ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ತಮ್ಮ ಹೆತ್ತವರ ಹೃದಯವನ್ನು ಸಂತೋಷಪಡಿಸಿದರು

ಅವರು ತಮ್ಮ ಹೆತ್ತವರ ಹೃದಯವನ್ನು ಸಂತೋಷಪಡಿಸಿದರು

ಅವರು ತಮ್ಮ ಹೆತ್ತವರ ಹೃದಯವನ್ನು ಸಂತೋಷಪಡಿಸಿದರು

“ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವದು.” (ಜ್ಞಾನೋಕ್ತಿ 23:15) ಮಕ್ಕಳು ದೈವಿಕ ವಿವೇಕವನ್ನು ಪಡೆದುಕೊಳ್ಳುವಾಗ ಅವರ ಕ್ರೈಸ್ತ ಹೆತ್ತವರು ಖಂಡಿತವಾಗಿಯೂ ಸಂತೋಷಪಡುತ್ತಾರೆ. 2005, ಸೆಪ್ಟೆಂಬರ್‌ 10ರ ಶನಿವಾರದಂದು, 6,859 ಮಂದಿಯನ್ನು ಒಳಗೊಂಡ ಒಂದು ಅಂತಾರಾಷ್ಟ್ರೀಯ ಗುಂಪು ‘ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌’ನ 119ನೇ ಪದವಿಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಿತ್ತು. ಎಲ್ಲರೂ ತುಂಬ ಸಂತೋಷದಿಂದಿದ್ದರು, ವಿಶೇಷವಾಗಿ 56 ಪದವೀಧರರ ಹೆತ್ತವರ ಸಂತೋಷಕ್ಕಂತೂ ಮಿತಿಯೇ ಇರಲಿಲ್ಲ.

ಯುನೈಟೆಡ್‌ ಸ್ಟೇಟ್ಸ್‌ನ ಬೆತೆಲ್‌ ಕುಟುಂಬದ ದೀರ್ಘಕಾಲದ ಸದಸ್ಯರಾಗಿರುವ ಡೇವಿಡ್‌ ವಾಕರ್‌ ಕಾರ್ಯಕ್ರಮವನ್ನು ಹೃತ್ಪೂರ್ವಕ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಅನಂತರ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಡೇವಿಡ್‌ ಸ್ಪ್ಲೇನ್‌ ಅವರು ಪದವೀಧರರ ತಂದೆ-ತಾಯಿಗಳಿಗೆ ಹೀಗೆ ಹೇಳುವ ಮೂಲಕ ಪದವಿಪ್ರದಾನ ಕಾರ್ಯಕ್ರಮವನ್ನು ಆರಂಭಿಸಿದರು: “ನೀವು ನಮ್ಮ ಹಾರ್ದಿಕ ಶ್ಲಾಘನೆಯನ್ನು ಪಡೆದುಕೊಳ್ಳಲು ಯೋಗ್ಯರಾಗಿದ್ದೀರಿ. ನಿಮ್ಮ ಮಕ್ಕಳಲ್ಲಿ ನೀವು ಬೆಳೆಸಿದ ಗುಣಗಳು ಮಿಷನೆರಿ ಸೇವೆಯನ್ನು ತಮ್ಮದಾಗಿಸಿಕೊಳ್ಳುವಂತೆ ಅವರಿಗೆ ಪ್ರೇರಿಸಿವೆ.” ಆ ಹೆತ್ತವರಿಗೆ, ತಮ್ಮ ಮಕ್ಕಳು ಶೀಘ್ರವೇ ದೂರದ ನೇಮಕಗಳಿಗೆ ಹೋಗಲಿದ್ದಾರೆ ಎಂಬ ಚಿಂತೆ ಇದ್ದಿರಬಹುದು. ಆದರೂ, ಸಹೋದರ ಸ್ಪ್ಲೇನ್‌ ಅವರಿಗೆ ಪುನರಾಶ್ವಾಸನೆ ನೀಡುತ್ತಾ ಹೀಗಂದರು: “ನಿಮ್ಮ ಮಕ್ಕಳ ಕುರಿತು ಚಿಂತಿಸಬೇಡಿ. ಯೆಹೋವನು ನಿಮಗಿಂತ ಹೆಚ್ಚು ಉತ್ತಮವಾಗಿ ಅವರ ಆರೈಕೆಯನ್ನು ಮಾಡಬಲ್ಲನು.” ಅನಂತರ ಅವರು ಹೇಳಿದ್ದು: “ನಿಮ್ಮ ಮಕ್ಕಳು ಸಾಧಿಸಲಿಕ್ಕಿರುವ ಒಳಿತಿನ ಕುರಿತು ಆಲೋಚಿಸಿರಿ. ನರಳುತ್ತಿರುವಂಥ ಜನರು ತಮ್ಮ ಜೀವನದಲ್ಲಿ ಪ್ರಥಮ ಬಾರಿಗೆ ನಿಜವಾದ ಸಾಂತ್ವನವನ್ನು ಪಡೆಯಲಿಕ್ಕಿದ್ದಾರೆ.”

ಇತರರಿಗೆ ಸಂತೋಷವನ್ನು ತರುತ್ತಾ ಮುಂದುವರಿಯುವ ವಿಧ

ಅಧ್ಯಕ್ಷರು ನಾಲ್ಕು ಭಾಷಣಕರ್ತರನ್ನು ಪರಿಚಯಿಸಿದರು. ಮೊದಲು, ಯುನೈಟೆಡ್‌ ಸ್ಟೇಟ್ಸ್‌ನ ಬ್ರಾಂಚ್‌ ಕಮಿಟಿಯಲ್ಲಿರುವ ರಾಲ್ಫ್‌ ವಾಲ್ಸ್‌, “ನಿಮ್ಮ ಕಣ್ಣುಗಳನ್ನು ತೆರೆದಿಡಿರಿ” ಎಂಬ ಶೀರ್ಷಿಕೆಯ ಕುರಿತು ಮಾತಾಡಿದರು. ಆಧ್ಯಾತ್ಮಿಕ ಕುರುಡುತನವು ಶಾರೀರಿಕ ಕುರುಡುತನಕ್ಕಿಂತ ಹೆಚ್ಚು ಕೆಟ್ಟದ್ದಾಗಿದೆ ಎಂಬುದನ್ನು ಅವರು ಒತ್ತಿಹೇಳಿದರು. ಲವೊದಿಕೀಯದಲ್ಲಿದ್ದ ಪ್ರಥಮ ಶತಮಾನದ ಸಭೆಯು ತನ್ನ ಆಧ್ಯಾತ್ಮಿಕ ದೃಷ್ಟಿಯನ್ನು ಕಳೆದುಕೊಂಡಿತ್ತು. ಆ ಸಭೆಯಲ್ಲಿ ಆಧ್ಯಾತ್ಮಿಕವಾಗಿ ಕುರುಡರಾಗಿದ್ದ ಕ್ರೈಸ್ತರಿಗೆ ಸಹಾಯವು ನೀಡಲ್ಪಟ್ಟಿತು. ಆದರೆ ನಮ್ಮ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆದೇ ಇಡುವುದರ ಮೂಲಕ ಇಂತಹ ಕುರುಡುತನವನ್ನು ದೂರವಿಡುವುದು ಎಷ್ಟೋ ಉತ್ತಮ. (ಪ್ರಕಟನೆ 3:14-18) ಭಾಷಣಕರ್ತರು ಹೇಳಿದ್ದು: “ನಿಮ್ಮ ಕಣ್ಣುಗಳನ್ನು ತೆರೆದಿಡಿ, ಮತ್ತು ಜವಾಬ್ದಾರಿಯುತ ಪುರುಷರನ್ನು ಯೆಹೋವನು ವೀಕ್ಷಿಸುವಂತೆಯೇ ವೀಕ್ಷಿಸಿರಿ.” ಸಭೆಯಲ್ಲಿ ಸಮಸ್ಯೆಗಳಿರುವುದಾದರೆ ಅದರ ಕುರಿತು ಪದವೀಧರರು ಅತಿಯಾಗಿ ಚಿಂತೆಗೊಳಗಾಗಬಾರದು. ಕರ್ತನಾದ ಯೇಸು ಕ್ರಿಸ್ತನಿಗೆ ಇದೆಲ್ಲಾದರ ಅರಿವಿದೆ. ಸರಿಯಾದ ಸಮಯಕ್ಕೆ ಇವೆಲ್ಲವೂ ಸರಿಪಡಿಸಲ್ಪಡುವಂತೆ ಅವನು ನೋಡಿಕೊಳ್ಳುವನು.

ಅನಂತರ, ಆಡಳಿತ ಮಂಡಲಿಯ ಸದಸ್ಯರಾದ ಸ್ಯಾಮ್‌ಯೆಲ್‌ ಹರ್ಡ್‌ ಅವರು “ನೀವು ಸಿದ್ಧರಾಗಿದ್ದೀರೋ?” ಎಂಬ ಪ್ರಶ್ನೆಗೆ ಉತ್ತರವನ್ನು ಕೊಟ್ಟರು. ಒಬ್ಬ ಪ್ರಯಾಣಿಕನು ತನಗೆ ಬೇಕಾಗುವ ಬಟ್ಟೆಬರೆಗಳನ್ನು ಹೇಗೆ ತೆಗೆದುಕೊಂಡು ಹೋಗುತ್ತಾನೋ ಹಾಗೆ, ಪದವೀಧರರು ಯಾವಾಗಲೂ ನೂತನ ವ್ಯಕ್ತಿತ್ವದ ಗುಣಗಳನ್ನು ಧರಿಸಿದವರಾಗಿರಬೇಕು. ಅವರಲ್ಲಿ ಯೇಸುವಿನಲ್ಲಿದ್ದ ಅನುಕಂಪ ಇರಬೇಕು. ಒಬ್ಬ ಕುಷ್ಠರೋಗಿಯು ಯೇಸುವಿಗೆ, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದಾಗ ಯೇಸು ಅವನಿಗೆ, “ನನಗೆ ಮನಸ್ಸುಂಟು; ಶುದ್ಧವಾಗು” ಎಂದು ಹೇಳಿದನು. (ಮಾರ್ಕ 1:40-42) ಭಾಷಣಕರ್ತರು ಅನಂತರ ಹೇಳಿದ್ದು: “ಜನರಿಗೆ ನೀವು ನಿಜವಾಗಿಯೂ ಸಹಾಯಮಾಡಲು ಬಯಸುವುದಾದರೆ, ಅದನ್ನು ಮಾಡಲು ನೀವು ಮಾರ್ಗವನ್ನು ಕಂಡುಕೊಳ್ಳುವಿರಿ.” ಕ್ರೈಸ್ತರು ‘ಇತರರನ್ನು ತಮಗಿಂತಲೂ ಶ್ರೇಷ್ಠರೆಂದು ಎಣಿಸಬೇಕು’ ಎಂದು ಫಿಲಿಪ್ಪಿ 2:3 ಹೇಳುತ್ತದೆ. ಸಹೋದರ ಹರ್ಡ್‌ ಹೇಳಿದ್ದು: “ಜ್ಞಾನವನ್ನು ಹೊಂದಿರುವುದಕ್ಕಿಂತ ಹೃದಯದಲ್ಲಿ ತಗ್ಗಿದವರಾಗಿರುವುದು ಹೆಚ್ಚು ಪ್ರಾಮುಖ್ಯ. ನೀವು ನಮ್ರರಾಗಿದ್ದರೆ ಮಾತ್ರ ಶುಶ್ರೂಷೆಯಲ್ಲಿ ನಿಮಗೆ ಸಿಗುವ ಜನರು ಮತ್ತು ಸಭೆಯಲ್ಲಿರುವ ಸಹೋದರ ಸಹೋದರಿಯರು ನಿಮ್ಮ ಜ್ಞಾನದಿಂದ ಪ್ರಯೋಜನವನ್ನು ಪಡೆಯುವರು.” ಪದವೀಧರರು ಕ್ರೈಸ್ತ ಪ್ರೀತಿಯೆಂಬ ವಸ್ತ್ರವನ್ನು ಧರಿಸಿದವರಾಗಿ ಉಳಿಯುವುದಾದರೆ, ಅವರು ತಮ್ಮ ನೇಮಕಗಳಿಗೆ ಪ್ರಯಾಣಿಸಲು ಸಿದ್ಧರು ಮತ್ತು ಅವರಿಗೆ ಖಂಡಿತ ಯಶಸ್ವಿಯಾಗುವುದು ಎಂದು ತಿಳಿಸುತ್ತಾ ಸಹೋದರ ಹರ್ಡ್‌ ತಮ್ಮ ಭಾಷಣವನ್ನು ಸಮಾಪ್ತಿಗೊಳಿಸಿದರು.​—⁠ಕೊಲೊಸ್ಸೆ 3:⁠14.

ಗಿಲ್ಯಡ್‌ ಶಿಕ್ಷಕರಲ್ಲಿ ಒಬ್ಬರಾದ ಮಾರ್ಕ್‌ ನೂಮ್ಯಾರ್‌, “ನೀವು ಅದನ್ನು ಕಾಪಾಡಿಕೊಳ್ಳುವಿರೋ?” ಎಂಬ ತಮ್ಮ ಭಾಷಣದ ಶೀರ್ಷಿಕೆಯಿಂದ ಕುತೂಹಲವನ್ನು ಎಬ್ಬಿಸಿದರು. “ಅದನ್ನು” ಎಂಬುದು, ಯೆಹೋವನ ಒಳ್ಳೇತನಕ್ಕಾಗಿರುವ ಕೃತಜ್ಞತಾಭಾವವನ್ನು ಸೂಚಿಸುತ್ತದೆ. ಕೀರ್ತನೆ 103:2 ಹೇಳುವುದು: “ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.” ಇಸ್ರಾಯೇಲ್ಯರು ತಮ್ಮನ್ನು ಜೀವಂತವಾಗಿರಿಸಿದ ಮನ್ನವನ್ನು “ನಿಸ್ಸಾರವಾದ ಆಹಾರ” ಎಂದು ಕರೆಯುವ ಮೂಲಕ ಕೃತಜ್ಞತೆಯ ಕೊರತೆಯನ್ನು ತೋರಿಸಿದರು. (ಅರಣ್ಯಕಾಂಡ 21:5) ಕಾಲ ಸಂದಂತೆ ಮನ್ನದ ಮೌಲ್ಯವು ಬದಲಾಗಲಿಲ್ಲ, ಆದರೆ ಅದಕ್ಕಾಗಿದ್ದ ಅವರ ಗಣ್ಯತೆಯು ಕಣ್ಮರೆಯಾಯಿತು. ಸಹೋದರ ನೂಮ್ಯಾರ್‌ ಹೇಳಿದ್ದು: “ನೀವು ಯೆಹೋವನ ಉಪಕಾರಗಳನ್ನು ಮರೆಯುವುದಾದರೆ ಮತ್ತು ನಿಮ್ಮ ವಿದೇಶೀ ಸೇವೆಯನ್ನು ಅಮುಖ್ಯವಾದದ್ದಾಗಿ ಪರಿಣಮಿಸಲು ಬಿಡುವುದಾದರೆ, ಅದು ಯೆಹೋವನು ನಿಮಗೆ ನೇಮಿಸಿರುವ ಕೆಲಸವನ್ನು ನೀವು ವೀಕ್ಷಿಸುವ ರೀತಿಯನ್ನು ಪ್ರಭಾವಿಸುವುದು.” ಯೆಹೋವನು ‘[ಪ್ರೀತಿಪೂರ್ವಕ ದಯೆಯೆಂಬ] ಕಿರೀಟದಿಂದ ನಿಮ್ಮನ್ನು ಶೃಂಗರಿಸುತ್ತಾನೆ’ ಎಂದು ಕೀರ್ತನೆ 103:4 ಹೇಳುತ್ತದೆ. ಪದವೀಧರರು ತಮ್ಮ ಹೊಸ ಸಭೆಗಳಲ್ಲಿ ದೇವರ ಪ್ರೀತಿಪೂರ್ವಕ ದಯೆಯನ್ನು ಅನುಭವಿಸುವರು.

ಮತ್ತೊಬ್ಬ ಗಿಲ್ಯಡ್‌ ಶಿಕ್ಷಕರಾದ ಲಾರನ್ಸ್‌ ಬೋವನ್‌, “ಆಶೀರ್ವಾದಗಳು ನಿಮಗೆ ಪ್ರಾಪ್ತವಾಗುವವೋ?” ಎಂಬ ವಿಷಯವಸ್ತುವಿನ ಕುರಿತು ಮಾತಾಡಿದರು. ಗಿಲ್ಯಡ್‌ನ 119ನೇ ತರಗತಿಯ ಸದಸ್ಯರು ಯಶಸ್ವಿದಾಯಕ ಮಿಷನೆರಿಗಳಾಗಲು ಕಷ್ಟಪಟ್ಟು ತರಬೇತಿಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಆದರೆ ಈಗ ಅವರು ಯೆಹೋವನಿಗೆ ಮತ್ತು ಆತನು ಅವರಿಗೆ ನೇಮಿಸಿರುವ ಕೆಲಸಕ್ಕೆ ಒತ್ತಾಗಿ ಉಳಿಯಬೇಕಾಗಿದೆ. ಪ್ರಕಟನೆ 14:​1-4ರಲ್ಲಿ 1,44,000 ಮಂದಿಯನ್ನು, “ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು” ಎಂದು ವರ್ಣಿಸಲಾಗಿದೆ. ತಾವು ಎದುರಿಸಬೇಕಾಗಿರುವ ಪರೀಕ್ಷೆಗಳ ಹೊರತಾಗಿಯೂ ಆ ಗುಂಪಿನಲ್ಲಿರುವ ಎಲ್ಲರೂ ಯೆಹೋವನಿಗೆ ಹಾಗೂ ಆತನ ಕುಮಾರನಿಗೆ ನಿಷ್ಠೆಯಿಂದ ಅಂಟಿಕೊಳ್ಳುತ್ತಾರೆ ಮತ್ತು ಅವರ ಗುರಿಯನ್ನು ಸಾಧಿಸುತ್ತಾರೆ. “ಏನೇ ಬರಲಿ, ನಾವು ಸಹ ಯೆಹೋವನಿಗೆ ಮತ್ತು ಆತನು ನೇಮಿಸಿರುವ ಕೆಲಸಕ್ಕೆ ನಿಷ್ಠೆಯಿಂದ ಅಂಟಿಕೊಳ್ಳೋಣ” ಎಂದು ಭಾಷಣಕರ್ತರು ಹೇಳಿದರು. ಹೀಗೆ ಮಾಡುವ ಮೂಲಕ, ಪದವೀಧರರು ಯೆಹೋವನ ಆಶೀರ್ವಾದಗಳು ತಮಗೆ ‘ಪ್ರಾಪ್ತವಾಗುವದನ್ನು’ ಕಾಣುವರು.​—⁠ಧರ್ಮೋಪದೇಶಕಾಂಡ 28:⁠2.

ತಮ್ಮ ಸೇವೆಯಲ್ಲಿ ಫಲಗಳನ್ನು ಉತ್ಪಾದಿಸುವುದು

ಶಾಲಾ ವ್ಯಾಸಂಗದ ಪ್ರತಿ ವಾರಾಂತ್ಯದಲ್ಲಿ, ವಿದ್ಯಾರ್ಥಿಗಳು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಿದರು. ಶಾಲೆಯ ರೆಜಿಸ್ಟ್ರಾರ್‌ರಾದ ವಾಲಸ್‌ ಲಿವರನ್ಸ್‌ರವರು ಕಾರ್ಯಕ್ರಮದಲ್ಲಿ ಮಾತಾಡಿದಾಗ, ವಿದ್ಯಾರ್ಥಿಗಳು ತಮ್ಮ ಸೇವೆಯಲ್ಲಿ ಯಶಸ್ಸನ್ನು ಪಡೆದಿದ್ದರು ಎಂಬುದು ವ್ಯಕ್ತವಾಯಿತು. ಅವರು ಕಡಿಮೆಪಕ್ಷ ಹತ್ತು ಭಾಷೆಗಳಲ್ಲಿ ಸುವಾರ್ತೆಯನ್ನು ಸಾರಿದ್ದರು ಮತ್ತು ಅನೇಕ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದ್ದರು. ಈ ತರಗತಿಯಲ್ಲಿದ್ದ ಒಬ್ಬ ಗಿಲ್ಯಡ್‌ ದಂಪತಿ ಒಬ್ಬ ಚೈನೀಸ್‌ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದರು. ಎರಡು ಭೇಟಿಗಳು ಮಾಡಿದ ಮೇಲೆ ಅವರು ಅವನಿಗೆ, ‘ಯೆಹೋವನ ಕುರಿತು ತಿಳಿದುಕೊಳ್ಳುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ’ ಎಂದು ಕೇಳಿದರು. ಅವನು ತನ್ನ ಬೈಬಲನ್ನು ತೆರೆದು, ಯೋಹಾನ 17:3ನ್ನು ಓದುವಂತೆ ಆ ದಂಪತಿಗೆ ಹೇಳಿದನು. ತಾನು ಜೀವದ ಹಾದಿಯಲ್ಲಿ ನಡೆಯುತ್ತಿದ್ದೇನೆ ಎಂದು ಅವನಿಗನಿಸಿತು.

ಅನಂತರ, ಆಡಳಿತ ಮಂಡಲಿಯ ಸದಸ್ಯರಾದ ಆ್ಯಂಥನೀ ಮಾರಿಸ್‌ರವರು, ಎಕ್ವಡಾರ್‌, ಕೋಟ್‌ಡೀವಾರ್‌ ಮತ್ತು ಡೊಮಿನಿಕನ್‌ ರಿಪಬ್ಲಿಕ್‌ನ ಬ್ರಾಂಚ್‌ ಕಮಿಟಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಸಹೋದರರನ್ನು ಇಂಟರ್‌ವ್ಯೂ ಮಾಡಿದರು. ಬ್ರಾಂಚ್‌ ಕಮಿಟಿಗಳು ಪದವೀಧರರ ಆಗಮನಕ್ಕಾಗಿ ಎದುರುನೋಡುತ್ತಿವೆ ಮತ್ತು ಅವರು ತಮ್ಮ ನೇಮಕಗಳಿಗೆ ಹೊಂದಿಕೊಳ್ಳಲು ಬೇಕಾದ ಸಹಾಯವನ್ನು ಅವು ನೀಡುವವು ಎಂದು ಆ ಸಹೋದರರು ಪುನರಾಶ್ವಾಸನೆ ನೀಡಿದರು.

ತರುವಾಯ, ಯುನೈಟೆಡ್‌ ಸ್ಟೇಟ್ಸ್‌ನ ಬೆತೆಲ್‌ ಕುಟುಂಬದ ಸದಸ್ಯರಾಗಿರುವ ಲೆನರ್ಡ್‌ ಪಿಯರ್ಸನ್‌ರವರು, ಡೆಮಾಕ್ರೆಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ, ಪ್ಯಾಪುವ ನ್ಯೂ ಗಿನೀ ಮತ್ತು ಯುಗಾಂಡದ ಮೂವರು ಬ್ರಾಂಚ್‌ ಕಮಿಟಿ ಸದಸ್ಯರೊಂದಿಗೆ ಮಾತಾಡಿದರು. ಕ್ಷೇತ್ರ ಶುಶ್ರೂಷೆಯಲ್ಲಿ ಸಂಪೂರ್ಣವಾಗಿ ತೊಡಗುವಂತೆ ಈ ಸಹೋದರರು ಪದವೀಧರರನ್ನು ಪ್ರೋತ್ಸಾಹಿಸಿದರು. ಕಾಂಗೊವಿನಲ್ಲಿ 21 ವರ್ಷಗಳನ್ನು ಕಳೆದಿರುವ ಒಬ್ಬ ಮಿಷನೆರಿ ದಂಪತಿ, ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ 60 ಜನರಿಗೆ ಸಹಾಯಮಾಡಿದ್ದಾರೆ. ಈಗ ಈ ದಂಪತಿ 30 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಾರೆ, ಮತ್ತು ಅವರ ವಿದ್ಯಾರ್ಥಿಗಳಲ್ಲಿ 22 ಮಂದಿ ಸಭಾ ಕೂಟಗಳಿಗೆ ಹಾಜರಾಗುತ್ತಾರೆ. ಇಷ್ಟು ದೊಡ್ಡ ಆಧ್ಯಾತ್ಮಿಕ ಕೊಯ್ಲು ಕಾದಿರುವಾಗ, ಒಬ್ಬ ಮಿಷನೆರಿಯಾಗಿ ಸೇವೆಮಾಡಲು ಇದು ಅತ್ಯುತ್ತಮ ಸಮಯವಾಗಿದೆ.

ತುರ್ತುಪ್ರಜ್ಞೆಯೊಂದಿಗೆ ಸಾಕ್ಷಿಯನ್ನು ನೀಡುವುದು

ಆಡಳಿತ ಮಂಡಲಿಯ ಸದಸ್ಯರಾಗಿರುವ ಗೆರಿಟ್‌ ಲೋಶ್‌ರವರು ಅಂತಿಮ ಭಾಷಣವನ್ನು ನೀಡಿದರು. ಅವರ ಶೀರ್ಷಿಕೆಯು, “ಕರ್ತನ ದಿನದಲ್ಲಿ ದೇವರ ಕುರಿತಾಗಿ ಮಾತಾಡುವುದು ಮತ್ತು ಯೇಸುವಿನ ಕುರಿತು ಸಾಕ್ಷಿಯನ್ನು ನೀಡುವುದು” ಎಂದಾಗಿತ್ತು. ಪ್ರಕಟನೆ ಪುಸ್ತಕದಲ್ಲಿ “ಸಾಕ್ಷಿಯ,” “ಸಾಕ್ಷಿಗಳು” ಮತ್ತು “ಸಾಕ್ಷಿಕೊಟ್ಟು” ಎಂಬ ಪದಗಳು 19 ಬಾರಿ ಕಾಣಬರುತ್ತವೆ. ಆದುದರಿಂದ, ತನ್ನ ಜನರು ಯಾವ ಕೆಲಸವನ್ನು ಮಾಡುವಂತೆ ಯೆಹೋವನು ಅಪೇಕ್ಷಿಸುತ್ತಾನೆ ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲ. ನಾವು ಇಂತಹ ಸಾಕ್ಷಿಯನ್ನು ಯಾವಾಗ ಕೊಡಬೇಕು? “ಕರ್ತನ ದಿನದಲ್ಲಿ.” (ಪ್ರಕಟನೆ 1:9, 10) ಆ ದಿನವು 1914ರಲ್ಲಿ ಆರಂಭಗೊಂಡಿತು, ನಮ್ಮ ದಿನದಲ್ಲಿ ನಡೆಯುತ್ತಿದೆ ಮತ್ತು ಭವಿಷ್ಯತ್ತಿನಲ್ಲೂ ಮುಂದುವರಿಯುವುದು. ಪ್ರಕಟನೆ 14:​6, 7ಕ್ಕನುಸಾರವಾಗಿ, ದೇವರ ಕುರಿತಾಗಿ ಮಾತಾಡುವ ಕೆಲಸಕ್ಕೆ ದೇವದೂತರ ಬೆಂಬಲವಿದೆ. ಯೇಸುವಿನ ಕುರಿತು ಸಾಕ್ಷಿಯನ್ನು ನೀಡುವ ಕೆಲಸವನ್ನು ನಿರ್ದೇಶಿಸುವ ಜವಾಬ್ದಾರಿಯು ಅಭಿಷಿಕ್ತ ಕ್ರೈಸ್ತರ ಉಳಿಕೆಯವರಿಗೆ ವಹಿಸಲ್ಪಟ್ಟಿದೆ ಎಂದು ಪ್ರಕಟನೆ 22:17 ತೋರಿಸುತ್ತದೆ. ಆದರೆ ನಾವೆಲ್ಲರೂ ಆ ಸದವಕಾಶದ ಪ್ರಯೋಜನವನ್ನು ಈಗ ಪಡೆದುಕೊಳ್ಳಬೇಕು. ವಚನ 20ರಲ್ಲಿ, ಯೇಸು “ಬೇಗ ಬರುತ್ತೇನೆ” ಎಂದು ಹೇಳುತ್ತಿರುವಂತೆ ದಾಖಲಿಸಲಾಗಿದೆ. ಸಹೋದರ ಲೋಶ್‌ ಹಾಜರಿದ್ದ ಎಲ್ಲರನ್ನೂ ಉತ್ತೇಜಿಸುತ್ತಾ ಹೇಳಿದ್ದು: “‘ಬನ್ನಿರಿ, ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಿರಿ’ ಎಂದು ಜನರಿಗೆ ಕೂಗಿಹೇಳೋಣ. ಯೇಸು ಬೇಗ ಬರುತ್ತಾನೆ. ನಾವು ಸಿದ್ಧರಾಗಿದ್ದೇವೋ?”

ಹನ್ನೊಂದು ವರ್ಷ ಗಿಲ್ಯಡ್‌ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಫ್ರೆಡ್‌ ರಸ್ಕ್‌ರವರು ಉಪಕಾರಸ್ತುತಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಅವರ ಪ್ರಾರ್ಥನೆಯು ಹಾಜರಿದ್ದವರೆಲ್ಲರ ಹೃದಯವನ್ನು ಸ್ಪರ್ಶಿಸಿತು. ಮಹಾ ಸಂತೋಷದ ಸಂದರ್ಭವಾಗಿದ್ದ ಆ ದಿನಕ್ಕೆ ಅದು ಸೂಕ್ತವಾದ ಮುಕ್ತಾಯವಾಗಿತ್ತು.

[ಪುಟ 13ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 10

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 25

ವಿದ್ಯಾರ್ಥಿಗಳ ಸಂಖ್ಯೆ: 56

ಸರಾಸರಿ ಪ್ರಾಯ: 32.5

ಸತ್ಯದಲ್ಲಿ ಸರಾಸರಿ ವರ್ಷಗಳು: 16.4

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.1

[ಪುಟ 15ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 119ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ಹೆಲ್ಗಸನ್‌, ಎಸ್‌.; ಡೌಗಾರ್‌, ಏಚ್‌.; ಪ್ಯರ್‌ಲೂಈಸೀ, ಏ.; ಜೋಸಫ್‌, ಐ.; ರಾಕನೆಲೀ, ಸೀ. (2) ಬರ್ಜ್‌, ಟೀ.; ಬಟ್ಲರ್‌, ಡೀ.; ಫ್ರೀಡ್ಲನ್‌, ಜೇ.; ನೂನ್ಯೆಸ್‌, ಕೇ.; ಪಾವಾಸೋ, ಸೀ.; ಡೂಮನ್‌, ಟೀ. (3) ಕಾಮಾಚೋ, ಓ.; ಲಿಂಡ್‌ಕ್ವಿಸ್ಟ್‌, ಎಲ್‌.; ಬ್ರೂಮರ್‌, ಏ.; ವೆಸಲ್ಸ್‌, ಈ.; ಬರ್ಟನ್‌, ಜೇ.; ವುಡ್‌ಹೌಸ್‌, ಓ.; ಡೂಮನ್‌, ಏ. (4) ಟೀರೀಯೋನ್‌, ಏ.; ಕಾನಲೀ, ಎಲ್‌.; ಫೂರ್ನ್ಯೇ, ಸೀ.; ಗಿಲ್‌, ಏ.; ಯೂನ್‌ಸಾನ್‌, ಕೇ.; ಹ್ಯಾಮಿಲ್ಟನ್‌, ಎಲ್‌. (5) ಬರ್ಡ್‌, ಡೀ.; ಸ್ಕ್ರಿಬ್ನರ್‌, ಐ.; ಕಾಮಾಚೋ, ಬಿ.; ಲಾಷಿನ್‌ಸ್ಕೀ, ಏಚ್‌.; ಹ್ಯಾಲಹ್ಯಾನ್‌, ಎಮ್‌.; ಲೀಬೂಡಾ, ಓ. (6) ಜೋಸಫ್‌, ಏ.; ಲಿಂಡ್‌ಕ್ವಿಸ್ಟ್‌, ಎಮ್‌.; ಹೆಲ್ಗಸನ್‌, ಸೀ.; ನೂನ್ಯೆಸ್‌, ಡೀ.; ಸ್ಕ್ರಿಬ್ನರ್‌, ಎಸ್‌.; ಫೂರ್ನ್ಯೇ, ಜೇ. (7) ಪ್ಯರ್‌ಲೂಈಸೀ, ಎಫ್‌.; ಪಾವಾಸೋ, ಟೀ.; ಬ್ರೂಮರ್‌, ಸೀ.; ರಾಕನೆಲೀ, ಪೀ.; ಬಟ್ಲರ್‌, ಟೀ.; ವುಡ್‌ಹೌಸ್‌, ಎಮ್‌.; ಲೀಬೂಡಾ, ಜೇ. (8) ಲಾಷಿನ್‌ಸ್ಕೀ, ಎಮ್‌.; ಫ್ರೀಡ್ಲನ್‌, ಎಸ್‌.; ಬರ್ಟನ್‌, ಐ.; ಟೀರೀಯೋನ್‌, ಎಮ್‌.; ಬರ್ಡ್‌, ಎಮ್‌.; ಬರ್ಜ್‌, ಜೇ. (9) ವೆಸಲ್ಸ್‌, ಟೀ.; ಹ್ಯಾಲಹ್ಯಾನ್‌, ಡೀ.; ಕಾನಲೀ, ಎಸ್‌.; ಗಿಲ್‌, ಡೀ.; ಡೌಗಾರ್‌, ಪೀ.; ಹ್ಯಾಮಿಲ್ಟನ್‌, ಎಸ್‌.; ಯೂನ್‌ಸಾನ್‌, ಟೀ.