ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸೌವಾರ್ತಿಕನ ಕೆಲಸವನ್ನು ಮಾಡು”

“ಸೌವಾರ್ತಿಕನ ಕೆಲಸವನ್ನು ಮಾಡು”

“ಸೌವಾರ್ತಿಕನ ಕೆಲಸವನ್ನು ಮಾಡು”

“ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, . . . ಸೌವಾರ್ತಿಕನ ಕೆಲಸವನ್ನು ಮಾಡು.”​—⁠2 ತಿಮೊಥೆಯ 4:⁠5.

ಯೆಹೋವನ ಹೆಸರು ಮತ್ತು ಉದ್ದೇಶಗಳು ಭೂಮಿಯಾದ್ಯಂತ ಪ್ರಕಟಿಸಲ್ಪಡುತ್ತಿವೆ. ಇದಕ್ಕೆ ಕಾರಣವೇನೆಂದರೆ, ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕೊಟ್ಟ ಆಜ್ಞೆಯನ್ನು ದೇವರ ಸಮರ್ಪಿತ ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವನು ಹೇಳಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”​—⁠ಮತ್ತಾಯ 28:​19, 20.

2 ಯೇಸುವಿನ ಪ್ರಥಮ ಶತಮಾನದ ಶಿಷ್ಯರು ಈ ಆಜ್ಞೆಯನ್ನು ಗಂಭೀರವಾಗಿ ಪರಿಗಣಿಸಿದರು. ಉದಾಹರಣೆಗಾಗಿ, ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತ ಮೇಲ್ವಿಚಾರಕನಾಗಿದ್ದ ತಿಮೊಥೆಯನನ್ನು ಹೀಗೆ ಉತ್ತೇಜಿಸಿದನು: “ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.” (2 ತಿಮೊಥೆಯ 4:⁠5) ಇಂದು, ಒಬ್ಬ ಮೇಲ್ವಿಚಾರಕನು ತನ್ನ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸುವ ಒಂದು ವಿಧವು, ಒಬ್ಬ ಹುರುಪಿನ ರಾಜ್ಯ ಘೋಷಕನಾಗಿರುವ ಮೂಲಕ ಅಂದರೆ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವ ಮೂಲಕವೇ ಆಗಿದೆ. ಉದಾಹರಣೆಗೆ, ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಸಾರುವ ಕೆಲಸದಲ್ಲಿ ತನ್ನ ಗುಂಪಿನ ನಾಯಕತ್ವವನ್ನು ವಹಿಸುವ ಮತ್ತು ಇತರರಿಗೆ ತರಬೇತಿಯನ್ನು ನೀಡುವ ಪ್ರತಿಫಲದಾಯಕ ಸುಯೋಗವಿದೆ. ಸುವಾರ್ತೆಯನ್ನು ಸಾರುವ ತನ್ನ ವೈಯಕ್ತಿಕ ಜವಾಬ್ದಾರಿಯನ್ನು ಪೌಲನು ಪೂರೈಸಿದನು, ಮತ್ತು ಅವನು ಶುಶ್ರೂಷೆಗಾಗಿ ಇತರರನ್ನು ತರಬೇತುಗೊಳಿಸಲು ಸಹಾಯವನ್ನೂ ಮಾಡಿದನು.​—⁠ಅ. ಕೃತ್ಯಗಳು 20:20; 1 ಕೊರಿಂಥ 9:16, 17.

ಗತಕಾಲದ ಹುರುಪಿನ ಸೌವಾರ್ತಿಕರು

3 ಆದಿಕ್ರೈಸ್ತರು ಹುರುಪಿನ ಸೌವಾರ್ತಿಕರಾಗಿ ಪ್ರಸಿದ್ಧರಾಗಿದ್ದರು. ಸೌವಾರ್ತಿಕನಾಗಿದ್ದ ಫಿಲಿಪ್ಪನನ್ನು ಪರಿಗಣಿಸಿರಿ. ಯೆರೂಸಲೇಮಿನಲ್ಲಿದ್ದ ಗ್ರೀಕ್‌ ಭಾಷೆಯ ಮತ್ತು ಇಬ್ರಿಯ ಭಾಷೆಯ ಕ್ರೈಸ್ತ ವಿಧವೆಯರ ನಡುವೆ ಪ್ರತಿ ದಿನವೂ ಯಾವುದೇ ಪಕ್ಷಪಾತವಿಲ್ಲದೆ ಆಹಾರವನ್ನು ವಿತರಿಸುವ ಕೆಲಸವನ್ನು ಪೂರೈಸಲಿಕ್ಕಾಗಿ ಆಯ್ಕೆಮಾಡಲ್ಪಟ್ಟ “ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳು ಮಂದಿ”ಯಲ್ಲಿ ಇವನೂ ಒಬ್ಬನಾಗಿದ್ದನು. (ಅ. ಕೃತ್ಯಗಳು 6:​1-6) ಈ ವಿಶೇಷ ನೇಮಕವು ಕೊನೆಗೊಂಡ ಬಳಿಕ ಮತ್ತು ಹಿಂಸೆಯು ಅಪೊಸ್ತಲರನ್ನು ಬಿಟ್ಟು ಬೇರೆಲ್ಲಾ ಕ್ರೈಸ್ತರನ್ನು ಚದರಿಸಿಬಿಟ್ಟಾಗ, ಫಿಲಿಪ್ಪನು ಸಮಾರ್ಯಕ್ಕೆ ಹೋದನು. ಅಲ್ಲಿ ಅವನು ಸುವಾರ್ತೆಯನ್ನು ಸಾರಿದನು ಹಾಗೂ ದೆವ್ವಗಳನ್ನು ಬಿಡಿಸಲು ಮತ್ತು ಕುಂಟರನ್ನು ಹಾಗೂ ಪಾರ್ಶ್ವವಾಯು ರೋಗಿಗಳನ್ನು ಸ್ವಸ್ಥಪಡಿಸಲು ಪವಿತ್ರಾತ್ಮದಿಂದ ಶಕ್ತಿಯನ್ನು ಹೊಂದಿದನು. ಸಮಾರ್ಯದವರಲ್ಲಿ ಅನೇಕರು ರಾಜ್ಯದ ಸಂದೇಶವನ್ನು ಸ್ವೀಕರಿಸಿದರು ಮತ್ತು ದೀಕ್ಷಾಸ್ನಾನ ಪಡೆದುಕೊಂಡರು. ಈ ವರ್ತಮಾನವನ್ನು ಕೇಳಿಸಿಕೊಂಡಾಗ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿದ್ದ ವಿಶ್ವಾಸಿಗಳು ಪವಿತ್ರಾತ್ಮವನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಪೇತ್ರಯೋಹಾನರೆಂಬ ಅಪೊಸ್ತಲರನ್ನು ಸಮಾರ್ಯಕ್ಕೆ ಕಳುಹಿಸಿದರು.​—⁠ಅ. ಕೃತ್ಯಗಳು 8:​4-17.

4 ತದನಂತರ ದೇವರಾತ್ಮವು ಫಿಲಿಪ್ಪನು ಗಾಜಕ್ಕೆ ಹೋಗುವ ದಾರಿಯಲ್ಲಿ ಐಥಿಯೋಪ್ಯದ ಕಂಚುಕಿಯನ್ನು ಸಂಧಿಸುವಂತೆ ಮಾಡಿತು. ಯೆಶಾಯನ ಪ್ರವಾದನೆಯ ಕುರಿತು ಫಿಲಿಪ್ಪನು ಸ್ಪಷ್ಟವಾದ ವಿವರಣೆಯನ್ನು ನೀಡಿದ ಬಳಿಕ, ‘ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯಾಗಿದ್ದ ಈ ಮನುಷ್ಯನು’ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟನು ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಂಡನು. (ಅ. ಕೃತ್ಯಗಳು 8:26-38) ಆಮೇಲೆ ಫಿಲಿಪ್ಪನು ಅಜೋತಿಗೆ ಮತ್ತು ಅಲ್ಲಿಂದ ಕೈಸರೈಯಕ್ಕೆ ಹೋಗಿ, ಮಾರ್ಗದುದ್ದಕ್ಕೂ “ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.” (ಅ. ಕೃತ್ಯಗಳು 8:39, 40) ನಿಶ್ಚಯವಾಗಿಯೂ ಅವನು ಸೌವಾರ್ತಿಕನ ಕೆಲಸವನ್ನು ಮಾಡುವುದರಲ್ಲಿ ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು!

5 ಸುಮಾರು 20 ವರ್ಷಗಳ ಬಳಿಕವೂ ಫಿಲಿಪ್ಪನು ಕೈಸರೈಯದಲ್ಲಿ ಶುಶ್ರೂಷೆಯಲ್ಲಿ ಇನ್ನೂ ಕ್ರಿಯಾಶೀಲನಾಗಿದ್ದನು. ಪೌಲ ಮತ್ತು ಲೂಕರು ಅವನ ಮನೆಯಲ್ಲಿ ಉಳಿದುಕೊಂಡಿದ್ದಾಗ, ಅವನಿಗೆ “ಮದುವೆಯಾಗದ ನಾಲ್ಕುಮಂದಿ ಹೆಣ್ಣುಮಕ್ಕಳಿದ್ದರು; ಅವರು ಪ್ರವಾದಿಸುವವರಾಗಿದ್ದರು.” (ಅ. ಕೃತ್ಯಗಳು 21:8-10) ನಿಶ್ಚಯವಾಗಿಯೂ ಅವರು ಆಧ್ಯಾತ್ಮಿಕವಾಗಿ ಒಳ್ಳೇ ತರಬೇತಿಯನ್ನು ಪಡೆದುಕೊಂಡಿದ್ದರು, ಶುಶ್ರೂಷೆಗಾಗಿ ಹುರುಪನ್ನು ಹೊಂದಿದ್ದರು, ಮತ್ತು ಪ್ರವಾದನಾತ್ಮಕವಾಗಿ ಮಾತಾಡುವುದರಲ್ಲಿ ಒಳಗೂಡುವ ಸುಯೋಗವನ್ನೂ ಪಡೆದಿದ್ದರು. ಇಂದು ಸಹ ಶುಶ್ರೂಷೆಗಾಗಿರುವ ಹೆತ್ತವರ ಹುರುಪು ಅವರ ಗಂಡುಹೆಣ್ಣುಮಕ್ಕಳ ಮೇಲೆ ಅತ್ಯುತ್ತಮ ಪ್ರಭಾವವನ್ನು ಬೀರಬಲ್ಲದು ಮತ್ತು ಹುರುಪಿನ ಸೌವಾರ್ತಿಕ ಕೆಲಸವನ್ನು ತಮ್ಮ ಜೀವನಮಾರ್ಗವಾಗಿ ಮಾಡಿಕೊಳ್ಳುವಂತೆ ಅವರನ್ನು ಪ್ರಚೋದಿಸಬಲ್ಲದು.

ಇಂದು ಹುರುಪಿನ ಸೌವಾರ್ತಿಕರು

6 ನಮ್ಮ ದಿನಗಳಿಗೆ ಮತ್ತು ಅಂತ್ಯಕಾಲಕ್ಕೆ ಸೂಚಿತವಾಗಿರುವ ತನ್ನ ಮಹತ್ವಭರಿತ ಪ್ರವಾದನೆಯಲ್ಲಿ ಯೇಸು ಕ್ರಿಸ್ತನು ತಿಳಿಸಿದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) “ಸರ್ವಲೋಕದಲ್ಲಿ” ಸುವಾರ್ತೆಯು ಸಾರಲ್ಪಟ್ಟ ಬಳಿಕವೇ ಅಂತ್ಯವು ಬರುವುದು. (ಮತ್ತಾಯ 24:14) ಪೌಲನು ಹಾಗೂ ಪ್ರಥಮ ಶತಮಾನದ ಇತರ ಸೌವಾರ್ತಿಕರು ಸುವಾರ್ತೆಯನ್ನು ಸಾರಿದಾಗ, ಅನೇಕರು ವಿಶ್ವಾಸಿಗಳಾದರು, ಮತ್ತು ರೋಮನ್‌ ಸಾಮ್ರಾಜ್ಯದಾದ್ಯಂತ ಒಂದರ ನಂತರ ಇನ್ನೊಂದು ಸಭೆಗಳು ಸ್ಥಾಪಿಸಲ್ಪಟ್ಟವು. ಈ ಸಭೆಗಳಲ್ಲಿ ಸೇವೆಮಾಡುವಂತೆ ನೇಮಿಸಲ್ಪಟ್ಟ ಹಿರಿಯರು ತಮ್ಮ ಸಹೋದರ ಸಹೋದರಿಯರೊಂದಿಗೆ ಸೌವಾರ್ತಿಕ ಕೆಲಸದಲ್ಲಿ ಭಾಗವಹಿಸಿದರು ಮತ್ತು ಸಾರುವ ಚಟುವಟಿಕೆಯನ್ನು ಎಲ್ಲಾ ಕಡೆಗಳಲ್ಲಿಯೂ ವಿಸ್ತರಿಸಿದರು. ಆ ದಿನಗಳಲ್ಲಿ ಯೆಹೋವನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು; ಅದೇ ರೀತಿಯಲ್ಲಿ ಇಂದು ಸಹ ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಸೌವಾರ್ತಿಕರ ಕೆಲಸವನ್ನು ಮಾಡುತ್ತಿದ್ದಾರೆ. (ಅ. ಕೃತ್ಯಗಳು 19:20) ಯೆಹೋವನ ಅಂಥ ಸಂತೋಷಭರಿತ ಸ್ತುತಿಗಾರರಲ್ಲಿ ನೀವೂ ಒಬ್ಬರಾಗಿದ್ದೀರೋ?

7 ಆಧುನಿಕ ದಿನದ ಅನೇಕ ರಾಜ್ಯ ಘೋಷಕರು, ಸೌವಾರ್ತಿಕ ಕೆಲಸದಲ್ಲಿನ ತಮ್ಮ ಪಾಲನ್ನು ಹೆಚ್ಚಿಸಲಿಕ್ಕಾಗಿರುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಮಂದಿ ಮಿಷನೆರಿ ಸೇವೆಯನ್ನು ಪ್ರವೇಶಿಸಿದ್ದಾರೆ, ಮತ್ತು ಲಕ್ಷಾಂತರ ಮಂದಿ ರೆಗ್ಯುಲರ್‌ ಹಾಗೂ ಆಕ್ಸಿಲಿಯರಿ ಪಯನೀಯರರೋಪಾದಿ ಪೂರ್ಣ ಸಮಯದ ಸೌವಾರ್ತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಲ್ಲದೆ ಹುರುಪಿನ ರಾಜ್ಯ ಪ್ರಚಾರಕರಾಗಿ ಸೇವೆಸಲ್ಲಿಸುತ್ತಿರುವ ಪುರುಷರು, ಸ್ತ್ರೀಯರು, ಮತ್ತು ಮಕ್ಕಳಿಂದ ಎಷ್ಟು ಪ್ರಶಂಸಾರ್ಹ ಕೆಲಸವು ನಡೆಸಲ್ಪಡುತ್ತಿದೆ! ಯೆಹೋವನ ಜನರೆಲ್ಲರೂ ಕ್ರೈಸ್ತ ಸೌವಾರ್ತಿಕರೋಪಾದಿ ಹೆಗಲಿಗೆ ಹೆಗಲು ಕೊಟ್ಟು ಆತನ ಸೇವೆಮಾಡುತ್ತಿರುವಾಗ, ಅವರು ಆತನ ಅಪಾರ ಆಶೀರ್ವಾದದಲ್ಲಿ ಆನಂದಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.​—⁠ಚೆಫನ್ಯ 3:⁠9.

8 ಭೂಮಿಯಾದ್ಯಂತ ಸುವಾರ್ತೆಯನ್ನು ಸಾರುವ ಜವಾಬ್ದಾರಿಯನ್ನು ದೇವರು ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಕೊಟ್ಟಿದ್ದಾನೆ. ದಿನೇ ದಿನೇ ಹೆಚ್ಚುತ್ತಿರುವ ಕ್ರಿಸ್ತನ ‘ಬೇರೆ ಕುರಿಗಳು’ ಈ ಸೌವಾರ್ತಿಕ ಕೆಲಸದಲ್ಲಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. (ಯೋಹಾನ 10:16) ಪ್ರವಾದನಾತ್ಮಕವಾಗಿ, ಈ ಜೀವರಕ್ಷಕ ಕೆಲಸವು, ಈಗ ನಡೆಯುತ್ತಿರುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡಲ್ಪಡುವ ಕೆಲಸಕ್ಕೆ ಹೋಲಿಸಲ್ಪಟ್ಟಿದೆ. ಅತಿ ಬೇಗನೆ ದುಷ್ಟರು ನಾಶಮಾಡಲ್ಪಡುವರು. ಈ ಮಧ್ಯೆ, ಭೂಮಿಯ ನಿವಾಸಿಗಳಿಗೆ ಜೀವರಕ್ಷಕ ಸತ್ಯಗಳನ್ನು ಕೊಂಡೊಯ್ಯುವುದು ಎಂಥ ಒಂದು ಸುಯೋಗವಾಗಿದೆ!​—⁠ಯೆಹೆಜ್ಕೇಲ 9:​4-6, 11.

9 ಒಂದುವೇಳೆ ನಾವು ಬಹಳ ಕಾಲದಿಂದ ಸೌವಾರ್ತಿಕ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವಲ್ಲಿ, ಸಭೆಯಲ್ಲಿರುವ ಹೊಸಬರಿಗೆ ಸಹಾಯಮಾಡಲಿಕ್ಕಾಗಿ ನಾವು ಏನನ್ನಾದರೂ ಮಾಡುವ ಸಂಭವನೀಯತೆ ಇದೆ. ಕೆಲವೊಮ್ಮೆ ಅವರು ಶುಶ್ರೂಷೆಯಲ್ಲಿ ನಮ್ಮೊಂದಿಗೆ ಜೊತೆಗೂಡುವಂತೆ ಮಾಡಲು ನಾವು ಶಕ್ತರಾಗಿರಬಹುದು. ಹಿರಿಯರೋಪಾದಿ ಸೇವೆಮಾಡುವವರು, ಜೊತೆ ವಿಶ್ವಾಸಿಗಳನ್ನು ಆಧ್ಯಾತ್ಮಿಕವಾಗಿ ಕಟ್ಟಲಿಕ್ಕಾಗಿ ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಲು ಬಯಸುವರು. ನಮ್ರ ಮೇಲ್ವಿಚಾರಕರ ಅತ್ಯುತ್ತಮ ಪ್ರಯತ್ನಗಳು, ಹುರುಪಿನ ಹಾಗೂ ಫಲಭರಿತ ಸೌವಾರ್ತಿಕರಾಗಿರುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಹೆಚ್ಚನ್ನು ಮಾಡಬಲ್ಲವು.​—⁠2 ಪೇತ್ರ 1:​5-8.

ಮನೆಯಿಂದ ಮನೆಗೆ ಸಾಕ್ಷಿಯನ್ನು ನೀಡುವುದು

10 ಒಬ್ಬ ಸೌವಾರ್ತಿಕನೋಪಾದಿ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಅತ್ಯುತ್ತಮ ಮಾದರಿಯನ್ನಿಟ್ಟನು. ಕ್ರಿಸ್ತನ ಹಾಗೂ ಅವನ ಅಪೊಸ್ತಲರ ಶುಶ್ರೂಷೆಯ ಕುರಿತು ದೇವರ ವಾಕ್ಯವು ತಿಳಿಸುವುದು: “ತರುವಾಯ ಆತನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ ಇದ್ದರು.” (ಲೂಕ 8:1) ಸ್ವತಃ ಅಪೊಸ್ತಲರ ಕುರಿತಾಗಿ ಏನು? ಸಾ.ಶ. 33ರ ಪಂಚಾಶತ್ತಮದಲ್ಲಿ ಪವಿತ್ರಾತ್ಮವು ಸುರಿಸಲ್ಪಟ್ಟ ಬಳಿಕ, ಅವರು “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.”​—⁠ಅ. ಕೃತ್ಯಗಳು 5:⁠42.

11 ತನ್ನ ಹುರುಪಿನ ಸೌವಾರ್ತಿಕ ಕೆಲಸದ ಕಾರಣದಿಂದಾಗಿಯೇ ಅಪೊಸ್ತಲ ಪೌಲನು ಎಫೆಸದ ಕ್ರೈಸ್ತ ಹಿರಿಯರಿಗೆ ಹೀಗೆ ಹೇಳಶಕ್ತನಾದನು: ‘ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗೆಯಲಿಲ್ಲ.’ ಪೌಲನು ‘ಮನೆಮನೆಯಲ್ಲಿ ಉಪದೇಶಿಸುತ್ತಿದ್ದಾಗ,’ ವಿಶ್ವಾಸಿಗಳ ಮನೆಗಳಿಗೆ ಹೋಗಿ ಕುರಿಪಾಲನಾ ಭೇಟಿಗಳನ್ನು ಮಾಡುತ್ತಾ ಯೆಹೋವನ ಸೇವೆಮಾಡುವ ಜೊತೆ ಆರಾಧಕರ ಮನೆಗಳನ್ನು ಸಂದರ್ಶಿಸುತ್ತಿದ್ದನೋ? ಇಲ್ಲ, ಏಕೆಂದರೆ ಅವನು ಮುಂದುವರಿಸುತ್ತಾ ವಿವರಿಸಿದ್ದು: ‘ನಾನು ಯೆಹೂದ್ಯರಿಗೂ ಗ್ರೀಕರಿಗೂ [“ಪಶ್ಚಾತ್ತಾಪಪಟ್ಟು,” NW] ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ಖಂಡಿತವಾಗಿ ಬೋಧಿಸುವವನಾಗಿದ್ದೆನು.’ (ಅ. ಕೃತ್ಯಗಳು 20:20, 21) ಒಟ್ಟಿನಲ್ಲಿ, ಈಗಾಗಲೇ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದವರಿಗೆ ‘ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವ ಮತ್ತು ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡುವುದರ’ ಕುರಿತು ಉಪದೇಶವನ್ನು ಕೊಡುವ ಆವಶ್ಯಕತೆಯಿರಲಿಲ್ಲ. ಪೌಲನು ಅವಿಶ್ವಾಸಿಗಳಿಗೆ ಪಶ್ಚಾತ್ತಾಪ ಮತ್ತು ನಂಬಿಕೆಯ ಕುರಿತು ಬೋಧಿಸುತ್ತಿದ್ದಾಗ, ಎಫೆಸದ ಕ್ರೈಸ್ತ ಹಿರಿಯರಿಗೆ ಮನೆಯಿಂದ ಮನೆಯ ಶುಶ್ರೂಷೆಯ ವಿಷಯದಲ್ಲಿ ತರಬೇತಿಯನ್ನು ನೀಡಿದನು. ಹೀಗೆ ಮಾಡುವುದರಲ್ಲಿ ಪೌಲನು, ಯೇಸುವಿನಿಂದ ತೋರಿಸಲ್ಪಟ್ಟ ಕಾರ್ಯವಿಧಾನವನ್ನೇ ಅನುಸರಿಸುತ್ತಿದ್ದನು.

12 ಮನೆಯಿಂದ ಮನೆಯ ಶುಶ್ರೂಷೆಯು ಪಂಥಾಹ್ವಾನದಾಯಕವಾಗಿರಬಲ್ಲದು. ಉದಾಹರಣೆಗೆ, ನಾವು ಬೈಬಲ್‌ ಸಂದೇಶದೊಂದಿಗೆ ಕೆಲವರ ಮನೆ ಬಾಗಿಲಿಗೆ ಹೋಗುವಾಗ ಅವರಿಗೆ ತುಂಬ ಕೋಪ ಬರುತ್ತದೆ. ಇತರರಿಗೆ ಕೋಪವನ್ನು ಉಂಟುಮಾಡುವುದು ನಮ್ಮ ಅಪೇಕ್ಷೆಯೇನಲ್ಲ. ಆದರೂ, ಮನೆಯಿಂದ ಮನೆಯ ಶುಶ್ರೂಷೆಯು ಶಾಸ್ತ್ರೀಯವಾದದ್ದಾಗಿದೆ, ಮತ್ತು ದೇವರ ಹಾಗೂ ನೆರೆಯವರ ಪ್ರೀತಿಯು ಈ ರೀತಿಯಲ್ಲಿ ಸಾಕ್ಷಿಯನ್ನು ನೀಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. (ಮಾರ್ಕ 12:​28-31) ಮನೆಯಿಂದ ಮನೆಗೆ ಸಾರುವ ನಮ್ಮ ಹಕ್ಕನ್ನು ‘ಸಮರ್ಥಿಸಿ ಕಾನೂನುಬದ್ಧವಾಗಿ ಸ್ಥಾಪಿಸಲಿಕ್ಕಾಗಿ,’ ಯುನೈಟೆಡ್‌ ಸ್ಟೇಟ್ಸ್‌ನ ಸುಪ್ರೀಮ್‌ ಕೋರ್ಟನ್ನೂ ಸೇರಿಸಿ ಅನೇಕ ಕೋರ್ಟುಗಳಲ್ಲಿ ನಾವು ಮೊಕದ್ದಮೆಗಳನ್ನು ಹೂಡಿದ್ದೇವೆ. (ಫಿಲಿಪ್ಪಿ 1:​7, NW) ಬಹುಮಟ್ಟಿಗೆ ಆ ಕೋರ್ಟು ನಮ್ಮ ಪರವಾಗಿಯೇ ತೀರ್ಪನ್ನು ನೀಡಿದೆ. ಈ ಮುಂದಿನ ತೀರ್ಪು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ:

13 “ಧಾರ್ಮಿಕ ಟ್ರ್ಯಾಕ್ಟ್‌ಗಳ ವಿತರಣೆಯು ಅತ್ಯಂತ ಪ್ರಾಚೀನ ರೀತಿಯ ಮಿಷನೆರಿ ಸೌವಾರ್ತಿಕ ಕೆಲಸದ ಒಂದು ರೂಪವಾಗಿದೆ​—⁠ಅಂದರೆ ಮುದ್ರಿಸುವಂಥ ಮುದ್ರಣಾಲಯಗಳ ಇತಿಹಾಸದಷ್ಟೇ ಪುರಾತನವಾದದ್ದಾಗಿದೆ. ಅನೇಕ ವರ್ಷಗಳಿಂದಲೂ ಬೇರೆ ಬೇರೆ ಧಾರ್ಮಿಕ ಕಾರ್ಯಾಚರಣೆಗಳಲ್ಲಿ ಇದು ಒಂದು ಪ್ರಚೋದಕ ಶಕ್ತಿಯಾಗಿ ಕಾರ್ಯನಡಿಸಿದೆ. ಇಂದು ಸಹ ಸೌವಾರ್ತಿಕ ಕೆಲಸದ ಈ ರೂಪವು, ಯಾರ ಕಾಲ್‌ಪೋರ್ಟರರು ಸುವಾರ್ತೆಯನ್ನು ಸಾವಿರಾರು ಮನೆಗಳಿಗೆ ಕೊಂಡೊಯ್ಯುತ್ತಾರೋ ಮತ್ತು ಅನೇಕಬಾರಿ ವೈಯಕ್ತಿಕ ಭೇಟಿಗಳನ್ನು ಮಾಡುವ ಮೂಲಕ ತಮ್ಮ ನಂಬಿಕೆಗೆ ಅನುಯಾಯಿಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಾರೋ ಆ ಬೇರೆ ಬೇರೆ ಧಾರ್ಮಿಕ ಪಂಥಗಳವರಿಂದ ಬಹಳ ವ್ಯಾಪಕವಾದ ಮಟ್ಟದಲ್ಲಿ ಬಳಸಲ್ಪಡುತ್ತಿದೆ. . . . ಈ ರೀತಿಯ ಧಾರ್ಮಿಕ ಚಟುವಟಿಕೆಯು, ಮೊದಲ ತಿದ್ದುಪಡಿಯ [ಯುನೈಟೆಡ್‌ ಸ್ಟೇಟ್ಸ್‌ನ ಸಂವಿಧಾನ] ಕೆಳಗೆ ಚರ್ಚುಗಳಲ್ಲಿನ ಆರಾಧನೆ ಮತ್ತು ಉಪದೇಶ ಪೀಠಗಳಿಂದ ಮಾಡಲ್ಪಡುವ ಸಾರುವಿಕೆಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.”​—⁠ಪೆನ್ಸಿಲ್ವೇನಿಯದ ಪ್ರತಿ ಮರ್ಡಕ್‌, 1943.

ಏಕೆ ಸಾರುತ್ತಾ ಇರಬೇಕು?

14 ಮನೆಯಿಂದ ಮನೆಗೆ ಸಾಕ್ಷಿ ನೀಡಲು ಅನೇಕ ಕಾರಣಗಳಿವೆ. ಪ್ರತಿ ಬಾರಿ ನಾವು ಮನೆಯವರೊಬ್ಬರನ್ನು ಭೇಟಿಯಾದಾಗ ಶಾಸ್ತ್ರೀಯ ಸತ್ಯತೆಯ ಬೀಜವೊಂದನ್ನು ಬಿತ್ತಲು ಪ್ರಯತ್ನಿಸುತ್ತೇವೆ. ಪುನರ್ಭೇಟಿಗಳನ್ನು ಮಾಡುವ ಮೂಲಕ ನಾವು ಅದಕ್ಕೆ ನೀರೆರೆಯಲು ಪ್ರಯತ್ನಿಸುತ್ತೇವೆ. ಮತ್ತು ಮನೆಯವರ ಮೇಲೆ ಇದು ಬೀರುವ ಪ್ರಭಾವವು ಪ್ರಗತಿಪರವಾಗಿ ಬಲಗೊಳ್ಳುತ್ತದೆ, ಏಕೆಂದರೆ ಪೌಲನು ಬರೆದುದು: ‘ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು.’ (1 ಕೊರಿಂಥ 3:6) ಆದುದರಿಂದ, ನಾವು ‘ಸಸಿಯನ್ನು ನೆಡುತ್ತಾ ನೀರುಹೊಯ್ಯುತ್ತಾ’ ಇರೋಣ ಮತ್ತು ಯೆಹೋವನು ಖಂಡಿತವಾಗಿಯೂ ‘ಬೆಳೆಸುವನು’ ಎಂಬ ದೃಢಭರವಸೆಯಿಂದಿರೋಣ.

15 ಜನರ ಜೀವಗಳು ಅಪಾಯದಲ್ಲಿರುವುದರಿಂದಲೇ ನಾವು ಸೌವಾರ್ತಿಕರ ಕೆಲಸವನ್ನು ಮಾಡುತ್ತೇವೆ. ಸಾರುವಿಕೆಯ ಮೂಲಕ ನಾವು ಸ್ವತಃ ನಮ್ಮನ್ನು ಮತ್ತು ನಮ್ಮ ಉಪದೇಶಕ್ಕೆ ಕಿವಿಗೊಡುವವರನ್ನು ರಕ್ಷಿಸಬಲ್ಲೆವು. (1 ತಿಮೊಥೆಯ 4:16) ಒಬ್ಬ ವ್ಯಕ್ತಿಯ ಜೀವವು ಅಪಾಯದಲ್ಲಿದೆ ಎಂಬುದು ನಮಗೆ ಗೊತ್ತಿರುವಲ್ಲಿ, ನಾವು ಕೇವಲ ಅರೆಮನಸ್ಸಿನಿಂದ ಅವನಿಗೆ ಸಹಾಯಮಾಡಲು ಪ್ರಯತ್ನಿಸುತ್ತೇವೋ? ಖಂಡಿತವಾಗಿಯೂ ಇಲ್ಲ! ರಕ್ಷಣೆಯು ಒಳಗೂಡಿರುವುದರಿಂದಲೇ ನಾವು ಜನರ ಮನೆಗಳಿಗೆ ಪುನಃ ಪುನಃ ಭೇಟಿ ನೀಡುತ್ತೇವೆ. ಸನ್ನಿವೇಶಗಳು ಬದಲಾಗುತ್ತಾ ಇರುತ್ತವೆ. ಒಮ್ಮೆ ಹೋದಾಗ ಬೈಬಲ್‌ ಸಂದೇಶಕ್ಕೆ ಕಿವಿಗೊಡಲು ಸಮಯವಿಲ್ಲದಿರುವಷ್ಟು ಕಾರ್ಯಮಗ್ನನಾಗಿದ್ದ ವ್ಯಕ್ತಿಯು ಇನ್ನೊಮ್ಮೆ ಹೋಗುವಾಗ ನಮ್ಮ ಸಂದೇಶಕ್ಕೆ ಕಿವಿಗೊಡಲು ಇಷ್ಟಪಡಬಹುದು. ಅಥವಾ ಕುಟುಂಬದ ಇನ್ನೊಬ್ಬ ಸದಸ್ಯರು ನಮ್ಮನ್ನು ಸಂಧಿಸಬಹುದು, ಮತ್ತು ಇದು ಒಂದು ಶಾಸ್ತ್ರೀಯ ಚರ್ಚೆಗೆ ನಡಿಸಸಾಧ್ಯವಿದೆ.

16 ಮನೆಯವರ ಸನ್ನಿವೇಶಗಳು ಮಾತ್ರವಲ್ಲ ಮನೋಭಾವವು ಸಹ ಬದಲಾಗಸಾಧ್ಯವಿದೆ. ಉದಾಹರಣೆಗೆ, ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿರುವ ಮನೋವೇದನೆಯು, ರಾಜ್ಯ ಸಂದೇಶಕ್ಕೆ ಕಿವಿಗೊಡುವಂತೆ ವ್ಯಕ್ತಿಯೊಬ್ಬನನ್ನು ಪ್ರಚೋದಿಸಬಹುದು. ನಾವು ಆ ವ್ಯಕ್ತಿಗೆ ಸಾಂತ್ವನ ನೀಡಲು, ಆಧ್ಯಾತ್ಮಿಕ ಆವಶ್ಯಕತೆಯ ಕುರಿತು ಅವನಿಗೆ ಅರಿವನ್ನು ಮೂಡಿಸಲು, ಮತ್ತು ಇದನ್ನು ಹೇಗೆ ಪೂರೈಸಸಾಧ್ಯವಿದೆ ಎಂಬುದನ್ನು ತೋರಿಸಲು ನಿರೀಕ್ಷಿಸುತ್ತೇವೆ.​—⁠ಮತ್ತಾಯ 5:​3, 4.

17 ಮನೆಯಿಂದ ಮನೆಗೆ ಸಾಕ್ಷಿ ನೀಡಲು ಅಥವಾ ಇತರ ರೀತಿಯ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ನಮಗಿರುವ ಅನೇಕ ಕಾರಣಗಳಲ್ಲಿ ಅತಿ ಪ್ರಾಮುಖ್ಯವಾದದ್ದು, ಯೆಹೋವನ ಹೆಸರನ್ನು ತಿಳಿಯಪಡಿಸುವುದರಲ್ಲಿ ಪಾಲ್ಗೊಳ್ಳುವ ಬಯಕೆಯೇ ಆಗಿದೆ. (ವಿಮೋಚನಕಾಂಡ 9:16; ಕೀರ್ತನೆ 83:18) ನಮ್ಮ ಸೌವಾರ್ತಿಕ ಕೆಲಸವು, ಸತ್ಯ ಮತ್ತು ನೀತಿಯನ್ನು ಪ್ರೀತಿಸುವವರು ಯೆಹೋವನ ಸ್ತುತಿಗಾರರಾಗುವಂತೆ ಸಹಾಯಮಾಡುವಾಗ ಅದೆಷ್ಟು ಪ್ರತಿಫಲದಾಯಕವಾಗಿದೆ! ಕೀರ್ತನೆಗಾರನು ಹಾಡಿದ್ದು: “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ.”​—⁠ಕೀರ್ತನೆ 148:12, 13.

ಸೌವಾರ್ತಿಕ ಕೆಲಸವು ವೈಯಕ್ತಿಕವಾಗಿ ನಮಗೆ ಪ್ರಯೋಜನದಾಯಕವಾಗಿದೆ

18 ಸೌವಾರ್ತಿಕನ ಕೆಲಸವನ್ನು ಮಾಡುವುದು ಅನೇಕ ವಿಧಗಳಲ್ಲಿ ವೈಯಕ್ತಿಕವಾಗಿ ನಮಗೆ ಪ್ರಯೋಜನದಾಯಕವಾಗಿದೆ. ಸುವಾರ್ತೆಯೊಂದಿಗೆ ಮನೆಯಿಂದ ಮನೆಗೆ ಹೋಗುವುದು, ದಯಾಪರ ರೀತಿಯಲ್ಲಿ ನಮ್ಮನ್ನು ಜನರು ಸ್ವೀಕರಿಸದಿರುವಾಗ ದೀನಭಾವವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಫಲಪ್ರದ ಸೌವಾರ್ತಿಕರಾಗಿರಬೇಕಾದರೆ ನಾವು ಪೌಲನಂತಿರುವ ಅಗತ್ಯವಿದೆ; ಅವನು ‘ಕೆಲವರನ್ನು ರಕ್ಷಿಸಲಿಕ್ಕಾಗಿ ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದನು.’ (1 ಕೊರಿಂಥ 9:19-23) ಶುಶ್ರೂಷೆಯಲ್ಲಿನ ಅನುಭವವು ನಾವು ಜಾಣ್ಮೆಯಿಂದ ಕಾರ್ಯನಡಿಸುವಂತೆ ಸಹಾಯಮಾಡುತ್ತದೆ. ಯೆಹೋವನ ಮೇಲೆ ಆತುಕೊಳ್ಳುವ ಮೂಲಕ ಮತ್ತು ಯೋಗ್ಯವಾದ ಪದಗಳನ್ನು ಆಯ್ಕೆಮಾಡುವ ಮೂಲಕ, ನಾವು ಪೌಲನ ಈ ಸಲಹೆಯನ್ನು ಅನ್ವಯಿಸಿಕೊಳ್ಳಸಾಧ್ಯವಿದೆ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”​—⁠ಕೊಲೊಸ್ಸೆ 4:⁠6.

19 ಸೌವಾರ್ತಿಕ ಕೆಲಸವು, ನಾವು ದೇವರ ಪವಿತ್ರಾತ್ಮದ ಮೇಲೆ ಅವಲಂಬಿತರಾಗಿರುವಂತೆಯೂ ನಮ್ಮನ್ನು ಪ್ರಚೋದಿಸುತ್ತದೆ. (ಜೆಕರ್ಯ 4:⁠6) ಇದರಿಂದಾಗಿ, ಅದರ ಫಲಗಳಾದ “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳು ನಮ್ಮ ಶುಶ್ರೂಷೆಯಲ್ಲಿ ಸುವ್ಯಕ್ತವಾಗುತ್ತವೆ. (ಗಲಾತ್ಯ 5:​22, 23) ಇದು ಜನರೊಂದಿಗಿನ ನಮ್ಮ ವ್ಯವಹಾರಗಳ ಮೇಲೆ ಪ್ರಭಾವ ಬೀರುತ್ತದೆ, ಏಕೆಂದರೆ ದೇವರಾತ್ಮದ ಮಾರ್ಗದರ್ಶನಕ್ಕೆ ಅನುಸಾರವಾಗಿ ನಡೆಯುವುದು, ಸುವಾರ್ತೆಯನ್ನು ಸಾರುತ್ತಿರುವಾಗ ಪ್ರೀತಿಯನ್ನು ತೋರಿಸಲು, ಸಂತೋಷ ಮತ್ತು ಸಮಾಧಾನದಿಂದ ಇರಲು, ದೀರ್ಘಶಾಂತರಾಗಿರಲು ಹಾಗೂ ದಯೆಯುಳ್ಳವರಾಗಿರಲು, ಉಪಕಾರವನ್ನು ಮತ್ತು ನಂಬಿಕೆಯನ್ನು ತೋರಿಸಲು, ಹಾಗೂ ಸಾಧುತ್ವ ಮತ್ತು ಶಮೆದಮೆಯನ್ನು ವ್ಯಕ್ತಪಡಿಸಲು ನಮಗೆ ಸಹಾಯಮಾಡುತ್ತದೆ.

20 ಸೌವಾರ್ತಿಕರೋಪಾದಿ ನಮಗೆ ಸಿಗುವ ಇನ್ನೊಂದು ಆಶೀರ್ವಾದವು, ನಾವು ಹೆಚ್ಚೆಚ್ಚು ಸಹಾನುಭೂತಿಯುಳ್ಳವರಾಗುತ್ತೇವೆ. ಜನರು ಅನಾರೋಗ್ಯ, ನಿರುದ್ಯೋಗ, ಗೃಹ ತೊಡಕುಗಳಂಥ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ, ನಾವು ಸಲಹೆಗಾರರಂತೆ ವರ್ತಿಸುವುದಿಲ್ಲ ಬದಲಾಗಿ ಅವರೊಂದಿಗೆ ಉತ್ತೇಜನದಾಯಕವಾದ ಮತ್ತು ಸಾಂತ್ವನದಾಯಕವಾದ ಶಾಸ್ತ್ರವಚನಗಳನ್ನು ಹಂಚಿಕೊಳ್ಳುತ್ತೇವೆ. ಯಾರು ಆಧ್ಯಾತ್ಮಿಕವಾಗಿ ಮಂಕುಗೊಳಿಸಲ್ಪಟ್ಟಿದ್ದಾರಾದರೂ ನೀತಿಯ ವಿಷಯದಲ್ಲಿ ಪ್ರೀತಿಯುಳ್ಳವರಾಗಿದ್ದಾರೋ ಅಂಥ ಜನರ ಕುರಿತು ನಾವು ಹಿತಾಸಕ್ತಿಯುಳ್ಳವರಾಗಿದ್ದೇವೆ. (2 ಕೊರಿಂಥ 4:⁠4) ಯಾರು “ನಿತ್ಯಜೀವಕ್ಕೆ ಯೋಗ್ಯವಾಗಿ ಅರ್ಹರಾಗಿದ್ದಾರೋ” ಅವರಿಗೆ ಆಧ್ಯಾತ್ಮಿಕ ಸಹಾಯವನ್ನು ನೀಡುವುದು ಎಂಥ ಒಂದು ಆಶೀರ್ವಾದವಾಗಿದೆ!​—⁠ಅ. ಕೃತ್ಯಗಳು 13:⁠48, NW.

21 ಸೌವಾರ್ತಿಕ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುವುದು, ನಮ್ಮ ಮನಸ್ಸನ್ನು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯಮಾಡುತ್ತದೆ. (ಲೂಕ 11:34) ಇದು ಖಂಡಿತವಾಗಿಯೂ ಪ್ರಯೋಜನದಾಯಕವಾಗಿದೆ, ಏಕೆಂದರೆ ಒಂದುವೇಳೆ ನಮ್ಮ ಮನಸ್ಸು ಆಧ್ಯಾತ್ಮಿಕವಾಗಿ ಆಲೋಚಿಸದಿರುವಲ್ಲಿ ನಾವು ಈ ಲೋಕದಲ್ಲಿ ಸರ್ವಸಾಮಾನ್ಯವಾಗಿರುವ ಪ್ರಾಪಂಚಿಕ ಶೋಧನೆಗಳಿಗೆ ಸುಲಭವಾಗಿ ಬಲಿಬೀಳಬಹುದು. ಅಪೊಸ್ತಲ ಯೋಹಾನನು ಕ್ರೈಸ್ತರನ್ನು ಉತ್ತೇಜಿಸಿದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಕರ್ತನ ಸೇವೆಯಲ್ಲಿ ಬಹಳಷ್ಟನ್ನು ಮಾಡಲಿಕ್ಕಿರುವುದರೊಂದಿಗೆ ಸೌವಾರ್ತಿಕರೋಪಾದಿ ನಮ್ಮನ್ನು ಕಾರ್ಯಮಗ್ನರನ್ನಾಗಿ ಇರಿಸಿಕೊಳ್ಳುವುದು, ಈ ಲೋಕವನ್ನು ಪ್ರೀತಿಸದಿರಲು ನಮಗೆ ಸಹಾಯಮಾಡುವುದು.​—⁠1 ಕೊರಿಂಥ 15:⁠58.

ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳಿರಿ

22 ಹುರುಪಿನ ರಾಜ್ಯ ಸಾರುವಿಕೆಯ ಚಟುವಟಿಕೆಯು ಬಾಳುವ ಪ್ರಯೋಜನಗಳನ್ನು ತರುತ್ತದೆ. ಯೇಸು ಹೀಗೆ ಹೇಳಿದಾಗ ಅವನಿದನ್ನು ತೋರಿಸಿದನು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ. ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.”​—⁠ಮತ್ತಾಯ 6:19-21.

23 ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಆತನ ಸಾಕ್ಷಿಗಳೋಪಾದಿ ಪ್ರತಿನಿಧಿಸುವುದಕ್ಕಿಂತ ಹೆಚ್ಚಿನ ಬೇರೆ ಯಾವ ಸುಯೋಗವೂ ನಮಗಿರಸಾಧ್ಯವಿಲ್ಲ ಎಂಬ ಅರಿವುಳ್ಳವರಾಗಿದ್ದು, ನಾವು ಯಾವಾಗಲೂ ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳುತ್ತಾ ಇರೋಣ. (ಯೆಶಾಯ 43:​10-12) ದೇವರ ಶುಶ್ರೂಷಕರೋಪಾದಿ ನಾವು ನಮ್ಮ ನೇಮಕವನ್ನು ಪೂರೈಸುತ್ತಾ ಹೋಗುವಾಗ, ತನ್ನ 90ಗಳ ಪ್ರಾಯದಲ್ಲಿರುವ ಒಬ್ಬ ಕ್ರೈಸ್ತ ಸ್ತ್ರೀಯು ದೀರ್ಘಕಾಲದಿಂದ ತಾನು ಮಾಡಿರುವ ದೇವರ ಸೇವೆಯ ಕುರಿತು ಏನು ಹೇಳಿದಳೋ ಅದೇ ರೀತಿಯ ಅನಿಸಿಕೆ ನಮಗೂ ಆಗುವ ಸಂಭವನೀಯತೆ ಇದೆ: “ಈ ಎಲ್ಲಾ ವರ್ಷಗಳಲ್ಲಿ ನನ್ನ ಕುಂದುಕೊರತೆಗಳ ಹೊರತಾಗಿಯೂ ಯೆಹೋವನು ನನ್ನ ಸೇವೆಯನ್ನು ಸ್ವೀಕರಿಸಿದ್ದಕ್ಕಾಗಿ ನಾನು ಆತನಿಗೆ ತುಂಬ ಉಪಕಾರ ಸಲ್ಲಿಸುತ್ತೇನೆ, ಮತ್ತು ಆತನೇ ಸದಾಕಾಲಕ್ಕೂ ನನ್ನ ಪ್ರೀತಿಯ ತಂದೆಯಾಗಿರಲಿ ಎಂದು ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತೇನೆ.” ತದ್ರೀತಿಯಲ್ಲಿ ನಾವು ಸಹ ದೇವರೊಂದಿಗಿನ ನಮ್ಮ ಸಂಬಂಧವನ್ನು ಅಮೂಲ್ಯವಾಗಿ ಪರಿಗಣಿಸುವಲ್ಲಿ, ಖಂಡಿತವಾಗಿಯೂ ನಾವು ಸೌವಾರ್ತಿಕರ ಕೆಲಸವನ್ನು ಪೂರ್ಣ ರೀತಿಯಲ್ಲಿ ಮಾಡಲು ಬಯಸುತ್ತೇವೆ. ನಮಗೆ ನೇಮಿಸಿರುವ ಸೇವೆಯನ್ನು ನಾವು ಹೇಗೆ ಲೋಪವಿಲ್ಲದೆ ನಡಿಸಸಾಧ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮುಂದಿನ ಲೇಖನವು ನಮಗೆ ಸಹಾಯಮಾಡುವುದು.

ನೀವು ಹೇಗೆ ಉತ್ತರಿಸುವಿರಿ?

• ನಾವು ಸೌವಾರ್ತಿಕ ಕೆಲಸವನ್ನು ಏಕೆ ಮಾಡಬೇಕು?

• ಗತಕಾಲದ ಮತ್ತು ಆಧುನಿಕ ದಿನದ ಸೌವಾರ್ತಿಕರ ಕೆಲಸದ ಕುರಿತು ನೀವು ಏನು ಹೇಳಬಲ್ಲಿರಿ?

• ನಾವು ಮನೆಯಿಂದ ಮನೆಗೆ ಏಕೆ ಸಾರುತ್ತೇವೆ?

• ಸೌವಾರ್ತಿಕ ಕೆಲಸವನ್ನು ಮಾಡುವುದರಿಂದ ವೈಯಕ್ತಿಕವಾಗಿ ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ?

[ಅಧ್ಯಯನ ಪ್ರಶ್ನೆಗಳು]

1. ಯೇಸು ತನ್ನ ಹಿಂಬಾಲಕರಿಗೆ ಯಾವ ಆಜ್ಞೆಯನ್ನು ಕೊಟ್ಟನು?

2. ಮೇಲ್ವಿಚಾರಕನಾಗಿದ್ದ ತಿಮೊಥೆಯನಿಗೆ ಯಾವ ಸಲಹೆಯು ಕೊಡಲ್ಪಟ್ಟಿತು, ಮತ್ತು ಕ್ರೈಸ್ತ ಮೇಲ್ವಿಚಾರಕರು ತಮ್ಮ ಶುಶ್ರೂಷೆಯನ್ನು ಪೂರೈಸುವ ಒಂದು ವಿಧವು ಯಾವುದು?

3, 4. ಒಬ್ಬ ಸೌವಾರ್ತಿಕನೋಪಾದಿ ಫಿಲಿಪ್ಪನಿಗೆ ಯಾವ ಅನುಭವಗಳಾಗಿದ್ದವು?

5. ಫಿಲಿಪ್ಪನ ನಾಲ್ಕುಮಂದಿ ಹೆಣ್ಣುಮಕ್ಕಳು ವಿಶೇಷವಾಗಿ ಯಾವುದಕ್ಕೆ ಪ್ರಸಿದ್ಧರಾಗಿದ್ದರು?

6. ಪ್ರಥಮ ಶತಮಾನದ ಸೌವಾರ್ತಿಕರು ಯಾವ ಸಾಫಲ್ಯವನ್ನು ಪಡೆದರು?

7. ಇಂದು ರಾಜ್ಯ ಘೋಷಕರು ಏನು ಮಾಡುತ್ತಿದ್ದಾರೆ?

8. ಈಗ ಗುರುತುಮಾಡುವ ಯಾವ ಕೆಲಸವು ನಡೆಸಲ್ಪಡುತ್ತಿದೆ, ಮತ್ತು ಯಾರಿಂದ?

9. ಶುಶ್ರೂಷೆಯಲ್ಲಿ ಹೊಸಬರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?

10. ಕ್ರಿಸ್ತನು ಹಾಗೂ ಅವನ ಆರಂಭದ ಹಿಂಬಾಲಕರು ಶುಶ್ರೂಷೆಯಲ್ಲಿ ಯಾವ ಮಾದರಿಯನ್ನಿಟ್ಟರು?

11. ಅಪೊಸ್ತಲರ ಕೃತ್ಯಗಳು 20:​20, 21ಕ್ಕನುಸಾರ, ಅಪೊಸ್ತಲ ಪೌಲನು ತನ್ನ ಶುಶ್ರೂಷೆಯಲ್ಲಿ ಏನು ಮಾಡಿದನು?

12, 13. ಫಿಲಿಪ್ಪಿಯ 1:7ಕ್ಕೆ ಹೊಂದಿಕೆಯಲ್ಲಿ, ಸಾರುವ ತಮ್ಮ ಹಕ್ಕಿನ ಕುರಿತು ಯೆಹೋವನ ಜನರು ಏನು ಮಾಡಿದ್ದಾರೆ?

14. ನಮ್ಮ ಶುಶ್ರೂಷೆಯ ಪ್ರಗತಿಪರ ಪರಿಣಾಮವು ಏನಾಗಿರಸಾಧ್ಯವಿದೆ?

15, 16. ನಾವು ಜನರ ಮನೆಗಳಿಗೆ ಪುನಃ ಪುನಃ ಏಕೆ ಭೇಟಿ ನೀಡುತ್ತೇವೆ?

17. ನಮ್ಮ ಸಾರುವ ಚಟುವಟಿಕೆಗೆ ಯಾವುದು ಅತಿ ಪ್ರಾಮುಖ್ಯವಾದ ಕಾರಣವಾಗಿದೆ?

18. ಸೌವಾರ್ತಿಕ ಕೆಲಸವನ್ನು ಮಾಡುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?

19. ಸೌವಾರ್ತಿಕರಿಗೆ ಪವಿತ್ರಾತ್ಮವು ಹೇಗೆ ಸಹಾಯಮಾಡುತ್ತದೆ?

20, 21. ಸೌವಾರ್ತಿಕರೋಪಾದಿ ಕಾರ್ಯಮಗ್ನರನ್ನಾಗಿ ಇರಿಸಿಕೊಳ್ಳುವುದರಿಂದ ಸಿಗುವ ಕೆಲವು ಆಶೀರ್ವಾದಗಳು ಮತ್ತು ಪ್ರಯೋಜನಗಳು ಯಾವುವು?

22, 23. (ಎ) ಕ್ರೈಸ್ತ ಸೌವಾರ್ತಿಕರು ಯಾವ ರೀತಿಯ ಗಂಟನ್ನು ಮಾಡಿಟ್ಟುಕೊಳ್ಳುತ್ತಿದ್ದಾರೆ? (ಬಿ) ಮುಂದಿನ ಲೇಖನವು ನಮಗೆ ಹೇಗೆ ಸಹಾಯಮಾಡುವುದು?

[ಪುಟ 10ರಲ್ಲಿರುವ ಚಿತ್ರಗಳು]

ಫಿಲಿಪ್ಪನು ಹಾಗೂ ಅವನ ಹೆಣ್ಣುಮಕ್ಕಳಂಥ ಹರ್ಷಭರಿತ ಸೌವಾರ್ತಿಕರು ಆಧುನಿಕ ದಿನಗಳಲ್ಲೂ ಇದ್ದಾರೆ

[ಪುಟ 14ರಲ್ಲಿರುವ ಚಿತ್ರ]

ನೀವು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವಾಗ ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆಯುತ್ತೀರಿ?