ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಸಮಸ್ತಜನಾಂಗಗಳ ಇಷ್ಟವಸ್ತುಗಳು” ಸತ್ಯಾರಾಧನೆಯ ‘ಆಲಯದೊಳಗೆ’ ತುಂಬುವಂತೆ ಯಾವುದು ಮಾಡುತ್ತಿದೆ?​—ಹಗ್ಗಾಯ 2:⁠7.

ಪ್ರವಾದಿಯಾದ ಹಗ್ಗಾಯನ ಮೂಲಕ ಯೆಹೋವನು ಹೀಗೆ ಮುಂತಿಳಿಸಿದನು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” (ಹಗ್ಗಾಯ 2:7) “ಸಕಲಜನಾಂಗಗಳ” ನಡುಗಿಸುವಿಕೆಯು ಸಮಸ್ತಜನಾಂಗಗಳ “ಇಷ್ಟವಸ್ತುಗಳು” ಅಂದರೆ ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಸತ್ಯಾರಾಧನೆಯನ್ನು ಸ್ವೀಕರಿಸುವಂತೆ ಮಾಡುತ್ತಿದೆಯೋ? ಇದಕ್ಕೆ ಉತ್ತರವು ಇಲ್ಲ ಎಂದಾಗಿದೆ.

ಜನಾಂಗಗಳನ್ನು ಯಾವುದು ನಡುಗಿಸುತ್ತದೆ ಅಥವಾ ಅದುರಿಸುತ್ತದೆ ಮತ್ತು ಈ ಅದುರಿಸುವಿಕೆಯ ಫಲಿತಾಂಶವೇನು ಎಂಬುದನ್ನು ಪರಿಗಣಿಸಿರಿ. ‘ಅನ್ಯಜನಗಳು ದೊಂಬಿಮಾಡುತ್ತಿವೆ ಮತ್ತು ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯೋಚಿಸುತ್ತಿದ್ದಾರೆ’ ಎಂದು ಬೈಬಲ್‌ ತಿಳಿಸುತ್ತದೆ. (ಕೀರ್ತನೆ 2:1) ಅವರು ‘ಯೋಚಿಸುತ್ತಿರುವ’ ಅಥವಾ ಧ್ಯಾನಿಸುತ್ತಿರುವ ‘ವ್ಯರ್ಥಕಾರ್ಯವು,’ ತಮ್ಮ ಸ್ವಂತ ಪರಮಾಧಿಕಾರವನ್ನು ಮುಂದುವರಿಸುತ್ತಾ ಹೋಗುವುದರ ಕುರಿತಾಗಿದೆ. ಅವರ ಆಳ್ವಿಕೆಗೆ ಒಡ್ಡಲ್ಪಡುವ ಯಾವುದೇ ಬೆದರಿಕೆಗಿಂತ ಹೆಚ್ಚಾಗಿ ಇನ್ನಾವುದೂ ಅವರನ್ನು ಅದುರಿಸಲಾರದು.

ಯೆಹೋವನ ಸಾಕ್ಷಿಗಳಿಂದ ನಿರ್ವಹಿಸಲ್ಪಡುತ್ತಿರುವ ದೇವರ ಸ್ಥಾಪಿತ ರಾಜ್ಯದ ಲೋಕವ್ಯಾಪಕ ಸಾರುವಿಕೆಯು, ಜನಾಂಗಗಳಿಗೆ ನಿರ್ದಿಷ್ಟವಾಗಿ ಇಂಥದ್ದೇ ಒಂದು ಬೆದರಿಕೆಯಾಗಿ ಪರಿಣಮಿಸಿದೆ. ವಾಸ್ತವದಲ್ಲಿ, ಯೇಸು ಕ್ರಿಸ್ತನಿಂದ ಆಳಲ್ಪಡುವ ದೇವರ ಮೆಸ್ಸೀಯ ರಾಜ್ಯವು ‘ಎಲ್ಲ [ಮಾನವನಿರ್ಮಿತ] ರಾಜ್ಯಗಳನ್ನು ಭಂಗಪಡಿಸಿ ನಿರ್ನಾಮಮಾಡಲಿದೆ.’ (ದಾನಿಯೇಲ 2:44) ನಮ್ಮ ಸಾರುವ ಕೆಲಸದಲ್ಲಿ ಒಳಗೂಡಿರುವ ನ್ಯಾಯತೀರ್ಪಿನ ಸಂದೇಶವು ಜನಾಂಗಗಳ ನಡುವೆ ಕಂಪನವನ್ನು ಉಂಟುಮಾಡುತ್ತಿದೆ. (ಯೆಶಾಯ 61:2) ಸಾರುವ ಕೆಲಸವು ಇನ್ನಷ್ಟು ವ್ಯಾಪಕವಾಗಿ ಮತ್ತು ತೀವ್ರವಾಗಿ ಮಾಡಲ್ಪಡುವಾಗ ಆ ಕಂಪನವು ಇನ್ನೂ ಹೆಚ್ಚು ತೀಕ್ಷ್ಣಗೊಳ್ಳುತ್ತದೆ. ಹಗ್ಗಾಯ 2:7ರಲ್ಲಿ ಮುಂತಿಳಿಸಲ್ಪಟ್ಟಿರುವ ನಡುಗಿಸುವಿಕೆಯು ಯಾವುದರ ಸೂಚನೆಯಾಗಿದೆ?

ಹಗ್ಗಾಯ 2:6ರಲ್ಲಿ ನಾವು ಓದುವುದು: ‘ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ​—⁠ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿಸುವೆನು.’ ಈ ವಚನದಿಂದ ಉದ್ಧರಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಆತನು​—⁠ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ನಡುಗಿಸುವೆನೆಂದು ವಾಗ್ದಾನಮಾಡಿದ್ದಾನೆ. ಇನ್ನೊಂದೇ ಸಾರಿ ಎಂಬೀ ಮಾತನ್ನು ಯೋಚಿಸಿದರೆ ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದದರಿಂದ ತೆಗೆದುಹಾಕಲ್ಪಡಬೇಕೆಂಬದು ಸ್ಪಷ್ಟವಾಗುತ್ತದೆ; ಆಗ ಕದಲಿಸದೆ ಇರುವ ವಸ್ತುಗಳು [ರಾಜ್ಯವು] ಸ್ಥಿರವಾಗಿ ನಿಲ್ಲುವವು.” (ಇಬ್ರಿಯ 12:26, 27) ಹೌದು, ದೇವರು ತರಲಿರುವ ಹೊಸ ಲೋಕಕ್ಕೆ ದಾರಿಮಾಡಿಕೊಡಲಿಕ್ಕಾಗಿ ಈಗ ಇರುವ ಇಡೀ ವಿಷಯಗಳ ವ್ಯವಸ್ಥೆಯು ಸಂಪೂರ್ಣವಾಗಿ ನಿರ್ನಾಮಮಾಡಲ್ಪಡುವುದು.

ಜನಾಂಗಗಳು ನಡುಗಿಸಲ್ಪಟ್ಟಿರುವುದರಿಂದ ಅಥವಾ ಅದುರಿಸಲ್ಪಟ್ಟಿರುವುದರಿಂದ ಪ್ರಾಮಾಣಿಕ ಹೃದಯದ ಜನರು ಸತ್ಯಾರಾಧನೆಯ ಕಡೆಗೆ ಆಕರ್ಷಿಸಲ್ಪಟ್ಟಿಲ್ಲ. ಅವರನ್ನು ಯೆಹೋವನ ಕಡೆಗೆ ಮತ್ತು ಆತನ ಆರಾಧನೆಯ ಕಡೆಗೆ ಆಕರ್ಷಿಸುತ್ತಿರುವುದು, ಯಾವುದು ಜನಾಂಗಗಳನ್ನು ನಡುಗಿಸುತ್ತಿದೆಯೋ ಆ ಕ್ರಿಯೆ ಅಂದರೆ ದೇವರ ಸ್ಥಾಪಿತ ರಾಜ್ಯದ ಲೋಕವ್ಯಾಪಕ ಸಾರುವಿಕೆಯೇ ಆಗಿದೆ. ‘ನಿತ್ಯವಾದ ಶುಭವರ್ತಮಾನವನ್ನು’ ಸಾರಿಹೇಳುವುದು, ನಿತ್ಯಜೀವಕ್ಕೆ ನೇಮಿಸಲ್ಪಟ್ಟ ವ್ಯಕ್ತಿಗಳನ್ನು ಸತ್ಯ ದೇವರ ಆರಾಧನೆಯ ಕಡೆಗೆ ಆಕರ್ಷಿಸುತ್ತದೆ.​—⁠ಪ್ರಕಟನೆ 14:​6, 7.

ರಾಜ್ಯ ಸಂದೇಶವು ನ್ಯಾಯತೀರ್ಪಿನ ಹಾಗೂ ರಕ್ಷಣೆಯ ಸಂದೇಶವಾಗಿದೆ. (ಯೆಶಾಯ 61:1, 2) ಇದನ್ನು ಲೋಕವ್ಯಾಪಕವಾಗಿ ಸಾರುವುದರಿಂದ ಇಬ್ಬಗೆಯ ಫಲಿತಾಂಶಗಳು ದೊರಕುತ್ತವೆ: ಒಂದು ಜನಾಂಗಗಳ ನಡುಗಿಸುವಿಕೆ ಮತ್ತು ಇನ್ನೊಂದು ಯೆಹೋವನ ಮಹಿಮೆಗಾಗಿ ಜನಾಂಗಗಳ ಇಷ್ಟವಸ್ತುಗಳ ಒಟ್ಟುಗೂಡಿಸುವಿಕೆ.