ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನಲ್ಲಿ ನಿರೀಕ್ಷೆಯಿಡುವವರನ್ನು ಕಾಪಾಡುತ್ತಾನೆ

ಯೆಹೋವನು ತನ್ನಲ್ಲಿ ನಿರೀಕ್ಷೆಯಿಡುವವರನ್ನು ಕಾಪಾಡುತ್ತಾನೆ

ಯೆಹೋವನು ತನ್ನಲ್ಲಿ ನಿರೀಕ್ಷೆಯಿಡುವವರನ್ನು ಕಾಪಾಡುತ್ತಾನೆ

“ನಿನ್ನ ಕೃಪಾ [“ಪ್ರೀತಿಪೂರ್ವಕ ದಯೆ,” Nw] ಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.” ​—⁠ಕೀರ್ತನೆ 40:⁠11.

ಪುರಾತನ ಇಸ್ರಾಯೇಲ್‌ನ ಅರಸನಾದ ದಾವೀದನು “ಶ್ರದ್ಧಾಪೂರ್ವಕವಾಗಿ ಯೆಹೋವನಲ್ಲಿ ನಿರೀಕ್ಷೆಯಿಟ್ಟನು” (NW) ಮತ್ತು ಯೆಹೋವನು ‘ತನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು’ ಎಂದು ಹೇಳುವಂತೆ ಪ್ರಚೋದಿಸಲ್ಪಟ್ಟನು. (ಕೀರ್ತನೆ 40:1) ಯಾರು ಯೆಹೋವನನ್ನು ಪ್ರೀತಿಸುತ್ತಾರೋ ಅವರನ್ನು ಆತನು ಹೇಗೆ ಕಾಪಾಡುತ್ತಾನೆ ಎಂಬುದನ್ನು ದಾವೀದನು ಅನೇಕಾವರ್ತಿ ನೇರವಾಗಿ ನೋಡಿದ್ದನು. ಆದುದರಿಂದಲೇ ಅವನು ಯೆಹೋವನಿಂದ ಯಾವಾಗಲೂ ಕಾಪಾಡಲ್ಪಡುವಂತೆ ಬೇಡಿಕೊಳ್ಳಲು ಶಕ್ತನಾದನು. (ಕೀರ್ತನೆ 40:11) ಯಾರಿಗೆ ‘ಶ್ರೇಷ್ಠ ಪುನರುತ್ಥಾನವು’ ವಾಗ್ದಾನಿಸಲ್ಪಟ್ಟಿದೆಯೋ ಆ ನಂಬಿಗಸ್ತ ಸ್ತ್ರೀಪುರುಷರಲ್ಲಿ ಒಬ್ಬನಾಗಿರುವ ದಾವೀದನು ಆ ಪ್ರತಿಫಲವನ್ನು ಪಡೆಯುವವನಾಗಿ ಸದ್ಯಕ್ಕೆ ಯೆಹೋವನ ಸ್ಮರಣೆಯಲ್ಲಿ ಸುರಕ್ಷಿತನಾಗಿದ್ದಾನೆ. (ಇಬ್ರಿಯ 11:32-35) ಹೀಗೆ ಅವನ ಭವಿಷ್ಯತ್ತು ಸಾಧ್ಯವಿರುವುದರಲ್ಲೇ ಅತ್ಯುತ್ತಮ ವಿಧದಲ್ಲಿ ಖಾತ್ರಿಪಡಿಸಲ್ಪಟ್ಟಿದೆ. ಅವನ ಹೆಸರು ಯೆಹೋವನ “ಜ್ಞಾಪಕದ ಪುಸ್ತಕದಲ್ಲಿ” ಬರೆಯಲ್ಪಟ್ಟಿದೆ.​—⁠ಮಲಾಕಿಯ 3:⁠16.

2 ಇಬ್ರಿಯ 11ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ನಂಬಿಗಸ್ತರು ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸುತ್ತಿದ್ದ ಸಮಯಕ್ಕಿಂತಲೂ ಮುಂಚೆ ಜೀವಿಸಿದ್ದರಾದರೂ, “ತನ್ನ ಪ್ರಾಣದ ಮೇಲೆ ಮಮತೆಯಿಡುವವನು ಅದನ್ನು ಕಳಕೊಳ್ಳುವನು, ಇಹಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು” ಎಂದು ಯೇಸು ಹೇಳಿದಾಗ ಅವನು ಏನನ್ನು ಕಲಿಸಿದನೋ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಿದರು. (ಯೋಹಾನ 12:25) ಆದುದರಿಂದ, ಯೆಹೋವನಿಂದ ಕಾಪಾಡಲ್ಪಡುವುದೆಂದರೆ ಕಷ್ಟಾನುಭವ ಅಥವಾ ಹಿಂಸೆಯಿಂದ ನಾವು ಬಾಧಿಸಲ್ಪಡುವುದಿಲ್ಲ ಎಂದರ್ಥವಲ್ಲ ಎಂಬುದು ಸುಸ್ಪಷ್ಟ. ಒಬ್ಬನು ದೇವರ ಮುಂದೆ ಒಳ್ಳೇ ನಿಲುವನ್ನು ಕಾಪಾಡಿಕೊಳ್ಳಲು ಶಕ್ತನಾಗುವಂತೆ ಆಧ್ಯಾತ್ಮಿಕ ವಿಧದಲ್ಲಿ ಸಂರಕ್ಷಿಸಲ್ಪಡುವುದೇ ಅದರ ಅರ್ಥವಾಗಿದೆ.

3 ಯೇಸು ತಾನೇ ಕ್ರೂರವಾದ ಹಿಂಸೆ ಮತ್ತು ನಿಂದೆಗೆ ಗುರಿಯಾದನು, ಮತ್ತು ಅಂತಿಮವಾಗಿ ಅವನನ್ನು ಅತ್ಯಂತ ಅವಮಾನಕರವಾದ ಹಾಗೂ ವೇದನಾಮಯವಾದ ಮರಣಕ್ಕೆ ಒಳಪಡಿಸುವುದರಲ್ಲಿ ಅವನ ವೈರಿಗಳು ಸಫಲರಾದರು. ಹಾಗಿದ್ದರೂ, ಮೆಸ್ಸೀಯನನ್ನು ಕಾಪಾಡುವ ತನ್ನ ವಾಗ್ದಾನವನ್ನು ದೇವರು ನೆರವೇರಿಸಲಿಲ್ಲ ಎಂಬುದು ಇದರ ಅರ್ಥವಲ್ಲ. (ಯೆಶಾಯ 42:1-7) ಯೇಸು ಅವಮಾನಕರ ರೀತಿಯಲ್ಲಿ ಮರಣಪಟ್ಟು ಮೂರು ದಿನಗಳು ಕಳೆದ ಬಳಿಕ ನಡೆದ ಅವನ ಪುನರುತ್ಥಾನವು, ಯೆಹೋವನು ದಾವೀದನ ಮೊರೆಗೆ ಕಿವಿಗೊಟ್ಟಂತೆಯೇ ಸಹಾಯಕ್ಕಾಗಿ ಯೇಸುವಿಟ್ಟ ಮೊರೆಗೂ ಕಿವಿಗೊಟ್ಟನು ಎಂಬುದನ್ನು ರುಜುಪಡಿಸುತ್ತದೆ. ಇದಕ್ಕೆ ಉತ್ತರವಾಗಿ, ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬೇಕಾಗಿದ್ದ ಬಲವನ್ನು ಯೆಹೋವನು ಯೇಸುವಿಗೆ ದಯಪಾಲಿಸಿದನು. (ಮತ್ತಾಯ 26:39) ಈ ರೀತಿಯಲ್ಲಿ ಯೇಸು ಕಾಪಾಡಲ್ಪಟ್ಟದ್ದರಿಂದಲೇ ಅವನು ಸ್ವರ್ಗದಲ್ಲಿ ಅಮರ ಜೀವನವನ್ನು ಪಡೆದನು, ಮತ್ತು ಈಡಿನಲ್ಲಿ ನಂಬಿಕೆಯಿಟ್ಟಿರುವ ಲಕ್ಷಗಟ್ಟಲೆ ಮಾನವರಿಗೆ ನಿತ್ಯಜೀವದ ಪ್ರತೀಕ್ಷೆಯಿದೆ.

4 ದಾವೀದನ ಮತ್ತು ಯೇಸುವಿನ ದಿನಗಳಲ್ಲಿ ಯೆಹೋವನು ತನ್ನ ಸೇವಕರನ್ನು ಕಾಪಾಡಲು ಹೇಗೆ ಸಿದ್ಧಮನಸ್ಸುಳ್ಳವನು ಮತ್ತು ಶಕ್ತನು ಆಗಿದ್ದನೊ ಅದೇ ರೀತಿಯಲ್ಲಿ ಇಂದು ಸಹ ಆತನು ತನ್ನ ಸೇವಕರನ್ನು ಕಾಪಾಡಲು ಸಿದ್ಧಮನಸ್ಸುಳ್ಳವನಾಗಿದ್ದಾನೆ ಮತ್ತು ಶಕ್ತನಾಗಿದ್ದಾನೆ ಎಂಬ ದೃಢವಿಶ್ವಾಸ ನಮಗಿರಸಾಧ್ಯವಿದೆ. (ಯಾಕೋಬ 1:17) ಯೇಸುವಿನ ಅಭಿಷಿಕ್ತ ಸಹೋದರರಲ್ಲಿ ಭೂಮಿಯ ಮೇಲೆ ಇನ್ನೂ ಉಳಿದಿರುವ ಕೊಂಚವೇ ಮಂದಿ, ಯೆಹೋವನ ಈ ವಾಗ್ದಾನದ ಮೇಲೆ ಭರವಸೆಯಿಡಸಾಧ್ಯವಿದೆ: ‘ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿರುವದು. ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.’ (1 ಪೇತ್ರ 1:4, 5) ತದ್ರೀತಿಯಲ್ಲಿ ಭೂನಿರೀಕ್ಷೆಯಿರುವ “ಬೇರೆ ಕುರಿಗಳು,” ದೇವರಲ್ಲಿ ಮತ್ತು ಕೀರ್ತನೆಗಾರನ ಮೂಲಕ ಕೊಡಲ್ಪಟ್ಟಿರುವ ಆತನ ಈ ವಾಗ್ದಾನದಲ್ಲಿ ಭರವಸೆಯಿಡಸಾಧ್ಯವಿದೆ: “ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ. ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ.”​—⁠ಯೋಹಾನ 10:16; ಕೀರ್ತನೆ 31:⁠23.

ಆಧ್ಯಾತ್ಮಿಕವಾಗಿ ಕಾಪಾಡಲ್ಪಡುವುದು

5 ಆಧುನಿಕ ಸಮಯಗಳಲ್ಲಿ, ಯೆಹೋವನು ಆಧ್ಯಾತ್ಮಿಕ ರೀತಿಯಲ್ಲಿ ತನ್ನ ಜನರನ್ನು ಕಾಪಾಡಲಿಕ್ಕಾಗಿ ಒದಗಿಸುವಿಕೆಗಳನ್ನು ಮಾಡಿದ್ದಾನೆ. ಆತನು ಹಿಂಸೆಯಿಂದ ಅಥವಾ ಜೀವನದಲ್ಲಿ ಸಾಮಾನ್ಯವಾಗಿರುವ ಕಷ್ಟತೊಂದರೆಗಳು ಮತ್ತು ಅನಾಹುತಗಳಿಂದ ಅವರನ್ನು ಸಂರಕ್ಷಿಸುವುದಿಲ್ಲವಾದರೂ, ತನ್ನೊಂದಿಗಿನ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳಲು ಅವರಿಗೆ ಅಗತ್ಯವಿರುವ ಸಹಾಯವನ್ನೂ ಪ್ರಚೋದನೆಯನ್ನೂ ನಿಷ್ಠೆಯಿಂದ ನೀಡಿದ್ದಾನೆ. ಅವರು ಈ ಸಂಬಂಧವನ್ನು ದೇವರ ಪ್ರೀತಿಯ ಈಡಿನ ಒದಗಿಸುವಿಕೆಯಲ್ಲಿನ ತಮ್ಮ ನಂಬಿಕೆಯ ಅಸ್ತಿವಾರದ ಮೇಲೆ ಕಟ್ಟಿದ್ದಾರೆ. ಈ ನಂಬಿಗಸ್ತ ಕ್ರೈಸ್ತರಲ್ಲಿ ಕೆಲವರು, ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಜೊತೆ ಅರಸರಾಗಲಿಕ್ಕಾಗಿ ದೇವರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾರೆ. ಅವರು ದೇವರ ಆಧ್ಯಾತ್ಮಿಕ ಪುತ್ರರಾಗಿ ಅಂಗೀಕರಿಸಲ್ಪಟ್ಟಿದ್ದಾರೆ, ಮತ್ತು ಅವರಿಗೆ ಈ ಮಾತುಗಳು ಅನ್ವಯವಾಗುತ್ತವೆ: “ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು.”​—⁠ಕೊಲೊಸ್ಸೆ 1:13, 14.

6 ದೇವರ ಈಡಿನ ಒದಗಿಸುವಿಕೆಯಿಂದ ತಾವು ಸಹ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬ ಖಾತ್ರಿಯು ಲಕ್ಷಾಂತರ ಮಂದಿ ನಂಬಿಗಸ್ತ ಕ್ರೈಸ್ತರಿಗೆ ಇದೆ. ನಾವು ಓದುವುದು: “ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮಾರ್ಕ 10:45) ಆ ಕ್ರೈಸ್ತರು ಕ್ಲುಪ್ತ ಕಾಲದಲ್ಲಿ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವ ಸಮಯಕ್ಕಾಗಿ ಎದುರುನೋಡುತ್ತಾರೆ. (ರೋಮಾಪುರ 8:21) ಅಷ್ಟರ ತನಕ ಅವರು ದೇವರೊಂದಿಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅತ್ಯಮೂಲ್ಯವಾಗಿ ಪರಿಗಣಿಸಿ, ಆ ಸಂಬಂಧವನ್ನು ಬಲಗೊಳಿಸಲು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ.

7 ಯೆಹೋವನು ತನ್ನ ಜನರ ಆಧ್ಯಾತ್ಮಿಕ ಹಿತಕ್ಷೇಮವನ್ನು ಕಾಪಾಡುವಂಥ ಒಂದು ವಿಧವು, ಪ್ರಗತಿಪರವಾದ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕವೇ ಆಗಿದೆ. ಇದು ಅವರಿಗೆ ಸತ್ಯದ ಕುರಿತು ಇನ್ನೂ ಹೆಚ್ಚು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. ಯೆಹೋವನು ತನ್ನ ವಾಕ್ಯ, ತನ್ನ ಸಂಘಟನೆ ಮತ್ತು ತನ್ನ ಪವಿತ್ರಾತ್ಮದ ಮೂಲಕ ಸತತವಾದ ಮಾರ್ಗದರ್ಶನವನ್ನು ಒದಗಿಸುತ್ತಾನೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ನಿರ್ದೇಶನದ ಕೆಳಗೆ, ಲೋಕದಾದ್ಯಂತ ಇರುವ ದೇವಜನರು ಒಂದು ಅಂತಾರಾಷ್ಟ್ರೀಯ ಕುಟುಂಬದಂತಿದ್ದಾರೆ. ಜನರ ರಾಷ್ಟ್ರೀಯ ಮೂಲ ಅಥವಾ ಸಾಮಾಜಿಕ ನಿಲುವು ಏನೇ ಆಗಿರಲಿ, ಆಳು ವರ್ಗವು ಯೆಹೋವನ ಸೇವಕರಿರುವ ಕುಟುಂಬದ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಮತ್ತು ಅಗತ್ಯವಿರುವಾಗ ಭೌತಿಕ ಆವಶ್ಯಕತೆಗಳನ್ನು ಸಹ ನೋಡಿಕೊಳ್ಳುತ್ತದೆ.​—⁠ಮತ್ತಾಯ 24:⁠45.

8 ಯೆಹೋವನು ಹೇಗೆ ಯೇಸುವನ್ನು ಅವನ ವೈರಿಗಳ ಹಲ್ಲೆಗಳಿಂದ ಶಾರೀರಿಕವಾಗಿ ಸಂರಕ್ಷಿಸಲಿಲ್ಲವೋ ಹಾಗೆಯೇ ಆತನು ಇಂದು ಕ್ರೈಸ್ತರನ್ನು ಆ ವಿಧದಲ್ಲಿ ಸಂರಕ್ಷಿಸುವುದಿಲ್ಲ. ಆದರೆ ಇದು ಖಂಡಿತವಾಗಿಯೂ ದೇವರ ಅಸಮ್ಮತಿಯ ಒಂದು ಸೂಚನೆಯಾಗಿಲ್ಲ. ಬದಲಾಗಿ, ವಿಶ್ವದಲ್ಲೇ ಅತಿ ದೊಡ್ಡ ವಿವಾದಾಂಶದಲ್ಲಿ ಅವರು ತನ್ನ ಪಕ್ಷವನ್ನು ಎತ್ತಿಹಿಡಿಯುತ್ತಾರೆ ಎಂಬ ಆತನ ದೃಢಭರವಸೆಯನ್ನು ಅದು ತೋರಿಸುತ್ತದೆ. (ಯೋಬ 1:8-12; ಜ್ಞಾನೋಕ್ತಿ 27:11) ತನಗೆ ನಿಷ್ಠೆಯನ್ನು ತೋರಿಸುವವರನ್ನು ಯೆಹೋವನು ಎಂದಿಗೂ ಕೈಬಿಡುವುದಿಲ್ಲ, ಏಕೆಂದರೆ “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.”​—⁠ಕೀರ್ತನೆ 37:⁠28.

ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಯಿಂದ ಕಾಪಾಡಲ್ಪಡುವುದು

9 ಕೀರ್ತನೆ 40ರಲ್ಲಿ ದಾಖಲಿಸಲ್ಪಟ್ಟಿರುವ ತನ್ನ ಪ್ರಾರ್ಥನೆಯಲ್ಲಿ ದಾವೀದನು, ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಯು ತನ್ನನ್ನು ಕಾಪಾಡಲಿ ಎಂದು ಕೇಳಿಕೊಂಡನು. ಯೆಹೋವನ ಸತ್ಯತೆ ಮತ್ತು ನೀತಿಗಾಗಿರುವ ಆತನ ಪ್ರೀತಿಯು, ತನ್ನ ಮಟ್ಟಗಳೇನು ಎಂಬುದನ್ನು ಆತನು ಸ್ಪಷ್ಟವಾಗಿ ತಿಳಿಸುವಂತೆ ಅಗತ್ಯಪಡಿಸುತ್ತದೆ. ಈ ಮಟ್ಟಗಳಿಗನುಸಾರ ಜೀವಿಸುವವರು, ಯಾರು ಇವುಗಳನ್ನು ಅಲಕ್ಷಿಸುತ್ತಾರೋ ಅವರು ಅನುಭವಿಸುವ ಸಂಕಟ, ಭಯ ಮತ್ತು ಸಮಸ್ಯೆಗಳಿಂದ ಬಹಳಷ್ಟು ಮಟ್ಟಿಗೆ ಕಾಪಾಡಲ್ಪಡುವರು. ಉದಾಹರಣೆಗೆ, ಒಂದುವೇಳೆ ನಾವು ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗ, ಲೈಂಗಿಕ ಸ್ವೇಚ್ಛಾಚಾರ ಮತ್ತು ಹಿಂಸಾತ್ಮಕ ಜೀವನಶೈಲಿಯಿಂದ ದೂರವಿರುವಲ್ಲಿ, ಸ್ವತಃ ನಮ್ಮನ್ನು ಹಾಗೂ ನಮ್ಮ ಪ್ರಿಯ ಜನರನ್ನು ಅನೇಕ ಹೃದಯವಿದ್ರಾವಕ ಸಮಸ್ಯೆಗಳಿಂದ ಸಂರಕ್ಷಿಸಸಾಧ್ಯವಿದೆ. ಕೆಲವೊಮ್ಮೆ ದಾವೀದನಂತೆ ಯೆಹೋವನ ಸತ್ಯಮಾರ್ಗದಿಂದ ದಾರಿತಪ್ಪುವವರಿಗೆ ಸಹ, ಪಶ್ಚಾತ್ತಾಪಪಡುವ ತಪ್ಪಿತಸ್ಥರಿಗೆ ದೇವರು ‘ಮರೆಮಾಡುವ ಸ್ಥಳವಾಗಿದ್ದಾನೆ’ ಎಂಬ ಆಶ್ವಾಸನೆಯಿರುತ್ತದೆ. ಅಂಥವರು ಹರ್ಷಾನಂದದಿಂದ ಹೀಗೆ ಉದ್ಘೋಷಿಸಸಾಧ್ಯವಿದೆ: ‘ನೀನು ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀ.’ (ಕೀರ್ತನೆ 32:​7, NIBV) ದೇವರ ಪ್ರೀತಿಪೂರ್ವಕ ದಯೆಯ ಎಂಥ ಒಂದು ಅಮೂಲ್ಯ ಅಭಿವ್ಯಕ್ತಿ!

10 ದೇವರ ಪ್ರೀತಿಪೂರ್ವಕ ದಯೆಯ ಇನ್ನೊಂದು ಉದಾಹರಣೆಯು ಯಾವುದೆಂದರೆ, ಅತಿ ಬೇಗನೆ ತಾನು ನಾಶಮಾಡಲಿರುವ ಈ ದುಷ್ಟ ಲೋಕದಿಂದ ಪ್ರತ್ಯೇಕವಾಗಿ ಉಳಿಯುವಂತೆ ಆತನು ತನ್ನ ಸೇವಕರಿಗೆ ಎಚ್ಚರಿಕೆ ನೀಡುವುದೇ. ನಾವು ಓದುವುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” ಈ ಎಚ್ಚರಿಕೆಗೆ ಲಕ್ಷ್ಯಕೊಡುವ ಮೂಲಕ ಮತ್ತು ಅದಕ್ಕನುಸಾರ ಕ್ರಿಯೆಗೈಯುವ ಮೂಲಕ, ಯುಗಯುಗಾಂತರಕ್ಕೂ ನಮ್ಮ ಜೀವವನ್ನು ನಾವು ಅಕ್ಷರಾರ್ಥವಾಗಿ ಕಾಪಾಡಿಕೊಳ್ಳಸಾಧ್ಯವಿದೆ. ಏಕೆಂದರೆ ಆ ವಚನವು ಹೀಗೆ ಮುಂದುವರಿಯುತ್ತದೆ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:15-17.

ಆಲೋಚನಾ ಸಾಮರ್ಥ್ಯ, ವಿವೇಚನಾಶಕ್ತಿ ಮತ್ತು ವಿವೇಕದಿಂದ ಕಾಪಾಡಲ್ಪಡುವುದು

11 ದೇವರ ಸಮ್ಮತಿಯನ್ನು ಪಡೆಯಲು ನಿರೀಕ್ಷಿಸುತ್ತಿರುವವರಿಗೆ ದಾವೀದನ ಮಗನಾದ ಸೊಲೊಮೋನನು ಹೀಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟನು: “ಬುದ್ಧಿಯು [ಆಲೋಚನಾ ಸಾಮರ್ಥ್ಯವು] ನಿನಗೆ ಕಾವಲಾಗಿರುವದು, ವಿವೇಕವು [ವಿವೇಚನಾಶಕ್ತಿಯು] ನಿನ್ನನ್ನು ಕಾಪಾಡುವದು.” ಅವನು ಇನ್ನೂ ಉತ್ತೇಜಿಸಿದ್ದು: “ಜ್ಞಾನ [ವಿವೇಕ]ವನ್ನು ಪಡೆ, . . . [ಅದನ್ನು] ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವದು, ಪ್ರೀತಿಸಿದರೆ, ನಿನ್ನನ್ನು ಕಾಯುವದು.”​—⁠ಜ್ಞಾನೋಕ್ತಿ 2:11; 4:5, 6.

12 ದೇವರ ವಾಕ್ಯದಿಂದ ನಾವೇನನ್ನು ಕಲಿಯುತ್ತೇವೋ ಅದರ ಕುರಿತು ಧ್ಯಾನಿಸುವುದಾದರೆ, ನಾವು ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸುತ್ತೇವೆ. ಧ್ಯಾನಿಸುವಿಕೆಯು, ನಾವು ಸೂಕ್ತವಾದ ಆದ್ಯತೆಗಳನ್ನು ಇಡಸಾಧ್ಯವಾಗುವಂತೆ ಹೆಚ್ಚಿನ ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುವುದು. ಆದ್ಯತೆಗಳನ್ನು ಇಡುವುದು ಅತ್ಯಾವಶ್ಯಕವಾಗಿದೆ, ಏಕೆಂದರೆ ಜನರು ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಪೂರ್ವಕವಾಗಿ ಅವಿವೇಕಯುತವಾದ ಆದ್ಯತೆಗಳನ್ನು ಇಡುವಾಗ ಸಮಸ್ಯೆಗಳು ಏಳುತ್ತವೆ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ಬಹುಶಃ ವೈಯಕ್ತಿಕ ಅನುಭವದಿಂದ ತಿಳಿದಿದೆ. ಸೈತಾನನ ಲೋಕವು ನಮ್ಮನ್ನು ಪ್ರಾಪಂಚಿಕ ಐಶ್ವರ್ಯ, ಸ್ಥಾನಮಾನ ಮತ್ತು ಅಧಿಕಾರದ ಗುರಿಗಳಿಂದ ಪ್ರಲೋಭಿಸುತ್ತದೆ, ಆದರೆ ಅತಿ ಪ್ರಾಮುಖ್ಯವಾಗಿರುವ ಆಧ್ಯಾತ್ಮಿಕ ಮೌಲ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಯೆಹೋವನು ಉತ್ತೇಜಿಸುತ್ತಾನೆ. ಪ್ರಾಪಂಚಿಕ ಗುರಿಗಳಿಗಿಂತಲೂ ಹೆಚ್ಚಾಗಿ ಆಧ್ಯಾತ್ಮಿಕ ಮೌಲ್ಯಗಳಿಗೆ ಆದ್ಯತೆ ನೀಡಲು ತಪ್ಪಿಹೋಗುವುದು ಕುಟುಂಬಗಳು ಒಡೆಯುವಂತೆ, ಸ್ನೇಹಬಂಧಗಳು ಮುರಿಯುವಂತೆ ಮತ್ತು ಆಧ್ಯಾತ್ಮಿಕ ಗುರಿಗಳು ಮಾಸಿಹೋಗುವಂತೆ ಮಾಡಬಲ್ಲದು. ಇದರ ಪರಿಣಾಮವಾಗಿ, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಎಂಬ ಯೇಸುವಿನ ಮಾತುಗಳಿಂದ ಸೂಚಿಸಲ್ಪಟ್ಟ ದುಃಖಕರ ವಾಸ್ತವಿಕತೆಯನ್ನು ಒಬ್ಬ ವ್ಯಕ್ತಿಯು ಅನುಭವಿಸಸಾಧ್ಯವಿದೆ. (ಮಾರ್ಕ 8:36) ವಿವೇಕವು ನಾವು ಯೇಸುವಿನ ಈ ಸಲಹೆಗೆ ಲಕ್ಷ್ಯಕೊಡುವಂತೆ ನಿರ್ದೇಶಿಸುತ್ತದೆ: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”​—⁠ಮತ್ತಾಯ 6:⁠33.

ಸ್ವಾರ್ಥಮಗ್ನರಾಗುವುದರ ಅಪಾಯ

13 ಸ್ವಭಾವತಃ ಮಾನವರು ತಮ್ಮಲ್ಲೇ ಆಸಕ್ತರಾಗಿರುತ್ತಾರೆ. ಆದರೆ, ವೈಯಕ್ತಿಕ ಬಯಕೆಗಳು ಮತ್ತು ಅಭಿರುಚಿಗಳೇ ಜೀವನದಲ್ಲಿ ಅತಿ ಪ್ರಾಮುಖ್ಯವಾದ ವಿಷಯಗಳಾಗಿ ಪರಿಣಮಿಸುವಾಗ ತೊಂದರೆಯು ಉಂಟಾಗುತ್ತದೆ. ಆದುದರಿಂದ, ಯೆಹೋವನೊಂದಿಗಿನ ನಮ್ಮ ಸ್ನೇಹವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಸ್ವಾರ್ಥಮಗ್ನರಾಗಿರುವುದರಿಂದ ದೂರವಿರಬೇಕು ಎಂದು ಆತನು ಬೋಧಿಸುತ್ತಾನೆ. ಸ್ವಾರ್ಥಮಗ್ನ ಎಂಬ ಪದದ ಅರ್ಥ “ಒಬ್ಬನು ತನ್ನ ಸ್ವಂತ ಬಯಕೆಗಳು, ಆವಶ್ಯಕತೆಗಳು ಅಥವಾ ಅಭಿರುಚಿಗಳ ಬಗ್ಗೆ ಸದಾ ಚಿಂತಿಸುತ್ತಿರುವುದು” ಎಂದಾಗಿದೆ. ಇದು ಇಂದಿರುವ ಅನೇಕ ಜನರನ್ನು ಸೂಕ್ತವಾಗಿ ವರ್ಣಿಸುವುದಿಲ್ಲವೊ? ಗಮನಾರ್ಹವಾಗಿಯೇ, ಸೈತಾನನ ದುಷ್ಟ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ‘ಮನುಷ್ಯರು ಸ್ವಾರ್ಥಚಿಂತಕರಾಗಿರುವರು’ ಎಂದು ಬೈಬಲ್‌ ಮುಂತಿಳಿಸುತ್ತದೆ.​—⁠2 ತಿಮೊಥೆಯ 3:​1, 2.

14 ಇತರರಲ್ಲಿ ಆಸಕ್ತಿಯನ್ನು ವಹಿಸುವ ಮತ್ತು ಸ್ವತಃ ನಮ್ಮನ್ನು ಪ್ರೀತಿಸಿಕೊಳ್ಳುವಂತೆಯೇ ಇತರರನ್ನೂ ಪ್ರೀತಿಸುವ ಬೈಬಲ್‌ ಆಜ್ಞೆಗೆ ವಿಧೇಯರಾಗುವುದರ ಹಿಂದಿರುವ ವಿವೇಕವನ್ನು ಕ್ರೈಸ್ತರು ಗಣ್ಯಮಾಡುತ್ತಾರೆ. (ಲೂಕ 10:27; ಫಿಲಿಪ್ಪಿ 2:4) ಸಾಮಾನ್ಯವಾಗಿ ಜನರು ಹೀಗೆ ಮಾಡುವುದು ಅಸಾಧ್ಯ ಎಂದು ಪರಿಗಣಿಸಬಹುದಾದರೂ, ಯಶಸ್ವಿಕರವಾದ ದಾಂಪತ್ಯ ಜೀವನ, ಸಂತೋಷಭರಿತ ಕುಟುಂಬ ಸಂಬಂಧಗಳು ಮತ್ತು ಸಂತೃಪ್ತಿಕರವಾದ ಸ್ನೇಹಸಂಬಂಧಗಳನ್ನು ಅನುಭವಿಸಬೇಕಾದರೆ ಇದು ಅತ್ಯಾವಶ್ಯಕವಾಗಿದೆ. ಹೀಗೆ, ಯೆಹೋವನ ನಿಜ ಸೇವಕನೊಬ್ಬನು, ತನ್ನ ಹಿತದ ಕುರಿತಾಗಿಯೇ ಚಿಂತಿಸುವ ಸಹಜ ಸ್ವಭಾವವು, ಹೆಚ್ಚು ಪ್ರಾಮುಖ್ಯವಾಗಿರುವ ಅಭಿರುಚಿಗಳನ್ನು ಹೊರದೂಡುವಷ್ಟರ ಮಟ್ಟಿಗೆ ತನ್ನ ಜೀವನದಲ್ಲಿ ಮೇಲುಗೈ ಪಡೆಯುವಂತೆ ಬಿಡಬಾರದು. ಇದರ ಅರ್ಥ, ಅವನು ತಾನು ಆರಾಧಿಸುವ ದೇವರಾದ ಯೆಹೋವನ ಅಭಿರುಚಿಗಳನ್ನು ಹೆಚ್ಚು ಪ್ರಾಮುಖ್ಯವಾಗಿ ಎಣಿಸಬೇಕೆಂಬುದೇ.

15 ಸ್ವಾರ್ಥಮಗ್ನ ಮನೋಭಾವವು ಒಬ್ಬ ವ್ಯಕ್ತಿಯನ್ನು ಸ್ವನೀತಿವಂತನಾಗುವಂತೆ ಮಾಡಸಾಧ್ಯವಿದೆ, ಇದು ಆ ವ್ಯಕ್ತಿಯು ಸಂಕುಚಿತ ಬುದ್ಧಿಯವನೂ ದುರಹಂಕಾರಿಯೂ ಆಗುವಂತೆ ಮಾಡಬಲ್ಲದು. ಬೈಬಲ್‌ ಸೂಕ್ತವಾಗಿಯೇ ಹೇಳುವುದು: “ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ, ಉತ್ತರ ಹೇಳುವದಕ್ಕೆ ನಿನಗೆ ಮಾರ್ಗವಿಲ್ಲ. ಹೇಗಂದರೆ ಮತ್ತೊಬ್ಬರಲ್ಲಿ ದೋಷವೆಣಿಸುವದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ.” (ರೋಮಾಪುರ 2:1; 14:4, 10) ಯೇಸುವಿನ ದಿನಗಳಲ್ಲಿದ್ದ ಧಾರ್ಮಿಕ ಮುಖಂಡರು ತಮ್ಮ ಸ್ವನೀತಿಯ ವಿಷಯದಲ್ಲಿ ಎಷ್ಟು ದೃಢನಿಶ್ಚಿತರಾಗಿದ್ದರೆಂದರೆ, ಯೇಸುವಿನ ಮತ್ತು ಅವನ ಹಿಂಬಾಲಕರನ್ನು ಖಂಡಿಸುವ ಅರ್ಹತೆ ತಮಗಿದೆ ಎಂದು ಅವರು ನೆನಸಿದರು. ಹೀಗೆ ಮಾಡುವ ಮೂಲಕ, ಅವರು ತಮ್ಮನ್ನು ನ್ಯಾಯಾಧಿಪತಿಗಳ ಸ್ಥಾನದಲ್ಲಿ ಇರಿಸಿಕೊಂಡರು. ತಮ್ಮ ಸ್ವಂತ ಕುಂದುಕೊರತೆಗಳನ್ನು ಗ್ರಹಿಸಲು ಅಸಮರ್ಥರಾಗಿದ್ದ ಅವರು ವಾಸ್ತವದಲ್ಲಿ ತಮ್ಮ ಮೇಲೇ ಖಂಡನೆಯನ್ನು ಬರಮಾಡಿಕೊಂಡರು.

16 ಯೇಸುವಿನ ಹಿಂಬಾಲಕನಾಗಿದ್ದು ಅವನಿಗೆ ದ್ರೋಹವೆಸಗಿದ ಯೂದನು, ಇತರರಲ್ಲಿ ದೋಷವನ್ನು ಕಂಡುಹಿಡಿಯುವವರಲ್ಲಿ ಒಬ್ಬನಾಗುವಂತೆ ತನ್ನನ್ನು ಬಿಟ್ಟುಕೊಟ್ಟನು. ಬೇಥಾನ್ಯದಲ್ಲಿ ಲಾಜರನ ಸಹೋದರಿಯಾಗಿದ್ದ ಮರಿಯಳು ಜಟಾಮಾಂಸಿ ತೈಲದಿಂದ ಯೇಸುವನ್ನು ಅಭಿಷೇಕಿಸಿದ ಸಂದರ್ಭದಲ್ಲಿ, ಯೂದನು ಈ ಕೃತ್ಯವನ್ನು ಕಡಾಖಂಡಿತವಾಗಿ ಆಕ್ಷೇಪಿಸಿದನು. “ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ”? ಎಂದು ವಾಗ್ವಾದಮಾಡುವ ಮೂಲಕ ಅವನು ತನ್ನ ಕೋಪವನ್ನು ವ್ಯಕ್ತಪಡಿಸಿದನು. ಆದರೆ ಬೈಬಲ್‌ ವೃತ್ತಾಂತವು ಈ ವಿವರಣೆಯನ್ನು ನೀಡುತ್ತದೆ: “ಅವನು ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದದರಿಂದಲೇ ಹೇಳಿದನು.” (ಯೋಹಾನ 12:1-6) ಇತರರ ದೋಷವನ್ನು ಕಂಡುಹಿಡಿಯಲು ತವಕಿಸುತ್ತಿದ್ದು, ಇದರ ಫಲಿತಾಂಶವಾಗಿ ಸ್ವತಃ ತಮ್ಮ ಮೇಲೆಯೇ ಖಂಡನೆಯನ್ನು ಬರಮಾಡಿಕೊಂಡ ಯೂದನಂತೆ ಅಥವಾ ಧಾರ್ಮಿಕ ಮುಖಂಡರಂತೆ ನಾವೆಂದಿಗೂ ಆಗದಿರೋಣ.

17 ಆರಂಭದ ಕೆಲವು ಕ್ರೈಸ್ತರು ಯೂದನಂತೆ ಕಳ್ಳರಾಗಿರಲಿಲ್ಲವಾದರೂ ಜಂಬಕೊಚ್ಚಿಕೊಳ್ಳುವವರಾಗಿ ಪರಿಣಮಿಸುವ ಮೂಲಕ ಅಹಂಕಾರಕ್ಕೆ ಬಲಿಬಿದ್ದದ್ದು ವಿಷಾದಕರ. ಅವರ ಕುರಿತು ಯಾಕೋಬನು ಬರೆದುದು: “ನೀವು ಅಹಂಭಾವದಿಂದ ಹೊಗಳಿಕೊಳ್ಳುತ್ತೀರಿ.” ತದನಂತರ ಅವನು ಕೂಡಿಸಿದ್ದು: “ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ.” (ಯಾಕೋಬ 4:16) ನಮ್ಮ ಸಾಧನೆಗಳ ಕುರಿತು ಮತ್ತು ಯೆಹೋವನ ಸೇವೆಯಲ್ಲಿ ನಮಗಿರುವ ಸುಯೋಗಗಳ ಕುರಿತು ಜಂಬಕೊಚ್ಚಿಕೊಳ್ಳುವುದು ಸ್ವವೈಫಲ್ಯಕಾರಿಯಾಗಿದೆ. (ಜ್ಞಾನೋಕ್ತಿ 14:16) ಅಪೊಸ್ತಲ ಪೇತ್ರನಿಗೆ ಏನು ಸಂಭವಿಸಿತು ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬಹುದು. ವಿಪರೀತ ಆತ್ಮವಿಶ್ವಾಸವುಂಟಾದ ಒಂದು ಕ್ಷಣದಲ್ಲಿ ಅವನು ಹೀಗೆ ಜಂಬಕೊಚ್ಚಿಕೊಂಡನು: “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ . . . ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ.” ವಾಸ್ತವದಲ್ಲಿ, ನಮ್ಮ ಕುರಿತು ನಾವೇ ಜಂಬಕೊಚ್ಚಿಕೊಳ್ಳಲು ನಮ್ಮ ಬಳಿ ಏನೂ ಇಲ್ಲ. ನಮ್ಮ ಬಳಿ ಇರುವುದೆಲ್ಲವೂ ಯೆಹೋವನ ಪ್ರೀತಿಪೂರ್ವಕ ದಯೆಯ ಕಾರಣದಿಂದಲೇ ಲಭಿಸಿದೆ. ಇದನ್ನು ಜ್ಞಾಪಿಸಿಕೊಳ್ಳುವುದು ಜಂಬಕೊಚ್ಚಿಕೊಳ್ಳುವವರು ಆಗಿರುವುದರಿಂದ ನಮ್ಮನ್ನು ತಡೆಯುವುದು.​—⁠ಮತ್ತಾಯ 26:33-35, 69-75.

18 “ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ; ಬೀಳುವಿಕೆಯ ಮುಂಚೆ ಜಂಬದ ಆತ್ಮ” ಎಂದು ನಮಗೆ ಹೇಳಲಾಗಿದೆ. ಏಕೆ? ಯೆಹೋವನು ಉತ್ತರಿಸುವುದು: “ಗರ್ವ, ಅಹಂಭಾವ . . . ಇವುಗಳನ್ನು ಹಗೆಮಾಡುತ್ತೇನೆ.” (ಜ್ಞಾನೋಕ್ತಿ 8:13; 16:​18, NIBV) ಆದುದರಿಂದಲೇ ಯೆಹೋವನು ‘ಅಶ್ಶೂರದ ರಾಜನ ಉಬ್ಬಟೆಯ ಕೊಚ್ಚಾಟವನ್ನೂ ಗರ್ವದೃಷ್ಟಿಯ ಮೆರೆದಾಟವನ್ನೂ’ ನೋಡಿ ಕ್ರೋಧಗೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ. (ಯೆಶಾಯ 10:12) ಆ ರಾಜನ ಅಹಂಕಾರದ ಕೊಚ್ಚಾಟಕ್ಕಾಗಿ ಯೆಹೋವನು ಅವನಿಗೆ ಶಿಕ್ಷೆಯನ್ನು ವಿಧಿಸಿದನು. ಅತಿಬೇಗನೆ ಸೈತಾನನ ಇಡೀ ಲೋಕ ಮತ್ತು ಅದರೊಂದಿಗೆ ಅಹಂಕಾರಿಗಳೂ ಸ್ವಪ್ರತಿಷ್ಠೆಯುಳ್ಳವರೂ ಆಗಿರುವ ಅದರ ದೃಶ್ಯಾದೃಶ್ಯ ನಾಯಕರು ಶಿಕ್ಷೆಗೆ ಒಳಪಡಿಸಲ್ಪಡುವರು. ಯೆಹೋವನ ಎದುರಾಳಿಗಳ ಸ್ವೇಚ್ಛಾ ಪ್ರವೃತ್ತಿಯನ್ನು ನಾವೆಂದಿಗೂ ಅನುಕರಿಸದಿರೋಣ!

19 ನಿಜ ಕ್ರೈಸ್ತರು ಯೆಹೋವನ ಸೇವಕರಾಗಿರುವುದರ ವಿಷಯದಲ್ಲಿ ಹೆಚ್ಚಳಪಡಲು ಅಥವಾ ಹೆಮ್ಮೆಪಡಲು ಸಕಾರಣವಿದೆ. (ಯೆರೆಮೀಯ 9:24) ಅದೇ ಸಮಯದಲ್ಲಿ, ಅವರು ದೀನರಾಗಿರಲು ಸಹ ಸಕಾರಣವಿದೆ. ಏಕೆ? ಏಕೆಂದರೆ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಆದುದರಿಂದ, ಯೆಹೋವನ ಸೇವಕರಾಗಿರುವ ನಮ್ಮ ನಿಲುವನ್ನು ಕಾಪಾಡಿಕೊಳ್ಳಲಿಕ್ಕಾಗಿ, ನಾವು ಅಪೊಸ್ತಲ ಪೌಲನಂಥ ಮನೋಭಾವವನ್ನೇ ಹೊಂದಿರಬೇಕು. ಅವನು “ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು” ಎಂದು ತಿಳಿಸಿದನು ಮತ್ತು ತದನಂತರ ಕೂಡಿಸಿ ಹೇಳಿದ್ದು: “ಆ ಪಾಪಿಗಳಲ್ಲಿ ನಾನೇ ಮುಖ್ಯನು.”​—⁠1 ತಿಮೊಥೆಯ 1:⁠15.

20 ದೇವರ ಅಭಿರುಚಿಗಳಿಗೆ ಆದ್ಯತೆಯನ್ನು ನೀಡಲಿಕ್ಕಾಗಿ ಯೆಹೋವನ ಜನರು ಸಂತೋಷದಿಂದಲೇ ತಮ್ಮ ವೈಯಕ್ತಿಕ ಅಭಿರುಚಿಗಳಿಗೆ ಎರಡನೇ ಸ್ಥಾನವನ್ನು ಕೊಡುತ್ತಾರಾದ್ದರಿಂದ, ಯೆಹೋವನು ಅವರನ್ನು ಆಧ್ಯಾತ್ಮಿಕವಾಗಿ ಕಾಪಾಡುತ್ತಾ ಹೋಗುತ್ತಾನೆಂಬ ಆಶ್ವಾಸನೆ ನಮಗಿರಸಾಧ್ಯವಿದೆ. ಅಷ್ಟುಮಾತ್ರವಲ್ಲ, ಮಹಾಸಂಕಟವು ಬಂದೆರಗುವಾಗ, ಯೆಹೋವನು ತನ್ನ ಜನರನ್ನು ಆಧ್ಯಾತ್ಮಿಕವಾಗಿ ಮಾತ್ರವಲ್ಲ ಶಾರೀರಿಕವಾಗಿಯೂ ಕಾಪಾಡುವನು ಎಂಬ ಆಶ್ವಾಸನೆಯನ್ನೂ ನಾವು ಹೊಂದಿರಸಾಧ್ಯವಿದೆ. ದೇವರ ನೂತನ ಲೋಕವನ್ನು ಪ್ರವೇಶಿಸಿದ ಬಳಿಕ ಅವರು ಗಟ್ಟಿಯಾದ ಧ್ವನಿಯಿಂದ ಹೀಗೆ ಹೇಳಶಕ್ತರಾಗುವರು: “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು.”​—⁠ಯೆಶಾಯ 25:⁠9.

ನಿಮಗೆ ನೆನಪಿದೆಯೆ?

• ಅರಸನಾದ ದಾವೀದನು ಮತ್ತು ಯೇಸು ಕ್ರಿಸ್ತನು ಹೇಗೆ ಕಾಪಾಡಲ್ಪಟ್ಟರು?

• ಇಂದು ಯೆಹೋವನ ಜನರು ಹೇಗೆ ಕಾಪಾಡಲ್ಪಡುತ್ತಾರೆ?

• ನಾವು ಸ್ವಾರ್ಥಮಗ್ನರಾಗಿರುವುದರಿಂದ ಏಕೆ ದೂರವಿರಬೇಕು?

• ನಾವು ಏಕೆ ಹೆಮ್ಮೆಪಡಸಾಧ್ಯವಿದೆ ಮತ್ತು ಅದೇ ಸಮಯದಲ್ಲಿ ಏಕೆ ದೀನರಾಗಿರಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಅರಸನಾದ ದಾವೀದನು ಯೆಹೋವನ ಬಳಿ ಏನೆಂದು ಬೇಡಿಕೊಂಡನು, ಮತ್ತು ಆ ಬೇಡಿಕೆಯು ಸದ್ಯಕ್ಕೆ ಹೇಗೆ ಪೂರೈಸಲ್ಪಡುತ್ತಿದೆ?

2. ಯೆಹೋವನಿಂದ ಕಾಪಾಡಲ್ಪಡುವುದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಶಾಸ್ತ್ರವಚನಗಳು ನಮಗೆ ಹೇಗೆ ಸಹಾಯಮಾಡುತ್ತವೆ?

3. ಕ್ರಿಸ್ತ ಯೇಸುವು ಯೆಹೋವನಿಂದ ಕಾಪಾಡಲ್ಪಟ್ಟನು ಎಂಬುದಕ್ಕೆ ನಮಗೆ ಯಾವ ಪುರಾವೆಯಿದೆ, ಮತ್ತು ಇದರ ಫಲಿತಾಂಶವೇನಾಗಿತ್ತು?

4. ಅಭಿಷಿಕ್ತ ಕ್ರೈಸ್ತರಿಗೆ ಮತ್ತು ‘ಬೇರೆ ಕುರಿಗಳಿಗೆ’ ಯಾವ ಆಶ್ವಾಸನೆಯು ಕೊಡಲ್ಪಟ್ಟಿದೆ?

5, 6. (ಎ) ಆಧುನಿಕ ಸಮಯಗಳಲ್ಲಿ ದೇವಜನರು ಹೇಗೆ ಕಾಪಾಡಲ್ಪಟ್ಟಿದ್ದಾರೆ? (ಬಿ) ಅಭಿಷಿಕ್ತರು ಯೆಹೋವನೊಂದಿಗೆ ಯಾವ ಸಂಬಂಧವನ್ನು ಹೊಂದಿದ್ದಾರೆ, ಮತ್ತು ಭೂನಿರೀಕ್ಷೆ ಇರುವವರ ಕುರಿತಾಗಿ ಏನು?

7. ಇಂದು ಯಾವುದರ ಮೂಲಕ ಯೆಹೋವನು ತನ್ನ ಜನರ ಆಧ್ಯಾತ್ಮಿಕ ಹಿತಕ್ಷೇಮವನ್ನು ಕಾಪಾಡುತ್ತಾನೆ?

8. ತನಗೆ ನಿಷ್ಠೆಯನ್ನು ತೋರಿಸುವವರಲ್ಲಿ ಯೆಹೋವನು ಯಾವ ದೃಢಭರವಸೆಯನ್ನು ಇಡುತ್ತಾನೆ, ಇದು ಅವರಿಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ?

9, 10. (ಎ) ಯೆಹೋವನ ಸತ್ಯತೆಯು ಆತನ ಜನರನ್ನು ಹೇಗೆ ಕಾಪಾಡುತ್ತದೆ? (ಬಿ) ತನ್ನ ಪ್ರೀತಿಪೂರ್ವಕ ದಯೆಯ ಮೂಲಕ ಯೆಹೋವನು ತನಗೆ ನಿಷ್ಠರಾಗಿರುವವರನ್ನು ಕಾಪಾಡುತ್ತಾನೆ ಎಂಬುದನ್ನು ಬೈಬಲ್‌ ಹೇಗೆ ತೋರಿಸುತ್ತದೆ?

11, 12. ಆಲೋಚನಾ ಸಾಮರ್ಥ್ಯ, ವಿವೇಚನಾಶಕ್ತಿ ಮತ್ತು ವಿವೇಕವು ನಮ್ಮನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು ವಿವರಿಸಿರಿ.

13, 14. ಸ್ವಾರ್ಥಮಗ್ನರಾಗಿರುವುದರ ಅರ್ಥವೇನು, ಮತ್ತು ಹಾಗಾಗುವುದು ಏಕೆ ಅವಿವೇಕಯುತವಾಗಿರುವುದು?

15, 16. (ಎ) ಸ್ವಾರ್ಥಮಗ್ನ ಮನೋಭಾವವು ಯಾವುದಕ್ಕೆ ನಡೆಸಬಲ್ಲದು ಮತ್ತು ಇದು ಯಾರ ಉದಾಹರಣೆಯಿಂದ ಕಂಡುಬರುತ್ತದೆ? (ಬಿ) ವಾಸ್ತವದಲ್ಲಿ, ಒಬ್ಬ ವ್ಯಕ್ತಿಯು ಇತರರ ದೋಷವನ್ನು ಕಂಡುಹಿಡಿಯಲು ತವಕಿಸುತ್ತಿರುವಾಗ ಅವನು ಏನು ಮಾಡುವವನಾಗಿದ್ದಾನೆ?

17. ಜಂಬಕೊಚ್ಚಿಕೊಳ್ಳುವುದರಲ್ಲಿ ಅಥವಾ ವಿಪರೀತ ಆತ್ಮವಿಶ್ವಾಸಿಗಳಾಗಿ ಪರಿಣಮಿಸುವುದರಲ್ಲಿರುವ ಅಪಾಯವನ್ನು ದೃಷ್ಟಾಂತಿಸಿರಿ.

18. ಅಹಂಕಾರದ ವಿಷಯದಲ್ಲಿ ಯೆಹೋವನಿಗೆ ಯಾವ ಭಾವನೆಯಿದೆ?

19. ಯಾವ ವಿಧದಲ್ಲಿ ದೇವಜನರು ಹೆಮ್ಮೆಪಡುತ್ತಾರೆ ಮತ್ತು ಅದೇ ಸಮಯದಲ್ಲಿ ದೀನರಾಗಿದ್ದಾರೆ?

20. ಈಗ ಯೆಹೋವನು ತನ್ನ ಜನರನ್ನು ಹೇಗೆ ಕಾಪಾಡುತ್ತಾನೆ, ಮತ್ತು ಭವಿಷ್ಯತ್ತಿನಲ್ಲಿ ಆತನು ಅವರನ್ನು ಹೇಗೆ ಕಾಪಾಡುವನು?

[ಪುಟ 9ರಲ್ಲಿರುವ ಚಿತ್ರಗಳು]

ಯೆಹೋವನು ದಾವೀದನನ್ನು ಮತ್ತು ಯೇಸುವನ್ನು ಹೇಗೆ ಕಾಪಾಡಿದನು?

[ಪುಟ 10, 11ರಲ್ಲಿರುವ ಚಿತ್ರಗಳು]

ಇಂದು ದೇವಜನರು ಆಧ್ಯಾತ್ಮಿಕವಾಗಿ ಯಾವ ವಿಧಗಳಲ್ಲಿ ಕಾಪಾಡಲ್ಪಡುತ್ತಾರೆ?

[ಪುಟ 12ರಲ್ಲಿರುವ ಚಿತ್ರಗಳು]

ಯೆಹೋವನ ಸೇವೆಮಾಡುತ್ತಿರುವುದು ನಾವು ಹೆಚ್ಚಳಪಡುವ ಸಂಗತಿಯಾಗಿರುವುದಾದರೂ, ನಾವು ಯಾವಾಗಲೂ ದೀನರಾಗಿಯೇ ಉಳಿಯಬೇಕು