವೂ ಆಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾನವ ಆಲೋಚನೆಯ ಮೇಲೆ ಆಧಾರಿತವಾಗಿರುವ ಮತ್ತು ಯೆಹೋವನ ಅತ್ಯುಚ್ಚ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರದ ಶಿಸ್ತು ಅನೇಕವೇಳೆ ದೌರ್ಜನ್ಯಕರವೂ ವೇದನಾಮಯವೂ ಆಗಿರುತ್ತದೆ. ಇದರಿಂದಾಗಿಯೇ ಅನೇಕರಿಗೆ ಶಿಸ್ತಿನ ಕಡೆಗೆ ನಕಾರಾತ್ಮಕ ಮನೋಭಾವವಿದೆ.

ಯೆಹೋವನ ಶಿಸ್ತನ್ನು ಅಂಗೀಕರಿಸುವಂತೆ ನಮ್ಮನ್ನು ಏಕೆ ಪ್ರಚೋದಿಸಲಾಗಿದೆ? ಶಾಸ್ತ್ರವಚನಗಳಲ್ಲಿ ದೈವಿಕ ಶಿಸ್ತನ್ನು, ತನ್ನ ಮಾನವ ಸೃಷ್ಟಿಜೀವಿಗಳಿಗಾಗಿರುವ ದೇವರ ಪ್ರೀತಿಯ ಒಂದು ಅಭಿವ್ಯಕ್ತಿಯೋಪಾದಿ ವರ್ಣಿಸಲಾಗಿದೆ. ಹೀಗೆ, ಸೊಲೊಮೋನನು ಹೇಳುತ್ತಾ ಮುಂದುವರಿದದ್ದು: “ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.”​—ಜ್ಞಾನೋಕ್ತಿ 3:12.

ಶಿಸ್ತು ಮತ್ತು ಶಿಕ್ಷೆ​—ವ್ಯತ್ಯಾಸವೇನು?

ಬೈಬಲಿನಲ್ಲಿ ವ್ಯಕ್ತಪಡಿಸಲ್ಪಟ್ಟಿರುವಂಥ ರೀತಿಯ ಶಿಸ್ತಿನಲ್ಲಿ, ಮಾರ್ಗದರ್ಶನ, ಉಪದೇಶ, ತರಬೇತಿ, ತಿದ್ದುವಿಕೆ, ತಿದ್ದುಪಾಟು, ಹಾಗೂ ಶಿಕ್ಷೆಯಂಥ ಅನೇಕ ಅಂಶಗಳು ಒಳಗೂಡಿವೆ. ಆದರೂ, ಪ್ರತಿಯೊಂದು ಅಂಶದಲ್ಲಿಯೂ ಯೆಹೋವನ ಶಿಸ್ತು ಪ್ರೀತಿಯಿಂದ ಪ್ರಚೋದಿಸಲ್ಪಟ್ಟದ್ದಾಗಿದೆ, ಮತ್ತು ಇದರ ಗುರಿಯು ಶಿಸ್ತನ್ನು ಪಡೆದುಕೊಳ್ಳುವವನು ಪ್ರಯೋಜನವನ್ನು ಪಡೆದುಕೊಳ್ಳಬೇಕೆಂಬುದೇ ಆಗಿದೆ. ಯೆಹೋವನು ತಿದ್ದುಪಾಟನ್ನು ನೀಡಲಿಕ್ಕಾಗಿ ಕೊಡುವ ಶಿಸ್ತು, ಕೇವಲ ಶಿಕ್ಷೆಯ ಉದ್ದೇಶದಿಂದ ಎಂದಿಗೂ ಕೊಡಲ್ಪಡುವುದಿಲ್ಲ.

ಇನ್ನೊಂದು ಕಡೆಯಲ್ಲಿ, ದೇವರ ಶಿಕ್ಷೆಯ ಕೃತ್ಯಗಳು ಶಿಸ್ತನ್ನು ಪಡೆದುಕೊಳ್ಳುವ ವ್ಯಕ್ತಿಗೆ ಯಾವಾಗಲೂ ತಿದ್ದುಪಾಟನ್ನು ನೀಡುವ ಅಥವಾ ಅವನಿಗೆ ತರಬೇತು ನೀಡುವ ಧ್ಯೇಯವುಳ್ಳವುಗಳಾಗಿರುವುದಿಲ್ಲ. ಉದಾಹರಣೆಗೆ, ಆದಾಮಹವ್ವರು ಪಾಪಮಾಡಿದ ದಿನದಿಂದಲೇ ತಮ್ಮ ಅವಿಧೇಯತೆಯ ಪರಿಣಾಮಗಳನ್ನು ಅನುಭವಿಸತೊಡಗಿದರು. ಯೆಹೋವನು ಅವರನ್ನು ಪರದೈಸಿಕ ಏದೆನ್‌ ತೋಟದಿಂದ ಹೊರಗಟ್ಟಿದನು, ಮತ್ತು ಅವರು ಅಪರಿಪೂರ್ಣತೆ, ಅನಾರೋಗ್ಯ, ಹಾಗೂ ವೃದ್ಧಾಪ್ಯದ ಪರಿಣಾಮಗಳಿಗೆ ಒಳಗಾದರು. ನೂರಾರು ವರ್ಷಗಳ ವರೆಗೆ ವೇದನಾಭರಿತ ಸ್ಥಿತಿಯಲ್ಲಿ ಬದುಕಿದ ಬಳಿಕ ಅವರು ಶಾಶ್ವತವಾಗಿ ನಿರ್ನಾಮವಾದರು. ನಿಶ್ಚಯವಾಗಿಯೂ ಇದೆಲ್ಲವೂ ದೈವಿಕ ಶಿಕ್ಷೆಯಾಗಿತ್ತಾದರೂ, ತಿದ್ದುಪಾಟನ್ನು ನೀಡಲಿಕ್ಕಾಗಿ ಕೊಡಲ್ಪಟ್ಟ ಶಿಸ್ತು ಇದಾಗಿರಲಿಲ್ಲ. ಬೇಕುಬೇಕೆಂದೇ ಅವಿಧೇಯತೆ ತೋರಿಸಿದ ಹಾಗೂ ಪಶ್ಚಾತ್ತಾಪವನ್ನು ತೋರಿಸದ ಆದಾಮಹವ್ವರು ತಿದ್ದಲ್ಪಡುವಂಥ ಸ್ಥಿತಿಯಲ್ಲಿರಲಿಲ್ಲ.

ಯೆಹೋವನು ಶಿಕ್ಷೆಯನ್ನು ನೀಡಿದಂಥ ಕೃತ್ಯಗಳ ಕುರಿತಾದ ಇತರ ವೃತ್ತಾಂತಗಳಲ್ಲಿ, ನೋಹನ ದಿನದ ಜಲಪ್ರಲಯ, ಸೊದೋಮ್‌ ಗೊಮೋರ ಪಟ್ಟಣಗಳ ನಾಶನ, ಕೆಂಪು ಸಮುದ್ರದಲ್ಲಿ ಐಗುಪ್ತ ಸೇನೆಗಳ ನಿರ್ಮೂಲನವು ಒಳಗೂಡಿದೆ. ಯೆಹೋವನು ನಡೆಸಿದ ಈ ಕೃತ್ಯಗಳು, ಅದಕ್ಕೆ ಒಳಗಾದವರಿಗೆ ಮಾರ್ಗದರ್ಶನ, ಉಪದೇಶ, ಅಥವಾ ತರಬೇತಿಯನ್ನು ಒದಗಿಸುವ ಉದ್ದೇಶವುಳ್ಳವುಗಳಾಗಿರಲಿಲ್ಲ. ದೇವರಿಂದ ನಡೆಸಲ್ಪಟ್ಟ ಅಂಥ ಶಿಕ್ಷಾ ಕೃತ್ಯಗಳ ಕುರಿತು ಅಪೊಸ್ತಲ ಪೇತ್ರನು ಬರೆದುದು: “ಆತನು ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು. ಆತನು ಸೊದೋಮಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಮುಂದೆ ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ ಅವುಗಳಿಗೆ ನಾಶನವನ್ನು ವಿಧಿಸಿದನು.”​—2 ಪೇತ್ರ 2:5, 6.

ಈ ಶಿಕ್ಷಾ ಕೃತ್ಯಗಳು “ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ” ಯಾವ ಅರ್ಥದಲ್ಲಿ ಒಂದು ನಮೂನೆಯನ್ನಿಟ್ಟವು? ಥೆಸಲೊನೀಕದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ನಮ್ಮ ದಿನವನ್ನು, ದೇವರು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವ” ಸಮಯವಾಗಿ ಸೂಚಿಸುತ್ತಾನೆ. ಪೌಲನು ಕೂಡಿಸಿ ಹೇಳಿದ್ದು: “ಅಂಥವರು . . . ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.” (2 ಥೆಸಲೊನೀಕ 1:​8-10) ಅಂಥ ಶಿಕ್ಷೆಯನ್ನು ಯಾರು ಪಡೆದುಕೊಳ್ಳುತ್ತಾರೋ ಅವರಿಗೆ ಏನನ್ನೊ ಕಲಿಸಲಿಕ್ಕಾಗಿ ಅಥವಾ ಅವರನ್ನು ಪರಿಷ್ಕರಿಸಲಿಕ್ಕಾಗಿ ಆ ಶಿಕ್ಷೆಯು ಕೊಡಲ್ಪಡುವುದಿಲ್ಲ ಎಂಬುದು ಸುಸ್ಪಷ್ಟ. ಆದರೂ, ತನ್ನ ಶಿಸ್ತನ್ನು ಅಂಗೀಕರಿಸುವಂತೆ ಯೆಹೋವನು ತನ್ನ ಆರಾಧಕರಿಗೆ ಕರೆಕೊಡುವಾಗ, ಆತನು ಪಶ್ಚಾತ್ತಾಪರಹಿತ ಪಾಪಿಗಳಿಗೆ ಕೊಡುವಂಥ ಶಿಕ್ಷೆಗೆ ಸೂಚಿಸುತ್ತಿಲ್ಲ ಎಂಬುದು ನಿಶ್ಚಯ.

ಬೈಬಲು ಯೆಹೋವನನ್ನು ಪ್ರಧಾನವಾಗಿ ಶಿಕ್ಷಿಸುವವನೋಪಾದಿ ವರ್ಣಿಸುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅದಕ್ಕೆ ಬದಲಾಗಿ, ಅನೇಕ ಬಾರಿ ಆತನನ್ನು ಪ್ರೀತಿಭರಿತ ಉಪದೇಶಕನೋಪಾದಿ ಅಥವಾ ತಾಳ್ಮೆಯುಳ್ಳ ತರಬೇತುಗಾರನೋಪಾದಿ ವರ್ಣಿಸಲಾಗಿದೆ. (ಯೋಬ 36:22; ಕೀರ್ತನೆ 71:17; ಯೆಶಾಯ 54:13) ಹೌದು, ತಿದ್ದುಪಾಟಿನ ಉದ್ದೇಶದಿಂದ ಕೊಡಲ್ಪಡುವ ದೈವಿಕ ಶಿಸ್ತು ಯಾವಾಗಲೂ ಪ್ರೀತಿ ಹಾಗೂ ತಾಳ್ಮೆಯಿಂದ ಕೂಡಿದ್ದಾಗಿರುತ್ತದೆ. ಶಿಸ್ತಿನ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಮೂಲಕ, ಕ್ರೈಸ್ತರು ಶಿಸ್ತನ್ನು ಯೋಗ್ಯವಾದ ಮನೋಭಾವದಿಂದ ಸ್ವೀಕರಿಸಲು ಮತ್ತು ಅದನ್ನು ಇತರರಿಗೆ ನೀಡಲು ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿರುವರು.

ಪ್ರೀತಿಭರಿತ ಹೆತ್ತವರಿಂದ ಕೊಡಲ್ಪಡುವ ಶಿಸ್ತು

ಕುಟುಂಬ ವೃತ್ತದೊಳಗೆ ಮತ್ತು ಕ್ರೈಸ್ತ ಸಭೆಯೊಳಗೆ, ಶಿಸ್ತಿನ ಉದ್ದೇಶವನ್ನು ಎಲ್ಲರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅಧಿಕಾರದ ಸ್ಥಾನಗಳಲ್ಲಿರುವಂಥ ಹೆತ್ತವರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಜ್ಞಾನೋಕ್ತಿ 13:24 ಹೇಳುವುದು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ [“ಶಿಸ್ತುನೀಡುವ,” NW] ಪಿತ ಪುತ್ರನಿಗೆ ಮಿತ್ರ.”

ಹೆತ್ತವರು ಯಾವ ರೀತಿಯಲ್ಲಿ ಶಿಸ್ತನ್ನು ನೀಡಬೇಕು? ಬೈಬಲು ವಿವರಿಸುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕಿರಿಕಿರಿಗೊಳಿಸದೆ, ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಅವರನ್ನು ಸಾಕಿಸಲಹಿರಿ.” (ಎಫೆಸ 6:​4, NW) ಈ ಬುದ್ಧಿವಾದವನ್ನು ಮುಂದಿನ ಮಾತುಗಳಲ್ಲಿ ಪುನರುಚ್ಚರಿಸಲಾಗಿದೆ: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”​—ಕೊಲೊಸ್ಸೆ 3:21.

ಶಿಸ್ತಿನ ಉದ್ದೇಶವನ್ನು ಅರ್ಥಮಾಡಿಕೊಳ್ಳುವಂಥ ಕ್ರೈಸ್ತ ಹೆತ್ತವರು, ಎಂದೂ ಕಟುವಾದ ರೀತಿಯಲ್ಲಿ ಕ್ರಿಯೆಗೈಯುವುದಿಲ್ಲ. 2 ತಿಮೊಥೆಯ 2:24ರಲ್ಲಿ ಕೊಡಲ್ಪಟ್ಟಿರುವ ಮೂಲತತ್ತ್ವವನ್ನು, ಹೆತ್ತವರು ಶಿಸ್ತನ್ನು ನೀಡುವ ವಿಧಕ್ಕೆ ಅನ್ವಯಿಸಸಾಧ್ಯವಿದೆ. “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ” ಆಗಿರಬೇಕು ಎಂದು ಪೌಲನು ಬರೆದನು. ಅನಿಯಂತ್ರಿತ ಕೋಪಾವೇಶಗಳು, ಕಿರಿಚಾಡುವುದು ಮತ್ತು ಅವಮಾನಕರವಾದ ಅಥವಾ ತುಚ್ಛೀಕರಿಸುವ ಹೇಳಿಕೆಗಳು, ಖಂಡಿತವಾಗಿಯೂ ಪ್ರೀತಿಭರಿತ ಶಿಸ್ತು ಆಗಿರುವುದಿಲ್ಲ ಮತ್ತು ಒಬ್ಬ ಕ್ರೈಸ್ತನ ಜೀವನದಲ್ಲಿ ಇವುಗಳಿಗೆ ಯಾವುದೇ ಸ್ಥಾನವಿಲ್ಲ.​—ಎಫೆಸ 4:31; ಕೊಲೊಸ್ಸೆ 3:8.

ಹೆತ್ತವರು ನೀಡುವ ತಿದ್ದುಪಾಟಿನಲ್ಲಿ, ತಟ್ಟನೆ ಮತ್ತು ನಿರ್ಣಾಯಕವಾಗಿ ನೀಡಲ್ಪಡುವಂಥ ಒಂದು ಶಿಕ್ಷಾ ಕೃತ್ಯಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಅನೇಕ ಮಕ್ಕಳು ತಮ್ಮ ಆಲೋಚನಾ ರೀತಿಯನ್ನು ಸರಿಪಡಿಸಿಕೊಳ್ಳಬೇಕಾದರೆ ಅವರಿಗೆ ಪದೇ ಪದೇ ಬುದ್ಧಿವಾದವನ್ನು ಕೊಡುತ್ತಾ ಇರಬೇಕಾಗುತ್ತದೆ. ಹೀಗಿರುವುದರಿಂದ, ಹೆತ್ತವರು ಸಮಯವನ್ನು ಬದಿಗಿರಿಸಬೇಕು, ತಾಳ್ಮೆಯನ್ನು ತೋರಿಸಬೇಕು, ಮತ್ತು ಅವರು ಶಿಸ್ತನ್ನು ಹೇಗೆ ನೀಡುತ್ತಾರೋ ಆ ರೀತಿಯ ಕುರಿತು ಅತ್ಯಧಿಕವಾಗಿ ಆಲೋಚಿಸಬೇಕು. ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸಬೇಕು ಎಂಬುದನ್ನು ಅವರು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ಇದರ ಅರ್ಥ, ಅನೇಕ ವರ್ಷಗಳ ಕಾಲದ ತರಬೇತಿಯನ್ನು ಅವರು ನೀಡಬೇಕೆಂಬುದೇ.

ಕ್ರೈಸ್ತ ಕುರುಬರು ಸೌಮ್ಯಭಾವದಿಂದ ಶಿಸ್ತನ್ನು ನೀಡುತ್ತಾರೆ

ಕ್ರೈಸ್ತ ಹಿರಿಯರಿಗೂ ಈ ಮೂಲತತ್ತ್ವಗಳು ಅನ್ವಯಿಸುತ್ತವೆ. ಪ್ರೀತಿಭರಿತ ಕುರುಬರೋಪಾದಿ ಅವರು ಅಗತ್ಯವಿರುವಾಗ ಉಪದೇಶ, ನಿರ್ದೇಶನ, ಹಾಗೂ ತಿದ್ದುಪಾಟನ್ನು ನೀಡುವ ಮೂಲಕ ಮಂದೆಯನ್ನು ಬಲಗೊಳಿಸಲು ಶ್ರಮಿಸುತ್ತಾರೆ. ಶಿಸ್ತನ್ನು ನೀಡುವಾಗ, ಅದರ ಹಿಂದಿರುವ ನಿಜವಾದ ಉದ್ದೇಶವನ್ನು ಅವರು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. (ಎಫೆಸ 4:​11-13) ಒಂದುವೇಳೆ ಅವರು ಶಿಕ್ಷೆಯನ್ನು ನೀಡುವುದರ ಮೇಲೆಯೇ ಗಮನವನ್ನು ಕೇಂದ್ರೀಕರಿಸುವಲ್ಲಿ, ಅವರು ತಪ್ಪಿತಸ್ಥನನ್ನು ದಂಡನೆಗೆ ಗುರಿಮಾಡಿ, ಅದರ ಕುರಿತು ಇನ್ಯಾವ ಹೆಜ್ಜೆಯನ್ನೂ ತೆಗೆದುಕೊಳ್ಳುವುದಿಲ್ಲ. ಆದರೆ ದೈವಿಕ ಶಿಸ್ತಿನಲ್ಲಿ ಅತ್ಯಧಿಕವಾದದ್ದು ಒಳಗೂಡಿದೆ. ಪ್ರೀತಿಯಿಂದ ಪ್ರಚೋದಿತರಾದ ಹಿರಿಯರು ತಪ್ಪಿತಸ್ಥನಿಗೆ ಸಹಾಯಮಾಡುವ ಪ್ರಯತ್ನದಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಾರೆ. ಅವರು ನಿಜವಾಗಿಯೂ ಹಿತಾಸಕ್ತಿಯುಳ್ಳವರಾದ ಕಾರಣ, ಬೇರೆ ಬೇರೆ ಸಮಯಾವಧಿಗಳಲ್ಲಿ ಉತ್ತೇಜನ ಹಾಗೂ ತರಬೇತಿಯನ್ನು ನೀಡಲು ಅನೇಕ ಏರ್ಪಾಡುಗಳನ್ನು ಮಾಡುತ್ತಾರೆ.

ಎರಡನೆಯ ತಿಮೊಥೆಯ 2:​25, 26ರಲ್ಲಿ ಕಂಡುಬರುವ ಬುದ್ಧಿವಾದಕ್ಕನುಸಾರ, ಶಿಸ್ತನ್ನು ಸುಲಭವಾಗಿ ಅಂಗೀಕರಿಸದಿರುವಂಥವರೊಂದಿಗೆ ವ್ಯವಹರಿಸುವಾಗಲೂ ಹಿರಿಯರು “ಸೌಮ್ಯಭಾವದಿಂದ” (NW) ಉಪದೇಶಿಸಬೇಕು. ತದನಂತರ ಆ ಶಾಸ್ತ್ರವಚನವು ಶಿಸ್ತಿನ ಉದ್ದೇಶವನ್ನು ತಿಳಿಸುತ್ತದೆ: “ಒಂದು ವೇಳೆ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು. ಸೈತಾನನ ಉರ್ಲಿಗೆ ಬಿದ್ದವರಾದ ಇವರು ಒಂದು ವೇಳೆ . . . ಸ್ವಸ್ಥಚಿತ್ತರಾದಾರು.”

ಕೆಲವೊಮ್ಮೆ, ಪಶ್ಚಾತ್ತಾಪರಹಿತ ತಪ್ಪಿತಸ್ಥನನ್ನು ಸಭೆಯಿಂದ ಬಹಿಷ್ಕರಿಸುವ ಅಗತ್ಯವಿರುತ್ತದೆ. (1 ತಿಮೊಥೆಯ 1:18-20) ಅಂಥ ಗಂಭೀರ ಕೃತ್ಯವನ್ನು ಸಹ ಕೇವಲ ಶಿಕ್ಷೆಯಾಗಿ ಅಲ್ಲ ಬದಲಾಗಿ ಶಿಸ್ತಾಗಿ ಪರಿಗಣಿಸಬೇಕು. ಆಗಿಂದಾಗ್ಗೆ, ತಪ್ಪುಮಾಡುವಿಕೆಯಲ್ಲಿ ಕ್ರಿಯಾಶೀಲವಾಗಿ ಒಳಗೂಡದಿರುವಂಥ ಬಹಿಷ್ಕೃತ ವ್ಯಕ್ತಿಗಳನ್ನು ಹಿರಿಯರು ಭೇಟಿಮಾಡಲು ಪ್ರಯತ್ನಿಸುತ್ತಾರೆ. ಅಂಥ ಭೇಟಿಗಳ ಸಮಯದಲ್ಲಿ, ಒಬ್ಬ ವ್ಯಕ್ತಿಯು ಕ್ರೈಸ್ತ ಸಭೆಗೆ ಹಿಂದಿರುಗಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದನ್ನು ತಿಳಿಸುವ ಮೂಲಕ ಹಿರಿಯರು ಶಿಸ್ತಿನ ಹಿಂದಿರುವ ನಿಜ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತಾರೆ.

ಯೆಹೋವನೇ ಪರಿಪೂರ್ಣ ನ್ಯಾಯಾಧಿಪತಿ

ಹೆತ್ತವರು, ಕ್ರೈಸ್ತ ಕುರುಬರು, ಮತ್ತು ಶಿಸ್ತನ್ನು ನೀಡಲು ಶಾಸ್ತ್ರೀಯ ಅಧಿಕಾರವನ್ನು ಹೊಂದಿರುವ ಇತರರು, ಇಂಥ ಒಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಇತರರನ್ನು ಸರಿಪಡಿಸುವುದು ಅಥವಾ ತಿದ್ದುವುದು ಅಸಾಧ್ಯ ಎಂದು ಅವರು ಮುಂಚಿತವಾಗಿಯೇ ತೀರ್ಮಾನಿಸಬಾರದು. ಆದುದರಿಂದ, ಅವರ ಶಿಸ್ತು ಎಂದಿಗೂ ಮುಯ್ಯಿತೀರಿಸುವಂಥದ್ದಾಗಿ ಅಥವಾ ಹಗೆಯಿಂದ ಕೂಡಿರುವ ಶಿಕ್ಷೆಯಾಗಿ ಇರಬಾರದಾಗಿದೆ.

ಯೆಹೋವನು ಕಠಿನವಾದ ಮತ್ತು ಅಂತಿಮವಾದ ಶಿಕ್ಷೆಯನ್ನು ನೀಡುವಾತನಾಗಿದ್ದಾನೆ ಎಂದು ಬೈಬಲು ಆತನ ಕುರಿತು ತಿಳಿಸುತ್ತದೆ ಎಂಬುದು ನಿಜ. ವಾಸ್ತವದಲ್ಲಿ, “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂದು ಶಾಸ್ತ್ರವಚನಗಳು ಹೇಳುತ್ತವೆ. (ಇಬ್ರಿಯ 10:31) ಆದರೆ ಯಾವ ಮಾನವನೂ ಈ ವಿಷಯದಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ಎಂದಿಗೂ ತನ್ನನ್ನು ಯೆಹೋವನಿಗೆ ಹೋಲಿಸಿಕೊಳ್ಳಬಾರದಾಗಿದೆ. ಮತ್ತು ಒಬ್ಬ ಹೆತ್ತವರ ಅಥವಾ ಸಭೆಯಲ್ಲಿರುವ ನಿರ್ದಿಷ್ಟ ಹಿರಿಯರ ಕೈಗೆ ಸಿಕ್ಕಿಬೀಳುವುದು ಭಯಂಕರವಾದದ್ದು ಎಂದು ನೆನಸಲು ಯಾವುದೇ ಕಾರಣವಿಲ್ಲ.

ಶಿಸ್ತನ್ನು ನೀಡುವಾಗ ಪರಿಪೂರ್ಣ ಸಮತೋಲನವನ್ನು ಸಾಧಿಸುವ ಸಾಮರ್ಥ್ಯ ಯೆಹೋವನಿಗಿದೆ. ಆದರೆ ಅದು ಮಾನವರಿಗೆ ಇಲ್ಲ. ದೇವರು ಹೃದಯವನ್ನು ಓದಬಲ್ಲನು ಮತ್ತು ಯಾರು ತಿದ್ದುಪಾಟಿಗೆ ಮೀರಿದ ಸ್ಥಿತಿಯಲ್ಲಿದ್ದಾರೆ ಹಾಗೂ ಯಾರಿಗೆ ನಿರ್ಣಾಯಕವಾದ ಮತ್ತು ಅಂತಿಮ ಶಿಕ್ಷೆಯು ಕೊಡಲ್ಪಡಬೇಕೆಂಬುದನ್ನು ನಿರ್ಧರಿಸಬಲ್ಲನು. ಇನ್ನೊಂದು ಕಡೆಯಲ್ಲಿ, ಮಾನವರಾದರೋ ಇಂಥ ಒಂದು ನ್ಯಾಯತೀರ್ಪನ್ನು ವಿಧಿಸಲು ಅಶಕ್ತರಾಗಿದ್ದಾರೆ. ಈ ಕಾರಣದಿಂದಲೇ, ಅಧಿಕಾರದ ಸ್ಥಾನದಲ್ಲಿರುವವರು ಶಿಸ್ತನ್ನು ನೀಡುವ ಅಗತ್ಯವಿರುವಾಗ, ಅವರು ಯಾವಾಗಲೂ ಒಬ್ಬನಿಗೆ ತಿದ್ದುಪಾಟನ್ನು ನೀಡುವ ಉದ್ದೇಶದಿಂದ ಹಾಗೆಮಾಡುವುದು ಉಚಿತ.

ಯೆಹೋವನ ಶಿಸ್ತನ್ನು ಅಂಗೀಕರಿಸುವುದು

ನಮಗೆಲ್ಲರಿಗೂ ಯೆಹೋವನ ಶಿಸ್ತಿನ ಆವಶ್ಯಕತೆಯಿದೆ. (ಜ್ಞಾನೋಕ್ತಿ 8:​33, NW) ವಾಸ್ತವದಲ್ಲಿ, ದೇವರ ವಾಕ್ಯದ ಮೇಲಾಧಾರಿತವಾದ ಶಿಸ್ತಿಗಾಗಿ ನಾವು ಹಾತೊರೆಯಬೇಕು. ನಾವು ದೇವರ ವಾಕ್ಯವನ್ನು ಅಧ್ಯಯನಮಾಡುವಾಗ, ಶಾಸ್ತ್ರವಚನಗಳ ಮೂಲಕ ಯೆಹೋವನಿಂದ ನೇರವಾಗಿ ಬರುವ ಶಿಸ್ತನ್ನು ನಾವು ಅಂಗೀಕರಿಸಸಾಧ್ಯವಿದೆ. (2 ತಿಮೊಥೆಯ 3:​16, 17) ಆದರೂ, ಕೆಲವೊಮ್ಮೆ ನಾವು ಜೊತೆ ಕ್ರೈಸ್ತರಿಂದ ಶಿಸ್ತನ್ನು ಪಡೆದುಕೊಳ್ಳುತ್ತೇವೆ. ಅಂಥ ಶಿಸ್ತು ಯಾವ ಉದ್ದೇಶದಿಂದ ಕೊಡಲ್ಪಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಅದನ್ನು ಮನಃಪೂರ್ವಕವಾಗಿ ಸ್ವೀಕರಿಸಲು ನಮಗೆ ಸಹಾಯಮಾಡುವುದು.

ಅಪೊಸ್ತಲ ಪೌಲನು ಒಪ್ಪಿಕೊಂಡದ್ದು: “ಯಾವ ಶಿಕ್ಷೆಯಾದರೂ [“ಶಿಸ್ತಾದರೂ,” NW] ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ.” ತದನಂತರ ಅವನು ಕೂಡಿಸಿ ಹೇಳಿದ್ದು: “ಆದರೂ ತರುವಾಯ ಅದು . . . ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” (ಇಬ್ರಿಯ 12:11) ಯೆಹೋವನ ಶಿಸ್ತು, ನಮಗಾಗಿರುವ ಆತನ ಆಳವಾದ ಪ್ರೀತಿಯ ಒಂದು ವ್ಯಕ್ತಪಡಿಸುವಿಕೆಯಾಗಿದೆ. ನಾವು ಶಿಸ್ತನ್ನು ಪಡೆದುಕೊಳ್ಳಲಿ ಅಥವಾ ಇತರರಿಗೆ ನೀಡಲಿ, ದೈವಿಕ ಶಿಸ್ತಿನ ಹಿಂದಿರುವ ಉದ್ದೇಶವನ್ನು ನಾವು ಮನಸ್ಸಿನಲ್ಲಿಡೋಣ ಮತ್ತು ಬೈಬಲಿನ ಈ ವಿವೇಕಭರಿತ ಸಲಹೆಯನ್ನು ಪಾಲಿಸೋಣ: “ಸದುಪದೇಶವನ್ನು [“ಶಿಸ್ತನ್ನು,” NW] ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.”​—ಜ್ಞಾನೋಕ್ತಿ 4:13.

[ಪುಟ 21ರಲ್ಲಿರುವ ಚಿತ್ರಗಳು]

ಪಶ್ಚಾತ್ತಾಪರಹಿತ ಪಾಪಿಗಳು ದೇವರ ತಿದ್ದುಪಾಟಿನ ಶಿಸ್ತನ್ನಲ್ಲ, ಬದಲಾಗಿ ಆತನ ನ್ಯಾಯನಿರ್ಣಾಯಕ ಶಿಕ್ಷೆಯನ್ನು ಪಡೆದುಕೊಳ್ಳುವರು

[ಪುಟ 22ರಲ್ಲಿರುವ ಚಿತ್ರಗಳು]

ಪ್ರೀತಿಯಿಂದ ಪ್ರಚೋದಿತರಾದ ಹಿರಿಯರು ಸಂಶೋಧನೆಯನ್ನು ಮಾಡುವುದರಲ್ಲಿ ಮತ್ತು ತಪ್ಪಿತಸ್ಥರಿಗೆ ಸಹಾಯಮಾಡುವುದರಲ್ಲಿ ಸಮಯವನ್ನು ವ್ಯಯಿಸುತ್ತಾರೆ

[ಪುಟ 23ರಲ್ಲಿರುವ ಚಿತ್ರಗಳು]

ಹೆತ್ತವರು ತಾಳ್ಮೆಯಿಂದ ಮತ್ತು ಪ್ರೀತಿಯಿಂದ ‘ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯನ್ನು’ ಕೊಡುತ್ತಾರೆ