ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಇಂದು ಇಷ್ಟೊಂದು ಕೆಟ್ಟತನವು ಅಸ್ತಿತ್ವದಲ್ಲಿರಲು ಕೆಲವು ಕಾರಣಗಳು ಯಾವುವು?

ದುಷ್ಕೃತ್ಯಗಳಿಗೆ ಒಂದು ಕಾರಣವು, ಕೆಟ್ಟತನದ ಕಡೆಗೆ ಓಲುವ ಮಾನವ ಪ್ರವೃತ್ತಿಯೇ ಆಗಿದೆ. (ಆದಿಕಾಂಡ 8:21) ಇನ್ನೊಂದು ಕಾರಣವು, ಅನೇಕರಿಗೆ ದೇವರ ಚಿತ್ತದ ನಿಷ್ಕೃಷ್ಟ ಜ್ಞಾನದ ಕೊರತೆಯಿದೆ. ಅಷ್ಟುಮಾತ್ರವಲ್ಲ, ಕೆಟ್ಟತನದ ಮೂಲನಾಗಿರುವ ಸೈತಾನನು ಮಾನವ ವ್ಯವಹಾರಗಳಲ್ಲಿ ಹೆಚ್ಚೆಚ್ಚಾಗಿ ಮಧ್ಯೆ ಪ್ರವೇಶಿಸುತ್ತಿದ್ದಾನೆ.​—⁠1/1, ಪುಟಗಳು 4-6.

ತಕ್ಕ ಕಾಲದಲ್ಲಿ ಆಡಲ್ಪಡುವ ಒಳ್ಳೇ ಮಾತಿನಿಂದ ಸಿಗುವ ಸಕಾರಾತ್ಮಕ ಫಲಗಳಾವುವು? (ಜ್ಞಾನೋಕ್ತಿ 12:25)

ನಾವು ಯಾರೊಂದಿಗೆ ಮಾತಾಡುತ್ತೇವೋ ಅವರಿಗೆ ಅಂಥ ಮಾತು ಆತ್ಮವಿಶ್ವಾಸವನ್ನು ಮೂಡಿಸಬಲ್ಲದು, ಅವರನ್ನು ಪ್ರಚೋದಿಸಿ ಉತ್ತೇಜಿಸಬಲ್ಲದು ಮತ್ತು ಅವರಲ್ಲಿ ಆಪ್ತ ಸಂಬಂಧವನ್ನು ಉಂಟುಮಾಡಬಲ್ಲದು. ಅಷ್ಟುಮಾತ್ರವಲ್ಲ, ನಾವು ಶ್ಲಾಘಿಸುವ ಸಂದರ್ಭಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ, ಇತರರಲ್ಲಿ ಒಳ್ಳೇದನ್ನು ನೋಡುವಂತೆ ಅದು ನಮಗೆ ಸಹಾಯಮಾಡುತ್ತದೆ.​—⁠1/1, ಪುಟಗಳು 16-17.

ಒಡಂಬಡಿಕೆಯ ಮಂಜೂಷದಲ್ಲಿ ಏನಿತ್ತು?

ಅದರಲ್ಲಿ ಧರ್ಮಶಾಸ್ತ್ರದ ಎರಡು ಕಲ್ಲಿನ ಹಲಿಗೆಗಳು ಹಾಗೂ ಸ್ವಲ್ಪ ಮನ್ನವು ಇಡಲ್ಪಟ್ಟಿತ್ತು. ಕೋರಹನ ದಂಗೆಯ ಬಳಿಕ, ಆ ಕಾಲದಲ್ಲಿದ್ದ ಸಂತತಿಯ ವಿರುದ್ಧ ಸಾಕ್ಷಿಯಾಗಿ ಕಾರ್ಯನಡಿಸಲಿಕ್ಕಾಗಿ ಆರೋನನ ಕೋಲು ಆ ಮಂಜೂಷದಲ್ಲಿ ಇಡಲ್ಪಟ್ಟಿತು. (ಇಬ್ರಿಯ 9:4) ಸೊಲೊಮೋನನ ದೇವಾಲಯದ ಪ್ರತಿಷ್ಠಾಪನೆಗೆ ಮೊದಲು, ಆ ಕೋಲು ಮತ್ತು ಮನ್ನವು ಮಂಜೂಷದಿಂದ ತೆಗೆಯಲ್ಪಟ್ಟಿದ್ದಿರಬಹುದು.​—⁠1/15, ಪುಟ 31.

ನೆಹೆಮೀಯನ ದಿನಗಳಲ್ಲಿದ್ದ ಯೆಹೂದ್ಯರು ದೇವಾಲಯಕ್ಕೆ ಕಟ್ಟಿಗೆಗಳನ್ನು ತರಬೇಕಿತ್ತೇಕೆ?

ಮೋಶೆಯ ಧರ್ಮಶಾಸ್ತ್ರವು ಕಟ್ಟಿಗೆಯನ್ನು ದಾನಮಾಡುವುದನ್ನು ಅಗತ್ಯಪಡಿಸಿರಲಿಲ್ಲ. ಆದರೆ ನೆಹೆಮೀಯನ ದಿನಗಳಲ್ಲಿ ಯಜ್ಞವೇದಿಯ ಮೇಲೆ ಪ್ರಾಣಿಗಳನ್ನು ಸುಡಲು ಸತತವಾಗಿ ದೊಡ್ಡ ಪ್ರಮಾಣದ ಕಟ್ಟಿಗೆಯ ಸರಬರಾಯಿಯ ಅಗತ್ಯವಿತ್ತು.​—⁠2/1, ಪುಟ 11.

ಮೂರಾಟೋರಿಯನ್‌ ಅವಶಿಷ್ಟ ಎಂದರೇನು?

ಇದು ಒಂದು ಲ್ಯಾಟಿನ್‌ ಹಸ್ತಾಕ್ಷರ ಗ್ರಂಥದ ಭಾಗವಾಗಿದೆ. ಈ ಗ್ರಂಥಪಾಠವು, ಮೂಲತಃ ಗ್ರೀಕ್‌ ಭಾಷೆಯಲ್ಲಿ ಸಾ.ಶ. ಎರಡನೆಯ ಶತಮಾನದ ಅಂತ್ಯದಷ್ಟಕ್ಕೆ ರಚಿಸಲ್ಪಟ್ಟಿತ್ತು. ಇದರಲ್ಲಿ ಅಧಿಕೃತವೆಂದು ಪರಿಗಣಿಸಲ್ಪಟ್ಟಿರುವ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿರುವ ಪುಸ್ತಕಗಳ ಅತ್ಯಂತ ಹಳೆಯ ಪಟ್ಟಿ, ಹಾಗೂ ಆ ಪುಸ್ತಕಗಳು ಮತ್ತು ಅವುಗಳ ಬರಹಗಾರರ ಕುರಿತಾದ ಹೇಳಿಕೆಗಳು ಒಳಗೂಡಿದೆ.​—⁠2/15, ಪುಟಗಳು 13-14.

ಪಾರಸಿಯ ರಾಣಿಯಾದ ವಷ್ಟಿಯು ಅರಸನ ಬಳಿಗೆ ಬರಲು ನಿರಾಕರಿಸಿದ್ದೇಕೆ? (ಎಸ್ತೇರಳು 1:​10-12)

ಬೈಬಲ್‌ ಅವಳ ಹೇತುಗಳೇನಾಗಿದ್ದವೆಂದು ತಿಳಿಸುವುದಿಲ್ಲ. ಕುಡಿದು ಮತ್ತರಾಗಿದ್ದ ಅರಸನ ಅತಿಥಿಗಳ ಮುಂದೆ ತನ್ನನ್ನು ಅವಮಾನಗೊಳಿಸಿಕೊಳ್ಳಲು ಇಚ್ಛಿಸದ ಕಾರಣ ಅವಳು ಅರಸನ ಮುಂದೆ ಬರಲು ನಿರಾಕರಿಸಿದಳು ಎಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ಅಥವಾ, ರೂಪವತಿಯಾಗಿದ್ದ ಈ ರಾಣಿಯು ನಿಜವಾಗಿಯೂ ಅಧೀನತೆಯನ್ನು ತೋರಿಸದವಳಾಗಿದ್ದಿರಬಹುದು. ಹೀಗೆ ಅವಳು ಪಾರಸಿಯ ಸಾಮ್ರಾಜ್ಯದಲ್ಲಿದ್ದ ಬೇರೆ ಪತ್ನಿಯರಿಗೆ ಕೆಟ್ಟ ಮಾದರಿಯನ್ನಿಟ್ಟಳು.​—⁠3/1, ಪುಟ 9.

ವಿಮೋಚನಾ ಮೌಲ್ಯವು ನಮ್ಮನ್ನು ಹೇಗೆ ವಿಮುಕ್ತಗೊಳಿಸುತ್ತದೆ?

ಯೇಸುವಿನ ಯಜ್ಞವು ಬಾಧ್ಯತೆಯಾಗಿ ಬಂದಿರುವ ಪಾಪದಿಂದ ನಮ್ಮನ್ನು ಬಿಡುಗಡೆಮಾಡಬಲ್ಲದು ಮತ್ತು ಪಾಪದ ಮಾರಕ ಪರಿಣಾಮಗಳಿಂದ ನಮ್ಮನ್ನು ವಿಮೋಚಿಸಬಲ್ಲದು. (ರೋಮಾಪುರ 6:23) ಈ ಯಜ್ಞವು ನಿಜ ಕ್ರೈಸ್ತರನ್ನು ಒಂದು ತಪ್ಪಿತಸ್ಥ ಮನಸ್ಸಾಕ್ಷಿಯಿಂದ ವಿಮುಕ್ತಗೊಳಿಸುತ್ತದೆ. ಮತ್ತು ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನಿಡುವುದರ ಮೂಲಕ, ದೇವರ ಮುಂದೆ ನಮ್ಮ ನಿಲುವಿನ ಸಂಬಂಧವಾದ ಭಯದಿಂದ ನಾವು ಮುಕ್ತರಾಗಸಾಧ್ಯವಿದೆ. (1 ಯೋಹಾನ 2:⁠1)​—⁠3/15, ಪುಟ 8.

ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಧರ್ಮಶಾಸ್ತ್ರದಲ್ಲಿರುವ ನಿಷೇಧದಿಂದ ನಾವೇನನ್ನು ಕಲಿಯಸಾಧ್ಯವಿದೆ? (ವಿಮೋಚನಕಾಂಡ 23:19)

ಒಂದು ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು, ಮಳೆಯನ್ನು ಬರಿಸಲಿಕ್ಕಾಗಿ ಮಾಡಲಾಗುತ್ತಿದ್ದ ಒಂದು ವಿಧರ್ಮಿ ಸಂಸ್ಕಾರವಿಧಿ ಆಗಿದ್ದಿರಬಹುದು. (ಯಾಜಕಕಾಂಡ 20:23) ತಾಯಿಯ ಹಾಲು ಮರಿಗೆ ಪೋಷಣೆಕೊಟ್ಟು ಅದು ಬೆಳೆಯಲಿಕ್ಕೆ ಸಹಾಯಮಾಡುವಂತೆ ದೇವರು ಅದನ್ನು ಒದಗಿಸಿದ್ದನು. ಆದರೆ ಮರಿಯನ್ನು ಆ ಹಾಲಿನಲ್ಲಿ ಬೇಯಿಸುವುದು, ತಾಯಿ ಮತ್ತು ಮರಿಯ ನಡುವೆ ದೇವರು ಸ್ಥಾಪಿಸಿದ್ದ ಸಂಬಂಧಕ್ಕೆ ತಿರಸ್ಕಾರವನ್ನು ತೋರಿಸಸಾಧ್ಯವಿತ್ತು. ಇದನ್ನು ಮಾಡದಂತೆ ಕೊಡಲ್ಪಟ್ಟ ನಿಯಮವು, ದೇವರ ಕೋಮಲ ಕರುಣೆಯನ್ನು ತೋರಿಸುತ್ತದೆ.​—⁠4/1, ಪುಟ 31.