ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಚರ್ಚಿಗೆ ಹೋಗಲು ಕಾರಣ

ಅವರು ಚರ್ಚಿಗೆ ಹೋಗಲು ಕಾರಣ

ಅವರು ಚರ್ಚಿಗೆ ಹೋಗಲು ಕಾರಣ

“ರಿಪಬ್ಲಿಕ್‌ ಆಫ್‌ ಕೊರಿಯದಲ್ಲಿ ಈಗ ಅಮೆರಿಕಕ್ಕಿಂತಲೂ ಸುಮಾರು ನಾಲ್ಕುಪಟ್ಟು ಹೆಚ್ಚು ಪ್ರೆಸ್‌ಬಿಟೇರಿಯನ್ನರಿದ್ದಾರೆ.” ಕೊರಿಯ ದೇಶವನ್ನು ಕನ್‌ಫ್ಯೂಷಿಯನ್‌ ಅಥವಾ ಬೌದ್ಧ ಧರ್ಮ ಸಮಾಜವೆಂದು ಹೆಚ್ಚಿನ ಜನರು ನೆನಸುವುದರಿಂದ, ನ್ಯೂಸ್‌ವೀಕ್‌ ಪತ್ರಿಕೆಯಲ್ಲಿ ಬಂದಿರುವ ಈ ಹೇಳಿಕೆಯು ಅನೇಕ ಓದುಗರನ್ನು ಅಚ್ಚರಿಗೊಳಿಸಿದ್ದಿರಬಹುದು. ಇಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯ “ಕ್ರೈಸ್ತ” ಚರ್ಚುಗಳನ್ನು ಅಲ್ಲಿ ಕಾಣಸಾಧ್ಯವಿದೆ. ಸಾಮಾನ್ಯವಾಗಿ ಈ ಚರ್ಚುಗಳನ್ನು ಕೆಂಪು ನಿಯಾನ್‌ ಬೆಳಕಿನ ಶಿಲುಬೆಯಿಂದ ಗುರುತಿಸಬಹುದು. ಭಾನುವಾರಗಳಲ್ಲಿ ಜನರು ತಮ್ಮ ಕೈಯಲ್ಲಿ ಬೈಬಲನ್ನು ಹಿಡಿದುಕೊಂಡು, ಇಬ್ಬಿಬ್ಬರಾಗಿ ಅಥವಾ ಮೂರು ಮಂದಿಯಾಗಿ ಚರ್ಚಿಗೆ ಹೋಗುವುದನ್ನು ನೋಡುವುದು ಒಂದು ಸಾಮಾನ್ಯ ದೃಶ್ಯ. 1988ರ ಸಮೀಕ್ಷೆಗನುಸಾರ, ಕೊರಿಯದ ಸುಮಾರು 30 ಪ್ರತಿಶತದಷ್ಟು ಜನರು ಕ್ಯಾಥೊಲಿಕ್‌ ಅಥವಾ ಪ್ರಾಟೆಸ್ಟಂಟ್‌ ಚರ್ಚುಗಳಿಗೆ ಹೋಗುತ್ತಾರೆ. ಇದು, ಬೌದ್ಧರೆಂದು ಹೇಳಿಕೊಳ್ಳುವವರಿಗಿಂತಲೂ ಹೆಚ್ಚಿನ ಸಂಖ್ಯೆಯಾಗಿದೆ.

ಇಂದಿನ ದಿನಗಳಲ್ಲಿ, ಈ ರೀತಿಯಲ್ಲಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚರ್ಚಿಗೆ ಹೋಗುವ ಜನರನ್ನು ಕಾಣುವುದು ಅಸಾಧಾರಣ ಸಂಗತಿಯಾಗಿರುವುದಾದರೂ, ಇದು ಸಂಭವಿಸುತ್ತಿದೆ. ಕೇವಲ ಕೊರಿಯದಲ್ಲಿ ಮಾತ್ರವಲ್ಲ ಇತರ ಏಷಿಯನ್‌ ದೇಶಗಳಲ್ಲಿ ಮತ್ತು ಆಫ್ರಿಕ ಹಾಗೂ ಲ್ಯಾಟಿನ್‌ ಅಮೆರಿಕದಲ್ಲಿಯೂ ಇದು ಸಂಭವಿಸುತ್ತಿದೆ. ನಿರಾಸಕ್ತಿ ಮತ್ತು ಧರ್ಮದ ಕಡೆಗೆ ಉದಾಸೀನತೆಯು ಈ ಲೋಕದಲ್ಲಿ ತುಂಬಿರುವುದಾದರೂ ಅನೇಕ ಜನರು ಈಗಲೂ ದೇವರಲ್ಲಿ ಏಕೆ ನಂಬಿಕೆಯನ್ನಿಟ್ಟಿದ್ದಾರೆ? ಅವರೇಕೆ ಚರ್ಚಿಗೆ ಹೋಗುತ್ತಾರೆ?

ಗ್ಯಾಲಪ್‌ ಸಮೀಕ್ಷೆಯು ತಿಳಿಯಪಡಿಸಿದ್ದೇನೆಂದರೆ, ಕೊರಿಯದಲ್ಲಿ ಚರ್ಚಿಗೆ ಹೋಗುವ ಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಮನಶ್ಶಾಂತಿಯನ್ನು ಕಂಡುಕೊಳ್ಳಲು ಅಲ್ಲಿಗೆ ಹೋಗುತ್ತಾರೆ; ಮೂರರಲ್ಲಿ ಒಂದಂಶದಷ್ಟು ಜನರು ಮರಣದ ನಂತರ ಅಮರ ಜೀವನವನ್ನು ನಿರೀಕ್ಷಿಸುತ್ತಾರೆ; ಮತ್ತು 10ರಲ್ಲಿ ಒಬ್ಬ ವ್ಯಕ್ತಿಯು ಆರೋಗ್ಯ, ಐಶ್ವರ್ಯ ಹಾಗೂ ಯಶಸ್ಸನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.

ಚೀನಾದಲ್ಲಿ ಅನೇಕ ಜನರು, ಬಂಡವಾಳಶಾಹಿ ಹೆಬ್ಬಯಕೆಗಳು ಸಮತಾವಾದದ ಸಿದ್ಧಾಂತಗಳನ್ನು ಕ್ರಮೇಣವಾಗಿ ಸ್ಥಾನಪಲ್ಲಟಮಾಡಿದ ಫಲಿತಾಂಶವಾಗಿ ತಮ್ಮಲ್ಲಿ ಉಂಟಾದ ಆತ್ಮಿಕ ಶೂನ್ಯತೆಯನ್ನು ಭರ್ತಿಮಾಡಲು ಏನನ್ನಾದರೂ ಕಂಡುಕೊಳ್ಳುವ ನಿರೀಕ್ಷೆಯಿಂದ ಗುಂಪುಗುಂಪಾಗಿ ಚರ್ಚುಗಳಿಗೆ ಹೋಗುತ್ತಾರೆ. ಚೀನಾದಲ್ಲಿ ಪ್ರತಿ ವರುಷವೂ ಬೈಬಲಿನ ಕೋಟ್ಯಂತರ ಪ್ರತಿಗಳು ಮುದ್ರಿಸಲ್ಪಟ್ಟು, ವಿತರಿಸಲ್ಪಡುತ್ತವೆ ಮತ್ತು ಮಾವೋರವರ ಚಿಕ್ಕ ಕೆಂಪು ಪುಸ್ತಕವನ್ನು ಓದುವಷ್ಟೇ ಹುರುಪಿನಿಂದ ಜನರು ಬೈಬಲನ್ನೂ ಓದುತ್ತಾರೆ.

ಬ್ರಸಿಲ್‌ನಲ್ಲಿರುವ ಕೆಲವು ಕ್ಯಾಥೊಲಿಕರು​—ಮುಖ್ಯವಾಗಿ ಯುವ ಪೀಳಿಗೆಯವರು​—ಭವಿಷ್ಯತ್ತಿನಲ್ಲಿ ಸಂತೋಷಕರ ಜೀವನ ಸಿಗಲಿದೆ ಎಂಬ ವಾಗ್ದಾನದಲ್ಲಿ ತೃಪ್ತಿಯನ್ನು ಪಡೆಯುವ ಬದಲಾಗಿ ಈಗಲೇ ಸಂತೋಷಕರ ಜೀವನದ ವಾಗ್ದಾನವು ನೇರವೇರಲ್ಪಡಬೇಕೆಂದು ಬಯಸುತ್ತಾರೆ. ಟೂಡೂ ಎಂಬ ವಾರ್ತಾಪತ್ರಿಕೆಯು ತಿಳಿಸುವುದು: “‘70’ಗಳಲ್ಲಿ ಜನರ ಹೃದಮನವನ್ನು ಪ್ರಚೋದಿಸಿದಂಥದ್ದು ವಿಮೋಚನಾ ದೇವತಾಶಾಸ್ತ್ರವಾಗಿದ್ದರೆ, ಇಂದು ಅದು ಸಮೃದ್ಧಿಯ ದೇವತಾಶಾಸ್ತ್ರವಾಗಿದೆ.” ಬ್ರಿಟನ್‌ನಲ್ಲಿ ನಡೆಸಿದ ಸಮೀಕ್ಷೆಯು ಅಲ್ಲಿನ ಚರ್ಚ್‌ಹೋಕರನ್ನು, ತಮ್ಮ ಚರ್ಚಿನ ಕುರಿತು ಅವರಿಗೆ ಇಷ್ಟವಾದ ಒಂದು ವಿಷಯವನ್ನು ತಿಳಿಸುವಂತೆ ಕೇಳಿಕೊಂಡಿತು. ಅವರಲ್ಲಿ ಅನೇಕರು ತಮಗೆ ಇಷ್ಟವಾದ ಒಂದು ವಿಷಯವು ಸಾಹಚರ್ಯವಾಗಿದೆ ಎಂದು ಉತ್ತರಿಸಿದರು.

ಈ ಎಲ್ಲಾ ವಿಷಯಗಳು ತೋರಿಸುವದೇನೆಂದರೆ, ಈಗಲೂ ಕೆಲವು ಜನರಿಗೆ ದೇವರಲ್ಲಿ ನಂಬಿಕೆಯಿರುವುದಾದರೂ ಹೆಚ್ಚಿನವರು ಮುಂದಕ್ಕೆ ಏನು ಬರಲಿದೆ ಎಂಬುದಕ್ಕಿಂತಲೂ ಅಥವಾ ದೇವರಿಗಿಂತಲೂ ಹೆಚ್ಚಾಗಿ ತಾವು ಈಗ ಏನನ್ನು ಪಡೆದುಕೊಳ್ಳಬಲ್ಲೆವು ಎಂಬುದರ ಕುರಿತು ಚಿಂತಿತರಾಗಿದ್ದಾರೆ. ಆದರೆ, ದೇವರಲ್ಲಿ ನಂಬಿಕೆಯಿಡಲು ಸರಿಯಾದ ಕಾರಣವು ಏನಾಗಿದೆಯೆಂದು ನೀವು ನೆನಸುತ್ತೀರಿ? ಈ ವಿಷಯದ ಕುರಿತು ಬೈಬಲ್‌ ಏನನ್ನುತ್ತದೆ? ಇದಕ್ಕೆ ಉತ್ತರವನ್ನು ನೀವು ಮುಂದಿನ ಲೇಖನದಲ್ಲಿ ಕಂಡುಕೊಳ್ಳುವಿರಿ.