ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಸಿಗುವ ಪ್ರಯೋಜನ

ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಸಿಗುವ ಪ್ರಯೋಜನ

ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಸಿಗುವ ಪ್ರಯೋಜನ

“ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು.”​—⁠ಪ್ರಸಂಗಿ 5:10.

ಮಿತಿಮೀರಿ ಕೆಲಸಮಾಡುವುದು ಒತ್ತಡಕ್ಕೆ ನಡೆಸಬಲ್ಲದು, ಮತ್ತು ಒತ್ತಡವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟುಮಾತ್ರವಲ್ಲದೆ ಕೆಲವೊಮ್ಮೆ ಮರಣಕ್ಕೆ ಸಹ ನಡೆಸಬಹುದು. ಅನೇಕ ದೇಶಗಳಲ್ಲಿ, ವಿವಾಹವಿಚ್ಛೇದದಿಂದ ಕುಟುಂಬಗಳು ಛಿದ್ರವಾಗಿವೆ. ಅನೇಕವೇಳೆ, ಭೌತಿಕ ವಿಷಯಗಳ ಕಡೆಗಿನ ಅತಿಯಾದ ಚಿಂತನೆಯೇ ಈ ಎಲ್ಲಾ ದುರಂತಕ್ಕೆ ಕಾರಣವಾಗಿದೆ. ತನ್ನಲ್ಲಿರುವುದರಲ್ಲಿ ಆನಂದಿಸುವ ಬದಲು ಸ್ವತ್ತುಗಳನ್ನು ಒಟ್ಟುಗೂಡಿಸುವುದರಲ್ಲಿ ತಲ್ಲೀನನಾಗಿರುವ ವ್ಯಕ್ತಿಯು, ತನ್ನ ಸ್ವಂತ ಯೋಗಕ್ಷೇಮವನ್ನು ಸಹ ಲಕ್ಷಿಸದೆ ಯಾವಾಗಲೂ ಹೆಚ್ಚನ್ನು ಬಯಸುತ್ತಿರುತ್ತಾನೆ. ಒಂದು ಸ್ವಸಹಾಯಕ ಪುಸ್ತಕವು ಹೀಗೆ ತಿಳಿಸುತ್ತದೆ: “ಒಬ್ಬ ವ್ಯಕ್ತಿಯು, ತನ್ನ ನೆರೆಯವನೊಬ್ಬನು ಸಿರಿಸಂಪತ್ತನ್ನು ಗಳಿಸುವುದಕ್ಕೋಸ್ಕರ ಕಾರ್ಯವ್ಯಸನಿಯಾಗಿ ಅಪ್ರಾಪ್ತ ವಯಸ್ಸಿನಲ್ಲಿ ಹೃದಯಾಘಾತವನ್ನು ಅನುಭವಿಸಿರುವುದನ್ನು ನೋಡಿರುವುದಾದರೂ, ಅವನಲ್ಲೆಷ್ಟು ಸಿರಿಸಂಪತ್ತುಗಳಿವೆಯೋ ಅವು ತನ್ನಲ್ಲಿಯೂ ಇರಬೇಕೆಂದು ಬಯಸುವುದು ಒಂದು ವ್ಯಾಪಕ ವಿಷಯವಾಗಿದೆ.”

ಹೆಚ್ಚೆಚ್ಚು ಭೌತಿಕ ವಿಷಯಗಳಿಗಾಗಿನ ಬೆನ್ನಟ್ಟುವಿಕೆಯು ಒಬ್ಬ ವ್ಯಕ್ತಿಯಲ್ಲಿ ತೃಪ್ತಿಪಡಿಸಲು ಅಸಾಧ್ಯವಾದ ಭಾವನೆಯನ್ನು ಉಂಟುಮಾಡಬಲ್ಲದು. ಇದು ಒಬ್ಬನು ಅನುಭವಿಸಬಹುದಾದ ಎಲ್ಲಾ ಆನಂದವನ್ನು ಅವನಿಂದ ಕಸಿದುಕೊಳ್ಳುತ್ತದೆ. ಈ ಕ್ಷೇತ್ರದಲ್ಲಿನ ಮಾನವ ಬಲಹೀನತೆಗಳನ್ನು ಅನೇಕವೇಳೆ ಮತ್ತಷ್ಟು ಹೆಚ್ಚು ದುರ್ಬಲಗೊಳಿಸುವಂಥ ಶಕ್ತಿಯುತವಾದ ಪ್ರಭಾವವು ಜಾಹಿರಾತುಗಳಿಗಿವೆ. ಟೆಲಿವಿಷನ್‌ ಕಾರ್ಯಕ್ರಮಗಳು ಅನೇಕ ಜಾಹಿರಾತುಗಳಿಂದ ತುಂಬಿಕೊಂಡಿವೆ. ಅವು, ನಮಗೆ ಅಗತ್ಯವಿಲ್ಲದ ಮತ್ತು ನಾವು ಖರೀದಿಸಶಕ್ತರಲ್ಲದ ವಸ್ತುಗಳನ್ನು ಖರೀದಿಸುವಂತೆ ನಮ್ಮನ್ನು ಒತ್ತಾಯಿಸುತ್ತವೆ. ಇವೆಲ್ಲವೂ ಹೆಚ್ಚಿನ ಹಾನಿಗೆ ನಡೆಸಬಲ್ಲವು.

ಹತೋಟಿಯಿಲ್ಲದ ಭೋಗಾಸಕ್ತಿಯು ನಮ್ಮ ಮೇಲೆ ಶಾರೀರಿಕವಾಗಿಯೂ ನೈತಿಕವಾಗಿಯೂ ಧ್ವಂಸಕಾರಕ ಪ್ರಭಾವವನ್ನು ಬೀರಬಲ್ಲದು. ಉದಾಹರಣೆಗೆ, ಜ್ಞಾನಿಯಾದ ರಾಜ ಸೊಲೊಮೋನನು ಗಮನಿಸಿದ್ದು: “ಶಾಂತಿಗುಣವು ದೇಹಕ್ಕೆ ಜೀವಾಧಾರ.” (ಜ್ಞಾನೋಕ್ತಿ 14:30) ಇದಕ್ಕೆ ವ್ಯತಿರಿಕ್ತವಾಗಿ ಹೆಚ್ಚಿನ ಶ್ರಮ, ಚಿಂತೆ ಮತ್ತು ಭೌತಿಕ ಐಶ್ವರ್ಯವನ್ನು ಒಟ್ಟುಗೂಡಿಸುವ ಒತ್ತಡಗಳು, ನಮ್ಮ ಆರೋಗ್ಯ ಹಾಗೂ ಸಂತೋಷವನ್ನು ನಾಶಮಾಡಬಲ್ಲವು. ಭೌತಿಕ ಗುರಿಗಳು ನಮ್ಮ ಜೀವನವನ್ನು ನಿಯಂತ್ರಿಸುವಾಗ, ವ್ಯಕ್ತಿಸಂಬಂಧಗಳು ಸಹ ನಕಾರಾತ್ಮಕವಾಗಿ ಬಾಧಿಸಲ್ಪಡುತ್ತವೆ. ಒಬ್ಬ ವ್ಯಕ್ತಿಯ ಕುಟುಂಬ ಮತ್ತು ಸಾಮಾಜಿಕ ಜೀವನವು ಹದಗೆಡುತ್ತಾ ಹೋದಂತೆ, ಅವನ ಜೀವನ ಮಟ್ಟವು ಸಹ ಹದಗೆಡುತ್ತಾ ಹೋಗುತ್ತದೆ.

ಆಧ್ಯಾತ್ಮಿಕ ಮೌಲ್ಯಗಳ ಶ್ರೇಷ್ಠತೆ

‘ಇಹಲೋಕದ ನಡವಳಿಕೆಯನ್ನು ಅನುಸರಿಸದಿರಿ’ ಎಂದು ಅಪೊಸ್ತಲ ಪೌಲನು ಶತಮಾನಗಳ ಹಿಂದೆ ಎಚ್ಚರಿಸಿದ್ದನು. (ರೋಮಾಪುರ 12:⁠2) ಈ ಲೋಕವು ತನ್ನ ಮೌಲ್ಯಗಳನ್ನು ಬೆನ್ನಟ್ಟುವವರನ್ನು ಪ್ರೀತಿಸುತ್ತದೆ. (ಯೋಹಾನ 15:19) ಲೋಕವು ನಿಮ್ಮ ಇಂದ್ರಿಯಗಳಾದ ದೃಷ್ಟಿ, ಸ್ಪರ್ಶ, ರಸನ, ಘ್ರಾಣ, ಮತ್ತು ಶ್ರವಣವನ್ನು ರಂಜಿಸಲು ಹಾಗೂ ನೀವು ಪ್ರಾಪಂಚಿಕ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ನಿಮ್ಮ ಮನವೊಪ್ಪಿಸಲು ಪ್ರಯತ್ನಿಸುತ್ತದೆ. ‘ಕಣ್ಣಿನಾಶೆಯ’ ಮೇಲೆ ಒತ್ತನ್ನು ನೀಡಲಾಗುತ್ತದೆ, ಏಕೆಂದರೆ ನೀವು ಮತ್ತು ಇತರರು ಪ್ರಾಪಂಚಿಕ ವಿಷಯಗಳನ್ನು ಬೆನ್ನಟ್ಟಬೇಕೆಂಬುದೇ ಅದರ ಉದ್ದೇಶವಾಗಿದೆ.​—⁠1 ಯೋಹಾನ 2:​15-17.

ಆದರೆ ಹಣ, ಕೀರ್ತಿ, ಮತ್ತು ಪ್ರಾಪಂಚಿಕ ಐಶ್ವರ್ಯಕ್ಕಿಂತಲೂ ಉತ್ತಮವಾದ ಮೌಲ್ಯಗಳಿವೆ. ಶತಮಾನಗಳ ಹಿಂದೆ ರಾಜ ಸೊಲೊಮೋನನು, ಲೋಕವು ನೀಡಬಲ್ಲ ಎಲ್ಲವನ್ನೂ ಒಟ್ಟುಗೂಡಿಸಿದ್ದನು. ಅವನು ಮನೆಗಳನ್ನು ಕಟ್ಟಿಸಿಕೊಂಡಿದ್ದನು, ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದ್ದನು, ಆಳುಗಳನ್ನು ಕೊಂಡುಕೊಂಡನು, ಜಾನುವಾರುಗಳನ್ನು ಹೊಂದಿದ್ದನು, ಗಾಯಕಗಾಯಕಿಯರನ್ನು ಸಂಪಾದಿಸಿಕೊಂಡಿದ್ದನು, ಮತ್ತು ಬಹಳಷ್ಟು ಬೆಳ್ಳಿಬಂಗಾರಗಳನ್ನೂ ಹೊಂದಿದ್ದನು. ಸೊಲೊಮೋನನು ತನಗಿಂತ ಹಿಂದೆ ಇದ್ದ ಜನರಿಗಿಂತ ಬಹಳಷ್ಟು ಹೆಚ್ಚು ಸಂಪತ್ತನ್ನು ಗಳಿಸಿದ್ದನು. ವರ್ಣಿಸಲಸಾಧ್ಯವಾದಷ್ಟು ಮಟ್ಟಿಗೆ ಅವನು ಐಶ್ವರ್ಯವಂತನಾಗಿದ್ದನು. ತಾನು ಬಯಸಿದ್ದೆಲ್ಲವನ್ನೂ ಸೊಲೊಮೋನನು ಪಡೆದುಕೊಂಡಿದ್ದನು. ಆದರೂ, ತನ್ನ ಸಾಧನೆಯನ್ನು ನೋಡಿ ಅವನು ಹೀಗೆ ಹೇಳಿದನು: “ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು.”​—⁠ಪ್ರಸಂಗಿ 2:​1-11.

ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಮಾತ್ರ ಮಹಾ ತೃಪ್ತಿಯು ಲಭ್ಯವಾಗುತ್ತದೆ ಎಂಬುದನ್ನು ಸೊಲೊಮೋನನು ತನಗೆ ದೊರೆತ ಶ್ರೇಷ್ಠವಾದ ವಿವೇಕದಿಂದಾಗಿ ಅರಿತುಕೊಂಡಿದ್ದನು. ಅವನು ಬರೆದದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”​—⁠ಪ್ರಸಂಗಿ 12:13.

ದೇವರ ವಾಕ್ಯವಾದ ಬೈಬಲಿನ ಪುಟಗಳಲ್ಲಿ ಕಂಡುಬರುವ ನಿಧಿಯು ಬಂಗಾರ ಅಥವಾ ಬೆಳ್ಳಿಗಿಂತಲೂ ಹೆಚ್ಚು ಮೌಲ್ಯವುಳ್ಳದ್ದಾಗಿದೆ. (ಜ್ಞಾನೋಕ್ತಿ 16:16) ದೇವರ ವಾಕ್ಯದಲ್ಲಿರುವ ಸತ್ಯಗಳನ್ನು ರತ್ನಗಳಂತೆ ನೀವು ಹುಡುಕಿ ಕಂಡುಕೊಳ್ಳಬೇಕು. ನೀವು ಅವುಗಳಿಗಾಗಿ ಹುಡುಕಿ, ಅಗೆದು ತೆಗೆಯುವಿರೋ? (ಜ್ಞಾನೋಕ್ತಿ 2:​1-6) ನಿಜ ಮೌಲ್ಯಗಳ ಮೂಲನಾದ ನಮ್ಮ ಸೃಷ್ಟಿಕರ್ತನು, ಹಾಗೆ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳುತ್ತಾನೆ ಮತ್ತು ಆತನು ನಿಮಗೆ ಸಹಾಯಮಾಡುತ್ತಾನೆ. ಹೇಗೆ?

ಯೆಹೋವನು ತನ್ನ ವಾಕ್ಯ, ತನ್ನ ಆತ್ಮ, ಮತ್ತು ತನ್ನ ಸಂಸ್ಥೆಯ ಮೂಲಕ ಅಮೂಲ್ಯವಾದ ಸತ್ಯವನ್ನು ತಿಳಿಯಪಡಿಸುತ್ತಾನೆ. (ಕೀರ್ತನೆ 1:1-3; ಯೆಶಾಯ 48:17, 18; ಮತ್ತಾಯ 24:45-47; 1 ಕೊರಿಂಥ 2:10) ಬೆಲೆಕಟ್ಟಲಾಗದ ಈ ಅಪೂರ್ವವಾದ ರತ್ನಗಳನ್ನು ಪರೀಕ್ಷಿಸುವ ಮೂಲಕ, ಉತ್ತಮವಾದ ಮತ್ತು ಅತಿ ಪ್ರತಿಫಲದಾಯಕ ಜೀವನ ಮಾರ್ಗವನ್ನು ಆಯ್ಕೆಮಾಡಲು ನಿಮಗೆ ಒಂದು ಸಂದರ್ಭವು ದೊರಕುತ್ತದೆ. ಮತ್ತು ಈ ರೀತಿಯಲ್ಲಿ ಆಯ್ಕೆಮಾಡುವುದು ಒಂದು ಕಷ್ಟಕರ ಕೆಲಸವಲ್ಲ, ಏಕೆಂದರೆ ನಿಜವಾಗಿ ಸಂತೋಷದಿಂದಿರಲು ನಮಗೆ ಯಾವುದರ ಅಗತ್ಯವಿದೆ ಎಂಬುದು ನಮ್ಮ ಸೃಷ್ಟಿಕರ್ತನಾದ ಯೆಹೋವನಿಗೆ ತಿಳಿದಿದೆ.

ಅತ್ಯುನ್ನತ ಮೌಲ್ಯಗಳನ್ನು ಬೈಬಲ್‌ ಉತ್ತೇಜಿಸುತ್ತದೆ

ಬೈಬಲಿನಲ್ಲಿರುವ ಸದೃಢವಾದ ಸಲಹೆ ಅಥವಾ ಬುದ್ಧಿವಾದವು, ಪ್ರಾಯೋಗಿಕವೂ ಎಣೆಯಿಲ್ಲದ್ದೂ ಆಗಿದೆ. ಅದು ಸಮರ್ಥಿಸುವ ನೈತಿಕ ಮಟ್ಟಗಳು ಅತಿ ಶ್ರೇಷ್ಠವಾದವುಗಳು. ಅದರ ಸಲಹೆಯು ಯಾವಾಗಲೂ ಪ್ರಯೋಜನದಾಯಕವಾಗಿದೆ. ಅದು ಎಲ್ಲಾ ಸಮಯಕ್ಕೂ ಉಪಯುಕ್ತವಾಗಿದೆ. ಬೈಬಲಿನ ಬುದ್ಧಿವಾದಗಳಲ್ಲಿ ಕೆಲವು ಹೀಗಿದೆ: ಕಠಿನವಾಗಿ ಕೆಲಸಮಾಡಬೇಕು, ಪ್ರಾಮಾಣಿಕರಾಗಿರಬೇಕು, ಹಣವನ್ನು ವಿವೇಕಪ್ರದವಾಗಿ ಉಪಯೋಗಿಸಬೇಕು, ಮತ್ತು ಸೋಮಾರಿತನವನ್ನು ತ್ಯಜಿಸಬೇಕು.​—⁠ಜ್ಞಾನೋಕ್ತಿ 6:​6-8; 20:23; 31:16.

ಇದಕ್ಕೆ ಸಹಮತದಲ್ಲಿ ಯೇಸು ಹೇಳಿದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ.”​—⁠ಮತ್ತಾಯ 6:19, 20.

ಈ ಸಮಯೋಚಿತ ಸಲಹೆಯು, 2000 ವರುಷಗಳ ಹಿಂದೆ ಅನ್ವಯವಾದಂತೆ ಇಂದು ಸಹ ಅನ್ವಯವಾಗುತ್ತದೆ. ಪ್ರಾಪಂಚಿಕ ಐಶ್ವರ್ಯವನ್ನು ಬೆನ್ನಟ್ಟುವ ಬದಲಿಗೆ, ಅತಿ ಶ್ರೇಷ್ಠವಾದ ಜೀವನ ಮಾರ್ಗವನ್ನು ಬೆನ್ನಟ್ಟುವ ಮೂಲಕ ನಾವು ಪ್ರಯೋಜನವನ್ನು ಪಡೆಯಬಲ್ಲೆವು. ಇದಕ್ಕೆ ಕೀಲಿ ಕೈಯು ಆಧ್ಯಾತ್ಮಿಕ ನಿಧಿಯನ್ನು ಶೇಖರಿಸುವುದೇ ಆಗಿದೆ. ಈ ನಿಧಿಯು, ನಿಜವಾದ ಸಂತೋಷವನ್ನು ಮತ್ತು ಸಂತೃಪ್ತಿಯನ್ನು ಒದಗಿಸುತ್ತದೆ. ಆದರೆ ನಾವಿದನ್ನು ಹೇಗೆ ಶೇಖರಿಸಬಲ್ಲೆವು? ದೇವರ ವಾಕ್ಯವಾದ ಬೈಬಲನ್ನು ಓದುವ, ಮತ್ತು ಅದು ಕಲಿಸುವ ವಿಷಯಗಳನ್ನು ಅನ್ವಯಿಸುವ ಮೂಲಕವೇ ಆಗಿದೆ.

ಆಧ್ಯಾತ್ಮಿಕ ಮೌಲ್ಯಗಳು ಪ್ರತಿಫಲಗಳನ್ನು ತರುತ್ತವೆ

ಆಧ್ಯಾತ್ಮಿಕ ಮೌಲ್ಯಗಳನ್ನು ಸರಿಯಾಗಿ ಅನ್ವಯಿಸಿಕೊಂಡರೆ ಅವು ನಮಗೆ ಶಾರೀರಿಕ, ಭಾವನಾತ್ಮಕ, ಮತ್ತು ಆಧ್ಯಾತ್ಮಿಕ ಪ್ರಯೋಜನವನ್ನು ತರುತ್ತವೆ. ಭೂಮಿಯ ಮೇಲಿರುವ ಓಸೋನ್‌ ಪದರವು ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳಿಂದ ನಮ್ಮನ್ನು ರಕ್ಷಿಸುವಂತೆ, ಸ್ಪಷ್ಟವಾದ ನೈತಿಕ ಮೂಲತತ್ತ್ವಗಳು ಪ್ರಾಪಂಚಿಕತೆಯ ಹಾನಿಕಾರಕ ಪ್ರಭಾವಗಳನ್ನು ನಮಗೆ ತಿಳಿಯಪಡಿಸುವ ಮೂಲಕ ನಮ್ಮನ್ನು ರಕ್ಷಿಸುತ್ತವೆ. ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”​—⁠1 ತಿಮೊಥೆಯ 6:​9, 10.

ಐಶ್ವರ್ಯದಾಸೆಯು ಜನರನ್ನು, ಹೆಚ್ಚಿನ ಐಶ್ವರ್ಯ, ಸ್ಥಾನ, ಮತ್ತು ಅಧಿಕಾರವನ್ನು ಬೆನ್ನಟ್ಟುವಂತೆ ಮಾಡುತ್ತದೆ. ಅನೇಕವೇಳೆ, ಈ ಗುರಿಗಳನ್ನು ತಲಪಲು ಮೋಸಕರವಾದ ಮತ್ತು ಅಪ್ರಾಮಾಣಿಕ ವಿಧಾನಗಳನ್ನು ಉಪಯೋಗಿಸಲಾಗುತ್ತದೆ. ಪ್ರಾಪಂಚಿಕ ವಸ್ತುಗಳ ಬೆನ್ನಟ್ಟುವಿಕೆಯು ಒಬ್ಬ ವ್ಯಕ್ತಿಯಿಂದ ಅವನ ಸಮಯ, ಶಕ್ತಿ, ಮತ್ತು ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ಅಷ್ಟುಮಾತ್ರವಲ್ಲದೆ, ಒಬ್ಬನ ಸುಖನಿದ್ರೆಯನ್ನು ಸಹ ಅದು ಕಸಿದುಕೊಳ್ಳಸಾಧ್ಯವಿದೆ. (ಪ್ರಸಂಗಿ 5:12) ಹೆಚ್ಚೆಚ್ಚು ಭೌತಿಕ ವಿಷಯಗಳಿಗಾಗಿನ ಬೆನ್ನಟ್ಟುವಿಕೆಯು ನಿಶ್ಚಯವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಜೀವಿಸಿದವರಲ್ಲಿಯೇ ಅತ್ಯಂತ ಮಹಾನ್‌ ಪುರುಷನಾದ ಯೇಸು ಕ್ರಿಸ್ತನು ಒಂದು ಉತ್ತಮ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ: “ತಮ್ಮ ಆಧ್ಯಾತ್ಮಿಕ ಅವಶ್ಯಕತೆಯ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:​3, NW) ಆಧ್ಯಾತ್ಮಿಕ ಐಶ್ವರ್ಯವು ನಿರಂತರ ಪ್ರತಿಫಲವನ್ನು ತರುತ್ತದೆ ಮತ್ತು ಅವು ನಶಿಸಿಹೋಗುವ ಪ್ರಾಪಂಚಿಕ ಲಾಭಕ್ಕಿಂತ ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿದೆ ಎಂದು ಅವನಿಗೆ ತಿಳಿದಿತ್ತು.​—⁠ಲೂಕ 12:​13-31.

ಆಧ್ಯಾತ್ಮಿಕ ಐಶ್ವರ್ಯವನ್ನು ಬೆನ್ನಟ್ಟುವುದು ನಿಜವಾಗಿಯೂ ಪ್ರಯೋಜನಕಾರಿಯೋ?

ಗ್ರೆಗ್‌ ಜ್ಞಾಪಿಸಿಕೊಳ್ಳುವುದು: “ಆಧ್ಯಾತ್ಮಿಕ ಮೌಲ್ಯಗಳು ಅಪ್ರಾಯೋಗಿಕವಾಗಿವೆ ಎಂದು ನನಗೆ ಮಂದಟ್ಟು ಮಾಡಲು ನನ್ನ ಹೆತ್ತವರು ತುಂಬ ಪ್ರಯತ್ನಿಸಿದರು. ಆದರೆ, ಆಧ್ಯಾತ್ಮಿಕ ಗುರಿಗಳನ್ನು ಇಡುವ ಮೂಲಕ ನಾನು ಹೇರಳವಾದ ಮನಶ್ಶಾಂತಿಯನ್ನು ಪಡೆದಿದ್ದೇನೆ. ಏಕೆಂದರೆ, ಐಶ್ವರ್ಯವನ್ನು ಗಳಿಸಲು ಹೆಣಗಾಡುವುದರಿಂದ ಬರುವ ಒತ್ತಡಗಳಿಂದ ನಾನು ವಿಮುಕ್ತನಾಗಿದ್ದೇನೆ.”

ಆಧ್ಯಾತ್ಮಿಕ ಮೌಲ್ಯಗಳು ಉತ್ತಮ ವೈಯಕ್ತಿಕ ಸಂಬಂಧಗಳನ್ನು ಸಹ ಕಟ್ಟುತ್ತವೆ. ನಿಜವಾದ ಸ್ನೇಹಿತರು, ನಿಮ್ಮಲ್ಲಿ ಏನಿದೆಯೋ ಅದಕ್ಕಾಗಿಯಲ್ಲ ಬದಲಾಗಿ ನೀವೇನಾಗಿದ್ದೀರೋ ಅದಕ್ಕಾಗಿ ನಿಮ್ಮ ಬಳಿ ಸೆಳೆಯಲ್ಪಡುತ್ತಾರೆ. ಬೈಬಲ್‌ ಬುದ್ಧಿಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.” (ಜ್ಞಾನೋಕ್ತಿ 13:20) ಅಷ್ಟುಮಾತ್ರವಲ್ಲದೆ, ಒಂದು ಯಶಸ್ವಿ ಕುಟುಂಬವು ಭೌತಿಕ ಸೊತ್ತಿನ ಮೇಲಲ್ಲ ಬದಲಾಗಿ ವಿವೇಕ ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರುತ್ತದೆ.​—⁠ಎಫೆಸ 5:​22–6:⁠4.

ನಾವು ಹುಟ್ಟುವಾಗಲೇ ಮೌಲ್ಯಗಳನ್ನು ಹೊಂದಿರುವುದಿಲ್ಲ. ನಾವು ಅವುಗಳನ್ನು ನಮ್ಮ ಸಮಾನಸ್ಥರಿಂದ ಅಥವಾ ಒಂದು ಉನ್ನತ ಮೂಲದಿಂದ ಕಲಿತುಕೊಳ್ಳಬೇಕು. ಆದುದರಿಂದಲೇ, ಬೈಬಲಾಧಾರಿತ ಶಿಕ್ಷಣವು ಭೌತಿಕ ವಿಷಯಗಳ ಕಡೆಗಿನ ನಮ್ಮ ಸಂಪೂರ್ಣ ಹೊರನೋಟವನ್ನೇ ಬದಲಾಯಿಸಬಲ್ಲದು. ಹಿಂದೆ ಬ್ಯಾಂಕ್‌ ಮಾಲೀಕರಾಗಿದ್ದ ಡಾನ್‌ ಎಂಬವರು ಹೇಳುವುದು: “ನನ್ನ ಮೌಲ್ಯಗಳನ್ನು ಪುನಃ ಆಲೋಚಿಸುವಂತೆ ನನಗೆ ಸಹಾಯವು ನೀಡಲ್ಪಟ್ಟಿತು, ಮತ್ತು ಮೂಲಭೂತ ಆವಶ್ಯಕತೆಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಲು ನಾನು ಕಲಿತೆ.”

ಬಾಳಿಕೆ ಬರುವ ಆಧ್ಯಾತ್ಮಿಕ ಐಶ್ವರ್ಯವನ್ನು ಬೆನ್ನಟ್ಟಿರಿ

ಆಧ್ಯಾತ್ಮಿಕ ಮೌಲ್ಯಗಳು, ತಾತ್ಕಾಲಿಕ ಸುಖವನ್ನಲ್ಲ ಬದಲಾಗಿ ದೀರ್ಘಕಾಲಿಕ ಪ್ರತಿಫಲಗಳನ್ನು ಎತ್ತಿತೋರಿಸುತ್ತವೆ. ಪೌಲನು ಬರೆದದ್ದು: “ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.” (2 ಕೊರಿಂಥ 4:18) ಭೌತಿಕ ವಿಷಯಗಳ ಬೆನ್ನಟ್ಟುವಿಕೆಯು ತಾತ್ಕಾಲಿಕ ಇಚ್ಛೆಗಳನ್ನು ತೃಪ್ತಿಪಡಿಸಬಹುದು, ಆದರೆ ಲೋಭಿಯಾಗಿರುವುದರಿಂದ ಯಾವ ಪ್ರಯೋಜನವೂ ದೊರಕುವುದಿಲ್ಲ. ಆಧ್ಯಾತ್ಮಿಕ ಮೌಲ್ಯಗಳು ನಿರಂತರವಾಗಿವೆ.​—⁠ಜ್ಞಾನೋಕ್ತಿ 11:⁠4; 1 ಕೊರಿಂಥ 6:​9, 10.

ಇಂದು ಬಹಳ ಪ್ರಖ್ಯಾತವಾಗಿರುವ ಪ್ರಾಪಂಚಿಕ ದೃಷ್ಟಿಕೋನವನ್ನು ಬೈಬಲ್‌ ವಿರೋಧಿಸುತ್ತದೆ. ಅದು ನಮಗೆ, ನಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳುವ ಅಂದರೆ ಹೆಚ್ಚು ಪ್ರಾಮುಖ್ಯವಾದ ಆಧ್ಯಾತ್ಮಿಕ ಐಶ್ವರ್ಯಗಳ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುವ ಮೂಲಕ ಸ್ವಾರ್ಥಪರ ದುರಾಶೆಗೆ ಎಡೆಗೊಡದಂತೆ ಕಲಿಸುತ್ತದೆ. (ಫಿಲಿಪ್ಪಿ 1:10) ಲೋಭವು ಏನಾಗಿದೆಯೋ ಅದನ್ನು ಅಂದರೆ ಲೋಭವು ಸ್ವಯಂ-ವಿಗ್ರಹಾರಾಧನೆಯಾಗಿದೆ ಎಂಬುದನ್ನು ಅದು ಬಯಲುಪಡಿಸುತ್ತದೆ. ದೇವರ ವಾಕ್ಯದಿಂದ ಕಲಿತ ವಿಷಯವನ್ನು ಅನ್ವಯಿಸುವಾಗ, ನಾವು ಹೆಚ್ಚು ಸಂತೋಷವನ್ನು ಅನುಭವಿಸುತ್ತೇವೆ. ಪಡೆದುಕೊಳ್ಳುವುದಕ್ಕಿಂತ ಕೊಡುವುದರ ಕಡೆಗೆ ನಮ್ಮ ಆಲೋಚನೆಗಳು ತಿರುಗಿಸಲ್ಪಡುತ್ತವೆ. ಭೋಗಾಸಕ್ತಿಯ ಸ್ಥಾನದಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನಿಡಲು ಎಂಥ ಒಂದು ಶಕ್ತಿಯುತ ಪ್ರಚೋದನೆಯಿದು!

ನಿರ್ದಿಷ್ಟ ಹಂತದ ವರೆಗೆ ಹಣವು ಒಂದು ಆಶ್ರಯವಾಗಿ ಸೇವೆಸಲ್ಲಿಸಬಹುದು ಎಂಬುದು ನಿಜ. (ಪ್ರಸಂಗಿ 7:12) ಆದರೆ ಬೈಬಲ್‌ ವಾಸ್ತವಿಕವಾಗಿ ಹೇಳುವುದು: “ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.” (ಜ್ಞಾನೋಕ್ತಿ 23:⁠5) ಪ್ರಾಪಂಚಿಕತೆ ಎಂಬ ಬಲಿಪೀಠದ ಮೇಲೆ ಜನರು ತಮ್ಮ ಆರೋಗ್ಯವನ್ನು, ಕುಟುಂಬಗಳನ್ನು, ಮತ್ತು ಒಂದು ಉತ್ತಮ ಮನಸ್ಸಾಕ್ಷಿಯನ್ನು ಸಹ ಬಲಿಕೊಟ್ಟಿದ್ದಾರೆ ಮತ್ತು ಇದರಿಂದಾಗಿ ಭೀಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಇನ್ನೊಂದು ಬದಿಯಲ್ಲಿ, ಆಧ್ಯಾತ್ಮಿಕತೆಯನ್ನು ಹೊಂದಿರುವುದು ನಮ್ಮ ಅತಿ ಪ್ರಾಮುಖ್ಯವಾದ ಅಗತ್ಯಗಳನ್ನು​—⁠ಪ್ರೀತಿಯ ಅಗತ್ಯ, ಉದ್ದೇಶದ ಅಗತ್ಯ, ಮತ್ತು ಪ್ರೀತಿಯ ದೇವರಾದ ಯೆಹೋವನನ್ನು ಆರಾಧಿಸುವ ಅಗತ್ಯವನ್ನು​—⁠ಪೂರೈಸುತ್ತದೆ. ಅಷ್ಟುಮಾತ್ರವಲ್ಲದೆ, ಪರದೈಸ್‌ ಭೂಮಿಯ ಮೇಲೆ ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳುವ ಮಾರ್ಗದ ಕಡೆಗೆ ಅದು ಬೆರಳುತೋರಿಸುತ್ತದೆ. ಇದು ದೇವರು ನಮಗಾಗಿ ಇಟ್ಟಿರುವ ನಿರೀಕ್ಷೆಯಾಗಿದೆ.

ಸಮೃದ್ಧಿಯಿಂದಿರಬೇಕು ಎಂಬ ಮಾನವಕುಲದ ಇಚ್ಛೆಯು ಬೇಗನೆ ದೇವರ ನೂತನ ಲೋಕದಲ್ಲಿ ನೆರವೇರಲಿದೆ. (ಕೀರ್ತನೆ 145:16) ಆ ಸಮಯದಲ್ಲಿ ಇಡೀ ಭೂಮಿಯಲ್ಲಿ “ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:⁠9) ಆಧ್ಯಾತ್ಮಿಕ ಮೌಲ್ಯಗಳು ಅಭಿವೃದ್ಧಿಹೊಂದುವವು. ಪ್ರಾಪಂಚಿಕತೆ ಮತ್ತು ಅದರಿಂದುಂಟಾಗುವ ಪರಿಣಾಮಗಳು ಸಂಪೂರ್ಣವಾಗಿ ತೆಗೆದುಹಾಕಲ್ಪಡುವುದು. (2 ಪೇತ್ರ 3:13) ಅನಂತರ, ನಮ್ಮ ಜೀವನವನ್ನು ಹೆಚ್ಚು ಸಂತೃಪ್ತಿಕರವನ್ನಾಗಿ ಮಾಡುವ ಪರಿಪೂರ್ಣ ಆರೋಗ್ಯ, ಸಂತೃಪ್ತಿಕರ ಕೆಲಸ, ಹಿತಕರ ವಿರಾಮ, ಉತ್ತೇಜನದಾಯಕವಾದ ಕುಟುಂಬ ಸಂಬಂಧಗಳು, ಮತ್ತು ದೇವರೊಂದಿಗಿನ ಶಾಶ್ವತ ಸ್ನೇಹವು ಮಾನವಕುಲಕ್ಕೆ ನಿರಂತರಕ್ಕೂ ಸಂತೋಷವನ್ನು ತರುವುದು.

[ಪುಟ 6ರಲ್ಲಿರುವ ಚೌಕ/ಚಿತ್ರ]

ನಿಮ್ಮ ಹಣವನ್ನು ವಿವೇಕಪ್ರದವಾಗಿ ಉಪಯೋಗಿಸಿರಿ!

ನಿಮ್ಮ ಅಗತ್ಯಗಳನ್ನು ಗುರುತಿಸಿರಿ. “ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು” ಎಂದು ಪ್ರಾರ್ಥಿಸುವಂತೆ ಯೇಸು ನಮಗೆ ಕಲಿಸಿದನು. (ಓರೆ ಅಕ್ಷರಗಳು ನಮ್ಮವು.) (ಲೂಕ 11:⁠3) ಇಂದಿನ ಬೇಕುಗಳು ನಾಳಿನ ಅಗತ್ಯಗಳಾಗುವಂತೆ ಅನುಮತಿಸದಿರಿ. ನೆನಪಿನಲ್ಲಿಡಿರಿ, ನೀವು ಏನನ್ನು ಹೊಂದಿರುತ್ತೀರೊ ಅದರಿಂದ ನಿಮಗೆ ಜೀವವು ಲಭ್ಯವಾಗುವುದಿಲ್ಲ.​—⁠ಲೂಕ 12:​16-21.

ಒಂದು ಬಜೆಟನ್ನು ತಯಾರುಮಾಡಿರಿ.ಯೋಜಿಸದೆ ತ್ವರಿತವಾಗಿ ಖರೀದಿಸುವಂಥ ಹವ್ಯಾಸವನ್ನು ಮಾಡಿಕೊಳ್ಳಬೇಡಿ. ಬೈಬಲ್‌ ಹೇಳುವುದು: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.” (ಜ್ಞಾನೋಕ್ತಿ 21:⁠5) ಯಾವುದೇ ಹಣಕಾಸಿನ ಯೋಜನೆಯನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಅದರ ಖರ್ಚನ್ನು ಲೆಕ್ಕಿಸುವಂತೆ ಯೇಸು ತನ್ನ ಕೇಳುಗರಿಗೆ ಬುದ್ಧಿಹೇಳಿದನು.​—⁠ಲೂಕ 14:​28-30.

ಅನಾವಶ್ಯಕ ಸಾಲವನ್ನು ತ್ಯಜಿಸಿರಿ.ವಸ್ತುಗಳನ್ನು ಸಾಲವಾಗಿ ಖರೀದಿಸುವ ಬದಲಿಗೆ, ಸಾಧ್ಯವಿರುವಾಗಲ್ಲೆಲ್ಲಾ ಖರೀದಿಗಾಗಿ ಹಣವನ್ನು ಉಳಿತಾಯಮಾಡಿರಿ. ಜ್ಞಾನೋಕ್ತಿಯು ಅದನ್ನು ಈ ರೀತಿಯಾಗಿ ತಿಳಿಸುತ್ತದೆ: “ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” (ಜ್ಞಾನೋಕ್ತಿ 22:⁠7) ಸ್ವನಿಯಂತ್ರಣವನ್ನು ಅಭ್ಯಾಸಿಸುವ ಮತ್ತು ನಿಮ್ಮ ಬಜೆಟಿನೊಳಗೇ ಯೋಜಿಸುವ ಮೂಲಕ, ನೀವು ದೊಡ್ಡ ಖರೀದಿಯನ್ನು ಸಹ ಯೋಜಿಸಬಲ್ಲಿರಿ.

ಹಾಳುಮಾಡುವುದನ್ನು ತ್ಯಜಿಸಿರಿ.ನಿಮ್ಮಲ್ಲಿರುವ ವಸ್ತುಗಳನ್ನು ಜಾಗರೂಕತೆಯಿಂದ ಉಪಯೋಗಿಸಿರಿ. ಈ ರೀತಿಯಾಗಿ ಹಾಳುಮಾಡುವುದನ್ನು ತ್ಯಜಿಸಬಲ್ಲಿರಿ. ತಾನು ಏನನ್ನು ಉಪಯೋಗಿಸಿದನೋ ಅವುಗಳನ್ನು ಸಂರಕ್ಷಿಸುವ ವಿಷಯಕ್ಕೆ ಯೇಸು ಪರಿಗಣನೆಯನ್ನು ತೋರಿಸಿದನು.​—⁠ಯೋಹಾನ 6:​10-13.

ಆದ್ಯತೆಯನ್ನು ಇಟ್ಟುಕೊಳ್ಳಿರಿ.ವಿವೇಕಿಯಾದ ವ್ಯಕ್ತಿಯು ಹೆಚ್ಚು ಪ್ರಾಮುಖ್ಯವಾದ ಗುರಿಗಳನ್ನು ಬೆನ್ನಟ್ಟಲು ‘ಸಮಯವನ್ನು ಖರೀದಿಸುತ್ತಾನೆ.’​—⁠ಎಫೆಸ 5:​15, 16, NW.

[ಪುಟ 7ರಲ್ಲಿರುವ ಚೌಕ/ಚಿತ್ರ]

ಅನುಭವದಿಂದ ಕಲಿಯುವುದಕ್ಕಿಂತ ಉತ್ತಮವಾದ ವಿಧವೊಂದಿದೆ

ಒಳ್ಳೆಯ ಮತ್ತು ಕೆಟ್ಟ ರೀತಿಯ ವೈಯಕ್ತಿಕ ಅನುಭವವು ನಮಗೆ ಬೆಲೆಬಾಳುವ ಪಾಠಗಳನ್ನು ಕಲಿಸಬಲ್ಲದು. ಅನುಭವವೇ ಅತ್ಯುತ್ತಮ ಶಿಕ್ಷಕ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದಾದರೂ, ಅದು ನಿಜವಾಗಿದೆಯೋ? ಇಲ್ಲ, ಅದಕ್ಕಿಂತಲೂ ಉನ್ನತ ಮಟ್ಟದ ಮಾರ್ಗದರ್ಶನೆಯ ಮೂಲವೊಂದಿದೆ. ಕೀರ್ತನೆಗಾರನು ಈ ರೀತಿಯಾಗಿ ಪ್ರಾರ್ಥಿಸುವಾಗ ಅದನ್ನು ಗುರುತಿಸಿದನು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಓರೆ ಅಕ್ಷರಗಳು ನಮ್ಮವು.)​—⁠ಕೀರ್ತನೆ 119:105.

ವೈಯಕ್ತಿಕ ಅನುಭವದಿಂದ ಕಲಿಯುವುದಕ್ಕಿಂತ ದೈವಿಕ ಬೋಧನೆಯಿಂದ ಕಲಿಯುವುದು ಏಕೆ ಅತ್ಯುತ್ತಮವಾಗಿದೆ? ಒಂದು ಕಾರಣ, ಅನುಭವದಿಂದ ಕಲಿಯುವುದು ಅಂದರೆ ಪರೀಕ್ಷಾ ಪ್ರಯೋಗವನ್ನು ಮಾಡಿ ಕಲಿಯುವುದು ದುಬಾರಿಯೂ ನೋವುಭರಿತವೂ ಆಗಿರಸಾಧ್ಯವಿದೆ. ಇದು ಅನಗತ್ಯವಾಗಿರುತ್ತದೆ ಸಹ. ಪುರಾತನ ಇಸ್ರಾಯೇಲ್ಯರಿಗೆ ದೇವರು ಹೇಳಿದ್ದು: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”​—⁠ಯೆಶಾಯ 48:18.

ದೇವರ ವಾಕ್ಯವು ಬೋಧನೆಯ ಶ್ರೇಷ್ಠ ಮೂಲವಾಗಿರಲು ಒಂದು ಕಾರಣವೇನೆಂದರೆ ಅದರಲ್ಲಿ, ಮಾನವ ಅನುಭವದ ಅತಿ ಹಳೆಯ ಮತ್ತು ಅತಿ ನಿಷ್ಕೃಷ್ಟವಾದ ದಾಖಲೆಯು ಅಡಕವಾಗಿದೆ. ಇತರರ ಯಶಸ್ವಿಗಳನ್ನು ಮತ್ತು ಸೋಲುಗಳನ್ನು ನೋಡಿ ಅದರಿಂದ ಕಲಿಯುವುದು, ಅದೇ ತಪ್ಪನ್ನು ಪುನಃ ನಾವು ಮಾಡುವುದಕ್ಕಿಂತ ಎಷ್ಟೋ ಮೇಲಾಗಿದೆ ಎಂಬುದನ್ನು ನೀವು ಖಂಡಿತವಾಗಿಯೂ ಒಪ್ಪಿಕೊಳ್ಳುವಿರಿ. (1 ಕೊರಿಂಥ 10:​6-11) ಹೆಚ್ಚು ಪ್ರಾಮುಖ್ಯವಾಗಿ, ಬೈಬಲಿನಲ್ಲಿ ದೇವರು ನಮಗೆ ಅತ್ಯುತ್ತಮವಾದ ನಿಯಮಗಳನ್ನು ಮತ್ತು ಮಾರ್ಗದರ್ಶಕ ಮೂಲತತ್ತ್ವಗಳನ್ನು ಒದಗಿಸಿರುತ್ತಾನೆ. ಭರವಸಾರ್ಹತೆಯಲ್ಲಿ ಆ ಮೂಲತತ್ತ್ವಗಳಿಗೆ ಸಮಾನವಾದದ್ದು ಯಾವುದೂ ಇಲ್ಲ. “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; . . . ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 19:⁠7) ನಿಶ್ಚಯವಾಗಿಯೂ, ನಮ್ಮ ಪ್ರೀತಿಯ ಸೃಷ್ಟಿಕರ್ತನ ವಿವೇಕದಿಂದ ಕಲಿಯುವುದು ಇರುವುದರಲ್ಲಿಯೇ ಅತ್ಯುತ್ತಮವಾದ ವಿಧವಾಗಿದೆ.

[ಪುಟ 4ರಲ್ಲಿರುವ ಚಿತ್ರಗಳು]

ಲೋಕವು ನೀವು ಅದರ ಪ್ರಾಪಂಚಿಕ ಜೀವನ ಶೈಲಿಯನ್ನು ಅನುಕರಿಸಬೇಕೆಂದು ಬಯಸುತ್ತದೆ

[ಪುಟ 5ರಲ್ಲಿರುವ ಚಿತ್ರ]

ಬೈಬಲಿನಲ್ಲಿ ಕಂಡುಬರುವ ನಿಧಿಯು ಬಂಗಾರ ಅಥವಾ ಬೆಳ್ಳಿಗಿಂತಲೂ ಹೆಚ್ಚು ಮೌಲ್ಯವುಳ್ಳದ್ದಾಗಿದೆ