ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಂಟು ಮಕ್ಕಳನ್ನು ಯೆಹೋವನ ಮಾರ್ಗಗಳಲ್ಲಿ ಬೆಳೆಸುವುದು ಪಂಥಾಹ್ವಾನಕರವೂ ಆನಂದದಾಯಕವೂ ಆಗಿತ್ತು

ಎಂಟು ಮಕ್ಕಳನ್ನು ಯೆಹೋವನ ಮಾರ್ಗಗಳಲ್ಲಿ ಬೆಳೆಸುವುದು ಪಂಥಾಹ್ವಾನಕರವೂ ಆನಂದದಾಯಕವೂ ಆಗಿತ್ತು

ಜೀವನ ಕಥೆ

ಎಂಟು ಮಕ್ಕಳನ್ನು ಯೆಹೋವನ ಮಾರ್ಗಗಳಲ್ಲಿ ಬೆಳೆಸುವುದು ಪಂಥಾಹ್ವಾನಕರವೂ ಆನಂದದಾಯಕವೂ ಆಗಿತ್ತು

ಜಸ್‌ಲಿನ್‌ ವ್ಯಾಲನ್‌ಟೈನ್‌ ಅವರು ಹೇಳಿದಂತೆ

ಇಸವಿ 1989ರಲ್ಲಿ ನನ್ನ ಗಂಡ ಕೆಲಸಕ್ಕಾಗಿ ಇನ್ನೊಂದು ದೇಶಕ್ಕೆ ಹೋದರು. ಹೋಗುವ ಮುಂಚೆ, ನಾನು ನನ್ನ ಎಂಟು ಮಕ್ಕಳನ್ನು ನೋಡಿಕೊಳ್ಳಸಾಧ್ಯವಾಗುವಂತೆ ಹಣವನ್ನು ಕಳುಹಿಸುವುದಾಗಿ ಅವರು ಮಾತುಕೊಟ್ಟಿದ್ದರು. ವಾರಗಳು ಕಳೆದವಾದರೂ ಅವರಿಂದ ಯಾವುದೇ ಸುದ್ದಿ ಬರಲಿಲ್ಲ. ತಿಂಗಳುಗಳು ಕಳೆದವು ಆದರೂ ನನ್ನ ಗಂಡನಿಂದ ಯಾವುದೇ ಸುದ್ದಿಯಿಲ್ಲ. ‘ಅವರ ಪರಿಸ್ಥಿತಿಯು ಸರಿಯಾದ ಕೂಡಲೆ ಅವರು ಮನೆಗೆ ಬರುವರು’ ಎಂದು ನನ್ನನ್ನೇ ನಾನು ಸಮಾಧಾನಮಾಡಿಕೊಳ್ಳುತ್ತಿದ್ದೆ.

ನನ್ನ ಕುಟುಂಬವನ್ನು ನೋಡಿಕೊಳ್ಳಲು ಹಣಕಾಸು ಇಲ್ಲದಿದ್ದ ಕಾರಣ ನಾನು ಹತಾಶಳಾದೆ. ಏನು ಸಂಭವಿಸಿತೊ ಅದನ್ನು ನಂಬಲು ಇಷ್ಟವಿಲ್ಲದ್ದರಿಂದ, ‘ಅವರು ತನ್ನ ಕುಟುಂಬಕ್ಕೆ ಹೇಗೆ ತಾನೇ ಹೀಗೆ ಮಾಡಸಾಧ್ಯವಿದೆ?’ ಎಂದು ಅನೇಕ ನಿದ್ರಾರಹಿತ ರಾತ್ರಿಗಳಲ್ಲಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಕ್ರಮೇಣ, ನನ್ನ ಗಂಡ ನಮ್ಮನ್ನು ತ್ಯಜಿಸಿ ಹೋದರೆಂಬ ನಿಜತ್ವವನ್ನು ನಾನು ಸ್ವೀಕರಿಸಿದೆ. ಇಂದು ಅಂದರೆ ಅವರು ನಮ್ಮನ್ನು ಬಿಟ್ಟುಹೋಗಿ 16 ವರುಷಗಳು ಕಳೆದ ಅನಂತರವೂ ಅವರಿನ್ನೂ ಹಿಂದಿರುಗಿಲ್ಲ. ಇದರ ಫಲಿತಾಂಶವಾಗಿ, ನನ್ನ ಮಕ್ಕಳನ್ನು ಸಂಗಾತಿಯ ಸಹಾಯವಿಲ್ಲದೆ ನಾನೊಬ್ಬಳೇ ಸಾಕಿಸಲಹಿದೆ. ಇದೊಂದು ಪಂಥಾಹ್ವಾನವಾಗಿತ್ತು, ಆದರೆ ನನ್ನ ಮಕ್ಕಳು ಯೆಹೋವನ ಮಾರ್ಗಗಳನ್ನು ತಮ್ಮದಾಗಿ ಮಾಡಿಕೊಂಡಿರುವುದು ನನಗೆ ಅಪಾರ ಆನಂದವನ್ನು ನೀಡಿದೆ. ಕುಟುಂಬವಾಗಿ ನಾವು ಹೇಗೆ ನಿಭಾಯಿಸಿಕೊಂಡು ಹೋದೆವೆಂದು ತಿಳಿಸುವ ಮುಂಚೆ, ನನ್ನ ಬಾಲ್ಯದ ಕುರಿತು ತಿಳಿಸಲು ಬಯಸುತ್ತೇನೆ.

ಬೈಬಲಿನ ಮಾರ್ಗದರ್ಶನಕ್ಕಾಗಿ ಹುಡುಕುವುದು

ನಾನು 1938ರಲ್ಲಿ ಜಮೇಕಾದ ಕರಿಬೀಅನ್‌ ದ್ವೀಪದಲ್ಲಿ ಜನಿಸಿದೆ. ತಂದೆಯವರು ಯಾವುದೇ ಚರ್ಚಿನ ಸದಸ್ಯರಾಗಿರದಿದ್ದರೂ, ದೇವಭಯವುಳ್ಳ ವ್ಯಕ್ತಿಯಾಗಿದ್ದರು. ರಾತ್ರಿಯಲ್ಲಿ ಬೈಬಲಿನ ಕೀರ್ತನೆ ಪುಸ್ತಕದಿಂದ ತಮಗೆ ಓದಿಹೇಳುವಂತೆ ಅವರು ಅನೇಕವೇಳೆ ನನ್ನನ್ನು ಕೇಳಿಕೊಳ್ಳುತ್ತಿದ್ದರು. ಬೇಗನೆ, ಅನೇಕ ಕೀರ್ತನೆಗಳನ್ನು ನಾನು ಬಾಯಿಪಾಠವಾಗಿ ಹೇಳಶಕ್ತಳಾದೆ. ತಾಯಿಯವರು ಸ್ಥಳಿಕ ಚರ್ಚಿನ ಸದಸ್ಯರಾಗಿದ್ದರು ಮತ್ತು ಆಗಾಗ ಧಾರ್ಮಿಕ ಕೂಟಗಳಿಗೆ ನನ್ನನ್ನು ಕರೆದೊಯ್ಯುತ್ತಿದ್ದರು.

ಆ ಕೂಟಗಳಲ್ಲಿ, ದೇವರು ಒಳ್ಳೇ ಜನರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ ಮತ್ತು ಕೆಟ್ಟ ಜನರನ್ನು ಸದಾಕಾಲ ನರಕಾಗ್ನಿಯಲ್ಲಿ ಸುಡುತ್ತಿರುತ್ತಾನೆ ಎಂದು ನಮಗೆ ಹೇಳಲಾಯಿತು. ಮಾತ್ರವಲ್ಲದೆ, ಯೇಸು ದೇವರಾಗಿದ್ದಾನೆ ಮತ್ತು ಅವನು ಮಕ್ಕಳನ್ನು ಪ್ರೀತಿಸುತ್ತಾನೆ ಎಂಬುದಾಗಿಯೂ ನಮಗೆ ಹೇಳಲಾಯಿತು. ನಾನು ಬಹಳ ಗಲಿಬಿಲಿಗೊಳಗಾದೆ ಮತ್ತು ದೇವರೆಂದರೆ ನನಗೆ ಭಯವಾಗುತ್ತಿತ್ತು. ‘ನಮ್ಮನ್ನು ಪ್ರೀತಿಸುವ ದೇವರು ಜನರನ್ನು ಅಗ್ನಿಯಲ್ಲಿ ಹೇಗೆ ಯಾತನೆಗೊಳಪಡಿಸಬಲ್ಲನು?’ ಎಂಬುದಾಗಿ ನಾನು ಚಿಂತಿಸುತ್ತಿದ್ದೆ.

ನರಕಾಗ್ನಿಯ ಆಲೋಚನೆಯೇ ನನ್ನಲ್ಲಿ ಭಯವನ್ನು ಉಂಟುಮಾಡುತ್ತಿತ್ತು. ಸಮಯಾನಂತರ, ಸೆವೆಂತ್‌-ಡೇ ಆ್ಯಡ್ವೆಂಟಿಸ್ಟ್‌ ಚರ್ಚಿನಿಂದ ಪತ್ರವ್ಯವಹಾರದ ಮೂಲಕ ಏರ್ಪಡಿಸಲ್ಪಟ್ಟ ಬೈಬಲ್‌ ಶಿಕ್ಷಣಕ್ರಮವನ್ನು ನಾನು ಸ್ವೀಕರಿಸಿದೆ. ಕೆಟ್ಟ ಜನರು ಸದಾಕಾಲ ಯಾತನೆಯನ್ನು ಅನುಭವಿಸುವುದಿಲ್ಲ, ಬದಲಾಗಿ ಬೆಂಕಿಯಲ್ಲಿ ಸುಟ್ಟು ಭಸ್ಮವಾಗುತ್ತಾರೆ ಎಂದು ಅವರು ಕಲಿಸಿದರು. ಇದು ಹೆಚ್ಚು ತರ್ಕಬದ್ಧವಾಗಿ ತೋರಿತು ಮತ್ತು ನಾನು ಅವರ ಧಾರ್ಮಿಕ ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಆದರೆ ನಾನು ಅವರ ಕಲಿಸುವಿಕೆಯನ್ನೂ ಗಲಿಬಿಲಿಗೊಳಿಸುವಂಥದ್ದಾಗಿ ಕಂಡುಕೊಂಡೆ ಮತ್ತು ನಾನೇನನ್ನು ಕಲಿತುಕೊಂಡೆನೊ ಅದು, ನೈತಿಕತೆಯ ಬಗ್ಗೆ ನನಗಿದ್ದ ತಪ್ಪಾದ ನೋಟವನ್ನು ಸರಿಪಡಿಸಲಿಲ್ಲ.

ಆ ಸಮಯದಲ್ಲಿ, ವ್ಯಭಿಚಾರವು ತಪ್ಪಾಗಿದೆ ಎಂದು ಜನರು ಸಾಮಾನ್ಯವಾಗಿ ಒಪ್ಪುತ್ತಿದ್ದರು. ಆದರೆ, ಅನೇಕ ಜೊತೆಗಾರರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದು ಮಾತ್ರ ವ್ಯಭಿಚಾರವಾಗಿದೆ ಎಂಬುದಾಗಿ ನಾನು ಮತ್ತು ಇನ್ನಿತರರು ನಂಬುತ್ತಿದ್ದೆವು. ಹೀಗಾಗಿ, ಇಬ್ಬರು ಅವಿವಾಹಿತ ವ್ಯಕ್ತಿಗಳು ಲೈಂಗಿಕ ಸಂಬಂಧವನ್ನು ತಮ್ಮಲ್ಲಿಯೇ ಸೀಮಿತವಾಗಿಟ್ಟುಕೊಂಡರೆ ಅದು ತಪ್ಪಲ್ಲ ಎಂದು ನಾವು ನೆನಸುತ್ತಿದ್ದೆವು. (1 ಕೊರಿಂಥ 6:9, 10; ಇಬ್ರಿಯ 13:4) ಈ ನಂಬಿಕೆಯು, ನಾನು ಆರು ಮಕ್ಕಳಿಗೆ ಅವಿವಾಹಿತ ತಾಯಿಯಾಗುವಂತೆ ನಡೆಸಿತು.

ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವುದು

ಇಸವಿ 1965ರಲ್ಲಿ, ವ್ಯಾಸ್‌ಲಿನ್‌ ಗುಡ್‌ಇಸನ್‌ ಮತ್ತು ಎಥೆಲ್‌ ಚೇಂಬರ್ಸ್‌ರವರು ಹತ್ತಿರದ ಸಮುದಾಯವಾದ ಬಾತ್‌ನಲ್ಲಿ ವಾಸಿಸಲು ಬಂದರು. ಅವರು ಪಯನೀಯರರಾಗಿದ್ದರು ಅಥವಾ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಾಗಿದ್ದರು. ಒಂದು ದಿನ ಅವರು ನಮ್ಮ ತಂದೆಯೊಂದಿಗೆ ಮಾತಾಡಿದರು. ತಂದೆಯವರು ಮನೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡರು. ನಾನು ಮನೆಯಲ್ಲಿರುವಾಗಲೆಲ್ಲ ಅವರು ನನ್ನೊಂದಿಗೂ ಮಾತಾಡುತ್ತಿದ್ದರು. ಯೆಹೋವನ ಸಾಕ್ಷಿಗಳನ್ನು ನಾನು ಸಂಶಯ ಮನೋಭಾವದಿಂದ ವೀಕ್ಷಿಸುತ್ತಿದ್ದೆನಾದರೂ, ಅವರನ್ನು ತಪ್ಪೆಂದು ರುಜುಪಡಿಸಲು ಅವರೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಲು ನಿರ್ಧರಿಸಿದೆ.

ಅಧ್ಯಯನದ ಸಮಯದಲ್ಲಿ ನಾನು ಅನೇಕಾನೇಕ ಪ್ರಶ್ನೆಗಳನ್ನು ಕೇಳಿದೆ, ಮತ್ತು ಸಾಕ್ಷಿಗಳು ಬೈಬಲನ್ನು ಉಪಯೋಗಿಸುತ್ತಾ ಅವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಅವರ ಸಹಾಯದಿಂದ, ಸತ್ತವರು ಪ್ರಜ್ಞಾರಹಿತರಾಗಿದ್ದಾರೆ ಮತ್ತು ನರಕದಲ್ಲಿ ಯಾತನೆಯನ್ನು ಅನುಭವಿಸುವುದಿಲ್ಲ ಎಂಬುದನ್ನು ನಾನು ಕಂಡುಕೊಂಡೆ. (ಪ್ರಸಂಗಿ 9:5, 10) ಭೂಪರದೈಸಿನಲ್ಲಿನ ನಿತ್ಯಜೀವದ ನಿರೀಕ್ಷೆಯ ಕುರಿತಾಗಿಯೂ ನಾನು ಕಲಿತುಕೊಂಡೆ. (ಕೀರ್ತನೆ 37:11, 29; ಪ್ರಕಟನೆ 21:3, 4) ನನ್ನ ತಂದೆಯವರು ಬೈಬಲ್‌ ಅಧ್ಯಯನವನ್ನು ನಿಲ್ಲಿಸಿದರಾದರೂ, ನಾನು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಅಲ್ಲಿ, ಶಾಂತವಾದ ಮತ್ತು ಕ್ರಮವಾದ ರೀತಿಯಲ್ಲಿ ನಡೆಸಲ್ಪಡುತ್ತಿದ್ದ ಕೂಟಗಳು ನಾನು ಯೆಹೋವನ ಕುರಿತು ಹೆಚ್ಚನ್ನು ಕಲಿಯುವಂತೆ ಸಾಧ್ಯಮಾಡಿದವು. ಸಾಕ್ಷಿಗಳಿಂದ ವ್ಯವಸ್ಥಾಪಿಸಲ್ಪಟ್ಟ ದೊಡ್ಡ ಒಕ್ಕೂಟಗಳಾದ ಸರ್ಕಿಟ್‌ ಸಮ್ಮೇಳನಗಳು ಮತ್ತು ಜಿಲ್ಲಾ ಅಧಿವೇಶನಗಳಿಗೆ ಸಹ ನಾನು ಹಾಜರಾದೆ. ಈ ರೀತಿ ಬೈಬಲಿನಲ್ಲಿರುವ ವಿಷಯವನ್ನು ತಿಳಿದುಕೊಂಡದ್ದರಿಂದ, ಯೆಹೋವನನ್ನು ಸ್ವೀಕಾರಾರ್ಹ ವಿಧದಲ್ಲಿ ಆರಾಧಿಸಬೇಕೆಂಬ ಬಲವಾದ ಇಚ್ಛೆಯು ನನ್ನಲ್ಲಿ ಮೂಡಿತು. ಆದರೆ ನನಗೊಂದು ತಡೆಯಿತ್ತು.

ಆ ಸಮಯದಲ್ಲಿ, ನನ್ನ ಆರು ಮಕ್ಕಳಲ್ಲಿ ಮೂವರ ತಂದೆಯಾಗಿದ್ದ ವ್ಯಕ್ತಿಯೊಂದಿಗೆ ನಾನು ವಿವಾಹವಾಗದೆ ಸಹಬಾಳ್ವೆ ನಡೆಸುತ್ತಿದ್ದೆ. ವಿವಾಹದ ಹೊರಗಿನ ಲೈಂಗಿಕ ಸಂಬಂಧವನ್ನು ದೇವರು ಖಂಡಿಸುತ್ತಾನೆ ಎಂಬುದನ್ನು ಬೈಬಲಿನಿಂದ ನಾನು ಕಲಿತುಕೊಂಡಾಗ ನನ್ನ ಮನಸ್ಸಾಕ್ಷಿಯು ನನ್ನನ್ನು ಚುಚ್ಚಲು ಆರಂಭಿಸಿತು. (ಜ್ಞಾನೋಕ್ತಿ 5:15-20; ಗಲಾತ್ಯ 5:19) ಸತ್ಯದ ಕಡೆಗಿನ ನನ್ನ ಪ್ರೀತಿಯು ಆಳವಾದಂತೆ, ನನ್ನ ಜೀವನವನ್ನು ದೇವರ ನಿಯಮಕ್ಕೆ ಹೊಂದಿಕೆಯಲ್ಲಿ ತರಲು ಹಾತೊರೆದೆ. ಕೊನೆಗೆ, ನಾನು ಒಂದು ನಿರ್ಣಯವನ್ನು ಮಾಡಿದೆ. ನಾವು ಒಂದೇ ವಿವಾಹವಾಗೋಣ ಇಲ್ಲವೆ ನಮ್ಮ ಸಂಬಂಧವನ್ನು ಇಲ್ಲಿಗೆ ಕೊನೆಗೊಳಿಸೋಣ ಎಂದು ನನ್ನೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ ವ್ಯಕ್ತಿಗೆ ನಾನು ತಿಳಿಸಿದೆ. ನನ್ನೊಂದಿಗೆ ವಾಸಿಸುತ್ತಿದ್ದ ಆ ವ್ಯಕ್ತಿಯು ನನ್ನ ನಂಬಿಕೆಗಳನ್ನು ಸ್ವೀಕರಿಸಿರದಿದ್ದರೂ, 1970ರ ಆಗಸ್ಟ್‌ 15ರಂದು ಅಂದರೆ ಸಾಕ್ಷಿಗಳು ನನ್ನೊಂದಿಗೆ ಮೊದಲ ಬಾರಿ ಮಾತಾಡಿದ ಐದು ವರುಷಗಳ ನಂತರ ನಾವು ಕಾನೂನುಬದ್ಧವಾಗಿ ವಿವಾಹವಾದೆವು. ಇಸವಿ 1970ರ ಡಿಸೆಂಬರ್‌ ತಿಂಗಳಿನಲ್ಲಿ, ನಾನು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ.

ಶುಶ್ರೂಷೆಯ ವಿಷಯದಲ್ಲಿ ಹೇಳಬೇಕೆಂದರೆ, ನಾನು ಸಾರುವ ಕೆಲಸದಲ್ಲಿ ಭಾಗವಹಿಸಿದ ಮೊದಲನೇ ದಿನವನ್ನು ನಾನೆಂದೂ ಮರೆಯಲಾರೆ. ನಾನು ಬಹಳ ಹೆದರಿದ್ದೆ, ಬೈಬಲ್‌ ಸಂವಾದವನ್ನು ಹೇಗೆ ಆರಂಭಿಸಬೇಕೆಂದು ನನಗೆ ತಿಳಿದಿರಲಿಲ್ಲ. ಮೊದಲ ಮನೆಯವರು ನಮ್ಮ ಸಂವಾದವನ್ನು ಕೂಡಲೆ ಅಂತ್ಯಗೊಳಿಸಿದಾಗ ನನಗೆ ಹಾಯೆನಿಸಿತು. ಆದರೆ ಸ್ವಲ್ಪ ಹೊತ್ತಿನ ನಂತರ ಭಯವು ನನ್ನನ್ನು ಬಿಟ್ಟುಹೋಯಿತು. ಅಂದು ಅನೇಕ ಜನರೊಂದಿಗೆ ಬೈಬಲಿನ ಕುರಿತು ಸಂಕ್ಷಿಪ್ತವಾಗಿ ಮಾತಾಡಿ ಅವರಿಗೆ ಕೆಲವು ಬೈಬಲ್‌ ಆಧಾರಿತ ಸಾಹಿತ್ಯಗಳನ್ನು ನೀಡಿದ್ದ ಕಾರಣ ದಿನದ ಅಂತ್ಯದಲ್ಲಿ ನಾನು ಬಹಳ ಸಂತೋಷಿತಳಾಗಿದ್ದೆ.

ಕುಟುಂಬವನ್ನು ಆಧ್ಯಾತ್ಮಿಕವಾಗಿ ಬಲವಾಗಿಡುವುದು

ಇಸವಿ 1977ರೊಳಗೆ ನಮ್ಮ ಕುಟುಂಬದಲ್ಲಿ ಎಂಟು ಮಕ್ಕಳಿದ್ದರು. ನನ್ನ ಕುಟುಂಬವು ಯೆಹೋವನನ್ನು ಸೇವಿಸುವಂತೆ ನನ್ನಿಂದ ಸಾಧ್ಯವಾದದ್ದೆಲ್ಲವನ್ನು ಮಾಡಲು ನಾನು ನಿರ್ಧರಿಸಿದೆ. (ಯೆಹೋಶುವ 24:15) ಆದುದರಿಂದ ಒಂದು ಕ್ರಮದ ಕುಟುಂಬ ಬೈಬಲ್‌ ಅಧ್ಯಯನವನ್ನು ನಡೆಸಲು ನಾನು ಕಠಿನವಾಗಿ ಶ್ರಮಿಸಿದೆ. ಕೆಲವೊಮ್ಮೆ ನಾನು ತೀರ ದಣಿದಿದ್ದ ಕಾರಣ, ಮಕ್ಕಳಲ್ಲಿ ಒಬ್ಬರು ಪ್ಯಾರಗ್ರಾಫ್‌ ಅನ್ನು ಓದುತ್ತಿರುವಾಗ ನಿದ್ರೆಮಾಡಿಬಿಡುತ್ತಿದ್ದೆ ಮತ್ತು ಮಕ್ಕಳು ನನ್ನನ್ನು ಎಬ್ಬಿಸಬೇಕಾಗಿತ್ತು. ಆದರೆ ಶಾರೀರಿಕ ಬಳಲಿಕೆಯು ಕುಟುಂಬವಾಗಿ ಬೈಬಲನ್ನು ಅಧ್ಯಯನಮಾಡುವುದರಿಂದ ನಮ್ಮನ್ನು ತಡೆಯಲಿಲ್ಲ.

ನಾನು ಅನೇಕಬಾರಿ ನನ್ನ ಮಕ್ಕಳೊಂದಿಗೆ ಪ್ರಾರ್ಥಿಸುತ್ತಿದ್ದೆ ಸಹ. ಅವರು ದೊಡ್ಡವರಾದಂತೆ, ಅವರು ಸ್ವತಃ ಯೆಹೋವನಿಗೆ ಹೇಗೆ ಪ್ರಾರ್ಥಿಸಬೇಕೆಂದು ನಾನು ಕಲಿಸಿದೆ. ಮಲಗುವ ಮುಂಚೆ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಪ್ರಾರ್ಥನೆಯನ್ನು ಮಾಡಿದ್ದಾರೊ ಇಲ್ಲವೊ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತಿದ್ದೆ. ಮಾತ್ರವಲ್ಲದೆ, ಸ್ವಂತ ಪ್ರಾರ್ಥನೆಯನ್ನು ಮಾಡುವಷ್ಟು ದೊಡ್ಡದಾಗಿರದ ಪ್ರತಿಯೊಂದು ಮಗುವಿನೊಂದಿಗೆ ನಾನು ವೈಯಕ್ತಿಕವಾಗಿ ಪ್ರಾರ್ಥಿಸುತ್ತಿದ್ದೆ.

ಆರಂಭದಲ್ಲಿ, ನಾನು ಮಕ್ಕಳನ್ನು ಸಭಾ ಕೂಟಗಳಿಗೆ ಕರೆದೊಯ್ಯುವಾಗ ನನ್ನ ಗಂಡ ವಿರೋಧಿಸುತ್ತಿದ್ದರು. ಆದರೆ, ನಾನು ಕೂಟಕ್ಕೆ ಹೋಗಿರುವಾಗ ಮಕ್ಕಳನ್ನು ತಾನೇ ನೋಡಿಕೊಳ್ಳಬೇಕಾಗುತ್ತದೆ ಎಂಬ ವಿಷಯವು ಅವರ ವಿರೋಧವನ್ನು ಕಡಿಮೆಗೊಳಿಸಿತು. ಅಷ್ಟುಮಾತ್ರವಲ್ಲದೆ, ರಾತ್ರಿಯಲ್ಲಿ ಸ್ನೇಹಿತರನ್ನು ಭೇಟಿಯಾಗಲು ಹೋಗಿ ಅವರೊಂದಿಗೆ ಸಮಯವನ್ನು ಕಳೆಯುವುದು ಅವರಿಗೆ ಬಹಳ ಪ್ರಿಯವಾದ ಸಂಗತಿಯಾಗಿತ್ತು. ಹಾಗಿರುವಾಗ, ತನ್ನೊಂದಿಗೆ ಎಂಟು ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ನೆನಸುವಾಗಲೇ ಅವರಿಗೆ ಭಯವಾಗುತ್ತಿತ್ತು. ಅನಂತರ, ರಾಜ್ಯ ಸಭಾಗೃಹಕ್ಕೆ ಹೋಗಲು ಮಕ್ಕಳನ್ನು ಸಿದ್ಧಗೊಳಿಸುವುದರಲ್ಲಿ ಅವರು ನನಗೆ ಸಹಾಯಮಾಡಲು ಆರಂಭಿಸಿದರು.

ಬೇಗನೆ ಮಕ್ಕಳಿಗೆ, ಎಲ್ಲ ಸಭಾ ಕೂಟಗಳಿಗೆ ಹಾಜರಾಗುವುದು ಮತ್ತು ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವುದು ರೂಢಿಯಾಯಿತು. ಬೇಸಿಗೆಯ ರಜೆಯಂದು ಅವರು ಸಭೆಯಲ್ಲಿದ್ದ ಪಯನೀಯರರೊಂದಿಗೆ ಇಲ್ಲವೆ ಪೂರ್ಣ ಸಮಯದ ಶುಶ್ರೂಷಕರೊಂದಿಗೆ ಸಾರುವ ಕೆಲಸದಲ್ಲಿ ಹೆಚ್ಚಾಗಿ ಭಾಗವಹಿಸಿದರು. ಇದು, ಸಭೆಗಾಗಿ ಮತ್ತು ಸಾರುವ ಕೆಲಸಕ್ಕಾಗಿ ಹೃದಯದಾಳದಿಂದ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನನ್ನ ಚಿಕ್ಕ ಮಕ್ಕಳಿಗೆ ಸಹಾಯಮಾಡಿತು.​—⁠ಮತ್ತಾಯ 24:14.

ಪರೀಕ್ಷೆಯ ಸಮಯಗಳು

ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಸಲುವಾಗಿ ಕೆಲಸಕ್ಕಾಗಿ ನನ್ನ ಗಂಡ ಪರದೇಶಕ್ಕೆ ಪ್ರಯಾಣಿಸಲು ಆರಂಭಿಸಿದರು. ದೀರ್ಘ ಅವಧಿಗಳ ವರೆಗೆ ಅವರು ಕುಟುಂಬದಿಂದ ದೂರವಿರುತ್ತಿದ್ದರು, ಆದರೆ ಕ್ರಮವಾದ ಅಂತರಗಳಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಆದರೆ 1989ರಲ್ಲಿ ಅವರು ಹೋದವರು ಪುನಃ ಹಿಂದಿರುಗಲೇ ಇಲ್ಲ. ಆರಂಭದಲ್ಲಿ ತಿಳಿಸಿದಂತೆ, ಗಂಡನನ್ನು ಕಳೆದುಕೊಂಡದ್ದು ನನ್ನನ್ನು ಹತಾಶಳನ್ನಾಗಿ ಮಾಡಿತು. ಅನೇಕ ರಾತ್ರಿಗಳಲ್ಲಿ ನಾನು ಅಳುತ್ತಾ, ಸಾಂತ್ವನ ಮತ್ತು ತಾಳ್ಮೆಗಾಗಿ ಯೆಹೋವನಲ್ಲಿ ಸತತವಾಗಿ ಪ್ರಾರ್ಥಿಸುತ್ತಾ ಇದ್ದೆ. ಆತನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದನೆಂದು ನನಗೆ ಅನಿಸುತ್ತದೆ. ಯೆಶಾಯ 54:4 ಮತ್ತು 1 ಕೊರಿಂಥ 7:15ರಂಥ ಶಾಸ್ತ್ರವಚನಗಳು ನನಗೆ ಮನಶ್ಶಾಂತಿಯನ್ನು ಹಾಗೂ ಜೀವನವನ್ನು ಮುಂದುವರಿಸುತ್ತಾ ಹೋಗಲು ಬೇಕಾದ ಬಲವನ್ನು ಒದಗಿಸಿದವು. ಮಾತ್ರವಲ್ಲದೆ ಕ್ರೈಸ್ತ ಸಭೆಯಲ್ಲಿ, ಸಂಬಂಧಿಕರು ಹಾಗೂ ಸ್ನೇಹಿತರು ಸಹ ಭಾವನಾತ್ಮಕವಾಗಿ ಮತ್ತು ಭೌತಿಕವಾಗಿ ನನ್ನನ್ನು ಬೆಂಬಲಿಸಿದರು. ಈ ಸಹಾಯಕ್ಕಾಗಿ, ಯೆಹೋವನಿಗೆ ಮತ್ತು ಆತನ ಜನರಿಗೆ ನಾನು ಆಭಾರಿಯಾಗಿದ್ದೇನೆ.

ನಮಗೆ ಇತರ ಪರೀಕ್ಷೆಗಳೂ ಇದ್ದವು. ಒಮ್ಮೆ ನನ್ನ ಒಬ್ಬ ಮಗಳನ್ನು ಅವಳ ಅಶಾಸ್ತ್ರೀಯ ನಡತೆಗಾಗಿ ಸಭೆಯಿಂದ ಬಹಿಷ್ಕರಿಸಲಾಯಿತು. ನಾನು ನನ್ನ ಎಲ್ಲ ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತೇನೆ, ಆದರೆ ಯೆಹೋವನಿಗಾಗಿರುವ ನಿಷ್ಠೆಗೆ ಪ್ರಥಮ ಸ್ಥಾನವನ್ನು ಕೊಡುತ್ತೇನೆ. ಆದುದರಿಂದ ಆ ಸಮಯದಲ್ಲಿ ನಾನು ಮತ್ತು ನನ್ನ ಇತರ ಮಕ್ಕಳು, ಬಹಿಷ್ಕರಿಸಲ್ಪಟ್ಟ ವ್ಯಕ್ತಿಗಳೊಂದಿಗೆ ಹೇಗಿರಬೇಕೆಂದು ಬೈಬಲ್‌ ಮಾರ್ಗದರ್ಶನ ನೀಡುತ್ತದೋ ಅದಕ್ಕೆ ಕಟ್ಟುನಿಟ್ಟಿನಿಂದ ವಿಧೇಯರಾದೆವು. (1 ಕೊರಿಂಥ 5:11, 13) ನಮ್ಮ ನಿಲುವನ್ನು ಅರ್ಥಮಾಡಿಕೊಳ್ಳದ ಇತರ ಜನರಿಂದ ನಾವು ಬಹಳಷ್ಟು ಟೀಕಾತ್ಮಕ ಮಾತುಗಳನ್ನು ಕೇಳಬೇಕಾಯಿತು. ಹಾಗಿದ್ದರೂ, ಬೈಬಲ್‌ ಮೂಲತತ್ತ್ವಗಳಿಗಾಗಿನ ನಮ್ಮ ಸ್ಥಿರವಾದ ನಿಲುವು ಅವಳ ಗಂಡನನ್ನು ಬಹಳವಾಗಿ ಪ್ರಭಾವಿಸಿತು ಎಂದು ಅವನು ನಮ್ಮ ಮಗಳು ಸಭೆಗೆ ಪುನಸ್ಸ್ಥಾಪಿಸಲ್ಪಟ್ಟ ನಂತರ ತಿಳಿಸಿದನು. ಈಗ ಅವನು ತನ್ನ ಕುಟುಂಬದೊಂದಿಗೆ ಯೆಹೋವನನ್ನು ಸೇವಿಸುತ್ತಿದ್ದಾನೆ.

ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದು

ನನ್ನ ಗಂಡ ನಮ್ಮನ್ನು ತ್ಯಜಿಸಿಹೋದಾಗ, ನನಗೆ ಒಂದು ಸ್ಥಿರ ಆದಾಯವಿರಲಿಲ್ಲ ಮತ್ತು ಕುಟುಂಬಕ್ಕೆ ಅವರಿಂದ ಯಾವುದೇ ಆರ್ಥಿಕ ಬೆಂಬಲ ದೊರಕಲಿಲ್ಲ. ಈ ಪರಿಸ್ಥಿತಿಯು, ಒಂದು ಸರಳ ಜೀವನದಲ್ಲಿ ಸಂತೃಪ್ತರಾಗಿರುವಂತೆ ಮತ್ತು ಆಧ್ಯಾತ್ಮಿಕ ಐಶ್ವರ್ಯವನ್ನು ಭೌತಿಕ ಬೆನ್ನಟ್ಟುವಿಕೆಗಿಂತಲೂ ಹೆಚ್ಚಾಗಿ ಗಣ್ಯಮಾಡುವಂತೆ ನಮಗೆ ಕಲಿಸಿತು. ಮಕ್ಕಳು, ಪ್ರೀತಿಸಲು ಮತ್ತು ಒಬ್ಬರಿಗೊಬ್ಬರು ಸಹಾಯಮಾಡಲು ಕಲಿತಂತೆ ಅವರು ಆಪ್ತರಾದರು. ಹಿರಿಯ ಮಕ್ಕಳು ಕೆಲಸಮಾಡಲು ಆರಂಭಿಸಿದಾಗ, ಇಚ್ಛಾಪೂರ್ವಕವಾಗಿ ತಮ್ಮತಂಗಿಯರಿಗೆ ಬೆಂಬಲವನ್ನು ನೀಡಿದರು. ನನ್ನ ಹಿರಿಯ ಮಗಳಾದ ಮಾರ್ಸೆರೀ, ಅವಳ ಕೊನೆಯ ತಂಗಿಯಾದ ನೀಕಾಲ್‌ ತನ್ನ ಮೂಲಭೂತ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸುವಂತೆ ಸಹಾಯಮಾಡಿದಳು. ಇದಕ್ಕೆ ಕೂಡಿಕೆಯಾಗಿ, ನಾನೊಂದು ಸಣ್ಣ ಕಿರಾಣಿ ಅಂಗಡಿಯನ್ನು ನಡೆಸಶಕ್ತಳಾದೆ. ಈ ಮಿತವಾದ ಆದಾಯವು ನಮ್ಮ ಭೌತಿಕ ಅಗತ್ಯಗಳಲ್ಲಿ ಕೆಲವನ್ನು ಪೂರೈಸಲು ನನಗೆ ಸಹಾಯಮಾಡಿತು.

ಯೆಹೋವನು ಎಂದೂ ನಮ್ಮ ಕೈಬಿಡಲಿಲ್ಲ. ನಮ್ಮ ಆರ್ಥಿಕ ಪರಿಸ್ಥಿತಿಯ ಕಾರಣ ನಾವು ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಒಮ್ಮೆ ಒಬ್ಬ ಕ್ರೈಸ್ತ ಸ್ತ್ರೀಗೆ ನಾನು ತಿಳಿಸಿದೆ. ಅವಳು ಉತ್ತರಿಸಿದ್ದು: “ಸಹೋದರಿ ವ್ಯಾಲನ್‌ಟೈನ್‌, ಅಧಿವೇಶನದ ಬಗ್ಗೆ ನೀವು ಕೇಳಿಸಿಕೊಳ್ಳುವಾಗ ನಿಮ್ಮ ವಸ್ತುಗಳನ್ನು ಪ್ಯಾಕ್‌ ಮಾಡಲು ಆರಂಭಿಸಿ! ನಿಮ್ಮ ಅಗತ್ಯಗಳನ್ನು ಯೆಹೋವನು ಪೂರೈಸುತ್ತಾನೆ.” ನಾನು ಆಕೆಯ ಸಲಹೆಯನ್ನು ಅನ್ವಯಿಸಿದೆ. ಯೆಹೋವನು ಒದಗಿಸಿದನು ಮತ್ತು ಇಂದಿನ ವರೆಗೂ ಆತನು ಹಾಗೆ ಮಾಡುತ್ತಲೇ ಬಂದಿದ್ದಾನೆ. ಹಣದ ಕೊರತೆಯಿಂದಾಗಿ ನಮ್ಮ ಕುಟುಂಬವು ಸಮ್ಮೇಳನಕ್ಕೊ ಅಧಿವೇಶನವಕ್ಕೊ ಹಾಜರಾಗದೆ ಇದ್ದಂತ ಸನ್ನಿವೇಶವೇ ಇಲ್ಲ.

ಇಸವಿ 1988ರಲ್ಲಿ, ಗಿಲ್ಬರ್ಟ್‌ ಎಂಬ ಚಂಡಮಾರುತವು ಜಮೇಕಾವನ್ನು ಧ್ವಂಸಗೊಳಿಸಿತು ಮತ್ತು ನಾವು ನಮ್ಮ ಮನೆಯನ್ನು ಬಿಟ್ಟು ಭದ್ರವಾದ ಸ್ಥಳಕ್ಕೆ ಹೋದೆವು. ತಾತ್ಕಾಲಿಕವಾಗಿ ಗಾಳಿಯ ರಭಸವು ಕಡಿಮೆಯಾದಾಗ, ನಾನು ಮತ್ತು ನನ್ನ ಮಗನು ನಮ್ಮ ಮನೆಯಿದ್ದ ಸ್ಥಳಕ್ಕೆ ಹೋದೆವು. ಮುರಿದು ಬಿದ್ದಿದ್ದಂಥ ಮನೆಯ ರಾಶಿಯಲ್ಲಿ ಹುಡುಕುತ್ತಿದ್ದಾಗ ನಾನು ಜೋಪಾನವಾಗಿಡಲು ಬಯಸಿದ ಒಂದು ವಸ್ತುವನ್ನು ಕಂಡೆನು. ಕೂಡಲೆ, ಪುನಃ ಗಾಳಿಯ ಭೋರ್ಗರೆತ ಆರಂಭವಾಯಿತು, ಆದರೆ ನಾನು ಆ ವಸ್ತುವನ್ನು ಹೊತ್ತುಕೊಂಡೇ ಇದ್ದೆ. “ಅಮ್ಮ, ಟಿವಿಯನ್ನು ಕೆಳಗೆ ಹಾಕಿ. ನೀವು ಲೋಟನ ಹೆಂಡತಿಯೊ?” ಎಂದು ನನ್ನ ಮಗನು ಹೇಳಿದನು. (ಲೂಕ 17:​31, 32) ನನ್ನ ಮಗನ ಆ ಹೇಳಿಕೆಯಿಂದ ನನಗೆ ಜ್ಞಾನೋದಯವಾಯಿತು. ಮಳೆ ನೀರಿನಿಂದ ಸಂಪೂರ್ಣವಾಗಿ ಒದ್ದೆಯಾಗಿದ್ದ ಟಿವಿ ಸೆಟ್‌ ಅನ್ನು ನಾನು ಕೆಳಗೆ ಬಿಸಾಡಿ, ನಾವಿಬ್ಬರೂ ಸುರಕ್ಷಿತ ಸ್ಥಳಕ್ಕೆ ಓಡಿದೆವು.

ಒಂದು ಟಿವಿ ಸೆಟ್‌ಗಾಗಿ ನನ್ನ ಜೀವವನ್ನೇ ಗಂಡಾಂತರಕ್ಕೆ ಒಡ್ಡಿದೆ ಎಂದು ಈಗ ನಾನು ನೆನಸುವಾಗ ನನಗೆ ನಡುಕ ಉಂಟಾಗುತ್ತದೆ. ಆದರೆ ಅದೇ ಸಮಯದಲ್ಲಿ ನನ್ನ ಮಗನು ನುಡಿದ ಆಧ್ಯಾತ್ಮಿಕ ಎಚ್ಚರಿಕೆಯ ಹೇಳಿಕೆಯು ನನ್ನ ಹೃದಯವನ್ನು ಸಂತೋಷಗೊಳಿಸುತ್ತದೆ. ಕ್ರೈಸ್ತ ಸಭೆಯಿಂದ ಅವನು ಪಡೆದುಕೊಂಡ ಬೈಬಲ್‌ ತರಬೇತಿಗೆ ನಾನು ಆಭಾರಿಯಾಗಿದ್ದೇನೆ. ಅದರಿಂದಾಗಿ, ನಾನು ಗಂಭೀರವಾದ ಶಾರೀರಿಕ ಮತ್ತು ಬಹುಶಃ ಆಧ್ಯಾತ್ಮಿಕ ಹಾನಿಗೆ ಒಳಗಾಗುವುದರಿಂದ ಅವನು ನನ್ನನ್ನು ತಪ್ಪಿಸಲು ಶಕ್ತನಾದನು.

ಚಂಡಮಾರುತದಿಂದಾಗಿ ನಮ್ಮ ಮನೆ ಮತ್ತು ಸೊತ್ತುಗಳು ಧ್ವಂಸವಾದವು ಹಾಗೂ ಅದು ನಮ್ಮನ್ನು ಬಹಳ ದುಃಖಿತರನ್ನಾಗಿ ಮಾಡಿತು. ಆ ಸಮಯದಲ್ಲಿ ನಮ್ಮ ಕ್ರೈಸ್ತ ಸಹೋದರರು ನಮ್ಮಲ್ಲಿಗೆ ಬಂದರು. ಯೆಹೋವನಲ್ಲಿ ಭರವಸವಿಡುತ್ತಾ ನಮಗಾದ ನಷ್ಟವನ್ನು ಎದುರಿಸುವಂತೆ ಮತ್ತು ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿ ಮುಂದುವರಿಯುವಂತೆ ಅವರು ನಮ್ಮನ್ನು ಉತ್ತೇಜಿಸಿದರು. ಮಾತ್ರವಲ್ಲದೆ, ನಾವು ನಮ್ಮ ಮನೆಯನ್ನು ಪುನಃ ಕಟ್ಟುವಂತೆಯೂ ಅವರು ನಮಗೆ ಸಹಾಯಮಾಡಿದರು. ಜಮೇಕಾ ಮತ್ತು ಇತರ ದೇಶಗಳಿಂದ ಬಂದ ಸ್ವಯಂಸೇವಕ ಸಾಕ್ಷಿಗಳು ಮಾಡಿದ ಆ ಪ್ರೀತಿಯ ಮತ್ತು ಸ್ವತ್ಯಾಗದ ಕೆಲಸವು ನಮ್ಮನ್ನು ಆಳವಾಗಿ ಪ್ರಭಾವಿಸಿತು.

ಯೆಹೋವನಿಗೆ ಪ್ರಥಮ ಸ್ಥಾನವನ್ನು ಕೊಡುವುದು

ನನ್ನ ಎರಡನೇ ಮಗಳಾದ ಮೆಲೇನ್‌ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಪಯನೀಯರಳಾಗಿ ಸೇವೆಸಲ್ಲಿಸಿದಳು. ಆಮೇಲೆ ಬೇರೊಂದು ಸಭೆಯಲ್ಲಿ ಪಯನೀಯರಳಾಗಿ ಸೇವೆಸಲ್ಲಿಸುವಂತೆ ಅವಳಿಗೆ ನೀಡಲ್ಪಟ್ಟ ಆಮಂತ್ರಣವನ್ನು ಸ್ವೀಕರಿಸಿದಳು. ಇದಕ್ಕಾಗಿ ಅವಳು ತನ್ನ ಉದ್ಯೋಗವನ್ನು ಬಿಟ್ಟುಬಿಡಬೇಕಾಯಿತು. ನಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುವಂತೆ ಆ ಉದ್ಯೋಗವು ಅವಳಿಗೆ ಸಾಧ್ಯವನ್ನಾಗಿ ಮಾಡಿತ್ತಾದರೂ, ನಮ್ಮಲ್ಲಿ ಪ್ರತಿಯೊಬ್ಬರು ರಾಜ್ಯದ ಅಭಿರುಚಿಯನ್ನು ಮೊದಲಾಗಿ ಇಡುವುದಾದರೆ ಯೆಹೋವನು ನಮ್ಮನ್ನು ನೋಡಿಕೊಳ್ಳುತ್ತಾನೆ ಎಂಬ ಭರವಸೆ ನಮಗಿತ್ತು. (ಮತ್ತಾಯ 6:33) ತದನಂತರ, ನನ್ನ ಮಗನಾದ ಯೂಅನ್‌ಗೂ ಪಯನೀಯರನಾಗಿ ಸೇವೆಸಲ್ಲಿಸುವ ಆಮಂತ್ರಣವು ದೊರಕಿತು. ಅವನು ಸಹ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುತ್ತಿದ್ದನು, ಆದರೆ ಆ ಆಮಂತ್ರಣವನ್ನು ಸ್ವೀಕರಿಸುವಂತೆ ನಾವು ಅವನನ್ನು ಉತ್ತೇಜಿಸಿದೆವು ಮತ್ತು ಅವನನ್ನು ಯೆಹೋವನು ಆಶೀರ್ವದಿಸಲಿ ಎಂದು ಹಾರೈಸಿದೆವು. ನನ್ನ ಮಕ್ಕಳು ತಮ್ಮ ರಾಜ್ಯ ಸೇವೆಯನ್ನು ವಿಸ್ತರಿಸುವುದರಿಂದ ನಾನೆಂದೂ ಅವರನ್ನು ನಿರುತ್ತೇಜಿಸಲಿಲ್ಲ ಮತ್ತು ಮನೆಯಲ್ಲಿ ಉಳಿದಿರುವ ನಮಗೆ ಎಂದಿಗೂ ನಮ್ಮ ಅಗತ್ಯತೆಗಳ ಕೊರತೆಯುಂಟಾಗಲಿಲ್ಲ. ಬದಲಾಗಿ, ನಮ್ಮ ಆನಂದವು ಹೆಚ್ಚಾಗಿದೆ ಮತ್ತು ಕೆಲವೊಮ್ಮೆ ಅಗತ್ಯದಲ್ಲಿದ್ದ ಇತರರಿಗೂ ಸಹಾಯಮಾಡಲು ನಾವು ಶಕ್ತರಾಗಿದ್ದೇವೆ.

ಇಂದು, ನನ್ನ ಮಕ್ಕಳು ‘ಸತ್ಯವನ್ನನುಸರಿಸಿ ನಡೆಯುವುದನ್ನು’ ನೋಡುವಾಗ ನನಗೆ ಅಪಾರ ಆನಂದವಾಗುತ್ತದೆ. (3 ಯೋಹಾನ 4) ನನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ಮೆಲೇನ್‌, ಸಂಚರಣ ಶುಶ್ರೂಷೆಯಲ್ಲಿ ಸರ್ಕಿಟ್‌ ಮೇಲ್ವಿಚಾರಕರಾಗಿರುವ ತನ್ನ ಗಂಡನೊಂದಿಗೆ ಈಗ ಜೊತೆಗೂಡಿ ಸೇವೆಸಲ್ಲಿಸುತ್ತಿದ್ದಾಳೆ. ನನ್ನ ಇನ್ನೊಬ್ಬ ಮಗಳಾದ ಆ್ಯನ್‌ಡ್ರೀಯಾ ಮತ್ತು ಅವಳ ಗಂಡ, ಸ್ಪೆಷಲ್‌ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೆ, ಬದಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ಅವಳ ಗಂಡನು ಸಭೆಗಳನ್ನು ಭೇಟಿಮಾಡುವಾಗ ಅವನೊಂದಿಗೆ ಜೊತೆಗೂಡುತ್ತಾಳೆ. ನನ್ನ ಮಗನಾದ ಯೂಅನ್‌ ಮತ್ತು ಅವನ ಪತ್ನಿ ಸ್ಪೆಷಲ್‌ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ ಹಾಗೂ ಅವನು ಸಭೆಯ ಹಿರಿಯನಾಗಿದ್ದಾನೆ. ಇನ್ನೊಬ್ಬ ಮಗಳಾದ ಏವಾಗೇ ತನ್ನ ಗಂಡನೊಂದಿಗೆ ಯೆಹೋವನ ಸಾಕ್ಷಿಗಳ ಜಮೇಕಾ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿದ್ದಾಳೆ. ಜೆನಿಫರ್‌, ಜೆನೀವ್‌ ಮತ್ತು ನೀಕಾಲ್‌ ತಮ್ಮ ತಮ್ಮ ಗಂಡಂದಿರು ಮತ್ತು ಮಕ್ಕಳೊಂದಿಗೆ ಅವರವರ ಸಭೆಗಳಲ್ಲಿ ಕ್ರಿಯಾಶೀಲ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಮಾರ್ಸೆರೀ ನನ್ನೊಂದಿಗೆ ವಾಸಿಸುತ್ತಾಳೆ ಮತ್ತು ನಾವಿಬ್ಬರು ಪೋರ್ಟ್‌ ಮರ್ಯಾನ್ಟ್‌ ಸಭೆಯ ಭಾಗವಾಗಿದ್ದೇವೆ. ನನ್ನ ಆಶೀರ್ವಾದಗಳು ಹೇರಳವಾಗಿವೆ. ನನ್ನ ಎಂಟು ಮಕ್ಕಳೂ ಯೆಹೋವನನ್ನು ಆರಾಧಿಸುತ್ತಾ ಮುಂದುವರಿಯುತ್ತಿದ್ದಾರೆ.

ವಯಸ್ಸಿನ ಕಾರಣ ನನಗೆ ಶಾರೀರಿಕ ಸಮಸ್ಯೆಗಳು ಎದುರಾಗಿವೆ. ಈಗ ನಾನು ಸಂಧಿವಾತವನ್ನು ಅನುಭವಿಸುತ್ತಿದ್ದೇನೆ, ಆದರೂ ಪಯನೀಯರಳಾಗಿ ಸೇವೆಸಲ್ಲಿಸುವುದರಲ್ಲಿ ಆನಂದಿಸುತ್ತಿದ್ದೇನೆ. ಸ್ವಲ್ಪ ಸಮಯದ ಹಿಂದೆ ನಾನು ವಾಸಿಸುತ್ತಿದ್ದ ಬೆಟ್ಟ ಪ್ರದೇಶದಲ್ಲಿ ನಡೆಯುವುದು ನನಗೆ ಕಷ್ಟಕರವಾಗಿತ್ತು. ಆದುದರಿಂದಾಗಿ ಶುಶ್ರೂಷೆಯಲ್ಲಿ ಭಾಗವಹಿಸುವುದು ನನಗೆ ತುಂಬ ಕಷ್ಟವಾಗಿತ್ತು. ಸೈಕಲಿನಲ್ಲಿ ಹೋಗಲು ನಾನು ಪ್ರಯತ್ನಿಸಿದೆ. ನಡೆಯುವುದಕ್ಕಿಂತ ಇದು ಸುಲಭವಾಗಿ ಕಂಡುಬಂತು. ಆದುದರಿಂದ ನಾನು ಸೆಕೆಂಡ್‌ ಹ್ಯಾಂಡ್‌ ಸೈಕಲನ್ನು ಖರೀದಿಸಿ, ಅದನ್ನು ಉಪಯೋಗಿಸುತ್ತಿದ್ದೇನೆ. ಸಂಧಿವಾತವಿರುವ ತಮ್ಮ ತಾಯಿ ಸೈಕಲ್‌ ತುಳಿಯುವುದನ್ನು ನೋಡುವುದು ನನ್ನ ಮಕ್ಕಳಿಗೆ ಆರಂಭದಲ್ಲಿ ಕಷ್ಟಕರವಾಗಿ ಕಂಡುಬಂತು. ಆದರೂ, ನನ್ನ ಹೃದಯದಿಚ್ಛೆಯಂತೆ ಸಾರುವ ಕೆಲಸವನ್ನು ನಾನು ಮುಂದುವರಿಸುತ್ತಾ ಇರುವುದನ್ನು ನೋಡುವಾಗ ಅವರಿಗೆ ಸಂತೋಷವಾಯಿತು.

ನಾನು ಯಾರಿಗೆ ಸತ್ಯವನ್ನು ಕಲಿಸಿದ್ದೇನೊ ಅವರು ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವಾಗ ನನಗೆ ಅಪಾರ ಆನಂದವಾಗುತ್ತದೆ. ಈ ಅಂತ್ಯದ ಸಮಯದಲ್ಲಿ ಮತ್ತು ಮುಂದೆ ನಿತ್ಯನಿರಂತರಕ್ಕೂ ನನ್ನ ಕುಟುಂಬದಲ್ಲಿರುವ ಎಲ್ಲರೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ಆತನು ಸಹಾಯಮಾಡುವಂತೆ ನಾನು ಯಾವಾಗಲೂ ಆತನಿಗೆ ಪ್ರಾರ್ಥಿಸುತ್ತೇನೆ. ‘ಪ್ರಾರ್ಥನೆಯನ್ನು ಕೇಳುವವನಾದ’ ಯೆಹೋವನು ನನ್ನ ಎಂಟು ಮಕ್ಕಳನ್ನು ಆತನ ಮಾರ್ಗಗಳಲ್ಲಿ ಬೆಳೆಸುವ ಪಂಥಾಹ್ವಾನವನ್ನು ಯಶಸ್ವಿಕರವಾಗಿ ನಿಭಾಯಿಸಲು ನನ್ನನ್ನು ಶಕ್ತಳನ್ನಾಗಿ ಮಾಡಿದ್ದಕ್ಕಾಗಿ ಆತನಿಗೆ ನನ್ನ ಉಪಕಾರಸ್ತುತಿಯು ಸಲ್ಲುತ್ತದೆ.​—⁠ಕೀರ್ತನೆ 65:⁠2.

[ಪುಟ 10ರಲ್ಲಿರುವ ಚಿತ್ರ]

ನನ್ನ ಮಕ್ಕಳು, ಅವರ ಸಂಗಾತಿಗಳು ಮತ್ತು ನನ್ನ ಮೊಮ್ಮಕ್ಕಳೊಂದಿಗೆ

[ಪುಟ 12ರಲ್ಲಿರುವ ಚಿತ್ರ]

ನನ್ನ ಶುಶ್ರೂಷೆಯನ್ನು ಪೂರೈಸಲು ನಾನು ಈಗ ಸೈಕಲನ್ನು ಉಪಯೋಗಿಸುತ್ತೇನೆ