ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ಬೋಧನೆಗಳನ್ನು ಇಂದು ಯಾರು ಅನ್ವಯಿಸುತ್ತಿದ್ದಾರೆ?

ಕ್ರಿಸ್ತನ ಬೋಧನೆಗಳನ್ನು ಇಂದು ಯಾರು ಅನ್ವಯಿಸುತ್ತಿದ್ದಾರೆ?

ಕ್ರಿಸ್ತನ ಬೋಧನೆಗಳನ್ನು ಇಂದು ಯಾರು ಅನ್ವಯಿಸುತ್ತಿದ್ದಾರೆ?

ಯೇಸು ಕ್ರಿಸ್ತನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂದು ವ್ಯಾಪಕವಾಗಿ ವೀಕ್ಷಿಸಲ್ಪಡುತ್ತಾನೆ. ಅನೇಕರು ಅವನನ್ನು ನಿಜವಾದ ಮಹಾನ್‌ ಪುರುಷ ಎಂದು ಪರಿಗಣಿಸುತ್ತಾರೆ. ಸುಮಾರು ಎರಡು ಸಾವಿರ ವರುಷಗಳಿಂದ ಅವನ ಬೋಧನೆಗಳು ಜನರ ಜೀವಿತಗಳ ಮೇಲೆ ಅಪಾರ ಪ್ರಭಾವವನ್ನು ಬೀರಿವೆ. ಇಂಗ್ಲಿಷ್‌ ಬರಹಗಾರನಾದ ಮೆಲ್ವನ್‌ ಬ್ರ್ಯಾಗ್‌ ಬರೆದದ್ದು: ಅವನ ಬೋಧನೆಗಳು “ಉತ್ತಮರಾದ ಮತ್ತು ದಯಾಪರರಾದ ಸಾಮಾನ್ಯ ಜನರ ಜೀವನದಿಂದ ಹಿಡಿದು ಗಮನಸೆಳೆಯುವಂಥ ದೊಡ್ಡ ದೊಡ್ಡ ದಯಾಪರ ಕೃತ್ಯಗಳನ್ನು ಮಾಡುವ ಜನರ ಜೀವನದ ವರೆಗೆ” ಪ್ರಭಾವಬೀರಿವೆ.

ಕ್ರೈಸ್ತತ್ವದ ಕುರಿತಾಗಿ ಏನು?

ಕ್ರೈಸ್ತತ್ವದ ಕುರಿತಾಗಿ ಏನು? ಕ್ರೈಸ್ತತ್ವವನ್ನು, “ಮಾನವಕುಲದ ಅತ್ಯಂತ ಮಹಾನ್‌ ಆಧ್ಯಾತ್ಮಿಕ ಪ್ರಗತಿಗಳಲ್ಲಿ ಒಂದು” ಎಂಬುದಾಗಿ ವರ್ಣಿಸಲಾಗಿದೆ. ಸ್ಕಾಟ್‌ಲಂಡ್‌ನ ಗ್ಲಾಸ್‌ಗೋ ಕ್ಯಾಲಿಡೋನಿಯನ್‌ ವಿಶ್ವವಿದ್ಯಾನಿಲಯದ ಡೇವಿಡ್‌ ಕೆಲ್‌ಸೋ ಕ್ರೈಸ್ತತ್ವದ ಕುರಿತು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾ ಬರೆದದ್ದು: “ಕಲೆ, ವಾಸ್ತುಶಿಲ್ಪ, ತತ್ತ್ವಜ್ಞಾನ, ಸಂಗೀತ ಮತ್ತು ಸಮಾಜ ಸೇವೆ ಈ ಕ್ಷೇತ್ರಗಳಲ್ಲಿನ ಕ್ರೈಸ್ತತ್ವದ ಎರಡು ಸಾವಿರ ವರುಷಗಳ ಇತಿಹಾಸದಲ್ಲಿ ಹೋಲಿಸಲಸಾಧ್ಯವಾದಷ್ಟು ಸಾಧನೆಗಳು ತುಂಬಿವೆ.”

ಆದರೆ, ಇತರ ಅನೇಕರು ವಿಷಯವನ್ನು ಪ್ರತ್ಯೇಕವಾದ ದೃಷ್ಟಿಕೋನದಲ್ಲಿ ವೀಕ್ಷಿಸುತ್ತಾರೆ. ಕ್ರೈಸ್ತತ್ವವು “ಯೇಸು ಕ್ರಿಸ್ತನ ಬೋಧನೆಗಳ ಮೇಲೆ ಆಧರಿಸಿರುವ ಮತ್ತು ಅವನು ದೇವರ ಮಗನಾಗಿದ್ದಾನೆ ಎಂದು ನಂಬುವ ಒಂದು ಧರ್ಮವಾಗಿದೆ” ಎಂಬುದಾಗಿ ಒಂದು ನಿಘಂಟು (ಕೊಲಿನ್ಸ್‌ ಕೋಬಿಲ್ಡ್‌) ಕ್ರೈಸ್ತತ್ವವನ್ನು ಅರ್ಥನಿರೂಪಿಸಿರುವ ವಿಷಯದಲ್ಲಿ ಅವರಿಗೆ ಯಾವುದೇ ಅಸಮ್ಮತಿಯಿಲ್ಲ. ಆದರೆ, ಕ್ರೈಸ್ತತ್ವವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಧಾರ್ಮಿಕ ಸಂಸ್ಥೆಗಳ ಮತ್ತು ಸಂಘಟನೆಗಳ ನಡತೆಯಿಂದಾಗಿ ಅವರು ವಿಕರ್ಷಿತರಾಗಿದ್ದಾರೆ.

ಉದಾಹರಣೆಗೆ, ಎರಡನೇ ಗುಂಪಿನ ಜನರಂತೆ 19ನೇ ಶತಮಾನದ ಜರ್ಮನ್‌ ತತ್ತ್ವಜ್ಞಾನಿ ಫ್ರೀಡ್ರಿಕ್‌ ನೀಟ್‌ಚ, ಕ್ರೈಸ್ತತ್ವವನ್ನು “ಮಾನವಕುಲದ ಅಳಿಯದ ಕಳಂಕ” ಎಂದು ವರ್ಣಿಸಿದನು. ಅವನು ಬರೆದದ್ದು: ಕ್ರೈಸ್ತತ್ವವು “ಒಂದು ಅತ್ಯಂತ ಮಹಾ ಶಾಪವಾಗಿದೆ, ಒಂದು ಅತಿ ದೊಡ್ಡ ಮತ್ತು ತೀವ್ರವಾದ ಭ್ರಷ್ಟತೆಯಾಗಿದೆ, . . . ಅದು ತನ್ನ ಗುರಿಯನ್ನು ಸಾಧಿಸಲು ಅತಿ ವಿಷಮಯ, ಅತಿ ಅಪ್ರಾಮಾಣಿಕ, ಅತಿ ಗುಪ್ತ ಮತ್ತು ಅತಿ ಕ್ಷುಲ್ಲಕ ಮಟ್ಟಕ್ಕೂ ಇಳಿಯಬಲ್ಲದು.” ನೀಟ್‌ಚನಿಗೆ ಕ್ರೈಸ್ತತ್ವದ ಬಗ್ಗೆ ವಿಪರೀತ ದೃಷ್ಟಿಕೋನವಿತ್ತು ಎಂಬುದು ಒಪ್ಪತಕ್ಕ ವಿಷಯವಾದರೂ ಅನೇಕ ಇತರ ತರ್ಕಬದ್ಧ ವೀಕ್ಷಕರು ಸಹ ಇದೇ ಸಮಾಪ್ತಿಯನ್ನು ತಲಪಿದ್ದಾರೆ. ಏಕೆ? ಏಕೆಂದರೆ ಅನೇಕ ಶತಮಾನಗಳಿಂದ, ಕ್ರೈಸ್ತರೆನಿಸಿಕೊಳ್ಳುವವರ ನಡತೆಯು ಯೇಸು ಕ್ರಿಸ್ತನ ಗುಣಗಳಿಂದ ಗುರುತಿಸಲ್ಪಡುವ ಬದಲು ವ್ಯಾಪಕವಾದ “ನೈತಿಕ ಭ್ರಷ್ಟತೆ, ಭೀಕರವಾದ ಪಾತಕಗಳು ಮತ್ತು ದೇವದೂಷಣೆಗಳಿಂದ” ಗುರುತಿಸಲ್ಪಡುತ್ತಿದೆ.

ಕ್ರಿಸ್ತನು ಕ್ರೈಸ್ತತ್ವದಲ್ಲಿ ಇದ್ದಾನೊ?

ಹಾಗಿರುವಾಗ, “ಕ್ರಿಸ್ತನು ಕ್ರೈಸ್ತತ್ವದಲ್ಲಿ ಈಗಲೂ ಇದ್ದಾನೊ?” ಎಂದು ಕೇಳುವುದು ತರ್ಕಬದ್ಧವಾಗಿದೆ. “ಏಕಿಲ್ಲ, ಖಂಡಿತವಾಗಿಯೂ ಇದ್ದಾನೆ! ‘ಯುಗದ ಸಮಾಪ್ತಿಯ ವರೆಗೂ ನಿಮ್ಮ ಸಂಗಡ ಇರುತ್ತೇನೆ’ ಎಂದು ಅವನು ತನ್ನ ಹಿಂಬಾಲಕರಿಗೆ ಮಾತುಕೊಡಲಿಲ್ಲವೆ?” ಎಂದು ಕೂಡಲೆ ಕೆಲವರು ಪ್ರತಿಕ್ರಿಯಿಸುವರು. (ಮತ್ತಾಯ 28:20) ಹೌದು, ಯೇಸು ಹಾಗೆ ಹೇಳಿದ್ದು ನಿಜ. ಆದರೆ ಕ್ರೈಸ್ತರೆಂದು ಹೇಳಿಕೊಳ್ಳುವವರ ನಡತೆಯು ಹೇಗೆಯೇ ಇರಲಿ ಅವರೆಲ್ಲರೊಂದಿಗೆ ತಾನು ಇರುತ್ತೇನೆಂದು ಅವನು ಹೇಳಿದ್ದನೊ?

ದೇವರು ಯಾವುದೇ ಷರತ್ತಿಲ್ಲದೆ ತಮ್ಮೊಂದಿಗಿರುತ್ತಾನೆ ಎಂದು ಯೇಸುವಿನ ದಿನಗಳಲ್ಲಿದ್ದ ಕೆಲವು ಧಾರ್ಮಿಕ ಮುಖಂಡರು ನೆನಸಿದ್ದರು ಎಂಬುದನ್ನು ಜ್ಞಾಪಿಸಿಕೊಳ್ಳಿ. ದೇವರು ಇಸ್ರಾಯೇಲ್ಯರನ್ನು ಒಂದು ವಿಶೇಷ ನಿಯೋಗಕ್ಕಾಗಿ ಆರಿಸಿಕೊಂಡಿದ್ದ ಕಾರಣ, ತಾವು ಏನೇ ಮಾಡಿದರೂ ಆತನು ತಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಕೆಲವು ಧಾರ್ಮಿಕ ಮುಖಂಡರು ನೆನಸಿದ್ದರು. (ಮೀಕ 3:11) ಆದರೆ ಕ್ರಮೇಣ ಅವರು ದೇವರ ನಿಯಮಗಳನ್ನು ಮತ್ತು ಮಟ್ಟಗಳನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಅದರ ಪರಿಣಾಮವಾಗಿ, ಯೇಸು ಕ್ರಿಸ್ತನು ಅವರಿಗೆ ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸಿದ್ದು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:38) ಇಡೀ ಧಾರ್ಮಿಕ ವ್ಯವಸ್ಥೆಯೇ ದೇವರ ಅನುಗ್ರಹವನ್ನು ಕಳೆದುಕೊಂಡಿತು. ಆತನು ಅದನ್ನು ತ್ಯಜಿಸಿಬಿಟ್ಟನು ಮತ್ತು ರೋಮನ್‌ ಸೈನಿಕರು ಅದರ ಮುಖ್ಯ ನಗರವಾದ ಯೆರೂಸಲೇಮನ್ನು ಹಾಗೂ ಅದರ ಆಲಯವನ್ನು ಸಾ.ಶ. 70ರಲ್ಲಿ ನಾಶಮಾಡುವಂತೆ ಅನುಮತಿಸಿದನು.

ಇದೇ ರೀತಿಯಾಗಿ ಕ್ರೈಸ್ತತ್ವಕ್ಕೂ ಆಗಸಾಧ್ಯವಿದೆಯೊ? “ಯುಗದ ಸಮಾಪ್ತಿಯ ವರೆಗೂ” ತಾನು ತನ್ನ ಹಿಂಬಾಲಕರೊಂದಿಗೆ ಇರುತ್ತೇನೆಂದು ಯೇಸು ಮಾತುಕೊಟ್ಟಾಗ ಯಾವ ಷರತ್ತುಗಳನ್ನು ಹಾಕಿದನೆಂಬುದನ್ನು ನಾವೀಗ ಪರಿಗಣಿಸೋಣ.

[ಪುಟ 2, 3ರಲ್ಲಿರುವ ಚಿತ್ರಗಳು]

ಯೇಸು ಕ್ರಿಸ್ತನ ಬೋಧನೆಗಳು ಲೋಕಾದ್ಯಂತ ಇರುವ ಲಕ್ಷಾಂತರ ಜನರ ಜೀವಿತಗಳ ಮೇಲೆ ಅಪಾರ ಪ್ರಭಾವವನ್ನು ಬೀರಿವೆ