ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮೆಸ್ಸೀಯನು ನಮಗೆ ಸಿಕ್ಕಿದನು”

“ಮೆಸ್ಸೀಯನು ನಮಗೆ ಸಿಕ್ಕಿದನು”

“ಮೆಸ್ಸೀಯನು ನಮಗೆ ಸಿಕ್ಕಿದನು”

“ಮೆಸ್ಸೀಯನು ನಮಗೆ ಸಿಕ್ಕಿದನು.” “ಯಾವನ ವಿಷಯವಾಗಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನು ನಮಗೆ ಸಿಕ್ಕಿದನು.” ಪ್ರಥಮ ಶತಮಾನದ ಇಬ್ಬರು ದೃಢನಿಷ್ಠ ಯೆಹೂದ್ಯರು ಈ ಗಮನಾರ್ಹ ಹೇಳಿಕೆಗಳನ್ನು ಉದ್ಗರಿಸಿದರು. ಯಾವ ಮೆಸ್ಸೀಯನಿಗಾಗಿ ಬಹಳ ಸಮಯದಿಂದಲೂ ನಿರೀಕ್ಷಿಸಲಾಗಿತ್ತೋ ಅವನು ಕೊನೆಗೂ ಆಗಮಿಸಿದ್ದನು. ಅವರಿಗೆ ಇದು ಮನದಟ್ಟಾಗಿತ್ತು!​—⁠ಯೋಹಾನ 1:35-45.

ಆ ಕಾಲದ ಐಹಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ನೀವು ಪರಿಗಣಿಸುವಾಗ, ಅವರ ಆ ನಿಶ್ಚಿತಾಭಿಪ್ರಾಯವು ಇನ್ನಷ್ಟು ಗಮನಾರ್ಹವಾದದ್ದಾಗಿ ಕಂಡುಬರುತ್ತದೆ. ಏಕೆಂದರೆ ಆ ಸಮಯದಲ್ಲಿ ಭಾರೀ ಆಡಂಬರದ ಪ್ರದರ್ಶನವನ್ನು ಮಾಡುತ್ತಾ, ಭರವಸೆಗಳನ್ನು ಕೊಡುತ್ತಾ ವಿಮೋಚಕರಾಗುವ ಆಕಾಂಕ್ಷೆಯುಳ್ಳವರು ಗೋಚರಿಸಿದ್ದರು. ಆದರೆ ಅಂಥ ವ್ಯಕ್ತಿಗಳು ಯೆಹೂದ್ಯರನ್ನು ರೋಮನ್‌ ನೊಗದಿಂದ ಬಿಡಿಸಲು ವಿಫಲರಾದಾಗ ಬೇಗನೆ ಎಲ್ಲ ನಿರೀಕ್ಷೆಗಳು ಮಣ್ಣುಪಾಲಾಗುತ್ತಿದ್ದವು.​—⁠ಅ. ಕೃತ್ಯಗಳು 5:34-37.

ಆದರೆ, ಆ ಇಬ್ಬರು ಯೆಹೂದ್ಯರು ಅಂದರೆ ಅಂದ್ರೆಯ-ಫಿಲಿಪ್ಪರು, ತಾವು ನಿಜವಾದ ಮೆಸ್ಸೀಯನನ್ನು ಕಂಡುಕೊಂಡಿದ್ದೇವೆ ಎಂಬ ನಿಶ್ಚಿತಾಭಿಪ್ರಾಯದಲ್ಲಿ ಎಂದೂ ವಿಚಲಿತರಾಗಲಿಲ್ಲ. ಅದಕ್ಕೆ ಬದಲಾಗಿ, ತರುವಾಯದ ವರ್ಷಗಳಲ್ಲಿ ಮೆಸ್ಸೀಯನ ಪಾತ್ರದ ಕುರಿತಾದ ವೈಶಿಷ್ಟ್ಯಗಳನ್ನು ನೆರವೇರಿಸುವುದರಲ್ಲಿ ಈ ವ್ಯಕ್ತಿಯು ನಡೆಸಿದ ಅದ್ಭುತಕಾರ್ಯಗಳನ್ನು ವೈಯಕ್ತಿಕವಾಗಿ ನೋಡಿದಾಗ ಅವರ ವಿಶ್ವಾಸವು ಇನ್ನೂ ಬಲಗೊಂಡಿತು.

ಈ ಇಬ್ಬರು ವ್ಯಕ್ತಿಗಳು ಮತ್ತು ಇನ್ನೂ ಅನೇಕರು, ಅವನು ಒಬ್ಬ ನಕಲಿ ಮೆಸ್ಸೀಯನಲ್ಲ ಅಥವಾ ನಿರಾಶೆಗೊಳಿಸುವ ಮೋಸಗಾರನಲ್ಲ ಎಂಬುದನ್ನು ಮನಗಂಡು, ಅವನಲ್ಲಿ ನಂಬಿಕೆಯನ್ನಿಟ್ಟದ್ದು ಏಕೆ? ಅವನೇ ನಿಜವಾದ ಮೆಸ್ಸೀಯನೆಂದು ಆ ವ್ಯಕ್ತಿಗಳಿಗೆ ಮನದಟ್ಟುಮಾಡಿದಂಥ ಸಾಕ್ಷ್ಯಗಳು ಯಾವುವು?

ಐತಿಹಾಸಿಕ ವೃತ್ತಾಂತಕ್ಕನುಸಾರ, ಅಂದ್ರೆಯ-ಫಿಲಿಪ್ಪರು ಈ ಮುಂಚೆ ಬಡಗಿಯಾಗಿದ್ದ ನಜರೇತಿನ ಯೇಸುವನ್ನು ವಾಗ್ದತ್ತ ಹಾಗೂ ದೀರ್ಘಕಾಲದಿಂದ ಎದುರುನೋಡಲಾಗಿದ್ದ ಮೆಸ್ಸೀಯನಾಗಿ ಗುರುತಿಸಿದರು. (ಯೋಹಾನ 1:45) ಆ ಕಾಲದ ಒಬ್ಬ ಜಾಗರೂಕ ಇತಿಹಾಸಗಾರನಾಗಿದ್ದ ಲೂಕನು ತಿಳಿಸುವಂತೆ, ಮೆಸ್ಸೀಯನ ಈ ಬರೋಣವು “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ” ಸಂಭವಿಸಿತು. (ಲೂಕ 3:1-3) ತಿಬೇರಿಯನ ಆಳ್ವಿಕೆಯ ಆ 15ನೆಯ ವರ್ಷವು, ಸಾ.ಶ. 28ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಆರಂಭವಾಗಿ ಸಾ.ಶ. 29ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಕೊನೆಗೊಂಡಿತು. ಲೂಕನು ಇನ್ನೂ ತಿಳಿಸುವಂತೆ, ಆ ಕಾಲದ ಯೆಹೂದ್ಯರು ಮೆಸ್ಸೀಯನ ಆಗಮನಕ್ಕಾಗಿ ‘ಎದುರುನೋಡುತ್ತಾ ಇದ್ದರು.’ (ಲೂಕ 3:15) ಆ ನಿರ್ದಿಷ್ಟ ಕಾಲಾವಧಿಯಲ್ಲಿ ಮೆಸ್ಸೀಯನನ್ನು ಏಕೆ ನಿರೀಕ್ಷಿಸಲಾಗಿತ್ತು? ನಾವೀಗ ನೋಡೋಣ.

ಮೆಸ್ಸೀಯನನ್ನು ಗುರುತಿಸಲಿದ್ದ ಸಾಕ್ಷ್ಯಗಳು

ಮೆಸ್ಸೀಯನು ಅತ್ಯಾವಶ್ಯಕ ಪಾತ್ರವನ್ನು ವಹಿಸುವವನಾಗಿರುವುದರಿಂದ, ಎಚ್ಚರಿಕೆಯುಳ್ಳ ಮತ್ತು ನಂಬಿಗಸ್ತರಾದ ಜನರು ವಾಗ್ದತ್ತ ಮೆಸ್ಸೀಯನನ್ನು ಗುರುತಿಸುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ಸೃಷ್ಟಿಕರ್ತನಾಗಿರುವ ಯೆಹೋವನು ನಿಶ್ಚಿತ ಪುರಾವೆಯನ್ನು ಒದಗಿಸುತ್ತಾನೆ ಎಂಬುದನ್ನು ನಿರೀಕ್ಷಿಸುವುದು ಸಮಂಜಸವಾದದ್ದಾಗಿದೆ. ಏಕೆ? ಏಕೆಂದರೆ ಈ ರೀತಿಯಲ್ಲಿ, ಅನೇಕಾನೇಕ ಜನರು ವಂಚಿಸಲ್ಪಟ್ಟಂತೆ ಜಾಗರೂಕ ವ್ಯಕ್ತಿಗಳು ವಂಚಕರಿಂದ ಮೋಸಹೋಗಸಾಧ್ಯವಿರಲಿಲ್ಲ.

ಒಬ್ಬ ರಾಯಭಾರಿಯು ಇನ್ನೊಂದು ದೇಶದ ಸರಕಾರಕ್ಕೆ ತನ್ನನ್ನು ಪರಿಚಯಿಸಿಕೊಳ್ಳುವಾಗ, ತನ್ನ ಸ್ವಂತ ಸರಕಾರದಿಂದ ತಾನು ಅಧಿಕೃತವಾಗಿ ರಾಯಭಾರಿಯಾಗಿ ಕಳುಹಿಸಲ್ಪಟ್ಟಿದ್ದೇನೆ ಎಂಬುದನ್ನು ದೃಢಪಡಿಸುವಂಥ ದಾಖಲೆಪತ್ರಗಳನ್ನು ತೋರಿಸುವಂತೆ ನಿರೀಕ್ಷಿಸಲಾಗುತ್ತದೆ. ತದ್ರೀತಿಯಲ್ಲಿ, ಮೆಸ್ಸೀಯನು ಯಾವ ಆವಶ್ಯಕತೆಗಳನ್ನು ತಲಪಲಿದ್ದನೋ ಅವುಗಳನ್ನು ಯೆಹೋವನು ದೀರ್ಘಕಾಲಕ್ಕೆ ಮುಂಚೆಯೇ ದಾಖಲಿಸಿಟ್ಟಿದ್ದನು. ಹೀಗೆ, “ಮುಖ್ಯ ನಿಯೋಗಿಯು” (NW) ಗೋಚರಿಸಿದಾಗ, ಅವನು ತನ್ನ ಗುರುತನ್ನು ದೃಢಪಡಿಸುವಂಥ ದಾಖಲೆ ಸಂಗ್ರಹದೊಂದಿಗೆ ಅಥವಾ ಸಾಕ್ಷ್ಯಗಳೊಂದಿಗೆ ಬಂದನೋ ಎಂಬಂತಿತ್ತು.​—⁠ಇಬ್ರಿಯ 12:⁠2.

ಮೆಸ್ಸೀಯನಾಗಿ ಅರ್ಹನಾಗಲು ಅಗತ್ಯವಿದ್ದ ನಿರ್ದಿಷ್ಟ ಸಾಕ್ಷ್ಯಗಳು, ಶತಮಾನಗಳಿಗೆ ಮುಂಚೆಯೇ ಬರೆಯಲ್ಪಟ್ಟಿದ್ದ ಅನೇಕ ಬೈಬಲ್‌ ಪ್ರವಾದನೆಗಳಲ್ಲಿ ನಮೂದಿಸಲ್ಪಟ್ಟಿದ್ದವು. ಮೆಸ್ಸೀಯನ ಬರೋಣದ ವಿಧ, ಅವನ ಶುಶ್ರೂಷೆಯ ಸ್ವರೂಪ, ಇತರರ ಕೈಗಳಲ್ಲಿ ಅವನು ಅನುಭವಿಸಲಿಕ್ಕಿದ್ದ ಕಷ್ಟಾನುಭವ ಮತ್ತು ಅವನ ಮರಣದ ಕುರಿತಾದ ಚಿಕ್ಕಪುಟ್ಟ ವಿವರಗಳನ್ನು ಕೂಲಂಕಷವಾಗಿ ಅವು ಮುಂತಿಳಿಸಿದವು. ಈ ವಿಶ್ವಾಸಾರ್ಹ ಪ್ರವಾದನೆಗಳು ಅವನ ಪುನರುತ್ಥಾನ, ದೇವರ ಬಲಗಡೆಯಲ್ಲಿ ಅವನು ಉನ್ನತ ಸ್ಥಾನಕ್ಕೇರಿಸಲ್ಪಡುವುದು ಮತ್ತು ಅಂತಿಮವಾಗಿ ಅವನ ಭಾವೀ ರಾಜ್ಯದಾಳಿಕೆಯು ತರಲಿಕ್ಕಿರುವ ಆಶೀರ್ವಾದಗಳನ್ನು ಸಹ ಮುಂತಿಳಿಸಿದವು ಎಂಬುದನ್ನು ತಿಳಿಯುವುದೂ ನಿಮಗೆ ಆಸಕ್ತಿಕರ ಸಂಗತಿಯಾಗಿರಬಹುದು. ಈ ರೀತಿಯಲ್ಲಿ, ಬೈಬಲ್‌ ಪ್ರವಾದನೆಗಳು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಗುರುತಿಸಸಾಧ್ಯವಿರುವಂಥ ಅಪೂರ್ವವಾದ ನಮೂನೆಯನ್ನು ಒದಗಿಸಿದವು.

ಸಾ.ಶ. 29ರಲ್ಲಿ ಯೇಸು ದೃಶ್ಯದಲ್ಲಿ ಕಾಣಿಸಿಕೊಂಡಾಗಲೇ ಎಲ್ಲ ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ನೆರವೇರಲಿಲ್ಲ ಎಂಬುದಂತೂ ನಿಜ. ಉದಾಹರಣೆಗೆ, ಆ ಸಮಯದಲ್ಲಿ ಅವನಿನ್ನೂ ಮರಣಕ್ಕೆ ಒಪ್ಪಿಸಲ್ಪಟ್ಟಿರಲಿಲ್ಲ ಅಥವಾ ಪುನರುತ್ಥಾನಗೊಳಿಸಲ್ಪಟ್ಟಿರಲಿಲ್ಲ. ಆದರೂ, ಯೇಸು ಏನನ್ನು ಕಲಿಸಿದನೋ ಮತ್ತು ಮಾಡಿದನೋ ಅದರಿಂದಾಗಿ ಅಂದ್ರೆಯ, ಫಿಲಿಪ್ಪ ಮತ್ತು ಇನ್ನೂ ಅನೇಕರು ಅವನಲ್ಲಿ ನಂಬಿಕೆಯನ್ನಿಟ್ಟರು. ವಾಸ್ತವದಲ್ಲಿ ಅವನೇ ಮೆಸ್ಸೀಯನಾಗಿದ್ದಾನೆ ಎಂಬುದಕ್ಕಿದ್ದ ಹೇರಳ ರುಜುವಾತನ್ನು ಅವರು ಕಂಡರು. ಒಂದುವೇಳೆ ನೀವು ಆ ಸಮಯದಲ್ಲಿ ಜೀವಿಸಿರುತ್ತಿದ್ದಲ್ಲಿ ಮತ್ತು ಮುಕ್ತಮನಸ್ಸಿನಿಂದ ಆ ಪುರಾವೆಯನ್ನು ನೇರವಾಗಿಯೇ ಅಧ್ಯಯನಮಾಡಿರುತ್ತಿದ್ದಲ್ಲಿ, ಯೇಸುವೇ ಮೆಸ್ಸೀಯನಾಗಿದ್ದಾನೆ ಎಂಬ ವಿಷಯವು ಬಹುಶಃ ನಿಮಗೂ ಮನದಟ್ಟಾಗುತ್ತಿತ್ತು.

ಒಂದು ಸಂಯುಕ್ತ ಚಿತ್ರ

ಯೇಸುವೇ ಮೆಸ್ಸೀಯನೆಂಬ ಆ ತೀರ್ಮಾನಕ್ಕೆ ಬರಲು ಯಾವುದು ನಿಮಗೆ ಸಹಾಯಮಾಡಿರುತ್ತಿತ್ತು? ಶತಮಾನಗಳಲ್ಲಿ, ಮೆಸ್ಸೀಯನನ್ನು ಸ್ಪಷ್ಟವಾಗಿ ಗುರುತಿಸಲಿಕ್ಕಾಗಿ ಅವನು ಯಾವ ಆವಶ್ಯಕತೆಗಳನ್ನು ತಲಪಬೇಕಾಗಿದೆ ಎಂಬುದನ್ನು ಬೈಬಲ್‌ ಪ್ರವಾದಿಗಳು ನಿರ್ದಿಷ್ಟವಾಗಿ ತಿಳಿಯಪಡಿಸಿದ್ದರು. ಶತಮಾನಗಳಾದ್ಯಂತ ಪ್ರವಾದಿಗಳು ಈ ವಿವರಗಳನ್ನು ಒದಗಿಸುತ್ತಾ ಹೋದಂತೆ, ಮೆಸ್ಸೀಯನ ಕುರಿತಾದ ಒಂದು ಚಿತ್ರವು ಕ್ರಮೇಣ ಗೋಚರಿಸಿತು. ಹೆನ್ರಿ ಏಚ್‌. ಹ್ಯಾಲಿ ತಿಳಿಸಿದ್ದು: “ಬೇರೆ ಬೇರೆ ದೇಶಗಳಿಂದ ಬಂದವರಾಗಿದ್ದು ಎಂದೂ ಪರಸ್ಪರ ನೋಡಿರದಿದ್ದ ಅಥವಾ ಯಾವುದೇ ರೀತಿಯಲ್ಲಿ ಸಂವಾದಿಸಿರದಿದ್ದಂಥ ಅನೇಕ ವ್ಯಕ್ತಿಗಳು ಒಂದು ಕೊಠಡಿಯೊಳಗೆ ಹೋಗುತ್ತಾರೆ ಮತ್ತು ಅಲ್ಲಿ ಅವರಲ್ಲಿ ಪ್ರತಿಯೊಬ್ಬರೂ, ಕೆತ್ತಲ್ಪಟ್ಟಿರುವಂಥ ಅಮೃತಶಿಲೆಯ ಒಂದೊಂದು ತುಣುಕನ್ನು ಇಡುತ್ತಾರೆ ಎಂದಿಟ್ಟುಕೊಳ್ಳಿ. ಈ ತುಣುಕುಗಳನ್ನು ಸರಿಯಾಗಿ ಜೋಡಿಸುವಾಗ ಒಂದು ಪರಿಪೂರ್ಣ ಆಕೃತಿಯು ರೂಪುಗೊಳ್ಳುತ್ತದೆ. ಒಬ್ಬ ನಿರ್ದಿಷ್ಟ ವ್ಯಕ್ತಿಯು ಒಂದು ಆಕೃತಿಯನ್ನು ತಯಾರಿಸಿ, ಪ್ರತಿಯೊಬ್ಬ ವ್ಯಕ್ತಿಗೂ ಅದರ ಒಂದು ತುಣುಕನ್ನು ಕಳುಹಿಸಿದ್ದ ಕಾರಣದಿಂದಲೇ ಇದು ಸಾಧ್ಯವಾಯಿತು ಎಂಬ ತೀರ್ಮಾನಕ್ಕೆ ಬರಬಹುದೇ ಹೊರತು ಇದಕ್ಕೆ ಬೇರಾವ ವಿವರಣೆಯನ್ನು ಕೊಡಸಾಧ್ಯವಿದೆ?” ತದನಂತರ ಅವನು ಕೇಳುವುದು: “ಯೇಸುವಿನ ಬರೋಣಕ್ಕೆ ಎಷ್ಟೋ ಯುಗಗಳ ಮುಂಚೆ ಬೇರೆ ಬೇರೆ ಶತಮಾನಗಳಲ್ಲಿದ್ದ ವಿವಿಧ ಬರಹಗಾರರು, ಯೇಸುವಿನ ಜೀವನ ಮತ್ತು ಕೆಲಸದ ಕುರಿತು ಸರಿಯಾಗಿ ಜೋಡಿಸಿಹಾಕಿರುವ ಈ ಆಶ್ಚರ್ಯಕರ ಸಂಯುಕ್ತ ಬರಹವನ್ನು, ಒಬ್ಬ ಮಾನವಾತೀತ ಮೇಧಾವಿ ಮೇಲ್ವಿಚಾರಣೆಮಾಡಿದನೆಂಬ ವಾಸ್ತವಾಂಶದಿಂದ ಅಲ್ಲದೆ ಇನ್ನಾವುದರ ಆಧಾರದ ಮೇಲೆ ವಿವರಿಸಸಾಧ್ಯವಿದೆ?” ಇದು “ಗಮನಾರ್ಹವಾದ ಅದ್ಭುತಕಾರ್ಯವಾಗಿತ್ತು” ಎಂಬ ತೀರ್ಮಾನಕ್ಕೆ ಹ್ಯಾಲಿ ಬಂದನು!

ಈ “ಅದ್ಭುತಕಾರ್ಯವು” ಬೈಬಲಿನ ಮೊದಲ ಪುಸ್ತಕದಲ್ಲಿ ಆರಂಭಗೊಂಡಿತು. ಆದಿಕಾಂಡ ಪುಸ್ತಕದ ಬರಹಗಾರನು ಮೆಸ್ಸೀಯನ ಪಾತ್ರವನ್ನು ಸೂಚಿಸಿದಂಥ ಪ್ರಥಮ ಬೈಬಲ್‌ ಪ್ರವಾದನೆಯನ್ನು ತಿಳಿಸುವುದರ ಜೊತೆಗೆ, ಮೆಸ್ಸೀಯನು ಅಬ್ರಹಾಮನ ವಂಶಾವಳಿಯ ಮೂಲಕ ಬರಲಿದ್ದಾನೆಂಬುದನ್ನು ಸಹ ದಾಖಲಿಸಿದನು. (ಆದಿಕಾಂಡ 3:15; 22:15-18) ಮೆಸ್ಸೀಯನು ಯೆಹೂದ ಕುಲದಿಂದ ಬರುವನು ಎಂಬುದನ್ನು ಇನ್ನೊಂದು ಸುಳಿವು ತಿಳಿಯಪಡಿಸಿತು. (ಆದಿಕಾಂಡ 49:10) ಮೋಶೆಯ ಮೂಲಕ ದೇವರು ಇಸ್ರಾಯೇಲ್ಯರಿಗೆ, ಈ ಮೆಸ್ಸೀಯನು ಮೋಶೆಗಿಂತಲೂ ದೊಡ್ಡ ರೀತಿಯಲ್ಲಿ ದೇವರ ಪ್ರತಿನಿಧಿಯಾಗಿಯೂ ವಿಮೋಚಕನಾಗಿಯೂ ಇರುವನು ಎಂದು ತಿಳಿಸಿದನು.​—⁠ಧರ್ಮೋಪದೇಶಕಾಂಡ 18:⁠18.

ರಾಜ ದಾವೀದನ ಕಾಲದಲ್ಲಿ, ಮೆಸ್ಸೀಯನು ದಾವೀದನ ಸಿಂಹಾಸನಕ್ಕೆ ವಾರಸುದಾರನಾಗಿರುವನು ಮತ್ತು ಅವನ ರಾಜ್ಯವು ‘ಸದಾಕಾಲ ಸ್ಥಿರವಾಗಿರುವುದು’ ಎಂಬುದನ್ನು ಪ್ರವಾದನೆಯು ತಿಳಿಯಪಡಿಸಿತು. (2 ಸಮುವೇಲ 7:13-16) ಮೆಸ್ಸೀಯನು ದಾವೀದನ ಗ್ರಾಮವಾಗಿದ್ದ ಬೇತ್ಲೆಹೇಮ್‌ನಲ್ಲಿ ಜನಿಸುವನೆಂದು ಮೀಕನ ಪುಸ್ತಕವು ಮುಂದಾಗಿಯೇ ತಿಳಿಸಿತು. (ಮೀಕ 5:2) ಅವನು ಒಬ್ಬ ಕನ್ಯೆಗೆ ಜನಿಸುವನೆಂದು ಯೆಶಾಯನು ಮುಂತಿಳಿಸಿದನು. (ಯೆಶಾಯ 7:14) ಅವನ ಬರೋಣವು ಎಲೀಯನಂಥ ವ್ಯಕ್ತಿಯಿಂದ ಘೋಷಿಸಲ್ಪಡುವುದು ಎಂದು ಪ್ರವಾದಿಯಾದ ಮಲಾಕಿಯನು ಮುನ್ನುಡಿದನು.​—⁠ಮಲಾಕಿಯ 4:5, 6.

ಮೆಸ್ಸೀಯನ ಕುರಿತಾದ ಇನ್ನೂ ಹೆಚ್ಚಿನ ನಿರ್ದಿಷ್ಟ ವಿವರವು ದಾನಿಯೇಲ ಪುಸ್ತಕದಲ್ಲಿ ಕಂಡುಬಂತು. ಮೆಸ್ಸೀಯನು ತೋರಿಬರಲಿರುವ ನಿರ್ದಿಷ್ಟ ವರ್ಷವನ್ನು ನಿಖರವಾಗಿ ಸೂಚಿಸುತ್ತಾ ಆ ಪ್ರವಾದನೆಯು ಹೀಗೆ ತಿಳಿಸಿತು: “ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ [“ಆಜ್ಞೆಹೊರಡುವುದು ಮೊದಲುಗೊಂಡು,” NIBV] ಅಭಿಷಿಕ್ತನಾದ [ಮೆಸ್ಸೀಯ] ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು [“ಏಳು ವಾರಗಳೂ ಅರುವತ್ತರೆಡು ವಾರಗಳೂ ಕಳೆಯಬೇಕು,” BSI Reference Edition ಪಾದಟಿಪ್ಪಣಿ]! ಅದು ಪುನಃ ಕಟ್ಟಲ್ಪಟ್ಟು . . . ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.”​—⁠ದಾನಿಯೇಲ 9:⁠25.

ಪಾರಸಿಯ ರಾಜನಾದ ಅರ್ತಷಸ್ತನು ತನ್ನ ಆಳ್ವಿಕೆಯ 20ನೆಯ ವರ್ಷದಲ್ಲಿ ಯೆರೂಸಲೇಮನ್ನು ಪುನಸ್ಸ್ಥಾಪಿಸುವ ಮತ್ತು ಪುನಃ ಕಟ್ಟುವ “ಆಜ್ಞೆ”ಯನ್ನು ಹೊರಡಿಸಿದನು. ಅವನ ಆಳ್ವಿಕೆಯು ಸಾ.ಶ.ಪೂ. 474ರಲ್ಲಿ ಆರಂಭಗೊಂಡಿದ್ದರಿಂದ, ಅವನ ಆಳ್ವಿಕೆಯ 20ನೆಯ ವರ್ಷವು ಸಾ.ಶ.ಪೂ. 455 ಆಗಿತ್ತು. (ನೆಹೆಮೀಯ 2:1-8) ಹೀಗೆ, ಯೆರೂಸಲೇಮನ್ನು ಪುನಸ್ಸ್ಥಾಪಿಸುವ ಮತ್ತು ಪುನಃ ಕಟ್ಟುವ ಆಜ್ಞೆಯು ಹೊರಡಿಸಲ್ಪಡುವುದಕ್ಕೂ ಮೆಸ್ಸೀಯನು ಕಾಣಿಸಿಕೊಳ್ಳುವುದಕ್ಕೂ ನಡುವೆ 69 (7 ಮತ್ತು 62) ಪ್ರವಾದನಾತ್ಮಕ ವಾರಗಳ ಕಾಲಾವಧಿಯು ಗತಿಸಲಿಕ್ಕಿತ್ತು. ವಾಸ್ತವದಲ್ಲಿ, ಅಕ್ಷರಾರ್ಥಕವಾದ 69 ವಾರಗಳು ಕೇವಲ 483 ದಿನಗಳಿಗೆ ಅಥವಾ ಎರಡು ವರ್ಷಗಳಿಗಿಂತಲೂ ಕಡಿಮೆ ಕಾಲಾವಧಿಗೆ ಸಮಾನವಾಗಿವೆ. ಆದರೆ ಇಲ್ಲಿ “ವರುಷ ಒಂದಕ್ಕೆ ಒಂದು ದಿನದ” ಪ್ರವಾದನಾತ್ಮಕ ನಿಯಮವನ್ನು ಅನ್ವಯಿಸುವಾಗ, ಮೆಸ್ಸೀಯನು 483 ವರ್ಷಗಳ ತರುವಾಯ ಸಾ.ಶ. 29ರಲ್ಲಿ ತೋರಿಬರಲಿಕ್ಕಿದ್ದನು ಎಂಬುದನ್ನು ಅದು ತಿಳಿಯಪಡಿಸುತ್ತದೆ.​—⁠ಯೆಹೆಜ್ಕೇಲ 4:⁠6. *

ಬೇರೆ ಬೇರೆ ಕಾಲಾವಧಿಗಳಲ್ಲಿ, ತಾನು ಮೆಸ್ಸೀಯನೆಂದು ಹೇಳಿಕೊಂಡು ಅನೇಕರು ಬಂದರಾದರೂ, ನಜರೇತಿನ ಯೇಸು ಮಾತ್ರ ಸಾ.ಶ. 29ರಲ್ಲಿ ಲೋಕ ರಂಗದಲ್ಲಿ ತೋರಿಬಂದನು. (ಲೂಕ 3:1, 2) ಅದೇ ವರ್ಷ ಯೇಸು ಸ್ನಾನಿಕನಾದ ಯೋಹಾನನ ಬಳಿಗೆ ಬಂದು ನೀರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡನು. ತದನಂತರ ಯೇಸು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು ಮೆಸ್ಸೀಯನಾದನು. ಆ ಬಳಿಕ, ಮುಂತಿಳಿಸಲ್ಪಟ್ಟ ಮೇರೆಗೆ ಎಲೀಯನಂತೆಯೇ ಮುನ್ಸೂಚಕನಾಗಿದ್ದ ಸ್ನಾನಿಕನಾದ ಯೋಹಾನನು ಅಂದ್ರೆಯನಿಗೆ ಮತ್ತು ಇನ್ನೊಬ್ಬ ಶಿಷ್ಯನಿಗೆ ಯೇಸುವನ್ನು ಪರಿಚಯಿಸಿದನು; ಯೋಹಾನನು ಅವನನ್ನು ‘ಲೋಕದ ಪಾಪವನ್ನು ನಿವಾರಣೆಮಾಡಲು ದೇವರು ನೇಮಿಸಿರುವ ಕುರಿ” ಎಂದು ಕರೆದನು.​—⁠ಯೋಹಾನ 1:29; ಲೂಕ 1:13-17; 3:21-23.

ವಂಶಾವಳಿ ಪಟ್ಟಿ ಮತ್ತು ಮೆಸ್ಸೀಯನ ಗುರುತು

ಪ್ರೇರಿತ ಪ್ರವಾದನೆಗಳು ಮೆಸ್ಸೀಯನನ್ನು ನಿರ್ದಿಷ್ಟ ಯೆಹೂದಿ ಕುಟುಂಬಗಳಿಂದ ಬರುವನೆಂದು ಗುರುತಿಸಿದವು. ಆದುದರಿಂದ, ಮೆಸ್ಸೀಯನ ವಂಶಪರಂಪರೆಯನ್ನು ಪರೀಕ್ಷಿಸಿ ನೋಡಲು ವಂಶಾವಳಿ ದಾಖಲೆಗಳು ಲಭ್ಯವಿರುವಂಥ ಒಂದು ಕಾಲದಲ್ಲಿ ಅವನು ಬರುವಂತೆ ಸರ್ವಜ್ಞನಾದ ಸೃಷ್ಟಿಕರ್ತನು ಏರ್ಪಡಿಸುವುದು ತರ್ಕಸಮ್ಮತ.

ಮೆಕ್ಲಿಂಟಕ್‌ ಹಾಗೂ ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಹೀಗೆ ತಿಳಿಸುತ್ತದೆ: “ಯೆಹೂದಿ ಕುಲಗಳು ಮತ್ತು ಕುಟುಂಬಗಳ ವಂಶಾವಳಿ ದಾಖಲೆಗಳು [ಸಾ.ಶ. 70ರಲ್ಲಾದ] ಯೆರೂಸಲೇಮ್‌ನ ನಾಶನದಲ್ಲಿ ಅಳಿದುಹೋದವು, ಅದಕ್ಕೆ ಮುಂಚೆ ಅಲ್ಲ ಎಂಬುದರಲ್ಲಿ ಸಂಶಯವೇ ಇಲ್ಲ.” ಮತ್ತಾಯ-ಲೂಕರು ತಮ್ಮ ಸುವಾರ್ತಾ ಪುಸ್ತಕಗಳನ್ನು ಸಾ.ಶ. 70ಕ್ಕೆ ಮುಂಚೆ ಬರೆದರು ಎಂಬುದಕ್ಕೆ ಸ್ಪಷ್ಟವಾದ ಸೂಚನೆಗಳಿವೆ. ಆದುದರಿಂದ, ಯೇಸುವಿನ ವಂಶಪರಂಪರೆಯ ಕುರಿತಾದ ತಮ್ಮ ವೃತ್ತಾಂತಗಳನ್ನು ಸಂಕಲಿಸುವಾಗ ಅವರು ಈ ದಾಖಲೆಗಳನ್ನು ಪರೀಕ್ಷಿಸಿದ್ದಿರಸಾಧ್ಯವಿದೆ. (ಮತ್ತಾಯ 1:1-16; ಲೂಕ 3:23-38) ಅಷ್ಟುಮಾತ್ರವಲ್ಲ, ಇಷ್ಟು ಗಮನಾರ್ಹವಾಗಿ ಪ್ರಮುಖವಾದ ಒಂದು ವಿಷಯದ ಕುರಿತು, ಅವರ ಸಮಕಾಲೀನರಲ್ಲಿ ಹೆಚ್ಚಿನವರು ಯೇಸುವಿನ ವಂಶಪರಂಪರೆಯನ್ನು ಸ್ವತಃ ಪರೀಕ್ಷಿಸಿ ನೋಡಲು ಬಯಸಿದ್ದಿರಸಾಧ್ಯವಿದೆ ಎಂಬುದಂತೂ ಖಂಡಿತ.

ಯೇಸುವಿನಲ್ಲಿ ಆದಂಥ ನೆರವೇರಿಕೆಯು ಅಕಸ್ಮಿಕವೊ?

ಆದರೂ, ಯೇಸುವಿನಲ್ಲಿ ಆದಂಥ ಮೆಸ್ಸೀಯ ಸಂಬಂಧಿತ ಪ್ರವಾದನೆಗಳ ನೆರವೇರಿಕೆಯು ಅಕಸ್ಮಿಕವಾಗಿರಸಾಧ್ಯವಿದೆಯೊ? ಒಂದು ಸಂದರ್ಶನದಲ್ಲಿ ಒಬ್ಬ ವಿದ್ವಾಂಸನು ಉತ್ತರಿಸಿದ್ದು: “ಸಾಧ್ಯವೇ ಇಲ್ಲ. ಹೀಗೆ ಆಗದೇ ಇರುವಂಥ ಸಾಧ್ಯತೆ ಎಷ್ಟು ಬೃಹತ್‌ ಆಗಿದೆಯೆಂದರೆ, ಅದು ಸಂಭವಿಸಲು ಅವಕಾಶವೇ ಇಲ್ಲ. ಯಾರೋ ಒಬ್ಬರು ಲೆಕ್ಕಾಚಾರಮಾಡಿ, ಕೇವಲ ಎಂಟು ಪ್ರವಾದನೆಗಳು ಅಕಸ್ಮಿಕವಾಗಿ ನೆರವೇರಿಸಲ್ಪಡುವ ಸಂಭವನೀಯತೆಯು 1,000 ಕೋಟಿ ಕೋಟಿಗಳಲ್ಲಿ ಕೇವಲ ಒಂದಾಗಿದೆ ಎಂದು ಕಂಡುಕೊಂಡರು.” ಈ ಅಸಾಧ್ಯತೆಯ ಬೃಹತ್‌ ಪ್ರಮಾಣವನ್ನು ದೃಷ್ಟಾಂತಿಸಲಿಕ್ಕಾಗಿ ಅವನು ಹೇಳಿದ್ದು: “ನೀವು [1,000 ಕೋಟಿ ಕೋಟಿಗಳಷ್ಟು] ಸಂಖ್ಯೆಯ ಬೆಳ್ಳಿ ಡಾಲರ್‌ಗಳನ್ನು ತೆಗೆದುಕೊಳ್ಳುವಲ್ಲಿ, ಅವು ಟೆಕ್ಸಸ್‌ ರಾಜ್ಯವನ್ನು [6,90,000 ಚದರ ಕಿಲೊಮೀಟರುಗಳಷ್ಟು ಕ್ಷೇತ್ರವನ್ನು] 0.6 ಮೀಟರುಗಳಷ್ಟು ಆಳದ ವರೆಗೆ ಆವರಿಸಸಾಧ್ಯವಿದೆ. ಅವುಗಳಲ್ಲಿ ಒಂದು ಬೆಳ್ಳಿ ಡಾಲರಿನ ಮೇಲೆ ನೀವು ಒಂದು ಗುರುತನ್ನು ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಲ್ಪಟ್ಟಿರುವ ಒಬ್ಬ ವ್ಯಕ್ತಿಯು ಇಡೀ ರಾಜ್ಯವನ್ನು ಅಲೆದಾಡುವಂತೆ ಮಾಡಿ ಅನಂತರ ಒಂದು ನಾಣ್ಯವನ್ನು ಎತ್ತಿಕೊಳ್ಳಲು ಕೆಳಗೆ ಬಗ್ಗುವಂತೆ ಮಾಡುವಲ್ಲಿ ಅವನು ಆ ಗುರುತುಮಾಡಲ್ಪಟ್ಟಿರುವ ನಾಣ್ಯವನ್ನೇ ಎತ್ತುವ ಸಾಧ್ಯತೆಗಳು ಎಷ್ಟಿರುತ್ತದೆ?” ತದನಂತರ ಆ ವಿದ್ವಾಂಸನು ತಿಳಿಸಿದ್ದೇನೆಂದರೆ, “ಇತಿಹಾಸದಲ್ಲಿ ಯಾರೊ ಒಬ್ಬರು [ಮೆಸ್ಸೀಯ ಸಂಬಂಧಿತ] ಪ್ರವಾದನೆಗಳಲ್ಲಿ ಎಂಟನ್ನು ಅಕಸ್ಮಿಕವಾಗಿ ನೆರವೇರಿಸಸಾಧ್ಯವಿದ್ದಿರುವ ಸಾಧ್ಯತೆಗಳೂ ಅಷ್ಟೇ” ಆಗಿವೆ.

ಆದರೂ, ತನ್ನ ಮೂರೂವರೆ ವರ್ಷಗಳ ಶುಶ್ರೂಷೆಯ ಸಮಯದಲ್ಲಿ ಯೇಸು ಕೇವಲ ಎಂಟನ್ನಲ್ಲ ಬದಲಾಗಿ ಅನೇಕ ಬೈಬಲ್‌ ಪ್ರವಾದನೆಗಳನ್ನು ನೆರವೇರಿಸಿದನು. ಇಂಥ ಬಲವಾದ ಪುರಾವೆಯನ್ನು ಪರಿಗಣಿಸುತ್ತಾ ಆ ವಿದ್ವಾಂಸನು ಈ ತೀರ್ಮಾನಕ್ಕೆ ಬಂದನು: “ಯೇಸು​—⁠ಮತ್ತು ಇಡೀ ಇತಿಹಾಸದಾದ್ಯಂತ ಯೇಸು ಮಾತ್ರವೇ​—⁠ಆ ಅನೇಕಾನೇಕ ಬೈಬಲ್‌ ಪ್ರವಾದನೆಗಳನ್ನು ನೆರವೇರಿಸಿದನು.”

ಮೆಸ್ಸೀಯನ “ಬರೋಣ”

ಸಾ.ಶ. 29ರಲ್ಲಿ, ನಜರೇತಿನ ಯೇಸುವಿನ ರೂಪದಲ್ಲಿ ಮೆಸ್ಸೀಯನು ಆಗಮಿಸಿದನು ಎಂಬುದಂತೂ ಸ್ಪಷ್ಟ. ಇದು ತುಂಬ ಸಾಮಾನ್ಯನಾದ, ಕಷ್ಟಾನುಭವಿಸುವ ಒಬ್ಬ ವಿಮೋಚಕನಾಗಿ ಅವನ ಬರೋಣವಾಗಿತ್ತು. ಅಧಿಕಾಂಶ ಯೆಹೂದ್ಯರು ಮತ್ತು ಅವನ ಹಿಂಬಾಲಕರು ಸಹ ನಿರೀಕ್ಷಿಸಿದ್ದಿರಬಹುದಾದಂತೆ, ರೋಮನ್ನರ ದಬ್ಬಾಳಿಕೆಯ ನೊಗವನ್ನು ಮುರಿಯಲಿಕ್ಕಾಗಿ ಸರ್ವವಿಜಯಿ ರಾಜನೋಪಾದಿ ಅವನು ಬರಲಿಲ್ಲ. (ಯೆಶಾಯ 53ನೆಯ ಅಧ್ಯಾಯ; ಜೆಕರ್ಯ 9:9; ಅ. ಕೃತ್ಯಗಳು 1:6-8) ಆದರೆ ಅವನ ಭಾವೀ ಬರೋಣವು ದೊರೆತನ ಮತ್ತು ಭಾರೀ ಅಧಿಕಾರದೊಂದಿಗೆ ಸಂಭವಿಸುವುದು ಎಂದು ಮುಂತಿಳಿಸಲ್ಪಟ್ಟಿತ್ತು.​—⁠ದಾನಿಯೇಲ 2:44; 7:13, 14.

ಬೈಬಲ್‌ ಪ್ರವಾದನೆಗಳ ಜಾಗರೂಕ ಅಧ್ಯಯನವು, ಮೆಸ್ಸೀಯನು ಪ್ರಥಮ ಶತಮಾನದಲ್ಲಿ ಆಗಮಿಸಿದನು ಮತ್ತು ಅವನು ಪುನಃ ಬರಲಿದ್ದನು ಎಂಬುದನ್ನು ಭೂವ್ಯಾಪಕವಾಗಿರುವ ತರ್ಕಸಮ್ಮತ ಜನರಿಗೆ ಮನದಟ್ಟುಮಾಡಿದೆ. ಮುಂತಿಳಿಸಲ್ಪಟ್ಟಿದ್ದ ಅವನ ಬರೋಣವು ಅಂದರೆ ಅವನ “ಸಾನ್ನಿಧ್ಯದ” (NW) ಆರಂಭವು 1914ರಲ್ಲಿ ಸಂಭವಿಸಿತು ಎಂಬುದನ್ನು ಪುರಾವೆಯು ದೃಢಪಡಿಸುತ್ತದೆ. * (ಮತ್ತಾಯ 24:3-14) ಆ ವರ್ಷದಲ್ಲಿ ನಮಗೆ ಅದೃಶ್ಯವಾಗಿದ್ದ ರೀತಿಯಲ್ಲಿ ದೇವರ ರಾಜ್ಯದ ರಾಜನಾಗಿ ಯೇಸು ಸ್ವರ್ಗದಲ್ಲಿ ಸಿಂಹಾಸನಾರೂಢನಾದನು. ಸ್ವಲ್ಪದರಲ್ಲೇ ಅವನು, ಏದೆನ್‌ ತೋಟದಲ್ಲಿ ಉಂಟಾದ ದಂಗೆಯ ಪರಿಣಾಮಗಳನ್ನು ಭೂಮಿಯಿಂದ ಅಳಿಸಿಹಾಕಲು ಕ್ರಿಯೆಗೈಯುವನು. ತರುವಾಯದ ಅವನ ಸಹಸ್ರ ವರ್ಷದಾಳಿಕೆಯು, ವಾಗ್ದತ್ತ ಸಂತತಿಯಾಗಿ ಅಂದರೆ ‘ಲೋಕದ ಪಾಪವನ್ನು ನಿವಾರಣೆಮಾಡುವಂಥ’ ಮೆಸ್ಸೀಯನೆಂದು ಯಾರು ಅವನಲ್ಲಿ ನಂಬಿಕೆಯನ್ನು ತೋರಿಸುತ್ತಾರೋ ಅವರೆಲ್ಲರನ್ನು ಆಶೀರ್ವದಿಸುವುದು.​—⁠ಯೋಹಾನ 1:29; ಪ್ರಕಟನೆ 21:3, 4.

ಈ ಪುರಾವೆಯನ್ನು ನಿಮ್ಮೊಂದಿಗೆ ಚರ್ಚಿಸಲು ಮತ್ತು ಮೆಸ್ಸೀಯನ ಆಳ್ವಿಕೆಯು ನಿಮಗೆ ಹಾಗೂ ನಿಮ್ಮ ಪ್ರಿಯರಿಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಬೈಬಲಿನಿಂದ ತೋರಿಸಿಕೊಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.

[ಪಾದಟಿಪ್ಪಣಿಗಳು]

^ ಪ್ಯಾರ. 17 ದಾನಿಯೇಲ 9:25ರ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌), ಸಂಪುಟ 2, 899-904ನೇ ಪುಟಗಳನ್ನು ನೋಡಿ.

^ ಪ್ಯಾರ. 27 ಹೆಚ್ಚಿನ ವಿವರಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10 ಮತ್ತು 11ನೇ ಅಧ್ಯಾಯಗಳನ್ನು ನೋಡಿ.

[ಪುಟ 6, 7ರಲ್ಲಿರುವ ರೇಖಾಕೃತಿ/ಚಿತ್ರಗಳು]

ಸಾ.ಶ.ಪೂ. 455, ಸಾ.ಶ. 29, ಸಾ.ಶ. 1914, ಅತಿ ಬೇಗನೆ

‘ಯೆರೂಸಲೇಮು ಮೆಸ್ಸೀಯನ ಮೆಸ್ಸೀಯನು ಮೆಸ್ಸೀಯನು

ಜೀರ್ಣೋದ್ಧಾರ ಆಗಮನ ಸ್ವರ್ಗದಲ್ಲಿ ದುಷ್ಟತನವನ್ನು

ವಾಗುವಂತೆ ಆಜ್ಞೆಯು ಸಿಂಹಾಸನ ಕೊನೆಗೊಳಿಸುವನು

ಹೊರಡಿಸಲ್ಪಟ್ಟದ್ದು’ ವನ್ನೇರಿದ್ದು ಮತ್ತು ಭೂಮಿಯನ್ನು

ಪರದೈಸಾಗಿ ಮಾಡುವನು

483 ವರ್ಷಗಳು

(69 ಪ್ರವಾದನಾತ್ಮಕ ವಾರಗಳು)

​—⁠ದಾನಿಯೇಲ 9:25