ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಂದನೇ ಸಮುವೇಲ 19:​12, 13ರಲ್ಲಿ ಸೂಚಿಸಲ್ಪಟ್ಟಿರುವಂತೆ, ಯೆಹೋವನ ನಂಬಿಗಸ್ತ ಸೇವಕನಾಗಿದ್ದ ದಾವೀದನು, ಅವನ ಹೆಂಡತಿಯಾದ ಮೀಕಲಳು ಪೂಜೆಯ ಬೊಂಬೆಯನ್ನು ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವಂತೆ ಏಕೆ ಅನುಮತಿಸಿದನು?

ಮೊದಲಾಗಿ ಇದರ ಪೂರ್ವಾಪರ ವಿಷಯಗಳನ್ನು ನಾವು ಸಂಕ್ಷಿಪ್ತವಾಗಿ ಪರಿಗಣಿಸೋಣ. ದಾವೀದನನ್ನು ಕೊಲ್ಲಲಿಕ್ಕಾಗಿ ಅರಸನಾದ ಸೌಲನು ಮಾಡಿದ ಒಳಸಂಚಿನ ಸುದ್ದಿಯು ದಾವೀದನ ಹೆಂಡತಿಗೆ ಮುಟ್ಟಿದಾಗ, ಅವಳು ಆ ಕೂಡಲೆ ಪ್ರತಿಕ್ರಿಯಿಸಿದಳು. ಬೈಬಲ್‌ ಹೇಳುವುದು: ‘ಮೀಕಲಳು ತನ್ನ ಗಂಡನಾದ ದಾವೀದನನ್ನು ಕಿಟಕಿಯಿಂದ ಕೆಳಕ್ಕಿಳಿಸಲು ಅವನು ಓಡಿಹೋಗಿ ತಪ್ಪಿಸಿಕೊಂಡನು. ಅನಂತರ ಆಕೆಯು ಪೂಜೆಯ ಬೊಂಬೆಯನ್ನು [ಇದು ಒಬ್ಬ ಪುರುಷನ ಗಾತ್ರ ಹಾಗೂ ಆಕಾರವುಳ್ಳದ್ದಾಗಿತ್ತು ಎಂಬುದು ಸುವ್ಯಕ್ತ] ತಂದು ಹಾಸಿಗೆಯ ಮೇಲೆ ಮಲಗಿಸಿ ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ಹಾಕಿ ಕಂಬಳಿಯನ್ನು ಹೊದಿಸಿದಳು.’ ಸೌಲನ ದೂತರು ದಾವೀದನನ್ನು ಸೆರೆಹಿಡಿಯಲು ಬಂದಾಗ, “ಅವನಿಗೆ ಸ್ವಸ್ಥವಿಲ್ಲ” ಎಂದು ಮೀಕಲಳು ಅವರಿಗೆ ಹೇಳಿದಳು. ಈ ಉಪಾಯವು, ದಾವೀದನಿಗಾಗಿ ಹುಡುಕುವುದನ್ನು ಸ್ವಲ್ಪಮಟ್ಟಿಗೆ ವಿಳಂಬಿಸಿತು ಮತ್ತು ದಾವೀದನು ತಪ್ಪಿಸಿಕೊಳ್ಳುವುದರಲ್ಲಿ ಸಫಲನಾದನು.​—⁠1 ಸಮುವೇಲ 19:11-16.

ಪುರಾತನ ಕಾಲದಲ್ಲಿ ಇಂಥ ಪೂಜೆಯ ಬೊಂಬೆಗಳು ಧಾರ್ಮಿಕ ಉಪಯೋಗಕ್ಕಾಗಿ ಮಾತ್ರವಲ್ಲದೆ ಕಾನೂನುಬದ್ಧ ಉದ್ದೇಶಗಳಿಗಾಗಿಯೂ ಇಟ್ಟುಕೊಳ್ಳಲ್ಪಡುತ್ತಿದ್ದವು ಎಂಬುದನ್ನು ಪುರಾತನ ಶೋಧನಶಾಸ್ತ್ರದ ಆವಿಷ್ಕಾರಗಳು ಸೂಚಿಸುತ್ತವೆ. ಇಂದು ಹಕ್ಕುಪತ್ರಗಳು ಮತ್ತು ಲಿಖಿತ ಉಯಿಲುಗಳು ಬಾಧ್ಯತೆಯಾಗಿ ಪಡೆದ ಹಕ್ಕುಗಳನ್ನು ನಿರ್ಧರಿಸುವಂತೆಯೇ, ದೀರ್ಘ ಸಮಯದ ಹಿಂದೆ ಪೂಜೆಯ ಬೊಂಬೆಗಳು ಅಂಥ ಹಕ್ಕನ್ನು ನಿರ್ಧರಿಸುತ್ತಿದ್ದವು. ಕೆಲವೊಂದು ಸನ್ನಿವೇಶದ ಕೆಳಗೆ, ಪೂಜೆಯ ಬೊಂಬೆಯನ್ನು ಹೊಂದಿರುವುದು ಒಬ್ಬ ಅಳಿಯನಿಗೆ ತನ್ನ ಮೃತ ಮಾವನ ಆಸ್ತಿಪಾಸ್ತಿಯನ್ನು ಬಾಧ್ಯತೆಯಾಗಿ ಪಡೆಯುವ ಕಾನೂನುಬದ್ಧ ಹಕ್ಕನ್ನು ಕೊಡಸಾಧ್ಯವಿತ್ತು ಎಂಬುದು ಸುವ್ಯಕ್ತ. ಇದು, ಇದಕ್ಕೆ ಮುಂಚಿನ ಒಂದು ಸಂದರ್ಭದಲ್ಲಿ, ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ಪೂಜೆಯ ಬೊಂಬೆಗಳನ್ನು ಏಕೆ ಕದ್ದುಕೊಂಡಳು ಹಾಗೂ ಅವಳ ತಂದೆಯು ಅವುಗಳನ್ನು ಹಿಂದೆ ಪಡೆಯಲು ಏಕೆ ಅಷ್ಟು ಕಾತುರನಾಗಿದ್ದನು ಎಂಬುದನ್ನು ವಿವರಿಸಬಹುದು. ಆ ಘಟನೆಯಲ್ಲಿ, ರಾಹೇಲಳ ಗಂಡನಾಗಿದ್ದ ಯಾಕೋಬನಿಗೆ ತನ್ನ ಹೆಂಡತಿಯು ವಿಗ್ರಹವನ್ನು ಕದ್ದುಕೊಂಡಿದ್ದ ಸಂಗತಿಯು ಗೊತ್ತಿರಲಿಲ್ಲ.​—⁠ಆದಿಕಾಂಡ 31:​14-34.

ಇಸ್ರಾಯೇಲ್ಯರು ಒಂದು ಜನಾಂಗವಾಗಿ ಪರಿಣಮಿಸಿದಾಗ, ಅವರಿಗೆ ದಶಾಜ್ಞೆಯು ಕೊಡಲ್ಪಟ್ಟಿತು. ಈ ಆಜ್ಞೆಗಳಲ್ಲಿ ಎರಡನೆಯದ್ದು, ಮೂರ್ತಿಗಳನ್ನು ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು. (ವಿಮೋಚನಕಾಂಡ 20:​4, 5) ಸಮಯಾನಂತರ, ಪ್ರವಾದಿಯಾದ ಸಮುವೇಲನು ಅರಸನಾದ ಸೌಲನೊಂದಿಗೆ ಮಾತಾಡುತ್ತಿರುವಾಗ ಈ ಆಜ್ಞೆಯ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದನು. ಅವನು ಹೇಳಿದ್ದು: “ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದಾಗಿರುವದು; ಹಟವು ಮಿಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವುದು.” (1 ಸಮುವೇಲ 15:23) ಈ ಕಾರಣದಿಂದಲೇ, ಬಹುಶಃ ಪೂಜೆಯ ಬೊಂಬೆಯು ಇಸ್ರಾಯೇಲಿನಲ್ಲಿ ಆಸ್ತಿಯನ್ನು ಬಾಧ್ಯತೆಯಾಗಿ ಪಡೆಯುವ ಉದ್ದೇಶಕ್ಕಾಗಿ ಉಪಯೋಗಿಸಲ್ಪಡುತ್ತಿರಲಿಲ್ಲ. ಆದರೂ, ಯೆಹೂದಿ ಮೂಢನಂಬಿಕೆಯ ಈ ಪುರಾತನ ರೂಪವು ಕೆಲವೊಂದು ಇಸ್ರಾಯೇಲ್ಯ ಮನೆವಾರ್ತೆಗಳಲ್ಲಿ ಮುಂದುವರಿದಿದ್ದಂತೆ ತೋರುತ್ತದೆ. (ನ್ಯಾಯಸ್ಥಾಪಕರು 17:5, 6; 2 ಅರಸುಗಳು 23:24) ಮೀಕಲಳು ತನ್ನ ಸೊತ್ತುಗಳ ನಡುವೆ ಪೂಜೆಯ ಬೊಂಬೆಯನ್ನು ಇಟ್ಟುಕೊಂಡಿದ್ದ ಸಂಗತಿಯು, ಅವಳ ಹೃದಯವು ಸಂಪೂರ್ಣವಾಗಿ ಯೆಹೋವನ ಕಡೆಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ದಾವೀದನಿಗೆ ಈ ಪ್ರತಿಮೆಯ ಕುರಿತು ಏನೂ ತಿಳಿದಿರಲಿಲ್ಲ, ಅಥವಾ ಮೀಕಲಳು ಅರಸನಾದ ಸೌಲನ ಮಗಳಾಗಿದ್ದರಿಂದ ಅವನು ಅದನ್ನು ಸಹಿಸಿಕೊಂಡಿದ್ದಿರಬಹುದು ಅಷ್ಟೆ.

ಯೆಹೋವನಿಗೆ ಸಲ್ಲತಕ್ಕ ಅನನ್ಯ ಭಕ್ತಿಯ ಕುರಿತಾದ ದಾವೀದನ ದೃಷ್ಟಿಕೋನವು ಈ ಮುಂದಿನ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟಿದೆ: “ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವತೆಗಳಲ್ಲಿ ಆತನೇ ಭಯಂಕರನು. ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.”​—⁠1 ಪೂರ್ವಕಾಲವೃತ್ತಾಂತ 16:25, 26.

[ಪುಟ 29ರಲ್ಲಿರುವ ಚಿತ್ರ]

ದಶಾಜ್ಞೆಯಲ್ಲಿ ಎರಡನೆಯದ್ದು, ಇಲ್ಲಿ ತೋರಿಸಲ್ಪಟ್ಟಿರುವ ಪೂಜೆಯ ಬೊಂಬೆಯಂಥ ವಿಗ್ರಹಗಳನ್ನು ಮಾಡುವುದನ್ನು ನಿಷೇಧಿಸಿತು

[ಕೃಪೆ]

ಈ ಪುಸ್ತಕದಿಂದ: The Holy Land, Vol. II, 1859