ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಯಾಜಕಕಾಂಡ ಅಧ್ಯಾಯ 25ರಲ್ಲಿ ತಿಳಿಸಲ್ಪಟ್ಟಿರುವ ಜೂಬಿಲಿ ಸಂವತ್ಸರದ ಏರ್ಪಾಡು ಏನನ್ನು ಮುನ್ಚಿತ್ರಿಸುತ್ತದೆ?
‘ಏಳನೆಯ ವರುಷವು ವಿಶ್ರಾಂತಿಕಾಲವಾಗಿಯೂ ಸಬ್ಬತ್ಕಾಲವಾಗಿಯೂ ಇರಬೇಕು’ ಎಂದು ಮೋಶೆಯ ಧರ್ಮಶಾಸ್ತ್ರವು ವಿಧಿಸಿತ್ತು. ಆ ವರುಷದ ಬಗ್ಗೆ ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲಾಗಿತ್ತು: “ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷೇತೋಟದ ಕೆಲಸವನ್ನು ನಡಿಸಬಾರದು. ಹೊಲದಲ್ಲಿ ತಾನಾಗಿ ಬೆಳೆದ ಪೈರನ್ನು ನೀವು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ಹಣ್ಣನ್ನು ಸಂಗ್ರಹಿಸಬಾರದು. ಆ ವರುಷವೆಲ್ಲಾ ಭೂಮಿಗೆ ಸಂಪೂರ್ಣವಾಗಿ ವಿಶ್ರಾಂತಿಯಿರಬೇಕು.” (ಯಾಜಕಕಾಂಡ 25:4, 5) ಇದಕ್ಕನುಸಾರ ಪ್ರತಿ ಏಳನೆಯ ವರುಷವು, ಸಬ್ಬತ್ ವರುಷವಾಗಿರಬೇಕಿತ್ತು. ಮತ್ತು ಪ್ರತಿ 50ನೆಯ ವರುಷ, ಅಂದರೆ ಏಳನೆಯ ಸಬ್ಬತ್ ವರುಷದ ಮುಂದಿನ ವರುಷವು ಒಂದು ಜೂಬಿಲಿಯಾಗಿರಬೇಕಿತ್ತು. ಆ ವರುಷ ಏನು ನಡೆಯುತ್ತಿತ್ತು?
ಮೋಶೆಯ ಮುಖಾಂತರ ಯೆಹೋವನು ಇಸ್ರಾಯೇಲಿಗೆ ಹೇಳಿದ್ದು: “ನೀವು ಐವತ್ತನೆಯ ವರುಷವನ್ನು ದೇವರಿಗೆ ಮೀಸಲಾದ ವರುಷವೆಂದು ಭಾವಿಸಿ ಅದರಲ್ಲಿ ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂಬದಾಗಿ ಸಾರಬೇಕು. ಅದು ಜೂಬಿಲಿ ಸಂವತ್ಸರವಾದದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಸ್ವಜನರ ಬಳಿಗೂ ಹೋಗಿ ಇರಬಹುದು. ಆ ಐವತ್ತನೆಯ ವರುಷದಲ್ಲಿ ಅಂದರೆ ಜೂಬಿಲಿ ಸಂವತ್ಸರದಲ್ಲಿ ನೀವು ಬೀಜವನ್ನು ಬಿತ್ತಬಾರದು; ತಾನಾಗಿ ಬೆಳೆದ ಪೈರನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಆದ ಹಣ್ಣನ್ನು ಸಂಗ್ರಹಿಸಬಾರದು.” (ಯಾಜಕಕಾಂಡ 25:10, 11) ಭೂಮಿಗೆ ಇಲ್ಲವೆ ಜಮೀನಿಗೆ, ಜೂಬಿಲಿ ಸಂವತ್ಸರದ ಸಮಯದಲ್ಲಿ ಕ್ರಮಾನುಗತವಾಗಿ ಎರಡು ಸಬ್ಬತ್ ವರುಷಗಳಿರುತ್ತಿದ್ದವು. ದೇಶದ ನಿವಾಸಿಗಳಿಗಾದರೊ ಜೂಬಿಲಿಯು ಸ್ವಾತಂತ್ರ್ಯವನ್ನು ತರುತ್ತಿತ್ತು. ದಾಸತ್ವಕ್ಕೆ ಮಾರಲ್ಪಟ್ಟಿದ್ದ ಯೆಹೂದ್ಯರನ್ನು ಬಿಡುಗಡೆಗೊಳಿಸಬೇಕಿತ್ತು. ಒಬ್ಬ ವ್ಯಕ್ತಿಯು ತನ್ನ ಪಿತ್ರಾರ್ಜಿತ ಆಸ್ತಿಯನ್ನು ನಿರ್ಬಂಧಕ್ಕೊಳಗಾಗಿ ಮಾರಬೇಕಾಗಿ ಬಂದಿದ್ದಲ್ಲಿ, ಆ ವರುಷ ಅದನ್ನು ಅವನ ಕುಟುಂಬಕ್ಕೆ ಹಿಂದಿರುಗಿಸಬೇಕಿತ್ತು. ಜೂಬಿಲಿ ಸಂವತ್ಸರವು, ಪ್ರಾಚೀನ ಇಸ್ರಾಯೇಲಿಗೆ ಪುನಸ್ಸ್ಥಾಪನೆ ಮತ್ತು ವಿಮೋಚನೆಯ ವರುಷವಾಗಿರಲಿತ್ತು. ಇದು ಕ್ರೈಸ್ತರಿಗಾಗಿ ಏನನ್ನು ಮುನ್ಚಿತ್ರಿಸುತ್ತದೆ?
ಮೊದಲನೆಯ ಪುರುಷನಾದ ಆದಾಮನ ದಂಗೆಯು, ಮಾನವಕುಲವನ್ನು ಪಾಪದ ದಾಸತ್ವಕ್ಕೆ ತಳ್ಳಿತು. ಮಾನವಕುಲವನ್ನು ಪಾಪದ * (ಮತ್ತಾಯ 20:28; ಯೋಹಾನ 3:16; 1 ಯೋಹಾನ 2:1, 2) ಕ್ರೈಸ್ತರು ಪಾಪದ ನಿಯಮದಿಂದ ಬಿಡುಗಡೆಹೊಂದುವುದು ಯಾವಾಗ? ಅಭಿಷಿಕ್ತ ಕ್ರೈಸ್ತರನ್ನು ಸಂಬೋಧಿಸುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು.” (ರೋಮಾಪುರ 8:2) ಸ್ವರ್ಗೀಯ ಜೀವನದ ನಿರೀಕ್ಷೆಯುಳ್ಳವರು, ಪವಿತ್ರಾತ್ಮದಿಂದ ಅಭಿಷಿಕ್ತರಾಗುವಾಗ ಈ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಅವರ ದೇಹಗಳು ರಕ್ತಮಾಂಸದವುಗಳು ಮತ್ತು ಅಪರಿಪೂರ್ಣವಾಗಿದ್ದರೂ ದೇವರು ಅವರನ್ನು ನೀತಿವಂತರೆಂದು ಘೋಷಿಸಿ, ತನ್ನ ಆಧ್ಯಾತ್ಮಿಕ ಪುತ್ರರನ್ನಾಗಿ ತೆಗೆದುಕೊಳ್ಳುತ್ತಾನೆ. (ರೋಮಾಪುರ 3:24; 8:16, 17) ಅಭಿಷಿಕ್ತರಿಗೆ, ಕ್ರೈಸ್ತ ಜೂಬಿಲಿಯು ಸಾ.ಶ. 33ರ ಪಂಚಾಶತ್ತಮದಲ್ಲಿ ಆರಂಭಗೊಂಡಿತು.
ಬಿಗಿಮುಷ್ಠಿಯಿಂದ ಬಿಡಿಸುವ ದೇವರ ಏರ್ಪಾಡು, ಯೇಸು ಕ್ರಿಸ್ತನ ಈಡು ಯಜ್ಞವಾಗಿದೆ.ಭೂಮಿಯ ಮೇಲೆ ನಿತ್ಯಜೀವದ ಪ್ರತೀಕ್ಷೆಯುಳ್ಳ ‘ಬೇರೆ ಕುರಿಗಳ’ ಕುರಿತಾಗಿ ಏನು? (ಯೋಹಾನ 10:16) ಬೇರೆ ಕುರಿಗಳಿಗೆ, ಕ್ರಿಸ್ತನ ಸಾವಿರ ವರುಷದ ಆಳ್ವಿಕೆಯು, ಪುನಸ್ಸ್ಥಾಪನೆ ಮತ್ತು ವಿಮೋಚನೆಯ ಸಮಯವಾಗಿ ಪರಿಣಮಿಸುವುದು. ಈ ಸಹಸ್ರವರ್ಷದ ಜೂಬಿಲಿಯಲ್ಲಿ, ಯೇಸು ತನ್ನ ಈಡು ಯಜ್ಞದ ಪ್ರಯೋಜನಗಳನ್ನು ನಂಬಿಕೆಯುಳ್ಳ ಮಾನವಕುಲಕ್ಕೆ ಅನ್ವಯಿಸುವನು ಮತ್ತು ಪಾಪದ ಪರಿಣಾಮಗಳನ್ನು ರದ್ದುಮಾಡುವನು. (ಪ್ರಕಟನೆ 21:3, 4) ಕ್ರಿಸ್ತನ ಸಹಸ್ರವರ್ಷದಾಳಿಕೆಯ ಕೊನೆಯಲ್ಲಿ, ಮಾನವಕುಲವು ಪರಿಪೂರ್ಣತೆಯನ್ನು ತಲಪಿ, ಬಾಧ್ಯತೆಯಾಗಿ ಬಂದಿರುವ ಪಾಪಮರಣಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವುದು. (ರೋಮಾಪುರ 8:21) ಈ ಕೆಲಸವು ಪೂರೈಸಲ್ಪಡುವಾಗ, ಕ್ರೈಸ್ತ ಜೂಬಿಲಿಯು ಕೊನೆಗೊಳ್ಳುವುದು.
[ಪಾದಟಿಪ್ಪಣಿ]
^ ಪ್ಯಾರ. 5 ವಾಸ್ತವದಲ್ಲಿ ಯೇಸುವನ್ನು, ‘ಸೆರೆಯವರಿಗೆ ಬಿಡುಗಡೆಯಾಗುವದನ್ನು ಪ್ರಸಿದ್ಧಿಪಡಿಸಲು’ ಕಳುಹಿಸಲಾಗಿತ್ತು. (ಯೆಶಾಯ 61:1-7; ಲೂಕ 4:16-21) ಅವನು ಆಧ್ಯಾತ್ಮಿಕವಾದ ಬಿಡುಗಡೆಯನ್ನು ಪ್ರಕಟಿಸಿದನು.
[ಪುಟ 26ರಲ್ಲಿರುವ ಚಿತ್ರ]
ಸಹಸ್ರವರ್ಷದ ಜೂಬಿಲಿಯು—‘ಬೇರೆ ಕುರಿಗಳಿಗೆ’ ಪುನಸ್ಸ್ಥಾಪನೆ ಮತ್ತು ವಿಮೋಚನೆಯ ಸಮಯ