ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ಅವನು ಏನನ್ನು ಅರ್ಥೈಸಿದನು?

ಯೇಸು ಆಗಷ್ಟೇ 70 ಮಂದಿ ಶಿಷ್ಯರನ್ನು ಆರಿಸಿಕೊಂಡು, ಅವರನ್ನು “ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.” ಆ 70 ಮಂದಿ ಹಿಂದಿರುಗಿದಾಗ, ತಮ್ಮ ಸಾರುವ ನೇಮಕದಲ್ಲಿ ಕಂಡುಕೊಂಡ ಯಶಸ್ಸಿನಲ್ಲಿ ಅವರು ಬಹಳವಾಗಿ ಆನಂದಿಸಿದರು. ಅವರು ಹೇಳಿದ್ದು: “ಸ್ವಾಮೀ, ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ.” ಆಗ ಯೇಸು ತಿಳಿಸಿದ್ದು: “ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು.”​—⁠ಲೂಕ 10:1, 17, 18.

ಆರಂಭದಲ್ಲಿ, ಈಗಾಗಲೇ ಸಂಭವಿಸಿರುವಂಥ ಒಂದು ಘಟನೆಯನ್ನು ಯೇಸು ಸೂಚಿಸಿ ಮಾತಾಡುತ್ತಿರುವಂತೆ ತೋರಬಹುದು. ಆದರೂ, ಯೇಸು ಈ ಮೇಲಿನ ಮಾತುಗಳನ್ನು ನುಡಿದು 60 ವರ್ಷಗಳು ಕಳೆದ ಬಳಿಕ, ವೃದ್ಧ ಅಪೊಸ್ತಲ ಯೋಹಾನನು ಸಹ ತದ್ರೀತಿಯ ಭಾಷೆಯನ್ನೇ ಉಪಯೋಗಿಸುತ್ತಾ ಬರೆದುದು: “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”​—⁠ಪ್ರಕಟನೆ 12:⁠9.

ಯೋಹಾನನು ಈ ಮಾತುಗಳನ್ನು ಬರೆದಾಗ, ಸೈತಾನನು ಇನ್ನೂ ಪರಲೋಕದಲ್ಲೇ ನಿವಾಸಿಸುತ್ತಿದ್ದನು. ಇದು ನಮಗೆ ಹೇಗೆ ಗೊತ್ತು? ಏಕೆಂದರೆ ಪ್ರಕಟನೆಯು ಪ್ರವಾದನಾ ಪುಸ್ತಕವಾಗಿದೆ, ಇತಿಹಾಸದ್ದಲ್ಲ. (ಪ್ರಕಟನೆ 1:⁠1) ಆದುದರಿಂದ, ಯೋಹಾನನು ಪ್ರಕಟನೆ ಪುಸ್ತಕವನ್ನು ಬರೆದಾಗ, ಸೈತಾನನು ಇನ್ನೂ ಭೂಮಿಗೆ ದೊಬ್ಬಲ್ಪಟ್ಟಿರಲಿಲ್ಲ. ವಾಸ್ತವದಲ್ಲಿ, 1914ರಲ್ಲಿ ದೇವರ ರಾಜ್ಯದ ರಾಜನೋಪಾದಿ ಯೇಸು ಸಿಂಹಾಸನಾರೂಢನಾಗಿ ಸ್ವಲ್ಪ ಸಮಯ ಕಳೆಯುವ ವರೆಗೆ ಇದು ಸಂಭವಿಸಲಿಲ್ಲ ಎಂದು ಪುರಾವೆಯು ತೋರಿಸುತ್ತದೆ. *​—⁠ಪ್ರಕಟನೆ 12:​1-10.

ಹಾಗಾದರೆ, ಸೈತಾನನು ಆಕಾಶದಿಂದ ಬಿದ್ದಿರುವಂತೆ ಅಂದರೆ ಈ ಘಟನೆಯು ಈಗಾಗಲೇ ಸಂಭವಿಸಿರುವಂತೆ ಯೇಸು ಮಾತಾಡಿದ್ದೇಕೆ? ಅಯುಕ್ತವಾದ ಅಹಂಕಾರವನ್ನು ತೋರಿಸಿದ್ದಕ್ಕಾಗಿ ಯೇಸು ತನ್ನ ಶಿಷ್ಯರನ್ನು ಗದರಿಸುತ್ತಿದ್ದನು ಎಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ಕಾರ್ಯತಃ ಅವನು ಹೀಗೆ ಹೇಳುತ್ತಿದ್ದನೆಂದು ಅವರು ನಂಬುತ್ತಾರೆ: ‘ದೆವ್ವಗಳ ವಿರುದ್ಧ ನೀವು ಜಯವನ್ನು ಸಾಧಿಸಿದಿರಿ, ಆದರೆ ಜಂಬಕೊಚ್ಚಿಕೊಳ್ಳಬೇಡಿ. ಸೈತಾನನು ಅಹಂಕಾರಿಯಾದನು, ಮತ್ತು ಇದು ಅವನ ಅಧಃಪತನಕ್ಕೆ ನಡಿಸಿತು.’

ಈ ವಿಷಯದಲ್ಲಿ ನಾವು ಏನನ್ನೂ ಖಚಿತವಾಗಿ ಹೇಳಸಾಧ್ಯವಿಲ್ಲ. ಆದರೂ, ಯೇಸು ಇಲ್ಲಿ ತನ್ನ ಶಿಷ್ಯರ ಸಂತೋಷದಲ್ಲಿ ಜೊತೆಗೂಡಿ, ಸೈತಾನನ ಭಾವೀ ಅವನತಿಯನ್ನು ಸೂಚಿಸಿ ಮಾತಾಡುತ್ತಿದ್ದನೆಂಬುದರ ಸಾಧ್ಯತೆಯು ಹೆಚ್ಚು. ತನ್ನ ಶಿಷ್ಯರಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ಯೇಸು ಪಿಶಾಚನ ಕ್ರೂರ ಹಗೆತನದ ಕುರಿತು ಚೆನ್ನಾಗಿ ಬಲ್ಲವನಾಗಿದ್ದನು. ಆ ಪ್ರಬಲ ದೆವ್ವಗಳು ತನ್ನ ಅಪರಿಪೂರ್ಣ ಮಾನವ ಶಿಷ್ಯರಿಗೆ ಅಧೀನಗೊಳಿಸಲ್ಪಡುತ್ತಿರುವುದನ್ನು ನೋಡಿ ಯೇಸುವಿಗಾದ ಆನಂದವನ್ನು ತುಸು ಊಹಿಸಿಕೊಳ್ಳಿರಿ! ದೆವ್ವಗಳ ಮೇಲಿನ ಈ ವಿಜಯವು, ಪ್ರಧಾನ ದೇವದೂತನಾದ ಮೀಕಾಯೇಲನೋಪಾದಿ ಯೇಸು ಸೈತಾನನೊಂದಿಗೆ ಹೋರಾಟ ನಡೆಸಿ, ಪರಲೋಕದಿಂದ ಅವನನ್ನು ಭೂಮಿಗೆ ದೊಬ್ಬುವಂಥ ಭಾವೀ ದಿನದ ಕೇವಲ ಒಂದು ನಸುನೋಟವಾಗಿತ್ತಷ್ಟೆ.

ಸೈತಾನನು “ಬೀಳುವದನ್ನು” ಕಂಡೆನು ಎಂದು ಯೇಸು ಹೇಳಿದಾಗ, ಸೈತಾನನ ಪತನದ ನಿಶ್ಚಿತತೆಯನ್ನು ಅವನು ಒತ್ತಿಹೇಳುತ್ತಿದ್ದನು ಎಂಬುದಂತೂ ಸುಸ್ಪಷ್ಟ. ಇದು, ಭವಿಷ್ಯತ್ತಿನಲ್ಲಿ ನಡೆಯಲಿರುವ ಘಟನೆಗಳನ್ನು ಈಗಾಗಲೇ ನಡೆದಿವೆಯೊ ಎಂಬಂತೆ ಮಾತಾಡುವ ಇತರ ಬೈಬಲ್‌ ಪ್ರವಾದನೆಗಳಿಗೆ ತತ್ಸಮಾನವಾಗಿದೆ. ಉದಾಹರಣೆಗೆ, ಯೆಶಾಯ 52:​13–53:12ರಲ್ಲಿರುವ ಮೆಸ್ಸೀಯನ ಕುರಿತಾದ ಪ್ರವಾದನೆಯಲ್ಲಿ ಭೂತಕಾಲ ಮತ್ತು ಭವಿಷ್ಯತ್ಕಾಲಗಳು ಮಿಶ್ರವಾಗಿರುವುದನ್ನು ಗಮನಿಸಿರಿ. ಸೈತಾನನು ಆಕಾಶದಿಂದ ದೊಬ್ಬಲ್ಪಡುವ ಸಂಗತಿಯು ತನ್ನ ತಂದೆಯ ಉದ್ದೇಶಕ್ಕನುಸಾರ ಖಂಡಿತವಾಗಿಯೂ ಸಂಭವಿಸುವುದು ಎಂಬ ದೃಢಭರವಸೆಯನ್ನು ಯೇಸು ವ್ಯಕ್ತಪಡಿಸುತ್ತಿದ್ದನು ಎಂಬುದು ಸಂಭವನೀಯ. ದೇವರ ನೇಮಿತ ಸಮಯದಲ್ಲಿ, ಸೈತಾನನೂ ಅವನ ದೆವ್ವಗಳೂ ಅಧೋಲೋಕದಲ್ಲಿ ಬಂಧಿಸಲ್ಪಡುವವು ಮತ್ತು ನಂತರ ನಿತ್ಯಕ್ಕೂ ಸಂಪೂರ್ಣವಾಗಿ ನಾಶಮಾಡಲ್ಪಡುವವು ಎಂಬ ವಿಷಯದಲ್ಲಿಯೂ ಯೇಸು ನಿಶ್ಚಿತನಾಗಿದ್ದನು.​—⁠ರೋಮಾಪುರ 16:20; ಇಬ್ರಿಯ 2:14; ಪ್ರಕಟನೆ 20:1-3, 7-10.

[ಪಾದಟಿಪ್ಪಣಿ]

^ ಪ್ಯಾರ. 5 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 10ನೆಯ ಅಧ್ಯಾಯ, ಮತ್ತು ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 27ನೆಯ ಅಧ್ಯಾಯವನ್ನು ನೋಡಿರಿ.