ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರಿಕೆಯಿಂದಿರಿ—ನ್ಯಾಯತೀರ್ಪಿನ ಗಳಿಗೆ ಬಂದಿದೆ!

ಎಚ್ಚರಿಕೆಯಿಂದಿರಿ—ನ್ಯಾಯತೀರ್ಪಿನ ಗಳಿಗೆ ಬಂದಿದೆ!

ಎಚ್ಚರಿಕೆಯಿಂದಿರಿ​—⁠ನ್ಯಾಯತೀರ್ಪಿನ ಗಳಿಗೆ ಬಂದಿದೆ!

ಈ ಅಧ್ಯಯನ ಲೇಖನದ ಮಾಹಿತಿಯು 2004/05ರಲ್ಲಿ ಲೋಕವ್ಯಾಪಕವಾಗಿ ನಡೆದ ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಯಾದ ಎಚ್ಚರಿಕೆಯಿಂದಿರಿ! ಬ್ರೋಷರಿನ ಮೇಲೆ ಆಧಾರಿತವಾಗಿದೆ.

“ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”​—⁠ಮತ್ತಾಯ 24:42.

ನಿಮ್ಮ ನೆರೆಹೊರೆಯಲ್ಲಿ ಕಳ್ಳನೊಬ್ಬನು ಸುಳಿದಾಡುತ್ತಾ ಕದಿಯುವ ಅವಕಾಶಕ್ಕಾಗಿ ನೋಡುತ್ತಿದ್ದಾನೆ ಎಂದು ನಿಮಗೆ ತಿಳಿಯುವಲ್ಲಿ ಏನು ಮಾಡುವಿರಿ? ನಿಮ್ಮ ಪ್ರಿಯರನ್ನೂ ಅಮೂಲ್ಯ ಸ್ವತ್ತುಗಳನ್ನೂ ಸಂರಕ್ಷಿಸಲು ನೀವು ನಿಶ್ಚಯವಾಗಿಯೂ ಎಚ್ಚರದಿಂದಿರುವಿರಿ. ಏಕೆಂದರೆ ಕಳ್ಳನು ಕದಿಯಲು ಬರುವ ಮೊದಲು ಪತ್ರವನ್ನು ಕಳುಹಿಸುವುದಿಲ್ಲವೆಂಬುದು ನಿಜ. ಇದಕ್ಕೆ ಬದಲಾಗಿ, ಅವನು ಸದ್ದುಮಾಡದೆ ಅನಿರೀಕ್ಷಿತವಾಗಿ ಬರುತ್ತಾನೆ.

2 ಕಳ್ಳನು ಕದಿಯಲು ಬರುವ ವಿಧವನ್ನು ಯೇಸು ಅನೇಕ ಬಾರಿ ದೃಷ್ಟಾಂತವಾಗಿ ಉಪಯೋಗಿಸಿದನು. (ಲೂಕ 10:30; ಯೋಹಾನ 10:10) ಅಂತ್ಯಕಾಲದಲ್ಲಿ ಸಂಭವಿಸಲಿರುವ ಘಟನೆಗಳು ಮತ್ತು ತಾನು ನ್ಯಾಯತೀರಿಸಲು ಬರುವ ಸಮಯಕ್ಕೆ ನಡೆಸುವ ಘಟನೆಗಳ ಬಗ್ಗೆ ಯೇಸು ಈ ಎಚ್ಚರಿಕೆಯನ್ನು ಕೊಟ್ಟನು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ.” (ಮತ್ತಾಯ 24:​42, 43) ಹೀಗೆ ಯೇಸು ತನ್ನ ಬರೋಣವನ್ನು ಕಳ್ಳನ ಅನಿರೀಕ್ಷಿತ ಬರುವಿಕೆಗೆ ಹೋಲಿಸಿದನು.

3 ಯೇಸುವಿನ ಬರೋಣದ ನಿರ್ದಿಷ್ಟ ತಾರೀಖು ಯಾವುದೆಂದು ಗೊತ್ತಿಲ್ಲದಿರುವ ಕಾರಣ ಅವನು ಕೊಟ್ಟ ಆ ದೃಷ್ಟಾಂತವು ಸೂಕ್ತವಾಗಿತ್ತು. ಅದೇ ಪ್ರವಾದನೆಯಲ್ಲಿ ಮೊದಲು ಅವನು ಹೀಗಂದಿದ್ದನು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:36) ಆದಕಾರಣ ಯೇಸು ತನ್ನ ಕೇಳುಗರನ್ನು ಪ್ರೋತ್ಸಾಹಿಸಿದ್ದು: ‘ನೀವು ಸಿದ್ಧವಾಗಿರ್ರಿ.’ (ಮತ್ತಾಯ 24:44) ಹೀಗೆ, ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸಲು ಯೇಸು ಯಾವಾಗ ಬಂದರೂ ಅವನ ಎಚ್ಚರಿಕೆಗೆ ಕಿವಿಗೊಡುವವರು ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುತ್ತಾ ಸಿದ್ಧರಾಗಿರುವರು.

4 ಆದರೆ ಕೆಲವು ಪ್ರಮುಖ ಪ್ರಶ್ನೆಗಳು ಏಳುತ್ತವೆ: ಯೇಸುವಿನ ಎಚ್ಚರಿಕೆ ಲೋಕದ ಜನರಿಗೆ ಮಾತ್ರವೊ, ಇಲ್ಲವೆ ಸತ್ಯ ಕ್ರೈಸ್ತರು ಸಹ ‘ಎಚ್ಚರವಾಗಿರಬೇಕೊ’? ‘ಎಚ್ಚರವಾಗಿರುವುದು’ ತುರ್ತಿನದ್ದೇಕೆ ಮತ್ತು ಅದನ್ನು ನಾವು ಹೇಗೆ ಮಾಡಬಹುದು?

ಎಚ್ಚರಿಕೆ ಯಾರಿಗೆ?

5 ಬರಲಿರುವ ವಿಪತ್ತಿನ ವಿಷಯದಲ್ಲಿ ಕೊಡಲ್ಪಡುವ ಎಚ್ಚರಿಕೆಯನ್ನು ಅಸಡ್ಡೆಮಾಡುವ ಲೋಕದ ಜನರಿಗೆ ಕರ್ತನ ಬರೋಣವು ಕಳ್ಳನು ಬರುವಂತಿರುವುದು ಎಂಬುದಂತೂ ಖಂಡಿತವಾಗಿಯೂ ಸತ್ಯ. (2 ಪೇತ್ರ 3:​3-7) ಆದರೆ ಸತ್ಯ ಕ್ರೈಸ್ತರ ವಿಷಯದಲ್ಲೇನು? ಅಪೊಸ್ತಲ ಪೌಲನು ಜೊತೆವಿಶ್ವಾಸಿಗಳಿಗೆ ಬರೆದುದು: “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ [“ಯೆಹೋವನ,” NW] ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.” (1 ಥೆಸಲೊನೀಕ 5:⁠2) ‘ಯೆಹೋವನ ದಿನವು ಬರುವದೆಂಬ’ ವಿಷಯದಲ್ಲಿ ನಮಗೆ ಯಾವ ಸಂಶಯವೂ ಇಲ್ಲ. ಆದರೆ ಇದು, ನಾವು ಎಚ್ಚರಿಕೆಯಿಂದಿರುವ ಆವಶ್ಯಕತೆಯನ್ನು ಕಡಿಮೆ ಮಾಡುತ್ತದೊ? “ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಎಂದು ಯೇಸು ಹೇಳಿದ್ದು ತನ್ನ ಶಿಷ್ಯರಿಗೇ ಎಂಬುದನ್ನು ಗಮನಿಸಿ. (ಮತ್ತಾಯ 24:44) ಈ ಮೊದಲು, ಯೇಸು ತನ್ನ ಶಿಷ್ಯರಿಗೆ ರಾಜ್ಯವನ್ನು ಹುಡುಕುತ್ತ ಇರುವಂತೆ ಪ್ರೋತ್ಸಾಹಿಸಿದಾಗ ಎಚ್ಚರಿಸಿದ್ದು: “ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಲೂಕ 12:​31, 40) ಆದಕಾರಣ, “ಎಚ್ಚರವಾಗಿರ್ರಿ” ಎಂದು ಯೇಸು ಎಚ್ಚರಿಕೆ ನೀಡಿದಾಗ ಅವನ ಶಿಷ್ಯರನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದ್ದನೆಂಬುದು ಸ್ಪಷ್ಟವಾಗುವುದಿಲ್ಲವೆ?

6 ನಾವು ಏಕೆ ‘ಎಚ್ಚರವಾಗಿ’ ಮತ್ತು ‘ಸಿದ್ಧರಾಗಿರಬೇಕು’? ಯೇಸು ವಿವರಿಸಿದ್ದು: “ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕೂತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಒಬ್ಬಳು ಬಿಡಲ್ಪಡುವಳು.” (ಮತ್ತಾಯ 24:​40, 41) ದುಷ್ಟಲೋಕವು ನಾಶವಾಗುವಾಗ ಸಿದ್ಧರಾಗಿರುವವರು ‘ತೆಗೆದುಕೊಳ್ಳಲ್ಪಡುವರು,’ ಅಂದರೆ ರಕ್ಷಿಸಲ್ಪಡುವರು. ಇತರರು ಸ್ವಾರ್ಥಭಾವದಿಂದ ತಮ್ಮ ಸ್ವಂತ ಅಭಿರುಚಿಗಳನ್ನು ಬೆನ್ನಟ್ಟುತ್ತಿರುವುದರಿಂದ ‘ಬಿಡಲ್ಪಡುವರು,’ ಅಂದರೆ ನಾಶವಾಗುವರು. ಇವರಲ್ಲಿ ಈ ಹಿಂದೆ ತಿಳಿವಳಿಕೆ ಪಡೆದಿದ್ದರೂ ಎಚ್ಚರವಾಗಿ ಕಾಯದಿದ್ದವರು ಸೇರಿರುವುದು ಸಂಭವನೀಯ.

7 ಈ ಹಳೆಯ ವ್ಯವಸ್ಥೆಯ ಕೊನೇ ದಿನವು ನಿರ್ದಿಷ್ಟವಾಗಿ ಇದೇ ಆಗಿದೆ ಎಂದು ತಿಳಿಯದೇ ಇರುವುದು, ನಾವು ನಿರ್ಮಲ ಹೇತುವಿನಿಂದ ದೇವರನ್ನು ಸೇವಿಸುತ್ತೇವೆಂದು ತೋರಿಸಲು ಅವಕಾಶವನ್ನು ಒದಗಿಸುತ್ತದೆ. ಅದು ಹೇಗೆ? ಒಂದುವೇಳೆ ಆ ಅಂತ್ಯವು ಬರಲು ತುಂಬ ಸಮಯ ಹಿಡಿಯುತ್ತಿದೆ ಎಂಬಂತೆ ಭಾಸವಾಗಬಹುದು. ವಿಷಾದಕರವಾಗಿ, ಈ ಅನಿಸಿಕೆಯಿರುವ ಕೆಲವು ಮಂದಿ ಕ್ರೈಸ್ತರು ಯೆಹೋವನ ಸೇವೆಯಲ್ಲಿ ತಮಗಿದ್ದ ಹುರುಪು ತಣ್ಣಗಾಗುವಂತೆ ಬಿಟ್ಟಿದ್ದಾರೆ. ಆದರೂ ನಮ್ಮ ಸಮರ್ಪಣೆಯ ಮೂಲಕ ನಾವು ಯೆಹೋವನನ್ನು ಯಾವ ಷರತ್ತೂ ಇಲ್ಲದೆ ಸೇವಿಸಲು ಅರ್ಪಿಸಿಕೊಂಡಿದ್ದೇವೆ. ಯೆಹೋವನ ಪರಿಚಯ ಇರುವವರಿಗೆ, ಕೊನೆಯ ಕ್ಷಣದಲ್ಲಿ ತೋರಿಸಲ್ಪಡುವ ಹುರುಪು ಆತನನ್ನು ಪ್ರಭಾವಿಸದು ಎಂಬ ಗ್ರಹಿಕೆ ಇದೆ. ಆತನು ನಮ್ಮ ಹೃದಯದಲ್ಲಿ ಏನಿದೆಯೊ ಅದನ್ನು ನೋಡುತ್ತಾನೆ.​—⁠1 ಸಮುವೇಲ 16:⁠7.

8 ನಾವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವುದರಿಂದಲೇ ಆತನ ಚಿತ್ತವನ್ನು ಮಾಡುವುದರಲ್ಲಿ ಅತ್ಯಂತ ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುತ್ತೇವೆ. (ಕೀರ್ತನೆ 40:8; ಮತ್ತಾಯ 26:39) ಮತ್ತು ಯೆಹೋವನನ್ನು ಅನಂತಕಾಲ ಸೇವಿಸುವುದೇ ನಮ್ಮ ಬಯಕೆಯಾಗಿದೆ. ನಾವು ನಿರೀಕ್ಷಿಸಿದ್ದುದಕ್ಕಿಂತ ಸ್ವಲ್ಪ ಹೆಚ್ಚು ಕಾಲ ಕಾಯಬೇಕಾಗಿರುವ ಕಾರಣ ಮಾತ್ರಕ್ಕೆ ನಮಗಿರುವ ಈ ಪ್ರತೀಕ್ಷೆಯ ಮೌಲ್ಯವು ಕಡಿಮೆಯಾಗುವುದಿಲ್ಲ. ನಾವು ಎಚ್ಚರಿಕೆಯಿಂದಿರುವ ಅತಿ ಪ್ರಾಮುಖ್ಯ ಕಾರಣವು, ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಆತನ ದಿನವು ಅತಿ ಮಹತ್ವದ ಘಟನೆಯಾಗಿರುವುದರಿಂದಲೇ. ದೇವರನ್ನು ಮೆಚ್ಚಿಸಲು ನಮಗಿರುವ ತೀವ್ರಾಭಿಲಾಷೆಯು, ಆತನ ವಾಕ್ಯದಲ್ಲಿರುವ ಸಲಹೆಯನ್ನು ಅನ್ವಯಿಸಿಕೊಂಡು ಆತನ ರಾಜ್ಯಕ್ಕೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಡುವಂತೆ ಪ್ರಚೋದಿಸುತ್ತದೆ. (ಮತ್ತಾಯ 6:33; 1 ಯೋಹಾನ 5:⁠3) ಹಾಗಾದರೆ, ಎಚ್ಚರಿಕೆಯಿಂದಿರುವುದು ನಾವು ಮಾಡುವ ನಿರ್ಣಯಗಳನ್ನು ಮತ್ತು ನಮ್ಮ ದಿನನಿತ್ಯದ ಜೀವನ ರೀತಿಯನ್ನು ಹೇಗೆ ಪ್ರಭಾವಿಸಬೇಕೆಂಬುದನ್ನು ನಾವೀಗ ಪರಿಗಣಿಸೋಣ.

ನಿಮ್ಮ ಜೀವನ ಯಾವ ದಿಕ್ಕಿಗೆ ಸಾಗುತ್ತಿದೆ?

9 ಇಂದು ಗಂಭೀರ ಸಮಸ್ಯೆಗಳು ಮತ್ತು ಆಘಾತಕರ ಘಟನೆಗಳು ದಿನನಿತ್ಯದ ಸಂಗತಿಗಳಾಗಿ ಬಿಟ್ಟಿವೆಯೆಂಬುದನ್ನು ಅನೇಕ ಜನರು ಒಪ್ಪುತ್ತಾರೆ. ತಮ್ಮ ಸ್ವಂತ ಜೀವನವು ಯಾವ ದಿಕ್ಕಿನತ್ತ ಸಾಗುತ್ತಿದೆಯೊ ಅದರ ಬಗ್ಗೆಯೂ ಅವರಿಗೆ ಸಂತೋಷವಿರಲಿಕ್ಕಿಲ್ಲ. ಆದರೂ, ಲೋಕ ಪರಿಸ್ಥಿತಿಗಳ ನಿಜಾರ್ಥ ಅವರಿಗೆ ತಿಳಿದಿದೆಯೆ? ನಾವು “ಯುಗದ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆಂಬುದನ್ನು ಅವರು ಗ್ರಹಿಸುತ್ತಾರೊ? (ಮತ್ತಾಯ 24:⁠3) ಎಲ್ಲೆಲ್ಲೂ ಪ್ರಚಲಿತವಾಗಿರುವ ಸ್ವಾರ್ಥಪರ, ಹಿಂಸಾತ್ಮಕ ಮತ್ತು ಭಕ್ತಿರಹಿತ ಮನೋಭಾವಗಳು ಇವು “ಕಡೇ ದಿವಸ”ಗಳಾಗಿವೆ ಎಂದು ಗುರುತಿಸುತ್ತವೆಂಬುದನ್ನು ಅವರು ಒಪ್ಪುತ್ತಾರೊ? (2 ತಿಮೊಥೆಯ 3:​1-5) ಅವರು ಈ ಎಲ್ಲವುಗಳ ಸೂಚಿತಾರ್ಥಕ್ಕೆ ಎಚ್ಚೆತ್ತುಕೊಳ್ಳುವ ಮತ್ತು ತಮ್ಮ ಜೀವನವು ಯಾವ ದಿಕ್ಕಿನತ್ತ ಸಾಗುತ್ತಿದೆಯೊ ಅದನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ತುರ್ತಿನದ್ದಾಗಿದೆ.

10 ನಮ್ಮ ವಿಷಯದಲ್ಲೇನು? ನಾವು ಪ್ರತಿದಿನ ನಮ್ಮ ಉದ್ಯೋಗ, ಆರೋಗ್ಯ, ಕುಟುಂಬ ಮತ್ತು ಆರಾಧನೆಯ ಸಂಬಂಧದಲ್ಲಿ ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಬೈಬಲ್‌ ಏನನ್ನುತ್ತದೆಂಬುದು ನಮಗೆ ತಿಳಿದದೆ ಮತ್ತು ಅದನ್ನು ಅನ್ವಯಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಆದುದರಿಂದ ನಾವು ಹೀಗೆ ಕೇಳಿಕೊಳ್ಳಬೇಕು: ‘ಜೀವನದ ಚಿಂತೆಗಳು ನನ್ನನ್ನು ಆಧ್ಯಾತ್ಮಿಕ ಗುರಿಯಿಂದ ದೂರತಳ್ಳುವಂತೆ ನಾನು ಬಿಟ್ಟಿದ್ದೇನೊ? ಲೋಕದ ತತ್ತ್ವಜ್ಞಾನಗಳು, ಲೋಕದ ಆಲೋಚನೆಗಳು ನಾನು ಮಾಡುವ ಆಯ್ಕೆಗಳನ್ನು ನಿರ್ಧರಿಸುವಂತೆ ನಾನು ಬಿಡುತ್ತಿದ್ದೇನೊ?’ (ಲೂಕ 21:​34-36; ಕೊಲೊಸ್ಸೆ 2:⁠8) ನಾವು ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡುತ್ತೇವೆ ಎಂಬುದನ್ನು ತೋರಿಸುತ್ತ ಹೋಗುವುದು ಆವಶ್ಯಕ. (ಜ್ಞಾನೋಕ್ತಿ 3:⁠5) ಹೀಗೆ, ನಾವು ದೇವರ ನೂತನ ಲೋಕದಲ್ಲಿನ ನಿತ್ಯಜೀವ ಅಂದರೆ “ವಾಸ್ತವವಾದ ಜೀವವನ್ನು” ಬಿಗಿಯಾಗಿ ಹಿಡಿದುಕೊಳ್ಳುವೆವು.​—⁠1 ತಿಮೊಥೆಯ 6:​12, 19.

11 ನಾವು ಎಚ್ಚರಿಕೆಯಿಂದಿರಲು ಸಹಾಯಮಾಡಬಲ್ಲ ಅನೇಕ ಮುನ್ನೆಚ್ಚರಿಕೆಯ ಉದಾಹರಣೆಗಳು ಬೈಬಲಿನಲ್ಲಿವೆ. ನೋಹನ ದಿನಗಳಲ್ಲಿ ನಡೆದ ವಿಷಯವನ್ನು ಪರಿಗಣಿಸಿರಿ. ಎಚ್ಚರಿಕೆಯು ಕೊಡಲ್ಪಡುವಂತೆ ದೇವರು ಅತಿ ಮುಂದಾಗಿಯೇ ಏರ್ಪಡಿಸಿದನು. ಆದರೆ ನೋಹ ಮತ್ತು ಅವನ ಕುಟುಂಬವನ್ನು ಬಿಟ್ಟು ಇನ್ನಾರೂ ಅದಕ್ಕೆ ಲಕ್ಷ್ಯಕೊಡಲಿಲ್ಲ. (2 ಪೇತ್ರ 2:⁠5) ಯೇಸು ಇದರ ಬಗ್ಗೆ ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.” (ಮತ್ತಾಯ 24:​37-39) ನಾವು ಇದರಿಂದ ಏನನ್ನು ಕಲಿಯಬಲ್ಲೆವು? ನಾವು ಪ್ರಥಮಸ್ಥಾನದಲ್ಲಿಡುವಂತೆ ದೇವರು ಪ್ರೋತ್ಸಾಹಿಸಿರುವ ಆಧ್ಯಾತ್ಮಿಕ ಚಟುವಟಿಕೆಗಳ ಸ್ಥಾನದಲ್ಲಿ ಲೌಕಿಕ ಚಿಂತೆಗಳು​—⁠ಅವು ಜೀವನದ ಸಾಮಾನ್ಯ ಚಟುವಟಿಕೆಗಳೂ ಆಗಿರಬಹುದು​—⁠ಬರುವಂತೆ ನಮ್ಮಲ್ಲಿ ಯಾರಾದರೂ ಬಿಟ್ಟುಕೊಟ್ಟಿರುವಲ್ಲಿ ಅದರ ಕುರಿತು ಗಂಭೀರವಾಗಿ ಯೋಚಿಸಬೇಕು.​—⁠ರೋಮಾಪುರ 14:17.

12 ಲೋಟನ ದಿನಗಳ ಬಗ್ಗೆಯೂ ಯೋಚಿಸಿ. ಲೋಟ ಮತ್ತು ಅವನ ಕುಟುಂಬ ಜೀವಿಸುತ್ತಿದ್ದ ಸೊದೋಮ್‌ ನಗರ ಪ್ರಾಪಂಚಿಕವಾಗಿ ಸಮೃದ್ಧವಾಗಿತ್ತಾದರೂ ನೈತಿಕವಾಗಿ ದಾರಿದ್ರ್ಯದ ಸ್ಥಿತಿಯಲ್ಲಿತ್ತು. ಆಗ ಯೆಹೋವನು ಆ ಸ್ಥಳವನ್ನು ನಾಶಮಾಡಲಿಕ್ಕಾಗಿ ತನ್ನ ದೇವದೂತರನ್ನು ಕಳುಹಿಸಿದನು. ಸೊದೋಮಿನಿಂದ ಓಡಿಹೋಗಬೇಕೆಂದೂ ಹಿಂದಿರುಗಿ ನೋಡಬಾರದೆಂದೂ ದೇವದೂತರು ಲೋಟ ಮತ್ತು ಅವನ ಕುಟುಂಬವನ್ನು ಪ್ರೇರೇಪಿಸಿದರು. ದೇವದೂತರ ಉತ್ತೇಜನದ ಮೇರೆಗೆ ಅವರು ಆ ಪಟ್ಟಣವನ್ನು ಬಿಟ್ಟುಹೋದರು ನಿಜ. ಆದರೆ ಲೋಟನ ಹೆಂಡತಿಗೆ ಸೊದೋಮಿನಲ್ಲಿದ್ದ ತನ್ನ ಮನೆಯ ಬಗ್ಗೆ ಚಿಂತಿಸದೆ ಇರಲಾಗಲಿಲ್ಲವೆಂಬುದು ವ್ಯಕ್ತ. ಆಕೆ ಅವಿಧೇಯಳಾಗಿ ಹಿಂದಿರುಗಿ ನೋಡಿದಳು. ಮತ್ತು ಇದಕ್ಕಾಗಿ ಆಕೆ ತನ್ನ ಜೀವವನ್ನೇ ತೆರಬೇಕಾಯಿತು. (ಆದಿಕಾಂಡ 19:​15-26) ಯೇಸು ಪ್ರವಾದನಾತ್ಮಕವಾಗಿ ಎಚ್ಚರಿಸಿದ್ದು: “ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.” ನಾವು ಈ ಎಚ್ಚರಿಕೆಯನ್ನು ಪಾಲಿಸುತ್ತಿದ್ದೇವೊ?​—⁠ಲೂಕ 17:⁠32.

13 ದೈವಿಕ ಎಚ್ಚರಿಕೆಗಳಿಗೆ ಕಿವಿಗೊಟ್ಟವರು ಬಚಾವಾದರು. ನೋಹ ಮತ್ತು ಅವನ ಕುಟುಂಬ ಹಾಗೂ ಲೋಟ ಮತ್ತು ಅವನ ಪುತ್ರಿಯರ ಸಂಬಂಧದಲ್ಲಿ ಇದು ಸತ್ಯವಾಗಿತ್ತು. (2 ಪೇತ್ರ 2:⁠9) ಈ ಉದಾಹರಣೆಗಳಲ್ಲಿ ಅಡಕವಾಗಿರುವ ಎಚ್ಚರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವಾಗ, ನೀತಿಪ್ರಿಯರಿಗಾಗಿ ಅದರಲ್ಲಿರುವ ವಿಮೋಚನೆಯ ಸಂದೇಶದಿಂದ ಕೂಡ ನಾವು ಪ್ರೋತ್ಸಾಹಿತರಾಗುತ್ತೇವೆ. ಇದು, ‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲದ’ ಕುರಿತಾದ ದೇವರ ವಾಗ್ದಾನದ ನೆರವೇರಿಕೆಯ ನಿಶ್ಚಿತ ನಿರೀಕ್ಷೆಯನ್ನು ನಮ್ಮ ಹೃದಯದಲ್ಲಿ ತುಂಬಿಸುತ್ತದೆ.​—⁠2 ಪೇತ್ರ 3:13.

‘ನ್ಯಾಯತೀರ್ಪಿನ ಗಳಿಗೆ ಬಂದಿದೆ’!

14 ನಾವು ಎಚ್ಚರಿಕೆಯಿಂದಿರುವಾಗ ಏನನ್ನು ಎದುರುನೋಡಬಲ್ಲೆವು? ಪ್ರಕಟನೆ ಪುಸ್ತಕವು ದೇವರ ಉದ್ದೇಶವು ಹೇಗೆ ಹಂತಹಂತವಾಗಿ ನೆರವೇರುವುದೆಂಬುದರ ರೂಪ ರೇಖೆಯನ್ನು ಕೊಡುತ್ತದೆ. ನಾವು ಸಿದ್ಧರಾಗಿದ್ದೇವೆಂದು ತೋರಿಸಿ ಕೊಡಬೇಕಾದರೆ ಆ ಪುಸ್ತಕವು ಹೇಳುವ ವಿಷಯಗಳಿಗೆ ಅನುಗುಣವಾಗಿ ಕ್ರಿಯೆಗೈಯುವುದು ಪ್ರಾಮುಖ್ಯ. ಆ ಪ್ರವಾದನೆಯು “ಕರ್ತನ ದಿನದಲ್ಲಿ” ಸಂಭವಿಸುವ ಘಟನೆಗಳನ್ನು ಸುವ್ಯಕ್ತವಾಗಿ ವರ್ಣಿಸುತ್ತದೆ. ಆ ದಿನವು, ಕ್ರಿಸ್ತನು ಸ್ವರ್ಗದಲ್ಲಿ 1914ರಲ್ಲಿ ಸಿಂಹಾಸನಾರೂಢನಾದಾಗ ಆರಂಭಗೊಂಡಿತು. (ಪ್ರಕಟನೆ 1:10) ಪ್ರಕಟನೆ ಪುಸ್ತಕವು, ‘ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು’ ವಹಿಸಿಕೊಡಲ್ಪಟ್ಟಿರುವ ಒಬ್ಬ ದೇವದೂತನ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಅವನು ಗಟ್ಟಿಯಾಗಿ ಘೋಷಿಸುವುದು: “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ.” (ಪ್ರಕಟನೆ 14:​6, 7) ನ್ಯಾಯತೀರ್ಪಿನ ಆ “ಗಳಿಗೆ” ಅಲ್ಪಕಾಲಿಕ; ಇದರಲ್ಲಿ ಆ ಪ್ರವಾದನೆಯಲ್ಲಿ ಚಿತ್ರಿಸಲ್ಪಟ್ಟಿರುವ ನ್ಯಾಯತೀರ್ಪುಗಳ ಘೋಷಣೆ ಮತ್ತು ಜಾರಿಗೊಳಿಸುವಿಕೆ ಸೇರಿದೆ. ನಾವೀಗ ಆ ಅವಧಿಯಲ್ಲೇ ಜೀವಿಸುತ್ತಿದ್ದೇವೆ.

15 ಈಗ, ಆ ನ್ಯಾಯತೀರ್ಪಿನ ಗಳಿಗೆಯು ಮುಗಿಯುವ ಮೊದಲು “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ” ಎಂದು ನಮ್ಮೆಲ್ಲರನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದರಲ್ಲಿ ಏನು ಒಳಗೂಡಿದೆ? ಯೋಗ್ಯವಾದ ದೇವರ ಭಯವು ನಾವು ಕೆಟ್ಟದ್ದನ್ನು ತೊರೆದುಬಿಡುವಂತೆ ಮಾಡಬೇಕು. (ಜ್ಞಾನೋಕ್ತಿ 8:13) ನಾವು ದೇವರನ್ನು ಘನಪಡಿಸುವಲ್ಲಿ, ಆತನಿಗೆ ಆಳವಾದ ಗೌರವವನ್ನು ಕೊಟ್ಟು ಆತನು ಹೇಳಿದ್ದನ್ನು ಕೇಳುವೆವು. ನಾವು ಆತನ ವಾಕ್ಯವಾದ ಬೈಬಲನ್ನು ಕ್ರಮವಾಗಿ ಓದಲು ಸಮಯವಿಲ್ಲದವರಾಗಿರೆವು. ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗಿರಬೇಕೆಂಬ ಆತನ ಸಲಹೆಯನ್ನು ಅಲ್ಪವೆಂದು ಎಣಿಸೆವು. (ಇಬ್ರಿಯ 10:​24, 25) ದೇವರ ಮೆಸ್ಸೀಯ ರಾಜ್ಯದ ಸುವಾರ್ತೆಯನ್ನು ಸಾರುವ ಸದವಕಾಶವನ್ನು ಬೆಲೆಯುಳ್ಳದ್ದಾಗಿ ಎಣಿಸಿ, ಅದನ್ನು ಹುರುಪಿನಿಂದ ಸಾರುವೆವು. ನಾವು ನಮ್ಮ ಪೂರ್ಣಹೃದಯದಿಂದ ಯೆಹೋವನ ಮೇಲೆ ಎಲ್ಲ ಸಮಯಗಳಲ್ಲಿಯೂ ಭರವಸೆಯನ್ನಿಡುವೆವು. (ಕೀರ್ತನೆ 62:⁠8) ಯೆಹೋವನು ವಿಶ್ವದ ಪರಮಾಧಿಕಾರಿಯೆಂದು ನಾವು ಒಪ್ಪಿಕೊಳ್ಳುವುದರಿಂದ, ನಮ್ಮ ಜೀವನದ ಪರಮಾಧಿಕಾರಿಯಾಗಿ ಆತನಿಗೆ ಮನಃಪೂರ್ವಕ ಅಧೀನತೆಯನ್ನು ತೋರಿಸಿ ಆತನನ್ನು ಸನ್ಮಾನಿಸುವೆವು. ಈ ಎಲ್ಲ ವಿಧಗಳಲ್ಲಿ ನೀವು ದೇವರಿಗೆ ನಿಜವಾಗಿಯೂ ಭಯಪಟ್ಟು ಆತನನ್ನು ಘನಪಡಿಸುತ್ತೀರೊ?

16 ಪ್ರಕಟನೆ 14ನೆಯ ಅಧ್ಯಾಯವು, ನ್ಯಾಯತೀರ್ಪಿನ ಗಳಿಗೆಯಲ್ಲಿ ನಡೆಯಲಿರುವ ಬೇರೆ ಘಟನೆಗಳನ್ನು ತಿಳಿಸುತ್ತದೆ. ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಕುರಿತು ಮೊದಲು ತಿಳಿಸಲ್ಪಟ್ಟಿದೆ: “ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು​—⁠ಬಿದ್ದಳು, ಬಿದ್ದಳು, ಬಾಬೆಲೆಂಬ ಮಹಾ ನಗರಿಯು ಬಿದ್ದಳು . . . ಎಂದು ಹೇಳಿದನು.” (ಪ್ರಕಟನೆ 14:⁠8) ಹೌದು, ದೇವರ ದೃಷ್ಟಿಕೋನದಲ್ಲಿ ಮಹಾ ಬಾಬೆಲ್‌ ಈಗಾಗಲೇ ಬಿದ್ದಿರುತ್ತಾಳೆ. ಏಕೆಂದರೆ, 1919ರಲ್ಲಿ ಯೆಹೋವನ ಅಭಿಷಿಕ್ತ ಸೇವಕರು, ಯಾವುದು ಜನರನ್ನೂ ಜನಾಂಗಗಳನ್ನೂ ದಾಸರನ್ನಾಗಿ ಮಾಡಿತ್ತೊ ಆ ಬಾಬೆಲಿನ ತತ್ತ್ವಗಳು ಮತ್ತು ಆಚಾರಗಳಿಂದ ಬಿಡುಗಡೆ ಮಾಡಲ್ಪಟ್ಟರು. (ಪ್ರಕಟನೆ 17:​1, 15) ಅಂದಿನಿಂದ ಅವರು ಸತ್ಯಾರಾಧನೆಯನ್ನು ವರ್ಧಿಸುವ ಕೆಲಸಕ್ಕೆ ತಮ್ಮನ್ನು ಮೀಸಲಾಗಿಡಶಕ್ತರಾದರು. ಆ ಸಮಯದಿಂದ ದೇವರ ರಾಜ್ಯದ ಸುವಾರ್ತೆಯ ಭೂವ್ಯಾಪಕ ಸಾರುವಿಕೆ ನಡೆದಿದೆ.​—⁠ಮತ್ತಾಯ 24:14.

17 ಆದರೆ ಮಹಾ ಬಾಬೆಲಿನ ಮೇಲೆ ಬರುವ ನ್ಯಾಯತೀರ್ಪಿನಲ್ಲಿ ಅಷ್ಟುಮಾತ್ರ ಒಳಗೂಡಿರುವುದಿಲ್ಲ. ಆಕೆಯ ಅಂತಿಮ ನಾಶನ ಬೇಗನೆ ಬರಲಿದೆ. (ಪ್ರಕಟನೆ 18:21) ಆದುದರಿಂದ ಸಕಾರಣದಿಂದಲೇ ಎಲ್ಲೆಲ್ಲಿಯೂ ಇರುವ ಜನರನ್ನು ಬೈಬಲು ಹೀಗೆ ಪ್ರೋತ್ಸಾಹಿಸುತ್ತದೆ: “ಅವಳನ್ನು [ಮಹಾ ಬಾಬೆಲನ್ನು] ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು.” (ಪ್ರಕಟನೆ 18:​4, 5) ನಾವು ಮಹಾ ಬಾಬೆಲನ್ನು ಬಿಟ್ಟುಬರುವುದು ಹೇಗೆ? ಸುಳ್ಳುಧರ್ಮದೊಂದಿಗಿನ ನಮ್ಮ ಸಂಬಂಧವನ್ನು ಕಡಿದುಹಾಕುವುದಕ್ಕಿಂತ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ಬಾಬೆಲಿನ ಪ್ರಭಾವವು ಅನೇಕ ಜನಪ್ರಿಯ ಉತ್ಸವಗಳು ಮತ್ತು ಪದ್ಧತಿಗಳಲ್ಲಿ, ಲೈಂಗಿಕ ದುರಾಚಾರಕ್ಕೆ ಲೋಕವು ಕೊಟ್ಟಿರುವ ಸಮ್ಮತಿಯಲ್ಲಿ, ಪ್ರೇತವ್ಯವಹಾರವು ಕೂಡಿರುವ ಮನೋರಂಜನೆ ಮತ್ತು ಇನ್ನೂ ಎಷ್ಟೋ ವಿಷಯಗಳಲ್ಲಿ ಕಂಡುಬರುತ್ತದೆ. ಎಚ್ಚರಿಕೆಯಿಂದಿರಲಿಕ್ಕಾಗಿ, ನಾವು ನಮ್ಮ ವರ್ತನೆಗಳಲ್ಲಿ ಹಾಗೂ ಹೃದಯಾಪೇಕ್ಷೆಗಳಲ್ಲಿ ಮಹಾ ಬಾಬೆಲಿನಿಂದ ಪ್ರತಿಯೊಂದು ವಿಧದಲ್ಲಿ ನಿಜವಾಗಿಯೂ ಪ್ರತ್ಯೇಕರಾಗಿದ್ದೇವೆ ಎಂಬುದಕ್ಕೆ ರುಜುವಾತನ್ನು ಒದಗಿಸಬೇಕು.

18ಪ್ರಕಟನೆ 14:9, 10ರಲ್ಲಿ ‘ನ್ಯಾಯತೀರ್ಪಿನ ಗಳಿಗೆಯ’ ಇನ್ನೊಂದು ವೈಶಿಷ್ಟ್ಯವನ್ನು ವರ್ಣಿಸಲಾಗಿದೆ. ಇನ್ನೊಬ್ಬ ದೇವದೂತನು ಹೇಳುವುದು: “ಯಾವನಾದರೂ ಮೊದಲನೆಯ [“ಕಾಡು,” NW] ಮೃಗಕ್ಕೂ ಅದರ ವಿಗ್ರಹಕ್ಕೂ ನಮಸ್ಕಾರಮಾಡಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಗುರುತುಹಾಕಿಸಿಕೊಂಡರೆ ಅವನು ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೆ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು.” ಏಕೆ? ಏಕೆಂದರೆ ಆ ‘ಕಾಡುಮೃಗ ಮತ್ತು ಅದರ ವಿಗ್ರಹ,’ ಯೆಹೋವನ ಪರಮಾಧಿಕಾರವನ್ನು ಒಪ್ಪದಿರುವ ಮಾನವ ಆಳ್ವಿಕೆಗಳ ಪ್ರತೀಕಗಳಾಗಿವೆ. ಆದುದರಿಂದ, ಎಚ್ಚರದಿಂದಿರುವ ಕ್ರೈಸ್ತರು ತಮ್ಮ ಮನೋಭಾವದಿಂದಾಗಲಿ ವರ್ತನೆಯಿಂದಾಗಲಿ, ಸತ್ಯ ದೇವರಾದ ಯೆಹೋವನ ಪರಮಾಧಿಕಾರವನ್ನು ಒಪ್ಪದಿರುವವರ ಅಡಿಯಾಳುಗಳಾಗಿರಲು ಪ್ರಭಾವಿಸಲ್ಪಡುವಂತೆ ಇಲ್ಲವೆ ಹಾಗೆ ಗುರುತಿಸಲ್ಪಡುವಂತೆ ಬಿಡರು. ದೇವರ ರಾಜ್ಯವು ಸ್ವರ್ಗದಲ್ಲಿ ಈಗಾಗಲೇ ಸ್ಥಾಪಿಸಲ್ಪಟ್ಟಿದೆ, ಅದು ಸಕಲ ಮಾನವಾಳ್ವಿಕೆಗಳನ್ನು ನಿರ್ನಾಮಮಾಡುವುದು ಮತ್ತು ಶಾಶ್ವತವಾಗಿ ನಿಲ್ಲುವುದು ಎಂಬುದನ್ನು ಕ್ರೈಸ್ತರು ಬಲ್ಲರು.​—⁠ದಾನಿಯೇಲ 2:44.

ನಿಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳಬೇಡಿರಿ!

19 ನಾವು ಕಡೇ ದಿವಸಗಳ ಅಂತ್ಯವನ್ನು ಸಮೀಪಿಸುತ್ತಿರುವಾಗ, ಒತ್ತಡಗಳೂ ಪ್ರಲೋಭನೆಗಳೂ ತೀಕ್ಷ್ಣವಾಗುವವು ಎಂಬುದು ನಿಸ್ಸಂದೇಹ. ನಾವು ಈ ಹಳೆಯ ವ್ಯವಸ್ಥೆಯಲ್ಲಿ ಜೀವಿಸುವಷ್ಟು ಕಾಲ ಮತ್ತು ನಮ್ಮ ಸ್ವಂತ ಅಪರಿಪೂರ್ಣತೆಗಳಿಂದ ಪೀಡಿಸಲ್ಪಡುವಷ್ಟು ಕಾಲ, ಅನಾರೋಗ್ಯ, ವೃದ್ಧಾಪ್ಯ, ಮರಣದಲ್ಲಿ ಪ್ರಿಯರ ನಷ್ಟ, ಮನನೋಯಿಸಲ್ಪಡುವ ಅನುಭವ, ದೇವರ ವಾಕ್ಯವನ್ನು ಸಾರುವ ನಮ್ಮ ಪ್ರಯತ್ನಕ್ಕೆ ತೋರಿಸಲ್ಪಡುವ ಉದಾಸೀನಭಾವದಿಂದ ಬರುವ ನಿರಾಶೆ ಇತ್ಯಾದಿಗಳಿಂದ ಬಾಧಿಸಲ್ಪಡುತ್ತೇವೆ. ಆದರೆ ನಾವು ಎದುರಿಸುವ ಈ ಒತ್ತಡಗಳನ್ನು ಬಳಸುತ್ತ, ನಾವು ಸುವಾರ್ತೆ ಸಾರುವುದನ್ನು ನಿಲ್ಲಿಸುವಂತೆ ಇಲ್ಲವೆ ದೇವರ ಮಟ್ಟಗಳಿಗನುಸಾರ ಜೀವಿಸುವುದನ್ನು ತ್ಯಜಿಸುವಂತೆ ಮಾಡುವುದೇ ಸೈತಾನನ ಮಹಾದಾಸೆ ಎಂಬುದನ್ನು ಎಂದಿಗೂ ಮರೆಯದಿರಿ. (ಎಫೆಸ 6:​11-13) ಖಂಡಿತವಾಗಿಯೂ, ನಾವು ಜೀವಿಸುತ್ತಿರುವ ಈ ಕಾಲಗಳ ವಿಷಯದಲ್ಲಿ ನಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳುವ ಸಮಯ ಇದಲ್ಲ!

20 ನಮ್ಮ ಮೇಲೆ ತೀವ್ರ ಒತ್ತಡ ಬರುತ್ತದೆಂದು ಯೇಸು ಬಲ್ಲವನಾಗಿದ್ದರಿಂದಲೇ ಅವನು ಬುದ್ಧಿಹೇಳಿದ್ದು: “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” (ಮತ್ತಾಯ 24:42) ಆದುದರಿಂದ, ನಾವು ಕಾಲಪ್ರವಾಹದಲ್ಲಿ ಎಲ್ಲಿದ್ದೇವೆಂಬುದರ ಕುರಿತು ಸದಾ ಎಚ್ಚರವಾಗಿರೋಣ. ನಾವು ನಿಧಾನಿಸುವಂತೆ ಮಾಡುವ ಇಲ್ಲವೆ ಸತ್ಯವನ್ನು ತೊರೆಯುವಂತೆ ಮಾಡುವ ಸೈತಾನನ ತಂತ್ರೋಪಾಯಗಳನ್ನು ಎದುರಿಸುವ ವಿಷಯದಲ್ಲಿ ಸದಾ ಎಚ್ಚರಿಕೆಯಿಂದಿರೋಣ. ನಾವು ಎಂದಿಗಿಂತಲೂ ಹೆಚ್ಚು ಹುರುಪಿನಿಂದಲೂ ದೃಢತೆಯಿಂದಲೂ ದೇವರ ರಾಜ್ಯದ ಸುವಾರ್ತೆಯನ್ನು ಸಾರಿಹೇಳುವ ದೃಢಸಂಕಲ್ಪವನ್ನು ಇಟ್ಟುಕೊಳ್ಳೋಣ. ಹೌದು, “ಎಚ್ಚರವಾಗಿರ್ರಿ” ಎಂಬ ಯೇಸುವಿನ ಎಚ್ಚರಿಕೆಗೆ ಕಿವಿಗೊಡುತ್ತಿರುವಾಗ ನಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳೋಣ. ಹಾಗೆ ಮಾಡುವಲ್ಲಿ ನಾವು ಯೆಹೋವನನ್ನು ಘನಪಡಿಸಿ, ಆತನ ನಿತ್ಯಾಶೀರ್ವಾದಗಳನ್ನು ಪಡೆಯುವವರ ಸಾಲಿನಲ್ಲಿರುವೆವು.

ನೀವು ಹೇಗೆ ಉತ್ತರಿಸುವಿರಿ?

• ‘ಎಚ್ಚರವಾಗಿರ್ರಿ’ ಎಂಬ ಯೇಸುವಿನ ಎಚ್ಚರಿಕೆಯು ಸತ್ಯ ಕ್ರೈಸ್ತರಿಗೆ ಅನ್ವಯಿಸುತ್ತದೆಂದು ನಮಗೆ ಹೇಗೆ ಗೊತ್ತು?

• ಬೈಬಲಿನಲ್ಲಿರುವ ಮುನ್ನೆಚ್ಚರಿಕೆಯ ಯಾವ ಉದಾಹರಣೆಗಳು ನಾವು ‘ಎಚ್ಚರವಾಗಿರುವಂತೆ’ ಸಹಾಯಮಾಡಬಲ್ಲವು?

• ನ್ಯಾಯತೀರ್ಪಿನ ಗಳಿಗೆ ಎಂದರೇನು, ಮತ್ತು ಅದು ಅಂತ್ಯಗೊಳ್ಳುವ ಮೊದಲು ನಾವು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದೇವೆ?

[ಅಧ್ಯಯನ ಪ್ರಶ್ನೆಗಳು]

1, 2. ಯೇಸು ತನ್ನ ಬರೋಣವನ್ನು ಸೂಕ್ತವಾಗಿಯೇ ಯಾವುದಕ್ಕೆ ಹೋಲಿಸಿದನು?

3, 4. (ಎ) ತನ್ನ ಬರೋಣದ ಕುರಿತು ಯೇಸು ಕೊಟ್ಟ ಎಚ್ಚರಿಕೆಗೆ ಕಿವಿಗೊಡುವುದರಲ್ಲಿ ಏನೆಲ್ಲ ಸೇರಿದೆ? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?

5. “ಎಚ್ಚರವಾಗಿರ್ರಿ” ಎಂಬ ಎಚ್ಚರಿಕೆಯು ಸತ್ಯ ಕ್ರೈಸ್ತರಿಗೆ ಅನ್ವಯಿಸುತ್ತದೆಂದು ನಮಗೆ ಹೇಗೆ ಗೊತ್ತು?

6. ನಾವು ಏಕೆ ‘ಎಚ್ಚರವಾಗಿ’ ಇರಬೇಕಾಗಿದೆ?

7. ಅಂತ್ಯವು ಯಾವಾಗ ಬರುವುದು ಎಂದು ನಮಗೆ ತಿಳಿಯದೇ ಇರುವುದು ನಾವೇನನ್ನು ಮಾಡುವಂತೆ ಅವಕಾಶಕೊಡುತ್ತದೆ?

8. ಯೆಹೋವನ ಮೇಲೆ ನಮಗಿರುವ ಪ್ರೀತಿಯು ಎಚ್ಚರಿಕೆಯಿಂದಿರುವಂತೆ ನಮ್ಮನ್ನು ಹೇಗೆ ಪ್ರಚೋದಿಸುತ್ತದೆ?

9. ನಮ್ಮ ಕಾಲಗಳ ಸೂಚಿತಾರ್ಥಕ್ಕೆ ಲೋಕದ ಜನರು ಎಚ್ಚೆತ್ತುಕೊಳ್ಳುವ ಅಗತ್ಯ ತುರ್ತಿನದ್ದಾಗಿದೆ ಏಕೆ?

10. ನಾವು ಎಚ್ಚರಿಕೆಯಿಂದಿದ್ದೇವೆಂದು ಖಾತರಿಪಡಿಸಲು ಏನು ಮಾಡತಕ್ಕದ್ದು?

11-13. (ಎ) ನೋಹನ ದಿನಗಳಲ್ಲಿ, ಮತ್ತು (ಬಿ) ಲೋಟನ ದಿನಗಳಲ್ಲಿ ಏನು ಸಂಭವಿಸಿತೊ ಆ ಉದಾಹರಣೆಗಳಿಂದ ನಾವೇನನ್ನು ಕಲಿಯಬಲ್ಲೆವು?

14, 15. (ಎ) ನ್ಯಾಯತೀರ್ಪಿನ “ಗಳಿಗೆ”ಯಲ್ಲಿ ಏನು ಒಳಗೂಡಿದೆ? (ಬಿ) ‘ದೇವರಿಗೆ ಭಯಪಟ್ಟು ಆತನನ್ನು ಘನಪಡಿಸುವುದರಲ್ಲಿ’ ಏನು ಒಳಗೂಡಿದೆ?

16. ಪ್ರಕಟನೆ 14:8ರಲ್ಲಿ ತಿಳಿಸಲ್ಪಟ್ಟಿರುವ ಮಹಾ ಬಾಬೆಲಿನ ಮೇಲಿನ ನ್ಯಾಯತೀರ್ಪು ಈಗಾಗಲೇ ಜಾರಿಗೊಳಿಸಲ್ಪಟ್ಟಿದೆ ಎಂದು ನಾವು ಏಕೆ ಹೇಳಬಲ್ಲೆವು?

17. ಮಹಾ ಬಾಬೆಲನ್ನು ಬಿಟ್ಟುಬರುವುದರಲ್ಲಿ ಏನು ಒಳಗೂಡಿದೆ?

18. ಪ್ರಕಟನೆ 14:​9, 10ರಲ್ಲಿ ವರ್ಣಿಸಲ್ಪಟ್ಟಿರುವ ವಿಷಯವನ್ನು ಮನಸ್ಸಿನಲ್ಲಿಡುತ್ತಾ ಎಚ್ಚರದಿಂದಿರುವ ಕ್ರೈಸ್ತರು ಯಾವುದರಿಂದ ದೂರವಿರುವುದರ ಕುರಿತು ಜಾಗರೂಕರಾಗಿರುವರು?

19, 20. (ಎ) ನಾವು ಕಡೇ ದಿವಸಗಳ ಅಂತ್ಯವನ್ನು ಸಮೀಪಿಸುತ್ತಿರುವಾಗ ಸೈತಾನನು ಯಾವ ಪ್ರಯತ್ನವನ್ನು ಮಾಡುವನೆಂಬ ವಿಷಯದಲ್ಲಿ ಖಾತರಿಯಿಂದಿರಬಲ್ಲೆವು? (ಬಿ) ನಾವು ಏನನ್ನು ಮಾಡಲು ದೃಢನಿಶ್ಚಯವುಳ್ಳವರಾಗಿರಬೇಕು?

[ಪುಟ 23ರಲ್ಲಿರುವ ಚಿತ್ರ]

ಯೇಸು ತನ್ನ ಬರೋಣವನ್ನು ಕಳ್ಳನ ಬರುವಿಕೆಗೆ ಹೋಲಿಸಿದನು

[ಪುಟ 24ರಲ್ಲಿರುವ ಚಿತ್ರ]

ಮಹಾ ಬಾಬೆಲಿನ ನಾಶನ ಸಮೀಪವಿದೆ

[ಪುಟ 25ರಲ್ಲಿರುವ ಚಿತ್ರಗಳು]

ನಾವು ಎಂದಿಗಿಂತಲೂ ಹೆಚ್ಚಿನ ಹುರುಪು ಮತ್ತು ದೃಢತೆಯುಳ್ಳವರಾಗಿ ಸಾರಿಹೇಳುವ ದೃಢಸಂಕಲ್ಪವನ್ನು ಇಟ್ಟುಕೊಳ್ಳೋಣ