ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ನಿರ್ದಿಷ್ಟ ವಿಧರ್ಮಿ ಸ್ತ್ರೀಯರೊಂದಿಗೆ ವಿವಾಹ ಸಂಬಂಧಗಳನ್ನು ಬೆಳೆಸಬಾರದು ಎಂದು ಮೋಶೆಯ ಧರ್ಮಶಾಸ್ತ್ರವು ಆಜ್ಞೆಯಿತ್ತಿರುವಾಗ, ಇಸ್ರಾಯೇಲ್‌ ಪುರುಷರು ಸೆರೆಹಿಡಿಯಲ್ಪಟ್ಟ ವಿಧರ್ಮಿ ಸ್ತ್ರೀಯರನ್ನು ವಿವಾಹವಾಗುವಂತೆ ಅನುಮತಿಸಲ್ಪಟ್ಟದ್ದೇಕೆ?​—ಧರ್ಮೋಪದೇಶಕಾಂಡ 7:​1-3; 21:​10, 11.

ಇದು ಅನುಮತಿಸಲ್ಪಟ್ಟಿದ್ದರ ಕಾರಣವು, ವಿಶೇಷ ಸನ್ನಿವೇಶಗಳನ್ನು ಒಳಗೂಡಿತ್ತು. ಕಾನಾನ್‌ ದೇಶದಲ್ಲಿದ್ದ ಏಳು ಜನಾಂಗಗಳ ಪಟ್ಟಣಗಳನ್ನು ಸಂಪೂರ್ಣವಾಗಿ ನಿರ್ನಾಮಮಾಡಿ, ಅವುಗಳ ಸರ್ವ ನಿವಾಸಿಗಳನ್ನು ಕೊಲ್ಲುವಂತೆ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞೆಯಿತ್ತಿದ್ದನು. (ಧರ್ಮೋಪದೇಶಕಾಂಡ 20:​15-18) ಇತರ ಜನಾಂಗಗಳ ವಿಷಯದಲ್ಲಿ ಹೇಳುವುದಾದರೆ, ಬದುಕಿ ಉಳಿಯುತ್ತಿದ್ದ ವಯಸ್ಕರು, ಸೆರೆಹಿಡಿಯಲ್ಪಟ್ಟ ಕನ್ಯೆಯರು ಮಾತ್ರ ಆಗಿದ್ದಿರಬಹುದು. (ಅರಣ್ಯಕಾಂಡ 31:17, 18; ಧರ್ಮೋಪದೇಶಕಾಂಡ 20:14) ಇಂಥ ಸ್ತ್ರೀಯು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮಾತ್ರ ಒಬ್ಬ ಇಸ್ರಾಯೇಲ್‌ ಪುರುಷನು ಅವಳನ್ನು ವಿವಾಹವಾಗಸಾಧ್ಯವಿತ್ತು.

ಇಂಥ ಒಬ್ಬ ಸ್ತ್ರೀಯು ತೆಗೆದುಕೊಳ್ಳಬೇಕಾಗಿದ್ದ ಹೆಜ್ಜೆಗಳ ಕುರಿತು ಬೈಬಲ್‌ ಹೇಳುವುದು: “ಅವಳು ಕ್ಷೌರಮಾಡಿಸಿಕೊಂಡು ಉಗುರುಗಳನ್ನು ತೆಗೆದುಕೊಂಡು ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು ಅವನ ಮನೆಯಲ್ಲಿ ಒಂದು ತಿಂಗಳಿನ ವರೆಗೆ ತಾಯಿತಂದೆಗಳ ವಿಯೋಗದ ನಿಮಿತ್ತ ಹಂಬಲಿಸಲಿ. ಆ ಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.”​—⁠ಧರ್ಮೋಪದೇಶಕಾಂಡ 21:12, 13.

ಒಬ್ಬ ಇಸ್ರಾಯೇಲ್ಯನು ವಿವಾಹವಾಗಲು ಬಯಸುವಂಥ ಸೆರೆಹಿಡಿಯಲ್ಪಟ್ಟ ಕನ್ಯೆಯು ತನ್ನ ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕಾಗಿತ್ತು. ತಲೆಯನ್ನು ಬೋಳಿಸಿಕೊಳ್ಳುವುದು ದುಃಖ ಅಥವಾ ವ್ಯಥೆಯ ತೋರ್ಪಡಿಸುವಿಕೆಯಾಗಿತ್ತು. (ಯೆಶಾಯ 3:24) ಉದಾಹರಣೆಗೆ, ಮೂಲಪಿತನಾದ ಯೋಬನು ತನ್ನೆಲ್ಲಾ ಮಕ್ಕಳನ್ನು ಹಾಗೂ ಆಸ್ತಿಪಾಸ್ತಿಯನ್ನು ಕಳೆದುಕೊಂಡಾಗ, ಶೋಕದ ಸಂಕೇತವಾಗಿ ತನ್ನ ತಲೆಯನ್ನು ಬೋಳಿಸಿಕೊಂಡನು. (ಯೋಬ 1:20) ವಿಧರ್ಮಿ ಸ್ತ್ರೀಯು ತನ್ನ ಉಗುರುಗಳನ್ನು ಸಹ ಕತ್ತರಿಸಿಕೊಳ್ಳಬೇಕಾಗಿತ್ತು. ಆಗ ಒಂದುವೇಳೆ ಅವಳ ಉಗುರುಗಳಿಗೆ ಬಣ್ಣವನ್ನು ಹಚ್ಚಿದರೂ ಅವು ಆಕರ್ಷಕವಾಗಿ ಕಾಣಿಸದಿರುತ್ತಿದ್ದವು. (ಧರ್ಮೋಪದೇಶಕಾಂಡ 21:​12) ಸೆರೆಹಿಡಿಯಲ್ಪಟ್ಟ ಸ್ತ್ರೀಯು ತೆಗೆದಿರಿಸಬೇಕಾಗಿದ್ದ ‘ಸೆರೆಯ ಬಟ್ಟೆಯು’ ಏನಾಗಿತ್ತು? ಕಾನಾನ್‌ ಪಟ್ಟಣಗಳು ವಶಪಡಿಸಿಕೊಳ್ಳಲ್ಪಡಲಿಕ್ಕಿದ್ದಾಗ, ಅಲ್ಲಿನ ಸ್ತ್ರೀಯರು ತಮ್ಮ ಬಳಿಯಿರುವ ಅತ್ಯುತ್ತಮ ಬಟ್ಟೆಗಳನ್ನು ಧರಿಸುವುದು ವಾಡಿಕೆಯಾಗಿತ್ತು. ತಮ್ಮನ್ನು ಯಾರು ಸೆರೆಹಿಡಿಯುತ್ತಾರೋ ಅವರನ್ನು ಆಕರ್ಷಿಸುವ ನಿರೀಕ್ಷೆಯಿಂದ ಅವರು ಹೀಗೆ ಮಾಡುತ್ತಿದ್ದರು. ಆದರೆ ಸೆರೆಹಿಡಿಯಲ್ಪಟ್ಟ ಸ್ತ್ರೀಯೊಬ್ಬಳು ಶೋಕದ ಕಾಲದಲ್ಲಿ ಇಂಥ ಉಡುಗೆತೊಡುಗೆಯನ್ನು ತೆಗೆದುಹಾಕಬೇಕಾಗಿತ್ತು.

ಸೆರೆಹಿಡಿಯಲ್ಪಟ್ಟಿದ್ದು, ಒಬ್ಬ ಇಸ್ರಾಯೇಲ್ಯ ಪುರುಷನ ಹೆಂಡತಿಯಾಗಲಿದ್ದ ಸ್ತ್ರೀಯು, ಮೃತಪಟ್ಟಿರುವ ತನ್ನ ಪ್ರಿಯ ಜನರ ವಿಯೋಗದ ನಿಮಿತ್ತ ಒಂದು ತಿಂಗಳು ಗೋಳಾಡಬೇಕಿತ್ತು. ಕಾನಾನ್ಯ ಪಟ್ಟಣಗಳ ಸಂಹಾರವು ಎಷ್ಟು ಸಂಪೂರ್ಣವಾಗಿರುತ್ತಿತ್ತೆಂದರೆ, ಅವಳ ಮಾಜಿ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಸಾಮಾಜಿಕ ಸಂಬಂಧಗಳು ಅಸ್ತಿತ್ವದಲ್ಲಿರುತ್ತಿರಲಿಲ್ಲ. ಇಸ್ರಾಯೇಲ್‌ ಸೈನಿಕರು ಅವಳ ದೇವದೇವತೆಗಳ ವಿಗ್ರಹಗಳನ್ನು ಸಂಪೂರ್ಣವಾಗಿ ನಾಶಮಾಡಿರುತ್ತಿದ್ದುದರಿಂದ, ಅವಳ ಆರಾಧನಾ ವಸ್ತುಗಳು ಇನ್ನೆಂದಿಗೂ ಅವಳ ಕೈಗೆ ಸಿಗಸಾಧ್ಯವಿರಲಿಲ್ಲ. ಶೋಕದ ತಿಂಗಳು ಶುದ್ಧೀಕರಣದ ಕಾಲಾವಧಿಯಾಗಿಯೂ ಕಾರ್ಯನಡಿಸಲಿಕ್ಕಿತ್ತು. ಏಕೆಂದರೆ ಈ ಸಮಯದಲ್ಲಿ ಸೆರೆಹಿಡಿಯಲ್ಪಟ್ಟಿರುವ ಸ್ತ್ರೀಯು ತನ್ನ ಗತ ಧಾರ್ಮಿಕ ಆರಾಧನೆಯ ಎಲ್ಲಾ ಅಂಶಗಳಿಂದ ತನ್ನನ್ನು ಸಂಪೂರ್ಣವಾಗಿ ವಿಮುಕ್ತಗೊಳಿಸಿಕೊಳ್ಳುತ್ತಿದ್ದಳು.

ಆದರೂ, ಸರ್ವಸಾಮಾನ್ಯ ವಿಧರ್ಮಿ ಸ್ತ್ರೀಯರ ವಿಷಯದಲ್ಲಿ ಸನ್ನಿವೇಶವು ತೀರ ಭಿನ್ನವಾಗಿತ್ತು. ಈ ವಿಷಯದಲ್ಲಿ ಯೆಹೋವನು ಹೀಗೆ ಆಜ್ಞಾಪಿಸಿದ್ದನು: “ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು.” (ಧರ್ಮೋಪದೇಶಕಾಂಡ 7:3) ಈ ನಿರ್ಬಂಧಕ್ಕೆ ಕಾರಣವೇನಾಗಿತ್ತು? ಧರ್ಮೋಪದೇಶಕಾಂಡ 7:4 ತಿಳಿಸುವುದು: “ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು.” ಆದುದರಿಂದ, ಧಾರ್ಮಿಕವಾಗಿ ಕಲುಷಿತವಾಗುವುದರಿಂದ ಇಸ್ರಾಯೇಲ್ಯರನ್ನು ಸಂರಕ್ಷಿಸುವ ಉದ್ದೇಶಕ್ಕಾಗಿಯೇ ಈ ನಿಷೇಧವು ಜಾರಿಯಲ್ಲಿತ್ತು. ಧರ್ಮೋಪದೇಶಕಾಂಡ 21:​10-13ರಲ್ಲಿ ವರ್ಣಿಸಲ್ಪಟ್ಟಿರುವ ಸನ್ನಿವೇಶಗಳಲ್ಲಿರುವ ವಿಧರ್ಮಿ ಸ್ತ್ರೀಯೊಬ್ಬಳಾದರೊ ಇಂಥ ಬೆದರಿಕೆಯನ್ನು ಒಡ್ಡಸಾಧ್ಯವಿರಲಿಲ್ಲ. ಅವಳ ಸಂಬಂಧಿಕರೆಲ್ಲರೂ ಮೃತಪಟ್ಟಿದ್ದು, ಅವಳ ದೇವದೇವತೆಗಳನ್ನು ಪ್ರತಿನಿಧಿಸುವ ವಿಗ್ರಹಗಳೆಲ್ಲವೂ ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟಿರುತ್ತಿದ್ದವು. ಸುಳ್ಳು ಧರ್ಮವನ್ನು ಅನುಸರಿಸುತ್ತಿದ್ದ ಜನರೊಂದಿಗೆ ಅವಳಿಗೆ ಯಾವುದೇ ರೀತಿಯ ಸಂಪರ್ಕವು ಇರುತ್ತಿರಲಿಲ್ಲ. ಇಂಥ ಸನ್ನಿವೇಶಗಳ ಕೆಳಗೆ ಒಬ್ಬ ಇಸ್ರಾಯೇಲ್ಯನು ವಿಧರ್ಮಿ ಸ್ತ್ರೀಯನ್ನು ವಿವಾಹವಾಗಲು ಅನುಮತಿಯಿತ್ತು.