ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ

ಕ್ರೈಸ್ತರು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ

ಕ್ರೈಸ್ತರು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ

“ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.”​—⁠ಮತ್ತಾಯ 13:⁠16.

ಸೀನಾಯಿಬೆಟ್ಟದ ಬಳಿ ಸೇರಿಬಂದಿದ್ದ ಇಸ್ರಾಯೇಲ್ಯರಿಗೆ ಯೆಹೋವನ ಸಮೀಪಕ್ಕೆ ಬರಲು ಸಕಾರಣವಿತ್ತು. ಬಲವಾದ ಹಸ್ತದಿಂದ ಅವರನ್ನು ಐಗುಪ್ತದಿಂದ ಬಿಡಿಸಿ ಕರೆತಂದವನು ಆತನೇ ಅಲ್ಲವೇ? ಅರಣ್ಯದಲ್ಲಿ ಅವರಿಗೆ ಅನ್ನಪಾನಗಳನ್ನು ಒದಗಿಸುತ್ತಾ ಅವರ ಅಗತ್ಯಗಳನ್ನು ಆತನು ಪೂರೈಸಿದನು. ಮುಂದೆ ಆತನು ಅವರಿಗೆ ಅಮಾಲೇಕ್ಯರ ಸೈನ್ಯದ ಮೇಲಿನ ಆಕ್ರಮಣದಲ್ಲಿ ವಿಜಯವನ್ನು ಕೊಟ್ಟನು. (ವಿಮೋಚನಕಾಂಡ 14:​26-31; 16:​2–17:13) ಅರಣ್ಯದಲ್ಲಿ ಸೀನಾಯಿಬೆಟ್ಟದ ಬಳಿ ಪಾಳೆಯ ಹೂಡಿದಾಗ, ಗುಡುಗುಮಿಂಚುಗಳಿಂದ ಅವರೆಷ್ಟು ಹೆದರಿದರೆಂದರೆ ಅವರು ನಡುಗಿದರು. ತದನಂತರ ಅವರು, ಮೋಶೆಯು ಸೀನಾಯಿಬೆಟ್ಟದಿಂದ ಇಳಿಯುವುದನ್ನು ನೋಡಿದರು. ಅವನ ಮುಖವು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಿತ್ತು. ಆದರೆ ವಿಸ್ಮಯ ಹಾಗೂ ಗಣ್ಯತೆಯಿಂದ ಪ್ರತಿಕ್ರಿಯಿಸುವ ಬದಲು ಅವರು ಹಿಮ್ಮೆಟ್ಟಿದರು. ಅವರು “[ಮೋಶೆಯ] ಹತ್ತಿರಕ್ಕೆ ಬರುವದಕ್ಕೆ ಭಯಪಟ್ಟರು.” (ವಿಮೋಚನಕಾಂಡ 19:10-19; 34:30) ಅವರಿಗಾಗಿ ಬಹಳಷ್ಟನ್ನು ಮಾಡಿದಂಥ ಯೆಹೋವನ ಮಹಿಮೆಯ ಪ್ರತಿಬಿಂಬವನ್ನು ನೋಡಲು ಅವರು ಏಕೆ ಭಯಪಟ್ಟರು?

2 ಈ ಸಂದರ್ಭದಲ್ಲಿ ಇಸ್ರಾಯೇಲ್ಯರು ಭಯಪಡಲು ಮುಖ್ಯ ಕಾರಣವು, ಇದಕ್ಕೆ ಹಿಂದೆ ಏನು ಸಂಭವಿಸಿತ್ತೊ ಅದೇ ಆಗಿರಬೇಕು. ಅದೇನೆಂದರೆ ಚಿನ್ನದ ಬಸವನನ್ನು ಮಾಡುವ ಮೂಲಕ ಅವರು ಬೇಕುಬೇಕೆಂದು ಯೆಹೋವನಿಗೆ ಅವಿಧೇಯರಾದಾಗ ಆತನು ಅವರನ್ನು ಶಿಕ್ಷಿಸಿದ್ದನು. (ವಿಮೋಚನಕಾಂಡ 32:​4, 35) ಅವರು ಯೆಹೋವನು ಕೊಟ್ಟ ಶಿಕ್ಷೆಯಿಂದ ಪಾಠ ಕಲಿತು ಅದನ್ನು ಗಣ್ಯಮಾಡಿದರೊ? ಹೆಚ್ಚಿನವರು ಗಣ್ಯಮಾಡಲಿಲ್ಲ. ಮೋಶೆ ತನ್ನ ಜೀವನಾಂತ್ಯದಲ್ಲಿ, ಇಸ್ರಾಯೇಲ್ಯರು ಅವಿಧೇಯತೆಯನ್ನು ತೋರಿಸಿದ ಇತರ ಸಂದರ್ಭಗಳೊಂದಿಗೆ ಅವರು ಚಿನ್ನದ ಬಸವನನ್ನು ಮಾಡಿದ ಈ ಘಟನೆಯನ್ನು ನೆನಪಿಗೆ ತಂದನು. ಅವನು ಜನರಿಗೆ ಹೇಳಿದ್ದು: “ನೀವು ನಿಮ್ಮ ದೇವರಾದ ಯೆಹೋವನ ಆ ಆಜ್ಞೆಯನ್ನು ಧಿಕ್ಕರಿಸಿ ಆತನನ್ನು ನಂಬದೆ ಆತನ ಮಾತನ್ನು ಅಲಕ್ಷ್ಯಮಾಡಿದಿರಿ. ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಯೆಹೋವನ ಆಜ್ಞೆಯನ್ನು ಉಲ್ಲಂಘಿಸುವವರೇ.”​—⁠ಧರ್ಮೋಪದೇಶಕಾಂಡ 9:15-24.

3 ಇಸ್ರಾಯೇಲ್ಯರು ತೋರಿಸಿದಂಥ ಭಯಕ್ಕೆ ಮೋಶೆ ಹೇಗೆ ಪ್ರತಿಕ್ರಿಯಿಸಿದನೆಂಬುದನ್ನು ಪರಿಗಣಿಸಿರಿ. ಆ ವೃತ್ತಾಂತದಲ್ಲಿ ಹೀಗೆ ಓದುತ್ತೇವೆ: “ಮೋಶೆ ಅವರ ಸಂಗಡ ಮಾತಾಡುವದನ್ನು ಮುಗಿಸಿದಾಗ ತನ್ನ ಮುಖದ ಮೇಲೆ ಮುಸುಕುಹಾಕಿಕೊಂಡನು. ಅವನು ಯೆಹೋವನ ಸಂಗಡ ಮಾತಾಡಬೇಕೆಂದು ಸನ್ನಿಧಿಗೆ ಹೋಗುವಾಗೆಲ್ಲಾ ಹೊರಗೆ ಬರುವ ತನಕ ಆ ಮುಸುಕನ್ನು ತೆಗೆದಿಡುವನು. ಅವನು ಹೊರಗೆ ಬಂದಾಗ ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ಯರಿಗೆ ತಿಳಿಸುವನು. ಮೋಶೆಯ ಮುಖವು ಪ್ರಕಾಶಮಾನವಾಗಿರುವದನ್ನು ಇಸ್ರಾಯೇಲ್ಯರು ನೋಡುತ್ತಿದ್ದರು. ಅದಕಾರಣ ಅವನು ಯೆಹೋವನ ಸಂಗಡ ಮಾತಾಡುವದಕ್ಕೆ ಹೋಗುವ ವರೆಗೆ ತನ್ನ ಮುಖದ ಮೇಲೆ ಆ ಮುಸುಕನ್ನು ತಿರಿಗಿ ಹಾಕಿಕೊಂಡಿರುವನು.” (ವಿಮೋಚನಕಾಂಡ 34:33-35) ಮೋಶೆಯು ಕೆಲವೊಮ್ಮೆ ತನ್ನ ಮುಖಕ್ಕೆ ಮುಸುಕನ್ನು ಹಾಕುತ್ತಿದ್ದದ್ದೇಕೆ? ಇದರಿಂದ ನಾವೇನನ್ನು ಕಲಿಯಬಲ್ಲೆವು? ಈ ಪ್ರಶ್ನೆಗಳಿಗಾಗಿರುವ ಉತ್ತರವು ಯೆಹೋವನೊಂದಿಗಿನ ನಮ್ಮ ಸ್ವಂತ ಸಂಬಂಧವನ್ನು ಪರಿಶೀಲಿಸುವಂತೆ ಸಹಾಯಮಾಡಬಲ್ಲದು.

ಕಳೆದುಕೊಳ್ಳಲ್ಪಟ್ಟ ಅವಕಾಶಗಳು

4 ಮೋಶೆಯು ಮುಸುಕನ್ನು ಧರಿಸುತ್ತಿದ್ದದ್ದು, ಇಸ್ರಾಯೇಲ್ಯರ ಹೃದಮನಗಳ ಸ್ಥಿತಿಗೆ ಸಂಬಂಧಪಟ್ಟಿತ್ತೆಂದು ಅಪೊಸ್ತಲ ಪೌಲನು ವಿವರಿಸಿದನು. ಅವನು ಬರೆದುದು: ‘ಮೋಶೆಯ ಮುಖಕ್ಕೆ ಬಂದ ಪ್ರಕಾಶದ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ನೋಡಲಾರದೆ ಇದ್ದರು. ಅವರ ಬುದ್ಧಿ ಮಂದವಾಯಿತು.’ (2 ಕೊರಿಂಥ 3:7, 14) ಎಂಥ ದುಃಖಕರ ಸನ್ನಿವೇಶ! ಇಸ್ರಾಯೇಲ್ಯರು ಯೆಹೋವನಿಂದ ಆಯ್ಕೆಮಾಡಲ್ಪಟ್ಟಿದ್ದ ಜನರಾಗಿದ್ದರು ಮತ್ತು ಅವರು ತನ್ನ ಸಮೀಪಕ್ಕೆ ಬರಬೇಕೆಂದು ಆತನು ಬಯಸಿದನು. (ವಿಮೋಚನಕಾಂಡ 19:​4-6) ಆದರೆ ಅವರು ದೇವರ ಮಹಿಮೆಯ ಪ್ರತಿಬಿಂಬವನ್ನು ನೋಡಲು ಹಿಂಜರಿದರು. ಪ್ರೀತಿಭರಿತ ಭಕ್ತಿಭಾವದಿಂದ ತಮ್ಮ ಹೃದಮನಗಳನ್ನು ಯೆಹೋವನ ಕಡೆಗೆ ತಿರುಗಿಸುವ ಬದಲು, ಅವರು ಆತನಿಗೆ ಸ್ವಲ್ಪಮಟ್ಟಿಗೆ ಬೆನ್ನುಹಾಕಿದ್ದರೆಂದು ಅವರ ವರ್ತನೆಗಳು ತೋರಿಸಿದವು.

5 ಈ ವಿಷಯದಲ್ಲಿ ನಾವು ಸಾ.ಶ. ಪ್ರಥಮ ಶತಮಾನದಲ್ಲಿ ಒಂದು ಹೋಲಿಕೆಯನ್ನು ಕಂಡುಕೊಳ್ಳುತ್ತೇವೆ. ಪೌಲನು ಕ್ರೈಸ್ತ ಧರ್ಮಕ್ಕೆ ಪರಿವರ್ತನೆ ಹೊಂದುವ ಸಮಯದಷ್ಟಕ್ಕೆ, ಧರ್ಮಶಾಸ್ತ್ರ ಒಡಂಬಡಿಕೆಯನ್ನು ಹೊಸ ಒಡಂಬಡಿಕೆಯು ಸ್ಥಾನಪಲ್ಲಟಗೊಳಿಸಿತ್ತು. ಈ ಒಡಂಬಡಿಕೆಗೆ ಮಹಾ ಮೋಶೆಯಾದ ಯೇಸು ಕ್ರಿಸ್ತನು ಮಧ್ಯಸ್ಥನಾಗಿದ್ದನು. ಯೇಸು ತನ್ನ ನಡೆನುಡಿಗಳಲ್ಲಿ ಪರಿಪೂರ್ಣವಾಗಿ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸಿದನು. ಪುನರುತ್ಥಿತ ಯೇಸುವಿನ ಕುರಿತಾಗಿ ಪೌಲನು ಹೀಗೆ ಬರೆದನು: ‘ಈತನು ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ಆಗಿದ್ದಾನೆ.’ (ಇಬ್ರಿಯ 1:3) ಯೆಹೂದ್ಯರಿಗೆ ಎಂಥ ಅದ್ಭುತ ಅವಕಾಶವಿತ್ತು! ಸ್ವತಃ ದೇವಕುಮಾರನಿಂದಲೇ ಅವರು ನಿತ್ಯಜೀವದ ನುಡಿಗಳನ್ನು ಕೇಳಿಸಿಕೊಳ್ಳಸಾಧ್ಯವಿತ್ತು! ಆದರೆ ದುಃಖದ ಸಂಗತಿಯೇನೆಂದರೆ, ಯೇಸು ಯಾರಿಗೆ ಸಾರಿದನೊ ಆ ಜನರಲ್ಲಿ ಹೆಚ್ಚಿನವರು ಕಿವಿಗೊಡಲಿಲ್ಲ. ಅವರ ಕುರಿತಾಗಿ ಯೆಹೋವನು ಯೆಶಾಯನ ಮೂಲಕ ನುಡಿದ ಪ್ರವಾದನೆಯನ್ನು ಯೇಸು ಉಲ್ಲೇಖಿಸಿ ಹೀಗೆ ಹೇಳಿದನು: “ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ.”​—⁠ಮತ್ತಾಯ 13:15; ಯೆಶಾಯ 6:9, 10.

6 ಯೆಹೂದ್ಯರ ಮತ್ತು ಯೇಸುವಿನ ಶಿಷ್ಯರ ನಡುವೆ ಒಂದು ಸ್ಪಷ್ಟ ವ್ಯತ್ಯಾಸವಿತ್ತು. ತನ್ನ ಶಿಷ್ಯರ ಬಗ್ಗೆ ಯೇಸು ಹೇಳಿದ್ದು: “ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.” (ಮತ್ತಾಯ 13:16) ನಿಜ ಕ್ರೈಸ್ತರು ಯೆಹೋವನ ಬಗ್ಗೆ ತಿಳಿಯಲು ಮತ್ತು ಆತನನ್ನು ಸೇವಿಸಲು ಹಾತೊರೆಯುತ್ತಾರೆ. ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವ ಆತನ ಚಿತ್ತವನ್ನು ಮಾಡಲು ಅವರು ಹರ್ಷಿಸುತ್ತಾರೆ. ಹೀಗೆ ಅಭಿಷಿಕ್ತ ಕ್ರೈಸ್ತರು ತಮ್ಮ ಹೊಸ ಒಡಂಬಡಿಕೆಯ ಸೇವೆಯಲ್ಲಿ ಇಲ್ಲವೆ ಶುಶ್ರೂಷೆಯಲ್ಲಿ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ, ಮತ್ತು ಬೇರೆ ಕುರಿಗಳು ಸಹ ಇದನ್ನೇ ಮಾಡುತ್ತಾರೆ.​—⁠2 ಕೊರಿಂಥ 3:​6, 18.

ಸುವಾರ್ತೆ ಏಕೆ ಮರೆಯಾಗಿದೆ?

7 ನಾವೀಗಾಗಲೇ ನೋಡಿದಂತೆ ಯೇಸುವಿನ ದಿನಗಳಲ್ಲಿ ಮತ್ತು ಮೋಶೆಯ ದಿನಗಳಲ್ಲಿ, ಹೆಚ್ಚಿನ ಇಸ್ರಾಯೇಲ್ಯರು ಅವರಿಗಾಗಿ ತೆರೆದಿದ್ದ ಅಪೂರ್ವ ಅವಕಾಶವನ್ನು ತಳ್ಳಿಹಾಕಿದರು. ನಮ್ಮ ಸಮಯದಲ್ಲೂ ಸನ್ನಿವೇಶವು ಹೀಗೆಯೇ ಇದೆ. ಹೆಚ್ಚಿನ ಜನರು ನಾವು ಸಾರುವ ಸುವಾರ್ತೆಯನ್ನು ತಿರಸ್ಕರಿಸುತ್ತಾರೆ. ಇದರಿಂದ ನಮಗೆ ಆಶ್ಚರ್ಯವಾಗುವುದಿಲ್ಲ. ಪೌಲನು ಬರೆದುದು: “ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವದಾದರೆ ನಾಶನಮಾರ್ಗದಲ್ಲಿರುವವರಿಗೇ ಮರೆಯಾಗಿರುವದು. ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” (2 ಕೊರಿಂಥ 4:3, 4) ಸುವಾರ್ತೆಯನ್ನು ಮರೆಮಾಡಲು ಸೈತಾನನು ಪ್ರಯತ್ನಗಳನ್ನು ಮಾಡುತ್ತಾನಲ್ಲದೆ, ಅದನ್ನು ನೋಡಲು ಇಷ್ಟಪಡದಿರುವ ಕಾರಣದಿಂದ ಅನೇಕ ಜನರು ಸ್ವತಃ ತಮ್ಮ ಮುಖಗಳಿಗೆ ಮುಸುಕನ್ನು ಹಾಕಿಕೊಳ್ಳುತ್ತಾರೆ.

8 ಅನೇಕರ ಸಾಂಕೇತಿಕ ಕಣ್ಣುಗಳು ಅಜ್ಞಾನದಿಂದಾಗಿ ಕುರುಡಾಗಿವೆ. ಜನಾಂಗಗಳವರ “ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ” ಎಂದು ಬೈಬಲ್‌ ಹೇಳುತ್ತದೆ. (ಎಫೆಸ 4:18) ಧರ್ಮಶಾಸ್ತ್ರದಲ್ಲಿ ನುರಿತವನಾಗಿದ್ದ ಪೌಲನು ಕ್ರೈಸ್ತನಾಗುವ ಮುಂಚೆ ಅಜ್ಞಾನದಿಂದಾಗಿ ಎಷ್ಟು ಕುರುಡನಾಗಿದ್ದನೆಂದರೆ, ಅವನು ದೇವರ ಸಭೆಯನ್ನು ಹಿಂಸಿಸಿದನು. (1 ಕೊರಿಂಥ 15:⁠9) ಆದರೂ ಯೆಹೋವನು ಅವನಿಗೆ ಸತ್ಯವನ್ನು ಪ್ರಕಟಿಸಿದನು. ಪೌಲನು ವಿವರಿಸುವುದು: “ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.” (1 ತಿಮೊಥೆಯ 1:16) ಪೌಲನಂತೆ, ಹಿಂದೆ ದೇವರ ಸತ್ಯವನ್ನು ವಿರೋಧಿಸುತ್ತಿದ್ದ ಅನೇಕರು ಈಗ ಆತನನ್ನು ಸೇವಿಸುತ್ತಿದ್ದಾರೆ. ನಮ್ಮನ್ನು ವಿರೋಧಿಸುತ್ತಿರುವವರಿಗೆ ಸಾಕ್ಷಿಯನ್ನು ಕೊಡುತ್ತಾ ಇರಲು ಇದು ನಮಗೊಂದು ಒಳ್ಳೇ ಕಾರಣವಾಗಿದೆ. ಅದೇ ಸಮಯದಲ್ಲಿ, ನಾವು ದೇವರ ವಾಕ್ಯವನ್ನು ಕ್ರಮವಾಗಿ ಅಧ್ಯಯನಮಾಡಿ ಅದರ ಅರ್ಥವನ್ನು ಗ್ರಹಿಸುವ ಮೂಲಕ, ಅಜ್ಞಾನದಿಂದಾಗಿ ಯೆಹೋವನ ಕೋಪವನ್ನು ಬರಮಾಡಿಕೊಳ್ಳುವ ರೀತಿಯಲ್ಲಿ ವರ್ತಿಸುವುದರ ವಿರುದ್ಧ ಸಂರಕ್ಷಿಸಲ್ಪಡುತ್ತೇವೆ.

9 ಇನ್ನೂ ಅನೇಕರು ಕಲಿಯಲು ಮನಸ್ಸಿಲ್ಲದವರು ಮತ್ತು ತಮ್ಮ ದೃಷ್ಟಿಕೋನಗಳಲ್ಲಿ ಗಡುಸಾದವರು ಆಗಿರುವುದರಿಂದ ಅವರ ಆಧ್ಯಾತ್ಮಿಕ ದೃಷ್ಟಿಗೆ ತಡೆಯೊಡ್ಡಲ್ಪಟ್ಟಿದೆ. ಅನೇಕ ಯೆಹೂದ್ಯರು ಯೇಸುವನ್ನು ಮತ್ತು ಅವನ ಬೋಧನೆಗಳನ್ನು ತಿರಸ್ಕರಿಸಲು ಕಾರಣ, ಅವರು ಮೋಶೆಯ ಧರ್ಮಶಾಸ್ತ್ರಕ್ಕೆ ಹಠಮಾರಿಗಳಾಗಿ ಅಂಟಿಕೊಂಡದ್ದೇ ಆಗಿತ್ತು. ಆದರೆ ಇದಕ್ಕೆ ಕೆಲವು ಅಪವಾದಗಳಿದ್ದವು. ಉದಾಹರಣೆಗೆ, ಯೇಸುವಿನ ಪುನರುತ್ಥಾನವಾದ ಬಳಿಕ “ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.” (ಅ. ಕೃತ್ಯಗಳು 6:7) ಆದರೆ ಅಧಿಕಾಂಶ ಯೆಹೂದ್ಯರ ಕುರಿತಾಗಿ ಪೌಲನು ಹೀಗೆ ಬರೆದನು: “ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ.” (2 ಕೊರಿಂಥ 3:15) ಬಹುಶಃ ಪೌಲನಿಗೆ, ಯೆಹೂದಿ ಧಾರ್ಮಿಕ ಮುಖಂಡರಿಗೆ ಯೇಸು ಹೇಳಿದ ಈ ಮಾತುಗಳು ತಿಳಿದಿದ್ದವು: “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ.” (ಯೋಹಾನ 5:39) ಅವರು ತುಂಬ ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದ ಶಾಸ್ತ್ರವಚನಗಳಿಂದ, ಯೇಸುವೇ ಮೆಸ್ಸೀಯನಾಗಿದ್ದಾನೆಂದು ಅವರಿಗೆ ತಿಳಿದುಬರಬೇಕಿತ್ತು. ಆದರೆ ಆ ಯೆಹೂದ್ಯರಿಗೆ ತಮ್ಮದೇ ಆದ ಸ್ವಂತ ವಿಚಾರಗಳಿದ್ದವು. ಅದ್ಭುತಗಳನ್ನು ನಡಿಸುತ್ತಿದ್ದ ದೇವಕುಮಾರನಿಗೆ ಸಹ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ.

10 ಇಂದು ಕ್ರೈಸ್ತಪ್ರಪಂಚದಲ್ಲಿಯೂ ಅನೇಕರ ವಿಷಯದಲ್ಲಿ ಇದು ಸತ್ಯವಾಗಿದೆ. ಪ್ರಥಮ ಶತಮಾನದ ಯೆಹೂದ್ಯರಂತೆ ಅವರಿಗೆ ‘ದೇವರಲ್ಲಿ ಆಸಕ್ತಿಯಿದೆ, ಆದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಲ್ಲ.’ (ರೋಮಾಪುರ 10:2) ಕೆಲವರು ಬೈಬಲನ್ನು ಅಭ್ಯಾಸಮಾಡುತ್ತಾರಾದರೂ, ಅದೇನು ಹೇಳುತ್ತದೊ ಅದನ್ನು ನಂಬಲು ಬಯಸುವುದಿಲ್ಲ. ಅಭಿಷಿಕ್ತ ಕ್ರೈಸ್ತರ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಮುಖಾಂತರ ಯೆಹೋವನು ತನ್ನ ಜನರಿಗೆ ಕಲಿಸುತ್ತಾನೆಂಬ ವಿಷಯವನ್ನು ಸ್ವೀಕರಿಸಲು ಅವರು ನಿರಾಕರಿಸುತ್ತಾರೆ. (ಮತ್ತಾಯ 24:45) ನಾವಾದರೊ, ಯೆಹೋವನು ತನ್ನ ಜನರಿಗೆ ಕಲಿಸುತ್ತಿದ್ದಾನೆ ಮತ್ತು ದೈವಿಕ ಸತ್ಯದ ತಿಳಿವಳಿಕೆಯು ಯಾವಾಗಲೂ ಪ್ರಗತಿಪರವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. (ಜ್ಞಾನೋಕ್ತಿ 4:18) ಯೆಹೋವನಿಂದ ಕಲಿಸಲ್ಪಡುವಂತೆ ನಮ್ಮನ್ನು ಬಿಟ್ಟುಕೊಟ್ಟಿರುವುದರಿಂದಾಗಿ ನಾವು ಆತನ ಚಿತ್ತ ಹಾಗೂ ಉದ್ದೇಶದ ಕುರಿತಾದ ಜ್ಞಾನದಿಂದ ಆಶೀರ್ವದಿಸಲ್ಪಟ್ಟಿದ್ದೇವೆ.

11 ಇನ್ನಿತರರು, ತಮಗೆ ಇಷ್ಟವಾದುದನ್ನು ಮಾತ್ರ ನಂಬುವುದರಿಂದಾಗಿ ಕುರುಡಾಗಿರುತ್ತಾರೆ. ಕೆಲವರು ದೇವರ ಜನರನ್ನು ಮತ್ತು ಯೇಸುವಿನ ಪ್ರತ್ಯಕ್ಷತೆಯ ಕುರಿತಾಗಿ ಅವರು ಘೋಷಿಸುವ ಸಂದೇಶವನ್ನು ಕುಚೋದ್ಯಮಾಡುವರೆಂದು ಮುಂತಿಳಿಸಲಾಗಿತ್ತು. ಅಪೊಸ್ತಲ ಪೇತ್ರನು ಬರೆದುದು: “ಹೀಗೆ ಮಾತಾಡುವವರು ಒಂದು ಸಂಗತಿಯನ್ನು,” ಅದೇನಂದರೆ ನೋಹನ ಕಾಲದಲ್ಲಿ ದೇವರು ಲೋಕಕ್ಕೆ ಜಲಪ್ರಳಯವನ್ನು ತಂದದ್ದನ್ನು “ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ.” (2 ಪೇತ್ರ 3:3-6) ಅದೇ ರೀತಿಯಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು, ಯೆಹೋವನು ಕರುಣೆ, ದಯೆಯನ್ನು ತೋರಿಸುತ್ತಾನೆ ಮತ್ತು ಕ್ಷಮಿಸುತ್ತಾನೆಂಬುದನ್ನು ಕೂಡಲೇ ಒಪ್ಪಿಕೊಳ್ಳುತ್ತಾರಾದರೂ ಆತನು ಶಿಕ್ಷೆಯಿಂದ ವಿನಾಯಿತಿ ಕೊಡುವುದಿಲ್ಲ ಎಂಬ ವಾಸ್ತವಾಂಶವನ್ನು ಅಲಕ್ಷಿಸುತ್ತಾರೆ ಅಥವಾ ತಳ್ಳಿಹಾಕುತ್ತಾರೆ. (ವಿಮೋಚನಕಾಂಡ 34:6, 7) ನಿಜ ಕ್ರೈಸ್ತರು, ಬೈಬಲ್‌ ನಿಜವಾಗಿಯೂ ಏನನ್ನು ಕಲಿಸುತ್ತದೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ.

12 ಚರ್ಚಿಗೆ ಹೋಗುವವರಲ್ಲಿ ಅನೇಕರು ಸಂಪ್ರದಾಯಗಳಿಂದ ಕುರುಡಾಗಿದ್ದಾರೆ. ತನ್ನ ದಿನದಲ್ಲಿನ ಧಾರ್ಮಿಕ ಮುಖಂಡರಿಗೆ ಯೇಸು ಹೇಳಿದ್ದು: “ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.” (ಮತ್ತಾಯ 15:6) ಯೆಹೂದ್ಯರು ಬಾಬೆಲಿನ ಸೆರೆವಾಸದಿಂದ ಹಿಂದಿರುಗಿದ ಬಳಿಕ ಹುರುಪಿನಿಂದ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಿದರು. ಆದರೆ ನಂತರ ಅವರ ಯಾಜಕರೇ ಗರ್ವಿಷ್ಠರು ಮತ್ತು ಸ್ವನೀತಿವಂತರಾದರು. ಧಾರ್ಮಿಕ ಹಬ್ಬಗಳು ಕೇವಲ ಒಂದು ಔಪಚಾರಿಕ ವಿಷಯವಾಗಿ ಪರಿಣಮಿಸಿ, ಅವುಗಳಲ್ಲಿ ದೇವರ ಕಡೆಗಿನ ಯಾವುದೇ ರೀತಿಯ ಯಥಾರ್ಥ ಪೂಜ್ಯಭಾವನೆ ಇರಲಿಲ್ಲ. (ಮಲಾಕಿಯ 1:6-8) ಯೇಸುವಿನ ಸಮಯದಷ್ಟಕ್ಕೆ ಶಾಸ್ತ್ರಿಗಳು ಮತ್ತು ಫರಿಸಾಯರು ಮೋಶೆಯ ಧರ್ಮಶಾಸ್ತ್ರಕ್ಕೆ ಅಸಂಖ್ಯಾತ ಸಂಪ್ರದಾಯಗಳನ್ನು ಕೂಡಿಸಿಬಿಟ್ಟಿದ್ದರು. ಯೇಸು ಆ ಪುರುಷರನ್ನು ಕಪಟಿಗಳು ಎಂದು ಬಯಲಿಗೆಳೆದನು, ಏಕೆಂದರೆ ಅವರು ಧರ್ಮಶಾಸ್ತ್ರವು ಯಾವುದರ ಮೇಲೆ ಆಧಾರಿತವಾಗಿತ್ತೊ ಆ ನೀತಿಯುತ ಮೂಲತತ್ತ್ವಗಳನ್ನು ಗ್ರಹಿಸುತ್ತಿರಲಿಲ್ಲ. (ಮತ್ತಾಯ 23:23, 24) ಮಾನವನಿರ್ಮಿತ ಧಾರ್ಮಿಕ ಸಂಪ್ರದಾಯಗಳು, ತಮ್ಮನ್ನು ಶುದ್ಧಾರಾಧನೆಯಿಂದ ದಾರಿತಪ್ಪಿಸಲು ಅನುಮತಿಸದಂತೆ ನಿಜ ಕ್ರೈಸ್ತರು ಜಾಗ್ರತೆವಹಿಸಬೇಕು.

‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವುದು’

13 ಮೋಶೆ ಬೆಟ್ಟದಲ್ಲಿದ್ದಾಗ ತಾನು ದೇವರ ಮಹಿಮೆಯನ್ನು ನೋಡಬೇಕೆಂದು ಕೇಳಿಕೊಂಡನು, ಮತ್ತು ಅವನು ಯೆಹೋವನ ಮಹಿಮೆಯ ಹಿಂಬೆಳಕನ್ನು ನೋಡಲು ಶಕ್ತನಾದನು. ದೇವಗುಡಾರದೊಳಗೆ ಹೋದಾಗಲೆಲ್ಲ ಅವನು ಮುಸುಕನ್ನು ಹಾಕುತ್ತಿರಲಿಲ್ಲ. ಮೋಶೆಯು, ದೇವರ ಚಿತ್ತವನ್ನು ಮಾಡಲು ಅಪೇಕ್ಷಿಸುತ್ತಿದ್ದ ಗಾಢ ನಂಬಿಕೆಯುಳ್ಳ ಪುರುಷನಾಗಿದ್ದನು. ಅವನು ದರ್ಶನದಲ್ಲಿ ಯೆಹೋವನ ಮಹಿಮೆಯ ಸ್ವಲ್ಪಾಂಶವನ್ನು ನೋಡುವ ಅವಕಾಶವನ್ನು ಪಡೆದು ಆಶೀರ್ವದಿಸಲ್ಪಟ್ಟಿದ್ದರೂ, ಒಂದರ್ಥದಲ್ಲಿ ಅವನು ದೇವರನ್ನು ಅದಕ್ಕಿಂತಲೂ ಮುಂಚೆಯೇ ನಂಬಿಕೆಯ ಕಣ್ಣುಗಳಿಂದ ನೋಡಿದ್ದನು. ಬೈಬಲ್‌ ತಾನೇ ಹೇಳುವುದೇನೆಂದರೆ, ಮೋಶೆಯು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27; ವಿಮೋಚನಕಾಂಡ 34:5-7) ಸ್ವಲ್ಪ ಸಮಯದ ವರೆಗೆ ಅವನ ಮುಖದಿಂದ ಹೊರಸೂಸುತ್ತಿದ್ದ ಆ ಕಿರಣಗಳಿಂದ ಮಾತ್ರವಲ್ಲ, ಬದಲಾಗಿ ಇಸ್ರಾಯೇಲ್ಯರು ಯೆಹೋವನನ್ನು ತಿಳಿದುಕೊಂಡು ಸೇವಿಸಲು ಅವರಿಗೆ ಸಹಾಯಮಾಡುವ ಪ್ರಯತ್ನಗಳಿಂದಲೂ ಅವನು ದೇವರ ಮಹಿಮೆಯನ್ನು ಪ್ರತಿಬಿಂಬಿಸಿದನು.

14 ಯೇಸು ಪರಲೋಕದಲ್ಲಿ, ವಿಶ್ವದ ಸೃಷ್ಟಿಯಾಗುವುದಕ್ಕಿಂತಲೂ ಮುಂಚಿನಿಂದ ತುಂಬ ದೀರ್ಘ ಸಮಯದ ವರೆಗೆ ದೇವರ ಮಹಿಮೆಯನ್ನು ನೇರವಾಗಿ ನೋಡಿದನು. (ಜ್ಞಾನೋಕ್ತಿ 8:​22, 30) ಆ ಸಮಯದಲ್ಲಿ ಅವರ ನಡುವೆ ಗಾಢವಾಗಿ ಪ್ರೀತಿಭರಿತವಾದ ಮತ್ತು ವಾತ್ಸಲ್ಯಭರಿತವಾದ ಸಂಬಂಧವು ಬೆಳೆಯಿತು. ತನ್ನೆಲ್ಲಾ ಸೃಷ್ಟಿಯಲ್ಲಿ ಜ್ಯೇಷ್ಠನಾದ ಇವನಿಗೆ ಯೆಹೋವ ದೇವರು ಅತೀ ಕೋಮಲವಾದ ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿಸಿದನು. ತನ್ನ ಜೀವದಾತನಾಗಿರುವ ದೇವರಿಗೆ ಗಾಢವಾದ ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿಸುವ ಮೂಲಕ ಯೇಸು ಇದಕ್ಕೆ ಪ್ರತಿಸ್ಪಂದಿಸಿದನು. (ಯೋಹಾನ 14:31; 17:24) ಅವರದ್ದು, ತಂದೆ ಮಗನ ನಡುವಣ ಪರಿಪೂರ್ಣ ಪ್ರೀತಿಯಾಗಿತ್ತು. ಮೋಶೆಯಂತೆ ಯೇಸು, ತಾನು ಕಲಿಸಿದಂಥ ವಿಷಯಗಳಲ್ಲಿ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸಲು ಹರ್ಷಿಸಿದನು.

15 ಮೋಶೆ ಹಾಗೂ ಯೇಸುವಿನಂತೆಯೇ ಭೂಮಿಯ ಮೇಲೆ ಇಂದಿರುವ ಯೆಹೋವನ ಸಾಕ್ಷಿಗಳು ಆತನ ಮಹಿಮೆಯ ಕುರಿತಾಗಿ ಧ್ಯಾನಿಸಲು ಕಾತರಪಡುತ್ತಾರೆ. ಮಹಿಮಾಭರಿತವಾದ ಸುವಾರ್ತೆಯನ್ನು ಅವರು ತಿರಸ್ಕರಿಸಿಲ್ಲ. ಅಪೊಸ್ತಲ ಪೌಲನು ಬರೆದುದು: “ಅವರ ಹೃದಯವು ಕರ್ತನ [“ಯೆಹೋವನ,” NW] ಕಡೆಗೆ [ಆತನ ಚಿತ್ತವನ್ನು ಮಾಡಲು] ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವದು.” (2 ಕೊರಿಂಥ 3:16) ನಾವು ದೇವರ ಚಿತ್ತವನ್ನು ಮಾಡಲು ಬಯಸುವುದರಿಂದಲೇ ಶಾಸ್ತ್ರವಚನಗಳನ್ನು ಅಧ್ಯಯನಮಾಡುತ್ತೇವೆ. ಯೆಹೋವನ ಪುತ್ರ ಮತ್ತು ಅಭಿಷಿಕ್ತ ರಾಜನಾದ ಯೇಸು ಕ್ರಿಸ್ತನ ಮುಖದಲ್ಲಿ ಪ್ರತಿಬಿಂಬಿಸಲ್ಪಡುವ ಮಹಿಮೆಯನ್ನು ಮೆಚ್ಚುತ್ತೇವೆ ಮತ್ತು ಅವನ ಮಾದರಿಯನ್ನು ಅನುಕರಿಸುತ್ತೇವೆ. ಮೋಶೆ ಮತ್ತು ಯೇಸುವಿನಂತೆ, ನಾವು ಆರಾಧಿಸುತ್ತಿರುವ ಮಹಿಮಾಭರಿತ ದೇವರ ಬಗ್ಗೆ ಇತರರಿಗೆ ಕಲಿಸುವ ಒಂದು ಶುಶ್ರೂಷೆಯನ್ನು ನಮಗೆ ವಹಿಸಲಾಗಿದೆ.

16 ಯೇಸು ಪ್ರಾರ್ಥಿಸಿದ್ದು: “ತಂದೆಯೇ, . . . ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ.” (ಮತ್ತಾಯ 11:25) ಪ್ರಾಮಾಣಿಕಮನಸ್ಸಿನ ಮತ್ತು ದೀನಹೃದಯದವರಿಗೆ ಯೆಹೋವನು ತನ್ನ ಉದ್ದೇಶಗಳು ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿವಳಿಕೆಯನ್ನು ಕೊಡುತ್ತಾನೆ. (1 ಕೊರಿಂಥ 1:​26-28) ನಾವು ಆತನ ಸಂರಕ್ಷಣಾತ್ಮಕ ಆರೈಕೆಯಡಿಯಲ್ಲಿ ಬಂದಿದ್ದೇವೆ, ಮತ್ತು ಆತನು ನಾವು ನಮಗೇ ಪ್ರಯೋಜನ ತಂದುಕೊಳ್ಳುವಂತೆ, ಜೀವನದ ಪೂರ್ಣ ಉಪಯೋಗ ಮಾಡುವಂತೆ ಕಲಿಸುತ್ತಾನೆ. ಯೆಹೋವನ ಸಮೀಪಕ್ಕೆ ಬರಲು ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸುತ್ತಾ, ಆತನನ್ನು ಹೆಚ್ಚು ಆಪ್ತವಾಗಿ ತಿಳಿದುಕೊಳ್ಳಲು ಆತನು ಮಾಡಿರುವ ಅನೇಕ ಏರ್ಪಾಡುಗಳನ್ನು ನಾವು ಗಣ್ಯಮಾಡೋಣ.

17 ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಬರೆದುದು: “ನಾವೆಲ್ಲರೂ ಮುಸುಕುತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ.” (2 ಕೊರಿಂಥ 3:18) ನಮ್ಮ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಇಲ್ಲವೆ ಭೂಮಿಯದ್ದಾಗಿರಲಿ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವಂತೆ ನಾವು ಯೆಹೋವನ ಬಗ್ಗೆ ಅಂದರೆ ಆತನ ಗುಣಗಳು ಹಾಗೂ ವ್ಯಕ್ತಿತ್ವದ ಬಗ್ಗೆ ಹೆಚ್ಚೆಚ್ಚನ್ನು ತಿಳಿದುಕೊಳ್ಳುತ್ತಾ ಹೋದಂತೆ, ನಾವು ಇನ್ನೂ ಹೆಚ್ಚಾಗಿ ಆತನಂತಾಗುತ್ತೇವೆ. ಯೇಸು ಕ್ರಿಸ್ತನ ಜೀವನ, ಶುಶ್ರೂಷೆ ಮತ್ತು ಬೋಧನೆಗಳ ಕುರಿತಾಗಿ ನಾವು ಗಣ್ಯತೆಯಿಂದ ಧ್ಯಾನಿಸುವಲ್ಲಿ, ಯೆಹೋವನ ಗುಣಗಳನ್ನು ಹೆಚ್ಚು ಪೂರ್ಣವಾಗಿ ಪ್ರತಿಫಲಿಸುವೆವು. ನಾವು ಯಾರ ಮಹಿಮೆಯನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಿದ್ದೇವೊ ಆ ನಮ್ಮ ದೇವರಿಗೆ ಸ್ತುತಿಯನ್ನು ತರುವುದು ಎಂಥ ಆನಂದವಾಗಿರುತ್ತದೆ!

ನಿಮಗೆ ನೆನಪಿದೆಯೊ?

• ಮೋಶೆಯು ಪ್ರತಿಬಿಂಬಿಸಿದಂಥ ದೇವರ ಮಹಿಮೆಯನ್ನು ಇಸ್ರಾಯೇಲ್ಯರು ನೋಡಲು ಭಯಪಟ್ಟದ್ದೇಕೆ?

• ಪ್ರಥಮ ಶತಮಾನದಲ್ಲಿ ಸುವಾರ್ತೆಯು ಹೇಗೆ ‘ಮರೆಯಾಗಿತ್ತು,’ ಮತ್ತು ನಮ್ಮ ದಿನದಲ್ಲಿ ಹೇಗೆ ಮರೆಯಾಗಿದೆ?

• ನಾವು ದೇವರ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸುತ್ತೇವೆ?

[ಅಧ್ಯಯನ ಪ್ರಶ್ನೆಗಳು]

1. ಸೀನಾಯಿಬೆಟ್ಟದ ಬಳಿಯಲ್ಲಿ ಇಸ್ರಾಯೇಲ್ಯರು ಮೋಶೆಗೆ ತೋರಿಸಿದ ಪ್ರತಿಕ್ರಿಯೆಯ ಸಂಬಂಧದಲ್ಲಿ ನಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆ ಏಳುತ್ತದೆ?

2. ಮೋಶೆಯು ಪ್ರತಿಬಿಂಬಿಸಿದಂಥ ದೇವರ ಮಹಿಮೆಯನ್ನು ನೋಡಲು ಇಸ್ರಾಯೇಲ್ಯರು ಏಕೆ ಭಯಪಟ್ಟಿರಬಹುದು?

3. ತನ್ನ ಮುಖಕ್ಕೆ ಮುಸುಕನ್ನು ಹಾಕುವುದರ ವಿಷಯದಲ್ಲಿ ಮೋಶೆ ಏನು ಮಾಡಿದನು?

4. ಮೋಶೆಯು ಮುಸುಕನ್ನು ಧರಿಸುತ್ತಿದ್ದರ ಕುರಿತಾಗಿ ಅಪೊಸ್ತಲ ಪೌಲನು ಯಾವ ಅರ್ಥವನ್ನು ಪ್ರಕಟಪಡಿಸಿದನು?

5, 6. (ಎ) ಮೋಶೆಯ ದಿನದಲ್ಲಿದ್ದ ಇಸ್ರಾಯೇಲ್ಯರಿಗೂ ಪ್ರಥಮ ಶತಮಾನದಲ್ಲಿದ್ದ ಯೆಹೂದ್ಯರಿಗೂ ಯಾವ ಹೋಲಿಕೆಯಿತ್ತು? (ಬಿ) ಯೇಸುವಿಗೆ ಕಿವಿಗೊಟ್ಟವರ ಮತ್ತು ಕಿವಿಗೊಡದವರ ನಡುವೆ ಯಾವ ವ್ಯತ್ಯಾಸವಿತ್ತು?

7. ಹೆಚ್ಚಿನವರು ಸುವಾರ್ತೆಯನ್ನು ತಿರಸ್ಕರಿಸುವುದು ಆಶ್ಚರ್ಯಕರವಲ್ಲ ಏಕೆ?

8. ಅನೇಕರು ಯಾವ ವಿಧದಲ್ಲಿ ಅಜ್ಞಾನದಿಂದ ಕುರುಡುಗೊಳಿಸಲ್ಪಟ್ಟಿದ್ದಾರೆ, ಮತ್ತು ಆ ರೀತಿಯಲ್ಲಿ ಬಾಧಿಸಲ್ಪಡುವುದರಿಂದ ನಾವು ಹೇಗೆ ದೂರವಿರಬಹುದು?

9, 10. (ಎ) ಪ್ರಥಮ ಶತಮಾನದ ಯೆಹೂದ್ಯರು ತಾವು ಕಲಿಯಲು ಸಿದ್ಧರಿಲ್ಲ ಮತ್ತು ತಮ್ಮ ದೃಷ್ಟಿಕೋನಗಳಲ್ಲಿ ಗಡುಸಾದವರಾಗಿದ್ದರೆಂದು ಹೇಗೆ ತೋರಿಸಿದರು? (ಬಿ) ಇಂದು ಕ್ರೈಸ್ತಪ್ರಪಂಚದಲ್ಲಿ ಇದಕ್ಕೆ ಹೋಲಿಕೆಯಿದೆಯೊ? ವಿವರಿಸಿ.

11. ತಮಗೆ ಇಷ್ಟವಾದದ್ದನ್ನು ಮಾತ್ರ ನಂಬುವ ಯೋಚನಾಧಾಟಿಯು ಸತ್ಯವನ್ನು ಮರೆಮಾಡುವುದರಲ್ಲಿ ಯಾವ ಪಾತ್ರವನ್ನು ವಹಿಸಿದೆ?

12. ಜನರು ಸಂಪ್ರದಾಯದಿಂದ ಹೇಗೆ ಕುರುಡುಗೊಳಿಸಲ್ಪಟ್ಟಿದ್ದಾರೆ?

13. ಯಾವ ಎರಡು ವಿಧಗಳಲ್ಲಿ ಮೋಶೆಯು ದೇವರ ಮಹಿಮೆಯಲ್ಲಿ ಸ್ವಲ್ಪಾಂಶವನ್ನು ನೋಡಿದನು?

14. ಯೇಸು ದೇವರ ಮಹಿಮೆಯನ್ನು ನೋಡಿದ್ದು ಹೇಗೆ, ಮತ್ತು ಅವನು ಯಾವುದರಲ್ಲಿ ಹರ್ಷಿಸಿದನು?

15. ಕ್ರೈಸ್ತರು ದೇವರ ಮಹಿಮೆಯ ಕುರಿತು ಯಾವ ರೀತಿಯಲ್ಲಿ ಧ್ಯಾನಿಸುತ್ತಾರೆ?

16. ನಾವು ಸತ್ಯವನ್ನು ತಿಳಿದಿರುವುದರಿಂದ ಹೇಗೆ ಆಶೀರ್ವದಿತರಾಗಿದ್ದೇವೆ?

17. ಯೆಹೋವನ ಗುಣಗಳನ್ನು ನಾವು ಹೇಗೆ ಹೆಚ್ಚು ಪೂರ್ಣವಾಗಿ ತಿಳಿದುಕೊಳ್ಳುತ್ತೇವೆ?

[ಪುಟ 19ರಲ್ಲಿರುವ ಚಿತ್ರ]

ಇಸ್ರಾಯೇಲ್ಯರಿಗೆ ಮೋಶೆಯ ಮುಖವನ್ನು ನೋಡಲಾಗಲಿಲ್ಲ

[ಪುಟ 21ರಲ್ಲಿರುವ ಚಿತ್ರಗಳು]

ಪೌಲನಂತೆ, ಒಂದುಕಾಲದಲ್ಲಿ ದೇವರ ಸತ್ಯವನ್ನು ವಿರೋಧಿಸಿದವರು ಈಗ ಆತನನ್ನು ಸೇವಿಸುತ್ತಿದ್ದಾರೆ

[ಪುಟ 23ರಲ್ಲಿರುವ ಚಿತ್ರಗಳು]

ಯೆಹೋವನ ಸೇವಕರು ದೇವರ ಮಹಿಮೆಯನ್ನು ಪ್ರತಿಬಿಂಬಿಸಲು ಹರ್ಷಿಸುತ್ತಾರೆ