ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ, ಯೆಹೋವನಿಗೆ ಯೋಗ್ಯರಾಗಿ ನಡೆಯಿರಿ

ಯುವ ಜನರೇ, ಯೆಹೋವನಿಗೆ ಯೋಗ್ಯರಾಗಿ ನಡೆಯಿರಿ

ಯುವ ಜನರೇ, ಯೆಹೋವನಿಗೆ ಯೋಗ್ಯರಾಗಿ ನಡೆಯಿರಿ

ಕೆಲವು ಕ್ರೈಸ್ತ ಯುವ ಜನರು ತತ್ಕಾಲಕ್ಕೆ ತಮ್ಮ ಕುಟುಂಬ ಹಾಗೂ ಸಭೆಯಿಂದ ದೂರದಲ್ಲಿ ವಾಸಿಸಬೇಕಾಗಿ ಬಂದಿದೆ. ಕೆಲವರು ಇದನ್ನು ತಮ್ಮ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ಮಾಡಿದ್ದಾರೆ. ಇನ್ನಿತರರು, ತಾವು ಈ ಲೋಕದ ವ್ಯವಹಾರಗಳ ಸಂಬಂಧದಲ್ಲಿ ತೆಗೆದುಕೊಂಡಿರುವ ತಟಸ್ಥ ನಿಲುವಿನ ಕಾರಣದಿಂದ ತಮ್ಮ ಮನೆಯನ್ನು ಬಿಟ್ಟುಬಿಡಬೇಕಾಗಿ ಬಂದಿದೆ. (ಯೆಶಾಯ 2:4; ಯೋಹಾನ 17:16) ಕೆಲವೊಂದು ದೇಶಗಳಲ್ಲಿ, ಸಮಗ್ರತೆಯನ್ನಿಡುವ ಯುವ ಜನರಿಗೆ ‘ಕೈಸರನು’ ಸೆರೆಮನೆವಾಸವನ್ನೊ ಅಥವಾ ಯಾವುದೊ ಸಾಮುದಾಯಿಕ ಕೆಲಸವನ್ನೊ ವಿಧಿಸಿದ್ದಾನೆ. *​—ಮಾರ್ಕ 12:17; ತೀತ 3:​1, 2.

ಈ ಯುವ ಜನರು ತಮ್ಮ ತಟಸ್ಥ ನಿಲುವಿಗಾಗಿ ಸೆರೆಮನೆವಾಸವನ್ನು ಅನುಭವಿಸುತ್ತಿರುವಾಗ, ವಿಸ್ತೃತ ಕಾಲಾವಧಿಯ ವರೆಗೆ ಅಪರಾಧಿಗಳೊಂದಿಗೆ ಇರುವ ಪ್ರಸಂಗ ಎದುರಾಗಬಹುದು. ಅಲ್ಲದೆ, ಇನ್ನಿತರ ಕಾರಣಗಳಿಗಾಗಿಯೂ ಮನೆಯಿಂದ ದೂರವಿರುವವರು ಸಹ ಒಂದು ನೀತಿಗೆಟ್ಟ ಪರಿಸರದಲ್ಲಿ ಕೆಲಸಮಾಡುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಅಂಥ ಒಂದು ಸನ್ನಿವೇಶಕ್ಕೆ ತಳ್ಳಲ್ಪಟ್ಟಿರುವ ಈ ಯುವ ಕ್ರೈಸ್ತರು ಇಲ್ಲವೆ ಇನ್ನಿತರರು, ‘ದೇವರಿಗೆ ಯೋಗ್ಯರಾಗಿ ನಡೆಯುತ್ತಾ’ ಹೋಗಲು ಪ್ರಯತ್ನಿಸುತ್ತಿರುವಾಗ ಒತ್ತಡಗಳನ್ನೂ ಒತ್ತಾಯಪೂರ್ವಕ ಬೇಡಿಕೆಗಳನ್ನೂ ಯಶಸ್ವಿಯಾಗಿ ಹೇಗೆ ನಿಭಾಯಿಸಬಲ್ಲರು? (1 ಥೆಸಲೊನೀಕ 2:12) ಮುಂದೆ ಏಳಬಹುದಾದ ಯಾವುದೇ ಅಹಿತಕರ ಪರಿಸ್ಥಿತಿಗಳನ್ನು ಎದುರಿಸಲು ಹೆತ್ತವರು ಅವರಿಗೆ ಹೇಗೆ ಸಹಾಯಮಾಡಬಲ್ಲರು?​—ಜ್ಞಾನೋಕ್ತಿ 22:3.

ವಿಶಿಷ್ಠ ಪಂಥಾಹ್ವಾನಗಳು

ಟೇಕಸ್‌ ಎಂಬ 21 ವರ್ಷ ಪ್ರಾಯದ ಯುವಕನು 37 ತಿಂಗಳುಗಳ ವರೆಗೆ ಮನೆಯಿಂದ ದೂರದಲ್ಲಿರುವಂತೆ ಒತ್ತಾಯಿಸಲ್ಪಟ್ಟನು. ಅವನು ಹೇಳುವುದು: “ನನ್ನ ಹೆತ್ತವರ ಸಂರಕ್ಷಕ ಆರೈಕೆ ಹಾಗೂ ನನ್ನ ಉತ್ತಮ ಪರಿಚಯವಿದ್ದ ಹಿರಿಯರ ಪ್ರೀತಿಯ ಮೇಲ್ವಿಚಾರಣೆಯಿಂದ ದೂರವಿರುವುದು ಕಷ್ಟಕರವಾಗಿತ್ತು ಮತ್ತು ಹೆದರಿಕೆಯನ್ನುಂಟುಮಾಡಿತು.” * ಅವನು ಕೂಡಿಸುವುದು: “ಒಮ್ಮೊಮ್ಮೆ ತೀರ ನಿಸ್ಸಹಾಯಕ ಭಾವನೆಯು ನನ್ನನ್ನು ಮುತ್ತಿಕೊಳ್ಳುತ್ತಿತ್ತು.” ಇಪ್ಪತ್ತು ವರ್ಷ ಪ್ರಾಯದ ಪೀಟ್ರೊಸ್‌, ಎರಡಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಮನೆಯಿಂದ ದೂರವಿರಬೇಕಾಯಿತು. ಅವನು ಒಪ್ಪಿಕೊಳ್ಳುವುದು: “ನನ್ನ ಜೀವನದಲ್ಲೇ ಮೊಟ್ಟಮೊದಲ ಬಾರಿ, ಮನೋರಂಜನೆ ಮತ್ತು ಸಹವಾಸಗಳ ಕುರಿತಾಗಿ ನಾನು ನಿರ್ಣಯಗಳನ್ನು ಮಾಡಬೇಕಾಯಿತು, ಮತ್ತು ನಾನು ಮಾಡುತ್ತಿದ್ದ ಆಯ್ಕೆಗಳು ಯಾವಾಗಲೂ ಒಳ್ಳೆಯದ್ದಾಗಿರುತ್ತಿರಲಿಲ್ಲ.” ಆನಂತರ ಅವನು ಹೇಳಿಕೆನೀಡುವುದು: “ಸಿಕ್ಕಿದಂಥ ಹೆಚ್ಚಿನ ಸ್ವಾತಂತ್ರ್ಯದ ಜೊತೆಯಲ್ಲೇ ಬಂದಿರುವ ಹೆಚ್ಚಿನ ಜವಾಬ್ದಾರಿಯಿಂದಾಗಿ ನನಗೆ ಕೆಲವೊಮ್ಮೆ ಹೆದರಿಕೆಯಾಗುತ್ತಿತ್ತು.” ಇಂಥ ಸನ್ನಿವೇಶಗಳಲ್ಲಿರುವ ಕ್ರೈಸ್ತ ಯುವ ಜನರೊಂದಿಗೆ ಕ್ರಮವಾಗಿ ಸಂಪರ್ಕಕ್ಕೆ ಬರುವ ಒಬ್ಬ ಕ್ರೈಸ್ತ ಹಿರಿಯನಾದ ಟಾಸೋಸ್‌ ಹೇಳಿದ್ದು: “ಅವಿಶ್ವಾಸಿ ಸಮಾನಸ್ಥರ ಅಶುದ್ಧ ಮಾತುಗಳು, ದಂಗೆಕೋರತನ, ಮತ್ತು ಹಿಂಸಾತ್ಮಕ ನಡವಳಿಕೆಯು ಹುಷಾರಾಗಿರದ ಮತ್ತು ಸುಲಭಭೇದ್ಯರಾಗಿರುವ ಯುವ ಜನರಿಗೆ ಅಂಟಬಹುದು.”

ಬೈಬಲ್‌ ಮೂಲತತ್ತ್ವಗಳಿಗಾಗಿ ಗೌರವವಿಲ್ಲದಿರುವಂಥ ಜನರ ನಡುವೆ ವಾಸಿಸುವಾಗ ಮತ್ತು ಕೆಲಸಮಾಡುತ್ತಿರುವಾಗ, ಈ ರೀತಿಯ ಕ್ರೈಸ್ತ ಯುವ ಜನರು ತಮ್ಮ ಸಮಾನಸ್ಥರ ನೀತಿಗೆಟ್ಟ ಹಾಗೂ ಅಶಾಸ್ತ್ರೀಯ ಮಾರ್ಗಗಳನ್ನು ಅನುಕರಿಸುವ ಶೋಧನೆಯ ವಿರುದ್ಧ ಎಚ್ಚರವಾಗಿರಬೇಕು. (ಕೀರ್ತನೆ 1:1; 26:4; 119:9) ವೈಯಕ್ತಿಕ ಅಧ್ಯಯನ, ಕೂಟದ ಹಾಜರಿ ಹಾಗೂ ಕ್ಷೇತ್ರ ಸೇವೆಯ ಒಳ್ಳೆಯ ನಿಯತಕ್ರಮವನ್ನು ಕಾಪಾಡಿಕೊಳ್ಳುವುದು ಕಷ್ಟಕರವೆಂದು ತೋರಬಹುದು. (ಫಿಲಿಪ್ಪಿ 3:16) ಆತ್ಮಿಕ ಗುರಿಗಳನ್ನಿಟ್ಟು, ಅವುಗಳನ್ನು ಸಾಧಿಸುವುದು ಕೂಡ ಸುಲಭವಾಗಿರಲಿಕ್ಕಿಲ್ಲ.

ನಂಬಿಗಸ್ತ ಕ್ರೈಸ್ತ ಯುವ ಜನರು ನಿಶ್ಚಯವಾಗಿಯೂ, ತಮ್ಮ ನಡೆನುಡಿಯಿಂದ ಯೆಹೋವನನ್ನು ಮೆಚ್ಚಿಸಲು ಬಯಸುತ್ತಾರೆ. ತಮ್ಮ ಸ್ವರ್ಗೀಯ ತಂದೆಯಿಂದ ಕೊಡಲ್ಪಡುವ ಮನಸೆಳೆಯುವ ಆಮಂತ್ರಣಕ್ಕೆ ಓಗೊಡಲು ಅವರು ನಿಷ್ಠೆಯಿಂದ ಪ್ರಯತ್ನಿಸುತ್ತಾರೆ: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಅವರ ತೋರಿಕೆ ಹಾಗೂ ನಡವಳಿಕೆಯು, ಯೆಹೋವ ಹಾಗೂ ಆತನ ಜನರ ಕುರಿತಾಗಿ ಇತರರಲ್ಲಿ ಮೂಡುವ ಅಭಿಪ್ರಾಯದ ಮೇಲೆ ಪ್ರಭಾವಬೀರುತ್ತದೆ ಎಂಬುದನ್ನು ಅವರು ಅಂಗೀಕರಿಸುತ್ತಾರೆ.​—1 ಪೇತ್ರ 2:12.

ಶ್ಲಾಘನೀಯವಾದ ಸಂಗತಿಯೇನೆಂದರೆ, ಇಂಥ ಯುವ ಜನರಲ್ಲಿ ಬಹುತೇಕ ಮಂದಿ ತಮ್ಮ ಪ್ರಥಮ ಶತಮಾನದ ಸಹೋದರರಂತಿರಲು ತಮ್ಮಿಂದಾದುದ್ದೆಲ್ಲವನ್ನು ಮಾಡುತ್ತಾರೆ. ಈ ಸಹೋದರರ ಬಗ್ಗೆ ಅಪೊಸ್ತಲ ಪೌಲನು ಪ್ರಾರ್ಥಿಸಿದ್ದು: ‘[ಯೆಹೋವನಿಗೆ] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುತ್ತಾ, ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರಿ.’ (ಕೊಲೊಸ್ಸೆ 1:9-11) ಅಪರಿಚಿತ, ಪ್ರತಿಕೂಲ ಹಾಗೂ ವಿಗ್ರಹಾರಾಧಕ ಪರಿಸರದ ನಡುವೆಯೂ ದೇವರಿಗೆ ಯೋಗ್ಯರಾಗಿ ನಡೆಯುವುದರಲ್ಲಿ ಯಶಸ್ಸನ್ನು ಕಂಡ ದೇವಭೀರು ಯುವ ಜನರ ಹಲವಾರು ಉದಾಹರಣೆಗಳನ್ನು ಬೈಬಲ್‌ ಒದಗಿಸುತ್ತದೆ.​—ಫಿಲಿಪ್ಪಿ 2:15.

‘ಯೆಹೋವನು ಯೋಸೇಫನ ಸಂಗಡ ಇದ್ದನು’

ಯಾಕೋಬ ಹಾಗೂ ರಾಹೇಲರ ಮುದ್ದಿನ ಮಗನಾದ ಯೋಸೇಫನು ತುಂಬ ಎಳೇ ಪ್ರಾಯದಲ್ಲಿ, ತನ್ನ ದೇವಭೀರು ತಂದೆಯ ಸಂರಕ್ಷಣೆಯಿಂದ ದೂರದಲ್ಲಿದ್ದನು. ಅವನನ್ನು ಐಗುಪ್ತದಲ್ಲಿನ ದಾಸತ್ವಕ್ಕೆ ಮಾರಲಾಗಿತ್ತು. ಹಾಗಿದ್ದರೂ ಯೋಸೇಫನು ಒಬ್ಬ ಶ್ರಮಜೀವಿ, ಭರವಸಾರ್ಹ ವ್ಯಕ್ತಿ, ಮತ್ತು ನೈತಿಕತೆಯುಳ್ಳ ಯುವ ಪುರುಷನಾಗಿ ಪ್ರಶಂಸಾರ್ಹ ಮಾದರಿಯನ್ನಿಟ್ಟನು. ಯೆಹೋವನ ಆರಾಧಕನಾಗಿರದ ಪೋಟೀಫರನಿಗಾಗಿ ಕತ್ತೆಚಾಕರಿಯನ್ನು ಮಾಡುತ್ತಿದ್ದರೂ, ಯೋಸೇಫನು ಆತ್ಮನಿಷ್ಠೆಯಿಂದ ಮತ್ತು ಶ್ರದ್ಧೆಯಿಂದ ಕೆಲಸಮಾಡುತ್ತಿದ್ದನು. ಇದು ಕಟ್ಟಕಡೆಗೆ ಅವನ ಧಣಿಯು ತನ್ನ ಮನೆಯ ಎಲ್ಲಾ ವಹಿವಾಟನ್ನು ಅವನ ಕೈಗೊಪ್ಪಿಸುವಂತೆ ನಡೆಸಿತು. (ಆದಿಕಾಂಡ 39:​2-6) ಯೋಸೇಫನು ಯೆಹೋವನ ಕಡೆಗಿನ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು, ಮತ್ತು ಇದರಿಂದಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟಾಗಲೂ, “ಸಮಗ್ರತೆಯನ್ನು ಕಾಪಾಡಿ ಏನು ಪ್ರಯೋಜನ?” ಎಂದು ಅವನು ಹೇಳಲಿಲ್ಲ. ಅವನು ಸೆರೆಮನೆಯಲ್ಲಿದ್ದಾಗಲೂ ಉತ್ತಮ ಗುಣಗಳನ್ನು ಪ್ರದರ್ಶಿಸಿದನು, ಮತ್ತು ಸ್ವಲ್ಪ ಸಮಯದೊಳಗೆ ಅವನಿಗೆ ಸೆರೆಮನೆಯ ಕಾರ್ಯಾಚರಣೆಯಲ್ಲಿ ಅನೇಕ ಕೆಲಸಗಳ ಜವಾಬ್ದಾರಿಯನ್ನು ವಹಿಸಲಾಯಿತು. (ಆದಿಕಾಂಡ 39:​17-22) ದೇವರು ಅವನನ್ನು ಆಶೀರ್ವದಿಸಿದನು, ಮತ್ತು ಆದಿಕಾಂಡ 39:23ರಲ್ಲಿ ತಿಳಿಸಲ್ಪಟ್ಟಿರುವಂತೆ, ‘ಯೆಹೋವನು ಯೋಸೇಫನ ಸಂಗಡ ಇದ್ದನು.’

ತನ್ನ ದೇವಭೀರು ಕುಟುಂಬದಿಂದ ದೂರದಲ್ಲಿದ್ದ ಯೋಸೇಫನು, ತನ್ನ ಸುತ್ತಲೂ ಇದ್ದ ವಿಧರ್ಮಿಗಳ ನಡತೆಯನ್ನು ಮೈಗೂಡಿಸಿಕೊಳ್ಳುತ್ತಾ, ಐಗುಪ್ತದ ಅನೈತಿಕ ಜೀವನ ರೀತಿಯನ್ನು ಅನುಕರಿಸುವುದು ಎಷ್ಟು ಸುಲಭವಾಗಿರುತ್ತಿತ್ತು! ಅದರ ಬದಲು, ಅವನು ದೈವಿಕ ಮೂಲತತ್ತ್ವಗಳಿಗೆ ಅಂಟಿಕೊಂಡಿದ್ದು, ಅತ್ಯಂತ ಬಲವಾದ ಪ್ರಲೋಭನೆಗಳೆದುರಿನಲ್ಲೂ ತನ್ನ ಶುದ್ಧ ನಿಲುವನ್ನು ಕಾಪಾಡಿಕೊಂಡನು. ತನ್ನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವಂತೆ ಪೋಟೀಫರನ ಹೆಂಡತಿಯು ಅವನನ್ನು ಪದೇಪದೇ ಪ್ರೇರಿಸಿದಾಗಲೂ, ಅವನ ದೃಢ ಉತ್ತರವು ಒಂದೇ ಆಗಿತ್ತು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ?”.​—ಆದಿಕಾಂಡ 39:​7-9.

ಇಂದು ಸಾಕ್ಷಿ ಯುವ ಜನರು, ಅಯೋಗ್ಯ ಸಹವಾಸ, ಅನೈತಿಕ ಮನೋರಂಜನೆ, ಅಶ್ಲೀಲ ಸಾಹಿತ್ಯ, ಮತ್ತು ಕೀಳ್ಮಟ್ಟದ ಸಂಗೀತದ ಕುರಿತಾಗಿ ಕೊಡಲ್ಪಡುವ ಬೈಬಲಾಧಾರಿತ ಎಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ. “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು” ಎಂಬುದನ್ನು ಅವರು ಗ್ರಹಿಸಿಕೊಳ್ಳುತ್ತಾರೆ.​—ಜ್ಞಾನೋಕ್ತಿ 15:3.

ಮೋಶೆಯು ‘ಪಾಪಭೋಗವನ್ನು’ ತೊರೆದನು

ಮೋಶೆಯು ಫರೋಹನ ಆಸ್ಥಾನದಲ್ಲಿನ ವಿಗ್ರಹಾರಾಧಕ ಹಾಗೂ ಭೋಗಾನ್ವೇಷಿ ಪರಿಸರದಲ್ಲಿ ಬೆಳೆದನು. ಬೈಬಲ್‌ ಅವನ ಕುರಿತಾಗಿ ಹೀಗನ್ನುತ್ತದೆ: “ಮೋಶೆಯು . . . ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.”​—ಇಬ್ರಿಯ 11:24, 25.

ಲೋಕದೊಂದಿಗಿನ ಸ್ನೇಹವು ಕೆಲವೊಂದು ಲಾಭಗಳನ್ನು ತರಬಹುದು, ಆದರೆ ಅವು ತಾತ್ಕಾಲಿಕವೇ. ಹೆಚ್ಚೆಂದರೆ ಅವು ಈ ಲೋಕಕ್ಕೆ ಉಳಿದಿರುವ ಸಮಯದ ವರೆಗೆ ಬಾಳಬಲ್ಲವು ಅಷ್ಟೇ. (1 ಯೋಹಾನ 2:​15-17) ಆದುದರಿಂದ ಮೋಶೆಯ ಮಾದರಿಯನ್ನು ಅನುಸರಿಸುವುದು ಹೆಚ್ಚು ಉತ್ತಮವಲ್ಲವೇ? “ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 11:27) ತನ್ನ ದೇವಭೀರು ಪೂರ್ವಜರ ಆತ್ಮಿಕ ಪರಂಪರೆಯ ಮೇಲೆ ಅವನು ತನ್ನ ಗಮನವನ್ನು ಕೇಂದ್ರೀಕರಿಸಿದನು. ಅವನು ಯೆಹೋವನ ಉದ್ದೇಶವನ್ನೇ ತನ್ನ ಜೀವಿತದ ಉದ್ದೇಶವನ್ನಾಗಿ ಮಾಡುತ್ತಾ, ದೇವರ ಚಿತ್ತವನ್ನು ಮಾಡುವುದನ್ನು ತನ್ನ ಗುರಿಯಾಗಿಟ್ಟನು.​—ವಿಮೋಚನಕಾಂಡ 2:11; ಅ. ಕೃತ್ಯಗಳು 7:​23, 25.

ದೇವಭೀರು ಯುವ ಜನರು, ಭಕ್ತಿರಹಿತ ಹಾಗೂ ಸ್ನೇಹಭಾವವಿಲ್ಲದ ಪರಿಸರದಲ್ಲಿ ಇರುವುದಾದರೂ ವೈಯಕ್ತಿಕ ಅಧ್ಯಯನದ ಮೂಲಕ ‘ಅದೃಶ್ಯನಾಗಿರುವಾತನನ್ನು’ ಹೆಚ್ಚು ಉತ್ತಮವಾಗಿ ತಿಳಿಯುತ್ತಾ ಯೆಹೋವನೊಂದಿಗಿರುವ ತಮ್ಮ ವೈಯಕ್ತಿಕ ಸಂಬಂಧವನ್ನು ಬಲಪಡಿಸಬಲ್ಲರು. ಕ್ರಮವಾದ ಕೂಟದ ಹಾಜರಿ ಹಾಗೂ ಕ್ಷೇತ್ರ ಸೇವೆಯನ್ನು ಒಳಗೊಂಡಿರುವ ಕ್ರೈಸ್ತ ಚಟುವಟಿಕೆಗಳಿಂದ ತುಂಬಿರುವ ಒಂದು ಕಾರ್ಯಕ್ರಮವು, ಈ ಯುವ ಜನರಿಗೆ ತಮ್ಮ ಮನಸ್ಸನ್ನು ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಹಾಯಮಾಡುವುದು. (ಕೀರ್ತನೆ 63:6; 77:12) ಅವರು ಮೋಶೆಗಿದ್ದಷ್ಟು ಬಲವಾದ ನಂಬಿಕೆ ಹಾಗೂ ನಿರೀಕ್ಷೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಯೆಹೋವನ ಸ್ನೇಹಿತರಾಗಿರಲು ಸಂತೋಷಪಡುತ್ತಾ, ಅವರು ತಮ್ಮ ಆಲೋಚನೆ ಹಾಗೂ ಕ್ರಿಯೆಗಳನ್ನು ಆತನ ಮೇಲೆ ಕೇಂದ್ರೀಕರಿಸಲು ಪ್ರಯಾಸಪಡಬೇಕು.

ಅವಳು ತನ್ನ ನಾಲಗೆಯನ್ನು ದೇವಸ್ತುತಿಗಾಗಿ ಬಳಸಿದಳು

ಮನೆಯಿಂದ ದೂರದಲ್ಲಿರುವಾಗ ಆದರ್ಶಪ್ರಾಯಳಾಗಿ ಉಳಿದ ಇನ್ನೊಬ್ಬ ಯುವ ವ್ಯಕ್ತಿಯು, ಆ ಇಸ್ರಾಯೇಲ್ಯ ಹುಡುಗಿಯಾಗಿದ್ದಳು. ದೇವರ ಪ್ರವಾದಿಯಾದ ಎಲೀಷನ ದಿನಗಳಲ್ಲಿ ಸಿರಿಯದವರು ಅವಳನ್ನು ಬಂಧಿಯಾಗಿ ಕೊಂಡೊಯ್ದಿದ್ದರು. ಅವಳು ಸಿರಿಯದ ಸೇನಾಪತಿಯಾಗಿದ್ದ ಕುಷ್ಠರೋಗಿ ನಾಮಾನನ ಹೆಂಡತಿಗೆ ದಾಸಿಯಾದಳು. ಈ ಹುಡುಗಿಯು ತನ್ನ ಒಡತಿಗೆ ಹೇಳಿದ್ದು: “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿ ಮಾಡುತ್ತಿದ್ದನು.” ಅವಳು ಕೊಟ್ಟ ಸಾಕ್ಷಿಯಿಂದಾಗಿ, ನಾಮಾನನು ಇಸ್ರಾಯೇಲಿನಲ್ಲಿದ್ದ ಎಲೀಷನ ಬಳಿಗೆ ಹೋದನು ಮತ್ತು ಕುಷ್ಠರೋಗದಿಂದ ಮುಕ್ತನಾದನು. ಅದಲ್ಲದೆ, ನಾಮಾನನು ಯೆಹೋವನ ಆರಾಧಕನೂ ಆದನು.​—2 ಅರಸುಗಳು 5:​1-3, 13-19.

ಈ ಹುಡುಗಿಯ ಉದಾಹರಣೆಯು, ಯುವ ಜನರು ತಮ್ಮ ಹೆತ್ತವರಿಂದ ದೂರದಲ್ಲಿರುವಾಗಲೂ, ತಮ್ಮ ನಾಲಗೆಯನ್ನು ದೇವರಿಗೆ ಮಾನ ತರುವಂಥ ರೀತಿಯಲ್ಲಿ ಬಳಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆ ಹುಡುಗಿಗೆ, “ಹೊಲಸು ಮಾತು” ಇಲ್ಲವೆ “ಹುಚ್ಚು ಮಾತು”ಗಳನ್ನು ಬಳಸುವ ಅಭ್ಯಾಸವಿರುತ್ತಿದ್ದಲ್ಲಿ, ಸಂದರ್ಭ ಒದಗಿಬಂದಾಗ ಸ್ವಲ್ಪವೂ ಹಿಂಜರಿಯದೇ ತನ್ನ ನಾಲಗೆಯನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಬಳಸಲು ಸಾಧ್ಯವಾಗುತ್ತಿತ್ತೊ? (ಎಫೆಸ 5:4; ಜ್ಞಾನೋಕ್ತಿ 15:2) ತನ್ನ ತಟಸ್ಥ ನಿಲುವಿಗಾಗಿ ಸೆರೆಮನೆಗೆ ಹಾಕಲ್ಪಟ್ಟ, 20ಗಳ ಆರಂಭದ ಪ್ರಾಯದ ನೀಕೊಸ್‌ ಎಂಬ ಯೌವನಸ್ಥನು ನೆನಪಿಸಿಕೊಳ್ಳುವುದು: “ನಾನು ಇತರ ಕೆಲವು ಯುವ ಸಹೋದರರೊಂದಿಗೆ, ಹೆತ್ತವರಿಂದ ಹಾಗೂ ಸಭೆಯ ಅಧಿಕಾರದಿಂದ ದೂರದಲ್ಲಿ ಒಂದು ವ್ಯವಸಾಯಿಕ ಸೆರೆಮನೆಯಲ್ಲಿದ್ದಾಗ, ನಮ್ಮ ಮಾತಿನ ಗುಣಮಟ್ಟವು ಹದಗೆಡುತ್ತಿರುವುದನ್ನು ಗಮನಿಸಿದೆ. ಇದು ಖಂಡಿತವಾಗಿಯೂ ಯೆಹೋವನಿಗೆ ಸ್ತುತಿಯನ್ನು ತರಲಿಲ್ಲ.” ಸಂತೋಷಕರವಾಗಿ, ನೀಕೊಸ್‌ ಮತ್ತು ಇತರರಿಗೆ ಈ ವಿಷಯದಲ್ಲಿ ಪೌಲನು ಕೊಟ್ಟ ಸಲಹೆಯನ್ನು ಪಾಲಿಸಲು ಸಹಾಯವನ್ನು ನೀಡಲಾಗಿದೆ. ಆ ಸಲಹೆಯು ಹೀಗಿದೆ: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು.”​—ಎಫೆಸ 5:3.

ಯೆಹೋವನು ಅವರಿಗೆ ನೈಜವಾಗಿದ್ದನು

ಪ್ರಾಚೀನ ಬಾಬೆಲಿನಲ್ಲಿ ದಾನಿಯೇಲನ ಮೂವರು ಸಂಗಡಿಗರ ಅನುಭವವು, ಚಿಕ್ಕಪುಟ್ಟ ವಿಷಯಗಳಲ್ಲಿ ನಂಬಿಗಸ್ತರಾಗಿರುವುದು ದೊಡ್ಡ ವಿಷಯಗಳಲ್ಲಿ ನಂಬಿಗಸ್ತರಾಗಿರುವುದಕ್ಕೆ ನಡೆಸುತ್ತದೆಂದು ಯೇಸು ತಿಳಿಸಿದಂಥ ಮೂಲತತ್ತ್ವದ ಸತ್ಯತೆಗೆ ಸಾಕ್ಷ್ಯವನ್ನು ಕೊಡುತ್ತದೆ. (ಲೂಕ 16:10) ಮೋಶೆಯ ಧರ್ಮಶಾಸ್ತ್ರವು ನಿಷೇಧಿಸಿದ ಆಹಾರವನ್ನು ತಿನ್ನುವ ಸಮಸ್ಯೆಯನ್ನು ಎದುರಿಸಿದಾಗ, ತಾವು ಪರದೇಶದಲ್ಲಿದ್ದೇವೆ, ಮತ್ತು ಇದರ ಬಗ್ಗೆ ನಾವು ಏನೂ ಮಾಡಲಾರೆವೆಂದು ನೆನಸಿ ಅವರು ವಿಷಯವನ್ನು ತೇಲಿಸಿಬಿಡಬಹುದಿತ್ತು. ಆದರೆ ಚಿಕ್ಕ ವಿಷಯವೆಂದು ತೋರಿದಂಥ ಸಂಗತಿಯನ್ನೂ ಅವರು ಗಂಭೀರವಾಗಿ ತೆಗೆದುಕೊಂಡದ್ದಕ್ಕಾಗಿ ಅವರಿಗೆಂಥ ಆಶೀರ್ವಾದವು ಸಿಕ್ಕಿತು! ಅವರು ರಾಜನ ರಸಭಕ್ಷ್ಯಗಳನ್ನು ತಿನ್ನುತ್ತಿದ್ದ ಬೇರೆಲ್ಲಾ ಬಂಧಿಗಳಿಗಿಂತಲೂ ಹೆಚ್ಚು ಆರೋಗ್ಯವಂತರೂ ಬುದ್ಧಿವಂತರೂ ಆಗಿ ಪರಿಣಮಿಸಿದರು. ಈ ಚಿಕ್ಕ ಚಿಕ್ಕ ವಿಷಯಗಳಲ್ಲಿ ನಂಬಿಗಸ್ತಿಕೆಯನ್ನು ತೋರಿಸುವುದು, ನಿಸ್ಸಂದೇಹವಾಗಿಯೂ ಅವರನ್ನು ಬಲಪಡಿಸಿತು. ಹೀಗಿರುವುದರಿಂದ, ವಿಗ್ರಹಾರಾಧನೆ ಸಂಬಂಧಿತ ಒಂದು ಮೂರ್ತಿಯ ಮುಂದೆ ಅಡ್ಡಬೀಳುವ ಹೆಚ್ಚು ಕಠಿನ ಪರೀಕ್ಷೆಯು ಬಂದಾಗ, ಅವರು ರಾಜಿಮಾಡಿಕೊಳ್ಳಲು ನಿರಾಕರಿಸಿದರು.​—ದಾನಿಯೇಲ 1:​3-21; 3:​1-30.

ಈ ಮೂರು ಮಂದಿ ಯುವಕರಿಗೆ ಯೆಹೋವನು ನೈಜ ವ್ಯಕ್ತಿಯಾಗಿದ್ದನು. ಅವರು ತಮ್ಮ ಮನೆ ಹಾಗೂ ದೇವರ ಆರಾಧನೆಯ ಕೇಂದ್ರದಿಂದ ತುಂಬ ದೂರದಲ್ಲಿದ್ದರೂ, ಈ ಲೋಕದ ಕಳಂಕವು ತಮಗೆ ಹತ್ತದಂತೆ ನೋಡಲು ದೃಢಸಂಕಲ್ಪವನ್ನು ಮಾಡಿದ್ದರು. (2 ಪೇತ್ರ 3:14) ಯೆಹೋವನೊಂದಿಗಿನ ಅವರ ಸಂಬಂಧವು ಅವರಿಗೆಷ್ಟು ಅಮೂಲ್ಯವಾಗಿತ್ತೆಂದರೆ ಅವರು ಅದಕ್ಕಾಗಿ ತಮ್ಮ ಜೀವವನ್ನೇ ತ್ಯಾಗಮಾಡಲು ಸಿದ್ಧರಿದ್ದರು.

ಯೆಹೋವನು ನಿಮ್ಮ ಕೈಬಿಡನು

ತಾವು ಪ್ರೀತಿಸುವ ಮತ್ತು ಭರವಸೆಯಿಡುವವರಿಂದ ಯುವ ಜನರು ದೂರವಿರುವಾಗ, ಅವರಿಗೆ ಒಂದು ರೀತಿಯ ಅಭದ್ರತೆಯ ಭಾವನೆ, ಅನಿಶ್ಚಿತತೆ, ಮತ್ತು ಹೆದರಿಕೆ ಉಂಟಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ. ಹಾಗಿದ್ದರೂ, ಅವರನ್ನು “ಯೆಹೋವನು ತಳ್ಳಿಬಿಡುವುದಿಲ್ಲ” ಎಂಬ ಪೂರ್ಣ ಭರವಸೆಯೊಂದಿಗೆ ಅವರು ತಮ್ಮ ಪರೀಕ್ಷೆಗಳನ್ನೂ ಸಂಕಟಗಳನ್ನೂ ಎದುರಿಸಬಲ್ಲರು. (ಕೀರ್ತನೆ 94:14) ಇಂಥ ಯುವ ಜನರು ‘ನೀತಿಯ ನಿಮಿತ್ತ ಬಾಧೆಪಟ್ಟರೆ,’ ಅವರು ‘ನೀತಿಯ ದಾರಿಯಲ್ಲಿಯೇ’ ನಡೆಯುತ್ತಾ ಇರುವಂತೆ ಯೆಹೋವನು ಸಹಾಯಮಾಡುವನು.​—1 ಪೇತ್ರ 3:14; ಜ್ಞಾನೋಕ್ತಿ 8:20.

ಯೆಹೋವನು, ಯೋಸೇಫ, ಮೋಶೆ, ಇಸ್ರಾಯೇಲ್ಯ ದಾಸಿ ಹುಡುಗಿ, ಮತ್ತು ಆ ಮೂರು ನಂಬಿಗಸ್ತ ಇಬ್ರಿಯ ಯುವಕರನ್ನು ಸತತವಾಗಿ ಬಲಪಡಿಸಿ, ಹೇರಳವಾದ ಪ್ರತಿಫಲವನ್ನು ಕೊಟ್ಟನು. ‘ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡುತ್ತಿರುವವರನ್ನು’ ಪೋಷಿಸಲಿಕ್ಕಾಗಿ ಆತನು ಇಂದು ತನ್ನ ಪವಿತ್ರಾತ್ಮ, ತನ್ನ ವಾಕ್ಯ ಮತ್ತು ತನ್ನ ಸಂಸ್ಥೆಯನ್ನು ಉಪಯೋಗಿಸುತ್ತಾ, ಅವರ ಮುಂದೆ ‘ನಿತ್ಯಜೀವದ’ ಪ್ರತಿಫಲವನ್ನು ಇಟ್ಟಿದ್ದಾನೆ. (1 ತಿಮೊಥೆಯ 6:​11, 12) ಹೌದು, ಯೆಹೋವನಿಗೆ ಯೋಗ್ಯರಾಗಿ ನಡೆಯಲು ಸಾಧ್ಯವಿದೆ ಮಾತ್ರವಲ್ಲ, ಅದು ವಿವೇಕಯುತವಾದ ಕೆಲಸವೂ ಆಗಿದೆ.​—ಜ್ಞಾನೋಕ್ತಿ 23:​15, 19.

[ಪಾದಟಿಪ್ಪಣಿಗಳು]

^ ಪ್ಯಾರ. 2 ಕಾವಲಿನಬುರುಜು ಪತ್ರಿಕೆಯ ಮೇ 1, 1996ರ 18-20ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 5 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 25ರಲ್ಲಿರುವ ಚೌಕ]

ಹೆತ್ತವರೇ​—ನಿಮ್ಮ ಮಕ್ಕಳನ್ನು ಸಿದ್ಧಗೊಳಿಸಿರಿ!

“ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ.” (ಕೀರ್ತನೆ 127:4) ಒಂದು ಅಂಬು ಇಲ್ಲವೆ ಬಾಣವು, ಆಕಸ್ಮಿಕವಾಗಿ ತನ್ನ ಗುರಿಯನ್ನು ತಲಪುವುದಿಲ್ಲ. ಅದನ್ನು ನಿಪುಣವಾಗಿ ಗುರಿಯಿಟ್ಟು ಹೊಡೆಯಬೇಕು. ಅದೇ ರೀತಿಯಲ್ಲಿ, ಹೆತ್ತವರಿಂದ ಸರಿಯಾದ ಮಾರ್ಗದರ್ಶನವನ್ನು ಪಡೆಯದಿದ್ದರೆ, ಮನೆಯಿಂದ ದೂರದಲ್ಲಿ ವಾಸಿಸುವುದರ ವಾಸ್ತವಿಕತೆಗಳನ್ನು ಎದುರಿಸಲು ಮಕ್ಕಳು ಸಿದ್ಧರಾಗಿರಲಿಕ್ಕಿಲ್ಲ.​—ಜ್ಞಾನೋಕ್ತಿ 22:6.

ಯುವ ಜನರಿಗೆ, ಹಿಂದೆಮುಂದೆ ಯೋಚಿಸದೆ ತಟ್ಟನೆ ಕ್ರಿಯೆಗೈಯುವ ಇಲ್ಲವೆ “ಯೌವನದ ಇಚ್ಛೆಗಳಿಗೆ” ಮಣಿಯುವ ಪ್ರವೃತ್ತಿಯಿರುತ್ತದೆ. (2 ತಿಮೊಥೆಯ 2:22) ಬೈಬಲು ಎಚ್ಚರಿಸುವುದು: “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” (ಜ್ಞಾನೋಕ್ತಿ 29:15) ಯೌವನಭರಿತ ನಡವಳಿಕೆಯ ಮೇಲೆ ಮಿತಿಗಳನ್ನಿಡಲು ತಪ್ಪುವುದರಿಂದ, ನಿಮ್ಮ ಮಗ ಇಲ್ಲವೆ ಮಗಳು, ಮನೆಯಿಂದ ದೂರದಲ್ಲಿ ವಾಸಿಸುವಾಗ ಬರುವ ಜೀವನದ ಕಷ್ಟಗಳನ್ನೂ ಒತ್ತಡಗಳನ್ನೂ ಎದುರಿಸಲು ಸಿದ್ಧರಾಗಿರುವುದಿಲ್ಲ.

ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಸ್ಪಷ್ಟ ಹಾಗೂ ಜವಾಬ್ದಾರಿಯುತವಾದ ರೀತಿಯಲ್ಲಿ ಈ ವಿಷಯಗಳ ವ್ಯವಸ್ಥೆಯಲ್ಲಿನ ಜೀವನದ ಕಷ್ಟಗಳು, ಒತ್ತಡಗಳು ಮತ್ತು ನೈಜತೆಗಳನ್ನು ವಿವರಿಸಿ ಹೇಳಬೇಕು. ಅವರು ನಿರಾಶಾವಾದಿಗಳಾಗಿರದೆ ಇಲ್ಲವೆ ನಕಾರಾತ್ಮಕವಾಗಿರದೇ, ಒಬ್ಬ ಯುವ ವ್ಯಕ್ತಿಯು, ಮನೆಯಿಂದ ದೂರದಲ್ಲಿ ಜೀವಿಸಬೇಕಾಗಿ ಬರುವಲ್ಲಿ ಅವನು ಎದುರಿಸಬೇಕಾಗುವ ಕಷ್ಟಕರ ಪರಿಸ್ಥಿತಿಗಳ ಬಗ್ಗೆ ವರ್ಣಿಸಬಹುದು. ಈ ತರಬೇತಿಯ ಜೊತೆಯಲ್ಲಿ ದೇವದತ್ತ ವಿವೇಕವು, “ಮೂಢರಿಗೆ [“ಅನನುಭವಿಗಳಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡುವವು.”​—ಜ್ಞಾನೋಕ್ತಿ 1:4.

ತಮ್ಮ ಮಕ್ಕಳ ಹೃದಯಗಳಲ್ಲಿ ದೈವಿಕ ಮೌಲ್ಯಗಳು ಹಾಗೂ ನೈತಿಕ ತತ್ತ್ವಗಳನ್ನು ತುಂಬಿಸುವ ಹೆತ್ತವರು, ಅವರು ಜೀವನದ ಪಂಥಾಹ್ವಾನಗಳನ್ನು ಯಶಸ್ವಿಯಾಗಿ ಎದುರಿಸುವಂತೆ ಶಕ್ತಗೊಳಿಸುತ್ತಾರೆ. ಕ್ರಮವಾದ ಕುಟುಂಬ ಬೈಬಲ್‌ ಅಧ್ಯಯನ, ಮುಕ್ತ ಸಂವಾದ, ಮತ್ತು ತಮ್ಮ ಮಕ್ಕಳ ಕ್ಷೇಮದಲ್ಲಿ ನಿಜವಾದ ಆಸಕ್ತಿಯು, ಅವರು ಸೋತುಹೋಗದೆ ಯಶಸ್ವಿಗಳಾಗುವಂತೆ ಮಾಡಬಲ್ಲದು. ಹೆತ್ತವರು ಸಕಾರಾತ್ಮಕವಾದ ಹಾಗೂ ಸಮಂಜಸವಾದ ವಿಧದಲ್ಲಿ, ಆದರೆ ಸಮತೂಕವಾದ ರೀತಿಯಲ್ಲಿ ದೈವಿಕ ತರಬೇತಿಯನ್ನು ಒದಗಿಸಬೇಕು. ಇದು ಮಕ್ಕಳು ಮುಂದೆ ತಮ್ಮ ಜೀವಿತದಲ್ಲಿ ತಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲಲು ಅವರನ್ನು ಸಿದ್ಧಪಡಿಸುವುದು. ಈ ಲೋಕದಲ್ಲಿ ಇದ್ದೂ, ಅದರ ಭಾಗವಾಗಿರದೇ ಇರುವುದು ಸಾಧ್ಯ ಎಂಬುದನ್ನು ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ಸ್ವಂತ ಮಾದರಿಯಿಂದ ಕಲಿಸಸಾಧ್ಯವಿದೆ.​—ಯೋಹಾನ 17:​15, 16.

[ಪುಟ 23ರಲ್ಲಿರುವ ಚಿತ್ರ]

ಕೆಲವು ಕ್ರೈಸ್ತ ಯುವ ಜನರು ತಮ್ಮ ಮನೆಗಳನ್ನು ಬಿಟ್ಟುಹೋಗಬೇಕಾಗಿದೆ

[ಪುಟ 24ರಲ್ಲಿರುವ ಚಿತ್ರಗಳು]

ಪ್ರಲೋಭನೆಗಳನ್ನು ವಿರೋಧಿಸುವ ಮೂಲಕ ಯುವ ಜನರು ಯೋಸೇಫನನ್ನು ಅನುಕರಿಸಿ ನೈತಿಕವಾಗಿ ಶುದ್ಧರಾಗಿ ಉಳಿಯಬಲ್ಲರು

[ಪುಟ 26ರಲ್ಲಿರುವ ಚಿತ್ರಗಳು]

ತನ್ನ ನಾಲಗೆಯನ್ನು ಯೆಹೋವನಿಗೆ ಮಹಿಮೆಯನ್ನು ತರಲಿಕ್ಕೋಸ್ಕರ ಉಪಯೋಗಿಸಿದ ಇಸ್ರಾಯೇಲ್ಯ ದಾಸಿ ಹುಡುಗಿಯನ್ನು ಅನುಕರಿಸಿರಿ