ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’

ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’

ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’

“ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” ​—⁠ಲೂಕ 11:⁠13.

‘ಈ ಸಂಕಷ್ಟವನ್ನು ಕೇವಲ ನನ್ನ ಬಲದಿಂದ ಎದುರಿಸಲಾರೆ. ಪವಿತ್ರಾತ್ಮದ ಸಹಾಯದಿಂದಲೇ ತಾಳಿಕೊಳ್ಳಲು ಶಕ್ತನಾಗುವೆ!’ ಮನದಾಳದಿಂದ ಹೊಮ್ಮುವ ಇಂಥ ಮಾತುಗಳನ್ನು ನೀವೆಂದಾದರೂ ಹೇಳಿದ್ದುಂಟೊ? ಹೆಚ್ಚಿನ ಕ್ರೈಸ್ತರು ಹಾಗೆ ಹೇಳಿದ್ದಾರೆ. ಪ್ರಾಯಶಃ ನಿಮಗೊಂದು ಗಂಭೀರ ಕಾಯಿಲೆಯಿದೆ ಎಂದು ಗೊತ್ತಾದ ಕೂಡಲೇ ನೀವು ಹೀಗೆ ಹೇಳಿರಬಹುದು. ಇಲ್ಲವೆ, ನಿಮ್ಮ ಬಾಳಸಂಗಾತಿಯು ಸಾವನ್ನಪ್ಪಿದಾಗ ನೀವು ಹಾಗಂದಿರಬಹುದು. ಇಲ್ಲವೆ, ಹೊಂಬಿಸಿಲಿನ ನಿಮ್ಮ ಬಾಳಿನಲ್ಲಿ ಖಿನ್ನತೆಯೆಂಬ ಕಾರ್ಮೋಡಗಳು ಕವಿದಾಗ ನೀವು ಹಾಗೆ ಹೇಳಿರಬಹುದು. ಜೀವನದ ಆ ನೋವುಭರಿತ ಸಮಯಗಳಲ್ಲಿ, ಯೆಹೋವನ ಪವಿತ್ರಾತ್ಮವು ಕೊಟ್ಟಿರುವ ‘ಬಲಾಧಿಕ್ಯ’ದಿಂದಲೇ ನೀವು ಇನ್ನೂ ಉಳಿದಿದ್ದೀರಿ ಎಂದು ನಿಮಗನಿಸಿದ್ದಿರಬಹುದು.​—⁠2 ಕೊರಿಂಥ 4:​7-9; ಕೀರ್ತನೆ 40:​1, 2.

2 ಇಂದಿನ ಭಕ್ತಿಹೀನ ಲೋಕದಿಂದ ಹೆಚ್ಚುತ್ತಿರುವ ಒತ್ತಡ ಮತ್ತು ವಿರೋಧವನ್ನು ಸತ್ಯ ಕ್ರೈಸ್ತರು ಎದುರಿಸಬೇಕಾಗಿದೆ. (1 ಯೋಹಾನ 5:19) ಅಲ್ಲದೆ, ಕ್ರಿಸ್ತನ ಹಿಂಬಾಲಕರ ಮೇಲೆ ಸ್ವತಃ ಪಿಶಾಚನಾದ ಸೈತಾನನೇ ಆಕ್ರಮಣಮಾಡುತ್ತಿದ್ದಾನೆ. ಅವನು, ‘ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವವರ ಮೇಲೆ’ ವಿಷಮವಾದ ಯುದ್ಧವನ್ನು ನಡೆಸುತ್ತಿದ್ದಾನೆ. (ಪ್ರಕಟನೆ 12:12, 17) ಆದುದರಿಂದ ನಮಗೆ ಹಿಂದೆಂದಿಗಿಂತಲೂ ಈಗ ದೇವರಾತ್ಮದಿಂದ ಸಿಗುವ ಬೆಂಬಲದ ಅಗತ್ಯವಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ದೇವರ ಪವಿತ್ರಾತ್ಮವು ನಮಗೆ ಹೇರಳವಾಗಿ ಸಿಗುತ್ತಾ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವೇನು ಮಾಡಬಲ್ಲೆವು? ಸಂಕಷ್ಟಗಳ ಸಮಯದಲ್ಲಿ ನಮಗೆ ಅಗತ್ಯವಿರುವ ಬಲವನ್ನು ಕೊಡಲು ಯೆಹೋವನು ಬಹಳಷ್ಟು ಸಂತೋಷಪಡುವನೆಂದು ನಾವೇಕೆ ನಿಶ್ಚಯದಿಂದಿರಬಲ್ಲೆವು? ಈ ಪ್ರಶ್ನೆಗಳಿಗೆ ಉತ್ತರಗಳನ್ನು, ಯೇಸು ಹೇಳಿದ ಎರಡು ದೃಷ್ಟಾಂತಗಳಲ್ಲಿ ಕಂಡುಕೊಳ್ಳುತ್ತೇವೆ.

ಪಟ್ಟುಹಿಡಿದು ಪ್ರಾರ್ಥಿಸಿರಿ

3 ಒಮ್ಮೆ, ಯೇಸುವಿನ ಶಿಷ್ಯರಲ್ಲೊಬ್ಬನು ವಿನಂತಿಸಿದ್ದು: “ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು.” (ಲೂಕ 11:1) ಇದಕ್ಕೆ ಉತ್ತರವಾಗಿ, ಯೇಸು ತನ್ನ ಶಿಷ್ಯರಿಗೆ, ಪರಸ್ಪರ ಸಂಬಂಧವಿದ್ದ ಎರಡು ದೃಷ್ಟಾಂತಗಳನ್ನು ಕೊಟ್ಟನು. ಮೊದಲನೆಯದು, ಮನೆಗೆ ಬಂದಿರುವ ಅತಿಥಿಯನ್ನು ಉಪಚರಿಸುತ್ತಿರುವ ಒಬ್ಬ ವ್ಯಕ್ತಿಯ ಕುರಿತಾಗಿತ್ತು ಮತ್ತು ಎರಡನೆಯದು, ತನ್ನ ಮಗನ ಮಾತಿಗೆ ಕಿವಿಗೊಟ್ಟ ಒಬ್ಬ ತಂದೆಯ ಕುರಿತಾಗಿತ್ತು. ಈ ಎರಡೂ ದೃಷ್ಟಾಂತಗಳನ್ನು ಈಗ ಒಂದೊಂದಾಗಿ ಪರಿಗಣಿಸೋಣ.

4 ಯೇಸು ಹೇಳಿದ್ದು: “ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದು ಹೇಳೋಣ. ಅವನು ಸರುಹೊತ್ತಿನಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ​—⁠ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಕಡವಾಗಿ ಕೊಡು. ನನ್ನ ಸ್ನೇಹಿತರಲ್ಲಿ ಒಬ್ಬನು ಎಲ್ಲಿಗೋ ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಊಟಮಾಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಎಂದು ಕೇಳಲು ಆ ಸ್ನೇಹಿತನು​—⁠ನನಗೆ ತೊಂದರೆಕೊಡಬೇಡ; ಈಗ ಕದಾಹಾಕಿ ಅದೆ; ನನ್ನ ಚಿಕ್ಕ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರಕೊಟ್ಟರೂ ಕೊಡಬಹುದು. ಆದರೆ ಸ್ನೇಹದ ನಿಮಿತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ [“ಮೇಲಿಂದ ಮೇಲೆ ಬಿಡದೆ ಬೇಡುವುದರಿಂದ,” NIBV] ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ.” ಯೇಸು ತದನಂತರ, ಈ ದೃಷ್ಟಾಂತವು ಪ್ರಾರ್ಥನೆಗೆ ಹೇಗೆ ಅನ್ವಯವಾಗುತ್ತದೆಂಬುದನ್ನು ವಿವರಿಸಿದನು. ಅವನಂದದ್ದು: “ಹಾಗೆಯೇ ನಾನು ನಿಮಗೆ ಹೇಳುವದೇನಂದರೆ​—⁠ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು, ತಟ್ಟಿರಿ, ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು.”​—⁠ಲೂಕ 11:5-10.

5 ಪಟ್ಟುಬಿಡದೆ ಬೇಡುತ್ತಿರುವ ವ್ಯಕ್ತಿಯ ಕುರಿತಾದ ಈ ಸ್ಪಷ್ಟವಾದ ದೃಷ್ಟಾಂತವು, ಪ್ರಾರ್ಥನೆಮಾಡುವಾಗ ನಮ್ಮ ಮನೋವೃತ್ತಿ ಹೇಗಿರಬೇಕೆಂಬುದನ್ನು ತೋರಿಸುತ್ತದೆ. ಆ ವ್ಯಕ್ತಿಯು ತನಗೆ ಅಗತ್ಯವಿದ್ದದ್ದನ್ನು ದಕ್ಕಿಸಿಕೊಂಡದ್ದು ಅವನ “ಕಾಟ”ದಿಂದಾಗಿಯೇ ಎಂದು ಯೇಸು ಹೇಳಿರುವುದನ್ನು ಗಮನಿಸಿ. (ಲೂಕ 11:⁠8) “ಕಾಟ” ಎಂಬ ಪದವು ಗ್ರೀಕ್‌ ಭಾಷೆಯಲ್ಲಿ “ನಾಚಿಕೆಯಿಲ್ಲದಿರುವುದು” ಎಂಬ ಅಕ್ಷರಾರ್ಥವುಳ್ಳ ಪದದ ಭಾಷಾಂತರವಾಗಿದೆ. ಸಾಮಾನ್ಯವಾಗಿ, ನಾಚಿಕೆಯಿಲ್ಲದಿರುವುದು ಒಂದು ದುರ್ಗುಣವಾಗಿದೆ. ಆದರೆ ಒಂದು ಒಳ್ಳೇ ಕೆಲಸಕ್ಕಾಗಿ ನಾಚಿಕೆಪಡದಿರುವುದು ಇಲ್ಲವೆ ಕಾಟಕೊಡುವುದು ಒಂದು ಶ್ಲಾಘನೀಯ ಗುಣವಾಗಿರಬಲ್ಲದು. ಆ ದೃಷ್ಟಾಂತದಲ್ಲಿನ ಅತಿಥೇಯನ ಬಗ್ಗೆ ಇದು ಸತ್ಯವಾಗಿತ್ತು. ತನಗೆ ಅಗತ್ಯವಿದದ್ದನ್ನು ಪಟ್ಟುಬಿಡದೆ ಕೇಳುತ್ತಾ ಇರಲು ಅವನು ನಾಚಿಕೆಪಡಲಿಲ್ಲ. ಯೇಸು ಈ ಅತಿಥೇಯನನ್ನು ನಮಗೊಂದು ಮಾದರಿಯೋಪಾದಿ ಇಟ್ಟಿರುವುದರಿಂದ, ಅವನಂತೆಯೇ ನಾವು ನಮ್ಮ ಪ್ರಾರ್ಥನೆಗಳಲ್ಲಿ ಪಟ್ಟುಹಿಡಿಯುವವರಾಗಿರಬೇಕು. ನಾವು ಬೇಡಿಕೊಳ್ಳುತ್ತಾ ಇರಬೇಕು, ಹುಡುಕುತ್ತಾ ಇರಬೇಕು ಮತ್ತು ತಟ್ಟುತ್ತಾ ಇರಬೇಕೆಂದು ಯೆಹೋವನು ಬಯಸುತ್ತಾನೆ. ಆಗ ಆತನು, ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು.’

6 ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕೆಂಬದನ್ನು ತೋರಿಸುತ್ತಾ ನಾವು ಪಟ್ಟುಬಿಡದೆ ಬೇಡಬೇಕೆಂದು ಯೇಸು ಹೇಳಿದನು. ಅಷ್ಟುಮಾತ್ರವಲ್ಲದೆ, ನಾವು ಹಾಗೇಕೆ ಮಾಡಬೇಕೆಂದು ಸಹ ಅವನು ತೋರಿಸಿದನು. ಆ ಪಾಠವನ್ನು ಸ್ಪಷ್ಟವಾಗಿ ವಿವೇಚಿಸಲು ನಾವು ಯೇಸುವಿನ ಆ ದೃಷ್ಟಾಂತಕ್ಕೆ ಕಿವಿಗೊಟ್ಟವರಿಗೆ ಅತಿಥಿಸತ್ಕಾರ ತೋರಿಸುವ ಪದ್ಧತಿಯ ಬಗ್ಗೆ ಯಾವ ನೋಟವಿತ್ತೆಂಬುದನ್ನು ಪರಿಗಣಿಸಬೇಕು. ಶಾಸ್ತ್ರವಚನಗಳಲ್ಲಿರುವ ಹಲವಾರು ವೃತ್ತಾಂತಗಳಿಂದ ತಿಳಿದುಬರುವ ವಿಷಯವೇನೆಂದರೆ ಬೈಬಲ್‌ ಸಮಯಗಳಲ್ಲಿನ ಜನರು, ಅದರಲ್ಲೂ ವಿಶೇಷವಾಗಿ ದೇವರ ಸೇವಕರು ಸಂದರ್ಶಕರ ಪರಾಮರಿಕೆ ಮಾಡುವ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. (ಆದಿಕಾಂಡ 18:2-5; ಇಬ್ರಿಯ 13:2) ಅತಿಥಿಸತ್ಕಾರ ತೋರಿಸದೆ ಇರುವುದು ಒಂದು ಅವಮಾನಕರ ಸಂಗತಿಯಾಗಿತ್ತು. (ಲೂಕ 7:36-38, 44-46) ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಪುನಃ ಒಮ್ಮೆ ಯೇಸುವಿನ ಕಥೆಗೆ ಗಮನಕೊಡೋಣ.

7 ದೃಷ್ಟಾಂತದಲ್ಲಿ ತಿಳಿಸಲಾಗಿರುವ ಅತಿಥೇಯನ ಮನೆಗೆ ಮಧ್ಯರಾತ್ರಿಯಲ್ಲಿ ಒಬ್ಬ ಸಂದರ್ಶಕನು ಬರುತ್ತಾನೆ. ಅತಿಥಿಗೆ ಊಟಬಡಿಸಲು ಅವನಿಗೆ ತುಂಬ ಮನಸ್ಸಿದೆಯಾದರೂ, ಅವನ ಬಳಿ ‘ಊಟಮಾಡಿಸುವದಕ್ಕೆ ಏನೂ ಇಲ್ಲ.’ ಅವನ ದೃಷ್ಟಿಯಲ್ಲಿ ಇದೊಂದು ತುರ್ತು ಪರಿಸ್ಥಿತಿ ಆಗಿದೆ! ಹೇಗಾದರೂ ಮಾಡಿ ಅವನು ಈಗ ಸ್ವಲ್ಪ ರೊಟ್ಟಿಗಾಗಿ ಏರ್ಪಾಡು ಮಾಡಬೇಕು. ಆದುದರಿಂದ ಅವನು ತನ್ನ ಸ್ನೇಹಿತನ ಬಳಿ ಹೋಗಿ, ನಾಚಿಕೆಪಡದೆ ಅವನನ್ನು ಎಬ್ಬಿಸುತ್ತಾನೆ. “ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಕಡವಾಗಿ ಕೊಡು” ಎಂದವನು ಕೂಗಿ ಹೇಳುತ್ತಾನೆ. ಅವನು ಪಟ್ಟುಹಿಡಿದು ಬೇಡಿದ ನಂತರವೇ ತನಗೆ ಬೇಕಾದದ್ದನ್ನು ಪಡೆಯುತ್ತಾನೆ. ಈಗ ಅವನ ಬಳಿ ರೊಟ್ಟಿಗಳಿರುವುದರಿಂದ ಅವನೊಬ್ಬ ಒಳ್ಳೇ ಅತಿಥೇಯನಾಗಲು ಸಾಧ್ಯವಿದೆ.

ಹೆಚ್ಚು ಅಗತ್ಯವಿದ್ದರೆ, ಹೆಚ್ಚು ಬೇಡಬೇಕು

8 ನಾವು ಪಟ್ಟುಬಿಡದೆ ಪ್ರಾರ್ಥನೆಮಾಡಲು ಕಾರಣವೇನು ಎಂಬುದರ ಬಗ್ಗೆ ಈ ದೃಷ್ಟಾಂತ ಏನು ಕಲಿಸುತ್ತದೆ? ಒಬ್ಬ ಅತಿಥೇಯನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲಿಕ್ಕೋಸ್ಕರ ಆ ರೊಟ್ಟಿಗಳು ತನಗೆ ಸಿಗುವುದು ಅತಿ ಆವಶ್ಯಕವೆಂದು ಆ ವ್ಯಕ್ತಿಗೆ ಅನಿಸಿದ್ದರಿಂದಲೇ ಅವನು ಬೇಡುತ್ತಾ ಇದ್ದನು. (ಯೆಶಾಯ 58:​5-7) ಆ ರೊಟ್ಟಿ ಇಲ್ಲದಿರುತ್ತಿದ್ದಲ್ಲಿ ಅವನು ತನ್ನ ಕರ್ತವ್ಯವನ್ನು ಪಾಲಿಸಲು ಆಗುತ್ತಿರಲಿಲ್ಲ. ಹಾಗೆಯೇ, ಸತ್ಕ್ರೈಸ್ತರಾಗಿ ನಮ್ಮ ಶುಶ್ರೂಷೆಯನ್ನು ನಡೆಸಲಿಕ್ಕಾಗಿ ದೇವರಾತ್ಮವು ಅತಿ ಆವಶ್ಯಕವೆಂದು ಗ್ರಹಿಸುವುದರಿಂದ ನಾವು ದೇವರಿಗೆ ಪ್ರಾರ್ಥನೆಮಾಡುತ್ತಾ ಆತನ ಆತ್ಮಕ್ಕಾಗಿ ಬೇಡುತ್ತೇವೆ. (ಜೆಕರ್ಯ 4:⁠6) ಆ ಆತ್ಮವಿಲ್ಲದಿದ್ದರೆ ನಾವು ವಿಫಲರಾಗುವೆವು. (ಮತ್ತಾಯ 26:41) ಈ ದೃಷ್ಟಾಂತದಿಂದ ನಾವು ಯಾವ ಪ್ರಾಮುಖ್ಯ ತೀರ್ಮಾನಕ್ಕೆ ಬರಬಹುದೆಂಬುದನ್ನು ನೋಡಬಲ್ಲಿರೊ? ದೇವರ ಆತ್ಮವು ತುರ್ತಾಗಿ ಅಗತ್ಯವಿದೆಯೆಂಬ ನೋಟ ನಮಗಿದ್ದರೆ, ಅದಕ್ಕೆ ನಾವು ಪಟ್ಟುಬಿಡದೆ ಬೇಡಿಕೊಳ್ಳುತ್ತಾ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ.

9 ಈ ಪಾಠವನ್ನು ಸದ್ಯದ ಒಂದು ಸನ್ನಿವೇಶಕ್ಕೆ ಹೊಂದಿಸಿಕೊಳ್ಳಲಿಕ್ಕಾಗಿ, ಹೀಗೆ ಊಹಿಸಿಕೊಳ್ಳಿರಿ: ನಿಮ್ಮ ಕುಟುಂಬ ಸದಸ್ಯರಲ್ಲೊಬ್ಬರು ಮಧ್ಯರಾತ್ರಿಗೆ ಅಸ್ವಸ್ಥರಾಗುತ್ತಾರೆ. ಆ ಹೊತ್ತಿನಲ್ಲಿ ಸಹಾಯ ಕೇಳಲು ಒಬ್ಬ ಡಾಕ್ಟರನನ್ನು ಎಬ್ಬಿಸುವಿರೊ? ಅದೊಂದು ಚಿಕ್ಕ ಸಮಸ್ಯೆಯಾಗಿರುವಲ್ಲಿ ನೀವು ಹಾಗೆ ಮಾಡಲಿಕ್ಕಿಲ್ಲ. ಆದರೆ ಅವರಿಗೊಂದು ಹೃದಯಾಘಾತ ಆಗುವಂತಿದೆ ಎಂದು ನೆನಸಿ. ಆಗ ನೀವೊಬ್ಬ ಡಾಕ್ಟರನನ್ನು ಕರೆಯಲು ನಾಚಿಕೆಪಡುವುದಿಲ್ಲ ಅಲ್ಲವೇ? ಏಕೆ? ಏಕೆಂದರೆ ಇದೊಂದು ತುರ್ತು ಪರಿಸ್ಥಿತಿಯಾಗಿದೆ. ಆ ಡಾಕ್ಟರನ ನಿಪುಣ ಸಹಾಯ ಅತಿ ಆವಶ್ಯಕವೆಂಬುದನ್ನು ನೀವು ಗ್ರಹಿಸುತ್ತೀರಿ. ಒಂದುವೇಳೆ ನೀವು ಸಹಾಯಕ್ಕಾಗಿ ಕೇಳದೆ ಹೋದರೆ, ಅವರು ಪ್ರಾಣಕಳಕೊಳ್ಳಬಹುದು. ಅದೇ ರೀತಿಯಲ್ಲಿ ಸತ್ಯ ಕ್ರೈಸ್ತರು, ಮುಂದುವರಿಯುತ್ತಿರುವ ಒಂದು ಸಾಂಕೇತಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ಸೈತಾನನು ನಮ್ಮನ್ನು ನುಂಗಲು ಪ್ರಯತ್ನಿಸುತ್ತಾ “ಗರ್ಜಿಸುವ ಸಿಂಹದೋಪಾದಿಯಲ್ಲಿ” ಸುತ್ತುತ್ತಾ ಇದ್ದಾನೆ. (1 ಪೇತ್ರ 5:⁠8) ನಾವು ಆಧ್ಯಾತ್ಮಿಕವಾಗಿ ಬದುಕಿರಬೇಕಾದರೆ, ದೇವರಾತ್ಮದ ಸಹಾಯವು ತುಂಬ ಆವಶ್ಯಕ. ದೇವರ ಸಹಾಯಕ್ಕಾಗಿ ನಾವು ಬೇಡದೆ ಇರುವುದು ಮಾರಕವಾಗಿರಬಲ್ಲದು. ಆದುದರಿಂದ, ನಾವು ದೇವರ ಪವಿತ್ರಾತ್ಮಕ್ಕಾಗಿ ಆತನ ಬಳಿ ಪಟ್ಟುಬಿಡದೆ ಕೇಳುತ್ತೇವೆ. (ಎಫೆಸ 3:​14-16) ಹಾಗೆ ಮಾಡುವುದರಿಂದ ಮಾತ್ರ ನಾವು ‘ಕಡೇ ವರೆಗೂ ತಾಳಿಕೊಳ್ಳಲು’ ಬೇಕಾಗಿರುವ ಬಲವನ್ನು ಕಾಪಾಡಿಕೊಳ್ಳಬಲ್ಲೆವು.​—⁠ಮತ್ತಾಯ 10:22; 24:⁠13.

10 ಆದುದರಿಂದ ಆಗಾಗ್ಗೆ ನಾವು ತುಸು ನಿಂತು ಹೀಗೆ ಕೇಳಿಕೊಳ್ಳುವುದು ಬಹುಮುಖ್ಯ: ‘ನಾನೆಷ್ಟು ಪಟ್ಟುಹಿಡಿದು ಪ್ರಾರ್ಥಿಸುತ್ತೇನೆ?’ ದೇವರ ಸಹಾಯದ ಅಗತ್ಯವಿದೆ ಎಂಬ ಪೂರ್ಣ ಗ್ರಹಿಕೆ ನಮಗಿರುವಾಗ, ನಾವು ಪವಿತ್ರಾತ್ಮಕ್ಕಾಗಿ ಹೆಚ್ಚು ಪಟ್ಟುಹಿಡಿದು ಪ್ರಾರ್ಥನೆಮಾಡುವೆವು ಎಂಬುದನ್ನು ನೆನಪಿಡಿರಿ.

ಭರವಸೆಯಿಂದ ಪ್ರಾರ್ಥಿಸುವಂತೆ ನಮಗೆ ಯಾವುದು ಪ್ರಚೋದಿಸುತ್ತದೆ?

11 ಪಟ್ಟುಹಿಡಿದ ಅತಿಥೇಯನ ಕುರಿತಾದ ಯೇಸುವಿನ ದೃಷ್ಟಾಂತವು, ಪ್ರಾರ್ಥನೆಮಾಡುವವನ ಅಂದರೆ ವಿಶ್ವಾಸಿಯ ಮನೋವೃತ್ತಿಯನ್ನು ಎತ್ತಿತೋರಿಸುತ್ತದೆ. ಆದರೆ ಮುಂದಿನ ದೃಷ್ಟಾಂತವು ಪ್ರಾರ್ಥನೆಗಳನ್ನು ಕೇಳುವವನಾಗಿರುವ ಯೆಹೋವ ದೇವರ ಮನೋವೃತ್ತಿಯನ್ನು ಎತ್ತಿತೋರಿಸುತ್ತದೆ. ಯೇಸು ಕೇಳಿದ್ದು: “ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ?” ಇದು ಹೇಗೆ ಅನ್ವಯವಾಗುತ್ತದೆಂಬುದನ್ನು ತಿಳಿಸುತ್ತಾ ಯೇಸು ಮುಂದುವರಿಸಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”​—⁠ಲೂಕ 11:11-13.

12 ಒಬ್ಬ ತಂದೆ ತನ್ನ ಮಗನಿಗೆ ತೋರಿಸುವ ಪ್ರತಿಕ್ರಿಯೆಯ ಕುರಿತಾದ ಈ ಉದಾಹರಣೆಯಿಂದ, ಯೆಹೋವನಿಗೆ ತನ್ನ ಬಳಿ ಪ್ರಾರ್ಥಿಸುವವರ ಕುರಿತು ಹೇಗನಿಸುತ್ತದೆಂಬುದನ್ನು ಯೇಸು ಪ್ರಕಟಪಡಿಸಿದನು. (ಲೂಕ 10:22) ಆದರೆ ಮೊದಲಾಗಿ, ಈ ದೃಷ್ಟಾಂತಗಳ ನಡುವಿನ ವ್ಯತ್ಯಾಸವನ್ನು ಗಮನಿಸಿರಿ. ಪ್ರಥಮ ದೃಷ್ಟಾಂತದಲ್ಲಿದ್ದ ಮನುಷ್ಯನು, ತನ್ನ ಸಹಾಯಕೋರಿ ಬಂದ ವ್ಯಕ್ತಿಯ ಕರೆಗೆ ಓಗೊಡಲು ಹಿಂದೆಮುಂದೆ ನೋಡಿದನು. ಆದರೆ ಯೆಹೋವನು ಹಾಗಲ್ಲ. ಆತನು, ತನ್ನ ಮಗುವಿನ ಬೇಡಿಕೆಯನ್ನು ಪೂರೈಸಲು ತುದಿಗಾಲಲ್ಲಿ ನಿಂತಿರುವ, ತುಂಬ ಅಕ್ಕರೆಯುಳ್ಳ ಮಾನವ ತಂದೆಯಂತಿದ್ದಾನೆ. (ಕೀರ್ತನೆ 50:15) ನಮ್ಮ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆತೋರಿಸಲು ಯೆಹೋವನಿಗಿರುವ ಸಿದ್ಧಮನಸ್ಸಿನ ಬಗ್ಗೆ ಇನ್ನಷ್ಟನ್ನು ಪ್ರಕಟಿಸಲಿಕ್ಕಾಗಿ ಯೇಸು, ಮಾನವ ತಂದೆಯ ಬಗ್ಗೆ ಮತ್ತು ನಂತರ ಸ್ವರ್ಗೀಯ ತಂದೆಯ ಬಗ್ಗೆ ಮಾತಾಡುತ್ತಾನೆ. ಅವನು ಹೇಳುವುದೇನೆಂದರೆ, ಒಬ್ಬ ಮಾನವ ಪಿತನು ‘ಕೆಟ್ಟವನಾಗಿದ್ದರೂ’ ಅಂದರೆ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ಹೊಂದಿರುವುದಾದರೂ ತನ್ನ ಮಗನಿಗೆ ಒಳ್ಳೆಯ ಉಡುಗೊರೆಯನ್ನು ಕೊಡಶಕ್ತನಾಗಿದ್ದರೆ, ಯಾವಾಗಲೂ ಒಳ್ಳೇದನ್ನೇ ಮಾಡಲು ಬಯಸುವ ನಮ್ಮ ಸ್ವರ್ಗೀಯ ತಂದೆ ತನ್ನ ಆರಾಧಕರ ಕುಟುಂಬಕ್ಕೆ ಪವಿತ್ರಾತ್ಮ ಕೊಡುವನೆಂದು ನಾವು ಇನ್ನೆಷ್ಟು ಹೆಚ್ಚಾಗಿ ನಿರೀಕ್ಷಿಸಬಹುದು!​—⁠ಯಾಕೋಬ 1:⁠17.

13 ಈ ದೃಷ್ಟಾಂತಗಳಲ್ಲಿ ನಮಗಿರುವ ಪಾಠವೇನು? ನಮ್ಮ ಸ್ವರ್ಗೀಯ ತಂದೆಯ ಬಳಿ ನಾವು ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವಾಗ ಆತನು ಅದನ್ನು ದಯಪಾಲಿಸಲು ಬಹಳಷ್ಟು ಸಂತೋಷಪಡುವನೆಂಬ ಭರವಸೆ ನಮಗಿರಬಲ್ಲದು. (1 ಯೋಹಾನ 5:14) ನಾವು ಯೆಹೋವನ ಬಳಿ ಪದೇ ಪದೇ ಬೇಡಿಕೊಳ್ಳುವಾಗ, ಆತನು ಸಾಂಕೇತಿಕವಾಗಿ “ನನಗೆ ತೊಂದರೆಕೊಡಬೇಡ; ಈಗ ಕದಾಹಾಕಿ ಅದೆ” ಎಂದು ಎಂದಿಗೂ ಹೇಳುವವನಲ್ಲ. (ಲೂಕ 11:7) ಅದಕ್ಕೆ ಬದಲಾಗಿ, ಯೇಸು ಹೇಳಿದ್ದು: “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು, ತಟ್ಟಿರಿ, ನಿಮಗೆ ತೆರೆಯುವದು.” (ಲೂಕ 11:9, 10) ಹೌದು, ‘ನಾವು ಮೊರೆಯಿಡುವಾಗ [ಯೆಹೋವನು] ಸದುತ್ತರವನ್ನು ದಯಪಾಲಿಸುವನು.’​—⁠ಕೀರ್ತನೆ 20:9; 145:⁠18.

14 ಆ ಕಾಳಜಿಭರಿತ ತಂದೆಯ ಕುರಿತಾದ ಯೇಸುವಿನ ದೃಷ್ಟಾಂತವು, ಯೆಹೋವನ ಒಳ್ಳೇತನವು ಯಾವುದೇ ಮಾನವ ತಂದೆತಾಯಿಗಿಂತ ಎಷ್ಟೋ ಶ್ರೇಷ್ಠವಾಗಿದೆ ಎಂಬುದನ್ನು ಸಹ ಒತ್ತಿಹೇಳುತ್ತದೆ. ಹೀಗಿರುವುದರಿಂದ, ನಮಗೆ ಕಷ್ಟಗಳು ಬಂದಾಗ, ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆಂದು ನಾವೆಂದಿಗೂ ಎಣಿಸಬಾರದು. ಆದರೆ ನಾವು ಹಾಗೆ ಯೋಚಿಸಬೇಕೆಂದು ಬಯಸುವವನು ನಮ್ಮ ಪ್ರಧಾನ ಶತ್ರುವಾದ ಸೈತಾನನೇ ಆಗಿದ್ದಾನೆ. (ಯೋಬ 4:​1, 7, 8; ಯೋಹಾನ 8:44) ಈ ಸ್ವ-ಖಂಡನಾತ್ಮಕ ವಿಚಾರಗಳಿಗೆ ಯಾವುದೇ ಶಾಸ್ತ್ರಾಧಾರವಿಲ್ಲ. ಯೆಹೋವನು “ಕೆಟ್ಟ” ಸಂಗತಿಗಳಿಂದ ನಮ್ಮನ್ನು ಪರೀಕ್ಷೆಗೊಳಪಡಿಸುವುದಿಲ್ಲ. (ಯಾಕೋಬ 1:13) ಆತನು ನಮಗೆ ಹಾವಿನಂಥ ಕಷ್ಟವನ್ನಾಗಲಿ ಚೇಳಿನಂಥ ಪರೀಕ್ಷೆಯನ್ನಾಗಲಿ ಕೊಡುವುದಿಲ್ಲ. ನಮ್ಮ ಸ್ವರ್ಗೀಯ ತಂದೆಯು “ತನ್ನನ್ನು ಬೇಡಿಕೊಳ್ಳುವವರಿಗೆ . . . ಒಳ್ಳೆಯ ವರಗಳನ್ನು ಕೊಡು”ತ್ತಾನೆ. (ಮತ್ತಾಯ 7:​10, 11; ಲೂಕ 11:​13) ಹೌದು, ಯೆಹೋವನ ಒಳ್ಳೇತನ ಹಾಗೂ ನಮ್ಮನ್ನು ಸಹಾಯಮಾಡುವುದಕ್ಕೆ ಆತನಿಗಿರುವ ಸಿದ್ಧಮನಸ್ಸನ್ನು ನಾವು ಎಷ್ಟು ಹೆಚ್ಚಾಗಿ ಗ್ರಹಿಸುತ್ತೇವೊ, ಅಷ್ಟೇ ಹೆಚ್ಚು ಭರವಸೆಯಿಂದ ನಾವಾತನಿಗೆ ಪ್ರಾರ್ಥಿಸಲು ಪ್ರೇರಿಸಲ್ಪಡುವೆವು. ನಾವು ಹಾಗೆ ಮಾಡುವಾಗ, ಕೀರ್ತನೆಗಾರನಿಗಿದ್ದಂಥ ಭಾವನೆಗಳನ್ನೇ ವ್ಯಕ್ತಪಡಿಸಲು ಶಕ್ತರಾಗುವೆವು. ಅವನು ಬರೆದುದು: “ದೇವರು ನನ್ನ ಮೊರೆಯನ್ನು ಲಕ್ಷಿಸಿ ಕೇಳಿದ್ದಾನಲ್ಲಾ.”​—⁠ಕೀರ್ತನೆ 10:17; 66:⁠19.

ಪವಿತ್ರಾತ್ಮವು ನಮ್ಮ ಸಹಾಯಕ ಆಗಿರುವುದು ಹೇಗೆ?

15 ಯೇಸು ತನ್ನ ದೃಷ್ಟಾಂತಗಳಲ್ಲಿ ಕೊಟ್ಟಿದ್ದಂಥ ಆಶ್ವಾಸನೆಯನ್ನು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ಪುನರಾವರ್ತಿಸಿದನು. ಪವಿತ್ರಾತ್ಮದ ಕುರಿತಾಗಿ ಮಾತಾಡುತ್ತಾ ಅವನು ಅಪೊಸ್ತಲರಿಗೆ ಹೇಳಿದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.” (ಯೋಹಾನ 14:16) ಹೀಗೆ, ಭವಿಷ್ಯತ್ತಿನಲ್ಲಿ ಅಂದರೆ ನಮ್ಮ ದಿನಗಳನ್ನೂ ಒಳಗೂಡಿರುವ ಸಮಯಗಳಲ್ಲಿ, ಆ ಸಹಾಯಕ ಇಲ್ಲವೆ ಪವಿತ್ರಾತ್ಮವು ತನ್ನ ಹಿಂಬಾಲಕರೊಂದಿಗೆ ಇರುವುದೆಂದು ಯೇಸು ವಾಗ್ದಾನಿಸಿದನು. ಇಂಥ ಬೆಂಬಲವನ್ನು ನಾವಿಂದು ಅನುಭವಿಸುವ ಒಂದು ಮುಖ್ಯ ವಿಧಾನ ಯಾವುದು? ವಿಭಿನ್ನ ಕಷ್ಟಗಳನ್ನು ತಾಳಿಕೊಳ್ಳಲು ಪವಿತ್ರಾತ್ಮವು ನಮಗೆ ಸಹಾಯಮಾಡುತ್ತದೆ. ಹೇಗೆ? ಸ್ವತಃ ಪರೀಕ್ಷೆಗಳನ್ನು ಅನುಭವಿಸಿದ ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ದೇವರಾತ್ಮವು ತನಗೆ ಸಹಾಯಮಾಡಿದ ವಿಧವನ್ನು ವರ್ಣಿಸಿದನು. ಅವನು ಬರೆದಂಥ ಸಂಗತಿಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸೋಣ.

16 ಪ್ರಥಮವಾಗಿ ಪೌಲನು, ತನಗೆ ‘ಶರೀರದಲ್ಲಿ ಒಂದು ಶೂಲ’ ಅಂದರೆ ತನಗೆ ಯಾವುದೊ ರೀತಿಯ ಕಷ್ಟವಿದೆಯೆಂದು ತನ್ನ ಜೊತೆ ವಿಶ್ವಾಸಿಗಳಿಗೆ ಮುಚ್ಚುಮರೆಯಿಲ್ಲದೆ ಹೇಳಿದನು. ನಂತರ ಅವನು ಹೇಳಿದ್ದು: “ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು [ಯೆಹೋವನನ್ನು] ಬೇಡಿಕೊಂಡೆನು.” (2 ಕೊರಿಂಥ 12:7, 8) ದೇವರು ತನ್ನ ಬಾಧೆಯನ್ನು ತೆಗೆದುಹಾಕುವಂತೆ ಪೌಲನು ಅಂಗಲಾಚಿದರೂ, ಅದು ಹಾಗೆಯೇ ಉಳಿಯಿತು. ಪ್ರಾಯಶಃ ನೀವು ಸಹ ಅದೇ ರೀತಿಯ ಸನ್ನಿವೇಶದಲ್ಲಿದ್ದೀರಿ. ಪೌಲನಂತೆ ನೀವು ಸಹ, ಯೆಹೋವನು ನಿಮ್ಮ ಕಷ್ಟವನ್ನು ತೆಗೆದುಹಾಕುವಂತೆ ಆತನಿಗೆ ಪಟ್ಟುಬಿಡದೆ ಮತ್ತು ಭರವಸೆಯಿಂದ ಪ್ರಾರ್ಥಿಸಿರಬಹುದು. ನೀವು ಎಷ್ಟೋ ಸಲ ಪುನಃ ಪುನಃ ಭಿನ್ನಹಿಸಿದರೂ, ಆ ಸಮಸ್ಯೆ ಬಗೆಹರಿಯದೆ ಹಾಗೆಯೇ ಉಳಿದಿರಬಹುದು. ಇದರರ್ಥ ಯೆಹೋವನು ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾ ಇಲ್ಲ ಮತ್ತು ಆತನ ಆತ್ಮವು ನಿಮಗೆ ಸಹಾಯಮಾಡುತ್ತಿಲ್ಲ ಎಂದಾಗಿದೆಯೊ? ಖಂಡಿತ ಇಲ್ಲ! (ಕೀರ್ತನೆ 10:​1, 17) ಮುಂದೆ ಅಪೊಸ್ತಲ ಪೌಲನು ಏನು ಹೇಳಿದನೆಂಬುದನ್ನು ಗಮನಿಸಿರಿ.

17 ಪೌಲನ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಲ್ಲಿ ದೇವರು ಅವನಿಗಂದದ್ದು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” ಆದುದರಿಂದ ಪೌಲನು ಹೇಳಿದ್ದು: “ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು.” (2 ಕೊರಿಂಥ 12:9; ಕೀರ್ತನೆ 147:5) ಹೀಗೆ, ದೇವರ ಪ್ರಬಲವಾದ ಸಂರಕ್ಷಣೆಯು ಕ್ರಿಸ್ತನ ಮುಖಾಂತರ ತನ್ನ ಮೇಲೆ ನೆಲೆಸಿರುವುದನ್ನು ಅಥವಾ ಮೂಲ ಭಾಷೆಯಲ್ಲಿ ಹೇಳಲ್ಪಟ್ಟಿದ್ದಂತೆ ಒಂದು ಗುಡಾರದಂತೆ ತನ್ನ ಮೇಲೆ ಹರಡಿರುವುದನ್ನು ಪೌಲನು ಅನುಭವಿಸಿದನು. ಇಂದು ಅದೇ ರೀತಿಯಲ್ಲಿ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡುತ್ತಾನೆ. ಆತನು ತನ್ನ ಸೇವಕರ ಮೇಲೆ ತನ್ನ ಸಂರಕ್ಷಣೆಯನ್ನು ಒಂದು ಆಶ್ರಯದಂತೆ ಹರಡಿಸುತ್ತಾನೆ.

18 ಒಂದು ಗುಡಾರವು, ಮಳೆಬರುವುದನ್ನು ಇಲ್ಲವೆ ಗಾಳಿ ಬೀಸುವುದನ್ನು ನಿಲ್ಲಿಸಸಾಧ್ಯವಿಲ್ಲ, ಆದರೆ ಅವುಗಳಿಂದ ಸ್ವಲ್ಪಮಟ್ಟಿಗಿನ ಸಂರಕ್ಷಣೆಯನ್ನು ಅದು ಖಂಡಿತ ಕೊಡುತ್ತದೆ. ಅದೇ ರೀತಿಯಲ್ಲಿ, ‘ಕ್ರಿಸ್ತನ ಬಲ’ದಿಂದ ಒದಗಿಸಲ್ಪಟ್ಟಿರುವ ಆಶ್ರಯವು, ನಮಗೆ ಕಷ್ಟಸಂಕಟಗಳು ಬರದಂತೆ ತಡೆಗಟ್ಟುವುದಿಲ್ಲ. ಆದರೆ ಅದು ಈ ಲೋಕದ ಹಾನಿಕಾರಕ ಘಟಕಗಳು ಮತ್ತು ಲೋಕಾಧಿಪತಿಯಾದ ಸೈತಾನನ ದಾಳಿಗಳಿಂದ ಆಧ್ಯಾತ್ಮಿಕ ಸಂರಕ್ಷಣೆಯನ್ನು ಖಂಡಿತ ಕೊಡುತ್ತದೆ. (ಪ್ರಕಟನೆ 7:​9, 15, 16) ಆದುದರಿಂದ, ನಿಮ್ಮನ್ನು ‘ಬಿಟ್ಟುಹೋಗದ’ ಒಂದು ಕಷ್ಟವನ್ನು ನೀವು ನಿಭಾಯಿಸುತ್ತಿರುವುದಾದರೂ, ನಿಮ್ಮ ಈ ಹೋರಾಟದ ಕುರಿತಾಗಿ ಯೆಹೋವನಿಗೆ ಅರಿವಿದೆ ಮತ್ತು ಆತನು ‘ನಿಮ್ಮ ಕೂಗಿನ ಶಬ್ದಕ್ಕೆ’ ಓಗೊಟ್ಟಿದ್ದಾನೆಂದು ನೀವು ನಿಶ್ಚಯದಿಂದಿರಬಲ್ಲಿರಿ. (ಯೆಶಾಯ 30:19; 2 ಕೊರಿಂಥ 1:​3, 4) ಪೌಲನು ಬರೆದುದು: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”​—⁠1 ಕೊರಿಂಥ 10:13; ಫಿಲಿಪ್ಪಿ 4:6, 7.

19 ಈ ಭಕ್ತಿಹೀನ ಲೋಕದ “ಕಡೇ ದಿವಸ”ಗಳಲ್ಲಿ ‘ಕಠಿನಕಾಲಗಳು’ ಇವೆಯೆಂಬುದು ಒಪ್ಪತಕ್ಕ ಮಾತು. (2 ತಿಮೊಥೆಯ 3:⁠1) ಹಾಗಿದ್ದರೂ, ದೇವರ ಸೇವಕರಿಗೆ ಈ ಕಾಲಗಳು ನಿಭಾಯಿಸಲು ಅಸಾಧ್ಯವಾದದ್ದಾಗಿರುವುದಿಲ್ಲ. ಏಕೆ? ದೇವರ ಪವಿತ್ರಾತ್ಮದ ಬೆಂಬಲ ಹಾಗೂ ಸಂರಕ್ಷಣೆಯ ಕಾರಣದಿಂದಲೇ. ಪವಿತ್ರಾತ್ಮಕ್ಕಾಗಿ ಪಟ್ಟುಬಿಡದೆ ಮತ್ತು ಭರವಸೆಯಿಂದ ಬೇಡಿಕೊಳ್ಳುವವರೆಲ್ಲರಿಗೆ ಯೆಹೋವನು ಅದನ್ನು ಸಿದ್ಧಮನಸ್ಸಿನಿಂದ ಮತ್ತು ಧಾರಾಳವಾಗಿ ಕೊಡುತ್ತಾನೆ. ಆದುದರಿಂದ ಪ್ರತಿದಿನವೂ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತಾ ಇರುವಂತೆ ನಾವು ದೃಢಸಂಕಲ್ಪದಿಂದಿರೋಣ.​—⁠ಕೀರ್ತನೆ 34:6; 1 ಯೋಹಾನ 5:​14, 15. (w06 12/15)

ನೀವು ಹೇಗೆ ಉತ್ತರಿಸುವಿರಿ?

• ದೇವರ ಪವಿತ್ರಾತ್ಮವನ್ನು ಪಡೆಯಲಿಕ್ಕಾಗಿ ನಮಗೇನು ಅಗತ್ಯ?

• ಪವಿತ್ರಾತ್ಮಕ್ಕಾಗಿ ಬೇಡಲು ನಾವು ಮಾಡುವ ಪ್ರಾರ್ಥನೆಗಳಿಗೆ ಯೆಹೋವನು ಓಗೊಡುವನೆಂದು ನಾವು ಏಕೆ ದೃಢಭರವಸೆಯಿಂದ ಇರಬಲ್ಲೆವು?

• ಕಷ್ಟಗಳನ್ನು ತಾಳಿಕೊಳ್ಳಲು ಪವಿತ್ರಾತ್ಮವು ನಮಗೆ ಹೇಗೆ ಸಹಾಯಮಾಡುತ್ತದೆ?

[ಅಧ್ಯಯನ ಪ್ರಶ್ನೆಗಳು]

1. ನಮಗೆ ವಿಶೇಷವಾಗಿ ಯಾವ ಸಮಯಗಳಲ್ಲಿ ಪವಿತ್ರಾತ್ಮದ ಸಹಾಯವು ಅಗತ್ಯವಾಗಿದೆ?

2. (ಎ) ಸತ್ಯ ಕ್ರೈಸ್ತರು ಯಾವ ಸವಾಲುಗಳನ್ನು ಎದುರಿಸುತ್ತಾರೆ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

3, 4. ಯೇಸು ಯಾವ ದೃಷ್ಟಾಂತವನ್ನು ತಿಳಿಸಿದನು, ಮತ್ತು ಅದನ್ನು ಪ್ರಾರ್ಥನೆಗೆ ಹೇಗೆ ಅನ್ವಯಿಸಿದನು?

5. ಪಟ್ಟುಹಿಡಿದು ಬೇಡಿಕೊಂಡ ವ್ಯಕ್ತಿಯ ಕುರಿತಾದ ದೃಷ್ಟಾಂತವು, ಪ್ರಾರ್ಥನೆಮಾಡುವಾಗ ನಮಗಿರಬೇಕಾದ ಮನೋವೃತ್ತಿಯ ಬಗ್ಗೆ ಏನನ್ನು ಕಲಿಸುತ್ತದೆ?

6. ಅತಿಥಿಸತ್ಕಾರವನ್ನು ತೋರಿಸುವ ಪದ್ಧತಿಯ ಬಗ್ಗೆ ಯೇಸುವಿನ ದಿನಗಳಲ್ಲಿ ಯಾವ ನೋಟವಿತ್ತು?

7. ಯೇಸುವಿನ ದೃಷ್ಟಾಂತದಲ್ಲಿನ ಅತಿಥೇಯನು ತನ್ನ ಸ್ನೇಹಿತನನ್ನು ಎಬ್ಬಿಸಲು ನಾಚಿಕೆಪಡಲಿಲ್ಲವೇಕೆ?

8. ಪವಿತ್ರಾತ್ಮಕ್ಕಾಗಿ ಪಟ್ಟುಬಿಡದೆ ಪ್ರಾರ್ಥಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸುವುದು?

9, 10. (ಎ) ದೇವರ ಆತ್ಮಕ್ಕಾಗಿ ನಾವು ಏಕೆ ಪಟ್ಟುಹಿಡಿದು ಬೇಡಿಕೊಳ್ಳಬೇಕೆಂಬುದನ್ನು ದೃಷ್ಟಾಂತಿಸಿರಿ. (ಬಿ) ನಾವು ಯಾವ ಪ್ರಶ್ನೆ ಕೇಳಿಕೊಳ್ಳಬೇಕು, ಮತ್ತು ಏಕೆ?

11. ಒಬ್ಬ ತಂದೆ ಮತ್ತು ಮಗನ ಕುರಿತಾದ ದೃಷ್ಟಾಂತವನ್ನು ಯೇಸು ಪ್ರಾರ್ಥನೆಗೆ ಹೇಗೆ ಅನ್ವಯಿಸಿದನು?

12. ತಂದೆ ತನ್ನ ಮಗನ ಬೇಡಿಕೆಯನ್ನು ಪೂರೈಸುವುದರ ಕುರಿತಾದ ದೃಷ್ಟಾಂತವು, ನಮ್ಮ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆತೋರಿಸಲು ಯೆಹೋವನಿಗಿರುವ ಸಿದ್ಧಮನಸ್ಸನ್ನು ಹೇಗೆ ಎತ್ತಿತೋರಿಸುತ್ತದೆ?

13. ನಾವು ಯೆಹೋವನಿಗೆ ಪ್ರಾರ್ಥನೆಮಾಡುವಾಗ ಯಾವುದರ ಬಗ್ಗೆ ನಿಶ್ಚಿತರಾಗಿರಬಲ್ಲೆವು?

14. (ಎ) ಕಷ್ಟಗಳನ್ನು ಎದುರಿಸುತ್ತಿರುವ ಕೆಲವರಿಗೆ ಯಾವ ತಪ್ಪು ವಿಚಾರವು ಕಾಡಿಸುತ್ತದೆ? (ಬಿ) ಕಷ್ಟಗಳನ್ನು ಎದುರಿಸುತ್ತಿರುವಾಗ ನಾವು ಯೆಹೋವನಿಗೆ ಭರವಸೆಯಿಂದ ಪ್ರಾರ್ಥನೆಮಾಡಬಹುದು ಏಕೆ?

15. (ಎ) ಪವಿತ್ರಾತ್ಮದ ಕುರಿತಾಗಿ ಯೇಸು ಯಾವ ವಾಗ್ದಾನ ಮಾಡಿದನು? (ಬಿ) ಪವಿತ್ರಾತ್ಮವು ನಮಗೆ ಸಹಾಯಮಾಡುವ ಒಂದು ವಿಧಾನ ಯಾವುದು?

16. ನಮ್ಮ ಸನ್ನಿವೇಶವು ಪೌಲನ ಸನ್ನಿವೇಶದಂತೆ ಇರಬಹುದು ಹೇಗೆ?

17. ಯೆಹೋವನು ಪೌಲನ ಪ್ರಾರ್ಥನೆಗಳಿಗೆ ಹೇಗೆ ಉತ್ತರಕೊಟ್ಟನು?

18. ನಾವು ಕಷ್ಟಗಳನ್ನು ತಾಳಿಕೊಳ್ಳಲು ಶಕ್ತರಾಗಿರುವುದು ಹೇಗೆ?

19. ನೀವೇನನ್ನು ಮಾಡಲು ದೃಢಮನಸ್ಸಿನವರಾಗಿದ್ದೀರಿ, ಮತ್ತು ಏಕೆ?

[ಪುಟ 13ರಲ್ಲಿರುವ ಚಿತ್ರ]

ಪಟ್ಟುಬಿಡದ ಅತಿಥೇಯನ ಕುರಿತಾದ ಯೇಸುವಿನ ದೃಷ್ಟಾಂತದಿಂದ ನಾವೇನು ಕಲಿಯಬಹುದು?

[ಪುಟ 14ರಲ್ಲಿರುವ ಚಿತ್ರ]

ನೀವು ಪಟ್ಟುಬಿಡದೆ ದೇವರ ಪವಿತ್ರಾತ್ಮಕ್ಕಾಗಿ ಬೇಡುತ್ತೀರೊ?

[ಪುಟ 15ರಲ್ಲಿರುವ ಚಿತ್ರ]

ಕಾಳಜಿಭರಿತ ತಂದೆಯ ಕುರಿತಾದ ದೃಷ್ಟಾಂತದಿಂದ ನಾವು ಯೆಹೋವನ ಬಗ್ಗೆ ಏನನ್ನು ಕಲಿಯುತ್ತೇವೆ?