ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ದಾವೀದನೂ ಅವನ ಜನರೂ ನೈವೇದ್ಯದ ರೊಟ್ಟಿಗಳನ್ನು ತಿಂದ ಘಟನೆಯು, ಕಷ್ಟಕರ ಸನ್ನಿವೇಶಗಳ ಕೆಳಗೆ ದೇವರ ನಿಯಮವನ್ನು ಮುರಿಯುವುದಾದರೂ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಇರಸಾಧ್ಯವಿದೆ ಎಂಬುದನ್ನು ಸೂಚಿಸುತ್ತದೊ?​—1 ಸಮುವೇಲ 21:​1-6.

ಯಾಜಕಕಾಂಡ 24:​5-9ಕ್ಕನುಸಾರ, ಪ್ರತಿ ಸಬ್ಬತ್ತಿನಂದು ಬದಲಿಮಾಡಲ್ಪಡುತ್ತಿದ್ದ ನೈವೇದ್ಯದ ರೊಟ್ಟಿಗಳನ್ನು ಕೇವಲ ಯಾಜಕರಿಗೆ ತಿನ್ನಲು ಮೀಸಲಾಗಿಡಲಾಗುತ್ತಿತ್ತು. ಈ ರೊಟ್ಟಿಗಳು ಪರಿಶುದ್ಧವಾಗಿದ್ದವು, ಮತ್ತು ಇದನ್ನು ದೇವರ ಸೇವೆಯಲ್ಲಿದ್ದ ಪುರುಷರು ಅಂದರೆ ಯಾಜಕರು ಮಾತ್ರ ತಿನ್ನಬೇಕು ಎಂಬುದೇ ಈ ರೀತಿಯ ಬಳಕೆಯ ಹಿಂದಿದ್ದ ಮೂಲತತ್ತ್ವವಾಗಿತ್ತು. ಸಾಮಾನ್ಯ ಕೆಲಸದಾಳಿಗೆ ಇವುಗಳನ್ನು ನೀಡುವುದು ಅಥವಾ ಬರೀ ಸಂತೋಷಕ್ಕಾಗಿ ಇವುಗಳನ್ನು ತಿನ್ನುವುದು ಖಂಡಿತವಾಗಿಯೂ ತಪ್ಪಾಗಿತ್ತು. ಆದರೂ, ಯಾಜಕನಾದ ಅಹೀಮೆಲೆಕನು ಈ ನೈವೇದ್ಯದ ರೊಟ್ಟಿಯನ್ನು ದಾವೀದನಿಗೂ ಅವನ ಜನರಿಗೂ ಕೊಡುವ ಮೂಲಕ ಯಾವುದೇ ಪಾಪವನ್ನು ಮಾಡಲಿಲ್ಲ.

ದಾವೀದನು ರಾಜ ಸೌಲನು ಕೊಟ್ಟಿದ್ದ ಒಂದು ವಿಶೇಷ ನೇಮಕವನ್ನು ಪೂರೈಸುತ್ತಿದ್ದನು. ದಾವೀದನೂ ಅವನ ಜನರೂ ಹಸಿದಿದ್ದರು. ಅವರು ಶುದ್ಧರಾಗಿದ್ದಾರೆಂಬುದನ್ನು ಅಹೀಮೆಲೆಕನು ಮೊದಲು ಖಚಿತಪಡಿಸಿಕೊಂಡನು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನೈವೇದ್ಯದ ರೊಟ್ಟಿಯನ್ನು ಅವರು ತಿಂದದ್ದು ತಪ್ಪಾಗಿತ್ತಾದರೂ, ನೈವೇದ್ಯದ ರೊಟ್ಟಿಯ ನಿಯಮಿತ ಉಪಯೋಗಕ್ಕೆ ಅದು ಹೊಂದಿಕೆಯಲ್ಲಿತ್ತು. ಈ ವಿಚಾರವೇ, ಕೊಡಲ್ಪಟ್ಟ ನಿಯಮಕ್ಕೆ ಈ ವಿನಾಯಿತಿಯನ್ನು ಮಾಡುವಂತೆ ಅಹೀಮೆಲೆಕನನ್ನು ನಡೆಸಿತು. ಸ್ವತಃ ಯೇಸು ಕ್ರಿಸ್ತನೇ ಈ ಸನ್ನಿವೇಶವನ್ನು, ಫರಿಸಾಯರು ಸಬ್ಬತ್‌ ನಿಯಮವನ್ನು ವಿಪರೀತ ಕಟ್ಟುನಿಟ್ಟಿನಿಂದ ಅನ್ವಯಿಸಿದ ತಪ್ಪನ್ನು ತೋರಿಸಲಿಕ್ಕಾಗಿ ಉಪಯೋಗಿಸಿದನು.​—⁠ಮತ್ತಾಯ 12:​1-8.

ಆದರೆ ಇದರ ಅರ್ಥ, ಸನ್ನಿವೇಶಗಳು ಕಷ್ಟಕರವಾದಾಗ ದೇವರ ನಿಯಮವನ್ನು ಮುರಿಯಸಾಧ್ಯವಿದೆ ಎಂದಲ್ಲ. ಉದಾಹರಣೆಗೆ, ಇಸ್ರಾಯೇಲ್‌ ಯೋಧರು ಫಿಲಿಷ್ಟಿಯರೊಂದಿಗೆ ಹೋರಾಡುತ್ತಿದ್ದಾಗ ಗಂಭೀರವಾಗಿ ತೋರಿದಂಥ ಒಂದು ಪರಿಸ್ಥಿತಿಯು ಉಂಟಾಯಿತು. “ಶತ್ರುಗಳಿಗೆ ಮುಯ್ಯಿತೀರಿಸುವದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದ ವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ” ಎಂದು ರಾಜ ಸೌಲನು ಹೇಳಿದ್ದನು. ಬೈಬಲ್‌ ತಿಳಿಸುವುದು: ‘ಆ ದಿವಸ ಜನರು ಫಿಲಿಷ್ಟಿಯರನ್ನು ಹೊಡೆದು [ಸೋಲಿಸಿದರು].’ ಹೋರಾಟದ ಕಾರಣ ಯೋಧರು ದಣಿದಿದ್ದರು ಮತ್ತು ಹಸಿದಿದ್ದರು. ಈ ಕಾರಣ ಅವರು ‘ಪ್ರಾಣಿಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸದೊಡನೆ ರಕ್ತವನ್ನೂ ತಿಂದರು.’ (1 ಸಮುವೇಲ 14:​24, 31-33) ರಕ್ತದ ಕುರಿತಾದ ಯೆಹೋವನ ನಿಯಮವನ್ನು ಮುರಿಯುವ ಮೂಲಕ ಅವರು ಆತನಿಗೆ ವಿರುದ್ಧವಾಗಿ ಪಾಪಮಾಡಿದರು. ಅವರ ಕೃತ್ಯವು, ರಕ್ತವನ್ನು ‘ದೋಷಪರಿಹಾರಮಾಡಲಿಕ್ಕಾಗಿ’ ಮಾತ್ರ ಉಪಯೋಗಿಸಬೇಕು ಎಂದು ದೇವರು ನೇಮಿಸಿದ ಆಜ್ಞೆಗೆ ವಿರುದ್ಧವಾಗಿತ್ತು. (ಯಾಜಕಕಾಂಡ 17:10-12; ಆದಿಕಾಂಡ 9:3, 4) ಕರುಣೆಯನ್ನು ತೋರಿಸುತ್ತಾ ಯೆಹೋವನು ತನ್ನ ವಿರುದ್ಧ ಪಾಪಮಾಡಿದವರ ಪರವಾಗಿ ಸಲ್ಲಿಸಲಾದ ವಿಶೇಷ ಯಜ್ಞಗಳನ್ನು ಸ್ವೀಕರಿಸಿದನು.​—⁠1 ಸಮುವೇಲ 14:​34, 35.

ಹೌದು, ಎಲ್ಲಾ ಸಂದರ್ಭಗಳಲ್ಲಿಯೂ ನಾವು ಆತನ ನಿಯಮಗಳಿಗೆ ವಿಧೇಯರಾಗಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ” ಎಂಬುದಾಗಿ ಅಪೊಸ್ತಲ ಯೋಹಾನನು ತಿಳಿಸುತ್ತಾನೆ.​—⁠1 ಯೋಹಾನ 5:⁠3.

[ಪುಟ 30ರಲ್ಲಿರುವ ಚಿತ್ರ]

ಪ್ರತಿ ಸಬ್ಬತ್‌ ದಿನದಂದು ಹೊಸ ನೈವೇದ್ಯದ ರೊಟ್ಟಿಗಳನ್ನು ದೇವದರ್ಶನದ ಗುಡಾರದಲ್ಲಿ ಇಡಲಾಗುತ್ತಿತ್ತು