ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಚೆಫನ್ಯ 2:3ರಲ್ಲಿರುವ “ಒಂದುವೇಳೆ” ಎಂಬ ಪದವು, ದೇವರ ಸೇವಕರು ನಿತ್ಯಜೀವವನ್ನು ಪಡೆದುಕೊಳ್ಳುವ ವಿಷಯದಲ್ಲಿ ದೃಢನಿಶ್ಚಿತರಾಗಿರಲು ಸಾಧ್ಯವಿಲ್ಲ ಎಂಬರ್ಥವನ್ನು ಕೊಡುತ್ತದೊ?

ಈ ವಚನವು ಹೀಗೆ ಓದಲ್ಪಡುತ್ತದೆ: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” ಈ ವಚನವು “ಒಂದುವೇಳೆ” ಎಂದು ಏಕೆ ಹೇಳುತ್ತದೆ?

ಅರ್ಮಗೆದೋನ್‌ನಲ್ಲಿ ಯೆಹೋವನು ತನ್ನ ನಂಬಿಗಸ್ತ ಜನರೊಂದಿಗೆ ಹೇಗೆ ವ್ಯವಹರಿಸುವನು ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ನ್ಯಾಯತೀರ್ಪಿನ ಸಮಯಕ್ಕೆ ಮುಂಚೆ ಮೃತಪಡುವವರಿಗೆ ದೇವರು ಏನು ಮಾಡುವನು ಎಂಬುದರ ಕುರಿತು ಬೈಬಲ್‌ ಏನನ್ನು ಕಲಿಸುತ್ತದೆ ಎಂಬುದನ್ನು ಜ್ಞಾಪಿಸಿಕೊಳ್ಳುವುದು ಸಹಾಯಕರವಾಗಿದೆ. ಕೆಲವರು ಆತ್ಮಜೀವಿಗಳಾಗಿ ಸ್ವರ್ಗದಲ್ಲಿನ ಅಮರ ಜೀವನಕ್ಕೆ ಪುನರುತ್ಥಾನವನ್ನು ಪಡೆಯುವರು, ಆದರೆ ಇತರರು ಭೂಪರದೈಸ್‌ನಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯೊಂದಿಗೆ ಪುನರುತ್ಥಾನಗೊಳಿಸಲ್ಪಡುವರು. (ಯೋಹಾನ 5:28, 29; 1 ಕೊರಿಂಥ 15:53, 54) ಅರ್ಮಗೆದೋನ್‌ಗೆ ಮುಂಚೆ ಮೃತಪಡುವ ತನ್ನ ನಿಷ್ಠಾವಂತ ಜನರನ್ನು ಯೆಹೋವನು ಜ್ಞಾಪಿಸಿಕೊಂಡು ಅವರಿಗೆ ಪ್ರತಿಫಲವನ್ನು ಕೊಡುತ್ತಾನಾದಲ್ಲಿ, ಆತನ ಕೋಪದ ದಿನದಲ್ಲಿ ಬದುಕಿ ಉಳಿದಿರುವ ಸೇವಕರೊಂದಿಗೆ ಆತನು ಖಂಡಿತವಾಗಿಯೂ ಅದೇ ರೀತಿಯಲ್ಲಿ ವ್ಯವಹರಿಸುವನು.

ಅಪೊಸ್ತಲ ಪೇತ್ರನ ಪ್ರೇರಿತ ಮಾತುಗಳು ಸಹ ಉತ್ತೇಜನದಾಯಕವಾಗಿವೆ. ಅವನು ಬರೆದುದು: “[ದೇವರು] ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು. ಆತನು ಸೊದೋಮಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ . . . ಅವುಗಳಿಗೆ ನಾಶನವನ್ನು ವಿಧಿಸಿದನು. . . . ನೀತಿವಂತನಾದ ಲೋಟನನ್ನು ತಪ್ಪಿಸಿದನು. . . . ಕರ್ತನು [“ಯೆಹೋವನು,” NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” (2 ಪೇತ್ರ 2:5-9) ಗತಸಮಯಗಳಲ್ಲಿ ಯೆಹೋವನು ದುಷ್ಟರ ಮೇಲೆ ನಾಶನವನ್ನು ಬರಮಾಡಿದನಾದರೂ, ನಂಬಿಗಸ್ತಿಕೆಯಿಂದ ತನ್ನ ಸೇವೆಮಾಡಿದ ನೋಹನನ್ನು ಮತ್ತು ಲೋಟನನ್ನು ಆತನು ಸಜೀವವಾಗಿ ಪಾರುಗೊಳಿಸಿದನು. ಆತನು ಅರ್ಮಗೆದೋನ್‌ನಲ್ಲಿ ದುಷ್ಟರ ಮೇಲೆ ನಾಶನವನ್ನು ಬರಮಾಡುವಾಗ ದೇವಭಕ್ತಿಯುಳ್ಳ ಜನರನ್ನು ಪಾರಮಾಡುವನು. ನೀತಿವಂತರಿಂದ ಕೂಡಿದ ಒಂದು “ಮಹಾ ಸಮೂಹವು” ಪಾರಾಗಿ ಉಳಿಯುವುದು.​—⁠ಪ್ರಕಟನೆ 7:​9, 14.

ಹೀಗಿರುವುದರಿಂದ, ಚೆಫನ್ಯ 2:3ರಲ್ಲಿ “ಒಂದುವೇಳೆ” ಎಂಬ ಪದವು, ಯಾರಿಗೆ ದೇವರ ಅಂಗೀಕಾರವಿದೆಯೋ ಅವರನ್ನು ಸಂರಕ್ಷಿಸುವ ದೇವರ ಸಾಮರ್ಥ್ಯದ ಕುರಿತು ಯಾವುದೇ ಅನಿಶ್ಚಿತತೆಯ ಕಾರಣದಿಂದ ಉಪಯೋಗಿಸಲ್ಪಟ್ಟಿಲ್ಲ ಎಂಬಂತೆ ತೋರುತ್ತದೆ. ಅದಕ್ಕೆ ಬದಲಾಗಿ, ಒಬ್ಬ ವ್ಯಕ್ತಿಯು ಸದ್ಧರ್ಮವನ್ನು ಮತ್ತು ದೈನ್ಯವನ್ನು ಹುಡುಕಲು ಆರಂಭಿಸುವಾಗ, ಯೆಹೋವನ ಕೋಪದ ದಿನದಲ್ಲಿ ಅವನು ಮರೆಮಾಡಲ್ಪಡುವುದು ಕೇವಲ ಒಂದು ಸಂಭವನೀಯತೆಯಾಗಿರುತ್ತದೆ. ಒಬ್ಬ ವ್ಯಕ್ತಿಯು ಸತತವಾಗಿ ದೈನ್ಯವನ್ನು ಮತ್ತು ಸದ್ಧರ್ಮವನ್ನು ರೂಢಿಸಿಕೊಳ್ಳುತ್ತಾ ಹೋಗುವುದರ ಮೇಲೆ ರಕ್ಷಣೆಯು ಅವಲಂಬಿಸಿರುವುದು.​—⁠ಚೆಫನ್ಯ 2:⁠3.

[ಪುಟ 31ರಲ್ಲಿರುವ ಚಿತ್ರ]

‘ಯೆಹೋವನು ತನ್ನ ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸಲು ಬಲ್ಲವನಾಗಿದ್ದಾನೆ’