ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಹೇಗೆ ಯಶಸ್ವಿಗಳಾಗಬಲ್ಲಿರಿ?

ನೀವು ಹೇಗೆ ಯಶಸ್ವಿಗಳಾಗಬಲ್ಲಿರಿ?

ನೀವು ಹೇಗೆ ಯಶಸ್ವಿಗಳಾಗಬಲ್ಲಿರಿ?

ಹೆತ್ತವರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸುತ್ತಾರೆ ಮತ್ತು ಅವರು ಜೀವನದಲ್ಲಿ ಯಶಸ್ವಿಗಳಾಗಬೇಕೆಂದು ಬಯಸುತ್ತಾರೆ. ಹಾಗೆಯೇ ನಮ್ಮ ಸ್ವರ್ಗೀಯ ತಂದೆ ನಮ್ಮ ಬಗ್ಗೆ ಕಾಳಜಿವಹಿಸಿ, ನಾವು ಯಶಸ್ವಿಗಳಾಗಬೇಕೆಂದು ಬಯಸುತ್ತಾನೆ. ತನ್ನ ಕೋಮಲ ಆರೈಕೆಯನ್ನು ವ್ಯಕ್ತಪಡಿಸುತ್ತಾ, ಸಾಫಲ್ಯ ಹಾಗೂ ವೈಫಲ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಕೊಟ್ಟಿದ್ದಾನೆ. ಆದುದರಿಂದಲೇ, ದೇವರು ಏನು ಹೇಳುತ್ತಾನೊ ಅದಕ್ಕೆ ಗಮನಕೊಡುವ ವ್ಯಕ್ತಿಯ ಬಗ್ಗೆ ಮಾತಾಡುತ್ತಾ, “ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂಬ ಖಚಿತ ಹೇಳಿಕೆ ಬೈಬಲ್‌ನಲ್ಲಿದೆ.​—⁠ಕೀರ್ತನೆ 1:⁠3.

ಹೀಗಿರುವಲ್ಲಿ, ಯಶಸ್ವೀ, ಸಂತೋಷಭರಿತ ಹಾಗೂ ತೃಪ್ತಿದಾಯಕವಾದ ಜೀವನವು ಅನೇಕರಿಗೆ ಕೈಗೆಟುಕದಂಥ ಸಂಗತಿಯಾಗಿರುವುದು ಏಕೆ? ಇದಕ್ಕೆ ಉತ್ತರವು, ಈ ಮೇಲೆ ಕೊಡಲ್ಪಟ್ಟಿರುವ ಕೀರ್ತನೆಯನ್ನು ಹೆಚ್ಚು ನಿಕಟವಾಗಿ ಪರಿಶೀಲಿಸುವುದರಿಂದ ಸಿಗುವುದು ಮತ್ತು ನಾವು ಸಹ ಹೇಗೆ ಯಶಸ್ವಿಗಳಾಗಬಲ್ಲೆವು ಎಂಬುದನ್ನು ಅದು ತೋರಿಸುವುದು.

“ದುಷ್ಟರ ಆಲೋಚನೆ”

“ದುಷ್ಟರ ಆಲೋಚನೆಯಂತೆ” ಇಲ್ಲವೆ ಸಲಹೆಯಂತೆ ನಡೆಯುವುದರ ಅಪಾಯದ ವಿರುದ್ಧ ಕೀರ್ತನೆಗಾರನು ಎಚ್ಚರಿಕೆಕೊಡುತ್ತಾನೆ. (ಕೀರ್ತನೆ 1:⁠1) ಪ್ರಧಾನ ದುಷ್ಟನು ಇಲ್ಲವೆ ‘ಕೆಡುಕನು’ ಪಿಶಾಚನಾದ ಸೈತಾನನಾಗಿದ್ದಾನೆ. (ಮತ್ತಾಯ 6:​13, BSI Reference Edition ಪಾದಟಿಪ್ಪಣಿ) ಅವನು “ಇಹಲೋಕಾಧಿಪತಿ” ಆಗಿದ್ದಾನೆಂದು ಮತ್ತು “ಲೋಕವೆಲ್ಲವು ಕೆಡುಕನ [ಇಲ್ಲವೆ, ದುಷ್ಟನ] ವಶದಲ್ಲಿ ಬಿದ್ದಿದೆ” ಎಂದು ಶಾಸ್ತ್ರಗಳು ತಿಳಿಸುತ್ತವೆ. (ಯೋಹಾನ 16:11; 1 ಯೋಹಾನ 5:19) ಆದುದರಿಂದ, ಲೋಕದಲ್ಲಿ ಸಿಗುತ್ತಿರುವ ಹೆಚ್ಚಿನ ಸಲಹೆಗಳು ಆ ದುಷ್ಟನ ಯೋಚನಾಧಾಟಿಯನ್ನು ಪ್ರತಿಬಿಂಬಿಸುತ್ತವೆ ಎಂಬುದು ಅಚ್ಚರಿಯ ಸಂಗತಿಯಲ್ಲ.

ದುಷ್ಟರು ಯಾವ ರೀತಿಯ ಸಲಹೆಯನ್ನು ಕೊಡುತ್ತಾರೆ? ಸಾಮಾನ್ಯವಾಗಿ, ದುಷ್ಟರು ದೇವರನ್ನು ಅಲಕ್ಷಿಸುತ್ತಾರೆ. (ಕೀರ್ತನೆ 10:13) ದೇವರನ್ನು ಅಲಕ್ಷಿಸುವಂಥ ಇಲ್ಲವೆ ಅಗೌರವಿಸುವಂಥ ಅವರ ಸಲಹೆಗಳು ಎಲ್ಲೆಡೆಯೂ ಸಿಗುತ್ತವೆ. ಇಂದಿನ ಆಧುನಿಕ ಸಮಾಜವು “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ”ವನ್ನು ಪ್ರವರ್ಧಿಸುತ್ತದೆ. (1 ಯೋಹಾನ 2:16) “ಜೀವನದಲ್ಲಿ ನಿಮ್ಮಿಂದಾದುದೆಲ್ಲವನ್ನು ಗಿಟ್ಟಿಸಿಕೊಳ್ಳಿ” ಎಂಬ ಪ್ರಾಪಂಚಿಕತೆಯ ತತ್ವಜ್ಞಾನವನ್ನು ಜನರ ತಲೆಯಲ್ಲಿ ತುರುಕಿಸಲು ಸಮೂಹ ಮಾಧ್ಯಮವು ಸತತವಾಗಿ ಪ್ರಯತ್ನಿಸುತ್ತಿದೆ. ಜಗತ್ತಿನಾದ್ಯಂತ, ಕಂಪೆನಿಗಳು ಜಾಹೀರಾತುಗಳಿಗೋಸ್ಕರ ಒಂದು ವರ್ಷದಲ್ಲೇ 50,000 ಕೋಟಿ ಅಮೆರಿಕನ್‌ ಡಾಲರುಗಳನ್ನು ವೆಚ್ಚಮಾಡುತ್ತಾರೆ. ಇದಕ್ಕೆ ಕಾರಣ, ತಮ್ಮ ಉತ್ಪನ್ನಗಳನ್ನು ಬಳಕೆದಾರರು ತಮಗೆ ಅಗತ್ಯವಿರಲಿ ಇಲ್ಲದಿರಲಿ ಖರೀದಿಸಬೇಕೆಂದು ಪುಸಲಾಯಿಸಲಿಕ್ಕಾಗಿಯೇ. ಈ ರೀತಿಯ ಪ್ರಚಾರವು, ಜನರ ಖರೀದಿಮಾಡುವ ರೂಢಿಗಳನ್ನು ಬದಲಾಯಿಸಿದೆ ಮಾತ್ರವಲ್ಲ, ಯಶಸ್ಸಿನ ಬಗ್ಗೆ ಲೋಕಕ್ಕಿರುವ ದೃಷ್ಟಿಕೋನವನ್ನೇ ವಕ್ರಗೊಳಿಸಿದೆ.

ಇದರ ಪರಿಣಾಮವಾಗಿ, ವರ್ಷಗಳ ಹಿಂದೆ ಜನರು ಕೇವಲ ಕನಸು ಕಾಣುತ್ತಿದ್ದ ವಸ್ತುಗಳು ಇಂದು ಅವರ ಬಳಿ ಇರುವುದಾದರೂ, ಇನ್ನೂ ಹೆಚ್ಚೆಚ್ಚು ವಸ್ತುಗಳನ್ನು ಗಿಟ್ಟಿಸಿಕೊಳ್ಳುತ್ತಾ ಇರಬೇಕೆಂಬ ತಣಿಸಲಾಗದ ದಾಹ ಅನೇಕರಲ್ಲಿದೆ. ಆ ವಸ್ತುಗಳು ತಮ್ಮ ಬಳಿ ಇಲ್ಲದಿರುವಲ್ಲಿ ತಾವು ಸಂತೋಷದಿಂದಿರಲಾರೆವು ಇಲ್ಲವೆ ಯಶಸ್ವಿಗಳಾಗಲಾರೆವು ಎಂಬ ವಿಚಾರವು ಅವರ ಮನಸ್ಸಿನಲ್ಲಿ ಮನೆಮಾಡಿಬಿಟ್ಟಿದೆ. ಆದರೆ ಈ ರೀತಿಯ ಆಲೋಚನೆಯು ಒಂದು ಸುಳ್ಳಾಗಿದೆ ಮತ್ತು ಅದು ‘ತಂದೆಯಿಂದ [ದೇವರಿಂದ] ಹುಟ್ಟದೆ ಲೋಕದಿಂದ ಹುಟ್ಟಿರುತ್ತದೆ.’​—⁠1 ಯೋಹಾನ 2:⁠16.

ನಾವು ನಿಜವಾಗಿ ಹೇಗೆ ಯಶಸ್ವಿಗಳಾಗಬಲ್ಲೆವೆಂದು ನಮ್ಮ ಸೃಷ್ಟಿಕರ್ತನಿಗೆ ತಿಳಿದಿದೆ. ಆತನ ಸಲಹೆಯು, ‘ದುಷ್ಟರ ಆಲೋಚನೆಗಿಂತ’ ಅಂದರೆ ಸಲಹೆಗಿಂತ ಭಿನ್ನವಾಗಿದೆ. ಆದುದರಿಂದ, ಲೋಕದ ಯಶಸ್ಸಿನ ಪಥದಲ್ಲಿ ನಡೆಯುವುದು ಮತ್ತು ಅದೇ ಸಮಯದಲ್ಲಿ ದೇವರ ಆಶೀರ್ವಾದವನ್ನು ಪಡೆಯಲು ಪ್ರಯತ್ನಿಸುವದು, ಏಕಕಾಲದಲ್ಲಿ ಎರಡು ಮಾರ್ಗಗಳಲ್ಲಿ ನಡೆಯಲು ಪ್ರಯತ್ನಿಸಿದಂತಿರುತ್ತದೆ. ಇದು ಅಸಂಭವವೇ ಸರಿ! ಆದುದರಿಂದ “ಈ ಲೋಕದ ಮಟ್ಟಗಳಿಗೆ ಬಾಹ್ಯರೀತಿಯಲ್ಲೂ ಹೊಂದಿಕೊಳ್ಳಬೇಡಿರಿ” ಎಂದು ಬೈಬಲ್‌ ಎಚ್ಚರಿಸುವುದು ಆಶ್ಚರ್ಯಕರವೇನಲ್ಲ!​—⁠ರೋಮಾಪುರ 12:​2, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಲೋಕವು ನಿಮ್ಮನ್ನು ರೂಪಿಸುವಂತೆ ಬಿಡಬೇಡಿ

ಸೈತಾನನ ಪ್ರಭಾವದಡಿಯಲ್ಲಿರುವ ಲೋಕವು, ನಮ್ಮ ಹಿತಾಸಕ್ತಿಯಲ್ಲಿ ತುಂಬ ಕಾಳಜಿಯಿದೆ ಎಂಬಂತೆ ತೋರಿಸಿಕೊಡಲು ಪ್ರಯತ್ನಿಸುತ್ತದೆ. ಆದರೆ ನಾವು ಜಾಗರೂಕರಾಗಿರಬೇಕು. ಸೈತಾನನು ತನ್ನ ಸ್ವಂತ ಅಭಿರುಚಿಗಳಿಗಾಗಿ ಪ್ರಥಮ ಸ್ತ್ರೀಯಾದ ಹವ್ವಳನ್ನು ಸ್ವಾರ್ಥದಿಂದ ಮೋಸಗೊಳಿಸಿದ್ದನ್ನು ನೆನಪುಮಾಡಿಕೊಳ್ಳಿರಿ. ಅನಂತರ ಅವಳನ್ನು ಬಳಸಿ ಆದಾಮನನ್ನು ಸಹ ಪಾಪದ ಮಾರ್ಗದಲ್ಲಿ ನಡೆಸಿದನು. ಹಾಗೆಯೇ ಇಂದು ಸೈತಾನನು ತನ್ನ ದುಷ್ಟ ಸಲಹೆಯನ್ನು ದಾಟಿಸಲಿಕ್ಕಾಗಿ ಮನುಷ್ಯರನ್ನು ಸಹ ಬಳಸುತ್ತಾನೆ.

ಉದಾಹರಣೆಗಾಗಿ ಹಿಂದಿನ ಲೇಖನದಲ್ಲಿ ತಿಳಿಸಲಾಗಿರುವ ಡೇವಿಡ್‌ಗೆ ಓವರ್‌ಟೈಮ್‌ ಕೆಲಸಮಾಡುವಂತೆ ಮತ್ತು ವ್ಯಾಪಾರಕ್ಕಾಗಿ ಆಗಾಗ್ಗೆ ಬೇರೆ ಸ್ಥಳಗಳಿಗೆ ಹೋಗುವಂತೆ ಕೇಳಿಕೊಳ್ಳಲಾಗುತ್ತಿತ್ತು. “ನಾನು ಸೋಮವಾರ ಮುಂಜಾನೆ ಹೊರಟು, ಗುರುವಾರ ಸಾಯಂಕಾಲ ಹಿಂದಿರುಗುತ್ತಿದ್ದೆ” ಎಂದು ಡೇವಿಡ್‌ ಹೇಳುತ್ತಾನೆ. ಲೋಕದಲ್ಲಿ ಯಶಸ್ಸನ್ನು ಪಡೆಯಲಿಕ್ಕಾಗಿ ಇಂಥ ತ್ಯಾಗಗಳನ್ನು ಮಾಡಲೇಬೇಕೆಂಬುದನ್ನು ಅರ್ಥಮಾಡಿಕೊಳ್ಳುತ್ತಾ, ಯಥಾರ್ಥಮನಸ್ಸಿನ ಅವನ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಜೊತೆಕೆಲಸಗಾರರು “ನಿನ್ನ ಕುಟುಂಬಕ್ಕೋಸ್ಕರ ಅದನ್ನು ಮಾಡು” ಎಂದವನನ್ನು ಹುರಿದುಂಬಿಸಿದರು. ಅವನು ತನ್ನ ಹುದ್ದೆಯನ್ನು ಭದ್ರಪಡಿಸುವ ತನಕ ಕೆಲವೇ ವರ್ಷಗಳಿಗೆ ಹೀಗೆ ಮಾಡಬೇಕಾದೀತೆಂದು ಅವರು ತರ್ಕಿಸಿದರು. ಡೇವಿಡ್‌ ವಿವರಿಸಿದ್ದು: “ನಾನು ಮಾಡುವ ಹೆಚ್ಚಿನ ಕೆಲಸಕ್ಕೋಸ್ಕರ ಹೆಚ್ಚು ಸಂಬಳ ಸಿಗಲಿರುವುದರಿಂದ ನನ್ನ ಕುಟುಂಬಕ್ಕೆ ಒಳಿತಾಗುವುದು ಮತ್ತು ನಾನು ಹೆಚ್ಚು ಯಶಸ್ವಿ ಆಗಬಲ್ಲೆನೆಂದು ಹೇಳುತ್ತಾ ಅವರು ಸನ್ನಿವೇಶದ ಗಂಭೀರತೆಯನ್ನು ತಗ್ಗಿಸಲು ಪ್ರಯತ್ನಿಸಿದರು. ಕುಟುಂಬದೊಂದಿಗಿರಲು ನನಗೆ ಸಮಯ ಸಿಗದೇ ಇದ್ದರೂ, ನಾನು ನಿಜವಾಗಿ ಅವರಿಗಾಗಿ ಹೆಚ್ಚನ್ನು ಕೊಡುತ್ತಿದ್ದೇನೆಂದು ನನ್ನ ಸ್ನೇಹಿತರು ನನಗೆ ಮನದಟ್ಟುಮಾಡಿದರು.” ಡೇವಿಡ್‌ನಂತೆಯೇ, ಅನೇಕರು ತಮ್ಮ ಪ್ರಿಯ ಜನರಿಗೋಸ್ಕರ ಅಗತ್ಯವಾದದ್ದೆಂದು ಅವರೆಣಿಸುವಂಥ ಎಲ್ಲವನ್ನೂ ಕೊಡಲಿಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಈ ರೀತಿಯ ಸಲಹೆಯನ್ನು ಪಾಲಿಸುವುದು ಯಶಸ್ಸಿಗೆ ನಡೆಸುತ್ತದೊ? ಒಂದು ಕುಟುಂಬಕ್ಕೆ ನಿಜವಾಗಿ ಯಾವುದರ ಅಗತ್ಯವಿದೆ?

ಡೇವಿಡ್‌ ಇದನ್ನು ವ್ಯಾಪಾರಕ್ಕಾಗಿ ಬೇರೊಂದು ಊರಿಗೆ ಹೋಗಿದ್ದಾಗ ಕಂಡುಹಿಡಿದನು. “ಪೋನ್‌ನಲ್ಲಿ ನನ್ನ ಮಗಳು ಆನ್‌ಜಲೀಕಾಳೊಂದಿಗೆ ಮಾತಾಡುತ್ತಾ ಇದ್ದಾಗ, ಅವಳು ‘ಡ್ಯಾಡಿ, ನಿಮಗೆ ನಮ್ಮ ಜೊತೆ ಮನೆಯಲ್ಲಿ ಉಳಿಯಲು ಏಕೆ ಮನಸ್ಸಿಲ್ಲ?’ ಎಂದು ಕೇಳಿದಳು. ಇದು ನನ್ನ ಮನಸ್ಸನ್ನು ತುಂಬ ಚುಚ್ಚಿತು” ಅನ್ನುತ್ತಾನೆ ಡೇವಿಡ್‌. ಆದರೆ ಅವಳ ಆ ಮಾತುಗಳು, ಕೆಲಸಕ್ಕೆ ರಾಜೀನಾಮೆ ಕೊಡಬೇಕೆಂದು ಡೇವಿಡ್‌ಗಿದ್ದ ಆಕಾಂಕ್ಷೆಯನ್ನು ಇನ್ನಷ್ಟು ಬಲಪಡಿಸಿತು. ಅವನು ತನ್ನ ಕುಟುಂಬಕ್ಕೆ ನಿಜವಾಗಿ ಯಾವುದರ ಅಗತ್ಯವಿತ್ತೊ ಅದನ್ನು, ಅಂದರೆ ತನ್ನನ್ನೇ ನೀಡುವ ನಿರ್ಣಯಮಾಡಿದನು.

ದೇವರ ಸಲಹೆಯ ಅನ್ವಯವೇ ಯಶಸ್ಸಿಗೆ ದಾರಿ

ಈ ಲೋಕದಲ್ಲಿ ಪ್ರಚಲಿತವಾಗಿ ಬಿತ್ತರಿಸಲ್ಪಡುತ್ತಿರುವ ದಾರಿತಪ್ಪಿಸುವಂಥ ಮಾಹಿತಿಯನ್ನು ನೀವು ಹೇಗೆ ಪ್ರತಿರೋಧಿಸಬಲ್ಲಿರಿ? ‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು’ ಯಶಸ್ವೀ ಹಾಗೂ ಸಂತೋಷಭರಿತ ವ್ಯಕ್ತಿಯೆಂದು ಕೀರ್ತನೆಗಾರನು ಹೇಳುತ್ತಾನೆ.​—⁠ಕೀರ್ತನೆ 1:⁠2.

ದೇವರು ಯೆಹೋಶುವನನ್ನು ಇಸ್ರಾಯೇಲ್‌ ಜನಾಂಗದ ನಾಯಕನಾಗಿ ನೇಮಿಸಿದಾಗ ಅವನಿಗೆ ಹೀಗನ್ನಲಾಯಿತು: ‘ಹಗಲಿರುಳು [ದೇವರ ವಾಕ್ಯವನ್ನು] ಧ್ಯಾನಿಸುತ್ತಾ ಇರು.’ ಹೌದು, ದೇವರ ವಾಕ್ಯವನ್ನು ಓದುವುದು ಮತ್ತು ಧ್ಯಾನಿಸುವುದು ಅತ್ಯಾವಶ್ಯಕವಾಗಿತ್ತು ಹಾಗೂ ಅದರೊಂದಿಗೆ ಯೆಹೋಶುವನು “ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು” ನಡೆಯುವುದೂ ಅಗತ್ಯವಾಗಿತ್ತು. ಕೇವಲ ಬೈಬಲನ್ನು ಓದಿದ ಮಾತ್ರಕ್ಕೆ ನೀವು ಚಮತ್ಕಾರದಿಂದ ಯಶಸ್ವಿಯಾಗುವುದಿಲ್ಲ ಖಂಡಿತ. ನೀವೇನು ಓದುತ್ತೀರೊ ಅದನ್ನು ಅನ್ವಯಿಸಿಕೊಳ್ಳಬೇಕು. ಯೆಹೋಶುವನಿಗೆ ಹೀಗನ್ನಲಾಗಿತ್ತು: “ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ [“ವಿವೇಕಶಾಲಿಯಾಗುವೆ,” ಪರಿಶುದ್ಧ ಬೈಬಲ್‌].”​—⁠ಯೆಹೋಶುವ 1:⁠8.

ಒಂದು ಮಗು ನಗುನಗುತ್ತಾ ಪ್ರೀತಿಯ ಅಪ್ಪ ಅಥವಾ ಅಮ್ಮನ ಮಡಿಲಲ್ಲಿ ಕುಳಿತುಕೊಂಡು ಅವನ ಅಚ್ಚುಮೆಚ್ಚಿನ ಕಥೆಯನ್ನು ಓದುತ್ತಿರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಅವರು ಆ ಕಥೆಯನ್ನು ಎಷ್ಟು ಸಲ ಓದಿದರೂ, ಪ್ರತಿ ಸಲ ಆ ಅಮೂಲ್ಯ ಕ್ಷಣಗಳನ್ನು ಆನಂದಿಸುತ್ತಾರೆ. ಅದೇ ರೀತಿ, ದೇವರನ್ನು ಪ್ರೀತಿಸುವ ವ್ಯಕ್ತಿಗೆ ಪ್ರತಿ ದಿನ ಬೈಬಲನ್ನು ಓದುವುದು ಹರ್ಷಭರಿತ ಅನುಭವವಾಗಿರುತ್ತದೆ. ಅದು ಅವನಿಗೆ ತನ್ನ ಸ್ವರ್ಗೀಯ ತಂದೆಯೊಂದಿಗೆ ಕಳೆದ ಹಿತವಾದ ಸಮಯವಾಗಿರುತ್ತದೆ. ಯೆಹೋವನ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಅಂಥ ವ್ಯಕ್ತಿಯು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ [“ನೆಡಲ್ಪಟ್ಟಿರುವ,” NW] ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”​—⁠ಕೀರ್ತನೆ 1:⁠3.

ಕೀರ್ತನೆಗಾರನು ವರ್ಣಿಸಿರುವ ಆ ಮರವು, ಅಲ್ಲಿ ತಾನಾಗಿಯೇ ಬೆಳೆದಿರುವುದಿಲ್ಲ. ಅದನ್ನು ಒಬ್ಬ ರೈತನು ಆ ನೀರಿನ ಬಳಿಯಲ್ಲಿ ಉದ್ದೇಶಪೂರ್ವಕವಾಗಿ ನೆಟ್ಟು, ಪರಾಮರಿಸುತ್ತಾನೆ. ಅದೇ ರೀತಿಯಲ್ಲಿ, ಶಾಸ್ತ್ರಗಳಲ್ಲಿ ತೋರಿಬರುವ ಸಲಹೆಯ ಮುಖಾಂತರ ನಮ್ಮ ಸ್ವರ್ಗೀಯ ತಂದೆಯು ನಮ್ಮ ಯೋಚನಾಧಾಟಿಯನ್ನು ಸರಿಪಡಿಸುತ್ತಾನೆ. ಇದರ ಪರಿಣಾಮವಾಗಿ ನಾವು ಸಮೃದ್ಧವಾಗಿ ಬೆಳೆದು, ದೈವಿಕ ಫಲಗಳನ್ನು ಉತ್ಪಾದಿಸುತ್ತೇವೆ.

“ದುಷ್ಟರೋ ಹಾಗಲ್ಲ.” ಅವರು ಅಲ್ಪಕಾಲ ಹಸನಾಗಿ ಬೆಳೆಯುತ್ತಿರುವಂತೆ ತೋರಬಹುದಾದರೂ, ಕಟ್ಟಕಡೆಗೆ ಅವರಿಗೆ ಸಿಗುವ ಫಲಿತಾಂಶ ಕೆಟ್ಟದ್ದಾಗಿರುತ್ತದೆ. ಅವರು ‘ನ್ಯಾಯವಿಚಾರಣೆಯಲ್ಲಿ ನಿಲ್ಲುವುದಿಲ್ಲ.’ ಬದಲಿಗೆ, ‘ದುಷ್ಟರ ಮಾರ್ಗ ನಾಶವಾಗುವದು.’​—⁠ಕೀರ್ತನೆ 1:4-6.

ಹೀಗಿರುವುದರಿಂದ, ಲೋಕವು ನಿಮ್ಮ ಗುರಿಗಳನ್ನು ಮತ್ತು ಮೌಲ್ಯಗಳನ್ನು ರೂಪಿಸುವಂತೆ ಬಿಡಬೇಡಿರಿ. ನೀವು ಪ್ರತಿಭಾವಂತರಾಗಿರಬಹುದು ಮತ್ತು ಈ ಲೋಕದಲ್ಲಿ ಯಶಸ್ಸನ್ನು ಗಳಿಸುವ ಸಾಮರ್ಥ್ಯ ನಿಮಗಿರಬಹುದು. ಆದರೆ ನಿಮ್ಮ ಪ್ರತಿಭೆಗಳನ್ನು ನೀವು ಹೇಗೆ ಉಪಯೋಗಿಸುತ್ತೀರಿ ಇಲ್ಲವೆ ಲೋಕವು ಅವುಗಳನ್ನು ಹೇಗೆ ಬಳಸುವಂತೆ ಬಿಡುತ್ತೀರಿ ಎಂಬುದರ ಬಗ್ಗೆ ಜಾಗ್ರತೆವಹಿಸಿ. ನಿರರ್ಥಕವಾದ, ಭೌತಿಕ ಬೆನ್ನಟ್ಟುವಿಕೆಗಳು ಒಬ್ಬ ವ್ಯಕ್ತಿಯು ‘ಬಾಡುವಂತೆ’ ಮಾಡಬಲ್ಲವು. ಆದರೆ ಇನ್ನೊಂದು ಬದಿಯಲ್ಲಿ ದೇವರೊಂದಿಗೆ ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳುವುದು ನಿಜವಾದ ಯಶಸ್ಸು ಹಾಗೂ ಸಂತೋಷದಲ್ಲಿ ಫಲಿಸುವುದು.

ನೀವು ಹೇಗೆ ಯಶಸ್ವಿಗಳಾಗಬಲ್ಲಿರಿ?

ಒಬ್ಬ ವ್ಯಕ್ತಿಯು ದೇವರ ಸಲಹೆಯನ್ನು ಪಾಲಿಸುವಾಗ ಅವನ ಕಾರ್ಯವೆಲ್ಲವೂ ಸಫಲವಾಗುವುದೇಕೆ? ಕೀರ್ತನೆಗಾರನು ಈ ಲೋಕದಲ್ಲಿನ ಯಶಸ್ಸಿನ ಕುರಿತು ಮಾತಾಡುತ್ತಿರಲಿಲ್ಲ. ಒಬ್ಬ ದೇವಭಕ್ತ ವ್ಯಕ್ತಿಯ ಯಶಸ್ಸು ಅವನು ದೇವರ ಚಿತ್ತವನ್ನು ಮಾಡುವುದರೊಂದಿಗೆ ಸಂಬಂಧಿಸಿದೆ ಮತ್ತು ದೇವರ ಚಿತ್ತವು ಯಾವಾಗಲೂ ಯಶಸ್ವಿಯಾಗುತ್ತದೆ. ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವುದರಿಂದ ನಿಮಗೆ ಹೇಗೆ ಯಶಸ್ಸು ಲಭಿಸುವುದೆಂಬುದನ್ನು ನಾವೀಗ ನೋಡೋಣ.

ಕುಟುಂಬ: ಗಂಡಂದಿರು ‘ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವಂತೆ’ ಮತ್ತು ಕ್ರೈಸ್ತ ಹೆಂಡತಿಯು ‘ಗಂಡನಿಗಾಗಿ ಗಾಢವಾದ ಗೌರವವನ್ನು ಹೊಂದಿರುವಂತೆ’ (NW) ಶಾಸ್ತ್ರವಚನಗಳು ಬುದ್ಧಿವಾದ ನೀಡುತ್ತವೆ. (ಎಫೆಸ 5:28, 33) ಹೆತ್ತವರು ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯುವಂತೆ, ಅವರೊಂದಿಗೆ ನಕ್ಕುನಲಿಯುವಂತೆ, ಅವರಿಗೆ ಜೀವನದ ಮಹತ್ವಪೂರ್ಣ ವಿಷಯಗಳನ್ನು ಕಲಿಸುವಂತೆ ಅವು ಉತ್ತೇಜಿಸುತ್ತವೆ. (ಧರ್ಮೋಪದೇಶಕಾಂಡ 6:​6, 7; ಪ್ರಸಂಗಿ 3:⁠4) ದೇವರ ವಾಕ್ಯವು ಹೆತ್ತವರಿಗೆ ಈ ಸಲಹೆಯನ್ನೂ ಕೊಡುತ್ತದೆ: ‘ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸಬೇಡಿ.’ ಹೆತ್ತವರು ಇದನ್ನು ಅನ್ವಯಿಸುವಾಗ ಮಕ್ಕಳಿಗೆ ‘ತಮ್ಮ ತಂದೆತಾಯಿಗಳ ಮಾತನ್ನು ಕೇಳಲು’ ಮತ್ತು ‘ತಮ್ಮ ತಂದೆತಾಯಿಗಳನ್ನು ಸನ್ಮಾನಿಸಲು’ ಹೆಚ್ಚು ಸುಲಭವಾಗುವುದು. (ಎಫೆಸ 6:1-4) ಈ ದೈವಿಕ ಸಲಹೆಯನ್ನು ಅನುಸರಿಸುವುದು ಯಶಸ್ವೀ ಕುಟುಂಬ ಜೀವನದಲ್ಲಿ ಫಲಿಸುವುದು.

ಸ್ನೇಹಿತರು: ಹೆಚ್ಚಿನ ಜನರು ಸ್ನೇಹಿತರನ್ನು ಬಯಸುತ್ತಾರೆ. ಏಕೆಂದರೆ ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಬೇಕಾದ ಮಾನಸಿಕ ಹಾಗೂ ಭಾವನಾತ್ಮಕ ಸಾಮರ್ಥ್ಯ ನಮ್ಮಲ್ಲಿದೆ. ಯೇಸು ತನ್ನ ಹಿಂಬಾಲಕರು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದು ಹೇಳಿದನು. (ಯೋಹಾನ 13:34, 35) ಯೇಸುವಿನ ಈ ಹಿಂಬಾಲಕರ ನಡುವೆ ನಾವು ಪ್ರೀತಿಸಬಹುದಾದ ಸ್ನೇಹಿತರನ್ನು ಕಂಡುಕೊಳ್ಳುತ್ತೇವೆ. ಇವರಲ್ಲಿ ನಾವು ಭರವಸೆಯನ್ನೂ ಇಟ್ಟು, ನಮ್ಮ ಅಂತರಾಳದ ಯೋಚನೆಗಳನ್ನು ಹಾಗೂ ಭಾವನೆಗಳನ್ನು ಮನಬಿಚ್ಚಿ ಹೇಳಬಹುದು. (ಜ್ಞಾನೋಕ್ತಿ 18:24) ಎಲ್ಲದ್ದಕ್ಕಿಂತಲೂ ಪ್ರಾಮುಖ್ಯವಾಗಿ, ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಾವು ‘ದೇವರ ಸಮೀಪಕ್ಕೆ ಬರಬಲ್ಲೆವು’ ಮತ್ತು ಅಬ್ರಹಾಮನಂತೆ “ದೇವರ ಸ್ನೇಹಿತ”ರೆಂದು ಸಹ ಕರೆಯಲ್ಪಡಬಹುದು.​—⁠ಯಾಕೋಬ 2:23; 4:⁠8.

ಜೀವನದಲ್ಲಿ ಉದ್ದೇಶ: ನಿಜವಾಗಿಯೂ ಯಶಸ್ವಿಗಳಾಗಿರುವವರು ಯಾವುದೇ ಗೊತ್ತುಗುರಿಯಿಲ್ಲದೆ ದಿನದೂಡುವುದರ ಬದಲು ಜೀವನದಲ್ಲಿ ಅರ್ಥ ಹಾಗೂ ಉದ್ದೇಶವನ್ನು ಹೊಂದಿರುತ್ತಾರೆ. ಅವರ ಜೀವನವು, ಈ ವಿಷಯಗಳ ವ್ಯವಸ್ಥೆಯ ಸದಾ ಬದಲಾಗುತ್ತಾ ಇರುವ ಪರಿಸ್ಥಿತಿಗಳ ಮೇಲೆ ಆಧರಿತವಾಗಿರುವುದಿಲ್ಲ. ಅವರ ಗುರಿಗಳು ನೈಜವಾದ ಹಾಗೂ ಶಾಶ್ವತವಾದ ತೃಪ್ತಿಯನ್ನು ತಂದುಕೊಡುತ್ತವೆ, ಏಕೆಂದರೆ ಅವು ಜೀವನದ ಉದ್ದೇಶದ ಮೇಲೆ ಕೇಂದ್ರೀಕೃತವಾಗಿರುತ್ತವೆ. ಒಬ್ಬ ವ್ಯಕ್ತಿಯ ಜೀವನಕ್ಕೆ ಯಾವುದು ಉದ್ದೇಶ ಕೊಡುತ್ತದೆ? “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”​—⁠ಪ್ರಸಂಗಿ 12:⁠13.

ನಿರೀಕ್ಷೆ: ದೇವರನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳುವುದು ಸಹ ನಮಗೆ ಭವಿಷ್ಯದ ಬಗ್ಗೆ ನಿರೀಕ್ಷೆಯನ್ನು ಕೊಡುತ್ತದೆ. ಅಪೊಸ್ತಲ ಪೌಲನು ಕ್ರೈಸ್ತರಿಗೆ ‘ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ದೇವರ ಮೇಲೆ ನಿರೀಕ್ಷೆಯನ್ನಿಡುವಂತೆ’ ಉತ್ತೇಜಿಸಿದನು. ಹೀಗೆ ಮಾಡುವ ಮೂಲಕ ಅವರು ‘ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳುತ್ತಿರುವರು.’ (1 ತಿಮೊಥೆಯ 6:17-19) ಈ ವಾಸ್ತವವಾದ ಜೀವನವು ಬಲುಬೇಗನೆ ದೇವರ ಸ್ವರ್ಗೀಯ ರಾಜ್ಯವು ಭೂಮಿಯ ಮೇಲೆ ಪರದೈಸನ್ನು ಸ್ಥಾಪಿಸುವಾಗ ಬರುವುದು.​—⁠ಲೂಕ 23:⁠43.

ನೀವು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವಲ್ಲಿ, ನಿಮಗೆ ಸಮಸ್ಯೆಗಳೇ ಬರುವುದಿಲ್ಲವೆಂದು ಹೇಳಲಾಗದು. ಆದರೆ, ಒಂದು ಮಾತಂತೂ ಖಂಡಿತ: ದುಷ್ಟರು ತಮ್ಮ ಮೇಲೆ ಬರಮಾಡಿಕೊಳ್ಳುವ ಹೆಚ್ಚಿನ ಹೃದ್ವೇದನೆ ಹಾಗೂ ದುಃಖವನ್ನು ನೀವು ದೂರವಿಡಲು ಶಕ್ತರಾಗುವಿರಿ. ಈ ಮುಂಚೆ ತಿಳಿಸಲಾಗಿರುವ ಡೇವಿಡ್‌ ಮತ್ತು ಅವನಂತೆ ಮಿಲ್ಯಾಂತರ ಮಂದಿ ತಮ್ಮ ಜೀವನದಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರ ಮೌಲ್ಯವನ್ನು ಕಲಿತುಕೊಂಡಿದ್ದಾರೆ. ತನಗೆ ಸೂಕ್ತವಾಗಿರುವ ಕಾಲತಖ್ತೆಯಿರುವ ಉದ್ಯೋಗ ಸಿಕ್ಕಿದ ನಂತರ ಡೇವಿಡ್‌ ಹೇಳಿದ್ದು: “ನನ್ನ ಹೆಂಡತಿಮಕ್ಕಳೊಂದಿಗೆ ನನಗಿರುವ ಸಂಬಂಧಕ್ಕಾಗಿ ಹಾಗೂ ಒಬ್ಬ ಸಭಾ ಹಿರಿಯನಾಗಿ ಯೆಹೋವ ದೇವರ ಸೇವೆಯನ್ನು ಮಾಡುವ ಸುಯೋಗಕ್ಕಾಗಿ ನಾನು ಆಭಾರಿಯಾಗಿದ್ದೇನೆ.” ದೇವರ ಸಲಹೆಗೆ ಗಮನಕೊಡುವ ವ್ಯಕ್ತಿಯ ಬಗ್ಗೆ ಕೀರ್ತನೆಯು, “ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂದು ಹೇಳುವುದೇಕೆಂಬುದು ಸುಸ್ಪಷ್ಟ. (w07 1/1)

[ಪುಟ 6ರಲ್ಲಿರುವ ಚಾರ್ಟು]

ಯಶಸ್ಸಿಗೆ ಐದು ಸೂತ್ರಗಳು

1 ಈ ಲೋಕದ ಮೌಲ್ಯಗಳು ನಿಮ್ಮನ್ನು ರೂಪಿಸುವುದನ್ನು ಪ್ರತಿರೋಧಿಸಿರಿ.

ಕೀರ್ತನೆ 1:1; ರೋಮಾಪುರ 12:2

2 ದೇವರ ವಾಕ್ಯವನ್ನು ಪ್ರತಿದಿನ ಓದಿ ಧ್ಯಾನಿಸಿರಿ.

ಕೀರ್ತನೆ 1:​2, 3

3 ಬೈಬಲ್‌ ಸಲಹೆಯನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿರಿ.

ಯೆಹೋಶುವ 1:​7-9

4 ದೇವರನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಿ.

ಯಾಕೋಬ 2:23; 4:⁠8

5 ಸತ್ಯ ದೇವರಿಗೆ ಭಯಪಟ್ಟು, ಆತನ ಆಜ್ಞೆಗಳನ್ನು ಪಾಲಿಸಿ.

ಪ್ರಸಂಗಿ 12:⁠13

[ಪುಟ 7ರಲ್ಲಿರುವ ಚಿತ್ರಗಳು]

ಯಶಸ್ಸಿನ ಸೂತ್ರಗಳನ್ನು ನೀವು ಪಾಲಿಸುತ್ತಿದ್ದೀರೊ?